ಸರ್ಕಾರದ ಲೆಕ್ಕಕ್ಕೆ ವಿಳಂಬ ಜಮೆ ಒಪ್ಪಿಕೊಂಡ ಸರ್ಕಾರ; ಅಕ್ರಮ ವರ್ಗಾವಣೆಗಳಿಗಿಲ್ಲ ಕಡಿವಾಣ

ಬೆಂಗಳೂರು; ರಾಜ್ಯದ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಸಂಗ್ರಹವಾಗುವ ವಿವಿಧ ರೀತಿಯ ಶುಲ್ಕಗಳ ಮೊತ್ತವನ್ನು ಸರ್ಕಾರದ ಲೆಕ್ಕಕ್ಕೆ ವಿಳಂಬವಾಗಿ ಜಮೆಯಾಗುತ್ತಿದೆ ಎಂಬುದನ್ನು ಇದೀಗ ಆರ್ಥಿಕ ಇಲಾಖೆ ಒಪ್ಪಿಕೊಂಡಿದೆ. ಉಪನೋಂದಣಾಧಿಕಾರಿಯಾಗಿದ್ದ ಚೆಲುವರಾಜು ಅವರು ಈ ಸಂಬಂಧ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿ ಗಮನಕ್ಕೆ ತಂದಾಗಲೆಲ್ಲ ಇಲಾಖೆಯು ನಿರಾಕರಿಸುತ್ತಿತ್ತಾದರೂ ಶೃಂಗೇರಿ ಪ್ರಕರಣವನ್ನು ಒಪ್ಪಿಕೊಳ್ಳುವ ಮೂಲಕ ಸರ್ಕಾರದ ಹಣ ಖಾಸಗಿ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಆಗುತ್ತಿದೆ ಎಂಬ ಆರೋಪವನ್ನು ಬಲಪಡಿಸಿದಂತಾಗಿದೆ.

ಸರ್ಕಾರದ ಹಣ ಖಾಸಗಿ ಖಾತೆಗಳಿಗೆ ಅಕ್ರಮ ವರ್ಗಾವಣೆ ಮತ್ತು ಹವಾಲಾ ವ್ಯವಹಾರಳಿಗೆ ದುರ್ಬಳಕೆಯಾಗುತ್ತಿದೆ ಎಂದು ಸಬ್‌ ರಿಜಿಸ್ಟ್ರಾರ್‌ (ಹಾಲಿ ಶೃಂಗೇರಿ ಸಬ್‌ ರಿಜಿಸ್ಟ್ರಾರ್‌) ಚೆಲುವರಾಜು ಅವರು ಸರ್ಕಾರವನ್ನು ಹಲವು ಬಾರಿ ಎಚ್ಚರಿಸಿದ್ದರು. ಸರ್ಕಾರದ ಲೆಕ್ಕ ಶೀರ್ಷಿಕೆಗಳಲ್ಲಿರುವ ಸರ್ಕಾರದ ಹಣವು ಹೇಗೆ ಖಾಸಗಿ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆಯಾಗುತ್ತಿದೆ ಎಂದು ಹವಾಲಾ ವ್ಯವಹಾರಗಳಿಗೆ ದುರ್ಬಳಕೆಯಾಗುತ್ತಿದೆ ಎಂದು ಸಾಕ್ಷ್ಯಾಧಾರ ಮತ್ತು ನಿದರ್ಶನಗಳ ಸಮೇತ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದಿದ್ದರು.

ಈ ಪೈಕಿ ಸರ್ಕಾರದ ಲೆಕ್ಕಕ್ಕೆ ವಿಳಂಬವಾಗಿ ಜಮೆ ಆಗುತ್ತಿದೆ ಎಂಬುದನ್ನಷ್ಟೇ ಒಪ್ಪಿಕೊಂಡಿರುವ ಆರ್ಥಿಕ ಇಲಾಖೆಯು ಚೆಲುವರಾಜು ಅವರು ಮಾಡಿದ್ದ ಉಳಿದ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ಕೈ ಬಿಟ್ಟಿದೆ. ಈ ಕುರಿತು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ಆರ್ಥಿಕ ಇಲಾಖೆಯು 2021ರ ನವೆಂಬರ್‌ 30ರಂದು ಪತ್ರ ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

2020ರ ಅಕ್ಟೋಬರ್‌ 22ರಂದು 5,32,000 ರು.ಗಳನ್ನು ಶೃಂಗೇರಿ ಉಪ ನೋಂದಣಾಧಿಕಾರಿಗಳು ಕೆನರಾ ಬ್ಯಾಂಕ್‌ನ ಶಾಖೆಯಲ್ಲಿದ್ದ ಸರ್ಕಾರದ ಲೆಕ್ಕ ಶೀರ್ಷಿಕೆಗೆ 38 ದಿನಗಳ ವಿಳಂಬವಾಗಿ ಜಮೆ ಮಾಡಿದ್ದರು. ಈ ಸಂಬಂಧ ದಂಡದ ಬಡ್ಡಿ ಎಂದು 3,644 ರು.ಗಳನ್ನು ಕೆನರಾ ಬ್ಯಾಂಕ್‌ನಿಂದಲೆ ವಸೂಲಿ ಮಾಡಿ ಸರ್ಕಾರದ ಲೆಕ್ಕಕ್ಕೆ ಜಮೆ ಮಾಡಿರುವುದು ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಎಚ್‌ ಎ ಶೋಭ ಅವರು ಬರೆದಿರುವ ಪತ್ರದಿಂದ ಗೊತ್ತಾಗಿದೆ. ಉಪ ನೋಂದಣಾಧಿಕಾರಿಗಳ ಕಚೇರಿ ಮತ್ತು ಖಜಾನೆ ಇಲಾಖೆಯಲ್ಲಿರುವ ಸರ್ಕಾರದ ಲೆಕ್ಕ ಶೀರ್ಷಿಕೆಗಳಿಗೆ ವಿಳಂಬವಾಗಿ ಜಮೆ ಮಾಡುತ್ತಿರುವ ಪ್ರಕರಣಗಳು ಬಹಿರಂಗವಾದರೂ ಸಚಿವ ಆರ್‌ ಅಶೋಕ್‌ ಅವರು ಗಂಭೀರವಾಗಿ ಪರಿಗಣಿಸಿಲ್ಲ. ಕೇವಲ ದಂಡ ಪಾವತಿಸಿಕೊಂಡು ತಪ್ಪೆಸೆಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

ಶೃಂಗೇರಿ ಪ್ರಕರಣದ ವಿವರ

ಬಿ ಜಿ ಪ್ರಸನ್ನ ಎಂಬುವರು ಶೃಂಗೇರಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸ್ಥಿರ ಸ್ವತ್ತಿನ ನೋಂದಣಿ ಸಂಬಂಧ ಚಲನ್‌ (ಸಂಖ್ಯೆ ;ಸಿಆರ್‌ 1020003000382566) ಮೂಲಕ 5,32,000 ರು.ಗಳನ್ನು ಶೃಂಗೇರಿ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ನಗದು ಮೂಲಕ 2020ರ ಅಕ್ಟೋಬರ್‌ 23ರಂದು ಪಾವತಿಸಿದ್ದಾರೆ. 2020ರ ಅಕ್ಟೋಬರ್‌ 24ರಂದು ಸ್ಥಿರಾಸ್ತಿ ನೋಂದಣಿ (ದಸ್ತಾವೇಜಿನ ಸಂಖ್ಯೆ; 510/2020-21) ಆಗಿದೆ. ಖಜಾನೆ 2ರ ತಂತ್ರಾಂಶ ಮೂಲಕ ಸರ್ಕಾರಕ್ಕೆ ಹಣ ಪಾವತಿಯಾಗಿತ್ತು. ಹಣ ಪಾವತಿಯಾಗಿರುವ ಬಗ್ಗೆ ಯಶಸ್ವಿಯನ್ನು ದೃಢಪಡಿಸಿಕೊಳ್ಳಲಾಗಿತ್ತು ಎಂದು ಆರೋಪಿಸಿದ್ದ ಉಪ ನೋಂದಣಾಧಿಕಾರಿ ಚೆಲುವರಾಜು ಅವರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

