495 ಕೋಟಿ ರು ನಷ್ಟ; ಮೂವರು ಐಎಎಸ್‌ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶ

ಬೆಂಗಳೂರು; ಉಗ್ರಾಣ ನಿಗಮದ ಗೋದಾಮುಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ 495 ಕೋಟಿ ರು ನಷ್ಟದ ಪ್ರಕರಣವನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರವು ಲೋಕಾಯುಕ್ತ ಸಂಸ್ಥೆಗೆ ವಹಿಸಿ ಆದೇಶ ಹೊರಡಿಸಿರುವುದು ಇದೀಗ ಬಹಿರಂಗವಾಗಿದೆ.

 

ಈ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿರುವ ಮೂವರು  ಐಎಎಸ್‌ ಅಧಿಕಾರಿಗಳು ಸೇರಿದಂತೆ ಒಟ್ಟಾರೆ 5 ಮಂದಿ ವಿರುದ್ಧ ಸಿವಿಲ್‌ ಮತ್ತು ಕ್ರಿಮಿನಲ್‌ ಮೊಕದ್ದಮೆ ಹೂಡಲು ಸಚಿವ ಸಂಪುಟವು ತೀರ್ಮಾನಿಸಿದ್ದ ಬೆನ್ನಲ್ಲೇ ಇದೀಗ ಇಡೀ ಪ್ರಕರಣವನ್ನು ತನಿಖೆಗೊಳಪಡಿಸಲು ಲೋಕಾಯುಕ್ತಕ್ಕೆ ವಹಿಸಿ ಆದೇಶ ಹೊರಡಿಸಿರುವುದು ಮುನ್ನೆಲೆಗೆ ಬಂದಿದೆ.

 

ರಾಜ್ಯದ 60 ಉಗ್ರಾಣ ಕೇಂದ್ರಗಳಲ್ಲಿ 11.14 ಲಕ್ಷ ಮೆಟ್ರಿಕ್ ಸಾಮರ್ಥ್ಯದ ಉಗ್ರಾಣಗಳು ಹಾಗೂ ಮೂಲಭೂತ ಸೌಕರ್ಯ ಕಾಮಗಾರಿ ಅನುಷ್ಠಾನಗೊಳಿಸುವ 724.81 ಕೋಟಿ ರು ಮೊತ್ತದ ಯೋಜನೆಯಲ್ಲಿ 495 ಕೋಟಿ ರು.ಗೂ ಅಧಿಕ ನಷ್ಟವಾಗಿತ್ತು.

 

2019ರಲ್ಲೇ ಸರ್ಕಾರದ ಹಿಂದಿನ ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲೇ ಉಲ್ಲಂಘನೆ ಮಾಡಿರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮಕ್ಕೆ ಸೂಚಿಸಲಾಗಿತ್ತು. ಈ ಪ್ರಕರಣದಲ್ಲಿ ಆಡಳಿತಾತ್ಮಕ ನಿಯಮಗಳ ಉಲ್ಲಂಘಿಸಿರುವ ಆರೋಪಕ್ಕೆ ಗುರಿಯಾಗಿರುವ ಬಿಡಿಎನ ಹಾಲಿ ಆಯುಕ್ತ ಎಂ ಬಿ ರಾಜೇಶ್‌ಗೌಡ, ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಐಎಎಸ್‌ ಅಧಿಕಾರಿ ಜಯ ವಿಭವಸ್ವಾಮಿ ಸೇರಿ ಹಲವು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಹಿಂದಿನ ಸರ್ಕಾರವು ಮೀನಮೇಷ ಎಣಿಸಿತ್ತು.  ಇದೀಗ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ 5  ತಿಂಗಳಲ್ಲೇ ಈ ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಿ ಆದೇಶ ಹೊರಡಿಸಿದೆ.

 

ನಬಾರ್ಡ್‌ ಸಾಲದ ನೆರವಿನಿಂದ ಕೈಗೊಂಡಿದ್ದ ಆರ್‍‌ಐಡಿಎಫ್‌ ಹಾಗೂ ಡಬ್ಲ್ಯೂ ಐ ಎಫ್‌ ಮತ್ತು ಎನ್‌ ಡಬ್ಲ್ಯೂ ಎಸ್‌ ಯೋಜನೆಗಳ ಅನುಷ್ಠಾನದಲ್ಲಿ ಆಡಳಿತಾತ್ಮಕ ನಿಯಮಗಳನ್ನು ಉಲ್ಲಂಘಿಸಿ ಉಗ್ರಾಣ ನಿರ್ಮಾಣಗಳ ಕಾರ್ಯದ ಅನುಷ್ಠಾನದಲ್ಲಿ ಆಡಳಿತಾತ್ಮಕ ಲೋಪ ದೋಷಗಳಾಗಿದ್ದವು.

 

ಇದಕ್ಕೆ ಕಾರಣರಾಗಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ಇಡೀ ಪ್ರಕರಣದ ತನಿಖೆಯನ್ನು ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984ರಲ್ಲಿನ ಅವಕಾಶಗಳ ಅನ್ವಯ ಲೋಕಾಯುಕ್ತ ಸಂಸ್ಥೆಗೆ ವಹಿಸಿ ಆದೇಶಿಸಿರುವುದು ಗೊತ್ತಾಗಿದೆ. ಇದಕ್ಕೆ ಸಂಂಬಂಧಿಸಿದಂತೆ 2023ರ ಅಕ್ಟೊಬರ್‍‌ 12ರಂದು ಆದೇಶ ಹೊರಡಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಐಎಎಸ್‌ ಅಧಿಕಾರಿ  ಎಂ ಬಿ ರಾಜೇಶ್‌ಗೌಡ, ಜಯವಿಭವ ಸ್ವಾಮಿ, ನವೀನ್‌ ಕುಮಾರ್‍‌ ರಾಜು, ಕಾರ್ಯಪಾಲಕ ಅಭಿಯಂತರ ಹನುಮಂತರಾಯಪ್ಪ ಜಿ (ಈಗ ನಿವೃತ್ತರು), ಮಲ್ಲಿಕಾರ್ಜುನ ಆಲಿಪುರ ಇವರನ್ನು  ಲೋಕಾಯುಕ್ತ ಸಂಸ್ಥೆಯು ತನಿಖೆಗೊಳಪಡಿಸಲಿದೆ.

 

ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳು ಆಡಳಿತಾತ್ಮಕ ನಿಯಮಗಳನ್ನು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸದಿರುವುದು ಅನುಮೋದಿತ ಅಂದಾಜು ಪಟ್ಟಿಯಲ್ಲಿ ಅವಕಾಶ ಕಲ್ಪಿಸದೇ ಇರುವ ಕೆಲವು ಹೆಚ್ಚುವರಿ ಐಟಂಗಳನ್ನು ಉಪಯೋಗಿಸಿಕೊಂಡು ನಿರ್ಮಾಣ ಇರುವುದೇ ಯೋಜನಾ ಮೊತ್ತದಲ್ಲಿ ಹೆಚ್ಚುವರಿಯಾಗಲು ಮೂಲ ಕಾರಣ ಎನ್ನಲಾಗಿತ್ತು. ಈ ಕುರಿತು ‘ದಿ ಫೈಲ್‌’ ಸರಣಿ ವರದಿಗಳನ್ನು ಪ್ರಕಟಿಸಿತ್ತು.

