ವಿಟಿಯು ಕುಲಪತಿ ವಿರುದ್ಧ ವಿಚಾರಣೆ; ಲೋಕಾ ಪೊಲೀಸರಿಗೆ ಅನುಮತಿ ನಿರಾಕರಿಸಿದ ರಾಜ್ಯಪಾಲ

ಬೆಂಗಳೂರು;  ಲಕ್ಷಾಂತರ ರುಪಾಯಿಗಳ ಅಕ್ರಮ ವರ್ಗಾವಣೆ ಮತ್ತು ಅಕ್ರಮವಾಗಿ ಲಾಭ ಮಾಡಿಕೊಟ್ಟ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿರುವ  ವಿಟಿಯು ಹಾಲಿ ಕುಲಪತಿ ಡಾ ಎಸ್‌ ವಿದ್ಯಾಶಂಕರ್ ಮತ್ತಿತರ ವಿರುದ್ಧ  ವಿಚಾರಣೆಗೆ ಕೋರಿದ್ದ ಪೂರ್ವಾನುಮತಿ ಪ್ರಸ್ತಾವವನ್ನು ರಾಜ್ಯಪಾಲರು ತಿರಸ್ಕರಿಸಿರುವುದು ಇದೀಗ ಬಹಿರಂಗವಾಗಿದೆ.

 

ಡಾ ಎಸ್‌ ವಿದ್ಯಾಶಂಕರ್‍‌ ಮತ್ತಿತರರ ವಿರುದ್ಧದ ವಿಚಾರಣೆಗೆ ಭ್ರಷ್ಟಾಚಾರ ನಿಗ್ರಹ  ಕಾಯ್ದೆಯ ಸೆಕ್ಷನ್‌ 17(ಎ) ರಡಿ    ಪೂರ್ವಾನುಮತಿ ನೀಡಬೇಕು ಎಂದು ಲೋಕಾಯುಕ್ತ  ಪೊಲೀಸ್‌ ವಿಭಾಗದ ಮೈಸೂರು ಘಟಕವು  ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಿತ್ತು.  ಆದರೆ ರಾಜ್ಯಪಾಲರು ಎರಡು ವರ್ಷದಿಂದಲೂ ಅನುಮತಿ ನೀಡಿರಲಿಲ್ಲ. ಇದೀಗ ಅವರು ವಿಚಾರಣೆಯ ಪೂರ್ವಾನುಮತಿ ಪ್ರಸ್ತಾವವನ್ನೇ ತಿರಸ್ಕರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ರಾಜ್ಯಪಾಲರು ಈ ಪ್ರಸ್ತಾವವನ್ನು ತಿರಸ್ಕರಿಸಿರುವ ಕಾರಣ, ಅರ್ಜಿದಾರ ಜಗದೀಶ್‌ ಬಾಬು ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಈ ಸಂಬಂಧ ರಿಟ್‌ ಅರ್ಜಿ( W.P 18433 / 2025)  ಸಲ್ಲಿಸಿದ್ದಾರೆ.

 

 

ಪೂರ್ವಾನುಮತಿ ಪ್ರಸ್ತಾವವನ್ನು ತಿರಸ್ಕರಿಸಿ ರಾಜ್ಯಪಾಲರು ಬರೆದಿರುವ ಪತ್ರ ಮತ್ತು ಜಗದೀಶ್‌ ಬಾಬು ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ರಿಟ್‌ ಅರ್ಜಿ ಸೇರಿದಂತೆ ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ದಾಖಲೆಗಳು ‘ದಿ  ಫೈಲ್‌’ಗೆ ಲಭ್ಯವಾಗಿವೆ.

 

 

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆನಂದ್ ಬೈರಾರೆಡ್ಡಿ ಅವರ ವರದಿಯನ್ನಾಧರಿಸಿ ವಿಚಾರಣೆಗೆ ಪೂರ್ವಾನುಮತಿ ಪ್ರಸ್ತಾವವನ್ನು ತಿರಸ್ಕರಿಸಿರುವುದು ರಾಜ್ಯಪಾಲರ ಪತ್ರದಿಂದ ಗೊತ್ತಾಗಿದೆ. ಈ ಪ್ರಕ್ರಿಯೆಯಲ್ಲಿ    ಡಾ. ಶರಣಪ್ಪ ಹಲಸೆ ಹಾಗೂ ರಾಜ್ಯಪಾಲರ ಸಚಿವಾಲಯದ ಸಿಬ್ಬಂದಿಗಳೂ ಸಹ ಶಾಮೀಲಾಗಿದ್ದಾರೆ ಎಂದು ದೂರುದಾರ ಜಗದೀಶ್‌ ಬಾಬು ಅವರು ಅರ್ಜಿಯಲ್ಲಿ ಆರೋಪಿಸಿರುವುದು ತಿಳಿದು ಬಂದಿದೆ.

