ಖಾಸಗಿ ಶಾಲೆಗಳಿಗೆ ಆರ್‌ಟಿಇ ಶುಲ್ಕ ಮರುಪಾವತಿ; ಕೋವಿಡ್‌ ವಿಶೇಷ ಪರಿಹಾರ ನಿಧಿಗೆ ಕೈ ಹಾಕಿದ ಸರ್ಕಾರ

ಬೆಂಗಳೂರು; ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಶುಲ್ಕ ಮರುಪಾವತಿಸಲು ರಾಜ್ಯ ಸರ್ಕಾರವು ಇದೀಗ ರಾಜ್ಯದ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳಿಗೆಂದು ಮೀಸಲಿರಿಸಿದ್ದ ಕೋವಿಡ್‌-19 ವಿಶೇಷ ಪ್ಯಾಕೇಜ್‌ ಪರಿಹಾರ ಧನದ ನಿಧಿಗೆ ಕೈ ಹಾಕಿದೆ.

 

ಕೋವಿಡ್‌ ವಿಶೇಷ ಪ್ಯಾಕೇಜ್‌ ಪರಿಹಾರ ನಿಧಿಗೆ ಬಿಡುಗಡೆಯಾಗಿದ್ದ ಒಟ್ಟು 103.47 ಕೋಟಿ ರು ಪೈಕಿ ಉಳಿಕೆಯಾಗಿರುವ 31.14 ಕೋಟಿ ರು.ಗಳನ್ನು ರಾಜ್ಯ ಸರ್ಕಾರವು ಮಾರ್ಗಪಲ್ಲಟಗೊಳಿಸುವ ಮೂಲಕ ಖಾಸಗಿ ಶಾಲೆಗಳಿಗೆ ಮರುಪಾವತಿಸಲು 2022ರ ಜುಲೈ 13ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ. ಈ ಆದೇಶವನ್ನು ಸಚಿವ ಬಿ ಸಿ ನಾಗೇಶ್‌ ಅವರು ಅನುಮೋದಿಸಿದ್ದಾರೆ ಎಂದು ತಿಳಿದು ಬಂದಿದೆ.

 

2021-22ನೇ ಸಾಲಿನ ಆಯವ್ಯಯದಲ್ಲಿ ಸರ್ಕಾರೇತರ ಪ್ರಾಥಮಿಕ ಶಾಲೆಗಳಿಗೆ ಸಹಾಯ-ಆರ್‌ಟಿಇ ಅಡಿಯ ಖಾಸಗಿ ಶಾಲೆಗಳ ಶುಲ್ಕ ಮರುಪಾವತಿ ಕಾರ್ಯಕ್ರಮದ ಅನುಷ್ಠಾನಕ್ಕಾಗಿ (ಲೆಕ್ಕ ಶೀರ್ಷಿಕೆ; 2202-01-102-0-05) ಅಡಿ 700 ಕೋಟಿ ರು. ನಿಗದಿಪಡಿಸಿತ್ತು. ಈ ಪೈಕಿ 103.47 ಕೋಟಿ ರು. ಅನುದಾನವನ್ನು ಕೋವಿಡ್‌ ವಿಶೇಷ ಪರಿಹಾರ ಧನ ಪ್ಯಾಕೇಜ್‌ ನಿಧಿಗೆ ನೀಡಿತ್ತು. ಆದರೆ ಈ ನಿಧಿಯನ್ನು ಬಳಸಿಕೊಂಡು ಪೂರ್ಣ ಪ್ರಮಾಣದಲ್ಲಿ ಅನುದಾನರಹಿತ ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿಗೆ ನೀಡಿಲ್ಲ ಎಂಬ ಆರೋಪಗಳೂ ಇವೆ.

 

ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ ಹೊರಡಿಸಿರುವ ಆದೇಶದ ಪ್ರತಿ

 

ಈ ನಿಧಿಯಲ್ಲಿರುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ಅನುದಾನ ರಹಿತ ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿಗೆ ಪರಿಹಾರ ನೀಡದೆಯೇ ಒದಗಿಸಿದ್ದ ಅನುದಾನದಲ್ಲಿಯೇ ಉಳಿಕೆಯಾಗಿದೆ ಎಂಬ ನೆಪವನ್ನು ಮುಂದಿರಿಸಿ 31.14 ಕೋಟಿ ರು.ಗಳನ್ನು ಪುನಃ ಆರ್‌ಟಿಇ ಅಡಿಯ ಖಾಸಗಿ ಶಾಲೆಗಳ ಶುಲ್ಕ ಮರುಪಾವತಿ ಕಾರ್ಯಕ್ರಮಕ್ಕೆ ಮರಳಿಸಿರುವುದು ಆದೇಶದಿಂದ ತಿಳಿದು ಬಂದಿದೆ.

 

ಅಲ್ಲದೆ ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಶುಲ್ಕ ಮರುಪಾವತಿಸಲು ಪ್ರಸಕ್ತ ಆರ್ಥಿಕ ಸಾಲಿಗೆ (2022-23) 500.00 ಕೋಟಿ ರು. ಅನುದಾನ ಲಭ್ಯವಾಗಿಸಿಕೊಂಡಿದೆ. ಆದರೂ ಸಹ ಇದೇ ನಿಧಿಯಲ್ಲಿ ಉಳಿಕೆಯಾಗಿದೆ ಎಂಬುದನ್ನು ಮುಂದಿರಿಸಿಕೊಂಡು ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಶುಲ್ಕ ಮರುಪಾವತಿಸಲು ಹೊರಡಿಸಿರುವ ಆದೇಶವು ಚರ್ಚೆಗೆ ಗ್ರಾಸವಾಗಿದೆ.

 

2020-21ನೇ ಸಾಲಿಗೆ ರಾಜ್ಯದ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ತಲಾ 5,000 ರು.ನಂತೆ ಪರಿಹಾರ ಧನ ಒದಗಿಸಲು 2021-22ನೇ ಸಾಲಿನ ಆಯವ್ಯಯದಲ್ಲಿ ಒಟ್ಟಾರೆಯಾಗಿ 103.47 ಕೋಟಿ ರು.ಗಳ ಅನುದಾನವನ್ನು ಕೋವಿಡ್‌ 19 ವಿಶೇಷ ಪ್ಯಾಕೇಜ್‌ ಪರಿಹಾರ ಧನವಾಗಿ ಬಿಡುಗಡೆ ಮಾಡಿತ್ತು.

 

ಈ ಅನುದಾನದಲ್ಲಿ ಲಭ್ಯವಿದ್ದ ಪರಿಹಾರ ಮೊತ್ತವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡದ ಕಾರಣ ಒಟ್ಟು ಅನುದಾನದ ಪೈಕಿ 31.64 ಕೋಟಿ ರು. ಅನುದಾನ ಉಳಿತಾಯವಾಗಿತ್ತು. ಉಳಿಕೆಯಾಗಿರುವ ಈ ಮೊತ್ತದಲ್ಲಿ 50 ಲಕ್ಷ ರು.ಗಳ ಅನುದಾನವನ್ನು ಕೋವಿಡ್‌ ವಿಶೇಷ ಪರಿಹಾರ ಧನ ಒದಗಿಸಲು ಉಳಿಸಿಕೊಂಡು ಉಳಿಕೆ 31.14 ಕೋಟಿ ರು. ಅನುದಾನವನ್ನು ಆರ್‌ಟಿ ಅಡಿಯಲ್ಲಿ ಖಾಸಗಿ ಶಾಲೆಗಳ ಶುಲ್ಕ ಮರುಪಾವತಿಗಾಗಿ ಉಪಯೋಗಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಕೋರಿದ್ದರು ಎಂಬುದು ಆದೇಶದಿಂದ ತಿಳಿದು ಬಂದಿದೆ.

 

‘ಕೋವಿಡ್‌ 19 ವಿಶೇಷ ಪರಿಹಾರ ಧನವನ್ನು ವಿತರಿಸಲು ಗುರುತಿಸಲಾದ ಎಲ್ಲಾ ಅರ್ಜಿ ಫಲಾನುಭವಿಗಳ ಖಾತೆಗೆ 5,000 ರು. ಜಮೆ ಆಗಿರುವ ಕುರಿತು ಮತ್ತೊಮ್ಮೆ ಖಾತ್ರಿ ಪಡಿಸಿಕೊಳ್ಳಬೇಕು. ಮತ್ತು ಈ ಉದ್ದೇಶಕ್ಕೆ ಮತ್ತೊಮ್ಮೆ ಹೆಚ್ಚುವರಿ ಅನುದಾನ ಒದಗಿಸುವಂತೆ ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಕೂಡದು,’ ಎಂದು ಆದೇಶದಲ್ಲಿ ಹೇಳಲಾಗಿದೆ.

 

ವಿದ್ಯಾ ವಿಕಾಸ (ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಬೈಸಿಕಲ್‌ ವಿತರಣೆ) 363.27 ಕೋಟಿ ರು., ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಶುಲ್ಕ ಮರುಪಾವತಿಸಲು 500 ಕೋಟಿ, ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳು, ಪದವಿಪೂರ್ವ ಕಾಲೇಜುಗಳಿಗೆ ಮೂಲಭೂತ ಸೌಕರ್ಯಕ್ಕೆ 895.84 ಕೋಟಿ ರು., ಮಧ್ಯಾಹ್ನ ಉಪಹಾರ ಮತ್ತು ಕ್ಷೀರಭಾಗ್ಯ ಯೋಜನೆಗೆ 2,251.40 ಕೋಟಿ ರು., ಸಮಗ್ರ ಶಿಕ್ಷಣ ಕರ್ನಾಟಕಕ್ಕೆ 278.23 ಕೋಟಿ ರು., ಶಿಕ್ಷಣ ಗುಣಮಟ್ಟ ಸುಧಾರಣೆ, ವಿದ್ಯಾರ್ಥಿ ಪ್ರೇರಣಾ ಹಾಗೂ ಗುಣಮಟ್ಟ ಭರವಸೆ ಕಾರ್ಯಕ್ರಮಕ್ಕೆ 15 ಕೋಟಿ ರು., ಸೈನಿಕ ಶಾಲೆಗಳಿಗೆ 20.18 ಕೋಟಿ ರು. ಸೇರಿ ಒಟ್ಟು 4,323.92 ಕೋಟಿ ರು.ಗಳನ್ನು ಆಯವ್ಯಯದಲ್ಲಿ ಒದಗಿಸಿರುವುದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts