ಕೃಷ್ಣಾ ಮೇಲ್ದಂಡೆ ಭೂ ಸ್ವಾಧೀನ; 2 ಲಕ್ಷ ಕೋಟಿಗೆ ಏರಿದ ಪರಿಹಾರ, ಸರ್ಕಾರಿ ವಕೀಲರು, ಅಧಿಕಾರಿಗಳ ಪಿತೂರಿ?

ಬೆಂಗಳೂರು; ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ಭೂ ಸ್ವಾಧೀನದ ಪರಿಹಾರಕ್ಕೆ ಸಂಬಂಧಿಸಿದಂತೆ  ಉದ್ಭವಿಸಿರುವ ವ್ಯಾಜ್ಯಗಳಲ್ಲಿ  ಸರ್ಕಾರಿ ವಕೀಲರು ಉತ್ತಮವಾಗಿ ವಾದ ಮಂಡಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲದೇ ಸರ್ಕಾರಿ ಅಧಿಕಾರಿಗಳು ಮತ್ತು ಸರ್ಕಾರಿ ವಕೀಲರು ಪಿತೂರಿ ನಡೆಸಿ ಸಾರ್ವಜನಿಕ ಹಿತಾಸಕ್ತಿಗೆ ಗಂಭೀರವಾಗಿ ಹೊಡೆತ ಕೊಟ್ಟಿದ್ದಾರೆ.

 

ಈ ಸಂಗತಿಯನ್ನು ಕಂದಾಯ ಇಲಾಖೆಯು ನೇರ ಮತ್ತು ನಿರ್ಭೀತವಾಗಿ ರಾಜ್ಯ ಅಡ್ವೋಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಅವರಿಗೆ ಲಿಖಿತವಾಗಿ ತಿಳಿಸಿದೆ.

 

ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ವ್ಯಾಪ್ತಿಯಲ್ಲಿರುವ  ಬಾಗಲಕೋಟೆ, ಮುಧೋಳ ಸುತ್ತಮುತ್ತಲ ಪ್ರದೇಶಗಳ ಭೂ ಸ್ವಾಧೀನ, ಪುನರ್ವಸತಿ ಕಾಯ್ದೆ 2013ರ ಪ್ರಕಾರ ನ್ಯಾಯಯುತ ಪರಿಹಾರದ ಹಕ್ಕು ಮತ್ತು ದಾಖಲಾಗಿರುವ ಪ್ರಕರಣಗಳನ್ನು ಪಾರದರ್ಶಕತೆ ಅಡಿಯಲ್ಲಿ ವಿಚಾರಣೆ ಮಾಡುತ್ತಿರುವ ಪ್ರಕ್ರಿಯೆಗಳಲ್ಲಿ  ಸರ್ಕಾರಿ ವಕೀಲರು ಮತ್ತು ಸರ್ಕಾರಿ ಅಧಿಕಾರಿಗಳು ಸಾರ್ವಜನಿಕ ಹಿತಾಸಕ್ತಿ ವಿರುದ್ಧವಾಗಿ ಹೇಗೆಲ್ಲಾ ಪಿತೂರಿ ನಡೆಸಿದ್ದಾರೆ ಎಂದು ಖುದ್ದು ಕಂದಾಯ ಇಲಾಖೆಯೇ ಅನಿವಾರ್ಯವಾಗಿ ಬಾಯಿ ಬಿಟ್ಟಿದೆ.

 

ಕಂದಾಯ ಇಲಾಖೆಯು ಈ ಸಂಬಂಧ ರಾಜ್ಯ ಅಡ್ವೋಕೇಟ್‌ ಜನರಲ್‌ ಶಶಿಕಿರಣ್ ಶೆಟ್ಟಿ ಅವರಿಗೆ 2025ರ ನವೆಂಬರ್‍‌ 7ರಂದು ಬರೆದಿರುವ ಪತ್ರವು, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದಲ್ಲಿನ ಬಹುದೊಡ್ಡ ಪಿತೂರಿಯನ್ನು ಅನಾವರಣಗೊಳಿಸಿದೆ. ಈ ಸಂಬಂಧ ಕಂದಾಯ ಇಲಾಖೆ ಅಧಿಕಾರಿಗಳು ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಚರ್ಚಿಸಿದ್ದರು ಎಂದು ಗೊತ್ತಾಗಿದೆ.

 

ಇಲಾಖೆಯು ರಾಜ್ಯ ಅಡ್ವೋಕೇಟ್ ಜನರಲ್‌ ಅವರಿಗೆ ಬರೆದಿರುವ ಪತ್ರವು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಬಾಗಲಕೋಟೆ ಜಿಲ್ಲಾ ನ್ಯಾಯಾಲಯವು ಭೂ ಪರಿಹಾರಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶಗಳೆಲ್ಲವನ್ನೂ ಪರಿಗಣಿಸಿದರೇ ಭೂ ಸ್ವಾಧೀನ ವೆಚ್ಚವು ಸುಮಾರು 2 ಲಕ್ಷ ಕೋಟಿ ರುಗಳಾಗುತ್ತವೆ. ಇದು ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ ಮೂಲಭೂತ ಸವಾಲುಗಳನ್ನು ಒಡ್ಡಲಿದೆ ಎಂದು ಕಂದಾಯ ಇಲಾಖೆಯು, ರಾಜ್ಯ ಅಡ್ವೋಕೇಟ್‌ ಜನರಲ್‌ ಅವರನ್ನು ಗಮನ ಸೆಳೆದಿದೆ.