 

ಈ ರಿಟ್‌ ಅರ್ಜಿಯನ್ನು ಪರಿಗಣಿಸಿರುವ ಹೈಕೋರ್ಟ್‌, ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರು ಸೇರಿದಂತೆ ಒಟ್ಟು 18 ಮಂದಿ ಪ್ರತಿವಾದಿಗಳಿಗೆ ನೋಟೀಸ್‌ ಜಾರಿಗೊಳಿಸಿದೆ.

 

 

ವಿಶೇಷವೆಂದರೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗದೀಶ್‌ ಬಾಬು ಅವರು ಸಲ್ಲಿಸಿದ್ದ ದೂರನ್ನೇ ಹೋಲುವ ರೀತಿಯಲ್ಲಿ  ಟಿ ಪ್ರಭಾಕರ್‍‌ ಎಂಬುವರು ಸಹ ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಶರಣಪ್ಪ ಹಲಸೆ ಅವರಿಗೆ  ದೂರು ಸಲ್ಲಿಸಿದ್ದರು. ಈ ದೂರು ಸಲ್ಲಿಕೆಯಾಗುತ್ತಿದ್ದಂತೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಸುಮತಿ ಆರ್‍‌ ಗೌಡ ಅವರಿಂದ ಆಕ್ಸಿಸ್‌ ಬ್ಯಾಂಕ್‌ನಲ್ಲಿನ ಖಾತೆಗೆ ಸಂಬಂಧಿಸಿದ ಕಡತ ಹಾಗೂ ದಾಖಲೆಗಳು ಅವರ ಕಚೇರಿಯಿಂದ ಕಳುವಾಗಿದೆ ಎಂದು ಹೇಳಿಕೆಯನ್ನೂ ಪಡೆಯಲಾಗಿತ್ತು.

 

ಪ್ರಭಾಕರ್‍‌ ಎಂಬುವರ ದೂರು ಮತ್ತು ಸುಮತಿ ಆರ್‍‌ ಗೌಡರ ಹೇಳಿಕೆ ಆಧರಿಸಿ ಇದು ಡಾ ಎಸ್‌ ವಿದ್ಯಾಶಂಕರ್ ಅವರ ಅವಧಿಯಲ್ಲಾಗಿರುವ ಹಗರಣವಾಗಿದೆ. ಹೀಗಾಗಿ ದಾಖಲೆಗಳ ಸಲ್ಲಿಕೆ ಕಷ್ಟಕರವಾಗಿದೆ. ಈ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಹಲಸೆ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು.

 

 

ಮತ್ತೊಂದು ವಿಶೇಷವೆಂದರೇ ರಾಜ್ಯಪಾಲರು ನ್ಯಾಯಮೂರ್ತಿ ಆನಂದ್ ಬೈರಾರೆಡ್ಡಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಅಧಿಸೂಚನೆ ಹೊರಡಿಸುವ ಮುನ್ನವೇ ದಾಖಲೆಗಳು ಲಭ್ಯವಿಲ್ಲ ಎಂಬ ಕಾರಣವನ್ನು ಮುಂದೊಡ್ಡಲಾಗಿತ್ತು. ಡಾ ಎಸ್‌ ವಿದ್ಯಾಶಂಕರ್‍‌ ಮತ್ತು ಇತರರ ವಿರುದ್ಧದ ಆಪಾದನೆಗಳನ್ನು ಸಾಬೀತುಪಡಿಸಲು ಸಾಕ್ಷ್ಯಗಳ ಕೊರತೆ ಇದೆ ಎಂದು ವರದಿಯನ್ನೂ ಮಾಡಲಾಗಿತ್ತು.

 

ಟಿ ಪ್ರಭಾಕರ್‍‌ ಮತ್ತು ಡಾ  ಜಗದೀಶ್‌ ಬಾಬು ಅವರ ದೂರಿನ ಅಂಶಗಳು ಒಂದೇ ಆಗಿವೆ ಎಂಬ ಸಬೂಬು ನೀಡಿದ್ದ ರಾಜ್ಯಪಾಲರು, ಸೆಕ್ಷನ್‌ 17 (ಎ) ಅಡಿಯಲ್ಲಿ ಪೂರ್ವಾನುಮತಿ ನೀಡಲು ನಿರಾಕರಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

 

ಗಂಭೀರ ಆರೋಪಗಳಿಗೆ ಗುರಿಯಾಗಿರುವ  ಡಾ ಎಸ್‌ ವಿದ್ಯಾಶಂಕರ್ ರವರನ್ನು ವಿಟಿಯು ಕುಲಪತಿ ಹುದ್ದೆಯಿಂದ ವಜಾಗೊಳಿಸಬೇಕು.  ಹಾಗೂ ಲೋಕಾಯುಕ್ತ ಪೂರ್ವಾನುಮತಿ ಪ್ರಸ್ತಾವನೆಯನ್ನು ಪುರಸ್ಕರಿಸಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ ವ್ಯಕ್ತಿಗಳ ವಿರುದ್ಧ  ಕಟ್ಟುನಿಟ್ಟಿನ ಕಾನೂನು ಮತ್ತು ಇಲಾಖಾ ಕ್ರಮ ಜರುಗಿಸಬೇಕು ಎಂದು ಜಗದೀಶ್‌ ಬಾಬು ಅವರು ಅರ್ಜಿಯಲ್ಲಿ ಕೋರಿರುವುದು ಗೊತ್ತಾಗಿದೆ.

 

ಲೋಕಾಯುಕ್ತ ಪೊಲೀಸ್‌ ವಿಭಾಗದ ಮೈಸೂರಿನ ಎಸ್ಪಿ ಸುರೇಶ್‌ ಬಾಬು ಅವರು ಲೋಕಾಯುಕ್ತ ಎಡಿಜಿಪಿ ಅವರಿಗೆ 2023ರ ನವೆಂಬರ್‌ 17ರಂದು ಪತ್ರ  ಬರೆದಿದ್ದರು.

 

 

ವಿದ್ಯಾಶಂಕರ್‌ ವಿರುದ್ಧ ರಾಜ್ಯಪಾಲರು, ಸುಮತಿ ಆರ್‌ ಗೌಡ ವಿರುದ್ಧ ತನಿಖೆಗೆ ಕುಲಪತಿಗಳು, ಡಾ ಎ ಖಾದರ್ ಪಾಷ ವಿರುದ್ಧ ತನಿಖೆಗೆ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕೆ ಎಲ್ ಎನ್ ಮೂರ್ತಿ ವಿರುದ್ಧ ಕುಲಪತಿಗಳು ವಿಚಾರಣೆಗೆ ಪೂರ್ವಾನುಮತಿ ನೀಡಬೇಕಿತ್ತು.

 

ಅಕ್ರಮ ಹಣ ವರ್ಗಾವಣೆ; ವಿಟಿಯು ಹಾಲಿ ಕುಲಪತಿ ಸೇರಿ ಇತರರ ವಿರುದ್ಧ ತನಿಖೆಗೆ ಸಿಗದ ಪೂರ್ವಾನುಮತಿ

 

‘ಮೈಸೂರು ಮುಕ್ತ ವಿವಿ ಕುಲಪತಿಗಳಾಗಿದ್ದ ಡಾ ಎಸ್‌ ವಿದ್ಯಾಶಂಕರ್, ಹಣಕಾಸು ಅಧಿಕಾರಿ ಡಾ ಎ ಖಾದರ್ ಪಾಷ, ಸಹಾಯಕ ಪ್ರಾಧ್ಯಾಪಕರಾದ ಡಾ ಸುಮತಿ ಆರ್ ಗೌಡ, ಕುಲ ಸಚಿವ ಡಾ ಎಸ್‌ ಎಲ್‌ ಎನ್‌ ಮೂರ್ತಿ ಅವರು ಆಕ್ಸಿಸ್‌ ಬ್ಯಾಂಕ್‌ನಲ್ಲಿ ಅಕ್ರಮವಾಗಿ ಖಾತೆ ತೆರೆದು ಸ್ವಂತಕ್ಕೆ ಡ್ರಾ ಮಾಡಿಕೊಂಡು ಹಣ ದುರುಪಯೋಗಪಡಿಸಿಕೊಂಡಿಸಿರುವ ಕುರಿತು ತನಿಖೆ, ವಿಚಾರಣೆ ಕೈಗೊಳ್ಳಲು ಪೂರ್ವಾನುಮತಿ ಒದಗಿಸಿಕೊಡಬೇಕು,’ ಎಂದು ಲೋಕಾಯುಕ್ತ ಪೊಲೀಸ್‌ ವಿಭಾಗದ ಮೈಸೂರು ಎಸ್ಪಿಯು ಲೋಕಾಯುಕ್ತ ಎಡಿಜಿಪಿಗೆ ಬರೆದಿದ್ದ ಪತ್ರದಲ್ಲಿ ಕೋರಿದ್ದರು.

 

 

ಈ ಪತ್ರ ಬರೆದು ಒಂದೂವರೆ ವರ್ಷವಾದರೂ ಇದುವರೆಗೂ ರಾಜ್ಯಪಾಲರಾದಿಯಾಗಿ ರಾಜ್ಯ ಸರ್ಕಾರದ ಸಕ್ಷಮ ಪ್ರಾಧಿಕಾರಗಳಿಂದ ಯಾವುದೇ ಅನುಮತಿ ದೊರೆತಿರಲಿಲ್ಲ.

 

ವಿಶ್ವವಿದ್ಯಾಲಯವು ಸ್ವಯಂ ನಿಧಿಯಡಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳ ದಾಖಲಾತಿ ಶುಲ್ಕ, ಪರೀಕ್ಷಾ ಶುಲ್ಕ, ಮತ್ತಿತರೆ ಶುಲ್ಕಗಳನ್ನು ಸಂಗ್ರಹಿಸುವ ಮೂಲಕ ವಿವಿಯ ಎಲ್ಲಾ ರೀತಿಯ ಹಣಕಾಸು ನಿಧಿಯನ್ನು ಸಂಗ್ರಹಿಸುತ್ತದೆ. ಹಣಕಾಸು ವೆಚ್ಚ ಮತ್ತು ಬ್ಯಾಂಕ್‌ ಖಾತೆಗಳ ನಿರ್ವಹಣೆಯನ್ನು ಕುಲಪತಿ ಮತ್ತು ರಿಜಿಸ್ಟ್ರಾರ್‌ ಅವರ ಆದೇಶದ ಪ್ರಕಾರ ಹಣಕಾಸು ಅಧಿಕಾರಿಯ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆದು ನಿರ್ವಹಿಸಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ.

 

ಆದರೆ ಮುಕ್ತ ವಿವಿಯ ಹಿಂದಿನ ಕುಲಪತಿ ಡಾ ಎಸ್‌ ವಿದ್ಯಾಶಂಕರ್‌ ಸೇರಿದಂತೆ ಇನ್ನಿತರರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸ್‌ ತನಿಖೆಯಲ್ಲಿ ವಿವರಿಸಿತ್ತು.

 

ಆಕ್ಸಿಸ್‌ ಬ್ಯಾಂಕ್‌ನಲ್ಲಿ ಅಕ್ರಮವಾಗಿ ಖಾತೆ

 

2021ರ ಸೆಪ್ಟಂಬರ್‌ನಲ್ಲಿ ಮೈಸೂರಿನ ಕುವೆಂಪು ನಗರ ಶಾಖೆಯಲ್ಲಿನ ಆಕ್ಸಿಸ್‌ ಬ್ಯಾಂಕ್‌ನಲ್ಲಿ ಕೋ ಆರ್ಡಿನೇಟರ್‌, ಎಕ್ಸಟರ್ನಲ್‌ ಎಕ್ಸಾಮ್‌ ಹೆಸರಿನಲ್ಲಿ ಖಾತೆ (ಸಂಖ್ಯೆ; 92011003895267) ತೆರೆದಿದ್ದರು. ಈ ಖಾತೆಯನ್ನು ಅದೇ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ ಸುಮತಿ ಆರ್ ಗೌಡ ಅವರು, ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಬದಲಿಗೆ ಕೋ ಆರ್ಡಿನೇಟರ್‌ ಆಗಿ ನಿರ್ವಹಿಸಿದ್ದರು.

 

 

ಈ ಖಾತೆಯ 2021ರ ಸೆ.28ರಿಂದ 2022ರ ಮೇ 7ವರೆಗಿನ ಹಣಕಾಸು ವಹಿವಾಟನ್ನು ಗಮನಿಸಿರುವ ಲೋಕಾಯುಕ್ತ ಪೊಲೀಸರು ಈ ಶಾಖೆಯಲ್ಲಿ ಕೋ ಆರ್ಡಿಟನೇಟರ್‌ ಎಕ್ಸಟರ್ನಲ್‌ ಎಕ್ಸಾಮಿನೇಷನ್ಸ್‌ ಪದನಾಮದಲ್ಲಿ ಖಾತೆ ತೆರೆದು ಹಣಕಾಸು ವ್ಯವಹಾರ ನಡೆಸಲಾಗಿದೆ ಎಂದು ಸಾಬೀತುಪಡಿಸಿದ್ದರು.

 

 

ಈ ಖಾತೆಯಲ್ಲಿ ಮಾಡಿದ ಮೊದಲ ವ್ಯವಹಾರ 2021ರ ಸೆ.28 ಆಗಿದೆ. ಖಾತೆ ತೆರೆದು ಸುಮಾರು 9 ತಿಂಗಳ ನಂತರ ಕೆಎಸ್‌ಒಯುನ ಅಂದಿನ ಉಪ ಕುಲಪತಿ ಡಾ ಎಸ್‌ ವಿದ್ಯಾಶಂಕರ್ ಅವರು 2022ರ ಜುಲೈ 14ರಂದು ತಮ್ಮ ಹೆಸರಿನಲ್ಲಿ ಕಚೇರಿ ಆದೇಶ ಹೊರಡಿಸಿದ್ದರು. ಇದರ ಪ್ರಕಾರ ಆಕ್ಸಿಸ್‌ ಬ್ಯಾಂಕ್‌ನಲ್ಲಿ ತೆರೆದಿದ್ದ ಈ ಖಾತೆಯನ್ನು ತೆರೆದು ನಿರ್ವಹಿಸಬೇಕು ಎಂದು ಡಾ ಸುಮತಿ ಆರ್ ಗೌಡ ಅವರಿಗೆ ಆದೇಶಿಸಿದ್ದರು.

 

ಹಳೆಯ ದಿನಾಂಕ ನಮೂದಿಸಿದ್ದರೇ ವಿದ್ಯಾಶಂಕರ್?

 

ಆದರೆ ಈ ಆದೇಶದ ಪೂರ್ವದಲ್ಲಿಯೇ ಡಾ ಸುಮತಿ ಆರ್ ಗೌಡ ಅವರು ಆಕ್ಸಿಸ್‌ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದರು. ಹಣಕಾಸು ವ್ಯವಹಾರ ನಡೆಸಿದ್ದರು. ಇದು ಸಂಶಯಾಸ್ಪದವಾಗಿದೆ. ಅಕ್ರಮವಾಗಿ ಈ ಖಾತೆಯನ್ನು ತೆರೆಯಲಾಗಿದೆ. ಹಣವನ್ನೂ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆಕ್ಷೇಪವೂ ಇದೆ. ಹೀಗಾಗಿ ಈ ಆರೋಪದಿಂದ ಪಾರಾಗಲು ಡಾ ಎಸ್‌ ವಿದ್ಯಾಶಂಕರ್‌ ಅವರು ಹಳೆಯ ದಿನಾಂಕವನ್ನು ನಮೂದಿಸಿ ಡಾ ಎಸ್‌ ಸುಮತಿ ಆರ್ ಗೌಡ ಅವರಿಗೆ ಆಕ್ಸಿಸ್‌ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ನಿಯೋಜಿಸಿದಂತೆ ದಾಖಲಾತಿ ಸೃಷ್ಟಿಸಿರುವುದು ಕಂಡು ಬಂದಿದೆ ಎಂದು ಲೋಕಾ ಪೊಲೀಸರ ತನಿಖೆ ವರದಿಯಲ್ಲಿ ವಿವರಿಸಿತ್ತು.

 

 

 

ಖಾತೆಯ ಹಣಕಾಸು ವ್ಯವಹಾರಗಳನ್ನು ಲೋಕಾಯುಕ್ತ ಪೊಲೀಸರು ಪರಿಶೀಲಿಸಿದ್ದಾರೆ. 2021ರ ಡಿಸೆಂಬರ್‌ 18ರಿಂದ 2022ರ ಮೇ 7ವರಗೆ ಒಟ್ಟು 21,00,00 ಲಕ್ಷ ರು.ಗಳನ್ನು 1 ಲಕ್ಷ ರು.ಗಳಿಂದ 5 ಲಕ್ಷ ರು ಮೌಲ್ಯದ ವಿವಿಧ ಚೆಕ್‌ಗಳ ಮೂಲಕ ಸ್ವಂತಕ್ಕೆ ಡ್ರಾ ಮಾಡಿಕೊಂಡಿರುವುದು ಕಂಡು ಬಂದಿದೆ. ಅಲ್ಲದೇ ಸುಮತಿ ಅರ್‌ ಗೌಡ ಅವರು ಆಕ್ಸಿಸ್‌ ಬ್ಯಾಂಕ್‌ನ ಖಾತೆಯಿಂದ ಕುಲಪತಿ ಡಾ ಎಸ್‌ ವಿದ್ಯಾಶಂಕರ್‌, ಅವರ ಆಪ್ತ ಕಾರ್ಯದರ್ಶಿ ವಿಶಾಲ್‌ ಎನ್ ರಾಜ್‌, ಕೆಎಸ್‌ಒಯುನ ತಾತ್ಕಾಲಿಕ ನೌಕರ ಸಿದ್ದರಾಜು, ಡಾ ಎ ಪಾರ್ಥ, ಮತ್ತು ರಂಗರಾಜು ಅವರುಗಳ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿರುವುದನ್ನು ಪತ್ತೆ ಹಚ್ಚಿದ್ದರು.

 

 

ಕರ್ನಾಟಕ ಹಣಕಾಸು ಸಂಹಿತೆ ನಿಯಮ 72(ಎ)ರಂತೆ ಸರ್ಕಾರಿ ಅಧಿಕಾರಿಯು ಒಂದು ಸಾವಿರಕ್ಕಿಂತ ಹೆಚ್ಚಿನ ಸರ್ಕಾರಿ ವೆಚ್ಚವನ್ನು ಕ್ರಾಸ್‌ ಚೆಕ್‌ ಮೂಲಕವೇ ಪಾವತಿಸುವಂತೆ ನಿರ್ದಿಷ್ಟಪಡಿಸಿದೆ. ಇದಕ್ಕೆ ಪೂರಕವಾಗಿ ಕರ್ನಾಟಕ ಸರ್ಕಾರದ ಆದೇಶದ (ಎಫ್‌ಡಿ 5 ಟಿಎಆರ್ 2017)ರ ಪ್ರಕಾರ ಯಾವುದೇ ಸರ್ಕಾರಿ ಅಧಿಕಾರಿಯು ಸರ್ಕಾರಿ ನಿಧಿಯ ಹಣವನ್ನು ಸ್ವಂತಕ್ಕೆ ಡ್ರಾ ಮಾಡುವುದು ಮತ್ತು ಸರ್ಕಾರಿ ಅಧಿಕಾರಿಗಳ ಖಾತೆಗೆ ವರ್ಗಾಯಿಸಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಿತ್ತು.

 

ಆದರೆ ಸುಮತಿ ಅರ್ ಗೌಡ ಅವರು ಕರ್ನಾಟಕ ಹಣಕಾಸು ಸಂಹಿತೆಯ ನಿಯಮ ಮತ್ತು ಆದೇಶಗಳನ್ನು ಉಲ್ಲಂಘಿಸಿ 21,00,00 ಲಕ್ಷ ರು.ಗಳನ್ನು ಸೆಲ್ಫ್‌ ಡ್ರಾ ಮಾಡಿದ್ದಾರೆ. ಅಲ್ಲದೇ ಸುಮಾರು 4,10,000 ರು.ಗಳನ್ನು ತನ್ನ ಹಾಗು ವಿಶ್ವವಿದ್ಯಾಲಯದ ಅಧಿಕಾರಿ ಸಿಬ್ಬಂದಿಗಳ ಖಾತೆಗೆ ವರ್ಗಾಯಿಸಿ ತಾನೂ ಅಕ್ರಮ ಲಾಭ ಮಾಡಿಕೊಂಡು ವಿಶ್ವವಿದ್ಯಾಲಯದ ನಿರ್ದಿಷ್ಟ ಅಧಿಕಾರಿ, ಸಿಬ್ಬಂದಿಗಳಿಗೂ ಅಕ್ರಮ ಲಾಭ ಮಾಡಿಕೊಟ್ಟಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತನಿಖೆ ವೇಳೆಯಲ್ಲಿ ಬಯಲು ಮಾಡಿದ್ದರು.

 

 

ಅದೇ ರೀತಿ ವಿಶ್ವವಿದ್ಯಾಲಯದ ವ್ಯವಹಾರ, ನಿಧಿಗಳ ಮೇಲ್ವಿಚಾರಣೆಯನ್ನು ನಡೆಸುವ ಜವಾಬ್ದಾರಿ ಹೊಂದಿದ್ದ ಹಣಕಾಸು ಅಧಿಕಾರಿ ಡಾ ಎ ಖಾದರ್‌ ಪಾಷ ಅವರು ಸಹ ಕರ್ತವ್ಯಲೋಪ ಎಸಗಿದ್ದಾರೆ ಎಂಬುದನ್ನೂ ಪತ್ತೆ ಹಚ್ಚಿದ್ದಾರೆ. ವಿವಿಯಲ್ಲಿರುವ ನಗದು, ಬ್ಯಾಂಕ್‌ ಖಾತೆಯಲ್ಲಿರುವ ಹಣ, ಹೂಡಿಕೆಗಳ ಮೇಲೆ ನಿರಂತರವಾಗಿ ಗಮನವಿಟ್ಟು ಮತ್ತು ವಾರ್ಷಿಕ ಲೆಕ್ಕಪತ್ರವನ್ನು ಸಿದ್ಧಪಡಿಸಿ ಹಣಕಾಸು ಸಮಿತಿಯ ಪರಿಶಿಲನೆಗೆ ಸಲ್ಲಿಸಬೇಕು. ನಂತರ ವ್ಯವಸ್ಥಾಪನ ಮಂಡಳಿಗೂ ಸಲ್ಲಿಸುವ ಜವಾಬ್ದಾರಿಯೂ ಹಣಕಾಸು ಅಧಿಕಾರಿಯದ್ದಾಗಿದೆ.

 

ಆದರೆ ಡಾ ಎ ಖಾದರ್ ಪಾಷ ಅವರು ಡಾ ಸುಮತಿ ಆರ್ ಗೌಡ ಅವರು ಆಕ್ಸಿಸ್‌ ಬ್ಯಾಂಕ್‌ನಲ್ಲಿ ನಿಯಮಬಾಹಿರವಾಗಿ ತೆರೆದಿದ್ದ ಬ್ಯಾಂಕ್‌ ಖಾತೆಯ ಅವ್ಯವಹಾರವನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತು ಈ ಖಾತೆಯನ್ನು ವಿಶ್ವವಿದ್ಯಾಲಯದ ವಾರ್ಷಿಕ ಲೆಕ್ಕಪತ್ರಕ್ಕೆ ಸೇರಿಸದೇ ಮತ್ತು ಲೆಕ್ಕ ಪರಿಶೋಧನೆಗೆ ಒಳಪಡಿಸಿಲ್ಲ. ಇದರಿಂದಾಗಿ ಸುಮತಿ ಅರ್ ಗೌಡ ಹಾಗೂ ಇತರರಿಗೆ ಅಕ್ರಮ ಲಾಭ ಮಾಡಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಲೋಕಾಯುಕ್ತ ಪೊಲೀಸರ ತನಿಖೆಯು ಸಾಬೀತುಪಡಿಸಿತ್ತು.

 

ಹಾಗೆಯೇ ವಿಶ್ವವಿದ್ಯಾಲಯಲದ ರಿಜಿಸ್ಟ್ರಾರ್‌ ಡಾ ಕೆ ಎಲ್ ಎನ್ ಮೂರ್ತಿ ಅವರು ಸಹ, ಲೆಕ್ಕ ಪರಿಶೋಧನೆ, ಮತ್ತು ಲೆಕ್ಕ ಪತ್ರ ಇಲಾಖೆಗೂ ಈ ವ್ಯವಹಾರವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ. ಮತ್ತು ಅಕ್ರಮ ಲಾಭ ಮಾಡಿಕೊಟ್ಟಿರುವ ಕುರಿತು ಯಾವುದೇ ದಾಖಲೆಗಳನ್ನು ಲೆಕ್ಕ ಪರಿಶೋಧಕರಿಗೆ ನೀಡಿಲ್ಲ. ಇದರಿಂದಾಗಿ ಈ ವ್ಯವಹಾರದಲ್ಲಿ ಇವರೂ ಶಾಮೀಲಾಗಿದ್ದಾರೆ. ಅಕ್ರಮ ಪಾವತಿಗೆ ನೆರವಾಗಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದರು.

 

‘ಕುಲಪತಿ ಡಾ ಎಸ್‌ ವಿದ್ಯಾಶಂಕರ್, ಡಾ ಎ ಖಾದರ್ ಪಾಷ, ಡಾ ಸುಮತಿ ಆರ್‌ ಗೌಡ ಅವರು ಕಾನೂನುಬಾಹಿರವಾಗಿ ಜಂಟಿಯಾಗಿ ಈ ಖಾತೆ ಮೂಲಕ ಲಕ್ಷಾಂತರ ಮೊತ್ತವನ್ನು ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯ ನಿಧಿಯಿಂದ ದುರ್ಬಳಕೆ ಮಾಡಿಕೊಂಡು ಅಕ್ರಮ ಹಣ ಸಾಗಾಣಿಕ ಮೂಲಕ ಸ್ವಂತಕ್ಕೆ ಮತ್ತು ಕೆಲವು ನಿಗದಿತ ವ್ಯಕ್ತಿಗಳಿಗೆ ನಿಯಮಬಾಹಿರವಾಗಿ ಲಾಭ ಮಾಡಿಕೊಡಲಾಗಿರುತ್ತದೆ,’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

 

ಹಣಕಾಸು ವ್ಯವಹಾರವನ್ನು ನಡೆಸಲು ಯಾವುದೇ ಅನುಮತಿ ಪಡೆಯದೇ ಖಾತೆ ತೆರೆದು 21.00 ಲಕ್ಷ ರು. ಸ್ವಂತಕ್ಕೆ ಡ್ರಾ ಮಾಡಿಕೊಂಡು ಇದರಲ್ಲಿನ 4.10 ಲಕ್ಷ ರುಗಳನ್ನು ತನ್ನ ಹಾಗೂ ಅಂದಿನ ಕುಲಪತಿ ಡಾ ಎಸ್‌ ವಿದ್ಯಾಶಂಕರ್‌ ಮತ್ತಿತರ ಸಿಬ್ಬಂದಿ ಖಾತೆಗೆ ವರ್ಗಾವಣೆ ಮಾಡಿ ತನಗೆ ಹಾಗೂ ಇತರರಿಗೆ ಅಕ್ರಮ ಲಾಭ ಮಾಡಿಕೊಂಡು ಸಾರ್ವಜನಿಕ ಹಣ ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪತ್ರದಲ್ಲಿ ವಿವರಿಸಿತ್ತು.

 

ವಿದ್ಯಾಶಂಕರ್ ರಿಂದಲೇ ಸುಳ್ಳು ದಾಖಲೆ ಸೃಷ್ಟಿ?

 

ಪ್ರಸ್ತುತ ವಿಟಿಯು ಕುಲಪತಿ ಡಾ ಎಸ್‌ ವಿದ್ಯಾಶಂಕರ್ ಅವರು ನಿಯಮಬಾಹಿರವಾಗಿ ಆಕ್ಸಿಸ್‌ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಆದೇಶಿಸಿದ್ದರು. ಹಣಕಾಸು ಅಧಿಕಾರಿಯ ಕರ್ತವ್ಯ, ಜವಾಬ್ದಾರಿಯನ್ನುಕಡೆಗಣಿಸಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಕಂಪ್ಯೂಟರ್‌ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ ಸುಮತಿ ಅರ್ ಗೌಡ ಅವರಿಗೆ ಅನುಮತಿ ನೀಡಿದ್ದರು.

 

ತನ್ನ ಖಾತೆಗೆ ಹಾಗೂ ಇತರರ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡು ಅಕ್ರಮ ಲಾಭ ಮಾಡಿಕೊಂಡು ಸರ್ಕಾರಿ ಹಣ ದುರುಪಯೋಗ ಮಾಡಿಕೊಳ್ಳಲು ಕಾರಣರಾಗಿದ್ದಾರೆ. ಅಲ್ಲದೆ ಆಕ್ಸಿಸ್‌ ಬ್ಯಾಂಕ್‌ನಲ್ಲಿ ಖಾತೆ ತೆರೆದು 9 ತಿಂಗಳುಗಳ ನಂತರ ಖಾತೆ ತೆರೆಯುವಂತೆ ಡಾ ಸುಮತಿ ಆರ್ ಗೌಡ ಅವರಿಗೆ ಆದೇಶ ಪತ್ರ ನೀಡಿ ಸುಳ್ಳು ದಾಖಲಾತಿಯ ಸೃಷ್ಟಿಗೆ ಕಾರಣರಾಗಿದ್ದಾರೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿತ್ತು.

 

ಈ ಖಾತೆಯಲ್ಲಿ 2022ರ ಹೊತ್ತಿಗೆ ಅಂದಾಜು 94.೦೦ ಲಕ್ಷ ಗಳಿಗೂ ಹೆಚ್ಚಿನ ವಹಿವಾಟು ನಡೆದಿದೆ. ಇದರಲ್ಲಿ ಸುಮತಿ ಆರ್ ಗೌಡ ಅವರು 21ಲಕ್ಷ ರು.ಗಳನ್ನು ಸ್ವಂತಕ್ಕೆ ಡ್ರಾ ಮಾಡಿಕೊಂಡಿರುವುದು ಕಂಡು ಬಂದಿತ್ತು.

 

ಸುಮತಿ ಆರ್ ಗೌಡರವರು 2021ರ ಡಿಸೆಂಬರ್‌ 8ರಂದು ಒಂದೇ ದಿನದಲ್ಲಿ 10.00 ಲಕ್ಷ ರು., 2022ರ ಮಾರ್ಚ್‌ನಲ್ಲಿ 3.00 ಲಕ್ಷ ರು., 2022ರ ಏಪ್ರಿಲ್‌ 30ರಂದು 2.00 ಲಕ್ಷ ರು., 2022ರ ಮೇ 7ರಂದು 5.00 ಲಕ್ಷ ರು., ಜುಲೈ 11ರಂದು 1.00 ಲಕ್ಷ, ನವೆಂಬರ್‌ 17ರಂದು 2.00 ಲಕ್ಷ ರು.ಗಳನ್ನು ಸೆಲ್ಫ್‌ ಡ್ರಾ ಮಾಡಿಕೊಂಡಿದ್ದರು ಎಂದು ಹೇಳಲಾಗಿತ್ತು.

 

ಅದೇ ರೀತಿ ಕರಾಮುವಿಯ ಪ್ರಾದೇಶಿಕ ನಿರ್ದೇಶಕರುಗಳಾದ ರೋಹಿತ್ ಹಚ್ ಎಸ್, ಸುಧಾಕರ್, ಲೋಕೇಶ್ ಆರ್, ಗಿರೀಶ್, ದಿಲೀಪ್ ಹೆಸರುಗಳಿಗೆ 2022ರ ನವೆಂಬರ್‌ 21ರಿಂದ ಡಿಸೆಂಬರ್‌ 1ರವರೆಗೆ ತಲಾ ರೂ. 50-000ಸಾವಿರ ಪಾವತಿಯಾಗಿತ್ತು.

 

ಕರಾಮುವಿ ಕುಲಪತಿ ಆಪ್ತ ಸಹಾಯಕ ವಿಶಾಲ್ ಎನ್ ಹೆಸರಿಗೆ ರೂ.10000-00, ಡಾ‌.ಎಸ್ ವಿದ್ಯಾಶಂಕರ್ ಆಪ್ತ ಎಂದು ಹೇಳಲಾಗಿರುವ ಬೆಂಗಳೂರಿನ ಬಿಐಟಿ ಕಾಲೇಜಿನ ಅಧ್ಯಾಪಕ ಎಂದು ಹೇಳಲಾಗಿರುವ ಎ ಪಿ ಪಾರ್ಥ ಅವರಿಗೆ 45,000 ರು., ಬೆಂಗಳೂರು ಬಿಐಟಿ ಕಾಲೇಜಿನ ನಿವೃತ್ತಿ ಸಿಬ್ಬಂದಿ ರಂಗರಾಜು ಎಂಬುವರಿಗೆ 10,000 ರು., ಪ್ರಸನ್ನಕುಮಾರ್‌ ಎಂಬುವರಿಗೆ 1,40,000 ರು., ಪಾವತಿಯಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿತ್ತು.

 

ಹಾಗೆಯೇ ಈ ಖಾತೆಯನ್ನು ಮುಕ್ತಾಯಗೊಳಿಸುವ ಒಂದು ವಾರ ಮೊದಲು 2023ರ ಜುಲೈ 14ರಂದು ಮೈಸೂರಿನ ತೊಳಸಿ ಜ್ಯುವೆಲ್ಲರ್ಸ್‌ ಹೆಸರಿಗೆ 3,26,714 ರು ಪಾವತಿಯಾಗಿದೆ. ರಾಜ್ಯಾದ್ಯಂತ ಹಲವು ಸಂಸ್ಥೆಗಳು ಹಾಗೂ ವ್ಯಕ್ತಿಗಳೊಂದಿಗೆ ವಹಿವಾಟು ಮಾಡಿತ್ತು.

Your generous support will help us remain independent and work without fear.

Latest News

Related Posts