ಬೆಂಗಳೂರು; ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮತ್ತು ಅಧಿಕಾರ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ವಿನಾಯಕ ಜಿ ಸುಗೂರ ಅವರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಕಾರಣ ಕೇಳಿ ನೋಟೀಸ್ ಮತ್ತು ದೋಷಾರೋಪಣೆ ಪಟ್ಟಿ ಜಾರಿಗೊಳಿಸಿದೆ.
ಜಲಸಂಪನ್ಮೂಲ ಇಲಾಖೆಯಲ್ಲಿ ಇಂಜಿನಿಯರ್ಗಳ ವರ್ಗಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸ್ತಕ್ಷೇಪ ಮಾಡಿದ್ದಾರೆ ಎಂಬ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೆಸರಿಸಿದ್ದ ಮುಖ್ಯ ಇಂಜಿನಿಯರ್ ಪಟ್ಟಿಯಲ್ಲಿ ವಿನಾಯಕ ಜಿ ಸುಗೂರ ಅವರ ಹೆಸರಿತ್ತು. ಸಿಎಂ ಸಿದ್ದರಾಮಯ್ಯ ತನ್ನ ಇಲಾಖೆಯ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಿರುವುದಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಸಿಟ್ಟಾಗಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಈ ಘಟನೆ ನಡೆದ ಹತ್ತಿರಹತ್ತಿರ ವರ್ಷದ ಬಳಿಕ ವಿನಾಯಕ ಜಿ ಸುಗೂರ ವಿರುದ್ಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಕಾರಣ ಕೇಳಿ 2026ರ ಏಪ್ರಿಲ್ 10ರಂದೇ ಜಾರಿಗೊಳಿಸಿರುವ ನೋಟೀಸ್ ಮುನ್ನೆಲೆಗೆ ಬಂದಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಕಾರಣ ಕೇಳಿ ಜಾರಿಗೊಳಿಸಿರುವ ನೋಟೀಸ್ ಮತ್ತು ದೋಷಾರೋಪಣ ಪಟ್ಟಿಯ ಪ್ರತಿಯು ‘ದಿ ಫೈಲ್’ ಗೆ ಲಭ್ಯವಾಗಿದೆ.
ಏನಿದು ಪ್ರಕರಣ?
ವಿನಾಯಕ ಜಿ ಸುಗೂರ ಅವರು ಈ ಹಿಂದೆ ಲೋಕೋಪಯೋಗಿ ಇಲಾಖೆಯ ಧಾರವಾಡ ವೃತ್ತದಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಅವಧಿಯಲ್ಲಿ ಗದಗ್ ಜಿಲ್ಲಾ ಆಡಳಿತ ಭವನದಲ್ಲಿ ಗ್ರಿಲ್ ಕಾಂಪೌಂಡ್ ನಿರ್ಮಿಸಿದ್ದರು. ಈ ಕಾಮಗಾರಿ ನಡೆಸುವ ಮುನ್ನ ಕೆಟಿಪಿಪಿ ಕಾಯ್ದೆಯನ್ನು ಪಾಲಿಸಿರಲಿಲ್ಲ. ಅಲ್ಲದೇ ಅಧಿಕಾರ ದುರ್ಬಳಕೆ ಆಗಿತ್ತು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ನೋಟೀಸ್ನಲ್ಲಿ ವಿವರಿಸಿರುವುದು ಗೊತ್ತಾಗಿದೆ.

60 ಲಕ್ಷ ದುರುಪಯೋಗ
ಗದಗ್ ಜಿಲ್ಲಾ ಆಡಳಿತ ಭವನದ ಮುಂಭಾಗದಲ್ಲಿ ಗ್ರಿಲ್ ಕಾಂಪೌಂಡ್ನ್ನು ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ ಮತ್ತು ಅಧಿಕಾರ ದುರ್ಬಳಕೆ ಮಾಡಿ 60 ಲಕ್ಷ ರು ದುರುಪಯೋಗಪಡಿಸಿಕೊಂಡಿದ್ದರು ಎಂದು ನೋಟೀಸ್ನಲ್ಲಿ ಉಲ್ಲೇಖಿಸಿದೆ. ಇದು ಕರ್ನಾಟಕ ಸರ್ಕಾರಿ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 11ರ ಅನ್ವ ಇಲಾಖೆ ವಿಚಾರಣೆ ನಡೆಸಲು ಕಾರಣವಾಗಿದೆ.
