ವಾಲ್ಮೀಕಿ ಅಭಿವೃದ್ದಿ ನಿಗಮದ 89 ಕೋಟಿ ಹಗರಣ; ಯೂನಿಯನ್‌ ಬ್ಯಾಂಕ್‌ನ ತಲೆಗೆ ಕಟ್ಟಿದ ಸರ್ಕಾರ

ಬೆಂಗಳೂರು; ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದಿರುವ ಬಹು ಕೋಟಿ ಹಗರಣವನ್ನೇ ಪ್ರಬಲ ಅಸ್ತ್ರವನ್ನಾಗಿಸಿಕೊಂಡಿರುವ ಪ್ರತಿಪಕ್ಷಗಳು, ಉಭಯ ಸದನಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವ ಹೊತ್ತಿನಲ್ಲೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಡೀ ಸರ್ಕಾರವೇ ಈ ಹಗರಣವನ್ನು ನೇರವಾಗಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ತಲೆಗೆ ಕಟ್ಟಿದೆ.

 

ಅಲ್ಲದೇ ಆದಾಯ ತೆರಿಗೆ ಇಲಾಖೆಯನ್ನೂ ಎಳೆದು ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರೀಕೃತ ಬ್ಯಾಂಕ್‌ ಆಗಿರುವ ಯೂನಿಯನ್‌ ಬ್ಯಾಂಕ್‌ನಲ್ಲೇ ಕಳ್ಳತನ ನಡೆದಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಸರಣಿ ರೂಪದಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.

 

ಅಲ್ಲದೇ ಭ್ರಷ್ಟಾಚಾರ ತಡೆ ಕಾಯ್ದೆ (ತಿದ್ದುಪಡಿ) 2018ರ ಸೆಕ್ಷನ್‌ 17(ಎ) ಅಡಿಯಲ್ಲಿ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರಾದ ಸುಚಿಸ್ಮಿತಾ ರೌಲ್‌ ಅವರನನ್ನು ತನಿಖೆ, ವಿಚಾರಣೆ ನಡೆಸಲು ಅನುಮತಿ ಸಾರಾಂಶವನ್ನು ಮುಂದಿರಿಸಲಾಗಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅನುಮತಿ ಸಾರಾಂಶದಲ್ಲೇನಿದೆ?

 

ಎಂ ಜಿ ರಸ್ತೆಯ ಶಾಖೆಯ ಮುಖ್ಯ ವ್ಯವಸ್ಥಾಪಕರಾದ ಸುಚಿಸ್ಮಿತಾ ರೌಲ್‌ ಅವರು ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಯ ಇ-ಮೇಲ್‌ ಐಡಿ ಮತ್ತು ಸಹಿ ಮಾಡಿದವರ ಮೊಬೈಲ್‌ ಸಂಖ್ಯೆಯನ್ನು ಮಾರ್ಪಾಡು ಮಾಡಲು ಕೋರಿಕೆ ಸ್ವೀಕರಿಸುವಾಗ ಸಹಿ ಮಾಡಿದವರ ಸಹಿಗಳ ನೈಜತೆ ಪರಿಶೀಲಿಸಲು ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ.

 

ಇ-ಮೇಲ್‌ ಐಡಿಯನ್ನು mdkmvstdcl@gmail.com ಎಂದು ಬದಲಾಯಿಸಲು ಮತ್ತು ಮೊಬೈಲ್‌ ಸಂಖ್ಯೆಯನ್ನು 6026137043ಗೆ ಬದಲಾಯಿಸುವಂತೆ ಕೋರಿಕೆ ಸ್ವೀಕರಿಸಲಾಗಿತ್ತು. ಆದರೆ ಇದನ್ನು ವೆಬ್‌ಸೈಟ್‌ ಅಥವಾ ನಿಗಮದ ಕಚೇರಿಗೆ ವೈಯಕ್ತಿಕ ಭೇಟಿ ಮೂಲಕ ವಿವರಗಳನ್ನು ಪರಿಶೀಲಿಸಿಲ್ಲ. ಚೆಕ್‌ ಬುಕ್‌ಗಳ ವಿತರಣೆಗಾಗಿ ಕೋರಿಕೆ ಸಲ್ಲಿಸಿದಾಗ ಸಹಿ ಮಾಡಿದವರನ್ನೂ ಗುರುತಿಸಲು ವಿಫಲರಾಗಿರುತ್ತಾರೆ ಎಂದು ಸಾರಾಂಶದಲ್ಲಿ ಉಲ್ಲೇಖಿಸಿರುವುದು ಕಂಡು ಬಂದಿದೆ.

 

2024ರ ಮಾರ್ಚ್‌ 4ರಂದು ಚೆಕ್ ಪುಸ್ತಕವನ್ನು ಹಸ್ತಾಂತರಿಸುವಾಗ ತಮ್ಮ ಸಂವಹನದಲ್ಲಿ ಶಿವಕುಮಾರ್‍‌ ಅವರ ಗುರುತನ್ನು ಪರಿಶೀಲಿಸಲು ವಿಫಲರಾಗಿದ್ದಾರೆ. ಇದಲ್ಲದೇ ಅದೇ ಗ್ರಾಹಕರಿಗೆ ಸ್ಥಿರ ಠೇವಣಿ ವಿರುದ್ಧ 45.00 ಕೊಟಿ ರು ಒಒಡಿ ಮಿತಿಯನ್ನು ಮಂಜೂರು ಮಾಡುವಾಗ ಅವರು ಹೇಳಿದ ನಿಗಮದ ಆರ್ಟಿಕಲ್‌ ಆಫ್‌ ಅಸೋಸಿಯೇಷನ್‌ ಮತ್ತು ಮೆಮೊರಂಡಮ್‌ ಆಫ್‌ ಅಸೋಸಿಯೇಷನ್‌ ಪಡೆಯಲು ವಿಫಲರಾಗಿದ್ದಾರೆ ಎಂದು ಸಾರಾಂಶದಲ್ಲಿ ಪ್ರಸ್ತಾಪಿಸಿದೆ.

 

ಸ್ಥಿರ ಠೇವಣಿ ವಿರುದ್ಧ ಒಒಡಿ ಸೌಲಭ್ಯ ಪಡೆಯಲು ನಿಗಮವು ಸಕ್ಷಮ ಪ್ರಾಧಿಕಾರವಾಗಿದೆ. ಆಕೆಯ ಉಪಸ್ಥಿತಿಯಲ್ಲಿ ಅಧಿಕೃತ ಸಹಿದಾರರ ಸಹಿ ಪಡೆಯಲು ಅವರು ವಿಫಲರಾಗಿರುತ್ತಾರೆ. ಠೇವಣಿಗಳ ವಿರುದ್ಧ ಒಒಡಿ ಮಂಜೂರಾತಿಗೆ ಯಾವುದೇ ಕೋರಿಕೆ ಸಲ್ಲಿಸಿಲ್ಲ ಎಂದು ನಿರಾಕರಿಸಿದ್ದರು. ಆಕೆಯ ಮೇಲಿನ ಸಂಪೂರ್ಣ ನಿರ್ಲಕ್ಷ್ಯದ ಕೃತ್ಯಗಳಿಂದಾಗಿ ನಿಗಮದ ಖಾತೆಯಿಂದ ಒಟ್ಟು 89.63 ಕೋಟಿಯನ್ನು ಮೋಸದಿಂದ ವರ್ಗಾಯಿಸಲಾದ ಹಣವನ್ನು ಐಟಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳಿಗೆ ವರ್ಗಾಯಿಸಲಾಗಿದೆ ಎಂದು ಸಾರಾಂಶದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಸಿದ್ದರಾಮಯ್ಯ ಅವರ ಸ್ಪಷ್ಟನೆ ಏನು?

 

ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ 89.63 ಕೋಟಿ ರು.ಗಳನ್ನು ಅಕ್ರಮವಾಗಿ ಹೈದರಾಬಾದ್‌ನ ಆರ್‍‌ ಬಿ ಎಲ್‌ ಬ್ಯಾಂಕ್‌ಗೆ ವರ್ಗಾವಣೆ ಆಗಿರುತ್ತದೆ. ( ಈ 89.63 ಕೋಟಿ ರು.ಗಳಲ್ಲಿ 5 ಕೋಟಿ ವಾಪಸ್‌ ಬಂದಿರುತ್ತದೆ. 89.63 ಕೋಟಿ ರು.ಗಳಲ್ಲಿ 45,02,98,000 ರುಗ.ಳು ಉಳಿತಾಯ ಖಾತೆಯಿಂದ ವರ್ಗಾವಣೆ ಆಗಿರುತ್ತವೆ. ಇನ್ನುಳಿದ 44.60 ಕೊಟಿ ರು.ಗಳು ನಿಮಗವು ಇಟ್ಟಿದ್ದ ಫಿಕ್ಸೆಡ್‌ ಡಿಪಾಸಿಟ್‌ ಮೇಲೆ ಓವರ್‍‌ ಡ್ರಾಫ್ಟ್‌ ತೆಗೆದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

 

ಓವರ್‍‌ ಡ್ರಾಫ್ಟ್‌ ಎಂದರೆ ಒಂದು ರೀತಿಯ ಸಾಲವೇ. ಇದು ಅತ್ಯಂತ ಪರಿಣಿತರಾದ ಪಳಗಿದ ಖದೀಮರ ಕೆಲಸ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಗಮವು 20234 ರ ಮಾರ್ಚ್‌ 30ರಂದು 50.00 ಕೋಟಿ ರು.ಗಳನ್ನು ಫಿಕ್ಸಡ್ ಡಿಪಾಸಿಟ್‌ ನಲ್ಲಿಟ್ಟಿದೆ. ಈ 50.00 ಕೋಟಿ ರು. ಫಿಕ್ಸೆಡ್‌ ಡಿಪಾಸಿಟ್‌ ನಮ್ಮ ವಶದಲ್ಲಿಯೇ ಇದೆ ಎಂದು ಮಾಹಿತಿ ಒದಗಿಸಿದ್ದಾರೆ.

 

ನಿರ್ದೇಶಕರ ಮಂಡಳಿ ಸಭೆ 2024ರ ಮಾರ್ಚ್‌ 30ರಂದು ನಡೆಯಿತೆಂದು ಬ್ಯಾಂಕ್‌ ಗೆ ತಿಳಿಸಲಾಗಿದೆಯೆಂಬಂತೆ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಅದರೆ ಚುನಾವಣೆ ನೀತಿ ಸಂಹಿತೆ ಇರುವಾಗ ಯಾವ ಸಭೆ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

 

‘ಚುನಾವಣೆ ಸಂದರ್ಭದಲ್ಲಿ ಇಷ್ಟು ದೊಡ್ಡ ಪ್ರಮಾಣದ ವ್ಯವಹಾರಗಳು ನಡೆಯುವಾಗ ಆದಾಯ ತೆರಿಗೆ ಇಲಾಖೆಯವರು ಬ್ಯಾಂಕ್‌ನನ್ನು ಕೇಳಲಿಲ್ಲವೇ? ಬ್ಯಾಂಕ್‌ನವರು ಚುನಾವಣಾ ಆಯೋಗದ ಗಮನಕ್ಕೆ ತರಬೇಕಾಗಿತ್ತಲ್ಲ. ಯಾಕೆ ತರಲಿಲ್ಲ, ಬ್ಯಾಂಕ್‌ನ ಮ್ಯಾನೇಜರ್‍‌ ಅನೇಕ ಅಧಿಕಾರಿ, ಸಿಬ್ಬಂದಿಗಳು ವಾಲ್ಮೀಕಿ ನಿಗಮದ ಅಧಿಕಾರಿ ಸಿಬ್ಬಂದಿ ಮತ್ತು ಹೊರಗಿನ ಖಾಸಗಿ ಅಪರಾಧ ಮಾಡುವ ವ್ಯಕ್ತಿಗಳು ಸೇರಿ ಇದು ಮಾಡಿರುವ ಹುನ್ನಾರ ಎಂದು ವ್ಯಕ್ರವಾಗುತ್ತದೆ, ‘ ಎಂದು ಸಮಜಾಯಿಷಿ ನೀಡಿದ್ದಾರೆ.

