ಡಿಜಿಟಲ್‌ ಲೈಬ್ರರಿ ಯಶಸ್ಸಿಗೆ ದಾಖಲೆಗಳೇ ಇಲ್ಲ; ಅನುಷ್ಠಾನಕ್ಕೂ ಮುನ್ನವೇ 2.59 ಕೋಟಿ ಪಾವತಿ

ಬೆಂಗಳೂರು; ರಾಜ್ಯದಲ್ಲಿ ಡಿಜಿಟಲ್‌ ಲೈಬ್ರರಿ ಯಶಸ್ವಿಯಾಗಿದೆ ಎಂದು ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್‌ ಕುಮಾರ್‍‌ ಹೊಸಮನಿ ಅವರು ಭರ್ಜರಿ ಪ್ರಚಾರ ಪಡೆದುಕೊಂಡಿದ್ದರ ಬೆನ್ನಲ್ಲೇ ಇದೀಗ ಡಿಜಿಟಲ್‌ ಲೈಬ್ರರಿ ಯಶಸ್ವಿಯಾಗಿದೆ ಎಂಬುದಕ್ಕೆ ಯಾವುದೇ ಪ್ರಮಾಣಪತ್ರವನ್ನೂ ನೀಡಿಲ್ಲ ಮತ್ತ ಯಾವ ದಾಖಲೆಗಳನ್ನೂ ತನಿಖಾ ಸಮಿತಿಗೆ ಕೊಟ್ಟಿಲ್ಲ.

 

ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ವಿವಿಧ ರೀತಿಯ ಅಕ್ರಮ, ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯ ಆಯುಕ್ತರಾದ ಬಿ ಬಿ ಕಾವೇರಿ ನೇತೃತ್ವದ ತನಿಖಾ ಸಮಿತಿಯು ಗ್ರಂಥಾಲಯ ಇಲಾಖೆಯಲ್ಲಿನ ಹಲವು ಪ್ರಕರಣಗಳನ್ನು ಸಾಬೀತುಪಡಿಸಿದೆ.

 

ಪ್ರಮಾಣ ಪತ್ರವಿಲ್ಲ ದಾಖಲೆಗಳೂ ಇಲ್ಲ

 

ಕೆಡಿಪಿಎಲ್‌ 1ನೇ ಹಂತದ ಡಿಜಿಟಲ್‌ ಲೈಬ್ರರಿ ಅನುಷ್ಠಾನ ಕಾರ್ಯವು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿರುವ ಬಗ್ಗೆ ಯಾವುದೇ ರೀತಿಯ ಯಶಸ್ವಿಯಾಗಿ ಪೂರ್ಣಗೊಂಡಿರುವ ಪ್ರಮಾಣ ಪತ್ರ ಹಾಗೂ ದಾಖಲೆಗಳು ಇಲ್ಲದಿರುವುದನ್ನು ತನಿಖಾ ಸಮಿತಿಯು ಬಹಿರಂಗಗೊಳಿಸಿದೆ.

 

‘ಈಗಾಗಲೇ ಒಂದು ಕ್ಲೌಡ್‌ ಬೇಸ್ಡ್‌ ಸಾಫ್ಟ್‌ವೇರ್‌ ಅನುಷ್ಠಾನ ಪ್ರಗತಿಯಲ್ಲಿದ್ದು ಪೂರ್ಣಗೊಳ್ಳುವ ಮುಂಚಿತವಾಗಿಯೇ ಮತ್ತೊಮ್ಮೆ ಕ್ಲೌಡ್‌ ಬೇಸ್ಡ್‌ ಸಾಫ್ಟ್‌ವೇರ್‌ ಟೆಂಡರ್‌ ಕರೆದಿರುವುದು ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ,’ ಎಂದು ವರದಿಯಲ್ಲಿ ಹೇಳಲಾಗಿದೆ.