ಆದರೆ 15-20 ದಿನಗಳ ನಂತರ ಖಜಾನೆ 2ರ ಚಲನ್‌ ಮೂಲಕ ಸರ್ಕಾರಕ್ಕೆ ಪಾವತಿಗೊಂಡ ಬಳಿಕ ಸರ್ಕಾರಿ ಹಣ ತಂತ್ರಾಂಶದಲ್ಲಿ ಪಾವತಿ ವಿಫಲಗೊಂಡಿತ್ತು. ಕಚೇರಿ ಮರು ಹೊಂದಾಣಿಕೆ ವೇಳೆಯಲ್ಲಿ ಇದು ಸಬ್‌ ರಿಜಿಸ್ಟ್ರಾರ್‌ ಗಮನಕ್ಕೆ ಬಂದಿತ್ತು. ಕೆನರಾ ಬ್ಯಾಂಕ್‌ನಲ್ಲಿ ಚಲನ್‌ ಮೊತ್ತ ವಿಫಲವಾಗಿದ್ದರ ಬಗ್ಗೆ ಪರಿಶೀಲಿಸಿದ ವೇಳೆಯಲ್ಲಿ ಬ್ಯಾಂಕ್‌ನಲ್ಲೇ ಬೇರೊಂದು ಚಲನ್‌ ಸೃಜಿಸಿ ಮರು ಜಮಾ ಮಾಡಿಕೊಳ್ಳಲಾಗಿತ್ತು. ಒಮ್ಮೆ ಸರ್ಕಾರಕ್ಕೆ ಪಾವತಿಯಾದ ಹಣ ಸರ್ಕಾರಿ ಭಂಡಾರದಿಂದ ಹಿಂದಿರಿಗಿತ್ತು. ಅಕ್ರಮ ವ್ಯವಹಾರಗಳಿಗೆ ಸರ್ಕಾರದ ಹಣವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಅನುಮಾನಗಳನ್ನು ಈ ಪ್ರಕರಣವು ಬಲಪಡಿಸಿತ್ತು.

ಬಿ ಜಿ ಪ್ರಸನ್ನ ಎಂಬುವರು ಶೃಂಗೇರಿ ಪಟ್ಟಣದ ಕೆನರಾ ಬ್ಯಾಂಕ್‌ನ ಶಾಖೆಯಲ್ಲಿ (ಖಾತೆ ಸಂಖ್ಯೆ; 0866101006794) ಖಾತೆ ಹೊಂದಿದ್ದರೂ 5,32,000 ರು.ಗಳನ್ನು ಅದೇ ಬ್ಯಾಂಕ್‌ ಶಾಖೆಯಿಂದ ಡ್ರಾ ಮಾಡಿ ಮತ್ತೆ ಅದೇ ಬ್ಯಾಂಕ್‌ ಶಾಖೆಗೆ ಚಲನ್‌ ಮೂಲಕ ನಗದಾಗಿ ಜಮಾಗೊಳಿಸಿದ್ದರು. ಬಿ ಜಿ ಪ್ರಸನ್ನ ಅವರ ಖಾತೆಗೆ ಆಂಧ್ರಪ್ರದೇಶದ ಅನಂತಪುರ ಕೆನರಾ ಬ್ಯಾಂಕ್‌ನ ಶಾಖೆಯಿಂದ ಅಶೋಕ ಎಂಬುವರ ಖಾತೆಯಿಂದ 50,00,000 ರು., ವಿಲಾಸಿನಿ ಎಂಬುವರ ಖಾತೆಯಿಂದ 10,00,000 ಮತ್ತು ಶಿವಪ್ರಸಾದ್‌ ಎಂಬುವರ ಖಾತೆಯಿಂದ 5,00,000 ರು. ಜಮಾವಾಗಿತ್ತು ಎಂಬುದು ಪತ್ರದಿಂದ ಗೊತ್ತಾಗಿತ್ತು.

ಬಿ ಜಿ ಪ್ರಸನ್ನ ಅವರು ನೋಂದಣಿ ಮಾಡಿಸಿದ್ದ ಸ್ಥಿರಾಸ್ತಿಗೆ ಮಾರುಕಟ್ಟೆ ಮಾರ್ಗಸೂಚಿ ಬೆಲೆ 18,00,000 ರು.ಗಳಿದೆ. ಆದರೆ ಪ್ರಸನ್ನ ಅವರು 25,00,000 ರು.ಗಳಿಗೆ ದಾಖಲಾತಿಯನ್ನು ನೋಂದಾಯಿಸಲು ಹಿಂದಿನ ದಿನ ತಿಳಿಸಿದ್ದರಲ್ಲದೆ ಏಕಾಏಕಿ ದಸ್ತಾವೇಜನ್ನು 80,00,000 ರು.ಗಳಿಗೆ ನೋಂದಾಯಿಸಲು ಮುಂದಾಗಿದ್ದರು. ಈ ಬಗ್ಗೆ ಪಾವತಿ ಬ್ಯಾಂಕ್‌ನಲ್ಲಿ ತಮ್ಮ ಖಾತೆಯನ್ನು ಬಳಸದೆಯೇ ತಮ್ಮದೇ ಅಕೌಂಟ್‌ನಿಂದ ನಗದು ಡ್ರಾ ಮಾಡಿ ಮತ್ತೆ ನಗದು ರೂಪದಲ್ಲೇ 5,32,000 ರು.ಗಳನ್ನು ಚಲನ್‌ ಮೂಲಕ ಪಾವತಿಸಿದ್ದರು. ಆ ನಂತರ ತೇಜಶ್ರೀ ಎಂಬಾಕೆಯ ಖಾತೆಗೆ 45,000 ರು. ಜಮೆಯಾಗಿತ್ತು ಎಂಬುದು ತಿಳಿದು ಬಂದಿತ್ತು.

‘ಬಹುಶಃ ಇದು ವ್ಯವಹಾರಕ್ಕೆ ಕಮಿಷನ್‌ ಆಗಿದೆ. ಈ ಪ್ರಕ್ರಿಯೆಗಳಲ್ಲಿ ಅಕ್ರಮ ವ್ಯವಹಾರವನ್ನು ನಿರ್ವಹಿಸಲು ವ್ಯವಸ್ಥಿತ ಜಾಲ ಕಾರ್ಯಾಚರಿಸುತ್ತಿದೆ ಮೇಲ್ನೋಟಕ್ಕೆ ಕಂಡು ಬಂದಿದೆ,’ ಎಂದು ಪತ್ರದಲ್ಲಿ ಸಬ್‌ ರಿಜಿಸ್ಟ್ರಾರ್‌ ಚೆಲುವರಾಜು ಅವರು ಪತ್ರದಲ್ಲಿ ಅನುಮಾನ ವ್ಯಕ್ತಪಡಿಸಿದ್ದರು.

ಇನ್ನು ಶೃಂಗೇರಿ ಉಪ ನೋಂದಣಿ ಕಚೇರಿಯ ಗಣಕ ಯಂತ್ರ ನಿರ್ವಾಹಕ ಕಳೆದ 1 ವರ್ಷದಲ್ಲಿ 3-5 ಗಂಟಿನಲ್ಲಿ ಮಾತ್ರ ತಮ್ಮ ವೇತನ ಪಡೆದಿದ್ದರು ಸಹ ಸರಿಸುಮಾರು 34 ಪುಟಗಳ ಬ್ಯಾಂಕ್‌ ವ್ಯವಹಾರವನ್ನು ಇದೇ ಅವಧಿಯಲ್ಲಿ ನಡೆಸಿದ್ದರು. ‘ಇದು ಸಂಘಟಿತ ಅಪರಾಧವೆಸಗುವ ತಂಡದಲ್ಲಿ ಗಣಕಯಂತ್ರ ನಿರ್ವಾಹಕರು ನೇರವಾಗಿ ಭಾಗಿಯಾಗಿರುತ್ತಾರೆ ಎಂಬುದಕ್ಕೆ ಸ್ಪಷ್ಟ ಪುರಾವೆಯಾಗಿದೆ,’ ಎಂದು ಚೆಲುವರಾಜು ಅವರು ಪತ್ರದಲ್ಲಿ ತಿಳಿಸಿದ್ದರು.

ಅಲ್ಲದೆ ‘ಶೃಂಗೇರಿ ಪಟ್ಟಣದ ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಕಚೇರಿ ಗಣಕಯಂತ್ರ ನಿರ್ವಾಹಕ ಎಚ್‌ ಎನ್‌ ಕಿರಣ್‌ ಎಂಬಾತನ ಬ್ಯಾಂಕ್‌ ಖಾತೆಯನ್ನೂ (ಸಂಖ್ಯೆ; 31517519349-ಐಎಫ್‌ಎಸ್‌ಸಿ ಕೋಡ್‌- ಎಸ್‌ಬಿಐಎನ್‌ 0040290) ಮತ್ತು ಮತ್ತೊಬ್ಬ ಗಣಕ ಯಂತ್ರ ನಿರ್ವಾಹಕಿ ಪಿ ನೇತ್ರಾವತಿ ಹಾಗೂ ಆಕೆಯ ಪತಿ ರಜನಿಕಾಂತ್‌ ಎಂಬುವರ ಕಾರ್ಪೋರೇಷನ್‌ ಬ್ಯಾಂಕ್‌ನಲ್ಲಿ ಹೊಂದಿರುವ ಜಂಟಿ ಖಾತೆಯನ್ನೂ (ಸಂಖ್ಯೆ; 520291022828554 ಮತ್ತು 59029102283089) ತನಿಖೆಗೊಳಪಡಿಸಬೇಕು,’ ಎಂದು ಪತ್ರದಲ್ಲಿ ವಿವರಿಸಿದ್ದರು.

the fil favicon

SUPPORT THE FILE

Latest News

Related Posts