ರಾಜ್ಯದ ಆದಾಯ ಕೊರತೆಯಲ್ಲಿ ‘ಗೃಹಲಕ್ಷ್ಮಿ’ ಯ ಪಾಲು ಶೇ.104; ಸಂಶೋಧನೆ ವರದಿ

ಬೆಂಗಳೂರು;  2024-25ನೇ ಸಾಲಿನ ರಾಜ್ಯದ ಆದಾಯ ಕೊರತೆಯಲ್ಲಿ  ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ʻಗೃಹಲಕ್ಷ್ಮಿʼ ಯೋಜನೆಯ ಪಾಲು ಶೇ. 104 ರಷ್ಟಿತ್ತು ಎಂದು ʻ ಕರ್ನಾಟಕ ವಿತ್ತೀಯ ಕಾರ್ಯ ನೀತಿ ಸಂಸ್ಥೆʼ ನಡೆಸಿದ ಸಂಶೋಧನೆಯು  ಬಹಿರಂಗಪಡಿಸಿದೆ.

 

ಈ ಸಂಸ್ಥೆಯು ನಡೆಸಿರುವ ಅಧ್ಯಯನವು ʻಗೃಹಲಕ್ಷ್ಮಿʼ ಯೋಜನೆ ಅನುಷ್ಠಾನದಿಂದಾಗಿರುವ ಸಮಗ್ರ ಆರ್ಥಿಕ ಪರಿಣಾಮಗಳ ಕುರಿತು ವಿಶ್ಲೇಷಣೆ ನಡೆಸಿದೆ. ಆದಾಯ ವೆಚ್ಚ ಮತ್ತು ಆದಾಯ ಕೊರತೆಗೆ ಸಂಬಂಧಿಸಿದಂತೆ ದತ್ತಾಂಶಗಳನ್ನಾಧರಿಸಿ ನಡೆಸಿರುವ ಸಂಶೋಧನೆಯು ಇಡೀ ಯೋಜನೆಯಿಂದ ಸೃಷ್ಟಿಯಾಗಿರುವ ಆರ್ಥಿಕ ಸವಾಲುಗಳನ್ನು  ವಿವರಿಸಿದೆ.

 

ಈ ಸಂಶೋಧನಾ ವರದಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಗೃಹಲಕ್ಷ್ಮಿ ಯೋಜನೆಗೆ ಪ್ರತೀ ವರ್ಷವೂ ಅಗಾಧವಾದ ಪ್ರಮಾಣದಲ್ಲಿ ಹಣ ಒದಗಿಸಲು ಸಾಧ್ಯವಿಲ್ಲ ಮತ್ತು ಹಣ ಒದಗಿಸಿದ್ದಲ್ಲಿ ಆದಾಯ ಕೊರತೆಗೆ ದಾರಿಮಾಡಿಕೊಡಲಿದೆ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿಯೇ ಅಭಿಪ್ರಾಯಿಸಿದ್ದರು. ಆದರೂ ಈ ಅಭಿಪ್ರಾಯವನ್ನು ಲೆಕ್ಕಿಸದೇ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿತ್ತು.

 

ಅಲ್ಲದೇ ಗ್ಯಾರಂಟಿ ಯೋಜನೆಗಳ ಕುರಿತು ಕಾಂಗ್ರೆಸ್‌ ಶಾಸಕರೇ ಗೊಣಗಿದ್ದರು. ಈ ಯೋಜನೆಗಳಿಂದಾಗಿ ಅನುದಾನ ನಿಯಮಿತವಾಗಿ ನೀಡುತ್ತಿಲ್ಲ, ಕೊರತೆಯಾಗಿದೆ ಎಂದೆಲ್ಲಾ ಶಾಸಕರು ಬಹಿರಂಗ ಸಭೆಗಳಲ್ಲಿ ಹೇಳಿ ಹೈಕಮಾಂಡ್‌ ಕೆಂಗಣ್ಣಿಗೆ ಗುರಿಯಾಗಿದ್ದರು. ಕಾಂಗ್ರೆಸ್‌ನ ಶಾಸಕಾಂಗ ಸಭೆಯಲ್ಲಿಯೂ ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕರಿಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಿಳಿ ಹೇಳಿದ್ದರು. ಗ್ಯಾರಂಟಿ ಯೋಜನೆಗಳಿಂದ ಜಿಎಸ್‌ಟಿ ವೃದ್ಧಿಯಾಗಿದೆ ಎಂದು ಸಮಜಾಯಿಷಿ ನೀಡಿದ್ದರು.