 

ಕೆಡಿಪಿಎಲ್‌ 2ನೇ ಹಂತದ ಟೆಂಡರ್‌ ಪ್ರಕ್ರಿಯೆಯಲ್ಲಿ ಆರ್ಥಿಕ ಲಕೋಟೆಗೆ ಒಂದೇ ಒಂದು ಸಂಸ್ಥೆಯು ಅರ್ಹವಾಗಿತ್ತು. ಒಂದೇ ಸಂಸ್ಥೆಯು ಭಾಗವಹಿಸಿದ ಪ್ರಯುಕ್ತ ಏಕ ಟೆಂಡರ್‌ಗಳು ಸ್ವೀಕೃತವಾದ ಸಂದರ್ಭದಲ್ಲಿ ಏಕ ಟೆಂಡರ್‌ಗಳನ್ನು ತಿರಸ್ಕರಿಸಿ ಮರು ಟೆಂಡರ್‌ ಕರೆಯಬೇಕು ಎಂಬ ಆದೇಶವಿದೆ. ಆದರೆ ಈ ಪ್ರಕರಣದಲ್ಲಿ ಕೆಟಿಪಿಪಿ ಕಾಯ್ದೆ 1999 ಮತ್ತು ನಿಯಮಗಳು 2000ರ ಟೆಂಡರ್‌ ನಿಯಮಗಳ ಉಲ್ಲಂಘನೆಯಾಗಿದೆ ಎಂದು ವರದಿಯು ತಿಳಿಸಿದೆ.

 

ಕೆಡಿಪಿಎಲ್‌ 1ನೇ ಹಂತದಲ್ಲಿ ಕಾರ್ಯಾದೇಶ ನೀಡಲಾಗಿದ್ದ ಕೆ-ನಾಮಿಕ್ಸ್‌ ಟೆಕ್ನೋ ಸಲ್ಯೂಷನ್ಸ್‌ ಪ್ರೈವೈಟ್‌ ಲಿಮಿಟೆಡ್‌ ಅವರಿಗೆ ಪುನಃ ಕೆಡಿಪಿಎಲ್‌ 2ನೇ ಹಂತಕ್ಕೂ ಸಹ ಕಾರ್ಯಾದೇಶ ನೀಡಿತ್ತು.
‘ಒಂದು ಯೋಜನೆಯು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡು ಅದರಲ್ಲಿನ ಸಾಧಕ, ಬಾಧಕಗಳನ್ನು ಪರಿಶೀಲಿಸಿಕೊಂಡು ನಂತರ ಉದ್ಭವಗೊಂಡಂತಹ ತಾಂತ್ರಿಕ ನ್ಯೂನತೆಗಳನ್ನು ಸರಿಪಡಿಸಲು ಕ್ರಮವಹಿಸಬೇಕು. ಆದ್ದರಿಂದ ಈ ಕ್ರಮವು ಉದ್ಧೇಶಪೂರ್ವಕವಾಗಿ ಕರ್ತವ್ಯಲೋಪ ಎಸಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ,’ ಎಂದು ವರದಿ ಹೇಳಿದೆ.

 

ಕೆಡಿಪಿಎಲ್‌ ಮೊದಲನೇ ಹಂತದ ಯೋಜನೆಯ 2023ರ ಮಾರ್ಚ್‌ಗೆ ಮುಕ್ತಾಯವಾಗಿದೆ. ಆದರೆ ಈ ಯೋಜನೆಯಲ್ಲಿನ ದತ್ತಾಂಶಗಳನ್ನು ಇಲಾಖೆಗೆ ಇದುವರೆಗೂ ಹಸ್ತಾಂತರಿಸಿಲ್ಲ. ಈ ಯೋಜನೆ ಬಗ್ಗೆ ಸಾಕಷ್ಟು ದೂರುಗಳು ಸ್ವೀಕೃತವಾಗಿದ್ದವು.

 

ನೋಂದಾಯಿತ ಸದಸ್ಯರ ವಿವರ, ಬಳಕೆ ಅಂಕಿ ಅಂಶಗಳನ್ನು ಇಲಾಖೆಗೆ ಸಾಫ್ಟ್‌ವೇರ್‌ ಅಪ್ಲಿಕೇಶನ್‌ ಸಮೇತವಾಗಿ ನಿರ್ವಹಣಾ ಸಂಸ್ಥೆಯಿಂದ ಕೆ ನಾಮಿಕ್ಸ್‌ ಟೆಕ್ನೋ ಸಲ್ಯೂಷನ್ಸ್‌ ಪ್ರೈ ಲಿ ಹಸ್ತಾಂತರಿಸಬೇಕಿತ್ತು. ಹಾಗೂ ಈ ಬಗ್ಗೆ ನಿರ್ದೇಶಕರು ಯಾವುದೇ ಕ್ರಮವಹಿಸಿರಲಿಲ್ಲ. ಡೇಟಾ ಬೇಸ್‌ ನ್ನು ತೆಗೆದುಕೊಳ್ಳದೇ ಇರುವುದು ಉದ್ಧೇಶಪೂರ್ವಕವಾಗಿ ಮಾಡಿರುವ ಕರ್ತವ್ಯಲೋಪವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಅಲ್ಲದೇ ಇದೇ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ 2018-19ನೇ ಸಾಲಿನ ಆಯವ್ಯಯ ಘೋಷಣೆಯಲ್ಲಿ ಡಿಜಿಟಲ್‌ ಗ್ರಂಥಾಲಯ ಕಾರ್ಯಕ್ರಮಕ್ಕೆ 468.00 ಲಕ್ಷ ರು. ಮಂಜೂರಾಗಿತ್ತು. ಒದಗಿಸಿರುವ ಅನುದಾನದ ಮಿತಿಯಲ್ಲಿಯೇ ಹಂತ ಹಂತವಾಗಿ ಅನುಷ್ಠಾನಗೊಳಿಸುವ ಬಗ್ಗೆ ಪರಿಶೀಲಿಸಿ ಕ್ರಮವಹಿಸಬೇಕು ಎಂದು ಆರ್ಥಿಕ ಇಲಾಖೆಯು ತಿಳಿಸಿತ್ತು.

 

ಆದರೇ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನಕ್ಕಿಂತ ಹೆಚ್ಚುವರಿಯಾಗಿ 1.95 ಕೋಟಿ ರು. ಪಾವತಿಸಿದ್ದರು. ಈ ರೀತಿ ಬಿಡುಗಡೆಯಾದ ಅನುದಾನಕ್ಕಿಂತ ಹೆಚ್ಚುವರಿ ಮೊತ್ತವನ್ನು ಪಾವತಿಸಿ ನಿರ್ದೇಶಕರುತಮ್ಮ ಅಧಿಕಾರವನ್ನು ದುರುಪಯೋಗ ಮಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡು ಬಂದಿದೆ ಎಂದು ವರದಿ ಹೇಳಿದೆ.

 

ಕೆಡಿಪಿಎಲ್‌ ಮೂರನೇ ಹಂತದ ತಂತ್ರಾಂಶ ಅನುಷ್ಠಾನಕ್ಕಾಗಿ ಟೆಂಡರ್‌ ಪ್ರಕ್ರಿಯೆ ಕೈಗೊಳ್ಳಲಾಗಿತ್ತು. ಈ ಟೆಂಡರ್‌ನಲ್ಲಿ ಭಾಗವಹಿಸಿ ಯಶಸ್ವಿ ಬಿಡ್‌ದಾರರಾದ ವಿಶ್ವಿನ್‌ ಟೆಕ್ನಾಲಜೀಸ್‌ ಅವರಿಗೆ 2023ರ ಮಾರ್ಚ್‌ 31ರಂದು 2 ವರ್ಷಗಳ ಅವಧಿಗೆ ಕಾರ್ಯಾದೇಶ ನೀಡಲಾಗಿದೆ. ಕಾರ್ಯಾದೇಶ ನೀಡಿದ 11 ತಿಂಗಳು ಕಳೆದರೂ ಇದುವರೆಗೂ ಯೋಜನೆಯು ಗೋ-ಲೈವ್‌ ಹೋಗದಿರುವುದು ಕಡತಗಳಲ್ಲಿ ಕಂಡುಬಂದಿರುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಯೋಜನೆಯ ಅನುಷ್ಠಾನಕ್ಕಿಂತ ಮುಂಚಿತವಾಗಿಯೇ ಸರ್ಕಾರದಿಂದ ಬಿಡುಗಡೆಯಾದ ಒಟ್ಠಾರೆ ಮೊತ್ತ 2,59,99,889.00 ರು ಗಳನ್ನು ವಿಶ್ವಿನ್‌ ಟೆಕ್ನಾಲಾಜೀಸ್‌ ಅವರಿಗೆ ಕಾರ್ಯಾದೇಶ ನೀಡಿದ 2 ತಿಂಗಳ ಒಳಗಾಗಿ ಪಾವತಿಸಿ ಟೆಂಡರ್‌ ನಿಯಮಗಳನ್ನು ಉಲ್ಲಂಘಿಸಲಾಗಿದೆ.

 

ಕಾರ್ಯಕ್ರಮ ಅನುಷ್ಠಾನಕ್ಕಿಂತ ಮುಂಚಿತವಾಗಿ ಟೆಂಡರ್‌ದಾರರಿಗೆ ಮುಂಗಡ ಹಣ ಪಾವತಿ ಮಾಡುವ ಮೂಲಕ ಕರ್ನಾಟಕ ಆರ್ಥಿಕ ಸಂಹಿತೆ ನಿಯಮಗಳನ್ನು ಉಲ್ಲಂಘಿಸಲಾಗಿತ್ತು. ಈ ಮೂಲಕ ಸರ್ಕಾರಕ್ಕೆ, ಇಲಾಖೆಗೆ ಆರ್ಥಿಕ ನಷ್ಟವುಂಟು ಮಾಡಿ ಕರ್ತವ್ಯ ಲೋಪ, ಹಣ ದುರ್ಬಳಕೆ ಹಾಗೂ ಅವ್ಯವಹಾರ ಎಸಗಿರುವುದು ಸ್ಪಷ್ಟವಾಗಿ ಕಂಡು ಬಂದಿದೆ ಎಂದು ವರದಿ ಹೇಳಿದೆ.

 

ಮೂರನೇ ಹಂತದ ಯೋಜನೆಗೆ ಸಂಬಂಧಿಸಿದಂತೆ ವಿಶ್ವಿನ್‌ ಟೆಕ್ನಾಲಾಜೀಸ್‌ಗೆ ಸರ್ಕಾರದಿಂದ ಬಿಡುಗಡೆಯಾದ ಪೂರ್ಣ ಮೊತ್ತ 2,59,99,889 ರು.ಗಳನ್ನು ಯೋಜನೆ ಅನುಷ್ಠಾನಕ್ಕಿಂತ ಮುಂಚಿತವಾಗಿ ಪಾವತಿಸಿರುವುದನ್ನು ತನಿಖಾ ಸಮಿತಿಯು ಹೊರಗೆಡವಿದೆ.

 

ಟೆಂಡರ್ ನಿಯಮ ಟರ್ಮಿನೇಷನ್‌ ಕ್ಲಾಸ್‌ ಅನ್ವಯ ಇಲಾಖೆಯು ಸಂಬಂಧಿಸಿದ ಸಂಸ್ಥೆಯ ವಿರುದ್ಧ ಈಗಾಗಲೇ ಚಾಲ್ತಿಯಲ್ಲಿರುವ ಟೆಂಡರ್‌ ಒಪ್ಪಂದಗಳನ್ನು ರದ್ದುಗೊಳಿಸಬೇಕಿತ್ತು. ಅಲ್ಲದೇ ಬಿಡ್‌ ಭದ್ರತಾ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು ನೀಡಿರುವ ಮುಂಗಡ ಹಣವನ್ನು ವಸೂಲಿ ಮಾಡಬೇಕಿತ್ತು. ಇದಕ್ಕೆ ಸಂಬಂಧಿಸಿದವರನ್ನು ಬ್ಲಾಕ್‌ ಲಿಸ್ಟ್‌ ಮಾಡುವುದರಲ್ಲಿ ಇಲಾಖೆಯು ವಿಫಲವಾಗಿತ್ತು. ಇದರಲ್ಲಿಯೂ ಟೆಂಡರ್‌ ನಿಯಮಗಳು ಉಲ್ಲಂಘನೆಯಾಗಿರುವುದು ಕಂಡು ಬಂದಿದೆ ಎಂದು ವರದಿ ಹೇಳಿದೆ.

 

ಸುಮಾರು 20.00 ಕೋಟಿಗೂ ಅಧಿಕ ಮೊತ್ತದಲ್ಲಿ ಖರೀದಿಸಿದ್ದ ಪುಸ್ತಕಗಳು ಜಿಲ್ಲಾ ಕೇಂದ್ರ ಗ್ರಂಥಾಲಯಗಳಿಗೆ ಸರಬರಾಜು ಆಗಿರಲಿಲ್ಲ. ಕೋಟ್ಯಂತರ ರುಪಾಯಿ ತೆತ್ತು ಖರೀದಿಸಿದ್ದ ಪುಸ್ತಕಗಳು ಉಗ್ರಾಣದಲ್ಲೇ ಕೊಳೆತು ಹೋಗಿದ್ದವು ಎಂಬುದನ್ನು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ನೇತೃತ್ವದ ತನಿಖಾ ಸಮಿತಿಯು ಬಹಿರಂಗಗೊಳಿಸಿದೆ.

ಉಗ್ರಾಣದಲ್ಲೇ ಕೊಳೆತ 20 ಕೋಟಿ ಮೊತ್ತದ ಪುಸ್ತಕಗಳು; ನಿರ್ದೇಶಕರ ವೈಫಲ್ಯವನ್ನು ಎತ್ತಿಹಿಡಿದ ತನಿಖಾ ಸಮಿತಿ

 

ಈ ಎಲ್ಲಾ ಪ್ರಕರಣಗಳನ್ನು ಪತ್ತೆ ಹಚ್ಚಿ ಪರಿಶೀಲಿಸಿರುವ ಸಮಿತಿಯು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್‌ ಹೊಸಮನಿ ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಿದೆ. ತನಿಖಾ ಸಮಿತಿಯು ನೀಡಿದ್ದ ವರದಿಯನ್ನಾಧರಿಸಿ ಸರ್ಕಾರವು 2024ರ ಮಾರ್ಚ್‌ 11ರಂದು ಸತೀಶ್‌ ಹೊಸಮನಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಅದೇಶ ಹೊರಡಿಸಿತ್ತು.

ಪುಸ್ತಕ ಖರೀದಿ ಸೇರಿ ಹತ್ತಾರು ಅಕ್ರಮಗಳನ್ನು ಹೊರಗೆಳೆದ ತನಿಖಾ ಸಮಿತಿ; ನಿರ್ದೇಶಕ ಹೊಸಮನಿ ಅಮಾನತು

 

 

ಪುಸ್ತಕ ಖರೀದಿ, ಡಿಜಿಟಲ್‌ ಗ್ರಂಥಾಲಯ ಯೋಜನೆ ಅನುಷ್ಠಾನ, ಇ-ಕಂಟೆಂಟ್‌ ಅಭಿವೃದ್ಧಿ, ಪುಸ್ತಕಗಳ ಸಾಗಾಣಿಕೆ, ಟೆಂಡರ್‌ ಅಕ್ರಮ, ನಿಯಮಗಳ ಉಲ್ಲಂಘನೆ, ಯೋಜನೆ ಅನುಷ್ಠಾನಗೂ ಮುನ್ನವೇ ಸರಬರಾಜುದಾರರು ಮತ್ತು ಸೇವಾದಾರರಿಗೂ ಮುಂಗಡವಾಗಿ ಹಣ ಪಾವತಿ, ಹಣ ದುರುಪಯೋಗ, ಅಧಿಕಾರ ದುರುಪಯೋಗವನ್ನು ಪತ್ತೆ ಹಚ್ಚಿತ್ತು.

 

ಸತೀಶ್‌ ಕುಮಾರ್‍‌ ಹೊಸಮನಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಮೊದಲು ಪತ್ರ ಬರೆದಿದ್ದ ವಿಧಾನ ಪರಿಷತ್ ಸದಸ್ಯ ಎಚ್‌ ವಿಶ್ವನಾಥ್‌ ಅವರು ಆ ನಂತರ ನಡೆದ ಬೆಳವಣಿಗೆಯಲ್ಲಿ ವಿಚಾರಣೆ ಕೈಬಿಡಬೇಕು ಎಂದು ಬರೆದಿದ್ದ ಪತ್ರ ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದ್ದರು. ಆದರೂ ತನಿಖಾ ಸಮಿತಿಯು ವಿಚಾರಣೆ ನಡೆಸಿತ್ತು.

 

ಹೊಸಮನಿ ವಿರುದ್ಧ ವಿಚಾರಣೆ ಕೈಬಿಡಲು ಸಿಎಂ ನಿರ್ದೇಶನ; ಮುನ್ನಲೆಗೆ ಬಂದ ಆಪ್ತ ಕಾರ್ಯದರ್ಶಿ ಟಿಪ್ಪಣಿ

ಹೊಸಮನಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಈ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್‌ ವಿಶ್ವನಾಥ್‌ ಪತ್ರ ಬರೆದಿದ್ದರು. ಆದರೀಗ ತನಿಖೆಯನ್ನೇ ಕೈಬಿಡಬೇಕು ಮತ್ತು ಅದೇ ಹುದ್ದೆಯಲ್ಲಿಯೇ ಮುಂದುವರೆಸಲು ನಿರ್ದೇಶನ ನೀಡಬೇಕು ಎಂದು ಮುಖ್ಯಮಂತ್ರಿಗೆ 2024ರ ಜನವರಿ 10ರಂದು ‌ ಪತ್ರ ಬರೆದಿದ್ದರು. ವಿಶ್ವನಾಥ್‌ ಅವರ ಈ ನಡೆಯು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿತ್ತು.

ಗ್ರಂಥಾಲಯ ಇಲಾಖೆ ಅಕ್ರಮ; ತನಿಖೆಗೆ ಬರೆದ ಪತ್ರವನ್ನೇ ಹಿಂಪಡೆದುಕೊಂಡ ಪರಿಷತ್‌ ಸದಸ್ಯ ವಿಶ್ವನಾಥ್‌

 

ಗ್ರಂಥಾಲಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ನಿರ್ದೇಶಕ  ಸತೀಶ್‌ ಕುಮಾರ್‍‌ ಹೊಸಮನಿ ಅವರು  ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ಸಲ್ಲಿಕೆಯಾಗಿತ್ತು.

 

‘ನಾನು ಹೇಳಿದ ಹಾಗೆ ಕೇಳು, ರಾತ್ರಿ ಊಟಕ್ಕೆ ರೆಡಿ ಮಾಡು’; ನಿರ್ದೇಶಕರ ವಿರುದ್ಧ ಲೈಂಗಿಕ ಕಿರಕುಳ ಆರೋಪ

 

ಇದರ ಬೆನ್ನಲ್ಲೇ ಗ್ರಂಥಾಲಯ ಇಲಾಖೆಯಲ್ಲಿ ಕಂಪ್ಯೂಟರ್‍‌, ಯುಪಿಎಸ್‌, ಝೆರಾಕ್ಸ್‌ ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಇಲಾಖೆ ಅಧಿಕಾರಿಗಳಿಂದ ತನಿಖೆ ನಡೆದಿತ್ತು.

 

ಗ್ರಂಥಾಲಯ ಇಲಾಖೆಯಲ್ಲಿ ಕಂಪ್ಯೂಟರ್‌, ಯುಪಿಎಸ್‌, ಝೆರಾಕ್ಸ್‌ ಉಪಕರಣ ಖರೀದಿ ಹಗರಣ; ತನಿಖಾ ವರದಿ

 

ವಿಶೇಷವೆಂದರೆ ಈ ಹಗರಣದಲ್ಲಿ ಕರ್ತವ್ಯಲೋಪ ಎಸಗಿದ್ದಾರೆ ಎನ್ನಲಾಗಿದ್ದ ಬಹುತೇಕ ಅಧಿಕಾರಿಗಳು ನಿವೃತ್ತಿಯಾಗಿದ್ದರು.

 

ಕಂಪ್ಯೂಟರ್‍‌ ಖರೀದಿ ಹಗರಣ; ಕರ್ತವ್ಯಲೋಪವೆಸಗಿದ ಅಧಿಕಾರಿಗಳ ಪಟ್ಟಿ ಬಹಿರಂಗ, ಬಹುತೇಕರು ನಿವೃತ್ತಿ

 

ಕಂಪ್ಯೂಟರ್‍‌ ಮತ್ತಿತರೆ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ಕುರಿತು ಕೆಲ ಅಧಿಕಾರಿಗಳಿಗೆ ಆರೋಪ ಪಟ್ಟಿಯೂ ಜಾರಿಯಾಗಿತ್ತು.

 

ಕಂಪ್ಯೂಟರ್‍‌ ಮತ್ತಿತರೆ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ; ಸರ್ಕಾರದಿಂದ ಆರೋಪ ಪಟ್ಟಿ ಜಾರಿ

ಹಿಂದಿನ ಬಿಜೆಪಿ ಸರ್ಕಾರದಲ್ಲಿಯೂ ಡಿಸಿಎಂಗಳ ಹೆಸರಿನಲ್ಲಿ 5 ಕೋಟಿ ಸಂಗ್ರಹಿಸಲು ಕೆಳ ಹಂತದ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

 

ಡಿಸಿಎಂಗಳಿಗೆ 5 ಕೋಟಿ ಸಂಗ್ರಹಿಸಲು ತಾಕೀತು; ಗ್ರಂಥಾಲಯ ನಿರ್ದೇಶಕರೇ ವಸೂಲಿಗಿಳಿದರೇ?

 

‘ಹಲವು ಗುರುತರವಾದ ಆರೋಪಗಳಿಗೆ ಗುರಿಯಾಗಿರುವ ಹೊಸಮನಿ ಅವರ ವಿರುದ್ಧ ತನಿಖೆ ನಡೆಯುತ್ತಿದೆಯಾದರೂ ನಿರ್ದೇಶಕರ ಹುದ್ದೆಯಲ್ಲಿಯೇ ಸರ್ಕಾರವು ಮುಂದುವರೆಸಿರುವುದು ಸರಿಯಲ್ಲ. ಆರೋಪಿತ ವ್ಯಕ್ತಿಯು ಅದೇ ಹುದ್ದೆಯಲ್ಲಿ ಮುಂದುವರೆದರೆ ದಾಖಲೆ, ಸಾಕ್ಷ್ಯ ನಾಶವಾಗಲಿದೆ. ಕನಿಷ್ಠ ವಿಚಾರಣೆ ಪೂರ್ಣಗೊಳ್ಳುವವರೆಗಾದರೂ ನಿರ್ದೇಶಕರನ್ನು ರಜೆ ಮೇಲೆ ತೆರಳಲು ನಿರ್ದೇಶಿಸಬೇಕಿತ್ತು, ‘ಎನ್ನುತ್ತಾರೆ ಗ್ರಂಥಾಲಯ ಇಲಾಖೆಯ ಅಧಿಕಾರಿಯೊಬ್ಬರು.

the fil favicon

SUPPORT THE FILE

Latest News

Related Posts