ಬೆಂಗಳೂರು: ಲೋಕಾಯುಕ್ತ ದಾಳಿ, ಕಂತೆ ಕಂತೆ ದುಡ್ಡು, ಆಸ್ತಿ, ಆಭರಣ ವಶ. ಇದು ಈಗ ಸಾಮಾನ್ಯವೆಂಬಂತಾಗಿದೆ. ಆದರೆ ಕಳೆದ ಮೂರು ವರ್ಷಗಳಲ್ಲಿ ನಡೆದ ಲೋಕಾಯುಕ್ತ ದಾಳಿಗೆ ಒಳಪಟ್ಟ ಒಬ್ಬರೇ ಒಬ್ಬ ಅಧಿಕಾರಿಗೂ ಇದುವರೆಗೆ ಶಿಕ್ಷೆಯಾಗಿಲ್ಲ.
ಈ ವಿಷಯವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಿಧಾನಸಭೆಗೆ ತಿಳಿಸಿದ್ದಾರೆ. ಶಾಸಕ ಹರೀಶ್ ಗೌಡ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಅವರು, ಕಳೆದ ಮೂರು ವರ್ಷಗಳಲ್ಲಿ ಒಟ್ಟು 222 ಲೋಕಾಯುಕ್ತ ದಾಳಿ ನಡೆದಿವೆ ಎಂದು ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಲೋಕಾಯುಕ್ತ ದಾಳಿಗೆ ಒಳಪಟ್ಟು ನಿಗದಿಗಿಂತ ಹೆಚ್ಚಿನ ಸಂಪತ್ತು ಹಾಗೂ ಬೇನಾಮಿ ಆಸ್ತಿ ಮಾಡಿರುವ ಅಧಿಕಾರಿಗಳು ಹಾಗೂ ನೌಕರರ ಮೇಲೆ ಯಾವ ರೀತಿ ಕಾನೂನು ಕ್ರಮವಾಗಿದೆ? ಎಷ್ಟು ಅಧಿಕಾರಿಗಳು ಶಿಕ್ಷೆಯಿಂದ ಪಾರಾಗಿದ್ದಾರೆ? ಎಷ್ಟು ಅಧಿಕಾರಿಗಳಿಗೆ ಶಿಕ್ಷೆಯಾಗಿದೆ ಎಂಬ ಪೂರ್ಣ ವಿವರ ನೀಡಿ ಎಂದು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೆಳಗಿನಂತೆ ಉತ್ತರಿಸಿದ್ದಾರೆ;
ʻʻಕಳೆದ ಮೂರು ವರ್ಷಗಳಲ್ಲಿಒಟ್ಟು 222 ದಾಳಿ ಪ್ರಕರಣಗಳು ನಡೆದಿವೆ. 118 ಪ್ರಕರಣಗಳು ಇನ್ನೂ ತನಿಖಾ ಹಂತದಲ್ಲಿವೆ. 69 ಪ್ರಕರಣಗಳಲ್ಲಿ ಹೈಕೋರ್ಟ್ ತನಿಖೆಗೆ ತಡೆಯಾಜ್ಞೆ ನೀಡಿದೆ. ಉಳಿದ 35 ಪ್ರಕರಣಗಳಲ್ಲಿ ಎಫ್ಐಆರ್ ಅನ್ನು ರದ್ದು ಪಡಿಸಲಾಗಿದ್ದು, ಈ ಪ್ರಕರಣಗಳ ವಿಚಾರಣೆ ಹೈಕೋರ್ಟ್ನಲ್ಲಿ ಮತ್ತು ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿದೆ. ಆದ್ದರಿಂದ ಇಲ್ಲಿಯವರೆಗೆ ಯಾವುದೇ ಅಧಿಕಾರಿಗೆ ಶಿಕ್ಷೆಯಾಗಿರುವುದಿಲ್ಲ ಹಾಗೂ ಯಾವುದೇ ಅಧಿಕಾರಿಯೂ ಶಿಕ್ಷೆಯಿಂದ ಪಾರಾಗಿರುವುದಿಲ್ಲʼʼ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
2022ರ ಸೆಪ್ಟೆಂಬರ್ 10 ರಿಂದ 2025ರ ಜುಲೈ 31ರವರೆಗೆ ಒಟ್ಟು 222 ದಾಳಿ ನಡೆಸಲಾಗಿದೆ. 223 ಅಧಿಕಾರಿ ಅಥವಾ ನೌಕರರಿಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ʻಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ -1988 (ತಿದ್ದುಪಡಿ ಕಾಯ್ದೆ-2018) ರ ಅಡಿಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಮುಖ್ಯಮಂತ್ರಿಗಳು ವಿಧಾನಸಭೆಗೆ ನೀಡಿದ ಈ ಉತ್ತರದಲ್ಲಿ ವಿವರಿಸಿದ್ದಾರೆ.
ಈ 222 ಪ್ರಕರಣಗಳಲ್ಲಿ 85 ಪ್ರಕರಣಗಳಲ್ಲಿನ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ. ಕೆಲ ಪ್ರಕರಣಗಳಲ್ಲಿ ಅಮಾನತ್ತಿನ ಆದೇಶಕ್ಕೆ ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದು, ಈ ಪ್ರಕರಣಗಳ ಅಧಿಕಾರಿ ಅಥವಾ ನೌಕರರು ಮಾತ್ರ ಅದೇ ಹುದ್ದೆಯಲ್ಲಿ ಮುಂದುವರೆದಿದ್ದಾರೆ ಎಂದು ಈ ಉತ್ತರದಲ್ಲಿ ತಿಳಿಸಲಾಗಿದೆ.
ಈ 222 ಪ್ರಕರಣಗಳಲ್ಲಿ, ಲೋಕೋಪಯೋಗಿ ಇಲಾಖೆಯ 11, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ-3, ಕಂದಾಯ ಇಲಾಖೆಯ 20, ನಗರಾಭಿವೃದ್ಧಿ ಇಲಾಖೆಯ 39, ಇಂಧನ ಇಲಾಖೆಯ 17, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 7, ಆರ್ಥಿಕ ಇಲಾಖೆಯ 10, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 36, ಶಿಕ್ಷಣ ಇಲಾಖೆಯ 2, ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ 11, ಜಲಸಂಪನ್ಮೂಲ ಇಲಾಖೆಯ 7, ಸಾರಿಗೆ ಇಲಾಖೆಯ 4, ಗೃಹ ಇಲಾಖೆಯ 4,ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ 2,ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ 3 ಅಧಿಕಾರಿಗಳ ಮೇಲೆ ದಾಳಿಯಾಗಿತ್ತು.
ಕಾರ್ಮಿಕ ಇಲಾಖೆಯ 2, ಸಮಾಜ ಕಲ್ಯಾಣ ಇಲಾಖೆಯ 2, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ 12, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ 5, ಕೃಷಿ ಇಲಾಖೆಯ 5, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 1, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 3, ಸಣ್ಣ ನೀರಾವರಿ ಇಲಾಖೆಯ 3, ವಸತಿ ಇಲಾಖೆಯ 8 ಮತ್ತು ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಒಬ್ಬರು ಅಧಿಕಾರಿ ಅಥವಾ ನೌಕರರ ಮೇಲೆ ಈ ದಾಳಿ ನಡೆಸಲಾಗಿತ್ತು.
ಸುದ್ದಿಯಾಗಿದ್ದ ಪ್ರಕರಣಗಳ ತನಿಖೆ ಏನಾಗಿದೆ?
2023ರ ಜೂನ್ನಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಕೆ.ಆರ್.ಪುರ ತಾಲೂಕಿನ ತಯಶೀಲ್ದಾರ್ ಅಜಿತ್ ಕುಮಾರ್ ರೈ ಅವರನ್ನು ಅಮಾನತ್ತಿನಲ್ಲಿರಿಸಲಾಗಿದೆ. ಹೈಕೋರ್ಟ್ನಲ್ಲಿ ಅವರ ವಿರುದ್ಧದ ಎಫ್ಐಆರ್ ವಜಾಗೊಂಡಿದ್ದರೂ ಅಮಾನತ್ತು ಮುಂದುವರೆದಿರುವುದು ಮುಖ್ಯಮಂತ್ರಿಗಳ ಉತ್ತರದಿಂದ ಗೊತ್ತಾಗಿದೆ.
ತಂದೆಯ ಮರಣದ ಬಳಿಕ ಕಂದಾಯ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ಎಫ್ಡಿಎ ಹುದ್ದೆ ಪಡೆದುಕೊಂಡಿದ್ದ ಅಜಿತ್ ಕುಮಾರ್ ರೈ ಹಂತ ಹಂತವಾಗಿ ತಹಸೀಲ್ದಾರ್ ಹುದ್ದೆಗೇರಿದ್ದರು. ವೃತ್ತಿ ಜೀವನದ ಬಹುತೇಕ ಅವಧಿಯನ್ನು ದೊಡ್ಡಬಳ್ಳಾಪುರ, ದೇವನಹಳ್ಳಿ ಸುತ್ತಮುತ್ತಲ ಭಾಗಗಳಲ್ಲಿ ಕಳೆದಿದ್ದಾರೆ. ಅದೇ ಭಾಗದಲ್ಲಿಸುಮಾರು 150 ಎಕರೆಗಿಂತ ಜಾಸ್ತಿ ಜಮೀನನ್ನು ಬೇನಾಮಿಗಳ ಹೆಸರುಗಳಲ್ಲಿ ಹೊಂದಿದ್ದಾರೆ.
ಈವರೆಗೆ ಅವರ ನಿವಾಸಗಳಲ್ಲಿ 200 ಎಕರೆ ಜಮೀನಿಗೆ ಸಂಬಂಧಿಸಿದ 150 ರಿಂದ 160 ಕ್ರಯಪತ್ರಗಳು ದೊರೆತಿವೆ. ಈ ಜಮೀನುಗಳ ಮೌಲ್ಯವು ಸುಮಾರು 100 ಕೋಟಿ ರೂ. ದಾಟಬಹುದು. ವಿಲಾಸಿ ಜೀವನ ನಡೆಸುತ್ತಿದ್ದ ಅಜಿತ್ ಕುಮಾರ್ ರೈ ಅವರ ಸಹಕಾರನಗರದ ಮನೆಯಲ್ಲಿ ದುಬಾರಿ ಮೌಲ್ಯದ ಸುಮಾರು 50 ಕೈ ಗಡಿಯಾರಗಳು ಪತ್ತೆಯಾಗಿವೆ ಎಂದು ಈ ದಾಳಿಯ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.
2023ರ ಡಿಸೆಂಬರ್ನಲ್ಲಿ ಮೈಸೂರು ಜಿಲ್ಲೆಯ ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮಹದೇವಸ್ವಾಮಿ ಅವರ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ 6.08 ಕೋಟಿ ರು. ಮೌಲ್ದಯ ಸ್ಥಿರಾಸ್ತಿ ಪತ್ತೆಯಾಗಿತ್ತು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದರು. ಈ ಪ್ರಕರಣದ ತನಿಖೆಗೆ ರಾಜ್ಯ ಹೈಕೋರ್ಟ್ ತಡೆ ನೀಡಿರುವುದು ಮುಖ್ಯಮಂತ್ರಿಗಳು ನೀಡಿರುವ ಉತ್ತರದಿಂದ ಗೊತ್ತಾಗಿದೆ.
2024ರ ಡಿಸೆಂಬರ್ನಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿರುವ ಹಿರಿಯೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಎಸ್. ಸುರೇಶ್ ಅವರ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಒಂದು ಕೆಜಿ ಚಿನ್ನಾಭರಣ, ಐದು ಲಕ್ಷ ನಗದು ಹಾಗೂ ಒಂಬತ್ತು ಎಕರೆ ಜಮೀನು ಹಾಗೂ ಮೂರು ನಿವೇಶನಗಳ ಕಾಗದ ಪತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಪ್ರಕಟಿಸಿದ್ದರು. ಈ ಪ್ರಕಣದ ತನಿಖೆ ಇನ್ನೂ ನಡೆಯುತ್ತಿದೆ ಎಂದು ಈ ಉತ್ತರದಲ್ಲಿ ಹೇಳಲಾಗಿದೆ.
2024ರ ನವೆಂಬರ್ನಲ್ಲಿ ಕೆಎಸ್ಆರ್ಟಿಸಿಯ ರಾಮನಗರ ಘಟಕದಲ್ಲಿ ವಿಭಾಗೀಯ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ನಿವೃತ್ತರಾಗಿದ್ದ ಪ್ರಕಾಶ್ ವಿ. ಅವರ ಮನೆಯ ಮೇಲೆ ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ 4.26 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿತ್ತು ಎಂದು ಲೋಕಾಯುಕ್ತ ಪೊಲೀಸರು ಪ್ರಕಟಿಸಿದ್ದರು. ಈ ಪ್ರಕರಣದ ತನಿಖೆಯು ಇನ್ನೂ ನಡೆಯುತ್ತಿದೆ ಎಂದು ಮುಖ್ಯಮಂತ್ರಿಗಳು ನೀಡಿದ ಉತ್ತರದಿಂದ ಗೊತ್ತಾಗಿದೆ.
2024ರ ನವೆಂಬರ್ನಲ್ಲಿ ಬೀದರ್ನ ಉಪ ತಹಶೀಲ್ದಾರ್ ಹಾಗೂ ಜಿಲ್ಲಾ ತರಬೇತಿ ಸಂಸ್ಥೆಯ (ಡಿಟಿಐ) ಉಪ ನಿರ್ದೇಶಕ ರವೀಂದ್ರಕುಮಾರ್ ರೊಟ್ಟೆ ಅವರ ಮನೆಯ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು 4 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿ ಪತ್ತೆಹಚ್ಚಿರುವುದಾಗಿ ತಿಳಿಸಿದ್ದರು. ಅವರ ಸೇವಾವಧಿಯಲ್ಲಿ ಗಳಿಸಿದ ಆದಾಯಕ್ಕಿಂತ ಆಸ್ತಿ ಹೆಚ್ಚಿರುವುದು ಗೊತ್ತಾಗಿದೆ ಎಂದು ಹೇಳಿದ್ದರು. ಈ ಪ್ರಕರಣದ ವಿಚಾರಣೆಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂಬುದು ಕೂಡ ಈ ಉತ್ತರದಲ್ಲಿ ದಾಖಲಾಗಿದೆ.
2023ರ ಏಪ್ರಿಲ್ನಲ್ಲಿ ಬಿಬಿಎಂಪಿ ಯಲಹಂಕ ವಲಯದ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕ ಗಂಗಾಧರಯ್ಯ ಅವರಿಗೆ ಸಂಬಂಧಿಸಿದ ಮೂರು ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ 1.40 ಕೋಟು ರು. ನಗದು ಪತ್ತೆಯಾಗಿತ್ತು. ಇದಲ್ಲದೆ, ಯಲಹಂಕ, ಜೆ.ಸಿ.ನಗರ ಮತ್ತು ಹೆಬ್ಬಾಳದಲ್ಲಿ 12 ಪ್ಲ್ಯಾಟ್, ನೆಲಮಂಗದಲ್ಲಿ 1.5 ಕೋಟಿ ಮೌಲ್ಯದ ಐದು ಎಕರೆ ಜಮೀನು, ಮಲ್ಲೇಶ್ವರದಲ್ಲಿ 3.5 ಕೋಟಿ ಮೌಲ್ಯದ ನಿವೇಶನ ಹೊಂದಿರುವುದನ್ನು ಪತ್ತೆಹಚ್ಚಿರುವುದಾಗಿ ಲೋಕಾಯುಕ್ತ ಪೊಲೀಸರು ಪ್ರಕಟಿಸಿದ್ದರು.
ಅಲ್ಲದೆ ಒಂದು ಕೋಟಿ ರು. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿರುವುದಾಗಿಯೂ ತಿಳಿಸಿದ್ದರು. ಈ ದಾಳಿ ಪ್ರಕರಣದ ತನಿಖೆ ಇನ್ನೂ ನಡೆಯುತ್ತಲೇ ಇದೆ ಎಂದು ಮುಖ್ಯಮಂತ್ರಿಗಳು ನೀಡಿದ ಉತ್ತರದಲ್ಲಿ ತಿಳಿಸಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಲೋಕಾಯುಕ್ತ ದಾಳಿಗೆ ಒಳಗಾದ ಇಲಾಖೆಗಳ ಪೈಕಿ ನಗರಾಭಿವೃದ್ಧಿ ಇಲಾಖೆ (39 ಪ್ರಕರಣ) ಮೊದಲ ಸ್ಥಾನದಲ್ಲಿದೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (36 ಪ್ರಕರಣ) ಎರಡನೇ ಸ್ಥಾನದಲ್ಲಿದೆ. ಕಂದಾಯ ಇಲಾಖೆ (20 ಪ್ರಕರಣ) ಮೂರನೇ ಸ್ಥಾನದಲ್ಲಿದೆ ಎಂದು ಈ ಉತ್ತರದಿಂದ ತಿಳಿದು ಬಂದಿದೆ.
ಸರ್ಕಾರಿ ನೌಕರರ ಆಸ್ತಿ ವಿವರ; ಮಾಹಿತಿ ನೀಡದ ಮುಖ್ಯಸ್ಥರ ವರ್ತನೆಗೆ ಗರಂ, ರಂಗ ಪ್ರವೇಶ ಮಾಡಿದ ಲೋಕಾಯುಕ್ತ
ಸರ್ಕಾರಿ ನೌಕರರ ಆಸ್ತಿ ವಿವರ ಮತ್ತು ಮಾಹಿತಿ ನೀಡಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಲೋಕಾಯುಕ್ತ ಸಂಸ್ಥೆಯು ಪತ್ರ ಬರೆದಿತ್ತು. ಆದರೆ ಈ ವಿವರಗಳನ್ನು ಸರ್ಕಾರವು ಲೋಕಾಯುಕ್ತಕ್ಕೆ ವಹಿಸಲು ಮುಂದಾಗಿರಲಿಲ್ಲ. ಸರ್ಕಾರಿ ನೌಕರರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.