ಸುಲಿಗೆ; ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ, ಮತ್ತೊಬ್ಬ ಎಸ್ಪಿಯ ಹೆಸರು ಬಾಯ್ಬಿಟ್ಟ ಮಧ್ಯವರ್ತಿ ಗಿರಿರಾಜ್‌?

ಬೆಂಗಳೂರು;  ಸರ್ಕಾರಿ ಅಧಿಕಾರಿಗಳಿಂದ ಹಣ ಸುಲಿಗೆ ಮಾಡುತ್ತಿದ್ದ ಎಂಬ ಆರೋಪಕ್ಕೆ ಗುರಿಯಾಗಿರುವ ನಿಂಗಪ್ಪನ ಮೂಲಕ ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿರುವ ಪ್ರಕರಣವು ಅಧಿಕಾರಿಗಳ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಇದೀಗ ಲೋಕಾಯುಕ್ತದ ಮತ್ತೊಬ್ಬ ಎಸ್ಪಿಯ ಹೆಸರೂ ಸಹ ಸೇರ್ಪಡೆಗೊಂಡಿದೆ.

 

ಕ್ರಿಪ್ಟೋ ಕರೆನ್ಸಿ ವ್ಯವಹಾರದಲ್ಲಿ ಹೂಡಿಕೆ ಸಂಬಂಧ ಮಧ್ಯವರ್ತಿಗಳನ್ನು ಆರೋಪಿ ನಿಂಗಪ್ಪ ಲೋಕಾಯುಕ್ತದ ಪೊಲೀಸ್‌ ಅಧಿಕಾರಿಗಳಿಗೆ  ಪರಿಚಯಿಸಿದ್ದ. ನಿಂಗಪ್ಪನ ಮೂಲಕ ಪರಿಚಯಿಸಿಕೊಂಡಿದ್ದ ಎಸ್ಪಿಯೊಬ್ಬರು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿರುವುದನ್ನು ಲೋಕಾಯುಕ್ತ ಪೊಲೀಸರು ಬಯಲಿಗೆಳೆದಿದ್ದಾರೆ!

 

ಮೈಸೂರು ವಿಭಾಗದ ಲೋಕಾಯುಕ್ತ ಎಸ್ಪಿಯೊಬ್ಬರು (ಈಗ ಮಧ್ಯ ಕರ್ನಾಟಕದಲ್ಲಿ ಎಸ್ಪಿ) ನಿಂಗಪ್ಪನ ಮೂಲಕ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದರು ಎಂದು ಗೊತ್ತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಗಿರಿರಾಜ್‌ ಎಂಬ ಮಧ್ಯವರ್ತಿಯನ್ನು  ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

 

ಗಿರಿರಾಜ್‌ ಎಂಬಾತ ಬೆಂಗಳೂರು ನಗರದ ನಿವಾಸಿ. ಈತ ಹಲವು ಪೊಲೀಸ್‌ ಅಧಿಕಾರಿಗಳಿಗೆ ಪರಿಚಿತ. ವಿಶೇಷವಾಗಿ ಲೋಕಾಯುಕ್ತ ಪೊಲೀಸ್‌ ವಿಭಾಗದಲ್ಲಿರುವ ಹಲವು ಅಧಿಕಾರಿ, ಸಿಬ್ಬಂದಿಗಳಿಂದ ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿಸಿದ್ದಾನೆ. ಆರೋಪಿ ನಿಂಗಪ್ಪನೇ ಈ ಎಲ್ಲಾ ಅಧಿಕಾರಿಗಳನ್ನು ಗಿರಿರಾಜ್‌ಗೆ ಪರಿಚಯಿಸಿದ್ದ ಎಂದು ಗೊತ್ತಾಗಿದೆ.

 

ಮೈಸೂರು ವಿಭಾಗದಲ್ಲಿ ಲೋಕಾಯುಕ್ತ ಎಸ್ಪಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐಪಿಎಸ್‌ ಅಧಿಕಾರಿಯೊಬ್ಬರಿಂದಲೂ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿಸಿದ್ದ. ಆರೋಪಿ ನಿಂಗಪ್ಪ ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರವೂ  ಆ ಅಧಿಕಾರಿಯೊಂದಿಗೆ ಗಿರಿರಾಜ್‌ ವಾಟ್ಸಾಪ್‌ ಕರೆಗಳನ್ನು ಮಾಡಿದ್ದ ಎಂಬ ಸಂಗತಿಯನ್ನು ತನಿಖಾಧಿಕಾರಿಗಳು  ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.

 

ಕ್ರಿಪ್ಟೋ ಹೂಡಿಕೆ ನಂಟು

 

ಕ್ರಿಪ್ಟೋ ಕರೆನ್ಸಿ ವ್ಯವಹಾರದಲ್ಲಿ ಹಲವು ಅಧಿಕಾರಿಗಳನ್ನು ಹೂಡಿಕೆ ಮಾಡುವ ಮೂಲಕ ತೊಡಗಿಸಲು ಆರೋಪಿ ನಿಂಗಪ್ಪನು ಲೋಕಾಯುಕ್ತ ಎಸ್ಪಿ ಶ್ರೀನಾಥ್‌ ಜೋಷಿ ಅವರ ನೆರವನ್ನು ಕೇಳಿದ್ದ.  2025ರ ಜನವರಿ 18ರಂದು ಎಸ್‌ ಪಿ ಜೋಷಿ ಅವರು ಜಗದೀಶ್‌ ಎಂಬುವರ ಮೊಬೈಲ್‌ ನಂಬರ್‍‌ (9448353103) ನ್ನು ಕಳಿಸಿದ್ದರು. ಈ ಸಂಖ್ಯೆಯು ಜಗದೀಶ್‌ ನಾಯಕ್‌ ಎಂಬುವರಿಗೆ ಸೇರಿದೆ ಎಂದು ಗೊತ್ತಾಗಿದೆ.

 

ಪಿಎಲ್‌ಸಿ ಅಲ್ಟಿಮಾ ಎಂಬ ಕಾಯಿನ್‌ ಪ್ರಾಜೆಕ್ಟ್‌ನಲ್ಲಿ ಹೂಡಿಕೆ ಮಾಡಿದರೆ 2-3 ವರ್ಷದಲ್ಲಿ 2-3 ಕೋಟಿ ರೂಪಾಯಿ ಆಗುತ್ತದೆ ಎಂದು ಅವರಿಗೆ ನಂಬಿಸಿ ಅವರಿಂದ ನಾನು 14 ಲಕ್ಷ ರುಪಾಯಿ ಹಣ ನಗದಾಗಿ ಪಡೆದಿದ್ದ ನಿಂಗಪ್ಪ, ಈ ಯೋಜನೆಯಲ್ಲಿ ಹೂಡಿಕೆ ಮಾಡಿಸಿದ್ದ.

 

ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಸರ್ಕಾರಿ ನೌಕಕರಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿರುವ ಎಸ್ಪಿ ಶ್ರೀನಾಥ ಎಂ ಜೋಷಿ ಅವರ ವಿರುದ್ಧ ಲೋಕಾಯುಕ್ತ ಸಂಸ್ಥೆಯು ಇದುವರೆಗೂ ಯಾವುದೇ ಶಿಸ್ತು ಕ್ರಮ ಜರುಗಿಸಿಲ್ಲ.

 

ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಎಸ್ಪಿ ಶ್ರೀನಾಥ ಜೋಷಿ ಅವರನ್ನು ಅಬಕಾರಿ ಸಚಿವ ಆರ್‍‌ ಬಿ ತಿಮ್ಮಾಪುರ ಅವರನ್ನು ಆರೋಪಿ ನಿಂಗಪ್ಪ ಭೇಟಿ ಮಾಡಿಸಿದ್ದ.

 

ಲೋಕಾ ಎಸ್ಪಿ ಜೋಷಿ, ನಿಂಗಪ್ಪನೊಂದಿಗೆ ಅಬಕಾರಿ ಸಚಿವ ತಿಮ್ಮಾಪುರ ನಂಟು; ಐಷಾರಾಮಿ ಹೋಟೆಲ್‌ನಲ್ಲಿ ಭೇಟಿ?

 

ಆರೋಪಿ ನಿಂಗಪ್ಪ, ಎಸ್‌ ಪಿ ಶ್ರೀನಾಥ ಜೋಷಿ ಅವರನ್ನು ಕಳೆದ 2 ವರ್ಷದಲ್ಲಿ 7-8 ಬಾರಿ ಅವರ ಕಚೇರಿಯಲ್ಲಿಯೇ ಭೇಟಿ ಮಾಡಿದ್ದ ಎಂಬುದಕ್ಕೆ ತನಿಖಾಧಿಕಾರಿಗಳು ಸಾಕ್ಷ್ಯವನ್ನು ಸಂಗ್ರಹಿಸಿದ್ದಾರೆ ಎಂದು ಗೊತ್ತಾಗಿದೆ.

 

ಜೂನ್‌ 15ರಂದು ಜೋಶಿ ಅವರ ಮನೆಯಲ್ಲಿ ಶೋಧ ನಡೆಸಿ, ಬಿಎನ್‌ಎಸ್‌ಎಸ್‌ ಸೆಕ್ಷನ್‌ 35(ಎ) ನೋಟಿಸ್‌ ಜಾರಿ ಮಾಡಲಾಗಿದೆ. ಜೂನ್‌ 16ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.    ಕಾರಣವನ್ನು ಬಹಿರಂಗಪಡಿಸಿಲ್ಲ. ನೋಟಿಸ್‌ ಜೊತೆಗೆ ದೂರು ಅಥವಾ ಎಫ್‌ಐಆರ್‌ ಲಗತ್ತಿಸಿಲ್ಲ. ಎಫ್‌ಐಆರ್‌ ಅಥವಾ ದೂರಿನಲ್ಲಿ ಜೋಶಿ ಅವರ ಹೆಸರು ಉಲ್ಲೇಖಿಸಿಲ್ಲ.

ನಿಂಗಪ್ಪನಿಗೆ ಅಬಕಾರಿ, ಬಿಬಿಎಂಪಿ ಅಧಿಕಾರಿಗಳೇ ಗುರಿ; ಎಫ್‌ಐಆರ್‍‌ನಲ್ಲಿಲ್ಲ ಎಸ್ಪಿ ಜೋಷಿ ಹೆಸರು

 

ಈ ಪ್ರಕರಣದ ಪ್ರಮುಖ ಆರೋಪಿ ನಿಂಗಪ್ಪ,  ಕಾಂಗ್ರೆಸ್‌ ಪಕ್ಷದ ಸಂಘಟನೆಯಲ್ಲಿದ್ದ. ಹೀಗಾಗಿಯೇ ಸರ್ಕಾರದ ಯಾರೊಬ್ಬರೂ ಸಹ ಈ ಪ್ರಕರಣದ ಬಗ್ಗೆ ಬಾಯಿಬಿಡುತ್ತಿಲ್ಲ. ಪ್ರಕರಣದ ತನಿಖೆಯು ಆಳಕ್ಕೆ ಇಳಿದಂತೆಲ್ಲಾ ಇದು ನೇರವಾಗಿ ಕಾಂಗ್ರೆಸ್‌ ಪಕ್ಷದ ಬುಡಕ್ಕೆ ನೇರವಾಗಿ ಬರುತ್ತಿದೆ!

 

ಲೋಕಾ ಹೆಸರಿನಲ್ಲಿ ಹಣ ವಸೂಲಿ ಪ್ರಕರಣ; ಕಾಂಗ್ರೆಸ್‌ ಪಕ್ಷದ ಬುಡಕ್ಕೆ ಬರಲಿದೆಯೇ, ಹವಾಲಾ ನಂಟಿದೆಯೇ?

 

ಪಿಎಲ್‌ಸಿ ಅಲ್ಟಿಮಾ ಎಂಬ ಕಾಯಿನ್ ಪ್ರಾಜೆಕ್ಟ್‌ನಲ್ಲಿ ಹೂಡಿಕೆ ಮಾಡಿದರೆ 2-3 ವರ್ಷದಲ್ಲಿ 2-3 ಕೋಟಿ ರು ಆಗಲಿದೆ ಎಂದು ಶ್ರೀನಾಥ್‌ ಜೋಷಿ ಅವರನ್ನು ನಂಬಿಸಿದ್ದ. ಈ ವ್ಯವಹಾರಕ್ಕಾಗಿ ಆರೋಪಿ ನಿಂಗಪ್ಪ, ಶ್ರೀನಾಥ ಜೋಷಿ ಅವರಿಂದ 14 ಲಕ್ಷ ರು.ಗಳನ್ನು ನಗದು ರೂಪದಲ್ಲಿ ಪಡೆದಿದ್ದ. ನಂತರ ಇದೇ 14 ಲಕ್ಷ ರು.ಗಳನ್ನು ಅಲ್ಟಿಮಾ ಕಾಯಿನ್‌ ಪ್ರಾಜೆಕ್ಟ್‌ನಲ್ಲಿ ಹೂಡಿಕೆ ಮಾಡಿದ್ದ ಎಂದು ತಿಳಿದು ಬಂದಿದೆ.

 

ನಿಂಗಪ್ಪನಿಗೆ ಕಪ್ಪ ಕೊಟ್ಟ ಅಧಿಕಾರಿಗಳೊಂದಿಗೆ ಸಿಎಂ ಸಲಹೆಗಾರರು, ಮೈಸೂರಿನ ಸಚಿವರ ನಂಟು?

 

 

ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದರಿಂದ ಆರೋಪಿ ನಿಂಗಪ್ಪನಿಗೆ ಪಿಎಲ್‌ಸಿ ಕಂಪನಿಯೇ ದುಬೈ ಪ್ರವಾಸವನ್ನು ಪ್ರಾಯೋಜಿಸಿತ್ತು.  2024ರ ಏಪ್ರಿಲ್‌ ಮೊದಲನೇ ವಾರದಲ್ಲಿ 7 ದಿನಗಳ ಕಾಲ ದುಬೈ ಪ್ರವಾಸ ಕೈಗೊಂಡಿದ್ದ ಎಂದು ಗೊತ್ತಾಗಿದೆ.

 

ಲೋಕಾಯುಕ್ತರೇ ದಾಖಲಿಸಿದ್ದ ಸ್ವಯಂ ಪ್ರೇರಿತ ಪ್ರಕರಣದ ಆರೋಪಿಗಳ ಬೆನ್ನೆತ್ತಿದ್ದ ಆರೋಪಿ ನಿಂಗಪ್ಪ?

 

ಆರೋಪಿ ನಿಂಗಪ್ಪ, ಹಣ ವಸೂಲಿಗೆ ಕೋಡ್‌ ವರ್ಡ್‌ ಬಳಸುತ್ತಿದ್ದ.

 

 

ತಿಂಗಳಿಗೆ 3 ಲಕ್ಷಕ್ಕೆ ಬೇಡಿಕೆ, ಹಣದ ಮೌಲ್ಯಕ್ಕೆ ‘ಕೆ ಜಿ’ ಕೋಡ್‌ವರ್ಡ್‌; ಅಧಿಕಾರಿಗಳ ಹೆಸರು ಬಾಯ್ಬಿಟ್ಟ ನಿಂಗಪ್ಪ

 

ಲೋಕಾಯುಕ್ತ ಹೆಸರು ಹೇಳಿ ಸರ್ಕಾರಿ ಅಧಿಕಾರಿಗಳಿಂದ ಕೋಟ್ಯಂತರ ರುಪಾಯಿ ವಸೂಲು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ  ಆರೋಪಿ ನಿಂಗಪ್ಪ ಅಬಕಾರಿ ಇಲಾಖೆಯ ವಿವಿಧ ಅಧಿಕಾರಿಗಳಿಂದ ಕಳೆದ 6 ತಿಂಗಳಿನಿಂದಲೂ  ಹಣವನ್ನು ವಸೂಲಿ ಮಾಡಿರುವುದಾಗಿ ಒಪ್ಪಿಕೊಂಡಿದ್ದ ಎಂದು  ಲೋಕಾಯುಕ್ತ ಪೊಲೀಸ್‌ ವಿಭಾಗವು ಇದೀಗ ಅಧಿಕೃತವಾಗಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು.

 

ಹಣ ವಸೂಲಿ, ಕ್ರಿಪ್ಟೋ ಕರೆನ್ಸಿಯಲ್ಲಿಯೂ ಹೂಡಿಕೆ; ‘ದಿ ಫೈಲ್‌’ ವರದಿ ಬೆನ್ನಲ್ಲೇ ಬಿಡುಗಡೆಯಾದ ಪತ್ರಿಕಾ ಹೇಳಿಕೆ

 

ಅಲ್ಲದೇ ಈ ಪ್ರಕರಣದಲ್ಲಿ ಸಚಿವರ ಮೂವರು ಆಪ್ತ ಕಾರ್ಯದರ್ಶಿಗಳ ಹೆಸರೂ ಸಹ ತಳಕು ಹಾಕಿಕೊಂಡಿತ್ತು.

 

ಲೋಕಾ ಹೆಸರಿನಲ್ಲಿ ವಸೂಲಿ; ಬಂಧಿತ ಆರೋಪಿಯೊಂದಿಗೆ ಮೂವರು ಸಚಿವರ ಆಪ್ತ ಕಾರ್ಯದರ್ಶಿಗಳ ನಂಟು?

 

ಆರೋಪಿ ನಿಂಗಪ್ಪ ಅಬಕಾರಿ ಇಲಾಖೆಯ ವಿವಿಧ ಅಧಿಕಾರಿಗಳಿಂದ ಕಳೆದ 6 ತಿಂಗಳಿನಿಂದ ಹಣವನ್ನು ವಸೂಲಿ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಈ ರೀತಿ ವಸೂಲಿ ಮಾಡಿದ ಹಣವನ್ನು ತನ್ನ ಹಾಗೂ ತನ್ನಸಂಬಂಧಿಕರುಗಳ ಹೆಸರಿನಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿರುತ್ತೇನೆಂದು ಒಪ್ಪಿಕೊಂಡಿರುತ್ತಾನೆ ಎಂದು ಹೇಳಲಾಗಿದೆ.

 

ಕೋಟ್ಯಂತರ ರು. ಕಪ್ಪುಹಣ ವರ್ಗಾವಣೆ; ಅಶ್ವಿನ್‌ ಕುಕೃತ್ಯದ ಬಗ್ಗೆ ಸಾಕ್ಷ್ಯ ನುಡಿದ ಇ ಡಿ ಉಪ ನಿರ್ದೇಶಕ

 

ನಿಂಗಪ್ಪನ ಹೇಳಿಕೆ ಆಧರಿಸಿ ಲೋಕಾಯುಕ್ತ ಪೊಲೀಸರು ಎಸ್ಪಿ ಜೋಷಿ ಅವರ ಮನೆಯ ಮೇಲೆ ದಾಳಿ ನಡೆಸಿತ್ತು.

 

ಲೋಕಾ ಪೊಲೀಸರ ಶೋಧ; ಬರಿಗೈಯಲ್ಲಿ ಮರಳಿದ ಪೊಲೀಸರು, ತಲೆಮರೆಸಿಕೊಂಡಿದ್ದಾರೆಯೇ ಜೋಷಿ?

 

ವಿಶೇಷವೆಂದರೇ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿಯೂ ಲೋಕಾಯುಕ್ತರಾಗಿದ್ದ ಭಾಸ್ಕರರಾವ್‌ ಅವರ ಪುತ್ರ ಮತ್ತು ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ಹಲವರಿಂದ ಹಣಕ್ಕಾಗಿ ಬೇಡಿಕೆ ಇರಿಸಿದ್ದರು. ಆ ಸಂದರ್ಭದಲ್ಲಿ ಲೋಕಾಯುಕ್ತ ಎಸ್ಪಿಯಾಗಿದ್ದ ಸೋನಿಯಾ ನಾರಂಗ್ ಅವರು ಈ ಪ್ರಕರಣವನ್ನು ಬಹಿರಂಗಪಡಿಸಿದ್ದರು. ಅಲ್ಲದೇ ಲೋಕಾಯುಕ್ತ ಹುದ್ದೆಗೆ ಭಾಸ್ಕರರಾವ್‌ ಅವರು ರಾಜೀನಾಮೆ ನೀಡಿದ್ದರು. ಹಾಗೂ ಅವರ ಪುತ್ರ ಅಶ್ವಿನ್‌ ರಾವ್‌ ಸಹ ಪೊಲೀಸರ ಬಂಧನಕ್ಕೆ ಒಳಗಾಗಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts