‘ಜೇನು ಕುರುಬರು ಮತ್ತು ಸೋಲಿಗರು ಬಂದು ಕಿತ್ತು ಗುಡ್ಡೆ ಹಾಕಿ ಲೆಕ್ಕ ಹಾಕಿಕೊಳ್ಳಿ’; ಅಧಿಕಾರಿಯಿಂದ ನಿಂದನೆ

ಬೆಂಗಳೂರು; ‘ಜೇನು ಕುರುಬರು ಮತ್ತು ಸೋಲಿಗರು ನನ್ನ ಹತ್ತಿರ ಬಂದು ಕಿತ್ತು ಗುಡ್ಡೆ ಹಾಕಿಕೊಂಡು ಲೆಕ್ಕ ಹಾಕಿಕೊಳ್ಳಿ. ಸರ್ಕಾರವು ಎಲ್ಲವನ್ನು ಫ್ರೀ ಕೊಟ್ಟು ತಿಂದು ತಿಂದು ಗೂಳಿ ಹಾಗಿ ಆಗಿರುತ್ತಾರೆ. ಫ್ರೀ ಕೊಡುವುದರಿಂದ ನಮ್ಮ ಕಾಫಿ ತೋಟಕ್ಕೂ ಕೆಲಸಕ್ಕೆ ಬರುವುದಿಲ್ಲ,’

 

ಹೀಗೆಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್‍‌ ಎಂಬುವರು ಸೋಲಿಗರು ಮತ್ತು ಜೇನುಕುರುಬರನ್ನು ಜಾತಿ ಹೆಸರಿಡಿದು  ಹಂಗಿಸಿದ್ದಾರೆ ಎಂದು ಆರೋಪವೊಂದು ಕೇಳಿ ಬಂದಿದೆ.

 

ಈ ಸಂಬಂಧ ಪಿರಿಯಾಪಟ್ಟಣದ ರೇಣಿಗೇಟ್‌ ಹಾಡಿಕೊಪ್ಪದ ಶಾಂತರಾಜು ಎಂಬುವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಹೆಚ್‌ ಸಿ ಮಹದೇವಪ್ಪ  ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

 

2025ರ ಮೇ 20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿರುವ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನಾಟಿ ಕೋಳಿ ಸಾಕಾಣಿಕೆಗಾಗಿ ಶೆಡ್‌ ನಿರ್ಮಾಣ ಮಾಡಲು ಮಂಜೂರಾಗಿದ್ದ ಸಾಲ ಸೌಲಭ್ಯ ನೀಡಲು  ಪರಿವೀಕ್ಷಣೆಗೆ ಬಂದಿದ್ದ   ಸಂದರ್ಭದಲ್ಲಿ ಚಂದ್ರಶೇಖರ್‍‌ ಎಂಬುವರು ಅರ್ಜಿದಾರರನ್ನು ಜಾತಿ ಹೆಸರಿಡಿದು  ಹಂಗಿಸಿದ್ದಾರೆ ಎಂದು ದೂರಿನಲ್ಲಿ ಆಪಾದಿಸಿರುವುದು ಗೊತ್ತಾಗಿದೆ.

 

ದೂರಿನಲ್ಲೇನಿದೆ?

 

‘ನಿನಗೆ ಕೊಡಗು ಜಿಲ್ಲೆಯ ಬಸವನಹಳ್ಳಿಯ ತಮ್ಮಯ್ಯ ಗೊತ್ತ ಎಂದು ಕೇಳಿದರು. ಗೊತ್ತಿಲ್ಲ ಸರ್ ಎಂದೆ. ಅವನು ಜೇನು ಕುರುಬನಾ ಎಂದು ಕೇಳಿದರು. ಏಕೆ ಸರ್ ಎಂದು ಕೇಳಿದೆ. ನಾನು ಕೊಡಗು ಜಿಲ್ಲೆಯಲ್ಲಿ ಅಂಬೇಡ್ಕರ್‍‌ ಅಭಿವೃದ್ಧಿ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಡೆದ ಕಾರ್ಯಕ್ರಮಗಳ ಬಗ್ಗೆ ಅರ್ಜಿ ನೀಡಿದ್ದಾನೆ. ಇದಕ್ಕೆ ನೀನೇ ಕಾರಣ. ನೀನು ಸೋಲಿಗ, ನೀವುಗಳು ಜೇನು ಕುರುಬರು ಮತ್ತು ಸೋಲಿಗರು ಬಂದು ನನ್ನ ಹತ್ತಿರ ಕಿತ್ತು ಗುಡ್ಡೆ ಹಾಕಿಕೊಂಡು 1, 2 ಎಂದು ಲೆಕ್ಕ ಹಾಕಿಕೊಳ್ಳಿ ಎಂದು ಅಶ್ಲೀಲವಾಗಿ ಕೆಟ್ಟ ಪದಗಳಿಂದ ನನ್ನನ್ನು ಮತ್ತು ನಮ್ಮ ಸಮುದಾಯವನ್ನು ನಿಂದಿಸಿರುತ್ತಾರೆ,’ ಎಂದು  ಶಾಂತರಾಜು ಎಂಬುವರು ದೂರಿನಲ್ಲಿ ಘಟನೆಯನ್ನು ವಿವರಿಸಿರುವುದು ತಿಳಿದು ಬಂದಿದೆ.

 

 

 

ಬುಡಕಟ್ಟು ಜನಾಂಗವಾಗಿರುವ ಜೇನು ಕುರುಬರು ಮತ್ತು ಸೋಲಿಗರ ಪುನಶ್ಚೇತನಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಸರ್ಕಾರವು ರೂಪಿಸಿದೆ. ಶೈಕ್ಷಣಿಕವಾಗಿ, ಪೌಷ್ಠಿಕ ಆಹಾರ, ವಸತಿ, ರಸ್ತೆ ಮುಂತಾದವುಗಳನ್ನು ಕಾರ್ಯಗತಗೊಳಿಸಲು ಸಮಾಜ ಕಲ್ಯಾಣ ಅಧಿಕಾರಿಯನ್ನೂ ನಿಯೋಜಿಸಿದೆ. ಆದರೆ ಚಂದ್ರಶೇಖರ್ ಎಂಬುವರು ಟೆಂಡರ್‍‌ದಾರರ ಜತೆ ಶಾಮೀಲಾಗಿ ಉಚಿತವಾಗಿ ನೀಡುವ ಪೌಷ್ಠಿಕ ಆಹಾರ ಕಿಟ್‌ಗಳನ್ನು ವಿತರಿಸಲು ಲಂಚ ಪಡೆಯುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿರುವುದು ಗೊತ್ತಾಗಿದೆ.

 

‘ಪೌಷ್ಠಿಕ ಆಹಾರ ಕಿಟ್‌ಗಳನ್ನು ಮೂರು ಕೇಂದ್ರಗಳಿಂದ ತಲಾ 20ರಂತೆ ಒಟ್ಟು 60 ಕಿಟ್‌ಗಳನ್ನು ಇಳಿಸದೇ ಹಣದ ರೂಪದಲ್ಲಿ ಪಡೆದಿರುತ್ತಾರೆ. ಈ ವಿಚಾರವಾಗಿ ನಾವು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಇದನ್ನು ಪರಿವೀಕ್ಷಣೆ ಮಾಡಿದಾಗ ಸಾಬೀತಾಗಿದೆ. ನಮ್ಮ ಸಮುದಾಯದ ಮಕ್ಕಳಿಗೆ ಸ್ಕಾಲರ್‍‌ ಶಿಪ್‌, ನಿರುದ್ಯೋಗ ಭತ್ಯೆ ಮತ್ತು ಇನ್ನಿತರೆ ಸೌಲಭ್ಯ ಕೊಡಿಸುವಲ್ಲಿ ತಾತ್ಸಾರ ಮಾಡಿರುತ್ತಾರೆ,’ ಎಂದು ದೂರಿನಲ್ಲಿ ಆಪಾದಿಸಿರುವುದು ತಿಳಿದು ಬಂದಿದೆ.

 

ಅಲ್ಲದೇ ‘ಸೌಲಭ್ಯ ಕೇಳಲು ಹೋದರೇ ಶರ್ಟ್ ತೋಳನ್ನು ಹಿಂದಕ್ಕೆ ಎಳೆದುಕೊಂಡು ಗದರಿಸಿ ಕಳಿಸುತ್ತಾರೆ. ಸರ್ಕಾರ ಎಲ್ಲವನ್ನೂ ಫ್ರೀ ಕೊಟ್ಟು ತಿಂದು ತಿಂದು ಗೂಳಿ ಹಾಗಿ ಆಗಿರುತ್ತಾರೆ. ಫ್ರೀ ಕೊಡುವುದರಿಂದ ಇವರು ನಮ್ಮ ಕಾಫಿ ತೋಟಕ್ಕೆ ಕೆಲಸಕ್ಕೆ ಬರುವುದಿಲ್ಲ ಎಂದು ಹಂಗಿಸಿ ಕಳಿಸುತ್ತಾರೆ, ‘ ಎಂದು ದೂರಿನಲ್ಲಿ ಆರೋಪಿಸಿರುವುದು ಗೊತ್ತಾಗಿದೆ.

 

 

ಚಂದ್ರಶೇಖರ್‍‌ ಅವರು ಈ ಹಿಂದೆ ಗಿರಿಜನರಿಗೆ ಸೌಲಭ್ಯ ಕೊಡಲು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದಿದ್ದರು. ಜೈಲಿಗೂ ಸಹ ಹೋಗಿದ್ದರು. ಶೋಷಿತ ಸಮುದಾಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿ ಮಾಡಲು ನಿಯೋಜಿತ ಅಧಿಕಾರಿಯೇ ಹೀಗೆ ವರ್ತಿಸಿದ್ದಾರೆ. ಇವರ ಅವಧಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ. ಇವುಗಳನ್ನು ತನಿಖೆ ಮಾಡಿಸಬೇಕು ಎಂದು ದೂರುದಾರರು ಆಗ್ರಹಿಸಿರುವುದು ದೂರರ್ಜಿಯಿಂದ  ತಿಳಿದು ಬಂದಿದೆ.

 

2025 ರ ಮೇ 15ರಂದೇ ಬೈಲುಕುಪ್ಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಎಫ್‌ಐಆರ್‍‌ ಕೂಡ ಆಗಿದೆ. ಈತ ಪ್ರಭಾವಿ ವ್ಯಕ್ತಿ ಆಗಿರುವ ಕಾರಣ ಸಾಕ್ಷಿ ಹಾಗೂ ಇನ್ನಿತರೆ ವಿಷಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಇವರನ್ನು ತಕ್ಷಣವೇ ಅಮಾನತುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿರುವುದು ಗೊತ್ತಾಗಿದೆ.

SUPPORT THE FILE

Latest News

Related Posts