ಬೆಂಗಳೂರು: ಕೇಂದ್ರ ರೈಲ್ವೆ ಖಾತೆಯ ಈಗಿನ ರಾಜ್ಯ ಸಚಿವ ವಿ ಸೋಮಣ್ಣ ಅವರ ಪುತ್ರರಿಬ್ಬರು ನಿರ್ದೇಶಕರಾಗಿದ್ದ ಮಾತಾ ಮಿನರಲ್ಸ್ ಕಂಪನಿಯು ಅನಧಿಕೃತ ಗಣಿಗಾರಿಕೆ ಮತ್ತು ಕಬ್ಬಿಣದ ಅದಿರು ಸಾಗಾಣಿಕೆ ಮಾಡಿರುವ ಪ್ರಕರಣದಲ್ಲಿ 53.12 ಕೋಟಿ ರು ದಂಡದ ಮೊತ್ತವನ್ನು ಕಂದಾಯ ಬಾಕಿಯೆಂದು ಪರಿಗಣಿಸಿ ವಸೂಲು ಮಾಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶರು, ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
53.12 ಕೋಟಿ ರು ದಂಡದ ಮೊತ್ತವನ್ನು ಕಳೆದ 12 ವರ್ಷಗಳಿಂದಲೂ ವಸೂಲು ಮಾಡಿಲ್ಲ ಎಂದು ‘ದಿ ಫೈಲ್’ ದಾಖಲೆ ಸಹಿತ 2025ರ ಜುಲೈ 21ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
6.33 ಲಕ್ಷ ಮೆಟ್ರಿಕ್ ಟನ್ ಅದಿರು ಸಾಗಾಣಿಕೆ; ಮಾತಾ ಮಿನರಲ್ಸ್ನಿಂದ ವಸೂಲಾಗದ 53.12 ಕೋಟಿ
ಈ ವರದಿ ಪ್ರಕಟಿಸಿದ ಒಂದು ವಾರದಲ್ಲಿ ಅಂದರೆ 2025ರ ಜುಲೈ 28ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಗಿರೀಶ್ ಅವರು ದಂಡ ವಸೂಲಿಯನ್ನು ಕಂದಾಯ ಬಾಕಿಯೆಂದು ಪರಿಗಣಿಸಿ ವಸೂಲು ಮಾಡಬೇಕು ಎಂದು ಪತ್ರ ಬರೆದಿದ್ದಾರೆ.
ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಮಾತಾ ಮಿನರಲ್ಸ್ ಪ್ರೈವೈಟ್ ಲಿಮಿಟೆಡ್ನಿಂದ ಬರಬೇಕಾದ ಬಾಕಿಯ ಹಣವನ್ನು ಮೈನ್ಸ್ ಅಂಡ್ ಮಿನರಲ್ಸ್ (ರೆಗ್ಯುಲೇಷನ್ ಅಂಡ್ ಡೆವಲಪ್ಮೆಂಟ್ ) 1957ನೇ ಕಾಯ್ದೆಯ 25ನೇ ಅಧಿನಿಯಮ ಅನ್ವಯ ಬಾಕಿ ಹಣವನ್ನು ಭೂ ಕಂದಾಯವೆಂದು ಪರಿಗಣಿಸಿ ವಸೂಲಿ ಮಾಡಿ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಬೇಕು,’ ಎಂದು ಜಿಲ್ಲಾಧಿಕಾರಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿರುವುದು ಗೊತ್ತಾಗಿದೆ.

ಮಾತಾ ಮಿನರಲ್ಸ್ ಪ್ರೈ ಲಿ ನಿಂದ (ಗಣಿ ಗುತ್ತಿಗೆ ಸಂಖ್ಯೆ 2600) (1975) ನಿಯಮಬಾಹಿರವಾಗಿ ಗಣಿಗಾರಿಕೆ ನಡೆಸಿರುವ ಸಂಬಂಧ 2004ರಿಂದ 2009ನೇ ಸಾಲಿಗೆ 53 ಕೋಟಿ 12 ಲಕ್ಷ 20 ಸಾವಿರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಬರಬೇಕಿದೆ. ನಿಯಮಬಾಹಿರವಾಗಿ ಗಣಿಗಾರಿಕೆ ನಡೆಸಿ ಅದಿರನ್ನು ಸಾಗಾಣಿಕೆ ಮಾಡಿರುವುದರಿಂದ ಎಂಎಂಡಿಆರ್ ಕಾಯಿದೆ 1957ರ ಕಲಂ 25(1) ಅನ್ವಯ ಸರ್ಕಾರಕ್ಕೆ ಬರಬೇಕಾದ ಬಾಕಿಯನ್ನು ಭೂ ಕಂದಾಯ ಎಂದು ಪರಿಗಣಿಸಿ ವಸೂಲಿ ಮಾಡಲು ಅವಕಾಶ ಕಲ್ಪಿಸಿದೆ ಎಂದು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಈ ಮೊದಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದಲೇ ದಂಡ ವಸೂಲು ಮಾಡಲು ಕ್ರಮ ಕೈಗೊಂಡಿತ್ತು. ಆದರೆ ವಸೂಲಿ ಮಾಡುವಲ್ಲಿ ಇಲಾಖೆಯು ವಿಫಲವಾಗಿತ್ತು.
ಹೀಗಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 190ರ ಪ್ರಕಾರ 52.12 ಕೋಟಿ ರು.ಗಳನ್ನು ಭೂ ಕಂದಾಯದ ಬಾಕಿ ಎಂದು ಪರಿಗಣಿಸಿ ವಸೂಲು ಮಾಡಲು ಪತ್ರ ಬರೆದಿರುವುದು ಗೊತ್ತಾಗಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೈಗೊಂಡಿದ್ದ ಕ್ರಮಗಳೇನು?
52.12 ಕೋಟಿ ರು ವಸೂಲು ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಕಾನೂನು ಪ್ರಕಾರ ಎಲ್ಲಾ ಕ್ರಮಗಳನ್ನೂ ಕೈಗೊಂಡಿತ್ತು. ವಸೂಲಾತಿ ಪತ್ರವನ್ನು ಕಂಪನಿಗೆ ಕಳಿಸಿತ್ತು. ಅಲ್ಲದೇ ವಸೂಲಾತಿ ಪತ್ರವನ್ನು ದೃಢೀಕರಿಸಿದ್ದ ಇಲಾಖೆಯು ಅದನ್ನು ಸಮರ್ಥಿಸಿಕೊಂಡಿತ್ತು.

ಕಂಪನಿಯ ಚರ ಮತ್ತು ಸ್ಥಿರ ಸ್ವತ್ತುಗಳ ಮಾಹಿತಿಯು ಇಲಾಖೆಯಲ್ಲಿ ಲಭ್ಯವಿರಲಿಲ್ಲ. ಹೀಗಾಗಿ ಕಂದಾಯ ಇಲಾಖೆಯಿಂದ ಪಡೆಯಲು ನಿರ್ಧರಿಸಿತ್ತು ಎಂದು ನಿರ್ದೇಶಕರು ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

ವರ್ಷದ ಹಿಂದೆಯೇ ಪತ್ರ ಬರೆದಿತ್ತು
53.12 ಕೋಟಿ ರು ದಂಡದ ಮೊತ್ತವನ್ನು ವಸೂಲು ಮಾಡಬೇಕು ಎಂದು 2024ರ ಆಗಸ್ಟ್ 3ರಂದು ತುಮಕೂರು ಜಿಲ್ಲೆಯ ಉಪ ನಿರ್ದೇಶಕರು ಸರ್ಕಾರಕ್ಕೆ ಬರೆದಿದ್ದರು.
ಉಪ ನಿರ್ದೇಶಕರ ಪತ್ರದಲ್ಲೇನಿತ್ತು?
ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಮೂಡಲಪಾಳ್ಯ ಮತ್ತು ಕೊಂಡ್ಲಿ ಗ್ರಾಮಗಳ ವ್ಯಾಪ್ತಿಯಲ್ಲಿ ಮಾತಾ ಮಿನರಲ್ಸ್ ಗೆ ಮಂಜೂರಾಗಿದ್ದ ಗಣಿ ಗುತ್ತಿಗೆ (ಸಂಖ್ಯೆ 2600 (1975)ಯ ಪ್ರದೇಶದಲ್ಲಿ ಗಣಿಗಾರಿಕೆ ಯೋಜನೆ ಇಲ್ಲದೇ 2004ರಿಂದ 2006ರ ಸಾಲಿನಲ್ಲಿ ಗಣಿಗಾರಿಕೆ ನಡೆಸಲಾಗಿದೆ.
ಹಾಗೂ 2006ರಿಂದ 2009ನೇ ಸಾಲಿನಲ್ಲಿ ಗಣಿಗಾರಿಕೆ ಯೋಜನೆಯಲ್ಲಿ ನಿಗದಿಪಡಿಸಿರುವ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಗಣಿಗಾರಿಕೆ ನಡೆಸಿದೆ ಕಬ್ಬಿಣ ಅದರಿನ್ನು ಉತ್ಪಾದಿಸಿ, ಸಾಗಾಣಿಕೆ ಮಾಡಿದೆ. ಇದು ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ ಎಂದು ಪರಿಗಣಿಸಿ ಖನಿಜದ ಮೌಲ್ಯವನ್ನು ವಸೂಲು ಮಾಡಬೇಕು ಎಂದು ಮಹಾಲೇಖಪಾಲರ ತಂಡವು (2013ರ ಫೆ.5) ಆಕ್ಷೇಪಣೆ ವ್ಯಕ್ತಪಡಿಸಿದೆ.

ಗಣಿಗಾರಿಕೆ ಯೋಜನೆ ಇಲ್ಲದಿದ್ದರೂ 2004ರಿಂದ 2006ರೆಗೆ ಗಣಿಗಾರಿಕೆ ನಡೆಸಿ 3,56, 466 ಮೆಟ್ರಿಕ್ ಟನ್ನಷ್ಟು ಕಬ್ಬಿಣದ ಅದಿರನ್ನು ಉತ್ಪಾದನೆ ಮಾಡಿ ಸಾಗಾಣಿಕೆ ಮಾಡಲಾಗಿದೆ. ಇದರ ಒಟ್ಟು ಮೌಲ್ಯವು 24.47 ಕೋಟಿ ರು, ಆಗಿದೆ. 2006ರಿಂದ 2009ವರೆಗೆ 2,77, 295 ಮೆಟ್ರಿಕ್ ಟನ್ ಕಬ್ಬಿಣದ ಅದಿರು ಉತ್ಪಾದನೆ ಮಾಡಿ ಸಾಗಾಣಿಕೆ ಮಾಡಲಾಗಿದೆ. ಇದರ ಒಟ್ಟು ಮೌಲ್ಯವು 28.65 ಕೋಟಿ ರು ಆಗಿದೆ. ಒಟ್ಟಾರೆ 6,33,761 ಮೆಟ್ರಿಕ್ ಟನ್ನಷ್ಟು ಕಬ್ಬಿಣ ಅದಿರು ಉತ್ಪಾದಿಸಿ ಸಾಗಾಣಿಕೆ ಮಾಡಲಾಗಿದೆ. ಒಟ್ಟಾರೆ ಮೌಲ್ಯವು 53.12 ಕೋಟಿ ರು ಯಷ್ಟಿದೆ ಎಂದು ಸಿಎಜಿಯ ಆಕ್ಷೇಪಣೆಯ ಮಾಹಿತಿಯನ್ನು ಉಲ್ಲೇಖಿಸಿತ್ತು.
ಮಹಾಲೇಖಪಾಲರ ಆಕ್ಷೇಪಣೆಯಂತೆ ಒಟ್ಟು 53.12 ಕೋಟಿ ರುಗಳ ಖನಿಜ ಮೌಲ್ಯವನ್ನು ಅಂತಿಮ ನೋಟೀಸ್ ದಿನಾಂಕದಿಂದ 15 ದಿನದೊಳಗಾಗಿ ಈ ಕಚೇರಿಗೆ ಪಾವತಿಸಬೇಕು. ಈ ಮೊತ್ತವನ್ನು ಪಾವತಿಸದಿದ್ದಲ್ಲಿ ಭೂ ಕಂದಾಯ ಬಾಕಿ ಎಂದು ಪರಿಗಣಿಸಬೇಕು. ಆರ್ಅರ್ಸಿ ಜಾರಿ ಮಾಡಿ ವಸೂಲಿಗೆ ಕ್ರಮ ಕೈಗೊಳ್ಳಲು ಕೇಂದ್ರ ಕಚೇರಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಅಂತಿಮ ನೋಟೀಸ್ ನೀಡಲಾಗಿದೆ ಎಂದು ಪತ್ರದಲ್ಲಿ ವಿವರಿಸಿತ್ತು.
‘ಆದರೆ ಗುತ್ತಿಗೆದಾರರು ಇದುವರೆಗೂ ಯಾವುದೇ ಸಮಜಾಯಿಷಿ ನೀಡಿರುವುದಿಲ್ಲ. ಹಾಗೂ ದಂಡ/ಬಾಕಿ ಮೊತ್ತವನ್ನು ಪಾವತಿಸಿರುವುದಿಲ್ಲ. ಆದ್ದರಿಂದ ಎಂಎಂ(ಡಿಅಂಡ್ಆರ್) ಕಾಯ್ದೆ 1957ರ ಕಲಂ 25ರಂತೆ ಗಣಿಗುತ್ತಿಗೆಗೆ ಸಂಬಂಧಿಸಿದಂತೆ ಬಾಕಿಯನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲಾತಿಗಾಗಿ ಆರ್ಆರ್ಸಿ ಜಾರಿ ಮಾಡಲು ಮುಂದಿನ ಕ್ರಮ ಕೈಗೊಳ್ಳಬೇಕು,’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತುಮಕೂರು ಜಿಲ್ಲೆಯ ಉಪ ನಿರ್ದೇಶಕರು ಇಲಾಖೆಯ ನಿರ್ದೇಶಕರಿಗೆ 2024ರ ಆಗಸ್ಟ್ 3ರಂದು ವರದಿ ನೀಡಿದ್ದರು.

ಕೇಂದ್ರ ಸಚಿವ ವಿ ಸೋಮಣ್ಣ ಅವರ ಕುಟುಂಬ ಒಡೆತನದಲ್ಲಿದ್ದ ಮಾತಾ ಮಿನರಲ್ಸ್, ಮಾಜಿ ಶಾಸಕ ಅನಿಲ್ ಲಾಡ್ ಒಡೆತನದ ಕಂಪನಿಯೂ ಸೇರಿದಂತೆ ತೀವ್ರ ತರದ ಅಕ್ರಮ ಗಣಿಗಾರಿಕೆ ನಡೆಸಿದ್ದ ಐದು ಕಂಪನಿಗಳ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಮಾಡಿದ್ದ ಶಿಫಾರಸ್ಸನ್ನು ಸಿದ್ದರಾಮಯ್ಯ ಅವರು ಅನುಷ್ಠಾನಗೊಳಿಸಿರಲಿಲ್ಲ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲೇ ಈ ಶಿಫಾರಸ್ಸು, ಸಚಿವ ಸಂಪುಟದ ಮುಂದಿತ್ತು. ಈ ಶಿಫಾರಸ್ಸಿನಂತೆ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿನ ಕಾಂಗ್ರೆಸ್ ಸರ್ಕಾರವು ಸಿಬಿಐ ತನಿಖೆಗೆ ವಹಿಸಲು ಆದೇಶಿಸಿರಲಿಲ್ಲ. ಆ ನಂತರ ಬಂದ ಸರ್ಕಾರಗಳೂ ಸಹ ಈ ಐದು ಗಣಿ ಗುತ್ತಿಗೆಗಳ ಕುರಿತು ಸಿಬಿಐ ತನಿಖೆಗೆ ವಹಿಸಲು ಕ್ರಮ ವಹಿಸಿರಲಿಲ್ಲ.
ಮಾತಾ ಸೇರಿ 5 ಗಣಿ ಗುತ್ತಿಗೆಗಳ ವಿರುದ್ಧ ಸಿಬಿಐ ತನಿಖೆ; ಶಿಫಾರಸ್ಸು ಕೈಬಿಟ್ಟು ಸೋಮಣ್ಣರನ್ನು ರಕ್ಷಿಸಿದ್ದರೇ ಸಿದ್ದು?
ಉನ್ನತ ಮಟ್ಟದ ಸಮಿತಿಯು 2011ರ ಅಕ್ಟೋಬರ್ 24ರಂದು ಸರ್ಕಾರಕ್ಕೆ ಸಲ್ಲಿಸಿದ್ದ ವರದಿ ಹಾಗೂ ಶಿಫಾರಸ್ಸುಗಳನ್ನು ಒಪ್ಪಿಕೊಳ್ಳಬೇಕು. ಸಚಿವ ಸಂಪುಟ ಟಿಪ್ಪಣಿಯ ಕಂಡಿಕೆ 15ರಲ್ಲಿ ನಮೂದಿಸಿರುವಂತೆ ಉನ್ನತ ಮಟ್ಟದ ಸಮಿತಿ ಮಾಡಿರುವ ಸಲಹೆಗಳನ್ನು ಒಪ್ಪಿಕೊಂಡು ಅದರಂತೆ ಕ್ರಮ ವಹಿಸಲು ಒಪ್ಪಿಗೆ ನೀಡಬೇಕು ಎಂದು ಸಚಿವ ಸಂಪುಟದ ಮುಂದೆ ಕೋರಿತ್ತು.

ಅಲ್ಲದೇ ಲೋಕಾಯುಕ್ತರು 2011ರಂದು ಸರ್ಕಾರಕ್ಕೆ ಸಲ್ಲಿಸಿದ್ದ ವರದಿ ಮತ್ತು ಅದನ್ನಾಧರಿಸಿ ಕ್ರಮ ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳ ಕುರಿತು ಉನ್ನತ ಮಟ್ಟದ ಸಮಿತಿಯು ಸೂಚಿಸಿರುವ ಕ್ರಮಗಳಿಗೆ (ಪುಟ 11-17, ಅನುಬಂಧ 5) ಅನುಮೋದನೆ ನೀಡಬೇಕು ಎಂದೂ ಕೋರಿತ್ತು.
ಇದೇ ಪ್ರಸ್ತಾವನೆಯಲ್ಲಿಯೇ ತೀವ್ರ ತರದ ಅಕ್ರಮ ಗಣಿಗಾರಿಕೆ ಎಸಗಿರುವ ಡೆಕ್ಕನ್ ಮೈನಿಂಗ್, ಕೆನರಾ ಮಿನರಲ್ಸ್, ಲತಾ ಮೈನಿಂಗ್, ಮಾತಾ ಮಿನರಲ್ಸ್ ಮತ್ತು ಆರ್ ಪ್ರವೀಣ್ ಚಂದ್ರ ಅವರ ವಿರುದ್ಧ ಸಿಬಿಐ ತನಿಖೆ ನಡೆಸಲು ಶಿಫಾರಸ್ಸು ಮಾಡಬಹುದು ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿದ್ದ ಕೆ ಅಮರನಾರಾಯಣ ಅವರು ಶಿಫಾರಸ್ಸು ಮಾಡಿದ್ದರು.

ಈ ಕುರಿತು ಕ್ರಮ ಕೈಗೊಂಡಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ‘ದಿ ಫೈಲ್’ ಆರ್ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ನೀಡಿರುವ ಉತ್ತರದ ಪ್ರಕಾರ ಈ ಐದೂ ಗಣಿ ಗುತ್ತಿಗೆಗಳ ವಿರುದ್ಧ ಸಿಬಿಐ ತನಿಖೆಗೆ ವಹಿಸಿರುವ ಕುರಿತು ಯಾವುದೇ ಆದೇಶ, ಮಾಹಿತಿಯೂ ಲಭ್ಯವಿಲ್ಲ ಎಂದು ಉತ್ತರ ಒದಗಿಸಿತ್ತು.
ಇಲಾಖೆ ನೀಡಿರುವ ಉತ್ತರದಲ್ಲೇನಿದೆ?
ಸರ್ವೋಚ್ಛ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ಉನ್ನತಾಧಿಕಾರಸ್ಥ ಸಮಿತಿಯು ತೀವ್ರವಾಗಿ ಅಕ್ರಮ ನಡೆದಿರುವ 51 ಸಿ ವರ್ಗದ ಗಣಿ ಗುತ್ತಿಗೆಗಳನ್ನು ವರ್ಗೀಕರಿಸಿದೆ. ಈ 51 ಸಿ ವರ್ಗದ ಗಣಿ ಗುತ್ತಿಗೆಗಳ ಪೈಕಿ ಡೆಕ್ಕನ್ ಮೈನಿಂಗ್ ಕಂಪನಿ ಲಿ.., ಕೆನರಾ ಮಿನರಲ್ಸ್ ಲಿ., ಲತಾ ಮೈನಿಂಗ್ ಕಂಪನಿ ಲಿ., ಮತ್ತು ಮಾತಾ ಮಿನರಲ್ಸ್ ಪ್ರೈವೈಟ್ ಲಿ., ಗಣಿ ಗುತ್ತಿಗೆಗಳು ಸಹ ಒಳಗೊಂಡಿರುತ್ತದೆ. ಈ ಗಣಿ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಹಾಗೂ ವಿಶೇಷ ತನಿಖಾ ದಳದಿಂದ ತನಿಖೆ ನಡೆಯುತ್ತಿರುವುದು ಕಂಡು ಬರುತ್ತದೆ.

ಹಾಗೆಯೇ ಆರ್ ಪ್ರವೀಣ್ ಚಂದ್ರ ಇವರ ಗಣಿ ಗುತ್ತಿಗೆ ಸಂಬಂಧ ತನಿಖೆಯ ಕುರಿತು ಯಾವುದೇ ಮಾಹಿತಿ ಇರುವುದು ಕಂಡು ಬರುತ್ತಿಲ್ಲ. ಅಲ್ಲದೇ ಮೇಲಿನ ಗಣಿ ಗುತ್ತಿಗೆಗಳ ಸಂಬಂಧ ಸರ್ಕಾರದಿಂದ ಸಿಬಿಐ ತನಿಖೆ ನಡೆಸಲು ವಹಿಸಿರುವ ಕುರಿತು ಯಾವುದೇ ಆದೇಶ, ಮಾಹಿತಿ ಲಭ್ಯವಿರುವುದಿಲ್ಲ ಎಂಬ ಮಾಹಿತಿ ಒದಗಿಸಿತ್ತು.

ಅಷ್ಟೇ ಅಲ್ಲ ‘ದಿ ಫೈಲ್’ ಈ ಬಗ್ಗೆ ಗೃಹ ಇಲಾಖೆಯಿಂದಲೂ ಆರ್ಟಿಐ ಅಡಿಯಲ್ಲಿ ಮಾಹಿತಿಯನ್ನು ಪಡೆದುಕೊಂಡಿತ್ತು.
‘ಡೆಕ್ಕನ್ ಮೈನಿಂಗ್, ಕೆನರಾ ಮಿನರಲ್ಸ್, ಲತಾ ಮೈನಿಂಗ್, ಮಾತಾ ಮಿನರಲ್ಸ್, ಆರ್ ಪ್ರವೀಣ್ ಚಂದ್ರ ಈ ಗುತ್ತಿಗೆದಾರರ ವಿರುದ್ಧ ತನಿಖೆ ನಡೆಸಲು ಸರ್ಕಾರದ ಹಂತದಲ್ಲಿ ಸಿಬಿಐಗೆ ವಹಿಸಿರುವುದಿಲ್ಲ,’ ಎಂದು ಗೃಹ ಇಲಾಖೆಯು ಮಾಹಿತಿ ನೀಡಿತ್ತು.

ಮತ್ತೊಂದು ವಿಶೇಷವೆಂದರೇ 2011ರಲ್ಲಿಯೂ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದಲೇ ಮಾತಾ ಮಿನರಲ್ಸ್ ಖನಿಜ ಗಣಿ ಗುತ್ತಿಗೆ ಬಗ್ಗೆ ಮಾಹಿತಿಯನ್ನೂ ಪಡೆದುಕೊಂಡಿದ್ದರು.

2011ರ ನಂತರ ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಮಾತಾ ಮಿನರಲ್ಸ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿಲ್ಲ. ಇದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿತ್ತು.
77.34 ಕೋಟಿ ರು. ವಸೂಲಿಯಾಯಿತೇ?
ಮಾತಾ ಮಿನರಲ್ಸ್ , ಅನಧಿಕೃತವಾಗಿ ಕಬ್ಬಿಣ ಅದಿರನ್ನು ರಫ್ತು ಮಾಡಿದ್ದ ಪ್ರಕರಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಂದಿನ ನಿರ್ದೇಶಕ ಡಾ ಎಂ ಬಸಪ್ಪ ರೆಡ್ಡಿ ಅವರಿಂದ 77.34 ಕೋಟಿ ರು. ವಸೂಲಿಗೆ ಸಂಬಂಧಿಸಿದಂತೆ ಬಿಗಿಯಾದ ಕ್ರಮ ವಹಿಸಿರಲಿಲ್ಲ. ನಂತರ ಬಸಪ್ಪ ರೆಡ್ಡಿ ಅವರ ವಿರುದ್ಧ ಅಸಲು ದಾವೆ ಹೂಡಲಾಯಿತು. ಈ ಪ್ರಕರಣವಿನ್ನು ವಿಚಾರಣೆಯ ಹಂತದಲ್ಲಿದೆ.

1998ರ ಮೇ 5ರಿಂದ 2004ರ ಅಕ್ಟೋಬರ್ 31ರವರೆಗೆ ಡಾ ಬಸಪ್ಪ ರೆಡ್ಡಿ ಅವರು ಗಣಿ ಇಲಾಖೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಭಾರತ ಸರ್ಕಾರದ ಪೂರ್ವಾನುಮೋದನೆ ಇಲ್ಲದೆ ಮಾತಾ ಮಿನರಲ್ಸ್ ಪರವಾಗಿ ಗಣಿ ಗುತ್ತಿಗೆ ನಕ್ಷೆಯನ್ನು 2000ರ ಅಕ್ಟೋಬರ್ 23ರಂದು ಬದಲಾಯಿಸಲಾಗಿತ್ತು.
ಅಕ್ರಮ ಅದಿರು ರಫ್ತು; ಮಾತಾ ಮಿನರಲ್ಸ್ ಪ್ರಕರಣದಲ್ಲಿ ದಾವೆ ಹೂಡದ ಸರ್ಕಾರ
ಮಾತಾ ಮಿನರಲ್ಸ್ ಗಣಿ ಪ್ರದೇಶದಿಂದ ರವಾನೆಯಾಗಿರುವ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರಿನ ಗುಣಮಟ್ಟಕ್ಕೆ ಅನುಗುಣವಾಗಿ ಸಾಗಿಸಿದ ಕಬ್ಬಿಣದ ಅದಿರಿಗೆ 66,70,72,434, ಮ್ಯಾಂಗನೀಸ್ ಅದಿರಿಗೆ 1,53,23,177 ಸೇರಿ ಒಟ್ಟು 68,23,95,611 ವೌಲ್ಯದ ಖನಿಜ ರವಾನೆಯಾಗಿದೆ ಎಂದು ಡಾ.ಬಸಪ್ಪ ರೆಡ್ಡಿ ಅವರ ವಿರುದ್ಧ ದೋಷಾರೋಪ ಹೊರಿಸಿತ್ತು.

ದೋಣಿಮಲೈ ರೇಂಜಿನ ಕಬ್ಬಿಣದ ಅದಿರಿನ ಮಾರಾಟ ಬೆಲೆ ಅಧಾರದ ಮೇಲೆ ಮತ್ತು ಮ್ಯಾಂಗನೀಸ್ ಅದಿರಿಗೆ 2002ರಿಂದ ಲಭ್ಯ ಇದ್ದ ಸರಾಸರಿ ಮಾರಾಟ ಬೆಲೆಗೆ ಸಂಬಂಧಿಸಿದಂತೆ ಎನ್ಎಂಡಿಸಿ ಒದಗಿಸಿದ್ದ ದರದ ಆಧಾರದ ಮೇಲೆ ಈ ಲೆಕ್ಕಾಚಾರವನ್ನು ಮಾಡಿತ್ತು.