 

ನಿಗಮದವರು ಹೊಸ ಖಾತೆ ತೆರೆಯಬೇಕಾದರೇ ಖಾತೆ ವರ್ಗಾವಣೆ ಮಾಡಬೇಕಾದರೆ ಆರ್ಥಿಕ ಇಲಾಖೆಯ ಗಮನಕ್ಕೆ ತರಬೇಕು. ಅನುಮತಿ ಪಡೆದುಕೊಳ್ಳಬೇಕು. ಆದರೆ ಈ ಈ ಯಾವ ಕೆಲಸವನ್ನೂ ಮಾಡಿಲ್ಲ. ನೇರವಾಗಿ ಖಾತೆಯ ವಿವರವನ್ನು ಖಜಾನೆ-2ರಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. 2024ರ ಮಾರ್ಚ್‌ 19ರಂದು ಡಿಡಿಒ ಕಚೇರಿ ಅಂದರೇ ನಿರ್ದೇಶಕರು, ಪರಿಶಿಷ್ಟ ಪಂಗಡಳ ಇಲಾಖೆಯ ವ್ಯವಸ್ಥಾಪಕರು ಹೊಸ ಬ್ಯಾಂಕ್‌ ಖಾತೆಯನ್ನು ಕೆ-2ನಲ್ಲಿ ಅಪ್‌ಲೋಡ್ ಮಾಡಿದ್ಧಾರೆ. ಇದನ್ನು ಡಿಡಿಓ ಅವರು ಅನುಮೋದಿಸಿದ್ದಾರೆ ಎಂದು ಹೇಳಿದ್ದಾರೆ.

 

ಡಿಡಿಓ ಅವರ ಜವಾಬ್ದಾರಿಯ ಮೇಲೆ 2024ರ ಫೆ.25ರಂದು 43.33 ಕೋಟಿ ರು.ಗಳ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಯೂನಿಯನ್‌ ಬ್ಯಾಂಕ್‌ ಆಫ್‌ ಇಮಡಿಯಾ ಉಳಿತಾಯ ಖಾತೆಗೆ ವರ್ಗಾಯಿಸಲಾಗಿದೆ. ವರ್ಷದ ಕಡೆಯಲ್ಲಿ ಆಯವ್ಯಯದಲ್ಲಿ ಕಲ್ಪಿಸಿದ ಅನುದಾನವನ್ನು ಎಲ್ಲರಿಗೂ ಬಿಡುಗಡೆ ಮಾಡುವ ಹಾಗೆಯೇ ಈ ಖಾತೆಗೂ ಹಣ ಬಿಡುಗಡೆಯಾಗಿದೆ. ಯೂನಿಯನ್‌ ಬ್ಯಾಂಕ್‌ ಕೂಡ ರಾಷ್ಟ್ರೀಕೃತ ಬ್ಯಾಂಕೇ, ರಾಷ್ಟ್ರೀಕೃತ ಬ್ಯಾಂಕ್‌ನಲ್ಲೇ ಕಳ್ಳತನ ನಡೆದಿದೆ ಎಂದು ಆರೋಪಿಸಿದ್ದಾರೆ.

 

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ನಿಗಮವು ಸಲ್ಲಿಸಿರುವ ಪತ್ರದಲ್ಲಿ ಉಳಿತಾಯ ಖಾತೆಯನ್ನು ವ್ಯವಸ್ಥಾಪಕ ನಿರ್ದೇಶಕರು ಮತ್ತು ಲೆಕ್ಕಾಧಿಕಾರಿಯವರು ಜಂಟಿಯಾಗಿ ನಿರ್ವಹಿಸುತ್ತಾರೆಂದು ತಿಳಿಸಿದ್ದು ಎರಡು ಮಾದರಿ ಸಹಿ ಇತರೆ ಕೆವೈಸಿ ವಿವರಗಳು ಹಾಘೂ ದಾಖಲೆಗಳನ್ನು ಸಲ್ಲಿಸಿದ್ದಾರೆ. 2024ರ ಮಾರ್ಚ್‌ 4ರಂದು ವ್ಯವಸ್ಥಾಪಕ ನಿರ್ದೇಶಕರು ಮತ್ತು ಲೆಕ್ಕಾಧಿಕಾರಿಯವರು ಜಂಟಿಯಾಗಿ ಬ್ಯಾಂಕ್‌ಗೆ ಪತ್ರವನ್ನು ನೀಡಿದಂತೆ ಅಕ್ರಮ ಪತ್ರ ನೀಡಲಾಗಿದೆಯೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.

 

ಈ ಉಳಿತಾಯ ಖಾತೆಗೆ ಸಂಬಂಧಪಟ್ಟಂತೆ ಎಲ್ಲಾ ರೀತಿಯ ವ್ಯವಹಾರಗಳನ್ನುಅಂದರೇ ಚೆಕ್‌ ಬುಕ್ ಪಡೆಯುವುದು, ಫಿಕ್ಸೆಡ್‌ ಡಿಪಾಸಿಟ್‌ ರಸೀದಿ ಪಡೆಯುವುದು, ಓವರ್‍‌ ಡ್ರಾಪ್ಟ್‌ ದಾಖಲೆಗಳನ್ನು ಪಡೆಯುವುದು ಹಾಗೂ ನಿಗಮದ ಎಲ್ಲಾ ವ್ಯವಹಾರಗಳನ್ನು ಈ ಖಾತೆಯಲ್ಲಿ ನಿರ್ವಹಿಸಲು ನಕಲಿ ಪತ್ರವೊಂದನ್ನು ಸೃಷ್ಟಿಸಲಾಗಿದೆ.

 

ಅದರಲ್ಲಿ ನಿಗಮದಲ್ಲಿ ಇಲ್ಲದೇ ಇರುವ ಶಿವಕುಮಾರ್‍‌ ಎಂಬ ಅಕ್ರಮ ವ್ಯಕ್ತಿಯನ್ನು ಸೃಷ್ಟಿಸಲಾಗಿದೆ. ಅವರನ್ನು ಕಿರಿಯ ಲೆಕ್ಕಾಧಿಕಾರಿಯವರು ಎಂದು ಹೇಳಿ ಆತನೇ ಇನ್ನು ಮುಂದಿನ ಅಧಿಕೃತ ಸಹಿದಾರ ಎಂದು ಅನಧಿಕೃತವಾಗಿ ಮಾಡಿದ್ದಾರೆ. ಆತನ ವಶಕ್ಕೆ ಚೆಕ್‌ ಬುಕ್‌ ನೀಡಬೇಕು ಎಂದು ತಿಳಿಸುವ ಪತ್ರವೊಂದನ್ನು ನೀಡಿದ್ಧಾರೆ ಎಂದು ಮಾಹಿತಿ ಒದಗಿಸಿದ್ದಾರೆ.

the fil favicon

SUPPORT THE FILE

Latest News

Related Posts