ರಾಜ್ಯ ಸ್ವಾಮ್ಯದಲ್ಲಿ ನಡೆಸುವ ಚಿಂತನೆಯಿಲ್ಲ, ಪ.ಬಂಗಾಳದ ಮಾದರಿಯೂ ಇಲ್ಲ; ಕೈಚೆಲ್ಲಿತು ಕಾಂಗ್ರೆಸ್‌ ಸರ್ಕಾರ

ಬೆಂಗಳೂರು;  ವಿಶ್ವೇಶ್ವರಯ್ಯ ಕಬ್ಬಿಣ ಉಕ್ಕು ಕಾರ್ಖಾನೆಯನ್ನು ರಾಜ್ಯ ಸರ್ಕಾರವೇ ವಹಿಸಿಕೊಂಡು ಮುನ್ನೆಡೆಸಲು ಎಲ್ಲಾ  ಅವಕಾಶಗಳಿದ್ದರೂ ಸಹ   ಕೇಂದ್ರ ಸರ್ಕಾರದಿಂದ  ರಾಜ್ಯ ಸರ್ಕಾರದ  ಸ್ವಾಮ್ಯಕ್ಕೆ ವಹಿಸಿಕೊಂಡು ಕಾರ್ಖಾನೆಯನ್ನು ನಡೆಸುವ ಚಿಂತನೆಯೇ ಇಲ್ಲ ಎಂದು ಕಾಂಗ್ರೆಸ್ ಸರ್ಕಾರವು  ಕೈಚೆಲ್ಲಿದೆ.

 

ವಿಐಎಸ್‌ಎಲ್‌ನ್ನು ಮುಚ್ಚಲು ಕೇಂದ್ರ ಮತ್ತು ಭಾರತೀಯ ಉಕ್ಕು ಪ್ರಾಧಿಕಾರವು ಕೈಗೊಂಡಿದ್ದ ತೀರ್ಮಾನವನ್ನು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್‌, ವಿಐಎಸ್‌ಎಲ್‌ನ್ನು ಉಳಿಸಿಕೊಳ್ಳುವ ಸಂಬಂಧ ಕೇಂದ್ರಕ್ಕೆ ಪತ್ರ ಬರೆಯುವುದರಲ್ಲಿ ಕಾಲಹರಣ ಮಾಡುವ ಎಲ್ಲಾ ಲಕ್ಷಣಗಳೂ ಗೋಚರಿಸಿವೆ.

 

ವಿಐಎಸ್‌ಎಲ್‌ ಕುರಿತು ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್ವರ್‍‌ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಬೃಹತ್‌, ಮಧ್ಯಮ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್‌ ಅವರು ಕಾರ್ಖಾನೆಯನ್ನು ರಾಜ್ಯ ಸರ್ಕಾರ ವಹಿಸಿಕೊಳ್ಳುವ ಚಿಂತನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

ಹೇಗಾದರೂ ಮಾಡಿ ವಿಐಎಸ್‌ಎಲ್‌ನ್ನು ಖಾಸಗಿ ಉಕ್ಕು ಉದ್ದಿಮೆಗಳಿಗೆ ಸಾಗಾಕಬೇಕೆಂದು  ಕೇಂದ್ರ ಸರ್ಕಾರವು ತೀರ್ಮಾನಿಸಿದಂತೆಯೇ ರಾಜ್ಯ ಕಾಂಗ್ರೆಸ್‌ ಸರ್ಕಾರವೂ ನಿಲುವು ತಳೆದಂತಿದೆ. ಇದಕ್ಕೆ ಎಂ ಬಿ ಪಾಟೀಲ್‌ ಅವರು ನೀಡಿರುವ ಉತ್ತರವೇ ನಿದರ್ಶನವಾಗಿದೆ.