ಉಗ್ರಾಣಗಳ ಸಾಮರ್ಥ್ಯ ಅಭಿವೃದ್ಧಿ ಕಾಮಗಾರಿಗೆ 2016ರ ಮಾರ್ಚ್‌ 3 ರಂದು ಕರೆದಿದ್ದ ಟೆಂಡರ್‌ನಲ್ಲಿ ಸೋಮ ಎಂಟರ್‌ಪ್ರೈಸೆಸ್‌ ಟೆಂಡರ್‌ ಪ್ರೀಮಿಯಂ ದರದ ಶೇ.7.673ರಂತೆ ಒಟ್ಟು 795.97 ಕೋಟಿ ರು. ವೆಚ್ಚದಲ್ಲಿ 9 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲು 2016ರ ಮೇ 17ರಂದು ಹಿಂದಿನ ಕಾಂಗ್ರೆಸ್‌ ಸರ್ಕಾರವು ಕಾರ್ಯಾದೇಶ ನೀಡಿತ್ತು.

 

 

ಕಪ್ಪು ಮಣ್ಣು ಪ್ರದೇಶ, ಭೂ ಜಾಗ ಬದಲಿಸಿದ ಕಾರಣ ಹೆಚ್ಚುವರಿಯಾಗಿ ತಳಪಾಯದ ಕಾಮಘಾರಿಗಳ ನಿರ್ವಹಣೆಯಿಂದ ಹಾಗೂ ಸ್ಥಳೀಯ ಕಾರಣಗಳಿಂದ ವಿವಿಧ ವಿನ್ಯಾಸಗಳ ಅಳವಡಿಕೆ ಸೆರಿದಂತೆ ಇನ್ನಿತರ ಅಂಶಗಳಿಂದಾಗಿ ಯೋಜನಾ ಮೊತ್ತದಲ್ಲಿ ಏರಿಕೆಯಾಗಿತ್ತು. ಅಧಿಕಾರಿಗಳು ಮೊದಲೇ ಸರಿಯಾಗಿ ಅಂದಾಜಿಸಿದ್ದರೆ ಯೋಜನಾ ಮೊತ್ತದಲ್ಲಿ ಏರಿಕೆಯಾಗುತ್ತಿರಲಿಲ್ಲ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯೋಜನಾ ಮೊತ್ತದಲ್ಲಿ ಏರಿಕೆಯಾಗಿತ್ತು.

 


ಈ ಮಧ್ಯೆ ಯೋಜನೆಯ ಅನುಷ್ಠಾನದ ಕುರಿತು ಗುತ್ತಿಗೆದಾರರಾದ ಸೋಮ ಎಂಟರ್‌ಪ್ರೈಸೆಸ್‌ ಲಿಮಿಟೆಡ್‌ ಅರ್ಬಿಟ್ರೇಷನ್‌ನಲ್ಲಿ ದಾವೆ ಹೂಡಿತ್ತು. ನಿಗಮದ ವತಿಯಿಂದ 435.00 ಕೋಟಿ ರು.ಗಳಿಗೆ ಸೋಮಾ ಎಂಟರ್‌ಪ್ರೈಸೆಸ್‌ ಕ್ಲೈಮ್‌ ಮಾಡಿತ್ತು. ಇದಕ್ಕೆ ಸಂಬಂಧಪಟ್ಟಂತೆ ನಿಗಮಕ್ಕೆ ಆಗಿರುವ ಆರ್ಥಿಕ ನಷ್ಟದ ಕುರಿತು ಪ್ರಾರಂಭಿಕ ಹಂತದಲ್ಲಿ 395.00 ಕೋಟಿ ರು.ಗಳಿಗೆ ಗುತ್ತಿಗೆದಾರರಿಂದ ಪಡೆಯಲು ಕೌಂಟರ್‌ ಕ್ಲೈಮ್‌ ಮಾಡಲಾಗಿತ್ತು.

ಯೋಜನೆ ಕಾಮಗಾರಿಯಲ್ಲಿನ ಅನುಷ್ಠಾನದಲ್ಲಿನ ವಿಳಂಬದಿಂದಾಗಿಯೇ 265 ಕೋಟಿ ರು. ಹೆಚ್ಚುವರಿಯಾಗಿತ್ತು. ಬಾಡಿಗೆಯಿಂದ ಬರಬೇಕಿದ್ದ ಆದಾಯದಲ್ಲಿ 48.35 ಕೋಟಿ ರು. ಸೇರಿದಂತೆ ಒಟ್ಟು 495.27 ಕೋಟಿ ರು. ನಷ್ಟವಾಗಿತ್ತು ಎಂದು ಗೊತ್ತಾಗಿದೆ. ಯೋಜನಾ ಕಾಮಗಾರಿಗಳ ಭೌತಿಕ ಮತ್ತು ಆರ್ಥಿಕ ಪ್ರಗತಿ ಆಧರಿಸಿ ಗುತ್ತಿಗೆದಾರರು 01ರಿಂದ 33ನೇ ಐಪಿಎ ಬಿಲ್‌ಗಳವರೆಗೆ 678.68 ಕೋಟಿಗೆ ಬಿಲ್‌ ಸಲ್ಲಿಸಿತ್ತು. ನಿಗಮದ ವಲಯವಾರು ಅಭಿಯಂತರರು ಐಟಂವಾರು ಪರಿಮಾಣಗಳನ್ನು ಪರಿಶೀಲಿಸಿ 668.65 ಕೋಟಿಗಳಿಗೆ ದೃಢೀಕರಿಸಲಾಗಿತ್ತು.

 

 

ನಿಗಮವು ಕಾಮಗಾರಿಗಳ ವಾಸ್ತವಿಕ ನಿರ್ವಹಣೆಗೆ ಸಂಬಂಧಿಸಿದಂತೆ 668.65 ಕೋಟಿ ರು.ಗಳನ್ನು ಪಾವತಿಸಬೇಕಾಗಿದ್ದು ಈ ಪೈಕಿ 612.18 ಕೋಟಿ ರು.ಗಳನ್ನು ಗುತ್ತಿಗೆದಾರರಿಗೆ ಪಾವತಿ ಮಾಡಲಾಗಿತ್ತು. ಬಾಕಿ ಮೊತ್ತ 56.46 ಕೋಟಿಗಳನ್ನು ನಿಯಮಗಳ ರೀತಿ ಶಾಸನಬದ್ಧ ಕಡಿತಗಳು ಮತ್ತು ಎಲ್‌ಡಿಗಳಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಅದರಂತೆ ಗುತ್ತಿಗೆದಾರರಿಗೆ ಯಾವುದೆ ಪಾವತಿ ಬಾಕಿ ಇಲ್ಲವೆಂಬ ವರದಿಯನ್ನು ಆರ್ಬಿಟ್ರೇಷನ್‌ ಟ್ರಿಬ್ಯೂನಲ್‌ಗೆ ಸಲ್ಲಿಸಲಾಗಿತ್ತು ಎಂದು ತಿಳಿದು ಬಂದಿದೆ.

 

ಉಗ್ರಾಣಕ್ಕೆ ಬಾಯಿ ಹಾಕಿದ ಐಎಎಸ್‌ ಹೆಗ್ಗಣಗಳು; 495 ಕೋಟಿ ನಷ್ಟದ ಹೊಣೆ ಹೊರುವರ್ಯಾರು?

ನಿರ್ಮಾಣ ಸಂದರ್ಭದಲ್ಲಿ ಜಾಗಗಳ ಭೌಗೋಳಿಕ ಲಕ್ಷಣಗಳ ಆಧಾರದ ಮೇಲೆ ನಿರ್ಮಾಣ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಐಟಂವಾರು ಪರಿಮಾಣಗಳು ವ್ಯತ್ಯಾಸವಾಗಿತ್ತು. ಅನುಮೋದಿತ ಅಂದಾಜು ಪಟ್ಟಿಯಲ್ಲಿ ಅವಕಾಶ ಕಲ್ಪಿಸದೇ ಇರುವ ಕೆಲವು ಹೆಚ್ಚುವರಿ ಐಟಂಗಳನ್ನು ಉಪಯೋಗಿಸಿಕೊಂಡು ನಿರ್ಮಾಣ ಮಾಡಿದ್ದರಿಂದಾಗಿಯೇ ಯೋಜನಾ ಮೊತ್ತವು ಹೆಚ್ಚುವರಿಯಾಗಿತ್ತು.

ಬೊಕ್ಕಸಕ್ಕೆ 495 ಕೋಟಿ ನಷ್ಟ ಪ್ರಕರಣದಲ್ಲಿ ಐಎಎಸ್‌ ರಾಜೇಶ್‌ಗೌಡ ವಿರುದ್ಧ ಕ್ರಮವಿಲ್ಲವೇಕೆ?

2013-14, 2014-15, 2015-16ನೆ ಸಾಲಿನ ಡಬ್ಲ್ಯೂಐಎಫ್‌, ಎನ್‌ಡಬ್ಲ್ಯೂಎಸ್‌ ಯೋಜನೆಯಡಿಯಲ್ಲಿ ನಬಾರ್ಡ್‌ ಸಂಸ್ಥೆಯಿಂದ 615.78 ಕೋಟಿ ಸಾಲವನ್ನು ಸರ್ಕಾರದ ಖಾತರಿಯೊಂದಿಗೆ ಪಡೆಇದತ್ತು. 2015-16ನೇ ಸಾಲಿನ ನಿರ್ಮಾಣ ಕಾಮಗಾರಿಯನ್ನು ವಹಿಸಿಕೊಂಡಿದ್ದ ಸೋಮಾ ಎಂಟರ್‌ಪ್ರೈಸೆಸ್‌ ಕರಾರು ಒಪ್ಪಂದದ ಪ್ರಕಾರ ಕಾಮಗಾರಿಯನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ಬಾಡಿಗೆ ಆದಾಯದಲ್ಲಿಯೂ ಖೋತಾ ಆಗಿತ್ತು.

 

ನಷ್ಟ; ಬಿಡಿಎ ಆಯುಕ್ತ ಸೇರಿ 8 ಅಧಿಕಾರಿಗಳ ವಿರುದ್ಧ ಸಲ್ಲಿಕೆಯಾಗದ ಚಾರ್ಜ್‌ಶೀಟ್‌

ಅಲ್ಲದೆ ಎರಡು ವರ್ಷದ ಮೊರಾಟರಿಯಮ್‌ ಅವಧಿ ಮುಗಿದ ನಂತರ ಸಾಲ ಮರುಪಾವತಿಯ ಷೆಡ್ಯೂಲ್‌ 2019-20ರಿಂದ ಪ್ರಾರಂಭವಾಗಿತ್ತು. ಉಗ್ರಾಣಗಳ ನಿರ್ಮಾಣ ಕಾಮಗಾರಿಯು ಪೂರ್ಣಗೊಳ್ಳದಿರುವ ಕಾರಣ ನಿರೀಕ್ಷೆಯಂತೆ ಸಂಗ್ರಹಣಾ ಶುಲ್ಕ ರೂಪದಲ್ಲಿ ನಿಗಮಕ್ಕೆ ಆದಾಯ ಪಡೆಯಲು ಸಾಧ್ಯವಾಗಿಲ್ಲ ಎಂಬುದು ಗೊತ್ತಾಗಿದೆ.

 

ನಿಗಮಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗಿರುವ ಪ್ರಕರಣದಲ್ಲಿ ಬಿಡಿಎ ಆಯುಕ್ತ ಐಎಎಸ್‌ ಅಧಿಕಾರಿ ರಾಜೇಶ್‌ಗೌಡ, ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಐಎಎಸ್‌ ಅಧಿಕಾರಿ ಜಯ ವಿಭವಸ್ವಾಮಿ, ಕೆಎಎಸ್‌ ಅಧಿಕಾರಿ ಡಾ ಎನ್‌ ನವೀನ್‌ಕುಮಾರ್‌ ರಾಜು, ಕಾರ್ಯಪಾಲಕ ಅಭಿಯಂತರ ಹನುಮಂತರಾಯಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ಅರಣಿ ಗಿರೀಶ್‌, ಮಲ್ಲಿಕಾರ್ಜುನ ಆಲೀಪುರ, ಸಿ ಎಸ್‌ ಹೆಗಡೆ ಮತ್ತು ಸಿ ಎಸ್‌ ಗಾಂಜಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಡಾ ಆನಂದ ಕೆ ಅವರು ಸಹಕಾರ ಇಲಾಖೆಗೆ 2021ರ ಆಗಸ್ಟ್‌ 17ರಂದು ಪತ್ರ ಬರೆದಿದ್ದರು.

 

 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿ ಆರ್‌ ಬೆನಕನಹಳ್ಳಿ ಅವರು ವರದಿ ನೀಡಿದ್ದರು. ‘ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದೇ ವಿಳಂಬ ಮಾಡಿದ್ದರಿಂದ ಅಭಿವೃದ್ಧಿ ಕುಂಠಿತವಾಗಿತ್ತಲ್ಲದೆ ಬೊಕ್ಕಸಕ್ಕೆ ತೀವ್ರ ಆರ್ಥಿಕ ನಷ್ಟಕ್ಕೆ ಕಾರಣರಾಗಿದ್ದರು. ಏರಿಕೆ ವೆಚ್ಚವನ್ನು ಶೇ.50ಕ್ಕಿಂತಲೂ ಹೆಚ್ಚಳಗೊಳಿಸಿದ್ದರು. ಈ ಪ್ರಕರಣದಲ್ಲಿ 8 ಅಧಿಕಾರಿಗಳು ಭಾಗಿಯಾಗಿದ್ದಾರೆ. ಇದೊಂದು ಗಂಭೀರ ದುರ್ನಡತೆ,’ ಎಂದು ಬೆನಕನಹಳ್ಳಿ ಅವರು ವರದಿಯಲ್ಲಿ ಉಲ್ಲೇಖಿಸಿರುವುದು ಡಾ ಆನಂದ ಅವರು ಬರೆದಿದ್ದ  ಪತ್ರದಿಂದ ತಿಳಿದು ಬಂದಿತ್ತು.

 

ಉಗ್ರಾಣಗಳ ನಿರ್ಮಾಣ; ಸೂಕ್ತವಲ್ಲದಿದ್ದರೂ ಪೂರಕ ಒಪ್ಪಂದಕ್ಕೆ ಸಹಿ, ಬಹುಕೋಟಿ ನಷ್ಟಕ್ಕೆ ದಾರಿ?

‘ಇಬ್ಬರು ಐಎಎಸ್‌ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-1)ಗೆ ಪ್ರಸ್ತಾಪ ಸಲ್ಲಿಸಬೇಕು. ಕೆಎಎಸ್‌ ಅಧಿಕಾರಿ ಮತ್ತು ಉಳಿದ 4 ಮಂದಿ ಅಧಿಕಾರಿಗಳು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಜಂಟಿ ಇಲಾಖೆ ವಿಚಾರಣೆ ಕೈಗೊಳ್ಳಲು ಅನುವಾಗುವಂತೆ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆದು ಇಲಾಖೆ ಅನುಮೋದನೆಯೊಂದಿಗೆ ಕರಡು ದೋಷಾರೋಪಣೆ ಪಟ್ಟಿ ತಯಾರಿಸಬೇಕು ಎಂದು 2021ರ ಮಾರ್ಚ್‌ ಮತ್ತು ಮೇ 25ರಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಕೋರಿತ್ತು,’ ಎಂಬ ಮಾಹಿತಿ ಪತ್ರದಿಂದ ಗೊತ್ತಾಗಿದೆ.

ಕಳೆದ ಮಾರ್ಚ್‌ ಮತ್ತು ಮೇ ತಿಂಗಳಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಪತ್ರ ಬರೆದಿದ್ದರೂ ಸಹಕಾರ ಇಲಾಖೆಯ ಹಿಂದಿನ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್‌ ಜಯರಾಮ್‌ ಅವರಿಗೆ ಪತ್ರ ಬರೆದಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts