ಬೆಂಗಳೂರು; ಜೀವ ವಿಮೆ ರಕ್ಷಣೆ ನೀಡುವ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಮತ್ತು ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯು ರಾಜ್ಯದ ಕಲ್ಬುರ್ಗಿ ಸೇರಿದಂತೆ ಒಟ್ಟಾರೆ 12 ಜಿಲ್ಲೆಗಳಲ್ಲಿ ತೃಪ್ತಿಕರವಾಗಿಲ್ಲ. ರಾಜ್ಯಮಟ್ಟದ ಬ್ಯಾಂಕರ್ಗಳ ಸಮಿತಿಯು 2025ರ ಡಿಸೆಂಬರ್ 31ರ ಅಂತ್ಯಕ್ಕೆ ಲಭ್ಯವಿದ್ದ ಅಂಕಿ ಅಂಶಗಳ ಆಧರಿಸಿ ಈಚೆಗೆ ನಡೆದಿದ್ದ ಸಭೆಯಲ್ಲಿ ಮಂಡನೆಯಾದ ಅಂಕಿ ಅಂಶಗಳ ಪ್ರಕಾರ ಒಟ್ಟಾರೆ 12 ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಗತಿ ಕಾಣದ ಕಾರಣ ಈ ಎರಡೂ ಯೋಜನೆಗಳು 12 ಜಿಲ್ಲೆಗಳಲ್ಲಿ ಮುಗ್ಗುರಿಸಿ ಬಿದ್ದಿವೆ ಎಂದು ಸಭೆಯು ಅತೃಪ್ತಿ ವ್ಯಕ್ತಪಡಿಸಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯೂ ಸಹ ಈ 12 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರವನ್ನೂ ಬರೆದಿದೆ. ಇದರ ಪ್ರತಿಯು ‘ದಿ ಫೈಲ್’ ಗೆ ಲಭ್ಯವಾಗಿದೆ.
12 ಜಿಲ್ಲೆಗಳ ಪಟ್ಟಿ
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆ ಕಲ್ಬುರ್ಗಿ, ಬೆಂಗಳೂರು ನಗರ, ಬೀದರ್, ಯಾದಗಿರಿ, ಕೊಪ್ಪಳ, ವಿಜಯನಗರ, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ, ರಾಯಚೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಈ ಎರಡೂ ಯೋಜನೆಗಳೂ ಮುಗ್ಗುರಿಸಿ ಬಿದ್ದಿವೆ. ಮತ್ತು ಈ ಯೋಜನೆಗಳ ಅನುಷ್ಠಾನವು ತೃಪ್ತಿಕರವಾಗಿಲ್ಲ ಎಂದು ಆರ್ಥಿಕ ಇಲಾಖೆಯ ಟಿಪ್ಪಣಿಯಿಂದ ತಿಳಿದು ಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಅಡಿಯಲ್ಲಿ ಅರ್ಹ ಜನಸಂಖ್ಯೆಯ ಶೇ.87ರಷ್ಟು ಜರು, ಗದಗ್ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಅಡಿಯಲ್ಲಿ ಅರ್ಹ ಜನಸಂಖ್ಯೆಯ ಶೇ. 42ರಷ್ಟು ಜನರು ಹೆಚ್ಚಿನ ವ್ಯಾಪ್ತಿ ಹೊಂದಿದ್ದಾರೆ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಿದೆ.
ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯು ರಾಜ್ಯದ ಸರಾಸರಿ ವ್ಯಾಪ್ತಿಯ ಶೇ. 28ರಷ್ಟಿದೆ. ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿಯಲ್ಲಿ ಶೇ. 52ರಷ್ಟಿದೆ. ಆದರೆ ಕಲ್ಬುರ್ಗಿ ಸೇರಿದಂತೆ ರಾಜ್ಯದ 12 ಜಿಲ್ಲೆಗಳಲ್ಲಿ ಸರಾಸರಿಗಿಂತಲೂ ಕೆಳಗಿದೆ. ಇದು ಗಂಭೀರವಾದ ವಿಷಯ ಎಂದು ಆರ್ಥಿಕ ಇಲಾಖೆಯು ತನ್ನ ಟಿಪ್ಪಣಿಯಲ್ಲಿ ಎಚ್ಚರಿಸಿದೆ.
‘ವಿಶೇಷವಾಗಿ ಅರ್ಹ ಜನಸಂಖ್ಯೆಗೆ ಹೋಲಿಸಿದರೆ ನೋಂದಣಿ ಪ್ರಕ್ರಿಯೆಯು ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ. 2026ರ ಫೆ.17ರಂದು ಸಭೆ ಕೂಡ ನಡೆದಿದೆ. ಹೀಗಾಗಿ ಈ ಜಿಲ್ಲೆಗಳ ಜಿಲ್ಲಾ ವ್ಯವಸ್ಥಾಪಕರುಗಳು ಈ ನಿಟ್ಟಿನಲ್ಲಿ ತುರ್ತಾಗಿ ಕ್ರಮಗಳನ್ನು ಕೈಗೊಳ್ಳಬೇಕು,’ ಎಂದು ಆರ್ಥಿಕ ಇಲಾಖೆಯು ಸೂಚಿಸಿರುವುದು ತಿಳಿದು ಬಂದಿದೆ.

ಅಲ್ಲದೇ ಈ ಜಿಲ್ಲೆಗಳಲ್ಲಿ 2026ರ ಮಾರ್ಚ್ ಅಂತ್ಯದೊಳಗೆ ಸಾಧನೆಯು ಕನಿಷ್ಠ ಶೇ. 5ರಷ್ಟು ಅರ್ಹ ಜನಸಂಖ್ಯೆಯ ವ್ಯಾಪ್ತಿಯ ಹೆಚ್ಚಳವನ್ನು ದಾಖಲಿಸಬೇಕು. ಈ ಮೂಲಕ ರಾಜ್ಯದ ಸರಾಸರಿ ಮಟ್ಟವನ್ನು ಮೀರಬೇಕು. ಇದರಲ್ಲಿ ಯಾವುದೇ ವಿಳಂಬ ಹಾಗೂ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
2025ರ ಸೆಪ್ಟಂಬರ್ ಅಂತ್ಯಕ್ಕೆ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಲ್ಲಿ 89 ಲಕ್ಷ ಖಾತೆಗಳನ್ನು ತೆರೆಯಲಾಗಿದೆ. ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿಯಲ್ಲಿ 2.13 ಕೋಟಿ ಖಾತೆಯನ್ನು ತೆರೆಯಲಾಗಿದೆ.

ಯೋಜನೆಗಳ ಸ್ವರೂಪವೇನು?
ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯು ಒಂದು ವರ್ಷದ ಕವರ್ ಟರ್ಮ್ ಜೀವ ವಿಮಾ ಯೋಜನೆಯಾಗಿದೆ. ವರ್ಷದಿಂದ ವರ್ಷಕ್ಕೆ ನವೀಕರಿಸಬಹುದಾದ, ಯಾವುದೇ ಕಾರಣದಿಂದಾಗಿ ಮರಣ ಹೊಂದಿದಲ್ಲಿ ಜೀವ ವಿಮಾ ರಕ್ಷಣೆಯನ್ನು ನೀಡುತ್ತದೆ.
ಯಾವುದೇ ಕಾರಣದಿಂದಾಗಿ ಚಂದಾದಾರರ ಮರಣಕ್ಕೆ ರೂ.2 ಲಕ್ಷ ಪರಿಹಾರವನ್ನು ಪಾವತಿಸಲಾಗುತ್ತದೆ. ಪ್ರತಿ ಚಂದಾದಾರರಿಗೆ ವಾರ್ಷಿಕ ರೂ.436 ಪ್ರೀಮಿಯಂ ಪಾವತಿಸಲಿದೆ. ಪಾಲಿಸಿ ಅವಧಿಯ ಮಧ್ಯದಲ್ಲಿ ಮೊದಲ ಬಾರಿಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಡಿಯಲ್ಲಿ ದಾಖಲಾಗುವವರಿಗೆ, ಜೂನ್, ಜುಲೈ ಮತ್ತು ಆಗಸ್ಟ್ನಲ್ಲಿ ನೋಂದಣಿಗೆ – ರೂ.436/- ರ ಪೂರ್ಣ ವಾರ್ಷಿಕ ಪ್ರೀಮಿಯಂ ಪಾವತಿಸಬೇಕು. ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನೋಂದಣಿಗಾಗಿ – ರೂ. 342/- ರ ಅನುಪಾತದ ಪ್ರೀಮಿಯಂ ಅನ್ನು ಪಾವತಿಸಬೇಕು.
ಡಿಸೆಂಬರ್, ಜನವರಿ ಮತ್ತು ಫೆಬ್ರವರಿಯಲ್ಲಿ ನೋಂದಣಿಗಾಗಿ – ರೂ. 228/- ರ ಅನುಪಾತ ಪ್ರೀಮಿಯಂ ಅನ್ನು ಪಾವತಿಸಲಾಗುತ್ತದೆ. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳ ನೋಂದಣಿಗೆ – ರೂ. 114/- ರ ಅನುಪಾತ ಪ್ರೀಮಿಯಂ ಅನ್ನು ಪಾವತಿಸಬೇಕು. ಆದಾಗ್ಯೂ, ಯೋಜನೆಯಡಿಯಲ್ಲಿ ನವೀಕರಣದ ಸಮಯದಲ್ಲಿ ಪೂರ್ಣ ವರ್ಷದ ಪ್ರೀಮಿಯಂ @ ರೂ 436/- ಅನ್ನು ಪಾವತಿಸಲಾಗುತ್ತದೆ.
ಯೋಜನೆಗೆ ದಾಖಲಾದ ದಿನಾಂಕದಿಂದ ಮೊದಲ 30 ದಿನಗಳಲ್ಲಿ (ಧಾರಣೆಯ ಅವಧಿ) ಸಂಭವಿಸುವ ಮರಣಕ್ಕೆ (ಅಪಘಾತದ ಕಾರಣದಿಂದಾಗಿ ಹೊರತುಪಡಿಸಿ) ವಿಮಾ ರಕ್ಷಣೆ ಲಭ್ಯವಿರುವುದಿಲ್ಲ ಮತ್ತು ಹೊಣೆಗಾರಿಕೆ ಅವಧಿಯಲ್ಲಿ ಮರಣ (ಅಪಘಾತದ ಕಾರಣದಿಂದಾಗಿ ಹೊರತುಪಡಿಸಿ) ಸಂಭವಿಸಿದಲ್ಲಿ, ಯಾವುದೇ ಕ್ಲೈಮ್ ಅನ್ನು ಸ್ವೀಕರಿಸುವುದಿಲ್ಲ.
ಈ ಯೋಜನೆಯನ್ನು ಎಲ್ಐಸಿ ಅಥವಾ ಬ್ಯಾಂಕುಗಳು / ಅಂಚೆ ಕಚೇರಿಯ ಸಹಭಾಗಿತ್ವದಲ್ಲಿ ಉತ್ಪನ್ನವನ್ನು ನೀಡಲು ಸಿದ್ಧರಿರುವ ಯಾವುದೇ ಇತರ ಜೀವ ವಿಮಾ ಕಂಪನಿಯು ನಿರ್ವಹಿಸುತ್ತದೆ.
‘ಸ್ವಯಂ-ಡೆಬಿಟ್’ ಪ್ರಕ್ರಿಯೆಯ ಮೂಲಕ ಖಾತೆದಾರರಿಂದ ನಿಗದಿತ ದಿನಾಂಕದಂದು ಅಥವಾ ಅದಕ್ಕೂ ಮೊದಲು, ಆಯ್ಕೆಯ ಪ್ರಕಾರ ಒಂದೇ ಕಂತಿನಲ್ಲಿ ಸೂಕ್ತ ಪ್ರೀಮಿಯಂ ಅನ್ನು ವಸೂಲಿ ಮಾಡುವುದು ಮತ್ತು ವಿಮಾ ಕಂಪನಿಗೆ ಬಾಕಿ ಇರುವ ಮೊತ್ತವನ್ನು ವರ್ಗಾಯಿಸುವುದು ಭಾಗವಹಿಸುವ ಬ್ಯಾಂಕ್ / ಅಂಚೆ ಕಚೇರಿಯ ಜವಾಬ್ದಾರಿಯಾಗಿದೆ.
ನಿಗದಿತ ನಮೂನೆಯಲ್ಲಿ ನೋಂದಣಿ ನಮೂನೆ / ಸ್ವಯಂ-ಡೆಬಿಟ್ ಅಧಿಕಾರ / ಸಮ್ಮತಿ ಮತ್ತು ಘೋಷಣೆ ನಮೂನೆಯನ್ನು ಭಾಗವಹಿಸುವ ಬ್ಯಾಂಕ್ / ಅಂಚೆ ಕಚೇರಿಯು ಪಡೆಯಬೇಕು ಮತ್ತು ಉಳಿಸಿಕೊಳ್ಳಬೇಕು. ಕ್ಲೈಮ್ ಸಂದರ್ಭದಲ್ಲಿ, ಎಲ್ಐಸಿ / ವಿಮಾ ಕಂಪನಿಯು ಅದನ್ನು ಸಲ್ಲಿಸಲು ಕೋರಬಹುದು. ಎಲ್ಐಸಿ / ವಿಮಾ ಕಂಪನಿಯು ಯಾವುದೇ ಸಮಯದಲ್ಲಿ ಈ ದಾಖಲೆಗಳನ್ನು ಕೋರುವ ಹಕ್ಕನ್ನು ಸಹ ಕಾಯ್ದಿರಿಸಿದೆ.
ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ
ಭಾರತ ಸರ್ಕಾರವು ಮೇ 2015 ರಲ್ಲಿ ಈ ಯೋಜನೆಯನ್ನು ಆರಂಭಿಸಿದೆ. ಪ್ರಾರಂಭಿಸಿದ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯು ವ್ಯಕ್ತಿಗಳಿಗೆ ಕೈಗೆಟುಕುವ ವೈಯಕ್ತಿಕ ಅಪಘಾತ ವಿಮೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಆಕಸ್ಮಿಕ ಸಾವು ಅಥವಾ ಅಂಗವೈಕಲ್ಯದ ಸಂದರ್ಭದಲ್ಲಿ ಆರ್ಥಿಕ ಭದ್ರತೆ. ಇದು ಅಪಘಾತಗಳಿಂದ ಉಂಟಾಗುವ ಸಾವು ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯು ವಿಮಾ ಕವರೇಜ್ ನೀಡುತ್ತದೆ.
ಹಾಗೆಯೇ ಪಾಲಿಸಿದಾರರು ಮತ್ತು ಅವರ ಕುಟುಂಬಗಳಿಗೆ ಕನಿಷ್ಠ ವಾರ್ಷಿಕ ಪ್ರೀಮಿಯಂನಲ್ಲಿ ನಿರ್ಣಾಯಕ ಸುರಕ್ಷತಾ ಜಾಲವಾಗಿದೆ. ಯೋಜನೆಯ ವಿಮಾ ಘಟಕವನ್ನು ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳು ಮತ್ತು ಇತರ ಖಾಸಗಿ ವಲಯದ ವಿಮಾ ಪೂರೈಕೆದಾರರು ನಿರ್ವಹಣೆ ಮಾಡುತ್ತವೆ.
ಆಕಸ್ಮಿಕ ಮರಣ ಸಂಭವಿಸಿದಲ್ಲಿ, ನಾಮನಿರ್ದೇಶಿತರು 2 ಲಕ್ಷ ರೂ.ಗಳ ವಿಮಾ ಮೊತ್ತವನ್ನು ಪಡೆಯುತ್ತಾರೆ. ಅಪಘಾತದಿಂದಾಗಿ ಶಾಶ್ವತ ಒಟ್ಟು ಅಂಗವೈಕಲ್ಯ ಉಂಟಾದರೆ, ಪಾಲಿಸಿದಾರರು 2 ಲಕ್ಷ ರೂ.ಗಳ ವಿಮಾ ಮೊತ್ತವನ್ನು ಪಡೆಯುತ್ತಾರೆ. ಒಂದು ಕಣ್ಣಿನ ದೃಷ್ಟಿ ನಷ್ಟ ಅಥವಾ ಒಂದು ಕೈ ಅಥವಾ ಪಾದದ ಸಂಪೂರ್ಣ ಮತ್ತು ಸರಿಪಡಿಸಲಾಗದ ನಷ್ಟ – ಚಂದಾದಾರರಿಗೆ ರೂ. 1 ಲಕ್ಷ ಸಿಗುತ್ತದೆ.
ಈ ಯೋಜನೆಯು ಒಂದು ವರ್ಷದ ವೈಯಕ್ತಿಕ ಅಪಘಾತ ವಿಮಾ ಯೋಜನೆಯಾಗಿದ್ದು, ವರ್ಷದಿಂದ ವರ್ಷಕ್ಕೆ ನವೀಕರಿಸಬಹುದಾದ, ಅಪಘಾತದಿಂದಾಗಿ ಸಾವು ಅಥವಾ ಅಂಗವೈಕಲ್ಯದ ವಿರುದ್ಧ ರಕ್ಷಣೆ ನೀಡುತ್ತದೆ. ಪ್ರತಿ ಸದಸ್ಯರಿಗೆ ವಾರ್ಷಿಕ 20 ರು ಪ್ರೀಮಿಯಂ ಪಾವತಿಸಲಾಗುತ್ತದೆ.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಗಳು 2 ಲಕ್ಷ ರೂ.ಗಳ ವಿಮೆ ಕವರೇಜ್ ಹೊಂದಿರುವುದರಿಂದ ಎರಡೂ ಒಂದೇ ಎಂಬ ಗೊಂದಲ ಆಗಬಹುದು. ಆದರೆ, ಇವರೆಡೂ ಬೇರೆ ಬೇರೆ ಆಗಿವೆ.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯು ಅಪಘಾತ ವಿಮಾ ಯೋಜನೆಯಾಗಿದೆ. ಅದು ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯಕ್ಕೆ ರಕ್ಷಣೆ ನೀಡುತ್ತದೆ. ಮತ್ತೊಂದೆಡೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯು, ಯಾವುದೇ ಕಾರಣದಿಂದಾಗಿ ಸಾವನ್ನು ಒಳಗೊಳ್ಳುವ ಜೀವ ವಿಮಾ ಯೋಜನೆಯಾಗಿದೆ. ಜೀವನ ಜ್ಯೋತಿ ಬಿಮಾ ಯೋಜನೆ ಅಂಗ ವೈಕಲ್ಯಕ್ಕೆ ಪರಿಹಾರವನ್ನು ನೀಡುವುದಿಲ್ಲ. ಇದೊಂದು ಟರ್ಮ್ ಇನ್ಸುರೆನ್ಸ್ ಅಂದರೆ ಜೀವ ವಿಮೆ ಮಾತ್ರ ಆಗಿದೆ.







