ಬೆಂಗಳೂರು; 2024-25ನೇ ಸಾಲಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಪಡೆದಿರುವ ಸಾರ್ವಜನಿಕ ಸಾಲವು ಹಿಂದಿನ ವರ್ಷಕ್ಕಿಂತ ಸುಮಾರು 12 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ಅಂಕಿ ಅಂಶಗಳ ಸಮೇತ ವಿಶ್ಲೇಷಣೆ ಮೂಲಕ ವಿಶ್ಲೇಷಣೆ ಮಾಡಿದ್ದಾರೆ.
ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡನೆಯಾಗಿರುವ ಸಿಎಜಿ ವರದಿಯು ರಾಜ್ಯದ ಹಣಕಾಸಿನ ಹಲವು ಮುಖಗಳನ್ನು ತೆರೆದಿಟ್ಟಿದೆ.
ಇದಲ್ಲದೇ ಕಳೆದ ದಶಕದಲ್ಲಿ ರಾಜ್ಯದ ಬಾಕಿ ಹೊಣೆಗಾರಿಕೆಗಳೂ ಸಹ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಜಿಎಸ್ಡಿಪಿಗೆ ಒಟ್ಟು ಆದಾಯವು ಜಿಎಸ್ಡಿಪಿಗೆ ಒಟ್ಟು ವೆಚ್ಚದ ಅನುಪಾತಕ್ಕಿಂತಲೂ ವೇಗವಾಗಿ ಕುಸಿಯುತ್ತಿದೆ. ಇದು ಹಣಕಾಸಿನ ಒತ್ತಡವನ್ನು ಸೃಷ್ಟಿಸಲು ಕಾರಣವಾಗುತ್ತಿದೆ. ಕಡಿಮೆ ಆದಾಯದಿಂದಾಗಿ ರಾಜ್ಯದ ಸಾಲದ ಸಂಗ್ರಹವು ಹೆಚ್ಚಾಗಿದೆ ಎಂದು ಸಿಎಜಿ ವರದಿಯು ವಿವರಿಸಿದೆ.
ಸಿದ್ದರಾಮಯ್ಯ ಅವರನ್ನು ಸಾಲದ ರಾಮಯ್ಯ ಎಂದು ಪ್ರತಿಪಕ್ಷಗಳು ಬಲವಾಗಿ ಟೀಕಿಸುತ್ತಿರುವ ನಡುವೆಯೇ ರಾಜ್ಯದ ಹಣಕಾಸಿನ ಕುರಿತು ನಡೆಸಿರುವ ಸಮೀಕ್ಷೆಯಲ್ಲಿನ ದತ್ತಾಂಶಗಳು ಮುನ್ನೆಲೆಗೆ ಬಂದಿವೆ.

ರಾಜ್ಯದಲ್ಲಿ ರಾಜಸ್ವ ಕೊರತೆಯು ಶೇ. 125ರಷ್ಟು ಹೆಚ್ಚಾಗಿದೆ. ಹಿಂದಿನ ವರ್ಷಕ್ಕಿಂತ ಶೇ.15ರಷ್ಟು ರಾಜಸ್ವ ವೆಚ್ಚದಲ್ಲಿ ಆಗಿರುವ ಹೆಚ್ಚಳವೇ ಇದಕ್ಕೆ ಮೂಲ ಕಾರಣವಾಗಿದೆ ಎಂಬುದು ವರದಿಯಿಂದ ತಿಳಿದು ಬಂದಿದೆ.

ಬಾಕಿ ಹೊಣೆಗಾರಿಕೆಗಳಲ್ಲಿ ಹೆಚ್ಚಳ- ಬ್ಯಾಕ್ ಟು ಬ್ಯಾಕ್ ಸಾಲ
ರಾಜ್ಯದಲ್ಲಿ ಕಳೆದ ದಶಕದಲ್ಲಿ ರಾಜ್ಯದ ಬಾಕಿ ಹೊಣೆಗಾರಿಕೆಗಳು ಸುಮಾರು ಮೂರು ಪಟ್ಟು ಹೆಚ್ಚಾಗಿದೆ.