ಈ ಆರೋಪಗಳನ್ನು ಸಾಬೀತುಪಡಿಸಬಲ್ಲ ದಾಖಲೆಗಳು ಮತ್ತು ಸಾಕ್ಷಿಗಳ ಪಟ್ಟಿಯನ್ನು ಇದೇ ದೋಷಾರೋಪಣೆ ಪಟ್ಟಿಯೊಂದಿಗೆ ಕಳಿಸಿದೆ.

ದೋಷಾರೋಪಣೆ ಪಟ್ಟಿಯಲ್ಲೇನಿದೆ?
ವಿನಾಯಕ ಜಿ ಸುಗೂರ ಅವರು ಲೋಕೋಪಯೋಗಿ ಇಲಾಖೆಯ ಧಾರವಾಡ ವೃತ್ತ ಕಚೇರಿಯಲ್ಲಿ 2013ರ ಮಾರ್ಚ್ 14ರಿಂದ 2014ರ ಜೂನ್ 24ರವರೆಗೆ ಅಧೀಕ್ಷಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಅವಧಿಯಲ್ಲಿ ಗದಗ್ ಜಿಲ್ಲಾ ಆಡಳಿತ ಭವನದಲ್ಲಿ ಮೊದಲು ಇರುವ ಕಾಂಪೌಂಡ್ ಗೋಡೆಯನ್ನು ತೆಗೆದು ಬೇಸ್ಮೆಂಟ್ನಿಂದ 8 ಅಡಿ ಎತ್ತರದ ಗ್ರಿಲ್ ಕಾಂಪೌಂಡ್ ನಿರ್ಮಿಸಿದ್ದರು.
ಈ ಕಾಮಗಾರಿಯು 60 ಲಕ್ಷ ರು ವೆಚ್ಚದ್ದಾಗಿತ್ತು. ಆದರೆ ಟೆಂಡರ್ ಪ್ರಕ್ರಿಯೆ ನಡೆಸಿರಲಿಲ್ಲ. ಅಲ್ಲದೆ ಜಿಲ್ಲಾ ಬುಲೆಟೆನ್ನಲ್ಲಿ ಕಾಮಗಾರಿ ಬಗ್ಗೆ ಪ್ರಕಟಣೆ ಹೊರಡಿಸಿರಲಿಲ್ಲ. ಅರ್ಹ ಗುತ್ತಿಗೆದಾರರಿಂದ ಟೆಂಡರ್ ಸ್ವೀಕರಿಸಿ ಕನಿಷ್ಟ ದರ ನಮೂದಿಸಿದ ಗುತ್ತಿಗೆದಾರರಿಗೆ ಕಾಮಗಾರಿ ನಿರ್ವಹಿಸುವ ಪ್ರಕ್ರಿಯೆಯನ್ನೂ ನಡೆಸಿರಲಿಲ್ಲ. ಈ ಮೂಲಕ ಕೆಟಿಪಿಪಿ ಕಾಯ್ದೆ 1999ನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ದೋಷಾರೋಪಣೆ ಹೊರಿಸಿದೆ.

ಅಧಿಕಾರ ದುರ್ಬಳಕೆ
ಹಾಗೆಯೇ ಈ ಪ್ರಕರಣದ ಕುರಿತು ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿಯೂ ಮೊಕದ್ದಮೆ ದಾಖಲಾಗಿತ್ತು. ಸರ್ಕಾರಿ ಅಧಿಕಾರದ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದ ಆಪಾದನೆ ಮೇರೆಗೆ ಗದಗ್ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿತ್ತು.

ಈ ಆರೋಪಗಳನ್ನು ಸಾಬೀತುಪಡಿಸಲು ಒಟ್ಟು 11 ಮಂದಿಯ ಸಾಕ್ಷಿದಾರರ ಪಟ್ಟಿಯನ್ನು ಒದಗಿಸಿದೆ. ಅಲ್ಲದೇ ಕಾಮಘಾರಿಯನ್ನು ಆರಂಭಿಸಿದ ಹಂತದಿಂದ ಪೂರ್ಣಗೊಳ್ಳುವ ಹಂತದವರೆಗೆ ಮಾಡಿದ ಪತ್ರ ವ್ಯವಹಾರದ ದೃಢೀಕೃತ ದಾಖಲೆ, ಈ ಕಾಮಗಾರಿಗೆ ಬಿಲ್ ಪಾವತಿಸಿರುವ ದೃಢೀಕೃತ ದಾಖಲೆಗಳು, ಕಾಮಗಾರಿಯನ್ನು ಆರಂಭಿಸುವ ಬಗ್ಗೆ ಕಾಮಗಾರಿ ಆರಂಭ ಮತ್ತು ಕಾಮಗಾರಿಯ ಕಾರ್ಯಕ್ರಮ ಪಟ್ಟಿಗೆ ಅನುಮೋದನೆ ಪಡೆದ ದಾಖಲೆಗಳು, ಬುಲೆಟಿನ್ನಲ್ಲಿ ಪ್ರಕಟಿಸಿರುವ ಪತ್ರಿಕೆ ಮಾಹಿತಿಯನ್ನೂ ಪೂರಕ ದಾಖಲೆಗಳನ್ನಾಗಿ ಆರೋಪಿತ ವಿನಾಯಕ ಜಿ ಸುಗೂರ ಅವರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಒದಗಿಸಿರುವುದು ತಿಳಿದು ಬಂದಿದೆ.
ಜಲಸಂಪನ್ಮೂಲ ಇಲಾಖೆಯ ನಿಗಮದ ಅಧಿಕಾರಿಗಳನ್ನು ತಮ್ಮ ಗಮನಕ್ಕೆ ತರದೆಯೇ ವರ್ಗಾವಣೆಯಾಗಿದ್ದಕ್ಕೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಮೇಲೆ ಕೋಪಗೊಂಡಿದ್ದರು. ಈ ಪಟ್ಟಿಯಲ್ಲಿ ವಿನಾಯಕ ಜಿ ಸುಗೂರ ಕೂಡ ಇದ್ದರು.
ತಮ್ಮ ಅನುಮತಿ ಇಲ್ಲದೆ ಲೋಕೋಪಯೋಗಿ ಇಲಾಖೆಯಿಂದ ಜಲಸಂಪನ್ಮೂಲ ಇಲಾಖೆಗೆ ಮುಖ್ಯ ಎಂಜಿನಿಯರ್ಗಳನ್ನು (ಸಿಇ) ವರ್ಗಾವಣೆ ಮಾಡಿ, ಸ್ಥಳ ನಿಯುಕ್ತಿ ಅಧಿಸೂಚನೆ ಹೊರಡಿಸಿರುವ ಆದೇಶವನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇರ ಅಧೀನದಲ್ಲಿ ಡಿಪಿಎಆರ್ ಕಾರ್ಯನಿರ್ವಹಿಸುತ್ತಿದೆ. ಮುಖ್ಯ ಎಂಜಿನಿಯರ್ಗಳ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿಗೆ ಸಂಬಂಧಿಸಿದ ಕಡತವನ್ನು ಮುಖ್ಯಮಂತ್ರಿಗೆ ಡಿಪಿಎಆರ್ ಕಳುಹಿಸಿತ್ತು. ಮುಖ್ಯಮಂತ್ರಿ ಅನುಮೋದನೆ ನೀಡಿದ ಬಳಿಕ ಐವರು ಮುಖ್ಯ ಎಂಜಿನಿಯರ್ಗಳನ್ನು 2025ರ ಮೇ 9ರಂದು ವರ್ಗಾವಣೆ ಮಾಡಿತ್ತು.
‘ನನ್ನ ಇಲಾಖೆಗೆ ಸಂಬಂಧಿಸಿದಂತೆ ವರ್ಗಾವಣೆ, ನೇಮಕಾತಿ ಮುಂತಾದ ವಿಚಾರಗಳ ಬಗ್ಗೆ ಆದೇಶ ಹೊರಡಿಸುವ ಮೊದಲು ನನ್ನ ಪೂರ್ವಾನುಮತಿ ಪಡೆಯಲೇಬೇಕು,’ ಎಂದು ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿಯೇ ಟಿಪ್ಪಣಿಯ ಮೂಲಕ ಮುಖ್ಯ ಕಾರ್ಯದರ್ಶಿಗೆ ಡಿ.ಕೆ ಶಿವಕುಮಾರ್ ಸೂಚಿಸಿದ್ದರು. ಆ ಸೂಚನೆಯನ್ನು ಉಲ್ಲಂಘಿಸಿ ಈ ಆದೇಶ ಹೊರಡಿಸಿರುವುದು ಶಿವಕುಮಾರ್ ಅವರನ್ನು ಕೆರಳಿಸಿತ್ತು.
ಹಲವು ತಿಂಗಳುಗಳಿಂದ ಹುದ್ದೆ ನಿರೀಕ್ಷೆಯಲ್ಲಿದ್ದ ಲೋಕೋಪಯೋಗಿ ಇಲಾಖೆಯಲ್ಲಿ ಕರ್ತವ್ಯಕ್ಕೆ ಸೇರಿದ ಐವರು ಮುಖ್ಯ ಎಂಜಿನಿಯರ್ ವೃಂದದ ಅಧಿಕಾರಿಗಳನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಖಾಲಿ ಇದ್ದ ಹುದ್ದೆಗಳಿಗೆ ವರ್ಗಾವಣೆ ಮಾಡಿ ಮೇ 9ರಂದು ಡಿಪಿಎಆರ್ ಅಧಿಸೂಚನೆ ಹೊರಡಿಸಿತ್ತು.
ಸ್ಥಳ ನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು, ಪ್ರಭಾರ ವರ್ಗಾವಣೆ ಪ್ರಮಾಣ ಪತ್ರವನ್ನು (ಸಿಟಿಸಿ) ಸಲ್ಲಿಸಬೇಕು ಎಂದೂ ಡಿಪಿಎಆರ್ ನಿರ್ದೇಶನ ನೀಡಿತ್ತು. ಅದರ ಅನ್ವಯ ಎಲ್ಲ ಐವರು ಎಂಜಿನಿಯರ್ಗಳು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು.
ಅಂತರ ರಾಜ್ಯ ಜಲವಿವಾದ, ನೀರಾವರಿ ಯೋಜನೆಗಳ ವಲಯ, ಎತ್ತಿನಹೊಳೆ ಯೋಜನಾ ವಲಯ, ಕಾಡಾ ನೀರಾವರಿ ಯೋಜನೆಗಳ ವಲಯ ಮತ್ತು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಮುಖ್ಯ ಎಂಜಿನಿಯರ್ ಹುದ್ದೆಗಳಿಗೆ ಈ ಐವರನ್ನು ಸ್ಥಳ ನಿಯುಕ್ತಿಗೊಳಿಸಲಾಗಿತ್ತು.
ಎಚ್.ಸಿ.ರಮೇಂದ್ರ, ಅಂತರರಾಜ್ಯ ಜಲ ವಿವಾದ, ಬೆಂಗಳೂರು, ವಿನಾಯಕ ಜಿ.ಸುಗೂರ, ನೀರಾವರಿ ಯೋಜನೆಗಳ ವಲಯ, ಕರ್ನಾಟಕ ನೀರಾವರಿ ನಿಗಮ, ತುಮಕೂರು, ಜೆ.ಇ. ಯತೀಶ್ ಚಂದ್ರನ್, ಎತ್ತಿನಹೊಳೆ ಯೋಜನಾ ವಲಯ, ಕರ್ನಾಟಕ ನೀರಾವರಿ ನಿಗಮ, ತುಮಕೂರು, ಶಿವಾನಂದ ಆರ್.ನಾಯಕ್, ಆಡಳಿತಾಧಿಕಾರಿ, ಕಾಡಾ ನೀರಾವರಿ ಯೋಜನೆಗಳ ವಲಯ, ಕಲಬುರಗಿ, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ, ಪಿ.ಬಿ.ಪ್ರಕಾಶ್ ಕೂಡ ಈ ಪಟ್ಟಿಯಲ್ಲಿದ್ದರು.




