ಪವರ್‌ ಟಿವಿ ಮುಖ್ಯಸ್ಥರ ಮನೆ ಮೇಲೆ ದಾಳಿ; ವಿಶ್ವಾಸಾರ್ಹತೆ ಪ್ರಶ್ನೆಗೆ ಕಾಂಗ್ರೆಸ್‌ ಉತ್ತರವೇನು?

ಬೆಂಗಳೂರು; ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬದ ಸದಸ್ಯರು ಭಾಗಿಯಾಗಿದ್ದಾರೆ ಎನ್ನಲಾಗಿರುವ ಬಿಡಿಎ ಭ್ರಷ್ಟಾಚಾರ ಪ್ರಕರಣ ವಿಧಾನಸಭೆ ಅಧಿವೇಶನದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದರ ಬೆನ್ನಲ್ಲೆ ಈಗ ಪವರ್‌ ಟಿ ವಿ ಸುದ್ದಿ ವಾಹಿನಿ ಮುಖ್ಯಸ್ಥ ರಾಕೇಶ್‌ ಶೆಟ್ಟಿ ಅವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಈ ಸುದ್ದಿವಾಹಿನಿ ಬಿಡುಗಡೆಗೊಳಿಸಿದ್ದ ದಾಖಲೆಗಳನ್ನೇ ವಿಧಾನಸಭೆ ಅಧಿವೇಶನದಲ್ಲಿ ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಹಲವು ಮುಖಂಡರು ದಾಳಿಯನ್ನು ಖಂಡಿಸಿದ್ದಾರೆ. ಅಲ್ಲದೆ ಸುದ್ದಿವಾಹಿನಿಯನ್ನೂ ಸಮರ್ಥಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಈ ಬೆಳವಣಿಗೆ ನಡುವೆಯೇ ರಾಕೇಶ್‌ ಶೆಟ್ಟಿ ಅವರ ವಿಶ್ವಾಸಾರ್ಹತೆ ಪ್ರಶ್ನೆಯೂ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಅದೇ ರೀತಿ ರಾಕೇಶ್‌ ಶೆಟ್ಟಿ ಅವರ ವಿರುದ್ಧ ಕೆ ಪಿ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿರುವ ಹಿನ್ನೆಲೆಯಲ್ಲಿ ವಿಶ್ವಾಸಾರ್ಹತೆಗೆ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಮುಜುಗರ ಸನ್ನಿವೇಶದಲ್ಲೂ ಕಾಂಗ್ರೆಸ್‌ ಸಿಕ್ಕಿಹಾಕಿಕೊಂಡಿದೆ.  ವಿಶ್ವಾಸಾರ್ಹತೆ ವಿಚಾರ ಕುರಿತು ಎದ್ದಿರುವ ಪ್ರಶ್ನೆಗಳನ್ನು  ಕಾಂಗ್ರೆಸ್ಸಿಗರು ಹೇಗೆ ಎದುರಿಸುತ್ತಾರೆ ಎನ್ನುವುದು ಕೂಡ ಕುತೂಹಲ ಮೂಡಿಸಿದೆ.

ಹಣ ಸುಲಿಗೆ, ನಕಲಿ ದಾಖಲೆ ಸೃಷ್ಟಿ, ಫೋರ್ಜರಿ, ಒಳ ಸಂಚು, ಬೆದರಿಕೆ ಆರೋಪದಡಿಯಲ್ಲಿ ಕಟ್ಟಡ ನಿರ್ಮಾಣ ಕಂಪನಿ ರಾಮಲಿಂಗಂ ಕನ್ಸ್‌ಟ್ರಕ್ಷನ್ಸ್‌ನ ನಿರ್ದೇಶಕ ಚಂದ್ರಕಾಂತ ರಾಮಲಿಂಗಂ ಎಂಬುವರು ದೂರು ಸಲ್ಲಿಸಿದ್ದ ದಿನದಂದೇ  ರಾಕೇಶ್‌ ಶೆಟ್ಟಿ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

ಅಲ್ಲದೆ ಇದೇ ದೂರಿನಲ್ಲಿ ಉಲ್ಲೇಖಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೆಸರೂ ಎಫ್‌ಐಆರ್‌ನಲ್ಲಿ ಪ್ರಸ್ತಾಪಿತವಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬೆಂಗಳೂರಿನ ಕೆ ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕಂಪನಿ ನಿರ್ದೇಶಕ ಚಂದ್ರಕಾಂತ್‌ ಎಂಬುವರು ಸೆ. 24ರಂದು ದೂರು ಸಲ್ಲಿಸಿದ ದಿನದಂದೇ ಎಫ್‌ಐಆರ್‌ ಕೂಡ ದಾಖಲಾಗಿರುವುದು ವಿಶೇಷ.

ಅಮಿತ್‌ ಶಾ ಹೆಸರು ಪ್ರಸ್ತಾಪ; ಕಾಂಗ್ರೆಸ್ಸಿಗರ ಪ್ರತಿಕ್ರಿಯೆ ಏನು?

ಯಲಹಂಕ ಮತ್ತು ಆಂಧ್ರ ಗಡಿ ಭಾಗದಲ್ಲಿ ಕಂಪನಿ ಅಭಿವೃದ್ಧಿಪಡಿಸಿದ್ದ ಟೋಲ್‌ ರಸ್ತೆಯ ಪಕ್ಕ ಜಾಹೀರಾತು ಫಲಕ ಅಳವಡಿಸುವ ಸಂಬಂಧ 2020ರ ಜೂನ್‌ನಲ್ಲಿ ರಾಕೇಶ್‌ ಶೆಟ್ಟಿ ಅವರು ಕರೆ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿರುವ ಚಂದ್ರಕಾಂತ್‌, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನಿರಂತರ ಸಂಪರ್ಕದಲ್ಲಿದ್ದಾರೆ. ನಿಮಗೆ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಯಾವುದಾದರೂ ಕೆಲಸ ಮಾಡಿಕೊಡಲು ನಿಮಗೆ ಸಹಾಯ ಮಾಡುತ್ತೇನೆ. ನನ್ನ ಸಂಪರ್ಕದಲ್ಲಿರಿ ಎಂದು ಭೇಟಿ ವೇಳೆಯಲ್ಲಿ ಹೇಳಿಕೊಂಡಿದ್ದರು ಎಂದು ದೂರಿನಲ್ಲಿ ಪ್ರಸ್ತಾಪಿಸಿರುವುದು ತಿಳಿದು ಬಂದಿದೆ. ಆದರೆ ಈ ಕುರಿತು ಕಾಂಗ್ರೆಸ್ಸಿಗರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

100 ಕೋಟಿ ಟೆಂಡರ್‌ ಕುರಿತು ಚರ್ಚಿಸಿದ್ದರೇ?

ಚಂದ್ರಕಾಂತ್‌ ಅವರು 2020ರ ಜೂನ್‌ 4ನೇ ವಾರದಲ್ಲಿ ಮತ್ತಿಕೆರೆಯಲ್ಲಿರುವ ಪವರ್‌ ಟಿ ವಿ ಕಚೇರಿಯಲ್ಲಿ ರಾಕೇಶ್‌ ಶೆಟ್ಟಿ ಅವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ನವ ಮಂಗಳೂರು ಬಂದರು ಟ್ರಸ್ಟ್‌ 2019ರ ಸೆ.24ರಂದು ಕರೆದಿದ್ದ 100 ಕೋಟಿ ರು.ಮೊತ್ತದ ಟೆಂಡರ್‌ ಕಾಮಗಾರಿ ಕುರಿತಂತೆ ಚರ್ಚಿಸಿದ್ದರು ಎಂಬ ಮಾಹಿತಿ ದೂರಿನಿಂದ ಗೊತ್ತಾಗಿದೆ.

ಈ ವೇಳೆಯಲ್ಲಿ ರಾಕೇಶ್‌ ಶೆಟ್ಟಿ ಅವರು ತಕ್ಷಣವೇ ಮುಖ್ಯ ಇಂಜಿನಿಯರ್‌ ಪರಿತೋಶ್‌ ಬಾಲಾ ಎಂಬುವರಿಗೆ ದೂರವಾಣಿ ಮೂಲಕ ಮಾತನಾಡಿದ್ದರು. ‘ತಾವು ಅಮಿತ್‌ ಶಾ ಹೋಂ ಮಿನಿಸ್ಟರ್‌ ಆಫೀಸ್‌ನಿಂದ ಕರೆ ಮಾಡುತ್ತಿರುವುದಾಗಿ ಹೇಳಿ, ರಾಮಲಿಂಗಂ ಕನ್ಸ್‌ಟ್ರಕ್ಷನ್ಸ್‌ ಪ್ರೈ ಲಿ., ಗೆ ಕಾಂಟ್ರಾಕ್ಟ್‌ ಕೊಡಿ ಎಂದು ಹೇಳಿದ್ದರು,’ ಎಂದು ದೂರಿನಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.

ಆದರೆ ಟೆಂಡರ್‌ ಪ್ರಕ್ರಿಯೆಯಲ್ಲಿ ಸಕ್ಷಮ ಪ್ರಾಧಿಕಾರದ ಮೇಲೆ ಪ್ರಭಾವ ಬೀರಿದ್ದರಿಂದಾಗಿ ಟೆಂಡರ್‌ನಿಂದ ಅನರ್ಹಗೊಳಿಸಲಾಗಿತ್ತು. ಹಾಗೆಯೇ ರಾಕೇಶ್‌ ಶೆಟ್ಟಿ ಅವರ ಫೋನ್‌ ನಂಬರ್‌ನ್ನು ಎನ್‌ಎಂಪಿಟಿಯ ಮುಖ್ಯ ಇಂಜಿನಿಯರ್‌ ಅವರು ವಿಚಕ್ಷಣಾ ವಿಭಾಗಕ್ಕೆ ನೀಡಿ ಈ ಕುರಿತು ವಿಚಾರಣೆ ನಡೆಸಬೇಕು ಎಂದು ಸೂಚಿಸಿದ್ದರು. ಈ ಸಂಬಂಧ ಕಡತವನ್ನು ಪರಿಶೀಲಿಸಬಹುದು. ತಮ್ಮ ಕಂಪನಿಯು ಮಾಡುತ್ತಿದ್ದ ಪ್ರತಿಯೊಂದು ಕೆಲಸಗಳನ್ನು ಬಲವಂತವಾಗಿ ತಿಳಿದುಕೊಳ್ಳುತ್ತಿದ್ದರು ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

140 ಕೋಟಿಯಲ್ಲಿ ಕಮಿಷನ್‌ ಕೇಳಿದ್ದರೇ?

ತಮ್ಮ ಕಂಪನಿಗೆ ಬಿಡಿಎನಿಂದ 140 ಕೋಟಿ ಮೊತ್ತ ಬಾಕಿ ಬರಬೇಕಿದೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದ ರಾಕೇಶ್‌ ಶೆಟ್ಟಿ ಅವರು ಅದನ್ನು ಕ್ಲಿಯರ್‌ ಮಾಡಿಸುತ್ತೇನೆ ನನಗೆ 5 ಪರ್ಸೆಂಟ್‌ ಕಮಿಷನ್‌ ಕೊಡಿ ಎಂದು ಕೇಳಿದ್ದರು ಆದರೆ ತಾವು ಒಪ್ಪಿಕೊಂಡಿರಲಿಲ್ಲ ಎಂದು ದೂರಿನಲ್ಲಿ ಚಂದ್ರಕಾಂತ್‌ ಪ್ರಸ್ತಾಪಿಸಿದ್ದಾರೆ. ಇಷ್ಟೊಂದು ಕಮಿಷನ್‌ನ್ನು ನೀಡಲು ಸಾಧ್ಯವಿಲ್ಲ ಎಂದು ರಾಕೇಶ್‌ ಶೆಟ್ಟಿ ಅವರಿಗೆ ತಿಳಿಸಿದ್ದರು ಎಂಬ ಅಂಶ ದೂರಿನಿಂದ ತಿಳಿದು ಬಂದಿತ್ತು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಾಕಿ ಉಳಿಸಿಕೊಂಡಿದ್ದ 140 ಕೋಟಿ ಪೈಕಿ 7.79 ಕೋಟಿ ರು.ಮೊತ್ತದ ಬಿಲ್‌ಗಳನ್ನು 2020ರ ಆಗಸ್ಟ್‌ 26ರಂದು ಬಿಡುಗಡೆ ಮಾಡಿತ್ತು. ಈ ವೇಳೆಯಲ್ಲಿ ತಮ್ಮನ್ನು ಸಂಪರ್ಕಿಸಿದ್ದ ರಾಕೇಶ್‌ ಶೆಟ್ಟಿ ಅವರು, ಈ ಹಣವನ್ನು ನಾನೇ ಬಿಡುಗಡೆ ಮಾಡಿಸಿರುತ್ತೇನೆಂದು ತಮಗೆ ಕಮಿಷನ್‌ ಹಣವನ್ನು ಕೊಡಬೇಕು ಎಂದು ಬಲವಂತವಾಗಿ ಹಿಂಸೆ ನೀಡಿದ್ದರು. ಅಲ್ಲದೆ ತಮ್ಮ ಹಾಗೂ ತಮ್ಮ ಕಂಪನಿಯ ಹೆಸರನ್ನು ಹಾಳು ಮಾಡಲು ಬೆದರಿಕೆ ಹಾಕಿದ್ದರು. ಹೀಗಾಗಿ 2020ರ ಆಗಸ್ಟ್‌ 22ರಂದು 25,00,000 ರು. ನಗದನ್ನು ರಾಕೇಶ್‌ ಶೆಟ್ಟಿ ಅವರಿಗೆ ನೀಡಿದ್ದರು ಎಂದು ಎಫ್‌ಐಆರ್‌ನಲ್ಲಿ ಪ್ರಸ್ತಾಪಿತವಾಗಿತ್ತು.

ಇದಾದ ನಂತರ 2020ರ ಸೆ.26ರಂದು ತಮ್ಮ ಕಂಪನಿ ಹೆಸರನ್ನು ಪವರ್‌ ಟಿ ವಿ ಯಲ್ಲಿ ಬಿತ್ತರಿಸಿ ಕಂಪನಿಯು ಕೆಲವು ರಾಜಕೀಯ ವ್ಯಕ್ತಿಗಳ ಸಂಪರ್ಕದಲ್ಲಿದೆ ಎಂದು ಹೇಳಿತ್ತು. ಅಲ್ಲದೆ ತಮಗೆ ಕರೆ ಮಾಡಿ ತಮ್ಮ ಕಂಪನಿಯಿಂದ ರಾಜಕೀಯ ವ್ಯಕ್ತಿಗಳಿಗೆ ಹಣವನ್ನು ಕೊಡಲಾಗಿದೆ ಎಂದು ಹೇಳಬೇಕು ಎಂದು ಬಲವಂತವಾಗಿ ತಮ್ಮಿಂದ ಹೇಳಿಸಿ ಅದನ್ನು ರೆಕಾರ್ಡ್‌ ಮಾಡಿಕೊಂಡು ಪ್ರಸಾರ ಮಾಡಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ. ಇವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಯನ್ನು ದಾಖಲಿಸಿ ತನಿಖೆ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದರು.

Your generous support will help us remain independent and work without fear.

Latest News

Related Posts