Monday | April 13, 2026 |

ಕೆರೆ ಒತ್ತುವರಿ ಪ್ರಕರಣ; ಸಚಿವ ಚೆಲುವರಾಯಸ್ವಾಮಿ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ

ಬೆಂಗಳೂರು; ಸರ್ಕಾರಿ ಕೆರೆ ಜಮೀನನ್ನು ಒತ್ತುವರಿ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಅವರನ್ನು ವಿಚಾರಣೆಗೊಳಪಡಿಸುವ ಸಂಬಂಧ ರಾಮಮೂರ್ತಿಗೌಡ ಎಂಬುವರು ರಾಜಭವನ ಕದ ತಟ್ಟಿದ್ದಾರೆ.

 

ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಇದೇ ಪ್ರಕರಣದಲ್ಲಿ  ಜಾರಿ ಮಾಡಿದ್ದ ಸಮನ್ಸ್‌ಗೆ ನ್ಯಾಯಾಲಯ ತಡೆ ವಿಧಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ದೂರರ್ಜಿಯನ್ನು ಆಧರಿಸಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ.

 

ಇದರ  ಬೆನ್ನಲ್ಲೇ ಇದೇ ಪ್ರಕರಣದಲ್ಲಿ ಸಚಿವ ಚೆಲುವರಾಯಸ್ವಾಮಿ ಅವರ ವಿರುದ್ಧ ವಿಚಾರಣೆ ನಡೆಸುವ ಸಂಬಂಧ  ರಾಮಮೂರ್ತಿ ಗೌಡ ಎಂಬುವರು ರಾಜಭವನ ಕದ ತಟ್ಟಿರುವುದು ಮುನ್ನೆಲೆಗೆ ಬಂದಿದೆ.

 

ರಾಜ್ಯಪಾಲರಿಗೆ ಬರೆದ ಪತ್ರದಲ್ಲೇನಿದೆ?

 

ಸರ್ಕಾರಿ ಕೆರೆ ಜಮೀನನ್ನು ಒತ್ತುವರಿ ಮಾಡಿರುವ ಪ್ರಕರಣದಲ್ಲಿ  ಸಚಿವ ಚೆಲುವರಾಯಸ್ವಾಮಿ ಅವರು ಅಧಿಕಾರ ದುರುಪಯೋಗ, ಸ್ವಜಪಕ್ಷಪಾತ, ಕಾನೂನು ಉಲ್ಲಂಘನೆ ಮತ್ತು ಭ್ರಷ್ಟಾಚಾರ ಎಸಗಿದ್ದಾರೆ. ಇವರ ವಿರುದ್ಧ ಬಿಎನ್‌ಎಸ್‌ ಕಾಯ್ದೆ 2023ರ ಸೆಕ್ಷನ್‌ 218 ಮತ್ತು 7ರಿಂದ 15ರ ಪ್ರಕಾರ ಅವರನ್ನು ಲೋಕಾಯುಕ್ತ ನ್ಯಾಯಾಲಯದಲ್ಲಿ  ವಿಚಾರಣೆಗೊಳಪಡಿಸಲು ಅನುಮತಿ ನೀಡಬೇಕು. ಈ ಸಂಬಂಧ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಬೇಕು ಎಂದು ರಾಮಮೂರ್ತಿಗೌಡ ಅವರು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

 

 

 

 

ಈ ಸಂಬಂಧ ವೆಂಕಟೇಶ ಬೋವಿ ಎಂಬುವರು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

 

 

ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಆಕ್ಷೇಪಣೆ ಬಯಸಿ ಸಾರ್ವಜನಿಕವಾಗಿ ನೋಟೀಸ್‌ ಕೂಡ ಪ್ರಕಟಿಸಿತ್ತು.

 

‘ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ದಾಸನಪುರ ಹೋಬಳಿ ಮಾಕಳಿ ಗ್ರಾಮದ ಸರ್ವೆ ನಂಬರ್‍‌ 13ರಲ್ಲಿರುವ 3.22 ಎಕರೆ ವಿಸ್ತೀರ್ಣದಲ್ಲಿನ ಸರ್ಕಾರಿ ಕೆರೆ ಜಮೀನನ್ನು ಒತ್ತುವರಿ ಮಾಡಿರುವ ಅಪರಾಧಕ್ಕಾಗಿ ಅಪರಾಧಿಯಾದ ಆರೋಪಿ ಎನ್‌ ಚೆಲುವರಾಯಸ್ವಾಮಿ ಅವರ ವಿರುದ್ಧ ಎಲ್‌ಜಿಸಿ (ಎಸ್‌ ನಂ) 409/2023 ಪ್ರಕರಣದಲ್ಲಿ 2024ರ ಮಾರ್ಚ್‌ 28ರಂದು ನ್ಯಾಯಾಲಯದ ಆದೇಶದ ಅನ್ವಯ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ 2011ರ ನಿಯಮ 9(7)ರಂತೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಸಂಜ್ಞೇಯಕ್ಕೆ ತೆಗೆದುಕೊಂಡಿದೆ. ಕಾಯ್ದೆ ಪ್ರಕಾರ ಈ ವಿಷಯದಲ್ಲಿ ಯಾವುದೇ ಆಸಕ್ತ ವ್ಯಕ್ತಿಗಳು ಈ ನ್ಯಾಯಾಲಯದ ಮುಂದೆ ವಿಚಾರಣೆ ದಿನಾಂಕದಂದು ಅಥವಾ ಮೊದಲು ಆಕ್ಷೇಪಣೆ ಸಲ್ಲಿಸಬಹುದು,’ ಎಂದು ನೋಟೀಸ್‌ನಲ್ಲಿ ತಿಳಿಸಿತ್ತು.

 

 

ಸರ್ಕಾರಿ ಕೆರೆ ಜಾಗ ಒತ್ತುವರಿ ಮಾಡಿರುವ ಸ್ಥಳದಲ್ಲಿ ನಿರ್ಮಾಣವಾಗಿದೆ ಎನ್ನಲಾಗಿರುವ ಸುಮಾರು 70 ಕೋಟಿ ರು. ಬೆಲೆಬಾಳುವ ಕಟ್ಟಡವನ್ನೇ ದಾನದ ರೂಪದಲ್ಲಿ ಪಡೆದಿರುವ ಕೃಷಿ ಸಚಿವ ಎನ್‌ ಚೆಲುವರಾಯಸ್ವಾಮಿ ಅವರ ವಿರುದ್ಧ 2024ರ ಮಾರ್ಚ್‌ 13ರಂದು ಇದೇ  ರಾಮಮೂರ್ತಿ ಗೌಡ ಎಂಬುವರು ದೂರು ದಾಖಲಿಸಿದ್ದರು.

 

 

ಆದರೆ ಲೋಕಾಯುಕ್ತ ಸಂಸ್ಥೆಯು 7 ತಿಂಗಳಾದರೂ ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿಲ್ಲ.

 

 

ಅಷ್ಟೇ ಅಲ್ಲ, ದೂರು ಸಲ್ಲಿಸಿ 7  ತಿಂಗಳಾದರೂ ಪ್ರತಿವಾದಿಗಳ್ಯಾರಿಗೂ ಒಂದೇ ಒಂದು ನೋಟೀಸ್‌ ಕೂಡ ಜಾರಿಗೊಳಿಸಿಲ್ಲ.

 

 

ಪ್ರಕರಣದ ವಿವರ

 

ಬೆಂಗಳೂರು ನಗರ ಜಿಲ್ಲೆಯ ದಾಸನಪುರ ಹೋಬಳಿ ಮಾಕಳಿ ಗ್ರಾಮದ ಸರ್ವೆ ನಂಬರ್‍‌ 13 ರಲ್ಲಿ 3.31 ಕುಂಟೆ ಸರ್ಕಾರಿ ಕೆರೆ ಜಾಗವಿದೆ.  ಲಕ್ಷ್ಮಿಕಾಂತ ಎಂಬುವರು ಸ್ವಯಾರ್ಜಿತವಾಗಿ ಖರೀದಿಸಿದ್ದರು ಎನ್ನಲಾಗಿದೆ. ಆದರೆ ಈ ಕೆರೆ ಜಾಗವನ್ನು ಮೊದಲು ಯಾರು ಖರೀದಿಸಿದ್ದರು ಎಂಬ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೇ ಈ ಸರ್ಕಾರಿ ಜಾಗವು ಈ ಹಿಂದೆ ಯಾರ್‍ಯಾರ ಹೆಸರಿನಲ್ಲಿ ನೋಂದಣಿ ಆಗಿತ್ತು ಎಂಬ ಮಾಹಿತಿಯೂ ತಿಳಿದು ಬಂದಿಲ್ಲ.

 

ಸರ್ಕಾರಿ ಕೆರೆ ಒತ್ತುವರಿ ಜಾಗದಲ್ಲಿದ್ದ ಕಟ್ಟಡ ದಾನಪತ್ರ; ಸಚಿವ ಚಲುವರಾಯಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು

ಹಾಲಿ ಕೃಷಿ ಸಚಿವ ಎನ್‌ ಚೆಲುವರಾಯಸ್ವಾಮಿ ಅವರಿಗೆ  2021ರ ಜುಲೈ 27ರಂದು ದಾನ ಪತ್ರ ಮುಖಾಂತರ ನೋಂದಣಿ ಮಾಡಿಕೊಟ್ಟಿರುವುದು ದಾಖಲೆಯಿಂದ ತಿಳಿದು ಬಂದಿದೆ. ಮತ್ತೊಂದು ವಿಶೇಷವೆಂದರೇ ದಾನ ನೀಡಿರುವ ಲಕ್ಷ್ಮಿಕಾಂತ ಅವರು ಸಚಿವ ಚೆಲುವರಾಯಸ್ವಾಮಿ ಅವರ ಸೋದರ ಎಂದು ಗೊತ್ತಾಗಿದೆ.

 

 

ಬೆಂಗಳೂರು ಉತ್ತರ ತಾಲೂಕು ಭೂ ದಾಖಲೆಗಳ ಸಹಾಯ ನಿರ್ದೇಶಕರು 2022ರ ಅಕ್ಟೋಬರ್‍‌ 13ರಲ್ಲಿ ಈ ಸರ್ವೆ ನಂಬರ್‍‌ನಲ್ಲಿ ಕೆರೆ ಎಂದು ದೃಢೀಕರಿಸಿರುವುದು ಗೊತ್ತಾಗಿದೆ.

 

 

ಎರಡನೇ ರೀ ಕ್ಲಾಸಿಫಿಕೇಷನ್‌ ಪುಸ್ತಕದಲ್ಲೂ ಈ ಸರ್ವೆ ನಂಬರ್‍‌ ಖರಾಬು ಕೆರೆ ಎಂದು ನಮೂದಾಗಿರುವುದು ದಾಖಲೆಯಿಂದ ಗೊತ್ತಾಗಿದೆ.

 

 

 

ಆರ್‍‌ಟಿಸಿಯಲ್ಲಿಯೂ ಚೆಲುವರಾಯಸ್ವಾಮಿ ಅವರ ಹೆಸರು ನಮೂದಾಗಿದೆ.

 

 

 

ಅಲ್ಲದೇ ಈ ಜಮೀನಿನ ಮೇಲೆ ತುಮಕೂರಿನ ಎಸ್‌ ಎಸ್‌ ಪುರದ ಕೆನರಾಬ್ಯಾಕ್‌ ಶಾಖೆಯಲ್ಲಿ 12,45,000 ರು. ಸಾಲ ಪಡೆದಿದ್ದಾರೆ ಎಂಬ ಆರೋಪ ಕೇಳ ಬಂದಿದೆ.

 

ಕೆರೆ ಜಾಗವನ್ನು ಒತ್ತುವರಿ ಮಾಡಿ ಈ ಜಾಗದಲ್ಲಿ ಹಿಮಾಲಯ ಡ್ರಗ್‌ ಹೌಸ್‌ ಕಟ್ಟಡ ನಿರ್ಮಾಣ ಮಾಡಲಾಗಿದೆ. ತಿಂಗಳಿಗೆ 10 ಲಕ್ಷ ರು. ಬಾಡಿಗೆ ಪಡೆಯುತ್ತಿದ್ದಾರೆ ಎಂದು ದೂರುದಾರ ರಾಮಮೂರ್ತಿ ಗೌಡ ದೂರಿನಲ್ಲಿ ತಿಳಿಸಿರುವುದನ್ನು ಸ್ಮರಿಸಬಹುದು.

Hot this week

ಗಾಲ್ಫ್‌ ಅಸೋಸಿಯೇಷನ್‌ನ ಜಮೀನಿನ ಸರ್ವೇ, ಆದಾಯ ಪರಿಶೀಲನೆ; ಜಿಬಿಎ ಮುಖ್ಯ ಆಯುಕ್ತ, ಜಿಲ್ಲಾಧಿಕಾರಿಗೆ ಪತ್ರ ಬರೆದ ಸರ್ಕಾರ

ಬೆಂಗಳೂರು;  ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್ ಸಂಸ್ಥೆಗೆ ನೀಡಲಾಗಿರುವ ಜಮೀನಿನ ಸರ್ವೇ ನಡೆಸಲು...

866.59 ಕೋಟಿ ರು ಮೊತ್ತದ 399 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಗೆ ಬಾಕಿ ಉಳಿಸಿಕೊಂಡ ಇಲಾಖೆಗಳು; ಅನುದಾನ ದುರುಪಯೋಗ ಸಾಧ್ಯತೆ?

ಬೆಂಗಳೂರು; ರಾಜ್ಯದ ಹಲವು ಇಲಾಖೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಕೆಯಲ್ಲಿ ತೀವ್ರ...

ಸರ್ಕಾರಿ ಸೇವೆ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಎರಡು ವರ್ಷದಲ್ಲಿ ಇಳಿಕೆಯಾಗಿದೆಯೇ?

ಬೆಂಗಳೂರು; ರಾಜ್ಯ ಸರ್ಕಾರದ ಶಿಕ್ಷಣ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ; ಅಧಿಕಾರಿಗಳ ವಿರುದ್ಧ ದಾಖಲಾಗದ ಎಫ್‌ಐಆರ್, ವರದಿ ಸಲ್ಲಿಸಲು ಸೂಚನೆ

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ತವರು ಕ್ಷೇತ್ರದಲ್ಲಿ...

Topics

ಗಾಲ್ಫ್‌ ಅಸೋಸಿಯೇಷನ್‌ನ ಜಮೀನಿನ ಸರ್ವೇ, ಆದಾಯ ಪರಿಶೀಲನೆ; ಜಿಬಿಎ ಮುಖ್ಯ ಆಯುಕ್ತ, ಜಿಲ್ಲಾಧಿಕಾರಿಗೆ ಪತ್ರ ಬರೆದ ಸರ್ಕಾರ

ಬೆಂಗಳೂರು;  ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್ ಸಂಸ್ಥೆಗೆ ನೀಡಲಾಗಿರುವ ಜಮೀನಿನ ಸರ್ವೇ ನಡೆಸಲು...

866.59 ಕೋಟಿ ರು ಮೊತ್ತದ 399 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಗೆ ಬಾಕಿ ಉಳಿಸಿಕೊಂಡ ಇಲಾಖೆಗಳು; ಅನುದಾನ ದುರುಪಯೋಗ ಸಾಧ್ಯತೆ?

ಬೆಂಗಳೂರು; ರಾಜ್ಯದ ಹಲವು ಇಲಾಖೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಕೆಯಲ್ಲಿ ತೀವ್ರ...

ಸರ್ಕಾರಿ ಸೇವೆ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಎರಡು ವರ್ಷದಲ್ಲಿ ಇಳಿಕೆಯಾಗಿದೆಯೇ?

ಬೆಂಗಳೂರು; ರಾಜ್ಯ ಸರ್ಕಾರದ ಶಿಕ್ಷಣ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

ಬಳಕೆಯಾಗದ ಅನುದಾನ; ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಿಲ್ಲ 10,546.42 ಕೋಟಿ, ಸಿಎಜಿ ಆಕ್ಷೇಪಣೆ

ಬೆಂಗಳೂರು; ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ 2024-25ನೇ ಸಾಲಿನಲ್ಲಿ   ಒಟ್ಟು...

Related Articles

Popular Categories

error: Content is protected !!