ಖಾಸಗಿ ಬ್ಯಾಂಕ್‌ಗಳಲ್ಲಿ ನಿಗಮದ ಬಹುಕೋಟಿ ಠೇವಣಿ; ಹೊರಗುತ್ತಿಗೆ ನೌಕರರಿಂದಲೇ ಖಾತೆಗಳ ನಿರ್ವಹಣೆ

ಬೆಂಗಳೂರು; ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳ ವಿವಿಧ ಖಾತೆಗಳಲ್ಲಿ ಇರಿಸಿರುವ ಕೋಟ್ಯಂತರ ರುಪಾಯಿಗಳ ವಹಿವಾಟು ನಡೆಸಲು   ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನೇ ಅಧಿಕೃತ ಸಹಿದಾರರನ್ನಾಗಿಸಿರುವುದು ಇದೀಗ ಬಹಿರಂಗವಾಗಿದೆ.

 

ಕ್ಯೂ ಆರ್‍‌ ಕೋಡ್‌ ಬಳಸಿ ನಿಗಮದ ಖಾತೆಯಿಂದಲೇ ಲಕ್ಷಾಂತರ ರುಪಾಯಿಗಳನ್ನು ಹೊರ ಗುತ್ತಿಗೆ ಮತ್ತು ಗುತ್ತಿಗೆ ನೌಕರರು ಡ್ರಾ ಮಾಡಿಕೊಂಡಿರುವ ಪ್ರಕರಣವನ್ನು ಸಚಿವ ಹೆಚ್‌ ಕೆ ಪಾಟೀಲ್‌ ಅವರು ಪತ್ತೆ ಹಚ್ಚಿದ್ದರು. ಇದರ  ಬೆನ್ನಲ್ಲೇ ನಿಗಮವು ಇನ್ನಿತೆರೆ ಬ್ಯಾಂಕ್‌ಗಳ ಖಾತೆಯಲ್ಲಿರುವ  ಕೋಟ್ಯಂತರ ರುಪಾಯಿಗಳನ್ನು ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರೇ ನಿರ್ವಹಿಸುತ್ತಿರುವುದು ಮುನ್ನೆಲೆಗೆ ಬಂದಿದೆ.

 

ಹೊರಗುತ್ತಿಗೆ ಮತ್ತು ಗುತ್ತಿಗೆ ನೌಕರರಿಗೆ ಯಾವುದೇ ಹೊಣೆಗಾರಿಕೆ ಇಲ್ಲದಿದ್ದರೂ ಸಹ ನಿಗಮವು ಕಳೆದ ಹಲವು ವರ್ಷಗಳಿಂದಲೂ ಖಾತೆಗಳಿಂದ ವಹಿವಾಟು ನಡೆಸಲು ಅಧಿಕೃತ ಸಹಿದಾರರನ್ನಾಗಿಸಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.

 

ಯೆಸ್‌ ಬ್ಯಾಂಕ್‌ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ವಿವಿಧ ಶಾಖೆಗಳ ಖಾತೆಗಳಲ್ಲಿ 48 ಕೋಟಿ ರು ಹೆಚ್ಚು ಹಣವನ್ನು ಹಲವು ವರ್ಷಗಳಿಂದಲೂ ಠೇವಣಿ ಇರಿಸಿದೆ. ಯೆಸ್‌ ಬ್ಯಾಂಕ್‌ನಲ್ಲಿ ಖಾತೆ ಸಂಖ್ಯೆ (002294600001394) ನಲ್ಲಿ 22,69,80,408 ರು., ಹೆಚ್‌ ಡಿ ಎಫ್‌ಸಿಯಲ್ಲಿಯೂ ಚಾಲ್ತಿ ಮತ್ತು ಉಳಿತಾಯ ಖಾತೆಗಳನ್ನು ತೆರೆದಿದ್ದಾರೆ. ಇದರಲ್ಲಿ 20,29,89,685 ರು. ಗಳನ್ನು ಠೇವಣಿ ಇರಿಸಿರುವುದು ಗೊತ್ತಾಗಿದೆ.

 

ಇದಕ್ಕೆ ಸಂಬಂಧಿಸಿದಂತೆ ನಿಗಮವು ವಿವಿಧ ಬ್ಯಾಂಕ್‌ಗಳಲ್ಲಿ ಹೊಂದಿರುವ ಖಾತೆಗಳ ವಿವರ ಮತ್ತು ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಹೆಚ್‌ಡಿಎಫ್‌ಸಿ ಮತ್ತು ಯೆಸ್‌ ಬ್ಯಾಂಕ್‌ನಲ್ಲಿ ನ ನಿಗಮದ ಖಾತೆಗಳನ್ನು ನಿರ್ವಹಿಸುವ ಅಧಿಕಾರವನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನೀಡಲಾಗಿದೆ. ಇನ್ನುಳಿದಂತೆ ಕೆನರಾ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ ಸೇರಿದಂತೆ ವಿವಿಧ ಬ್ಯಾಂಕ್‌ಗಳಲ್ಲಿ ನಿಗಮವು ಹೊಂದಿರುವ ಖಾತೆಗಳನ್ನು ಹೊರಗುತ್ತಿಗೆ ಮತ್ತು ಗುತ್ತಿಗೆ ನೌಕರರೇ ನಿರ್ವಹಿಸುತ್ತಿರುವುದು ತಿಳಿದು ಬಂದಿದೆ.

 

ನಿಗಮದ ಪ್ರಧಾನ ಕಚೇರಿಯಲ್ಲಿನ ಸಾರಿಗೆ ವಿಭಾಗವು ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಚಾಲ್ತಿ ಖಾತೆ ಹೊಂದಿದೆ. ಇದನ್ನು ಕೆಎಸ್‌ಟಿಡಿಸಿ ಟ್ರಾನ್ಸ್‌ಪೋರ್ಟ್‌ ಆಪರೇಷನ್‌ ಖಾತೆ ಎಂದು ಹೆಸರಿಸಿದೆ. (ಖಾತೆ ಸಂಖ್ಯೆ; 50200048555814) ಇದರಲ್ಲಿ 2024ರ ಜೂನ್‌ 12ರವರೆಗೆ 30,19,193 ರು ಇದೆ. ಇದನ್ನು ಗುತ್ತಿಗೆ ನೌಕರನಾದ ದೀಪಕ್‌ ಪೈ ಮತ್ತು ಅಕ್ಕಮ್ಮ ಎಂಬುವರು ನಿರ್ವಹಿಸುತ್ತಿರುವುದು ಗೊತ್ತಾಗಿದೆ.

 

ಕೆನರಾ ಬ್ಯಾಂಕ್‌ನಲ್ಲಿ ನಿಗಮವು ಚಾಲ್ತಿ ಖಾತೆ ಹೊಂದಿದೆ. (ಸಂಖ್ಯೆ; 08872010000951) ಇದರಲ್ಲಿ 4,354 ರು ಇದೆ. ಇದನ್ನು ಖಾಯಂ ನೌಕರ ಪ್ರಭಾಕರ ಎಂಬುವರು ನಿರ್ವಹಿಸುತ್ತಿದ್ದಾರೆ. ಮೈಸೂರಿನ ಸಾರಿಗೆ ವಿಭಾಗವು ಕೆನರಾ ಬ್ಯಾಂಕ್‌ನಲ್ಲಿ ಚಾಲ್ತಿ ಖಾತೆ ಹೊಂದಿದೆ. (0518201002414) ನಲ್ಲಿ 7,723 ರು ಇದೆ. ಇದನ್ನು ಗುತ್ತಿಗೆ ನೌಕರ ಮಧುರಾಜ್‌ ಕೆ ಆರ್‍‌ ಎಂಬುವರು ನಿರ್ವಹಿಸಲು ಅಧಿಕಾರ ನೀಡಿರುವುದು ತಿಳಿದು ಬಂದಿದೆ.

 

ಬ್ಯಾಂಕ್‌ ಆಫ್‌ ಬರೋಡಾದ ಬನ್ನೇರುಘಟ್ಟ ಸಫಾರಿ ಶಾಖೆಯಲ್ಲಿ ಚಾಲ್ತಿ ಖಾತೆ ಹೊಂದಿದೆ. (89470200000519) ನಲ್ಲಿ 10,738 ರು. ಇದೆ. ಇದನ್ನು ಗುತ್ತಿಗೆ ನೌಕರ ಯೋಗೇಶ್‌ ಎಂ ಕೆ ಎಂಬುವರು ನಿರ್ವಹಿಸುತ್ತಿದ್ದಾರೆ. ಹೋಟೆಲ್‌ ಮಯೂರ ಬಾಲಭವನದ ಹೆಸರಿನಲ್ಲಿರುವ   ಚಾಲ್ತಿ ಖಾತೆಯಲ್ಲಿ 11,105 ರು ಇದೆ. ಇದನ್ನು ಹೊರಗುತ್ತಿಗೆ ನೌಕರ ನಾಗಭೂಷಣ್‌ ಎಂಬುವರು ನಿರ್ವಹಿಸುತ್ತಿದ್ದಾರೆ. ಅದೇ ರೀತಿ ಬನ್ನೇರುಘಟ್ಟದಲ್ಲಿರುವ ವನಶ್ರೀ ಶಾಖೆಯಲ್ಲಿ 2,246 ರು ಇದೆ. ಇದನ್ನು ಹೊರಗುತ್ತಿಗೆ ನೌಕರ ರುದ್ರೇಶ್‌ ಎಂಬುವರು ನಿರ್ವಹಿಸುತ್ತಿದ್ದಾರೆ ಎಂದು ಗೊತ್ತಾಗಿದೆ.

 

ನಂದಿ ಹಿಲ್ಸ್‌ನಲ್ಲಿರುವ ಶಾಖೆಯನ್ನು 9,587 ರು. ಇದೆ. ಇದನ್ನು ಹೊರಗುತ್ತಿಗೆ ನೌಕರ ಮನೋಜ್‌ಕುಮಾರ್‍‌ ನಿರ್ವಹಿಸುತ್ತಿದ್ದಾರೆ. ಶಿವನಸಮುದ್ರದಲ್ಲಿರುವ ಶಾಖೆಯಲ್ಲಿ 3,53,000 ರು. ಇದೆ. ಇದನ್ನು ಗುತ್ತಿಗೆ ನೌಕರ ಗುರುಪ್ರಸಾದ್‌ ಎಂಬುವರು ನಿರ್ವಹಿಸುತ್ತಿದ್ದಾರೆ.

 

ಊಟಿಯಲ್ಲಿರುವ ಕೆನರಾ ಬ್ಯಾಂಕ್‌ ಶಾಖೆಯಲ್ಲಿ 26,590 ರ. ಇದೆ. ಇದನ್ನು ಗುತ್ತಿಗೆ ನೌಕರ ಕಾರ್ತಿಕ್ ಸಂತೋಷ್‌ ನಿರ್ವಹಿಸುತ್ತಿದ್ದಾರೆ. ಮಡಿಕೇರಿಯಲ್ಲಿರುವ ಹೋಟೆಲ್‌ ಮಯೂರ ವ್ಯಾಲಿಯ ಶಾಖೆಯಲ್ಲಿ 1,25,000 ರು ಕೆನರಾ ಬ್ಯಾಂಕ್‌ನಲ್ಲಿ ಇದೆ. ಇದನ್ನು ಗುತ್ತಿಗೆ ನೌಕರ ರಿಜ್ಞಾನ್‌ ಅಹ್ಮದ್‌ ಎಂಬುವರು ನಿರ್ವಹಿಸುತ್ತಿದ್ದಾರೆ.

 

ಜೋಗ್‌ಫಾಲ್ಸ್‌ನಲ್ಲಿರುವ ಶಾಖೆಯಲ್ಲಿ 61,000 ರು ಇದೆ. ಇದನ್ನುಹೊರಗುತ್ತಿಗೆ ನೌಕರ ಮನೋಜ್‌ಕುಮಾರ್‍‌ ಎಂಬುವರು ನಿರ್ವಹಿಸುತ್ತಿದ್ದಾರೆ. ಹಳೇಬೀಡಿನಲ್ಲಿರುವ ಹೋಟೆಲ್‌ ಮಯೂರ ಶಾಂತಲ ಹೆಸರಿನಲ್ಲಿರುವ ಖಾತೆಯಲ್ಲಿ 1,49,395 ರು ಇದೆ. ಇದನ್ನು ಗುತ್ತಿಗೆ ನೌಕರ ಶ್ರೇಯಸ್‌ ಎಂಬುವರು ನಿರ್ವಹಿಸುತ್ತಿದ್ದಾರೆ. ಹಂಪಿಯಲ್ಲಿರುವ ಹೋಟೆಲ್‌ ಮಯೂರು ಭುವನೇಶ್ವರಿ ಹೆಸರಿನಲ್ಲಿರುವ ಖಾತೆಯಲ್ಲಿ 1,81,784 ರು ಇದೆ. ಇದನ್ನು ಗುತ್ತಿಗೆ ನೌಕರ ಸುನೀಲ್‌ಕುಮಾರ್‍‌ ಎಂಬುವರು ನಿರ್ವಹಿಸುತ್ತಿದ್ದಾರೆ.

 

ಬೆಂಗಳೂರಿನಲ್ಲಿರುವ ಹೋಟೆಲ್‌ ಕುಮಾರಕೃಪ ಅತಿಥಿ ಗೃಹದ ಹೆಸರಿನ ಖಾತೆಯಲ್ಲಿ 28,47,000 ರು ಇದೆ. ಇದನ್ನು ಗುತ್ತಿಗೆ ನೌಕರ ಕಿರಣ್‌ ಕುಮಾರ್ ಎಂಬುವರು ನಿರ್ವಹಿಸುತ್ತಿದ್ದಾರೆ. ಈ ಎಲ್ಲಾ ಮಾಹಿತಿಗಳು ನಿಗಮದ ಅಧ್ಯಕ್ಷ ಸರೋವರ ಶ್ರೀನಿವಾಸ್‌ ಅವರಿಗೆ ಗೊತ್ತಿದ್ದರೂ ಮೌನ ವಹಿಸಿದ್ದಾರೆ ಎಂದು ಗೊತ್ತಾಗಿದೆ. ಅಲ್ಲದೇ ಈ ಬಗ್ಗೆ ಪ್ರತಿಕ್ರಿಯೆ ಕೋರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್‌ ಅವರಿಗೆ ಮತ್ತು ವ್ಯವಸ್ಥಾಪಕ ನಿರ್ದೇಶಕರ ಹೆಸರಿನಲ್ಲಿರುವ ಅಧಿಕೃತ ಇ-ಮೇಲ್‌ ಮೂಲಕ ‘ದಿ ಫೈಲ್‌ ‘ ಸಂಪರ್ಕಿಸಿತ್ತು. ಆದರೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

 

ಅಧೀನದಲ್ಲಿರುವ ಮಯೂರ ಬಾಲ ಭವನದ ಖಾಯಂ, ಗುತ್ತಿಗೆ ಮತ್ತು ಹೊರಗುತ್ತಿಗೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ನಿಗಮದ ಕ್ಯೂ ಆರ್‍‌ ಕೋಡ್‌ ಬಳಸದೇ ವೈಯಕ್ತಿಕ ಕ್ಯೂ ಆರ್‍‌ ಕೋಡ್‌ ಬಳಸಿ ಲಕ್ಷಾಂತರ ರುಪಾಯಿ ದುರುಪಯೋಗಪಡಿಸಿಕೊಂಡಿದ್ದರು.

 

ಬಾಲ ಭವನದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ನಾಗಭೂಷಣ್‌ ಎಂಬುವರೂ ಸೇರಿದಂತೆ ಒಟ್ಟು 4 ಮಂದಿಯೂ ಸಹ ನಿಗಮದ ಹಣದ ವ್ಯವಹಾರವನ್ನು ನಿಗಮದ ಕ್ಯೂ ಆರ್‍‌ ಕೋಡ್‌ ಬಳಸದೇ ವೈಯಕ್ತಿಕ ಕ್ಯೂ ಆರ್‍‌ ಕೋಡ್‌ ಬಳಸಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ವೈಯಕ್ತಿಕ ಬ್ಯಾಂಕ್‌ ಖಾತೆಯ ಪರಿಶೀಲನೆಯಿಂದ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ಸಿಬ್ಬಂದಿಗಳ ಕ್ರಿಮಿನಲ್‌ ಕೇಸ್‌ ಮತ್ತು ಎಫ್ಐಆರ್‍‌ ದಾಖಲಿಸಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರು 2024ರ ಜೂನ್‌ 18ರಂದು ಕಛೇರಿ ಆದೇಶ ಹೊರಡಿಸಿದ್ದರು.

 

ಈ ಪ್ರಕರಣಗಳು  ಸಚಿವ ಹೆಚ್‌ ಕೆ ಪಾಟೀಲ್‌ ಅವರ ಗಮನಕ್ಕೆ ಬಂದ ಕೂಡಲೇ ಈ ಬಗ್ಗೆ  ಆಂತರಿಕ ತನಿಖೆ ನಡೆಸಲು ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದರು. ಈ ಸಂಬಂಧ ಬ್ಯಾಂಕ್‌ ಖಾತೆಗಳ ಪರಿಶೀಲನೆ ನಡೆದಿತ್ತು. ಹೀಗಾಗಿ  ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಸಿಬ್ಬಂದಿಯನ್ನು ಅಮಾನತು ಮತ್ತು ವಜಾಗೊಳಿಸಲಾಗಿದೆ. ಸಚಿವರ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ.

 

ಅಮಾನತು ಮತ್ತು ವಜಾಗೊಂಡಿರುವ ಸಿಬ್ಬಂದಿಯು ಹಣ ದುರುಪಯೋಗ ಪಡಿಸಿಕೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ. ಇವರನ್ನು ಗುತ್ತಿಗೆ ಸೇವೆಯಿಂದ ವಜಾಗೊಳಿಸಿ 2024ರ ಜೂನ್‌ 18 ಮತ್ತು 19ರಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದರು.

ಕ್ಯೂ ಆರ್‍‌ ಕೋಡ್‌ ಬಳಸಿ ಲಕ್ಷಾಂತರ ರು ದುರುಪಯೋಗ; ಪ್ರವಾಸೋದ್ಯಮ ನಿಗಮದಲ್ಲಿ ಹೈಟೆಕ್‌ ವಂಚನೆ

 

 

ಮಯೂರ ಬಾಲ ಭವನದಲ್ಲಿ ಗುತ್ತಿಗೆ ಆಧಾರದಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿರುವ ರಾಮಚಂದ್ರ ಕೆ ಎಂಬುವರು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಕ್ಯೂ ಆರ್‍‌ ಕೋಡ್‌ ಬಳಸದೇ ವೈಯಕ್ತಿಕ ಕ್ಯೂ ಆರ್‍‌ ಕೋಡ್‌ ಬಳಸಿ ವೈಯಕ್ತಿಕ ಖಾತೆಗೆ 31,917 ರು.ಗಳನ್ನು ಯುಪಿಐ ಮುಖಾಂತರ ಪಡೆದಿದ್ದಾರೆ. ಇದು ಬ್ಯಾಂಕ್‌ ಸ್ಟೇಟ್‌ಮೆಂಟ್‌ನಿಂದ ತಿಳಿದು ಬಂದಿದೆ. ರಾಮಚಂದ್ರ ಅವರು 2024ರ ಏಪ್ರಿಲ್‌ 2ರಿಂದ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದರು.

 

ಬಾಲ ಭವನದ ಸಹಾಯಕ ಉಗ್ರಾಣಿಕ ಕೆ ವೆಂಕಟೇಶ್‌ ಎಂಬುವರು ನಿಗಮದ ಕ್ಯೂ ಆರ್‍‌ ಕೋಡ್‌ ಬಳಸದೇ ವೈಯಕ್ತಿಕ ಕ್ಯೂ ಆರ್‍‌ ಕೋಡ್‌ ಬಳಸಿ 48,642 ರು.ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. 2023ರ ಮೇ 14ರಿಂದ 21ರವರೆಗೆ ಹಣ ದುರುಪಯೋಗಪಡಿಸಿಕೊಂಡಿದ್ದರು.

ಲಕ್ಷಾಂತರ ರು.ಮೊತ್ತದ ವಿದ್ಯಾರ್ಥಿ ಶುಲ್ಕಕ್ಕೂ ಕನ್ನ; ಖಜಾನೆಗೆ ಜಮೆಯಿಲ್ಲ, ಸ್ವಂತಕ್ಕೆ ಬಳಕೆ, ದಿಕ್ಕು ತಪ್ಪಿದೆ ಆಡಳಿತ

‘ನಿಗಮದ ಒಬ್ಬ ಜವಾಬ್ದಾರಿಯುತ ನೌಕರರಾಗಿದ್ದು ತಾವು ನಿರ್ವಹಿಸಬೇಕಾದ ಕಾರ್ಯವಿಧಾನವನ್ನು ಅನುಸರಿಸದೇ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡು ಆರ್ಥಿಕ ನಷ್ಟವನ್ನುಂಟು ಮಾಡಲಾಗಿದೆ. ಮತ್ತು ತಮ್ಮ ಕರ್ತವ್ಯದಲ್ಲಿ ದುರುದ್ದೇಶ ಹಾಗೂ ಬೇಜವಾಬ್ದಾರಿ ತೋರಿರುತ್ತೀರಿ. ಇಲಾಖೆ ವಿಚಾರಣೆ ಕಾಯ್ದಿರಿಸಿ ನಿಗಮದ ಸೇವೆಯಿಂದ ಅಮಾನತುಗೊಳಿಸಲಾಗಿತ್ತು.

ನಕಲಿ ದಾಖಲೆ ಸೃಷ್ಟಿಸಿ ಅನಧಿಕೃತ ಖಾತೆಗಳಿಗೆ 94.73 ಕೋಟಿ ವರ್ಗಾವಣೆ; ನಿಗಮವನ್ನೇ ಕತ್ತಲಲ್ಲಿಟ್ಟಿದ್ದ ಬ್ಯಾಂಕ್‌!

 

ನಿಗಮದಲ್ಲಿ ಗುತ್ತಿಗೆ ಆಧಾರದ ಮೇಲೆ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಅಬ್ದುಲ್‌ ವಾಜಿದ್‌ ನಿಗಮದ ಕ್ಯೂ ಆರ್‍‌ ಕೋಡ್‌ ಬಳಸದೇ ವೈಯುಕ್ತಿಕ ಕ್ಯೂ ಆರ್‍‌ ಕೋಡ್‌ ಬಳಸಿ 2,66, 215 ರು.ಗಳನ್ನು ಯುಪಿಐ ಮುಖಾಂತರ ಹಣ ದುರುಪಯೋಗಪಡಿಸಿಕೊಂಡಿರುವುದನ್ನು ಬ್ಯಾಂಕ್‌ ಖಾತೆಯ ಸ್ಟೇಟ್‌ಮೆಂಟ್‌ನಿಂದ ತಿಳಿದು ಬಂದಿದೆ. ಹಣ ದುರುಪಯೋಗ ಮಾಡಿಕೊಂಡಿರುವುದನ್ನು ಒಪ್ಪಿಕೊಂಡಿದ್ದರು.

ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಅಕ್ರಮ; ಆರೋಪಿತರ ಮನವಿಯಲ್ಲಿ ಉನ್ನತ ಶಿಕ್ಷಣ ಸಚಿವರ ಕಚೇರಿಯ ಪ್ರಸ್ತಾಪ

 

ನಿಗಮದ ಖಾಯಂ ನೌಕರರಾದ ಕೋದಂಡರಾಮಯ್ಯ ಎಂಬುವರು ಸಹ 2023ರ ನವೆಂಬರ್‍‌ 24ರಿಂದ 2024ರ ಮೇ 23ರವರೆಗೆ 3,920 ರ.ಗಳನ್ನು ವೈಯಕ್ತಿಕ ಕ್ಯೂ ಆರ್‍‌ ಕೋಡ್‌ ಬಳಸಿ ದುರುಪಯೋಗಪಡಿಸಿಕೊಂಡಿದ್ದಾರೆ. ಇವರನ್ನು ಸೇವೆಯಿಂದ ಅಮಾನತುಗೊಳಿಸಿರುವುದನ್ನು ಸ್ಮರಿಸಬಹುದು.

 

the fil favicon

SUPPORT THE FILE

Latest News

Related Posts