ಸರ್ಕಾರಿ ಆದೇಶಕ್ಕೆ ವ್ಯತಿರಿಕ್ತವಾಗಿ ಸುತ್ತೋಲೆ, ಜ್ಞಾಪನ ಪತ್ರ ಹೊರಡಿಸಲು ಸರ್ಕಾರದಿಂದಲೇ ಪರವಾನಿಗೆ!

Photo Credit; Financial Express

ಬೆಂಗಳೂರು; ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರು ಶೈಕ್ಷಣಿಕ ವಿಚಾರಗಳಿಗಿಂತಲೂ ಧಾರ್ಮಿಕ ವಿಚಾರಗಳಲ್ಲಿಯೇ ಹೆಚ್ಚು ತೊಡಗಿಸಿಕೊಂಡಿದ್ದರೇ ಇತ್ತ ಇಲಾಖೆಯ ಅಧಿಕಾರಿಗಳು ಸರ್ಕಾರಿ ಆದೇಶಕ್ಕೆ ವ್ಯತಿರಿಕ್ತವಾಗಿ ಸುತ್ತೋಲೆ ಹಾಗೂ ಜ್ಞಾಪನಗಳನ್ನು ಹೊರಡಿಸುತ್ತಿದ್ದಾರೆ. ಅಲ್ಲದೆ ಆಂಗ್ಲಭಾಷೆಯ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರೆಂದು ಪರಿಗಣಿಸಲು ಅವಕಾಶ ಕಲ್ಪಿಸಿ ಸುತ್ತೋಲೆ ಹೊರಡಿಸುವ ಮೂಲಕ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಗ್ಲೀಷ್‌ ಭಾಷೆಯ ಕಲಿಕೆಯ ಜ್ಞಾನ ದೊರಕಬಾರದು ಎಂದು ಹೂಡಿರುವ ಸಂಚು ಇದೀಗ ಬಹಿರಂಗವಾಗಿದೆ.

 

ಸರ್ಕಾರಿ ಪ್ರೌಢಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರನ್ನು ಮತ್ತು ಹೆಚ್ಚುವರಿ ಖಾಲಿ ಹುದ್ದೆಗಳನ್ನು ಸ್ಥಳಾಂತರಿಸುವ ಬಗ್ಗೆ 11 ವರ್ಷಗಳ ಹಿಂದೆಯೇ ಹೊರಡಿಸಿರುವ ಸರ್ಕಾರಿ ಆದೇಶದಲ್ಲಿ ಹಲವು ನ್ಯೂನತೆಗಳಿದ್ದರೂ ಅದನ್ನೇ ಮಾದರಿಯನ್ನಾಗಿಸಿಕೊಂಡಿರುವ ಇಲಾಖೆಯು 2022ರ ಏಪ್ರಿಲ್‌ 13ರಂದು ಪರಿಷ್ಕೃತ ಜ್ಞಾಪನ ಪತ್ರವನ್ನು ಹೊರಡಿಸಿದೆ. ಇದು ಶೈಕ್ಷಣಿಕ ವಲಯದಲ್ಲಿ ವಿವಾದಕ್ಕೆ ದಾರಿಮಾಡಿಕೊಟ್ಟಿದೆ.

 

ಇದಕ್ಕೆ ಸಂಬಂಧಿಸಿದಂತೆ ಖಾರವಾಗಿ ಪ್ರತಿಕ್ರಿಯಿಸಿರುವ ವಿಧಾನಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಅವರು ‘ಸರ್ಕಾರಿ ಆದೇಶಕ್ಕೆ ವ್ಯತಿರಿಕ್ತವಾಗಿ ಸುತ್ತೋಲೆ ಹಾಗೂ ಜ್ಞಾಪನಗಳನ್ನು ಹೊರಡಿಸಲು ಅನುಷ್ಠಾನಾಧಿಕಾರಿಗಳಿಗೆ ಸರ್ಕಾರವು ಪರವಾನಿಗೆ ನೀಡಿದೆಯೇ,’ ಎಂದು ಸಚಿವ ಬಿ ಸಿ ನಾಗೇಶ್‌ ಅವರನ್ನು ಪ್ರಶ್ನಿಸಿ 2022ರ ಏಪ್ರಿಲ್‌ 25ರಂದು ಪತ್ರ ಬರೆದಿದ್ದಾರೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಬಸವರಾಜ ಹೊರಟ್ಟಿ ಅವರು ಸಚಿವ ಬಿ ಸಿ ನಾಗೇಶ್‌ ಅವರಿಗೆ ಬರೆದಿರುವ ಪತ್ರದ ಪ್ರತಿ

 

ಸರ್ಕಾರಿ ಪ್ರೌಢಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರನ್ನು ಮತ್ತು ಹೆಚ್ಚುವರಿ ಖಾಲಿ ಹುದ್ದೆಗಳನ್ನು ಸ್ಥಳಾಂತರಿಸುವ ಬಗ್ಗೆ 2011ರ ಏಪ್ರಿಲ್‌ 4ರಂದು ಸರ್ಕಾರಿ ಆದೇಶವನ್ನು (ಇಡಿ;9;ಎಕ್‌ಬಿಪಿ;2011) ಹೊರಡಿಸಲಾಗಿತ್ತು. 11 ವರ್ಷಗಳ ಹಿಂದೆಯೇ ಹೊರಡಿಸಿರುವ ಈ ಆದೇಶದಲ್ಲಿ ಹಲವು ನ್ಯೂನತೆಗಳಿದ್ದವು. ಆದರೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಇದೇ ಆದೇಶವನ್ನು ಆಧಾರವಾಗಿಟ್ಟುಕೊಂಡು 2022ರ ಏಪ್ರಿಲ್‌ 13ರಂದು ಪರಿಷ್ಕೃತ ಜ್ಞಾಪನ ಪತ್ರ ಹೊರಡಿಸಿದೆ.

 

ಸರ್ಕಾರಿ ಆದೇಶದಲ್ಲೇನಿದೆ?

 

ಸರ್ಕಾರಿ ಆದೇಶದನ್ವಯ ವಿದ್ಯಾರ್ಥಿಗಳ ಸಂಖ್ಯೆ 70ರವರೆಗೆ 1 ವಿಭಾಗ, 71ರಿಂದ 140 ಎರಡು ವಿಭಾಗ, 141ರಿಂದ 210ರವರೆಗೆ ಮೂರು ವಿಭಾಗ, 211ರಿಂದ 280ರವರೆಗೆ ನಾಲ್ಕು ವಿಭಾಗ ಹಾಗೂ 281ರಿಂದ 350ರವರೆಗೆ ಐದು ವಿಭಾಗಗಳೆಂದು ನಿರ್ಣಯಿಸಲಾಗಿದೆ. ಅದರಂತೆ 3ರಿಂದ 5 ವಿಭಾಗಗಳಲ್ಲಿರುವ ಪ್ರೌಢಶಾಲೆಗಳಲ್ಲಿಸಿಬ್ಬಂದಿ ಸ್ತರ ವಿನ್ಯಾಸದ ಪ್ರಕಾರ 7 ಶಿಕ್ಷಕರು ಅಂದರೆ ಪ್ರಥಮ ಬಾಷೆ -1, ಹಿಂದಿ -1, ಆಂಗ್ಲಭಾಷೆ-1, ಕಲಾ-1, ವಿಜ್ಞಾನ (ಪಿಸಿಎಂ)-1, ವಿಜ್ಞಾನ (ಸಿಬಿಝೆಡ್‌)-1 ಹಾಗೂ ದೈಹಿಕ ಶಿಕ್ಷಕರ ಹುದ್ದೆ-1 ಸೇರಿದಂತೆ ಮುಖ್ಯೋಪಾಧ್ಯಾಯರನ್ನೊಳಗೊಂಡು 7+1 ಬೋಧಕ ಹಾಗೂ 2 ಬೋಧಕೇತರ ಹುದ್ದೆಗಳಿರಬೇಕೆಂದು ಆದೇಶದಲ್ಲಿ ತಿಳಿಸಿದೆ.

 

ಆದರೆ ಈ ಆದೇಶದಲ್ಲಿ 1ರಿಂದ 3 ವಿಭಾಗದವರೆಗೆ ಇರಬೇಕಾದ ಸಿಬ್ಬಂದಿ ಸ್ತರವಿನ್ಯಾಸದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಂತರ 6 ಅಥವಾ ಅದಕ್ಕಿಂತ ಹೆಚ್ಚು ವಿಭಾಗಗಳಿದ್ದಲ್ಲಿ ಮುಖ್ಯ ಶಿಕ್ಷಕರನ್ನು ಹೊರತುಪಡಿಸಿ ಪ್ರತಿ ವಿಭಾಗಕ್ಕೆ 1;5ರಂತೆ ಲೆಕ್ಕಾಚಾರ ಮಾಡಿ ಅಗತ್ಯ ಶಿಕ್ಷಕರನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಪರಿಷ್ಕೃತ ಜ್ಞಾಪನ ಪತ್ರದಲ್ಲಿ 15 ವಿಭಾಗಗಳವರೆಗೆ ಸಿಬ್ಬಂದಿ ಸ್ತರ ವಿನ್ಯಾಸದ ಬಗ್ಗೆ ಮಾಹಿತಿ ನೀಡಿದೆ ಎಂಬುದು ಬಸವರಾಜ ಹೊರಟ್ಟಿ ಅವರು ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

 

ಅಲ್ಲದೆ ಪ್ರೌಢಶಾಲೆಗಳಲ್ಲಿ ಒಂದಕ್ಕಿಂತ ಹೆಚ್ಚಿನ ವೃತ್ತಿ ಶಿಕ್ಷಕರುಗಳಲ್ಲಿ ಕಾರ್ಯಭಾರಕ್ಕನುಗುಣವಾಗಿ ಅಗತ್ಯವಿರುವ ಶಿಕ್ಷಕರನ್ನು ಉಳಿಸಿಕೊಂಡು ಉಳಿದ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರೆಂದು ಗುರುತಿಸಬೇಕು ಎಂಬ ಅಂಶವು ಸರ್ಕಾರಿ ಆದೇಶದಲ್ಲಿ ಸ್ಪಷ್ಟವಾಗಿದೆ. ಆದರೆ 2022ರ ಏಪ್ರಿಲ್‌ 13ರಂದು ಹೊರಡಿಸಿರುವ ಅಧಿಕೃತ ಜ್ಞಾಪನ ಪತ್ರದ ಅನ್ವಯ ವಿಶೇಷ ಶಿಕ್ಷಕರ ಹುದ್ದೆಯನ್ನು 6 ವಿಭಾಗಗಳಲ್ಲಿ ಮಾತ್ರ ಉಳಿಸಿಕೊಳ್ಳಬೇಕೆಂದು ನಿಗದಿಪಡಿಸಲಾಗಿದೆ. ಇದು ಸರ್ಕಾರಿ ಆದೇಶಕ್ಕೆ ವ್ಯತಿರಿಕ್ತವಾದ ಪರಿಷ್ಕೃತ ಜ್ಞಾಪನವೆಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

 

‘ರಾಜ್ಯದಲ್ಲಿ 6 ವಿಭಾಗಗಳನ್ನು ಹೊಂದಿದ ಎಷ್ಟು ಸರ್ಕಾರಿ ಪ್ರೌಢಶಾಲೆಗಳಿವೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೇ ಅವೈಜ್ಞಾನಿಕ ಹಾಗೂ ಕಾರ್ಯಸಾಧುವಲ್ಲದ 2022ರ ಏಪ್ರಿಲ್‌ 14ರಂದು ಹೊರಡಿಸಿರುವ ಪರಿಷ್ಕೃತ ಜ್ಞಾಪನವನ್ನು ಹಿಂಪಡೆಯಬೇಕು. ಸರ್ಕಾರಿ ಆದೇಶಕ್ಕೆ ವ್ಯತಿರಿಕ್ತವಾಗಿ ಸುತ್ತೋಲೆ ಹಾಗೂ ಜ್ಞಾಪನಗಳನ್ನು ಹೊರಡಿಸಲು ಅನುಷ್ಠಾನಾಧಿಕಾರಿಗಳಿಗೆ ಸರಕಾರ ಪರವಾನಿಗೆ ನೀಡಿದೆಯೇ ಎಂಬುದನ್ನು ಕೂಡಾ ಪರಿಶೀಲಿಸಬೇಕು,’ ಎಂದು ಬಸವರಾಜ ಹೊರಟ್ಟಿ ಅವರು ಸಚಿವ ನಾಗೇಶ್‌ ಅವರಿಗೆ ಬರೆದಿರುವ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

 

 

ಅದೇ ರೀತಿ ‘ಸರ್ಕಾರಿ ಪ್ರೌಢಶಾಲೆಗಳ ಸ್ಥಾಪನೆ ಉದ್ದೇಶ ಗ್ರಾಮಾಂತರ ಮಕ್ಕಳಿಗೆ ಉಚಿತವಾಗಿ ಕಡಿಮೆ ವೆಚ್ಚದಲ್ಲಿ ಶಿಕ್ಷಣ ಕೈಗೆಟುಕಬೇಕು ಎಂಬ ಉದ್ದೇಶ ಸರ್ಕಾರದ್ದು. ಅದರೆ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಗ್ಲೀಷ್‌ ಭಾಷೆಯ ಜ್ಞಾನ ಸಿಗಬಾರದೆಂಬ ಉದ್ದೇಶದಿಂದ ಆಂಗ್ಲಭಾಷೆಯ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರೆಂದು ಪರಿಗಣಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ಹೊರಟ್ಟಿ ಅವರು ಗಮನಸೆಳೆದಿರುವುದು ಪತ್ರದಿಂದ ತಿಳಿದು ಬಂದಿದೆ.

 

 

‘ಸರ್ವರಿಗೂ ಶಿಕ್ಷಣ ಸಿಗಬೇಕೆಂಬ ಸದಾಶಯದೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯವೆಂಬ ಹೆಗ್ಗಳಿಕೆ ಹೊಂದಿರುವ ಕರ್ನಾಟಕಕ್ಕೆ ಈಗ ನಡೆಯುತ್ತಿರುವ ಪ್ರಕ್ರಿಯೆಯಿಂದ ಕಪ್ಪು ಚುಕ್ಕೆ ಬರುವುದು. ಕೂಡಲೇ 2022ರ ಏಪ್ರಿಲ್‌ 13ರಂದು ಹೊರಡಿಸಿರುವ ಸರ್ಕಾರಿ ಆದೇಶವನ್ನು ರದ್ದುಗೊಳಿಸಿ 2022-23ನೇ ಶೈಕ್ಷಣಿಕ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರಿ ಆದೇಶ ಹಾಗೂ ಸುತ್ತೋಲೆಗಳನ್ನು ಹೊರಡಿಸಬೇಕು. ಅಲ್ಲಿಯವರೆಗೆ ಹೆಚ್ಚುವರಿ ಶಿಕ್ಷಕರ ಸ್ಥಳಾಂತರ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ಆ ಮೂಲಕ ರಾಜ್ಯದಲ್ಲಿನ ಮಕ್ಕಳಿಗೆ ಅನ್ಯಾಯವಾಗುವುದನ್ನು ತಪ್ಪಿಸಲು ಇಂದೇ ಸೂಕ್ತ ನಿರ್ದೇಶನಗಳನ್ನು ಸಂಬಂಧಿಸಿದವರಿಗೆ ನೀಡಬೇಕು,’ ಎಂದು ಹೊರಟ್ಟಿ ಅವರು ಪತ್ರದಲ್ಲಿ ಕೋರಿದ್ದಾರೆ.

the fil favicon

SUPPORT THE FILE

Latest News

Related Posts