1 ಲಕ್ಷ ರು. ಸಾಲಮನ್ನಾ ಯೋಜನೆ; ಇನ್ನೂ ಬಿಡುಗಡೆಯಾಗದ 232.00 ಕೋಟಿ ರು., ಸಂಕಷ್ಟದಲ್ಲಿ ರೈತರು

ಬೆಂಗಳೂರು; ರಾಜ್ಯದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ 1 ಲಕ್ಷ ರು. ವರೆಗಿನ ಸಾಲವನ್ನು ಮನ್ನಾ ಮಾಡಲು ಜಾರಿಯಲ್ಲಿರುವ ಯೋಜನೆಯಡಿಯಲ್ಲಿ  ಇನ್ನೂ 232.00 ಕೋಟಿ ರು ಗಳನ್ನು ಸರ್ಕಾರವು ಬಾಕಿ ಉಳಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ. 

 

ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲಕ್ಕೆ ವಿಧಿಸಿದ್ದ ಶೇಕಡ 3ರ ಬಡ್ಡಿ ದರವನ್ನು ಶೂನ್ಯಕ್ಕೆ ಇಳಿಸಲು ಸಲಹೆ ನೀಡಿರುವ ಸಹಕಾರ ಇಲಾಖೆಯು ಇದನ್ನು ಜಾರಿಗೊಳಿಸಿದರೆ ಪ್ರತೀ ವರ್ಷ 117 ಕೋಟಿ ರು. ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆಯಾಗಲಿದೆ ಎಂಬ ಲೆಕ್ಕಾಚಾರವನ್ನು  ಮುಂದಿಟ್ಟಿರುವ ಬೆನ್ನಲ್ಲೇ 1 ಲಕ್ಷ ರು.ವರೆಗಿನ ಸಾಲವನ್ನು ಮನ್ನಾ ಮಾಡುವ ಯೋಜನೆಗೆ 232 ಕೋಟಿ ರು. ಬಾಕಿ ಇರುವುದು ಮುನ್ನೆಲೆಗೆ ಬಂದಿದೆ. 

 

ಈ ಕುರಿತು ಸಹಕಾರ ಇಲಾಖೆಯು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ನೇರವಾಗಿ ಪತ್ರ ಬರೆಯುತ್ತಿದೆ. ಕಲ್ಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಜೀವಣಗಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ  ಪ್ರಕರಣದಲ್ಲಿ ಸಹಕಾರ ಸಂಘಗಳ ನಿಬಂಧಕರಿಗೆ 2024ರ ಫೆ.6ರಂದು ಪತ್ರವನ್ನು ಬರೆದಿದೆ. 1 ಲಕ್ಷ ವರೆಗಿನ ಸಾಲ ಮನ್ನಾ ಯೋಜನೆ ಮಾಡುವ ಸಂಬಂಧ 232 ಕೋಟಿ ರು, ಬಾಕಿ ಇದೆ ಎಂಬ ಸಂಗತಿಯನ್ನು ಇದೇ ಪತ್ರದಲ್ಲಿ ಸಹಕಾರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು  ಉಲ್ಲೇಖಿಸಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ. 

 

‘1.00 ಲಕ್ಷ ರು ವರೆಗಿನ ಸಾಲ ಮನ್ನಾ ಯೋಜನೆಯಡಿ ಬಾಕಿ ಇರುವ ಅಂದಾಜು 232 ಕೋಟಿ ರ.ಗಳನ್ನು ಬಿಡುಡೆಗೊಳಿಸಬೇಕು ಎಂದು ಕೋರಿ ಈಗಾಗಲೇ ಕಡತವನ್ನು ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿದೆ. ಕಡತವು ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿರುತ್ತದೆ. ಈ ಕಡತವು ಆರ್ಥಿಕ ಇಲಾಖೆಯಿಂದ ಹಿಂದಿರುಗಿದ ನಂತರ ಆ ಕಡತದಲ್ಲಿನ ನಿರ್ದೇಶನದ ಅನುಸಾರ ರೈತರ ಬಾಕಿ ಸಾಲಮನ್ನಾದ ಮೊತ್ತವನ್ನು ಬಿಡುಗಡೆಗೊಳಿಸಲು ಕ್ರಮ ವಹಿಸಲಾಗುವುದು,’ ಎಂದು ಸಹಕಾರ ಸಂಘಗಳ ನಿಬಂಧಕರಿಗೆ ಸೂಚಿಸಿರುವುದು ಗೊತ್ತಾಗಿದೆ.