 

ಬಳ್ಳಾರಿ ಜಿಲ್ಲೆಯ ರಾಮದುರ್ಗ ಅರಣ್ಯ ವಲಯದಲ್ಲಿ 60.70 ಹೆಕ್ಟೇರ್‌ ಗಣಿ ಪ್ರದೇಶವನ್ನು ವಿಐಎಸ್‌ಎಲ್‌ನ ಮಂಜೂರಾತಿಗಾಗಿ ಮೀಸಲಿಡಲಾಗಿದೆ. ಆದರೆ ಮೈನಿಂಗ್‌ ಲೀಸ್‌ ಕಾರ್ಯಗತಗೊಳಿಸಿಲ್ಲ. ಈ ಗಣಿ ಭೋಗ್ಯವು 2019ರ ಫೆ.22ರಿಂದ 10 ವರ್ಷಗಳ ಅವಧಿಯವರೆಗೆ ಇದೆ. ಈ ಗಣಿ ಪ್ರದೇಶವು  60.70 ಹೆಕ್ಟೇರ್‌ ಇದ್ದರೂ ವಿಐಎಸ್‌ಎಲ್‌ಗೆ  40 ಹೆಕ್ಟೇರ್‌ ಮಾತ್ರ ಅವಶ್ಯವಿದೆ. ಮಂಜೂರಾತಿಗಾಗಿ ಮೀಸಲಿಟ್ಟಿರುವ ಗಣಿ ಪ್ರದೇಶದಲ್ಲಿ ಗಣಿಗಾರಿಕೆ ಚಟುವಟಿಕೆಯನ್ನು ಕಾರ್ಯಗತಗೊಳಿಸಲು ಸಾಕಷ್ಟು ಅವಕಾಶಗಳಿದ್ದವು. ಆದರೆ ಕಾಂಗ್ರೆಸ್‌ ಸರ್ಕಾರವು  ಇರುವ ಅವಕಾಶಗಳನ್ನು ಬಳಸಿಕೊಳ್ಳಲು ಮುಂದಾಗಿಲ್ಲ.

 

ಭಾರತ ಸರ್ಕಾರದ ನೀತಿ ಆಯೋಗದ ಶಿಫಾರಸ್ಸಿನಂತೆ ವಿಐಎಸ್‌ಎಲ್‌ನಿಂದ ಬಂಡವಾಳ ಹಿಂತೆಗೆಯುವಿಕೆ ಕುರಿತು 2016ರಲ್ಲೇ ಸಚಿವ ಸಂಪುಟ ಸಮಿತಿಯು ಅನುಮೋದನೆ ನೀಡಿತ್ತು. ಬಂಡವಾಳ ಹಿಂತೆಗೆಯುವಿಕೆ, ಖಾಸಗೀಕರಣಕ್ಕಾಗಿ ಆಸಕ್ತಿ ವ್ಯಕ್ತಪಡಿಸುವ ಟೆಂಡರ್‍‌ಗೆ ಖಾಸಗಿ ಕಂಪನಿಯವರ ನಿರಾಸಕ್ತಿಯಿಂದ ಈ ಪ್ರಕ್ರಿಯೆಯು ಸ್ಥಗಿತಗೊಂಡಿತ್ತು.

 

ಇಒಐಗೆ ಯಾರೂ ಆಸಕ್ತಿ ತೋರಿಸದ ಕಾರಣ ಭಾರತೀಯ ಉಕ್ಕು ಪ್ರಾಧಿಕಾರವು ತನ್ನ ಮಂಡಳಿ ಸಭೆಯಲ್ಲಿ ವಿಐಎಸ್‌ಎಲ್‌ನ್ನು ಮುಚ್ಚಲು ತೀರ್ಮಾನಿಸಿತ್ತು. ಕಂಪನಿಯನ್ನು ಮುಚ್ಚಬಾರದು ಮತ್ತು ಹೆಚ್ಚಿನ ಬಂಡವಾಳ ಹೂಡಬೇಕು  ಎಂದು 2019, 2020, 2021ರಂದು ರಾಜ್ಯ ಸರ್ಕಾರವು ಕೋರಿತ್ತು.

 

ಅಲ್ಲದೇ  ಪಶ್ಚಿಮ ಬಂಗಾಳದ ಮಾದರಿಯಂತೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದ ಸ್ವಾಮ್ಯಕ್ಕೆ ವಹಿಸಿಕೊಂಡು ನಡೆಸುವ ಯೋಜನೆಯೂ ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಹೇಳಿರುವುದು ಕರ್ನಾಟಕದ  ನಿರೀಕ್ಷೆಯನ್ನು  ಆರಂಭದಲ್ಲಿಯೇ ಹುಸಿಗೊಳಿಸಿದೆ.