 

ಭೂಸ್ವಾಧೀನ ಪ್ರಕ್ರಿಯೆಯು ವಿವಿಧ ಸಮಸ್ಯೆಗಳನ್ನು ಒಳಗೊಂಡಿವೆ.  ವಿಶೇಷವಾಗಿ ಈ ಸಂಬಂಧ ಹಲವು ಸಂಖ್ಯೆಯಲ್ಲಿ ಮೊಕದ್ದಮೆಗಳನ್ನು ಹೂಡಲಾಗಿದೆ.  ಇದಲ್ಲದೆ, ವಿವಿಧ ಭೂಸ್ವಾಧೀನಗಳಲ್ಲಿ ಸ್ಪಷ್ಟವಾಗಿ ವೈಪರಿತ್ಯಗಳನ್ನು ಹೊಂದಿರುವುದು ಬೆಳಕಿಗೆ ಬಂದಿವೆ. ಯುಕೆಪಿ 3ನೇ ಹಂತದಲ್ಲಿ ಕಂಡು ಬರುತ್ತಿರುವ ಈ ಸಮಸ್ಯೆಗಳು ಎಲ್ಲದರ ಮೇಲೆ ಬೀರುವ ಪರಿಣಾಮಗಳನ್ನು  ಗಮನದಲ್ಲಿಟ್ಟುಕೊಂಡು  ಸಮಗ್ರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಕಂದಾಯ ಇಲಾಖೆಯು, ಅಡ್ವೋಕೇಟ್‌ ಜನರಲ್‌ ಅವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

1.23 ಕೋಟಿಯಿಂದ 23 ಕೋಟಿಗೆ ಹೆಚ್ಚಿದ ಪರಿಹಾರ ಮೊತ್ತ

 

ಯುಕೆಪಿ 3 ರಲ್ಲಿ ಗಮನಿಸಿದಂತೆ, 10 ರಿಂದ 20 ಲಕ್ಷ ವ್ಯಾಪ್ತಿಯಲ್ಲಿ ಅವಾರ್ಡ್‌ಗಳನ್ನು  ಪಡೆದ ಪ್ರಕರಣಗಳಲ್ಲಿ, ಸಿವಿಲ್ ನ್ಯಾಯಾಲಯಗಳು ಪರಿಹಾರವನ್ನು 1.26 ಕೋಟಿಯಿಂದ 23 ಕೋಟಿಗೆ ಹೆಚ್ಚಿಸಿವೆ. ಅಂತಹ ಪ್ರಕರಣಗಳು ಮೇಲ್ಮನವಿ ಅವಧಿಯನ್ನೂ  ದಾಟಿವೆ. ಮೇಲ್ಮನವಿ ಅವಧಿ ಮುಗಿದ ಕಾರಣ ಹೈಕೋರ್ಟ್ ಸಹ  ಮೇಲ್ಮನವಿಗಳನ್ನು ವಜಾಗೊಳಿಸಿದೆ ಎಂದು ಪತ್ರದಲ್ಲಿ ತಿಳಿಸಿದೆ.

 

 

‘ನಾವು ಈ ಅವಾರ್ಡ್‌ಗಳನ್ನು  ಪರಿಗಣಿಸಿದರೆ, ಒಟ್ಟು ಭೂಸ್ವಾಧೀನ ವೆಚ್ಚವು ಸುಮಾರು 2 ಲಕ್ಷ ಕೋಟಿಗಳಷ್ಟಾಗುತ್ತದೆ. ಇದು ಯೋಜನೆಗೆ ಬಹಳ ಮೂಲಭೂತ ಸವಾಲುಗಳನ್ನು ಒಡ್ಡುತ್ತದೆ,’ ಎಂದು ಕಂದಾಯ ಇಲಾಖೆಯು ಆರ್ಥಿಕ ಪರಿಣಾಮಗಳ ಕುರಿತು ರಾಜ್ಯ ಅಡ್ವೋಕೇಟ್‌ ಜನರಲ್‌ ಅವರ ಗಮನ ಸೆಳೆದಿರುವುದು ಗೊತ್ತಾಗಿದೆ.

 

ಪಿತೂರಿ ಅಡಗಿದೆಯೆ?

 

ಸಕಾಲಿಕ ಮೇಲ್ಮನವಿಗಳನ್ನು ಸಲ್ಲಿಸುವಲ್ಲಿ ಮತ್ತು ಉತ್ತಮ ವಾದಗಳನ್ನು ಮಂಡಿಸುವಲ್ಲಿ ಸರ್ಕಾರಿ ಅಧಿಕಾರಿಗಳು, ಸರ್ಕಾರಿ ವಕೀಲರು  ವೈಫಲ್ಯವನ್ನು ತೋರಿಸಿದ್ದಾರೆ. ಈ ಪಿತೂರಿ ನಡವಳಿಕೆಯು ಸಾರ್ವಜನಿಕ ಹಿತಾಸಕ್ತಿಗೆ ಗಂಭೀರ ಹೊಡೆತವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

 

‘ನಾವು ಇಡೀ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು. ಪರಿಶೀಲನೆಗಳು ಮತ್ತು ಸಮತೋಲನಗಳಿಲ್ಲದೆ ಮತ್ತು ವ್ಯವಸ್ಥೆಯ ಸರಿಯಾದ ಕಾರ್ಯಾಚರಣೆಯಿಲ್ಲದೆ ಕೈಗೊಳ್ಳುವ  ಯಾವುದೇ ನಿರ್ಧಾರವು ಅನಿರೀಕ್ಷಿತ ಪರಿಣಾಮಗಳನ್ನು ಉಂಟುಮಾಡಬಹುದು,’ ಎಂದೂ ಕಂದಾಯ ಇಲಾಖೆಯು ರಾಜ್ಯ ಅಡ್ವೋಕೇಟ್‌ ಜನರಲ್‌ ಅವರನ್ನು ಎಚ್ಚರಿಸಿರುವುದು ಗೊತ್ತಾಗಿದೆ.

 

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಒಪ್ಪಂದದ ಐ ತೀರ್ಪಿನಲ್ಲಿ ಕಲಂ 23(ಎ) ರಂತೆ ಪರಿಹಾರ ಧನದ ಮೊತ್ತವು ನಿಗದಿಪಡಿಸಬೇಕಿದ್ದ ಪ್ರಾಧಿಕಾರವು ಭೂಸ್ವಾಧೀನಾಧಿಕಾರಿಗಳ ಐತೀರ್ಪಿಗಿಂತ ಶೇ. 20ರಿಂದ 30 ಪಟ್ಟು ಹೆಚ್ಚಿನ ಭೂ ಪರಿಹಾರ ನಿಗದಿಪಡಿಸುತ್ತಿದೆ. ಇದರ ಬೆನ್ನಲ್ಲೇ ಪ್ರಾಧಿಕಾರದ ನ್ಯಾಯಾಲಯಗಳೂ ಅತೀ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಧನ ಹೆಚ್ಚಳ ಮಾಡುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ಹೊರೆ ಉಂಟಾಗುತ್ತಿದೆ.

 

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ   2022ರ ಆಗಸ್ಟ್‌ 12ರಂದು ಹಿಂದಿನ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪ ಸಮಿತಿ ನಡೆದಿತ್ತು.

 

ಶೇ.30ರವರೆಗೆ ಪರಿಹಾರ ನೀಡಿದರೂ ಇದನ್ನು ಒಪ್ಪದ ರೈತರು ನ್ಯಾಯಾಲಯದ ಕಟಕಟೆ ಏರುತ್ತಿದ್ದಾರೆ. ಹೀಗಾಗಿ ಇದನ್ನು ತಪ್ಪಿಸಲು ಪರಿಹಾರ ಧನದ ಮೊತ್ತವನ್ನು ಶೇ. 50ರವರೆಗೆ ಹೆಚ್ಚಿಸುವುದೇ ಸೂಕ್ತ ಎಂದು ಅಧಿಕಾರಿಗಳು ಸರ್ಕಾರಕ್ಕೆ ಸಲಹೆ ನೀಡಿದ್ದರು.

 

ಯೋಜನೆಯ ಮೂರನೇ ಹಂತಕ್ಕೆ 73,000 ಎಕರೆ ಜಮೀನು, 23,000 ಕಟ್ಟಡಗಳಿಗೆ ಭೂ ಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವ ಹೊತ್ತಿನಲ್ಲೇ ಪ್ರಾಧಿಕಾರದಲ್ಲೇ ಶೇ.20ರಿಂದ ಶೇ.30 ಪಟ್ಟು ಹೆಚ್ಚಿನ ಭೂ ಪರಿಹಾರ ನಿಗದಿಪಡಿಸಿತ್ತು.

 

 

ಒಪ್ಪಂದದ ಐತೀರ್ಪಿನಲ್ಲಿ ಕಲಂ 23(ಎ) ರಡಿ ನೀಡುವ ಪರಿಹಾರ ಧನದ ಮೊತ್ತವು ಕಲಂ 26ರಿಂದ 30 ಅನ್ವಯ ನಿಗದಿಪಡಿಸುವ ಒಟ್ಟು ಮೊತ್ತದ ಮೇಲೆ ಶೇ. 5ಕ್ಕಿಂತ ಕಡಿಮೆ ಇಲ್ಲದಷ್ಟು ಅಥವಾ ಶೇ.10ರಷ್ಟನ್ನು ಮೀರದಂತಿರಬೇಕು ಎಂದು ಸ್ಪಷ್ಟಪಡಿಸಿತ್ತು.  ಇದರ ಪ್ರಕಾರ ಒಂದು ಎಕರೆಗೆ 10.00 ಲಕ್ಷ ಪರಿಹಾರ ನೀಡಲು ಕಲಂ 26ರಡಿ ನಿಗದಿಯಾಗಿದ್ದರೆ ಈ ಮೊತ್ತಕ್ಕೆ ಶೇ.10ರಷ್ಟನ್ನು ಸೇರಿಸಿದರೆ ಒಟ್ಟು 11.00 ಲಕ್ಷ ರು. ಆಗಲಿದೆ. ಇದಕ್ಕೆ ರೈತರು ಒಪ್ಪಂದದ ಐ ತೀರ್ಪು ರಚಿಸಲು ಮುಂದೆ ಬರುವುದಿಲ್ಲ. ಹೀಗಾಗಿ ಶೇ. 10ರಷ್ಟು ಇದ್ದದ್ದನ್ನು ಶೇ.50ರವರೆಗೆ ಹೆಚ್ಚಿಸಿದಲ್ಲಿ ಒಂದು ಎಕರೆಗೆ 15 ಲಕ್ಷ ರು. ನಿಗದಿಪಡಿಸಿದರೆ ರೈತರು ಒಪ್ಪಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದ್ದರು.

 

ಸಚಿವ ಸಂಪುಟ ಉಪ ಸಮಿತಿ ಪರಿಶೀಲನಾ ಸಭೆಗೆ ಮಂಡನೆಯಾಗಿದ್ದ ವಿವರಣಾತ್ಮಕ ಟಿಪ್ಪಣಿ

 

ಪ್ರತಿ ಎಕರೆಗೆ 15 ಲಕ್ಷದಂತೆ ನಿಗದಿಪಡಿಸಿದರೆ ಹೆಚ್ಚುವರಿ ಪರಿಹಾರ ಕೋರಿ ಪ್ರಾಧಿಕಾರಕ್ಕೆ ದಾಖಲಾಗುವ ಪ್ರಕರಣಗಳು ಕಡಿಮೆಯಾಗಲಿವೆ. ಹಾಗೆಯೇ ರೈತರಿಗೆ ಏಕಕಾಲಕ್ಕೆ ಪರಿಹಾರವೂ ದೊರಕುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದರು.

 

ಪ್ರಾಧಿಕಾರದ ನ್ಯಾಯಾಲಯಗಳಲ್ಲಿ 16,000 ಕ್ಕಿಂತ ಹೆಚ್ಚಿನ ಪ್ರಕರಣಗಳಿವೆ. ಹೆಚ್ಚಿನ ಪರಿಹಾರಕ್ಕಾಗಿ ವಿಚಾರಣೆ ಹಂತದಲ್ಲಿವೆ. ಕೆಲವು ಪ್ರಕರಣಗಳಲ್ಲಿ ಜಮೀನಿನ ಮಾರುಕಟ್ಟೆ ಬೆಲೆಯನ್ನು ನಿಗದಿಪಡಿಸಿ ಆದೇಶ ಮಾಡಿದೆ. ಗ್ರಾಮೀಣ ಪ್ರದೇಶದಲ್ಲಿ ಖುಷ್ಕಿ ಜಮೀನಿನ ಪ್ರತಿ ಎಕರೆಗೆ 9,66, 000 ರು. ಮಾರುಕಟ್ಟೆ ಬೆಲೆ ನಿಗದಿಪಡಿಸಿದೆ. ಅದರ ನಾಲ್ಕು ಪಟ್ಟು ಹೆಚ್ಚಳ ಮಾಡಿದಾಗ ಶೇ. 12ರಷ್ಟು ಹೆಚ್ಚುವರಿ ಮಾರುಕಟ್ಟೆ ಬೆಲೆ ಸೇರಿದರೆ ಪ್ರತಿ ಎಕರೆಗೆ 40.00 ಲಕ್ಷ ರು. ಹೆಚ್ಚಳವಾಗಿರುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದರು.

 

ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ನೀರಾವರಿ ಜಮೀನಿನ ಪ್ರತಿ ಎಕರೆಗೆ 14,49,000ರು. ಮಾರುಕಟ್ಟೆ ಬೆಲೆ ನಿಗದಿಪಡಿಸಿತ್ತು.  ಅದರ ನಾಲ್ಕು ಪಟ್ಟು ಹೆಚ್ಚಳ ಮಾಡಿದಾಗ ಶೇ. 12ರ ಹೆಚ್ಚುವರಿ ಮಾರುಕಟ್ಟೆ ಬೆಲೆ ಸೇರಿದರೆ ಪ್ರತಿ ಎಕರೆಗೆ 60.00 ಲಕ್ಷ ರು. ಹೆಚ್ಚಳವಾಗುತ್ತದೆ. ನಗರ ಪ್ರದೇಶದಲ್ಲಿನ (ವಿಜಯಪುರ) ಜಮೀನಿನ ಪ್ರತಿ ಎಕರೆಗೆ 1,01,17,140 ರು. ಮಾರುಕಟ್ಟೆ ಬೆಲೆ ನಿಗದಿಪಡಿಸಿದ್ದು , ಶೇ.12ರಷ್ಟು ಹೆಚ್ಚುವರಿ ಮಾರುಕಟ್ಟೆ ಮತ್ತು ನಷ್ಟ ಭರ್ತಿ ಸೇರಿ ಪ್ರತಿ ಎಕರೆಗೆ 2.51 ಕೋಟಿ ರು. ಹೆಚ್ಚಳವಾಗುತ್ತದೆ. ಹಾಗೆಯೇ ನಗರ ಪ್ರದೇಶದ (ಮುಧೋಳ)ಲ್ಲಿ ಜಮೀನಿನ ಪ್ರತಿ ಎಕರೆಗೆ 2,12,00,000 ಮಾರುಕಟ್ಟೆ ಬೆಲೆ ನಿಗದಿಪಡಿಸಿದ್ದು ಶೇ.12ರಷ್ಟು ಹೆಚ್ಚುವರಿ ಮಾರುಕಟ್ಟೆ ಬೆಲೆ ಹಾಗೂ ನಷ್ಟ ಭರ್ತಿ ಸೇರಿ ಪ್ರತಿ ಎಕರೆಗೆ 5.00 ಕೋಟಿ ಹೆಚ್ಚಳವಾಗುತ್ತದೆ ಎಂದು ಅಧಿಕಾರಿಗಳು ಲೆಕ್ಕಾಚಾರ ಮಂಡಿಸಿದ್ದರು.

 

‘ಆರ್ಥಿಕ ಹೊರೆಯನ್ನು ತಪ್ಪಿಸಿಕೊಳ್ಳಬೇಕಾದರೆ ಸರ್ಕಾರವೇ ಪರಿಹಾರ ಮೊತ್ತವನ್ನು ಶೇ. 50ರಷ್ಟಕ್ಕೆ ಏರಿಸಬೇಕು. ಆಗ ರೈತರು ಇದನ್ನು ಒಪ್ಪಬಹುದು. ಇದರಿಂದ ಹೆಚ್ಚುವರಿ ಪರಿಹಾರ ಕೋರಿ ಪ್ರಾಧಿಕಾರಕ್ಕೆ ದಾಖಲಾಗುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತೆವೆ. ಮತ್ತು ರೈತರಿಗೆ ಏಕಕಾಲಕಕೆ ಪರಿಹಾರವು ದೊರಕುತ್ತದೆ,’ ಎಂದು ಸಲಹೆ ನೀಡಿದ್ದರು.

 

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಲೆಕ್ಕಚಾರದ ಪ್ರಕಾರ   ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತವನ್ನು ಅನುಷ್ಠಾನಗೊಳಿಸಿದ ನಂತರ ಪುನರ್‌ ವಸತಿ, ಪುನರ್‌ ನಿರ್ಮಾಣ ಕೇಂದ್ರ, ಭೂ ಸ್ವಾಧೀನ, ಕಟ್ಟಡಗಳ ನಿರ್ಮಾಣಕ್ಕೆ ಒಟ್ಟಾರೆ 3,161.41 ಕೋಟಿ ರು. ಅನುದಾನ ಅವಶ್ಯಕತೆಯಿದೆ.

 

 

ಪುನರ್‌ ವಸತಿಗಾಗಿ 1,986 ಎಕರೆ ಕ್ಷೇತ್ರಕ್ಕೆ ಭೂ ಸ್ವಾಧೀನಪಡಿಸಿಕೊಳ್ಳಲು ಗುರಿ ನಿಗದಿಪಡಿಸಿಕೊಂಡಿತ್ತು. ಇದಕ್ಕಾಗಿ ಅಂದಾಜು 297.90 ಕೋಟಿ ರು., ಮುಳುಗಡೆ ಜಮೀನು 8,459 ಎಕರೆ ಕ್ಷೇತ್ರಕ್ಕೆ ಭೂ ಸ್ವಾಧೀನಪಡಿಸಿಕೊಳ್ಳಲು 1,268.85 ಕೋಟಿ ರು., ಕಾಲುವೆ ಜಮೀನು 7,752.34 ಎಕರೆ ಕ್ಷೇತ್ರಕ್ಕೆ ಭೂ ಸ್ವಾಧೀನಪಡಿಸಿಕೊಳ್ಳಲು 620.16 ಕೋಟಿ ರು., 6,495 ಕಟ್ಟಡಗಳನ್ನು ಸ್ವಾಧೀನಪಡಿಸಿಕೊಳ್ಳಲು 799.50 ಕೋಟಿ, ಪುನರ್‌ ವಸತಿ, ಪುನರ್‌ ನಿರ್ಮಾಣ ಕೇಂದ್ರಗಳಿಗಾಗಿ 175 ಕೋಟಿ ರು ಸೇರಿದಂತೆ ಒಟ್ಟಾರೆ 3,161.41 ಕೋಟಿ ರು ಅನುದಾನದ ಅವಶ್ಯಕತೆ ಇದೆ ಎಂದು ವಿವರಿಸಲಾಗಿತ್ತು.

 

 

ಐತೀರ್ಪಿನ ತಿದ್ದುಪಡಿ ನಿಯಮಾವಳಿಗಳಲ್ಲಿ ಒಪ್ಪಂದ ಐ ತೀರ್ಪಿಗೆ ಅನುಮತಿ ಕೊಡಲಾಗಿದೆ. ಪ್ರಸ್ತುತ ಮೂರನೇ ಹಂತದಲ್ಲಿ ಇನ್ನೂ 73,000 ಎಕರೆ ಜಮೀನು, 23,000 ಕಟ್ಟಡಗಳಿಗೆ ಭೂ ಸ್ವಾಧೀನ ಮಾಡಿಕೊಳ್ಳಬೇಕಿದೆ. ಹೀಗಾಗಿ ಇನ್ನೂ ಹೆಚ್ಚಿನ ವ್ಯಾಜ್ಯಗಳು ನ್ಯಾಯಾಲಯಗಳಲ್ಲಿ ದಾಖಲಾಗುವ ಸಂಭವವಿದೆ ಎಂದೂ ಅಧಿಕಾರಿಗಳು ವಿವರಿಸಿದ್ದರು.

 

ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 519.6 ಮೀಟರ್‍‌ನಿಂದ 524.256 ಮೀಟರ್‍‌ಗೆ ಎತ್ತರಿಸುವ ಕೃಷ್ಣಾ ಮೇಲ್ದಂಡೆ ಯೋಜನೆ -3 ನೇ ಹಂತದ ಯೋಜನೆಗಾಗಿ ಮುಳುಗಡೆ ಆಗುವ ಮತ್ತು ನಾಲೆಗಾಗಿ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಈಚೆಗಷ್ಟೇ ಸರ್ಕಾರವು ಪರಿಹಾರ ನಿಗದಿ ಮಾಡಿತ್ತು.

 

2023ರಿಂದ ನನೆಗುದಿಯಲ್ಲಿದ್ದ ದರ ನಿಗದಿ ವಿಚಾರ ತಾರ್ಕಿಕ ಅಂತ್ಯ ತಲುಪಿತ್ತು. ನೀರಾವರಿ ಜಮೀನಿಗೆ 40 ಲಕ್ಷ ಮತ್ತು ಒಣ ಭೂಮಿಗೆ ಎಕರೆಗೆ 30 ಲಕ್ಷ ಪರಿಹಾರ ನೀಡಲು ಸರ್ಕಾರವು ಒಪ್ಪಿಗೆ ನೀಡಿತ್ತು.

 

ಕಾಲುವೆಗಾಗಿ ಸುಮಾರು 51,837 ಎಕರೆ ಬೇಕಾಗುತ್ತದೆ. ಇದರಲ್ಲಿ 23,631 ಎಕರೆ ಭೂಮಿಯ ಸ್ವಾಧೀನ ಪ್ರಕ್ರಿಯೆ ನಡೆಸಿ ಕಾಮಗಾರಿ ಕೈಗೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಜಮೀನಿಗೆ ಸಂಬಂಧಿಸಿದಂತೆ ನೀರಾವರಿ ಜಮೀನಿಗೆ ಎಕರೆ 30 ಲಕ್ಷ ಮತ್ತು ಒಣಭೂಮಿಗೆ ಎಕರೆಗೆ 25 ಲಕ್ಷ ದರ ನಿಗದಿ ಮಾಡಲು ಸಂಪುಟವು ತೀರ್ಮಾನಿಸಿತ್ತು. ಕಾಲುವೆ ನಿರ್ಮಾಣಕ್ಕಾಗಿ  ಜಮೀನು ಕಳೆದುಕೊಂಡವರು ಯೋಜನೆಯ ಫಲಾನುಭವಿಗಳಾಗುತ್ತಾರೆ. ಆದ್ದರಿಂದ ಕಡಿಮೆ ದರ ನಿಗದಿ ಮಾಡಿತ್ತು.

 

ಪರಿಹಾರಕ್ಕೆ ಸುಮಾರು 70,000 ಕೋಟಿ ಬೇಕಾಗಲಿದೆ. ಜಮೀನು ಕಳೆದುಕೊಳ್ಳುವ ರೈತರಿಗೆ ಮೂರು ಆರ್ಥಿಕ ವರ್ಷದಲ್ಲಿ ಪರಿಹಾರದ ಮೊತ್ತವನ್ನು ಪಾವತಿಸಲಿದೆ. ಪ್ರತಿ ವರ್ಷ ಇದಕ್ಕಾಗಿ  15 ಸಾವಿರ ಕೋಟಿಯಿಂದ 20 ಸಾವಿರ ಕೋಟಿಯನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು.

 

 

ಭೂ ಸ್ವಾಧೀನ ವಿಚಾರವಾಗಿ ನ್ಯಾಯಾಲಯದಲ್ಲಿ ಅನೇಕ ಪ್ರಕರಣಗಳ ವಿಚಾರಣೆ ಈಗಲೂ ನಡೆಯುತ್ತಿವೆ. ಸುಮಾರು 20 ಸಾವಿರ ಪ್ರಕರಣಗಳು ನ್ಯಾಯಾಲಯದಲ್ಲಿವೆ. 2013ರ ಭೂ ಸ್ವಾಧೀನ ಕಾಯ್ದೆ ಅನ್ವಯ ಈ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಮಾಡಿಕೊಳ್ಳಲು ತೀರ್ಮಾನಿಸಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ ಅವರು ಮುಖ್ಯಮಂತ್ರಿಗೆ ಕಾನೂನು ಸಲಹೆ ನೀಡಿದ್ದರು.

 

 

ಯೋಜನೆಗೆ ಒಟ್ಟಾರೆ 1,33,867 ಎಕರೆ ಜಮೀನಿನ ಅಗತ್ಯವಿದೆ. 75,563 ಎಕರೆ ಮುಳುಗಡೆಯಾಗಲಿದೆ. ಕಾಲುವೆ ನಿರ್ಮಾಣಕ್ಕೆ 51,837 ಎಕರೆ ಜಮೀನು ಬೇಕಿದೆ. ರೈತರ ಪುನರ್ ವಸತಿ ಮತ್ತು ಪುನರ್ ವ್ಯವಸ್ಥೆಗೆ 6,469 ಎಕರೆ ಬೇಕಿದೆ. ಅಲ್ಲದೇ 20 ಸಂಖ್ಯೆಯಲ್ಲಿ ಗ್ರಾಮಗಳು ಮತ್ತು ಪಟ್ಟಣ ವಾರ್ಡ್‌ಗಳೂ ಸಹ ಮುಳುಗಡೆ ಆಗಲಿವೆ.

 

ಬಿಜೆಪಿ ಅವಧಿಯಲ್ಲಿ ನೆನೆಗುದಿಗೆ

 

ಭೂಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಪರಿಹಾರವನ್ನು ಮೂರು ಆರ್ಥಿಕ ವರ್ಷದೊಳಗೆ ನೀಡಲು ತೀರ್ಮಾನಿಸಲಾಗಿದೆ. ಯೋಜನೆಗೆ ಭೂಸ್ವಾಧೀನಪಡಿಸಿಕೊಳ್ಳಲು ರೈತರ ಮನವೊಲಿಸುವುದಾಗಿ ಸಂಬಂಧಪಟ್ಟ ಸಚಿವರು, ಶಾಸಕರು, ರೈತಮುಖಂಡರು ತಿಳಿಸಿದ್ದಾರೆ. ರಾಜ್ಯದ ಜನರಿಗೆ ಒಳಿತು ಮಾಡುವ ಈ ಸಾರ್ಥಕ ಯೋಜನೆಗೆ ಭೂಮಿ ನೀಡಲು ರೈತರು ಸಮ್ಮತಿಸಬಹುದೆಂಬ ಭರವಸೆಯಿದೆ. ಇದೊಂದು ಐತಿಹಾಸಿಕ ತೀರ್ಮಾನ. 2023ರಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಪರಿಹಾರದ ಮೊತ್ತ ಕಡಿಮೆಯಿದ್ದುದ್ದರಿಂದ , ಯಾವ ರೈತರೂ ಭೂಮಿ ನೀಡಲು ಒಪ್ಪಲಿಲ್ಲ ಹಾಗೂ ಯೋಜನೆಗೆ ಚಾಲನೆಯೂ ದೊರೆಯದೇ ನೆನೆಗುದಿಗೆ ಬಿದ್ದಿತ್ತು.

 

ಕಗ್ಗಂಟಾಗಿರುವ ಕೃಷ್ಣಾ ಮೇಲ್ದಂಡೆ ಭೂಸ್ವಾಧೀನ; ನ್ಯಾಯಾಲಯದಲ್ಲಿರುವ ಪ್ರಕರಣಗಳ ಸಂಖ್ಯೆ 28,649!

 

ಯುಕೆಪಿ ಯೋಜನೆಯಡಿ ಒಂದೇ ಹಂತದಲ್ಲಿ ಭೂಸ್ವಾಧೀನ ಕೈಗೊಳ್ಳಲು ಸರಕಾರ ಬದ್ಧವಾಗಿದೆ’’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು.

 

‘ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾಗುವ 73, 020 ಎಕರೆ ಜಮೀನು ಭೂಸ್ವಾಧೀನವನ್ನು ಎರಡು ಹಂತದಲ್ಲಿ ಕೈಗೊಳ್ಳಲು ಈ ಮೊದಲಿನ ಸರಕಾರ ನಿರ್ಧರಿಸಿತ್ತು. ಇದನ್ನು ಬದಲಾಯಿಸಿ ಪ್ರಥಮ ಪ್ರಾಶಸ್ತ್ಯದಲ್ಲಿ ಒಂದೇ ಹಂತದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗುತ್ತದೆ.

 

ಜಮೀನು ಕಳೆದುಕೊಳ್ಳುವ ರೈತರಿಗೆ ಮಾರುಕಟ್ಟೆ ದರ, ಆಸ್ತಿಯ ಮಾಗದರ್ಶಿ ಮೌಲ್ಯ, ಭೂಸ್ವಾಧೀನ ಕಾಯ್ದೆ ಗಮನದಲ್ಲಿರಿಸಿ ನ್ಯಾಯಯುತ ಪರಿಹಾರ ಒದಗಿಸಲಾಗುತ್ತದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಇದಕ್ಕೂ ಮೊದಲು ಸಂತ್ರಸ್ತರ ಮುಖಂಡರ ಅಭಿಪ್ರಾಯ ಪಡೆಯಲಾಗುತ್ತದೆ. ರೈತರಿಗೂ ಅನ್ಯಾಯವಾಗಬಾರದು, ಸರಕಾರಕ್ಕೂ ಹೊರೆಯಾಗದಂತೆ ಸಹಮತದ ನಿರ್ಣಯ ಕೈಗೊಳ್ಳಲಾಗುವುದು’’ ಎಂದು ತಿಳಿಸಿದ್ದರು.

 

ಯುಕೆಪಿ ಮೂರನೇ ಹಂತದಲ್ಲಿ ಆಲಮಟ್ಟಿ ಆಣೆಕಟ್ಟೆಯ ಎತ್ತರವನ್ನು 524 ಮೀ.ವರೆಗೆ ಎತ್ತರಿಸಲು ಸರಕಾರ ಬದ್ಧವಾಗಿದೆ. ಹಂತ, ಹಂತವಾಗಿ ಯೋಜನೆ ಪೂರ್ಣಗೊಳಿಸಲಾಗುತ್ತದೆ. ಯೋಜನೆಗೆ ಮುಳುಗಡೆ ಹೊಂದಲಿರುವ ಜಮೀನು, ಪುನರ್ವಸತಿ ಹಾಗೂ ಕಾಲುವೆ ನಿರ್ಮಾಣಕ್ಕಾಗಿ 1, 33, 867 ಎಕರೆ ಸ್ವಾಧೀನಗೊಳಿಸಬೇಕಿದೆ. ಈವರೆಗೆ 28, 967 ಎಕರೆ ಸ್ವಾಧೀನಪಡಿಸಿಕೊಳ್ಳಲಾಗಿದೆ. 1,04,963 ಎಕರೆ ಸ್ವಾಧೀನ ಬಾಕಿಯಿದೆ.

 

ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾಗಲಿರುವ 188 ಗ್ರಾಮಗಳಿಗೆ ಸಂಬಂಧಿಸಿದಂತೆ 73,020 ಎಕರೆ ಭೂಸ್ವಾಧೀನಪಡಿಸಿಕೊಳ್ಳಬೇಕಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ 20 ಸಾವಿರ ಪ್ರಕರಣಗಳನ್ನು ಹಿಂಪಡೆದುಕೊಂಡು ಸಹಮತದ ಮೂಲಕ ಬಗೆಹರಿಸಲು ಪ್ರಯತ್ನಿಸಬೇಕು’’ ಎಂದು ಸಂತ್ರಸ್ತರ ಮುಖಂಡರಿಗೆ ಸಲಹೆ ನೀಡಿದ್ದರು.

 

1.75 ಲಕ್ಷ ಕೋಟಿ ರು ಅನುದಾನಕ್ಕೆ ಬೇಡಿಕೆ; ಅಗಾಧ ಮೊತ್ತ ಹೊಂದಿಸುವ ಆರ್ಥಿಕ ಸಾಮರ್ಥ್ಯವಿದೆಯೇ?

 

‘‘ಏಕ ಕಾಲಕ್ಕೆ ಭೂಸ್ವಾಧೀನ ಕೈಗೊಳ್ಳಬೇಕು, ಭೂಸ್ವಾಧೀನಕ್ಕೆ ಹೊರಡಿಸುವ ನೋಟಿಫಿಕೇಶನ್‌ಗೆ ಅನುಗುಣವಾಗಿ ಕಾಲಮಿತಿಯಲ್ಲಿಪರಿಹಾರ ವಿತರಿಸಬೇಕು. ನೀರಾವರಿ ಭೂಮಿಗೆ 25 ಲಕ್ಷ ರೂ., ಒಣಬೇಸಾಯಕ್ಕೆ 20 ಲಕ್ಷ ರೂ. ಎಂಬ ಪರಿಹಾರದ ನಿರ್ಧಾರವನ್ನು ಮೊದಲಿನ ಸರಕಾರ ಏಕಪಕ್ಷೀಯವಾಗಿ ಕೈಗೊಂಡಿದೆ, ಅದನ್ನು ಸಂತ್ರಸ್ತರು ಒಪ್ಪಿಕೊಂಡಿಲ್ಲ. ಯುಕೆಪಿ ಯೋಜನೆಗೆ ಅಧಿಕಾರಿಗಳು, ಸಿಬ್ಬಂದಿ ಕೊರತೆಯಿದ್ದು, ಅನುದಾನ ಬಳಕೆಯಾಗುತ್ತಿಲ್ಲ’’ ಎಂದು ಕೃಷ್ಣಾ ಮೇಲ್ದಂಡೆ ಯೋಜನೆ ಬಾಧಿತ ಸಂತ್ರಸ್ತರ ಹೋರಾಟ ಸಮಿತಿ ಗೌರವಾಧ್ಯಕ್ಷ ಅಜಯಕುಮಾರ್‌ ಸರನಾಯಕ ವಿವರಿಸಿದ್ದರು.

Your generous support will help us remain independent and work without fear.

Latest News

Related Posts