 

ಇದೀಗ 2024-25ನೇ ಸಾಲಿನಲ್ಲಿ ಉದ್ಭವಿಸಿರುವ ಆದಾಯ ಕೊರತೆಗೆ  ಗೃಹಲಕ್ಷ್ಮಿ ಯೋಜನೆಯು ಕೊಡುಗೆ ನೀಡಿದೆ ಎಂದು ಕರ್ನಾಟಕ ವಿತ್ತೀಯ ಕಾರ್ಯನೀತಿ ಸಂಸ್ಥೆಯ ಸಂಶೋಧನೆ ವರದಿಯು ಬಹಿರಂಗಪಡಿಸಿದೆ.   ಆದಾಯ ಕೊರತೆಯಲ್ಲಿ ಈ ಯೋಜನೆಯ   ಪಾಲು ಶೇ.104ರಷ್ಟಿದೆ ಎಂದು ವಿಶ್ಲೇಷಿಸಿರುವ ವರದಿಯು  ಮುನ್ನೆಲೆಗೆ ಬಂದಿದೆ.

 

ಸಂಶೋಧನೆ ವರದಿಯಲ್ಲೇನಿದೆ?

 

2023-24ರಲ್ಲಿ ಆಯವ್ಯಯ ವೆಚ್ಚ 2,50,933 ಕೋಟಿ ರು ಇತ್ತು. ಆದಾಯ ವೆಚ್ಚವು 2,40.731 ಕೋಟಿ ರು ಇತ್ತು. 2024-25ನೇ ಸಾಲಿನಲ್ಲಿ ಆಯವ್ಯಯ ವೆಚ್ಚವು 2,90,531 ಕೋಟಿ ಇತ್ತು. ಆಗ ರಾಜ್ಯದ ಆದಾಯದ ಕೊರತೆಯು 2023-24ರಲ್ಲಿ ಆಯವ್ಯಯ ವೆಚ್ಚದ ಪ್ರಕಾರ 12,523 ಕೋಟಿ ರು ಇತ್ತು. ಆದಾಯ ವೆಚ್ಚವು 13,951 ಕೋಟಿ ರು ಇತ್ತು. 2024-25ನೇ ಸಾಲಿನಲ್ಲಿ ಆಯವ್ಯಯ ವೆಚ್ಚವು 27,354 ಕೋಟಿ ರು ಇತ್ತು.

 

 

2023-24ರಲ್ಲಿ ಆಯವ್ಯಯ ವೆಚ್ಚದಲ್ಲಿ ʻಗೃಹಲಕ್ಷ್ಮಿʼ ಯೋಜನೆಯ ಪಾಲು ಶೇ. 6.97ರಷ್ಟಿತ್ತು. ಆದಾಯ ವೆಚ್ಚವು ಶೇ.7.26ರಷ್ಟಿತ್ತು. 2024-25ನೇ ಸಾಲಿನಲ್ಲಿ ಶೇ.9.84ರಷ್ಟಿತ್ತು. ಹಾಗೆಯೇ ಆದಾಯ ಕೊರತೆಗೆ ಸಂಬಂಧಿಸಿದಂತೆ ಗೃಹ ಲಕ್ಷ್ಮಿಯ ಪಾಲು 2023-14ರಲ್ಲಿ (ಆಯವ್ಯಯ ವೆಚ್ಚದಂತೆ) ಶೇ.139ರಷ್ಟಿತ್ತು. ಆದಾಯ ವೆಚ್ಚದಂತೆ ಶೇ. 125ರಷ್ಟಿತ್ತು. 2024-25ನೇ ಸಾಲಿನಲ್ಲಿ ಆದಾಯ ಕೊರತೆಯಲ್ಲಿ ʻಗೃಹ ಲಕ್ಷ್ಮಿʼ ಯೋಜನೆಯ ಪಾಲು ಶೇ. 104.5ರಷ್ಟಿತ್ತು ಎಂದು ಅಧ್ಯಯನ ವರದಿಯು ವಿವರಿಸಿದೆ.

 

 

ಮಧ್ಯಂತರ ಹಣಕಾಸು ಯೋಜನೆಯ 2024-28ರ ವರದಿ ಪ್ರಕಾರ 2023-24 ರ ಬಜೆಟ್‌ನಲ್ಲಿ 12,523 ಕೋಟಿ ರು ಗಳಿದ್ದ ಆದಾಯ ಕೊರತೆಯು ರೂ. 2024-25 ರ ಬಜೆಟ್‌ನಲ್ಲಿ ರೂ. 27,354 ಕೋಟಿಗಳಿಗೆ ಏರಿತ್ತು. ಈ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದರೆ ಬದ್ಧ ವೆಚ್ಚದಲ್ಲಿನ ಹೆಚ್ಚಳ. ಸಂಬಳ, ಪಿಂಚಣಿ, ಬಡ್ಡಿ ಪಾವತಿ ಮತ್ತು ಆಡಳಿತಾತ್ಮಕ ವೆಚ್ಚಗಳಂತಹ ಯೋಜನೆ ಆಧಾರಿತವಲ್ಲದ ವೆಚ್ಚಗಳು ಹಿಂದಿನ ವರ್ಷಕ್ಕಿಂತ ಶೇ .14 ರಷ್ಟು ಹೆಚ್ಚಾಗಿತ್ತು ಎಂದು ಅಧ್ಯಯನ ವರದಿಯು ವಿಶ್ಲೇಷಿಸಿದೆ.

 

ನಿಖರವಾದ ವೆಚ್ಚ ತರ್ಕಬದ್ಧಗೊಳಿಸುವ ಉಪಕ್ರಮದ ಭಾಗವಾಗಿ,  ಅನಿವಾರ್ಯವಲ್ಲದ ಕಾರ್ಯಕ್ರಮಗಳ ಕಾರ್ಯತಂತ್ರ  ಸ್ಥಗಿತಗೊಳಿಸುವಿಕೆಯ ಮೂಲಕ  ರಾಜ್ಯವು 2023-24 ರ ಆದಾಯ ವೆಚ್ಚದಲ್ಲಿ ಕಡಿತ ಸಾಧಿಸಿತ್ತು. ಗಮನಾರ್ಹವಾಗಿ 10,202 ಕೋಟಿ ರು. ಗಳ ಕಡಿತವನ್ನು ದಾಖಲಿಸಲಾಗಿತ್ತು.

 

ಒಟ್ಟು ಆದಾಯ ಕೊರತೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಪಾಲು 2023-24 ಮತ್ತು 2024-25 ರ ಕ್ರಮವಾಗಿ ಸುಮಾರು ಶೇ. 125 ಮತ್ತು ಶೇ. 104.5ರಷ್ಟಿತ್ತು. ಕರ್ನಾಟಕ ಆರ್ಥಿಕ ಸಂಹಿತೆ 2002ರ ಮಾನದಂಡಗಳ ಪ್ರಕಾರ, ಸರ್ಕಾರವು ಆದಾಯ ಕೊರತೆಯನ್ನು ಶೂನ್ಯಕ್ಕೆ ಕಾಯ್ದುಕೊಳ್ಳಬೇಕು. ಆದರೆ ಈ ಯೋಜನೆಯ ವೆಚ್ಚವು ಕರ್ನಾಟಕದ ಆದಾಯ ಕೊರತೆಯನ್ನು ಮೀರಿದೆ ಎಂದು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.

 

ಕೆಎಫ್‌ಆರ್‍‌ಎ ಮಾನದಂಡಗಳ ಪ್ರಕಾರ ಆದಾಯ ಕೊರತೆಯನ್ನು ರಾಜ್ಯದ ಒಟ್ಟು ಜಿಎಸ್‌ಡಿಪಿಯ ಶೇ.3ರೊಳಗೇ ನಿರ್ವಹಿಸಲಾಗುತ್ತದೆ. (KFRA ಕಾಯ್ದೆ 2002). 2023-24 ರ ಪರಿಷ್ಕೃತ ಅಂದಾಜುಗಳಲ್ಲಿ ರಾಜ್ಯವು ಶೇ. 2.67ರಷ್ಟು ಹಣಕಾಸಿನ ಕೊರತೆಯನ್ನು ಅಂದಾಜಿಸಿತ್ತು. 2024-25 ರಲ್ಲಿ ಶೇ. 2.95ರಷ್ಟು ಹಣಕಾಸಿನ ಕೊರತೆ , 2023-24ರಲ್ಲಿ 68,505 ಕೋಟಿ ಮತ್ತು 2024-25ರಲ್ಲಿ 82,981 ಕೋಟಿ ರು ಆದಾಯ ವೆಚ್ಚವೆಂದು ಅಂದಾಜಿಸಿತ್ತು.

 

ಮಹಿಳಾ ಸಬಲೀಕರಣ ಗುರಿ ಹೊಂದಿರುವ ಗೃಹಲಕ್ಷ್ಮಿ ಯೋಜನೆಯು ರಾಜ್ಯದ ಒಟ್ಟು ಹಣಕಾಸಿನ ಕೊರತೆಗೆ ಗರಿಷ್ಠ ಪಾಲುದಾರಿಕೆ ಹೊಂದಿದೆ. ಈ ಯೋಜನೆ ಜಾರಿಯಿಂದ ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆಯಾಗಿದೆ ಎಂದು ಹೇಳಲಾಗಿದೆಯಾದರೂ ಈ ಯೋಜನೆ ಮೇಲಿನ ವೆಚ್ಚವು ಕರ್ನಾಟಕದ ಆದಾಯ ಕೊರತೆಯನ್ನು ಮೀರಿತ್ತು.

 

ಅದೇ ರೀತಿ ಕರ್ನಾಟಕ ರಾಜ್ಯದ ಒಟ್ಟು ಹೊಣೆಗಾರಿಕೆ ಮತ್ತು ಬಾಕಿ ಸಾಲದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಪಾಲು ಸಹ ಹೆಚ್ಚುತ್ತಿದೆ. ಒಟ್ಟಾರೆ ಈ ಯೋಜನೆಯು ಹಣಕಾಸಿನ ಹೊಣೆಗಾರಿಕೆಗಳ ಸೃಷ್ಟಿಗೆ ಕಾರಣವಾಗುತ್ತಿದೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಾಡಿರುವ ವೆಚ್ಚವು, ಈ ಯೋಜನೆಯಿಂದ ಉತ್ಪತ್ತಿಯಾಗುವ ಆದಾಯಕ್ಕಿಂತಲೂ ಹೆಚ್ಚಾಗಿದೆ ಎಂದು ಇದೇ ಅಧ್ಯಯನ ವರದಿ ಹೊರಗೆಡವಿದೆ.

 

ಹೊಣೆಗಾರಿಕೆ, ಬಾಕಿ ಸಾಲದಲ್ಲಿ ‘ಗೃಹಲಕ್ಷ್ಮಿ’ ಪಾಲು ಹೆಚ್ಚಳ; ಆದಾಯಕ್ಕಿಂತಲೂ ವೆಚ್ಚವೇ ಹೆಚ್ಚೆಂದ ಸಂಶೋಧನಾ ವರದಿ

 

ಇದುವರೆಗೆ ಅಧ್ಯಯನ ನಡೆಸಿದವರು ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಮತ್ತು ಅದರ ಪರಿಣಾಮಗಳನ್ನು ಸಾಮಾಜಿಕ ಕಲ್ಯಾಣ ಯೋಜನೆಯಡಿಯಲ್ಲಿ ಹೆಚ್ಚಾಗಿ ಅವಲೋಕಿಸಿದ್ದಾರೆ. ಹಣಕಾಸಿನೇತರ ಪರಿಣಾಮಗಳನ್ನು ವಿಶ್ಲೇಷಿಸಿದ್ದಾರೆ. ಆದರೆ ಎಲ್ಲಿಯೂ ಈ ಯೋಜನೆ ಮೇಲಿನ ವೆಚ್ಚದಿಂದಾಗಿ ಇತರೆ ಹಣಕಾಸಿನ ಪರಿಣಾಮಗಳ ಕುರಿತು ವಿಶ್ಲೇಷಿಸಿರಲಿಲ್ಲ.  ಅನುಪಮಾ ಗಿರಡಿ ಮಠ್‌ ಅವರು 2023-24 ಮತ್ತು 2024-25ನೇ ಸಾಲಿನ ಹಣಕಾಸಿನ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಈ ಸಂಶೋಧನೆ ನಡೆಸಿದ್ದಾರೆ.

 

ಗೃಹಲಕ್ಷ್ಮಿ ಯೋಜನೆಯ ಕಾರ್ಯಸಾಧುವಲ್ಲ, ಇದರಿಂದ ನಿರಂತರವಾಗಿ ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ. ಆದಾಯ ಕೊರತೆಗೆ ಕಾರಣವಾಗಲಿದೆ ಎಂದು ಆರ್ಥಿಕ ಇಲಾಖೆಯು ಯೋಜನೆಯ ಆರಂಭದಲ್ಲೇ ವಿವರಿಸಿದ್ದನ್ನು ಸ್ಮರಿಸಬಹುದು.

 

ಗೃಹ ಲಕ್ಷ್ಮಿ; ನಿರಂತರ ಸಾಲದ ಸುಳಿ, ಆದಾಯದ ಕೊರತೆ, ಹಣಕಾಸು ಹೊಣೆಗಾರಿಕೆ ಕಾಯ್ದೆ ಉಲ್ಲಂಘನೆ

 

ಯೋಜನೆ ಮೇಲಿನ ವೆಚ್ಚ, ಅದರ ಪರಿಣಾಮಗಳು, ಜಿಎಸ್‌ಟಿ ಸಂಗ್ರಹ ಮತ್ತು ಇದರಲ್ಲಾಗಿರುವ ಹೆಚ್ಚಳ, ಒಟ್ಟು ಹಣಕಾಸಿನ ಕೊರತೆ ಕುರಿತು ದತ್ತಾಂಶಗಳ ಮೂಲಕ ವಿಶ್ಲೇಷಿಸಿತ್ತು.  ನಗದು ವರ್ಗಾವಣೆಯು ರಾಜ್ಯದ ಸಾಮಾಜಿಕ ಗುಂಪುಗಳಲ್ಲಿನ ಫಲಾನುಭವಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಯೋಜನೆಯು ದೀರ್ಘಾವಧಿಯವರೆಗೆ ನಡೆದರೆ, ಸಾರ್ವಜನಿಕ ವೆಚ್ಚದ ಹೊರೆಯ ವಿಷಯದಲ್ಲಿ ಯೋಜನೆಯ ಪರಿಣಾಮಗಳು ಕಡಿಮೆಯಾಗಬಹುದು. ಮತ್ತು ಭವಿಷ್ಯದಲ್ಲಿ ಧನಾತ್ಮಕ ಆದಾಯದ ಪರಿಣಾಮಗಳನ್ನು ಬೀರಬಹುದು ಎಂದು ಈ ಸಂಶೋಧನಾ ವರದಿಯು ವಿವರಿಸಿತ್ತು.

 

ಗೃಹಲಕ್ಷ್ಮಿ ಯೋಜನೆಯ ನಿವ್ವಳ ಹಣಕಾಸಿನ ಪರಿಣಾಮವನ್ನು ಹೊಂದಾಣಿಕೆ ಮಾಡಲಾದ ಬಳಕೆ ವೆಚ್ಚದ ದತ್ತಾಂಶಗಳು ಮತ್ತು ಹೊಂದಾಣಿಕ ಮಾಡಲಾದ ಬಳಕೆಯ ವೆಚ್ಚದ ದತ್ತಾಂಶವಿಲ್ಲದೇ ಎರಡು ಮಾರ್ಗಗಳೊಂದಿಗೆ ಒರೆಗೆ ಹಚ್ಚಿ ವಿಶ್ಲೇಷಿಸಿತ್ತು. 2023-24 ಮತ್ತು 2024-25ರಲ್ಲಿ ಈ ಯೋಜನೆಯ ಹಣಕಾಸು ನಿಧಿಗೆ ಕ್ರಮವಾಗಿ ಶೇ. 25.55, ಮತ್ತು ಶೇ. 33.29 ರಷ್ಟು ಹಂಚಿಕೆಯಾಗಿವೆ.

 

2023-24 ಮತ್ತು 2024-25ರ ಹೊಂದಾಣಿಕೆ ಮಾಡದ ಬಳಕೆ ವೆಚ್ಚದಲ್ಲಿ ಕರ್ನಾಟಕದ ಒಟ್ಟು ಹಣಕಾಸು ನಿಧಿಗೆ ಯೋಜನೆಯ ಹಂಚಿಕೆಯಲ್ಲಿ ಕ್ರಮವಾಗಿ ಶೇ. 25.38 ಮತ್ತು ಶೇ 33.08 ರಷ್ಟು ಹಂಚಿಕೆಯಾಗಿದೆ. ಹೊಂದಾಣಿಕೆ ಮಾಡದ ಬಳಕೆ ವೆಚ್ಚದೊಂದಿಗೆ ಈ ಯೋಜನೆಯ ನಿವ್ವಳ ಹಣಕಾಸಿನ ಪರಿಣಾಮದ ಲೆಕ್ಕಾಚಾರಗಳ ನಡುವಿನ ವ್ಯತ್ಯಾಸವು ಅತ್ಯಲ್ಪವಾಗಿತ್ತು ಎಂದು ಸಂಶೋಧನಾ ವರದಿಯಲ್ಲಿ ವಿವರಿಸಿತ್ತು.

SUPPORT THE FILE

Latest News

Related Posts