 

ಜೀವಣಗಿ ಪ್ರಕರಣದ ವಿವರ

 

ಕಲ್ಬುರ್ಗಿ ಜಿಲ್ಲೆಯ ಕಮಲಾಪುರದ ಜೀವಣಗಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 29 ರೈತ ಸದಸ್ಯರಿಗೆ ಸಾಲಮನ್ನಾ ಹಣವನ್ನು ಬಿಡುಗಡೆ ಮಾಡುವ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿತ್ತು. ಸಾಲ ಮನ್ನಾ ಯೋಜನೆಯಡಿ ಜೀವಣಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 29 ರೈತ ಸದಸ್ಯರಿಗೆ (ತಲಾ 50,000) ಒಟ್ಟಾರೆ 14,50,500 ರು. ಬಾಕಿ ಇದೆ.

 

ಈ ಮೊತ್ತಕ್ಕೆ ಕಲ್ಬುರ್ಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಬಡ್ಡಿ ವಿಧಿಸುತ್ತಿದೆ. ಈ ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿತ್ತು. ಈ ಪತ್ರವನ್ನಾಧರಿಸಿ ಸಹಕಾರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಸಹಕಾರ ಇಲಾಖೆಯ ನಿಬಂಧಕರಿಗೆ 2024ರ ಫೆ.6ರಂದು ಪತ್ರವನ್ನು ಬರೆದಿದ್ದಾರೆ.

 

 

2024-25ನೇ ಸಾಲಿನ ಆಯವ್ಯಯದಲ್ಲಿ ಹೊಸ ಯೋಜನೆಗಳನ್ನು ಪ್ರಸ್ತಾವಿಸಿರುವ ಸಹಕಾರ ಇಲಾಖೆಯು ಈ ಕುರಿತು ವಿವರಣೆ ನೀಡಿದೆ.   ಶೂನ್ಯ ಬಡ್ಡಿ ದರದಲ್ಲಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ಪಡೆದ ರೈತರ ಪೈಕಿ ಇನ್ನೂ 2.52 ಲಕ್ಷ ರೈತರು 3,900 ಕೋಟಿ ರು. ಸಾಲ ಮರು ಪಾವತಿಸಲು ಬಾಕಿ ಇರಿಸಿಕೊಂಡಿದ್ದಾರೆ.   ಬರಗಾಲದ ಹಿನ್ನೆಲೆಯಲ್ಲಿ ಶೇ.3ರ ಬಡ್ಡಿ ದರವನ್ನು ಶೂನ್ಯಕ್ಕಿಳಿಸಿಲು ಪ್ರಸ್ತಾವಿಸಿರುವ ಸಹಕಾರ ಇಲಾಖೆಯು ಈ ಯೋಜನೆಯನ್ನು ಜಾರಿಗೊಳಿಸಿದರೆ ಸರ್ಕಾರದ ಬೊಕ್ಕಸಕ್ಕೆ 117 ಕೋಟಿ ರು ಹೊರೆ ಬೀಳಲಿದೆ ಎಂದು ಅಂಕಿ ಅಂಶಗಳನ್ನು ಈಗಾಗಲೇ  ಒದಗಿಸಿದೆ. 

 

 

ಕೃಷಿ ಸಾಲ; 25,547.02 ಕೋಟಿ ರು. ಹೊರಬಾಕಿ, ರೈತರ ಸಾಲಮನ್ನಾ ಪ್ರಸ್ತಾವವಿಲ್ಲವೆಂದ ಕಾಂಗ್ರೆಸ್‌ ಸರ್ಕಾರ

 

ಪ್ರತೀ ವರ್ಷ ಶೂನ್ಯ ಬಡ್ಡಿ ದರದಲ್ಲಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಯೋಜನೆ ಅಡಿಯಲ್ಲಿ 60,000 ರೈತರಿಗೆ 2,000 ಕೋಟಿ ರು.ಗಳನ್ನು ಪಿಕಾರ್ಡ್‌ ಬ್ಯಾಂಕ್‌ಗಳ ಮೂಲಕ ಒದಗಿಸಲು ಪ್ರಸ್ತಾವಿಸಿದೆ.   ಪ್ರತೀ ಜಿಲ್ಲೆಯ 2 ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಅಂಗಳದಲ್ಲಿ ಹೊಸದಾಗಿ ಉಗ್ರಾಣಗಳನ್ನು ನಿರ್ಮಿಸುವ ಯೋಜನೆಯನ್ನು ಘೋಷಿಸಲು ಇಲಾಖೆಯು ಪ್ರಸ್ತಾವಿಸಿದೆ. ಒಟ್ಟಾರೆ 64 ಟಿಎಪಿಸಿಎಂಸಿಗಳಿಗೆ ತಲಾ 1 ಕೋಟಿ ರು. ಮತ್ತು 4.50 ಕೋಟಿ ರು.ಗಳನ್ನು ಶೆ.7ರಷ್ಟು ಬಡ್ಡಿ ರಿಯಾಯಿತಿ ಘೋಷಿಸಲಿದೆ ಎಂದು ತಿಳಿದು ಬಂದಿತ್ತು. 

 

 

ಒಂದು ಲಕ್ಷ ರು. ಸಾಲಮನ್ನಾ ಯೋಜನೆಗೆ ಕೊಕ್ಕೆ; ಅನುದಾನ ಕೋರಿಕೆ ಪ್ರಸ್ತಾವನೆ ನೆನೆಗುದಿಗೆ

ರೈತರ ಆತ್ಮಹತ್ಯೆ, ಬರ, ರೈತರ ಸಾಲಮನ್ನಾ ಕುರಿತಾದ ವಿಷಯಗಳು ರಾಜಕೀಯಕರಣಗೊಂಡಿರುವ ಬೆನ್ನಲ್ಲೇ  ರಾಜ್ಯದ ಸಹಕಾರ ಸಂಘಗಳಲ್ಲಿ ಕೃಷಿ ಸಾಲ ಪಡೆದಿದ್ದ 31.65 ಲಕ್ಷ ರೈತರು 25,547.02 ಕೋಟಿ ರು. ಸಾಲ ಹೊರಬಾಕಿ ಹೊಂದಿದ್ದಾರೆ ಎಂಬ ಅಂಕಿ ಅಂಶಗಳನ್ನು ವಿಧಾನಸಭೆಗೆ ಮಂಡಿಸಲಾಗಿತ್ತು.  

 

ರೈತರ ಸಾಲ ಮನ್ನಾ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಬೆಳಗಾವಿ ಅಧಿವೇಶನದಲ್ಲಿ ಈಗಾಗಲೇ ರಾಜ್ಯ ಸರ್ಕಾರವು ಸ್ಪಷ್ಟಪಡಿಸಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ  ರೈತರು ಪಡೆದಿರುವ 50 ಸಾವಿರ ಮತ್ತು 1 ಲಕ್ಷ ರು. ಸಾಲವನ್ನು ಮನ್ನಾ ಮಾಡುವ ಸಂಬಂಧ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯು ರೈತರಿಗೆ ಸಂಬಂಧಿಸಿದಂತೆ ನೀಡಿರುವ ಹಸಿರು ಪಟ್ಟಿಗೆ ಆರ್ಥಿಕ ಇಲಾಖೆಯು ಕೊಕ್ಕೆ ಹಾಕಿತ್ತು.  

 

ಅಲ್ಪಾವಧಿ ಕೃಷಿ ಸಾಲ 1038085.94 ಲಕ್ಷ ರು., ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ 38160.32 ಲಕ್ಷ ರು., ಸೇರಿ ಒಟ್ಟು ಕೃಷಿ ಸಾಲ1076246.00 ಲಕ್ಷ ರು. ಸಾಲ ವಿತರಿಸಿದೆ.   ‘ಅಲ್ಲದೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯು ಹಸಿರು ಪಟ್ಟಿಗಳನ್ನು ಬಿಡುಗಡೆಗೊಳಿಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಸಹಕಾರ ಸಂಘಗಳ ನಿಬಂಧಕರ ಕಚೇರಿಯಿಂದಲೂ ಪ್ರಸ್ತಾವನೆಗಳು ಸಲ್ಲಿಕೆಯಾಗುತ್ತಿವೆ.

 

ಮುಂಬರುವ ದಿನಗಳಲ್ಲಿ 18,965 ಸಂಖ್ಯೆಯ ರೈತರು ಹಸಿರು ಪಟ್ಟಿಗೆ ಸೇರುವುದರಿಂದ ಈ ಒಂದು ಪ್ರಕರಣದಲ್ಲಿ ಅನುದಾನ ಒದಗಿಸಿದ ಪಕ್ಷದಲ್ಲಿ ಬಹಳ ವರ್ಷಗಳವರೆಗೂ ಅನುದಾನ ಒದಗಿಸುತ್ತ ಇರಬೇಕಾಗುವುದು ಆದ್ದರಿಂದ 2021ರ ಮಾರ್ಚ್‌ 6ರಂದು ತಳೆದಿದ್ದ ನಿಲುವಿಗೇ ಬದ್ಧವಾಗಿರಬೇಕು,’ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯ ನೀಡಿತ್ತು.

ಡಿಸಿಸಿ ಬ್ಯಾಂಕ್ ಗಳಲ್ಲಿ ಕೋಟಿ ಕೋಟಿ ಹಗರಣ: ರೈತರ ಸಾಲ ವಿತರಣೆಗಿಲ್ಲ ಹಣ!

 

ಕಳೆದ ಆರ್ಥಿಕ ವರ್ಷದಲ್ಲಿ ಎಲ್ಲಾ ಪೈಪ್‌ಲೈನ್‌ ಪ್ರಕರಣಗಳನ್ನು ತೆರವುಗೊಳಿಸಿ ಈ ಯೋಜನೆಯನ್ನು ಮುಕ್ತಾಯಗೊಳಿಸಲು ನಿರ್ದೇಶಿಸಲಾಗಿತ್ತು. ಅಲ್ಲದೆ ಹೆಚ್ಚುವರಿ ಅನುದಾನವನ್ನೂ ಒದಗಿಸಲಾಗಿತ್ತು. ಹೀಗಾಗಿ ಈ ಯೋಜನೆಯನ್ನು ಪುನರ್‌ ತೆರೆಯುವ ಹಾಗೂ ಈ ಪ್ರಕರಣಕ್ಕೆ ಹೆಚ್ಚುವರಿ ಅನುದಾನ ಒದಗಿಸುವ ಪ್ರಮೇಯವೇ ಇಲ್ಲ ಎಂದು ಆರ್ಥಿಕ ಇಲಾಖೆಯು 2021ರ ಮಾರ್ಚ್‌ 6ರಂದು ಹಿಂಬರಹ ನೀಡಿತ್ತು.    

 

ಸಾಲ ವಿತರಣೆಯಲ್ಲಿ ಕೋಟ್ಯಂತರ ರು. ಅಕ್ರಮ; ಕಲಬುರಗಿ ಡಿಸಿಸಿ ಬ್ಯಾಂಕ್‌ ಸೂಪರ್‌ಸೀಡ್‌?

 

2021ರ ಸೆ.7ರ ಹೊತ್ತಿಗೆ 20,697 ರೈತರ ಅರ್ಹತೆ ಗುರುತಿಸಲು ಬಾಕಿ ಇತ್ತು. ಇದರಲ್ಲಿ ಪ್ರಮುಖವಾಗಿ 12,237 ರೈತರ ಪಡಿತರ ಚೀಟಿಗಳು ರೈತರು ದಾಖಲೆ ಸಲ್ಲಿಸುವಾಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ದತ್ತಾಂಶಕ್ಕೆ ತಾಳೆ ಇತ್ತು. ಆದರೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಸಾಲ ಮನ್ನಾ ವಿಶೇಷ ಕೋಶವು ಈ ಪಡಿತರ ಚೀಟಿಗಳನ್ನು ತಂತ್ರಾಂಶದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಸರಿ ಇದೆ ಎಂದು ದೃಢೀಕರಿಸಿರಲಿಲ್ಲ.

SUPPORT THE FILE

Latest News

Related Posts