2015-16ರ ಹೊತ್ತಿನಲ್ಲಿ ರಾಜ್ಯದಲ್ಲಿ 1,83,322 ಕೋಟಿಯಷ್ಟು ಬಾಕಿ ಹೊಣೆಗಾರಿ ಇತ್ತು. ಇದು 2016-17ರಲ್ಲಿ 2,21,319 ಕೋಟಿಗೆ ಏರಿತ್ತು. ಒಂದು ವರ್ಷದಲ್ಲೇ 37,997 ಕೋಟಿಯಷ್ಟು ಹೊಣೆಗಾರಿಕೆ ಪ್ರಮಾಣ ಹೆಚ್ಚಳವಾದಂತಾಗಿದೆ. 2017-18ರಲ್ಲಿ 2,46,231 ಕೋಟಿ, 2018-19ರಲ್ಲಿ 2,85,238 ಕೊಟಿ, 2019-20ರಲ್ಲಿ 3,37,530 ಕೋಟಿ, 2020-21ರಲ್ಲಿ 4,15,926 ಕೋಟಿ, 2021-22ರಲ್ಲಿ 4,90,926 ಕೋಟಿ, 2022-23ರಲ್ಲಿ 5,53,363 ಕೋಟಿ, 2023-24ರಲ್ಲಿ 6,33,531 ಕೋಟಿ, 2024-25ರಲ್ಲಿ 6,92,115 ಕೋಟಿ ರುನಷ್ಟು ಹೊಣೆಗಾರಿಕೆ ಪ್ರಮಾಣವು ಏರಿಕೆಯಾಗಿರುವುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

2015-16ರಿಂದ 2024-25ರ ಅವಧಿಯಲ್ಲಿ ಬಾಕಿ ಹೊಣೆಗಾರಿಕೆಗಳ ಪ್ರಮಾಣವು ಒಟ್ಟಾರೆ 5,08,793 ಕೋಟಿಯಷ್ಟು ಹೆಚ್ಚಳವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಸಾರ್ವಜನಿಕ ಋಣದಲ್ಲಿಯೂ ಸಹ ಹೊಣೆಗಾರಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗಿದೆ. 2015-16ರಲ್ಲಿ ಸಾರ್ವಜನಿಕ ಋಣದ ಹೊಣೆಗಾರಿಕೆಯು 1,22,547 ಕೋಟಿಯಷ್ಟಿತ್ತು. 2016-17ರಲ್ಲಿ 1,46,283 ಕೋಟಿ, 2017-18ರಲ್ಲಿ 1,63,136 ಕೋಟಿ, 2018-19ರಲ್ಲಿ 1,93,966 ಕೋಟಿ, 2019-20ರಲ್ಲಿ 2,34,245, 2020-21ರಲ್ಲಿ 3,07,757 ಕೋಟಿ, 2021-22ರಲ್ಲಿ 3,74,427, 2022-23ರಲ್ಲಿ 4,03,033 ಕೋಟಿ, 2023-24ರಲ್ಲಿ 4,70,861 ಕೋಟಿ, 2024-25ರಲ್ಲಿ 5,26,479 ಕೋಟಿಯಷ್ಟು ಹೊಣೆಗಾರಿಕೆ ಹೊಂದಿದೆ ಎಂದು ಸಿಎಜಿ ವರದಿಯು ವಿಶ್ಲೇಷಿಸಿರುವುದು ಗೊತ್ತಾಗಿದೆ.
2015-25ರ ಅವಧಿಯಲ್ಲಿ ರಾಜ್ಯದ ಒಟ್ಟು ಸಾಲದ ಹೊಣೆಗಾರಿಕೆಗಳು ಹೆಚ್ಚುತ್ತಿರುವ ಪ್ರವೃತ್ತಿಯಲ್ಲಿದೆ. 2020-21ರಲ್ಲಿ ಕೋವಿಡ್ 19ರ ಕಾರಣದಿಂದಾಗಿ ರಾಜ್ಯವು ಹೆಚ್ಚಿನ ಸಾಲ ಪಡೆದಿತ್ತು. ಹೀಗಾಗಿ ಈ ಅವಧಿಯಲ್ಲಿ ಸಾಲದ ಪ್ರಮಾಣವು ಗರಿಷ್ಠ ಮಟ್ಟಕ್ಕೇರಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೇ 2024-25ರಲ್ಲಿ ಒಟ್ಟು ಹೊಣೆಗಾರಿಕೆಗಳ ಬೆಳವಣಿಗೆಯಲ್ಲಿನ ಕುಸಿತ ಕಂಡುಬಂದಿತ್ತು.

ಇದು ಪ್ರಾಥಮಿಕವಾಗಿ ಆಂತರಿಕ ಸಾಲ ಮತ್ತು ಸಾರ್ವಜನಿಕ ಖಾತೆಗಳ ಹೊಣೆಗಾರಿಕೆಗಳ ಬೆಳವಣಿಗೆಯಲ್ಲಿನ ಕಂಡು ಬಂದಿದ್ದ ಕುಸಿತವೇ ಇದಕ್ಕೆ ಮೂಲ ಕಾರಣ ಎಂದು ಸಿಎಜಿ ವರದಿಯು ಅಭಿಪ್ರಾಯಿಸಿದೆ.

22,828.45 ಕೋಟಿ ರು ಸಾಲ
ಇದಲ್ಲದೇ ಜಿಎಸ್ಟಿ ಪರಿಹಾರದ ಬದಲಿಗೆ ಪಡೆದ ಬ್ಯಾಕ್ ಟು ಬ್ಯಾಕ್ 22,828.45 ಕೋಟಿ ರು ಸಾಲಗಳ ಮರುಪಾವತಿ ಹೊಣೆಗಾರಿಕೆ ಹೊಂದಿತ್ತು. ಭಾರತ ಸರ್ಕಾರದಿಂದ ಬಾಕಿ ಇರುವ ಸಾಲಗಳಲ್ಲಿ ಉಂಟಾದ ಇಳಿಕೆಯೂ ಸಹ ಇದಕ್ಕೆ ಬೆಂಬಲಿಸಿದೆ.
2024-25ರ ಅವಧಿಯಲ್ಲಿ ರಾಜ್ಯವು ಪಡೆದ ಸಾರ್ವಜನಿಕ ಸಾಲವು ಹಿಂದಿನ ವರ್ಷಕ್ಕಿಂತ ಸುಮಾರು 12 ಪ್ರತಿಶತದಷ್ಟು ಹೆಚ್ಚಾಗಿದೆ. ಏಕೆಂದರೇ ರಾಜ್ಯದ ಆಂತರಿಕ ಸಾಲವು ಹಿಂದಿನ ವರ್ಷಕ್ಕೆ ಹೋಲಿಸಿದರೇ ಸುಮಾರು 17 ಪ್ರತಿಶತದಷ್ಟು ಹೆಚ್ಚಾಗಿದೆ. ಜಿಎಸ್ಡಿಪಿಯ ಶೇಕಡವಾರು ಪ್ರಮಾಣಕ್ಕೆ ಹೋಲಿಸಿದರೇ ಬಾಕಿ ಇರುವ ಹೊಣೆಗಾರಿಕೆಗಳು ಕರ್ನಾಟಕ ಆರ್ಥಿಕ ಸಂಹಿತೆ ಗುರಿಯಲ್ಲಿ ಶೇ. 25ರಷ್ಟಿತ್ತು. 2022-23ನೇ ಸಾಲಿನಲ್ಲಿ ಆದಾಯ ಹೆಚ್ಚುವರಿಯನ್ನು ಸಾಧಿಸಿತ್ತು. ನಂತರ ಎರಡನೇ ವರ್ಷವೂ ರಾಜ್ಯವು ರಾಜಸ್ವ ಕೊರತೆಯನ್ನು ಕಂಡಿತ್ತು. ಹೀಗಾಗಿ ರಾಜ್ಯದ ಹೊರಗಿರುವ ಹೊಣೆಗಾರಿಕೆಗಳಲ್ಲಿ ಹೆಚ್ಚಳ ಕಂಡು ಬಂದಿದೆ ಎಂದು ಸಿಎಜಿಯು ವಿಶ್ಲೇಷಿಸಿರುವುದು ತಿಳಿದು ಬಂದಿದೆ.
ಆಂತರಿಕ ಹೊಣೆಗಾರಿಕೆಗಳ ಅಡಿಯಲ್ಲಿ ಹೆಚ್ಚಳವು ಮುಖ್ಯವಾಗಿ ಮಾರುಕಟ್ಟೆ ಸಾಲಗಳಲ್ಲಿ ಮತ್ತು ಸಾರ್ವಜನಿಕ ಲೆಕ್ಕ ಹೊಣೆಗಾರಿಕೆಗಳ ಅಡಿಯಲ್ಲಿ ಠೇವಣಿಗಳಲ್ಲಿ, ನಂತರ ಸಣಣ ಉಳಿತಾಯ, ಭವಿಷ್ಯ ನಿಧಿ ಇತ್ಯಾದಿಗಳಲ್ಲಿ ಕಂಡು ಬಂದಿದೆ. 22,829 ಕೋಟಿ ರು ಮೊತ್ತದ ಬ್ಯಾಕ್ ಟು ಬ್ಯಾಕ್ ಸಾಲಗಳ ಮರುಪಾವತಿಯಿಂದಾಗಿ ಭಾರತ ಸರ್ಕಾರದಿಂದ ಪಡೆದ ಸಾಲಗಳ ಹೊಣೆಗಾರಿಕೆಯು ವರ್ಷದಲ್ಲಿ ಕಡಿಮೆಯಾಗಿರುವುದು ಸಿಎಜಿ ವರದಿಯಿಂದ ಗೊತ್ತಾಗಿದೆ.
ವಿಶೇಷವೆಂದರೇ 2017-18ರವರೆಗೆ ರಾಜ್ಯವು ಪಡೆದಿದ್ದ ಆಂತರಿಕ ಸಾಲವು ಮಧ್ಯಮ ಮಟ್ಟದಲ್ಲಿತ್ತು. ನಂತರ 2018-19ರಿಂದ ತೀವ್ರವಾಗಿ ಏರಿಕೆಯಾಗಿದೆ. ಕೋವಡಿff 19ರಿಂದಾಗಿ ಆದಾಯ ಕೊರತೆ, ಹೆಚ್ಚಿನ ವೆಚ್ಚದ ಅವಶ್ಯಕತೆಗಳು ಮತ್ತು ಸಾಲ ಮಿತಿಗಳ ಸಡಿಲಿಕೆಯಿಂದಾಗಿ 2020-21ರಲ್ಲಿ ಅತ್ಯಧಿಕವಾಗಿ ಜಿಗಿತ ಕಂಡು ಬಂದಿದೆ. ನೋವಿಡ್ ನಂತರ ರಾಜ್ಯದ ಆಂತರಿಕ ಸಾಲವು 2022-23ರವರೆಗೆ ಕಡಿಮೆಯಾಗುವ ಪ್ರವೃತ್ತಿಯಲ್ಲಿತ್ತು. ಆದರೂ 2023-24ರಲ್ಲಿ ರಾಜ್ಯದ ವಿತ್ತೀಯ ಕೊರತೆಯನ್ನು ನೀಗಿಸಲು ಸುಮಾರು 115 ಪ್ರತಿಶತದಷ್ಟು ಅಗಾಧವಾಗಿ ಹೆಚ್ಚಾಗಿದೆ ಎಂದು ಸಿಎಜಿಯು ಕಳವಳ ವ್ಯಕ್ತಪಡಿಸಿದೆ.
2024-25ರಲ್ಲಿಯೂ ರಾಜ್ಯದ ರಾಜಸ್ವ ಕೊರತೆಯು ಮತ್ತಷ್ಟು ಹೆಚ್ಚಾಗಿದೆ. ಇದರಿಂದಾಗಿಯೇ ರಾಜ್ಯವು ಹೆಚ್ಚಿನ ಸಾಲಗಳನ್ನು ಆಶ್ರಯಿಸಬೇಕಾಯಿತು. ಈ ಅವಧಿಯಲ್ಲಿ ಮರು ಪಾವತಿಗಳು ಸಹ ಹೆಚ್ಚುತ್ತಿವೆ. 2016-17ರಿಂದ 2024-25ರವರೆಗೆ ಬಹುತೇಕ ಎಲ್ಲಾ ವರ್ಷಗಳಲ್ಲಿ ರಾಜ್ಯವು ಪ್ರತಿ ವರ್ಷದ ಶೇ. 20ಕ್ಕಿಂತಲೂ ಹೆಚ್ಚು ಸಾಲಗಳನ್ನು ಮರುಪಾವತಿಸಿದೆ.
ಬಂಡವಾಳ ಸೃಷ್ಟಿ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಹಣಕಾಸು ಒದಗಿಸಲು ಎರವಲು ನಿಧಿಗಳನ್ನು ಬಳಸಬೇಕಿತ್ತು. ಆದರೆ ರಾಜ್ಯ ಸರ್ಕಾರವು ಪ್ರಸ್ತುತ ಬಳಕೆ ಮತ್ತು ಬಾಕಿ ಇರುವ ಸಾಲಗಳ ಮೇಲಿನ ಬಡ್ಡಿ ಮರುಪಾವತಿಗೆ ಎರವಲು ಪಡೆದ ನಿಧಿಗಳನ್ನು ಬಳಸಿದೆ. ಇದು ಅರೋಗ್ಯಕರ ಪ್ರವೃತ್ತಿಯಲ್ಲ ಎಂದು ಸಿಎಜಿ ವರದಿಯಲ್ಲಿ ವಿಶ್ಲೇಷಿಸಿರುವುದು ತಿಳಿದು ಬಂದಿದೆ.

ಎರವಲು ಪಡೆದ ನಿಧಿಗಳ ಬಳಕೆ ಹೇಗಿದೆ?
2016-16ರಲ್ಲಿ ಒಟ್ಟು ಸಾಲವು 21,072 ಕೋಟಿಯಷ್ಟಿತ್ತು. 2016-17ರಲ್ಲಿ 31,156 ಕೋಟಿಗೇರಿದೆ. 2017-18ರಲ್ಲಿ 25,122 ಕೋಟಿ, 2018-19ರಲ್ಲಿ 41,914 ಕೋಟಿ, 2019-20ರಲ್ಲಿ 50,459 ಕೋಟಿ, 2020-21ರಲ್ಲಿ 84,528 ಕೋಟಿ, 2021-22ರಲ್ಲಿ 80,641 ಕೋಟಿ, 2022-23ರಲ್ಲಿ 44,549 ಕೋಟಿ, 2023-24ರಲ್ಲಿ 90,280 ಕೋಟಿ, 2024-25ರಲ್ಲಿ 1,03,342 ಕೋಟಿ ರು ಇದೆ.

ಹಿಂದಿನ ಸಾಲಗಳ ಅಸಲನ್ನು ಮರು ಪಾವತಿಸಲು 2015-16ರಲ್ಲಿ 4,110 ಕೋಟಿ, 2016-17ರಲ್ಲಿ 7,420 ಕೋಟಿ, 2017-18ರಲ್ಲಿ 8,269 ಕೋಟಿ, 2018-19ರಲ್ಲಿ 11,083 ಕೋಟಿ, 2019-20ರಲ್ಲಿ 10,016 ಕೋಟಿ, 2020-21ರಲ್ಲಿ 13,972 ಕೋಟಿ, 2022-23ರಲ್ಲಿ 15,942 ಕೋಟಿ, 2023-24ರಲ್ಲಿ 22,453 ಕೋಟಿ, 2024-25ರಲ್ಲಿ 24,895 ಕೋಟಿ ಮರು ಪಾವತಿಸಿತ್ತು.

ಈ ಅವಧಿಯಲ್ಲಿ ಎರವಲು ಪಡೆದ ನಿಧಿಗಳನ್ನು ನಿವ್ವಳ ಬಂಡವಾಳ ವೆಚ್ಚದ ರೂಪದಲ್ಲಿಯೂ ಬಳಸಿತ್ತು. 2015-16ರಲ್ಲಿ 20,361 ಕೋಟಿ, 2016-17ರಲ್ಲಿ 28,123 ಕೋಟಿ, 2017-18ರಲ್ಲಿ 30,663 ಕೋಟಿ, 2018-19ರಲ್ಲಿ 34,665 ಕೋಟಿ, 2019-20ರಲ್ಲಿ 35,485 ಕೋಟಿ, 2020-21ರಲ್ಲಿ 45,361 ಕೋಟಿ, 2021-22ರಲ್ಲಿ 57, 347 ಕೋಟಿ, 2023-24ರಲ್ಲಿ 52,084 ಕೋಟಿ, 2024-25ರಲ್ಲಿ 57,885 ಕೋಟಿಯಷ್ಟು ಬಳಕೆ ಮಾಡಿದೆ.
‘ಕೋವಿಡ್ ಪೂರ್ವದ ಅವಧಿಯಲ್ಲಿ ಮತ್ತು 2022-23ರಲ್ಲಿ ರಾಜ್ಯವು ರಾಜಸ್ವ ಹೆಚ್ಚುವರಿಯನ್ನು ಕಂಡಿತು. ಇದರ ಪರಿಣಾಮವಾಗಿ ರಾಜ್ಯವು ಕಡಿಮೆ ಸಾಲವನ್ನು ಪಡೆಯಿತು. ಮತ್ತು ರಾಜಸ್ವ ಹೆಚ್ಚುವರಿಯನ್ನು ಬಂಡವಾಳ ವೆಚ್ಚಕ್ಕೆ ಬಳಸಲಾಯಿತು. ಆದರೂ 2023-24 ಮತ್ತು 2024-25ರಲ್ಲಿ ರಾಜ್ಯವು ಮತ್ತೊಮ್ಮೆ ರಾಜಸ್ವ ಕೊರತೆಯನ್ನು ಕಂಡಿತು. ಅಲ್ಲದೇ ಬಂಡವಾಳ ವೆಚ್ಚದ ಜೊತೆಗೆ ಸಾಲಗಳನ್ನು ರಾಜಸ್ವ ವೆಚ್ಚಕ್ಕೂ ಕೂಡ ಬಳಿಸಿತು,’ ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ.

ಅಸಲನ್ನೂ ಮೀರಿಸಲಿದೆಯೇ ಬಡ್ಡಿ ಮರುಪಾವತಿ?
ಇತ್ತೀಚಿನ ವರ್ಷಗಳಲ್ಲಿ ರಾಜ್ಯದಿಂದ ಸಾಲಗಳ ಹೆಚ್ಚಳದಿಂದಾಗಿ ಬಡ್ಡಿ ಪಾವತಿಯು ಹೆಚ್ಚಾಗಿದೆ.

ಮುಂದಿನ ಎರಡು ವರ್ಷಗಳಲ್ಲಿ ಅಂದರೇ 2025-26 ಮತ್ತು 2026-27ರಲ್ಲಿ ಬಡ್ಡಿ ಮರುಪಾವತಿಯು ಅಸಲನ್ನೂ ಮೀರುತ್ತದೆ ಎಂದು ಸಿಎಜಿಯು ಅಂದಾಜಿಸಿದೆ.