 

ಮಂಡ್ಯದಲ್ಲಿರುವ ಮೈ ಶುಗರ್ಸ್‌ ಕಾರ್ಖಾನೆಯು ಮುಚ್ಚುವ ಹಂತದಲ್ಲಿದ್ದರೂ ಹಿಂದಿನ ಬಿಜೆಪಿ ಸರ್ಕಾರವು ಅಗತ್ಯ ಬಂಡವಾಳವನ್ನು ಹೂಡುವ ಮೂಲಕ ಉಳಿಸಿಕೊಂಡಿತ್ತು. ಆದರೆ ವಿಐಎಸ್‌ಎಲ್‌ ವಿಚಾರದಲ್ಲಿ ಹಿಂದಿನ ಬಿಜೆಪಿ ಸರ್ಕಾರವು ತುಳಿದಿದ್ದ ಹಾದಿಯಲ್ಲೇ  ಈಗಿನ ಕಾಂಗ್ರೆಸ್‌ ಸರ್ಕಾರವು ಸಾಗಿದೆ.

 

ಹಿಂದಿನ ಪ್ರಧಾನಮಂತ್ರಿ ರಾಜೀವ್‌ಗಾಂಧಿ ಅವರ ಆಡಳಿತದಲ್ಲಿ ನೀಡಿದ್ದ ನೀಡಿದ್ದ ಕಾರ್ಖಾನೆಯನ್ನು ಅಭಿವೃದ್ಧಿಪಡಿಸಲು ಪಶ್ಚಿಮ ಬಂಗಾಳ ಮಾದರಿಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದ ಸ್ವಾಮ್ಯಕ್ಕೆ ವಹಿಸಿಕೊಂಡು ನಡೆಸಲು ಎಲ್ಲಾ ಅವಕಾಶಗಳಿದ್ದವು. ಆದರೆ ಅಂತಹ ಯೋಜನೆಯು ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಎಂ ಬಿ ಪಾಟೀಲ್‌ ಅವರು ಉತ್ತರಿಸಿದ್ದಾರೆ.

 

 

ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್)ಯನ್ನು ಮುಚ್ಚಬಾರದು ಎಂದು ವಿರೋಧ ಪಕ್ಷದ ನಾಯಕರಾಗಿದ್ದ ಈಗಿನ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿಕೊಂಡಿದ್ದರು. ಈ ಸಂಬಂಧ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದ ಅವರು, ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಬಲವಾಗಿ ಖಂಡಿಸುತ್ತೇನೆ. ಈ ಜನ ವಿರೋಧಿ ತೀರ್ಮಾನವನ್ನು ಕೂಡಲೇ ಹಿಂಪಡೆಯಬೇಕೆಂದು ಪ್ರತಿಪಕ್ಷ ನಾಯಕನ ಸ್ಥಾನದಲ್ಲಿದ್ದ ಸಿದ್ದರಾಮಯ್ಯ ಅವರು  ಒತ್ತಾಯಿಸಿದ್ದರು.

 

ಕಾರ್ಖಾನೆ ಸ್ಥಗಿತವು 20 ಸಾವಿರ ಮಂದಿಯ ಜೀವನವನ್ನು ಕಸಿದುಕೊಳ್ಳುವುದು ಮಾತ್ರವಲ್ಲ ರಾಜ್ಯದ ಏಕೈಕ ಸರ್ಕಾರಿ ಉಕ್ಕಿನ ಕಾರ್ಖಾನೆ ಇಲ್ಲದಂತೆ ಮಾಡಲಿದೆ. ಕಾರ್ಖಾನೆ ಪುನಶ್ಚೇತನಗೊಳಿಸಲು ಅನುವಾಗುವಂತೆ ನಮ್ಮ ಸರ್ಕಾರ 150 ಎಕರೆ ಗಣಿ ಜಾಗ ನೀಡಿತ್ತು. ಆದರೆ, ರಾಜಕೀಯ ಇಚ್ಛಾಶಕ್ತಿ ಇಲ್ಲದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಖಾನೆಯನ್ನೇ ಇಲ್ಲದಂತೆ ಮಾಡಲು ಹೊರಟಿಸಿರುವುದು ಖಂಡನೀಯ ಎಂದು ಹೇಳಿದ್ದರು.

 

2018ರ ಬಿಜೆಪಿ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿನ ಎಲ್ಲಾ ನೆನೆಗುದಿಗೆ ಬಿದ್ದಿರುವ ಉಕ್ಕಿನ ಯೋಜನೆಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುತ್ತೇವೆಂದು ಹೇಳಿದ್ದಿರಿ. ಆದರೆ, ಇರುವ ಒಂದು ಕಾರ್ಖಾನೆಯನ್ನೂ ಮುಚ್ಚಿತ್ತಿರುವುದು ಯಾಕೆ? ಈ ಭಾಗದ ಜನ ಬಿಜೆಪಿಗೆ ಬೆಂಬಲ ನೀಡಿದ್ದರು. ಅವರ ಹಿತ ರಕ್ಷಿಸಲು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ವಿಫಲವಾಗಿದ್ದಾರೆ. ನಿಮ್ಮ ಬಳಿ ರಾಜ್ಯದ ಪ್ರತಿ ಹಕ್ಕನ್ನೂ ಹೋರಾಟದ ಮೂಲಕ ಪಡೆಯುವಂತಾಗಿದೆ. ಕರ್ನಾಟಕ ನಾಗರೀಕರನ್ನು ಯಾಕೆ ದ್ವಿತೀಯ ದರ್ಜೆಯವರಂತೆ ಕಾಣುತ್ತೀರಿ ಎಂದು ಕಿಡಿಕಾರಿದ್ದರು. ಆದರೀಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದರೂ ವಿಐಎಸ್‌ಎಲ್‌ನ್ನು ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿ ಉಳಿಸಿಕೊಳ್ಳಲು ಮುಂದಾಗಿಲ್ಲ.

ಉಕ್ಕು ಕಾರ್ಖಾನೆ ಸ್ಥಾಪಿಸದ ಮಿತ್ತಲ್‌ ಕಂಪನಿಯ ಓಲೈಕೆ, ವಿಐಎಸ್‌ಎಲ್‌ನ್ನು ಸುಪರ್ದಿಗೆ ಪಡೆಯಲು ಹಿಂದೇಟೇಕೆ?

 

ಸೂಕ್ತ ಬಂಡವಾಳ ತೊಡಗಿಸುವ ಷರತ್ತಿನೊಂದಿಗೆ ಭದ್ರಾವತಿಯ ವಿಐಎಸ್‌ಎಲ್‌ನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ ಭಾರತೀಯ ಉಕ್ಕು ಪ್ರಾಧಿಕಾರವು ಕಳೆದ ಇಪ್ಪತ್ತು ವರ್ಷಗಳಲ್ಲಿ ಭಾರತೀಯ ಉಕ್ಕು ಪ್ರಾಧಿಕಾರವು ದುರಸ್ತಿ ಮತ್ತು ನವೀಕರಣ ಉದ್ದೇಶಕ್ಕೆ ಕೇವಲ 157 ಕೋಟಿ ರು.ಗಳನ್ನು ತೊಡಗಿಸಿದೆ. ಸೂಕ್ತ ಬಂಡವಾಳವನ್ನು ವಿಐಎಸ್‌ಎಲ್‌ನಲ್ಲಿ ತೊಡಗಿಸದ ಕಾರಣ ರೋಗಗ್ರಸ್ಥ ಘಟಕವನ್ನಾಗಿಸಲಾಗಿತ್ತು.

 

ಇಂದು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರವು   ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ  ಮತ್ತು  ಉಕ್ಕಿನ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲಿದೆ ಎಂದು ಒಪ್ಪಿಕೊಂಡಿದೆ. ಕಾರ್ಖಾನೆಗೆ ಕಬ್ಬಿಣದ ಅದಿರಿನ ಮೂಲ ಇಲ್ಲಾ ಎಂಬ ಕಾರಣ ನೀಡಿ ಮುಚ್ಚಲಾಗುತ್ತಿದೆ. ರಾಜ್ಯದಲ್ಲಿ ಖಾಸಗಿ ಕಾರ್ಖಾನೆಗಳು ಗಣಿಗಳನ್ನು ಹೊಂದಿದ್ದರೂ SAILಗೆ ಗಣಿ ಇಲ್ಲಾ ಎಂಬುದು ಆಶ್ಚರ್ಯಕರ ಎಂದು ಕೇಂದ್ರ ಮಾಜಿ ಸಚಿವ ಹಾಗೂ ರಾಜ್ಯಸಭೆ ಹಾಲಿ ಸದಸ್ಯ   ಜೈರಾಮ್‌ ರಮೇಶ್ ಟ್ವೀಟ್‌ ಮಾಡಿರುವ ಬೆನ್ನಲ್ಲೇ ಸೈಲ್‌ ಕಳೆದ 20 ವರ್ಷಗಳಲ್ಲಿ ಕೇವಲ 157 ಕೋಟಿಯಷ್ಟನ್ನೇ ತೊಡಗಿಸಿತ್ತು.

 

2 ವರ್ಷಗಳ ಹಿಂದೆಯೇ ವಿಐಎಸ್‌ಎಲ್‌ನ ಬಂಡವಾಳ ಹಿಂತೆಗೆತಕ್ಕೆ ಮುಂದಾಗಿದ್ದ ಹೊತ್ತಿನಲ್ಲೇ ಅಂದು ಮುಖ್ಯಮಂತ್ರಿಯಾಗಿದ್ದ ಬಿ ಎಸ್‌ ಯಡಿಯೂರಪ್ಪ ಅವರು 2020ರ ಸೆ.18ರಂದು ಕೇಂದ್ರ ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್‌ ಸೇರಿದಂತೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಬರೆದ ಪತ್ರದಲ್ಲಿ ಈ ಅಂಶವನ್ನು ವಿವರಿಸಿದ್ದರು.

 

ಬಿ ಎಸ್‌ ಯಡಿಯೂರಪ್ಪ ಅವರು ಧರ್ಮೇಂದ್ರ ಪ್ರಧಾನ್‌ ಅವರಿಗೆ ಬರೆದಿದ್ದ ಪತ್ರದ ಪ್ರತಿ

 

ಈ ಕುರಿತು ‘ದಿ ಫೈಲ್‌’ 347 ಪುಟಗಳನ್ನೊಳಗೊಂಡ ಸಮಗ್ರ ಕಡತವನ್ನು ಆರ್‌ಟಿಐ ಮೂಲಕ ಪಡೆದುಕೊಂಡಿತ್ತು.

 

ಕಳೆದ ಮೂರು ದಶಕಗಳಿಂದಲೂ ಭಾರತೀಯ ಉಕ್ಕು ಪ್ರಾಧಿಕಾರವು ವಿಐಎಸ್‌ಎಲ್‌ನ್ನು ಆಧುನೀಕರಣಗೊಳಿಸಲು ನಿರೀಕ್ಷೆಯಂತೆ ಬಂಡವಾಳ ತೊಡಗಿಸಲಿಲ್ಲ. ವಿಐಎಸ್‌ಎಲ್‌ನಲ್ಲಿ ನಿಶ್ಚಿತ ಬಂಡವಾಳ ತೊಡಗಿಸದೇ ಬಂಡವಾಳ ಹಿಂಪಡೆಯುವ ಚಟುವಟಿಕೆಗಳಿಗೆ ಸೈಲ್‌ ಹೆಚ್ಚಿನ ಮನ್ನಣೆ ನೀಡಿತ್ತು.

 

ಡಿಐಪಿಎಂ (DIPAM) ಘಟಕವು ಬಂಡವಾಳ ಹಿಂಪಡೆಯು ಸಂಬಂಧ . 2020ರ ಅಕ್ಟೋಬರ್‌ 27ರಂದು ಬರೆದಿದ್ದ ಪತ್ರವನ್ನಾಧರಿಸಿ 2021ರ ಜುಲೈ 14ರಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು.

 

ವಿಐಎಸ್‌ಎಲ್‌ ಅಧೀನದಲ್ಲಿರುವ ಬಂಡಿಗುಡ್ಡ ಸುಣ್ಣದಕಲ್ಲು ಗಣಿ ಮತ್ತು ಕೆಂಚಾಪುರ ಗಣಿ ಗುತ್ತಿಗೆಗಳನ್ನು ಸರ್ಕಾರದ ಸಂಸ್ಥೆಗಳಿಗೆ ಮಾತ್ರ ವರ್ಗಾವಣೆ ಮಾಡಿ ಅಧೀನಕ್ಕೆ ನೀಡಲು ಅವಕಾಶವಿದೆ. ಹೊಸ ಎಂಎಂಡಿಆರ್‌ ಕಾಯ್ದೆ ಪ್ರಕಾರ ಮೊದಲ 50 ವರ್ಷಗಳಿಗೆ ಭೋಗ್ಯಕ್ಕೆ ಮತ್ತು ನಂತರದ ಹೆಚ್ಚುವರಿ 20 ವರ್ಷಗಳ ಅವಧಿಗೆ ಸರ್ಕಾರದ ಸಂಸ್ಥೆಗಳಿಗೆ ಮಾತ್ರ ವಿಸ್ತರಿಸಲು ಈ ನಿಯಮದಡಿ ಅವಕಾಶವಿದೆ. ಆದರೆ ಹೆಚ್ಚುವರಿ 20 ವರ್ಷಗಳ ಅವಧಿಯನ್ನು ಖಾಸಗಿ ಸಂಸ್ಥೆಗಳಿಗೆ ವಿಸ್ತರಿಸಲು ಅವಕಾಶವಿರುವುದಿಲ್ಲ ಎಂದು ಗಣಿ, ಭೂವಿಜ್ಞಾನ ಇಲಾಖೆಯ ನಿರ್ದೇಶಕರು ಸಭೆಯಲ್ಲಿ ವಿವರಿಸಿರುವುದು ನಡವಳಿಯಿಂದ ಗೊತ್ತಾಗಿದೆ.

 

ಅಲ್ಲದೇ ಬಳ್ಳಾರಿ ಜಿಲ್ಲೆಯ ರಾಮದುರ್ಗ ಅರಣ್ಯ ವಲಯದಲ್ಲಿ 60.70 ಹೆಕ್ಟೇರ್‌ ಗಣಿ ಪ್ರದೇಶವನ್ನು ವಿಐಎಸ್‌ಎಲ್‌ನ ಮಂಜೂರಾತಿಗಾಗಿ ಮೀಸಲಿಡಲಾಗಿದೆ. ಆದರೆ ಮೈನಿಂಗ್‌ ಲೀಸ್‌ ಕಾರ್ಯಗತಗೊಳಿಸಿಲ್ಲ. ಈ ಗಣಿ ಭೋಗ್ಯವು 2019ರ ಫೆ.22ರಿಂದ 10 ವರ್ಷಗಳ ಅವಧಿಯವರಗೆ ಇದೆ. ಈ ಗಣಿ ಪ್ರದೇಶವು 60.70 ಹೆಕ್ಟೇರ್‌ ಇದ್ದರೂ ವಿಐಎಸ್‌ಎಲ್‌ 40 ಹೆಕ್ಟೇರ್‌ ಮಾತ್ರ ಅವಶ್ಯವಿದೆ.

 

ಈ ಸಂಬಂಧ ಅರಣ್ಯ ಮಂತ್ರಾಲಯದ ತೀರುವಳಿ (ಎಫ್‌ಸಿಇಸಿ) ಹಾಗೂ ಮೈನಿಂಗ್‌ ಪ್ಲಾನ್‌ ಪಡೆಯದ ಕಾರಣ ಅದನ್ನು ವಿಐಎಸ್‌ಪಿ ಆಸ್ತಿಯಾಗಿ ಮೆಮೊರೆಂಡಮ್‌ನಲ್ಲಿ ಸೇರಿಸಿಲ್ಲ ಎಂದು ವಿಐಎಸ್‌ಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕರು ಇದೇ ಸಭೆಯಲ್ಲಿ ಗಮನ ಸೆಳೆದಿರುವದು ತಿಳಿದು ಬಂದಿದೆ.

 

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆ ನಡವಳಿ ಪ್ರತಿ

 

ವಿಐಎಸ್‌ಎಲ್‌ಗೆ ಅವಶ್ಯವಿರುವ ಕಬ್ಬಿಣದ ಅದಿರಿನ ಗಣಿಯಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದ್ದಲ್ಲಿ ಸೈಲ್‌ ಮೂಲಕ 1,000ದಿಂದ 6,000 ಕೋಟಿ ಬಂಡವಾಳ ತೊಡಗಿಸಲಾಗುವುದು ಎಂದು ಕೇಂದ್ರ ಉಕ್ಕು ಸಚಿವರು ನೀಡಿದ್ದ ಭರವಸೆಯೂ ಅನುಷ್ಠಾನಕ್ಕೆ ಬರಲಿಲ್ಲ. ವಿಐಎಸ್‌ಎಲ್‌ ಕಾರ್ಮಿಕರ ಸಂಘವು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿರುವಂತೆ ವಿಐಎಸ್‌ಎಲ್‌ಗೆ ಸಂಡೂರು ತಾಲೂಕಿನ ರಮಣದುರ್ಗದಲ್ಲಿ 150 ಎಕರೆ ಗಣಿ ಪ್ರದೇಶ ಮಂಜೂರಾಗಿದೆ. ಈ ಪ್ರದೇಶದಲ್ಲಿ ವಿಐಎಸ್‌ಎಲ್‌ನಿಂದ ಗಣಿಗಾರಿಕೆ ಅಭಿವೃದ್ಧಿ ಹಂತದಲ್ಲಿದ್ದು 2024ಕ್ಕೆ ಅದಿರು ಉತ್ಪಾದನೆ ಆರಂಭಗೊಳ್ಳಲಿದೆ.

ವಿಐಎಸ್‌ಎಲ್‌;20 ವರ್ಷದಲ್ಲಿ ಸೈಲ್‌ ನೀಡಿದ್ದು ಕೇವಲ 157 ಕೋಟಿ, ಗಣಿ ಭೋಗ್ಯವನ್ನೂ ಕಾರ್ಯಗತಗೊಳಿಸಿರಲಿಲ್ಲ

 

ಕಾರ್ಖಾನೆ ಸ್ಥಾಪನೆಯಾದ ವರ್ಷದಿಂದ 1989ರವರೆಗೆ ಕರ್ನಾಟಕದ ಸಾರ್ವಜನಿಕ ಉದ್ಯಮವಾಗಿ ಕಾರ್ಯನಿರ್ವಹಿಸುತ್ತಿತ್ತು. ಆ ನಂತರದ ವರ್ಷದಲ್ಲಿ ಕಾರ್ಖಾನೆ ಪುನಶ್ಚೇತನಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರಕ್ಕೆ ಅಗತ್ಯ ಬಂಡವಾಳವನ್ನು ಹೂಡುವ ಷರತ್ತಿನೊಂದಿಗೆ ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ಕೇವಲ ಒಂದು ರೂಪಾಯಿಗೆ ಹಸ್ತಾಂತರಗೊಳಿಸಿತ್ತು.

ವಿಐಎಸ್‌ಎಲ್‌;ನಿಯಂತ್ರಣ ಮೀರಿದೆ, ಮುಚ್ಚಲು ಬಿಡುವುದಿಲ್ಲ ಎಂದವರಲ್ಲಿ ಯಾರು ಕಳ್ಳರು, ಯಾರು ಸುಳ್ಳರು?

 

1918ರಲ್ಲಿ ಆರಂಭವಾದ ವಿಐಎಸ್‌ಎಲ್‌ ಅನ್ನು ಹೆಚ್‌ ಡಿ ದೇವೇಗೌಡ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ 1996ರಲ್ಲಿ ಭಾರತೀಯ ಉಕ್ಕು ಪ್ರಾಧಿಕಾರದ ವ್ಯಾಪ್ತಿಗೆ ತರಲಾಗಿತ್ತು. 1998ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ವಿಐಎಸ್‌ಎಲ್‌ನ್ನು ಸೈಲ್‌ನ ಪೂರ್ಣ ಪ್ರಮಾಣದ ಘಟಕವನ್ನಾಗಿ ವಹಿಸಿತ್ತು. ಪ್ರಾಧಿಕಾರವು ರೂ. 650 ಕೋಟಿ ವೆಚ್ಚದಲ್ಲಿ ಕಾರ್ಖಾನೆಯನ್ನು ಆಧುನೀಕರಣಗೊಳಿಸಲು ಪ್ರಸ್ತಾವ ಸಿದ್ಧಪಡಿಸಿತ್ತು ಎಂದು ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರು ಪ್ರಧಾನಿಗೆ ಬರೆದ ಪತ್ರದಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts