Tuesday | July 14, 2026 |

15 ಇನ್ಸ್‌ಪೆಕ್ಟರ್‍‌ಗಳಿಗೆ ಬೇಡವಾದ ಲೋಕಾಯುಕ್ತ; ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೇ ಸರ್ಕಾರಕ್ಕೆ ಸವಾಲು

ಬೆಂಗಳೂರು; ಲೋಕಾಯುಕ್ತ ಸಂಸ್ಥೆಯಲ್ಲಿನ ಪೊಲೀಸ್‌ ವಿಭಾಗಕ್ಕೆ ಬಲ ನೀಡಲು ಇನ್ಸ್‌ಪೆಕ್ಟರ್‍‌ಗಳನ್ನು ವರ್ಗಾಯಿಸಿದ್ದರೂ 15 ಇನ್ಸ್‌ಪೆಕ್ಟರ್‍‌ಗಳು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೇ ಇರುವುದು ಇದೀಗ ಬಹಿರಂಗವಾಗಿದೆ.

 

ಕಳೆದ ಆರು ವರ್ಷಗಳಿಂದ ‘ಬಲ ಹೀನ’ವಾಗಿದ್ದ ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಹೈಕೋರ್ಟ್‌ ತೀರ್ಪಿನಿಂದಾಗಿ ಪೊಲೀಸ್‌ ವಿಭಾಗಕ್ಕೆ ಅಧಿಕಾರ ಮರು ಸ್ಥಾಪನೆಯಾದರೂ ಇನ್ಸ್‌ಪೆಕ್ಟರ್‍‌ಗಳು ಲೋಕಾಯುಕ್ತದ ಸೇವೆಯಿಂದ ದೂರ ಉಳಿಯುತ್ತಿದ್ದಾರೆ.

 

ಆರೋಪಿಗಳ ವಿರುದ್ಧ ‘ಎಫ್‌ಐಆರ್‌’ ದಾಖಲಿಸುವ ಅಧಿಕಾರ ಹೊಂದಿದ್ದರೂ ಇನ್ಸ್‌ಪೆಕ್ಟರ್‍‌ಗಳು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಹಿಂದೇಟು ಹೊಡೆಯುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಅಧಿಕೃತವಾಗಿ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಲೋಕಾಯುಕ್ತ ಸಂಸ್ಥೆಯಲ್ಲಿ ನೂರಾರು ಹುದ್ದೆಗಳು ಖಾಲಿ ಉಳಿದಿರುವ ವಿಚಾರವೂ ಬೆಳಕಿಗೆ ಬಂದಿದೆ. ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ವರ್ಗಾವಣೆಯಾಗಿರುವ ಇನ್ಸ್‌ಪೆಕ್ಟರ್‍‌ಗಳು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ ಕಾರಣ ಚಾರ್ಜ್‌ಶೀಟ್‌ ಸೇರಿದಂತೆ ಮತ್ತಿತರೆ ಕಾರ್ಯಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ ಎಂದು ಗೊತ್ತಾಗಿದೆ.

 

ವರ್ಗಾಯಿಸಿರುವ ಸ್ಥಳಕ್ಕೆ ತಕ್ಷಣವೇ ವರದಿ ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಅಮಾನತು, ಇಲಾಖೆ ವಿಚಾರಣೆ ಎದುರಿಸಬೇಕಾಗುತ್ತದೆ ಎಂದು ಡಿಜಿಪಿ ನೋಟೀಸ್‌ ಜಾರಿಗೊಳಿಸಿದ್ದರು. ಆದರೂ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿರುವುದು ಸರ್ಕಾರಕ್ಕೇ ಸವಾಲು ಎಸೆದಂತಾಗಿದೆ.

 

ಲೋಕಾಯುಕ್ತ ಸಂಸ್ಥೆಗೆ ಎಫ್‌ಐಆರ್‌ ದಾಖಲಿಸುವ ಅಧಿಕಾರ ಮರಳಿ ಬಂದಿದ್ದರಿಂಆಗಿ ದೂರುಗಳ ಸಂಖ್ಯೆಯೂ ಹೆಚ್ಚಾಗಿದೆ. ಹಾಲಿ ಕಾರ್ಯನಿರ್ವಹಿಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿಗೆ ಕಾರ್ಯಭಾರ ಹೆಚ್ಚಾಗಿದೆ. ಹೀಗಾಗಿ ಪರಿಣಾಮಕಾರಿ ಹಾಗೂ ತ್ವರಿತಗತಿಯ ತನಿಖೆಗೆ ಸಿಬ್ಬಂದಿ ಕೊರತೆಯನ್ನು ನೀಗಿಸಲು ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಇನ್ಸ್‌ಪೆಕ್ಟರ್‍‌ಗಳನ್ನು ವರ್ಗಾಯಿಸಿತ್ತು. ಆದರೂ 15 ಮಂದಿ ಇನ್ಸ್‌ಪೆಕ್ಟರ್‍‌ಗಳು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿರುವುದು ತಲೆನೋವಾಗಿ ಪರಿಣಿಮಿಸಿದೆ.

 

ಸರ್ಕಾರಿ ಅಧಿಕಾರಿಗಳು ನೂರಾರು ಕೋಟಿ ರು. ಮೊತ್ತದಷ್ಟು ಅಕ್ರಮವಾಗಿ ಆಸ್ತಿ ಸಂಪಾದಿಸಿರುವ ಪ್ರಕರಣಗಳನ್ನು ಲೋಕಾಯುಕ್ತ ಪೊಲೀಸ್‌ ವಿಭಾಗವು ಈಚಿನ ದಿನಗಳಲ್ಲಿ ಬೆನ್ನು ಹತ್ತಿದೆ. ಆದರೆ ಇನ್ಸ್‌ಪೆಕ್ಟರ್‍‌ಗಳ ಹುದ್ದೆ ಖಾಲಿ ಇರುವ ಕಾರಣ ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.

 

ಬಹುತೇಕ ಅರ್ಧದಷ್ಟು ಹುದ್ದೆಗಳು ಖಾಲಿ ಇರುವುದರಿಂದ ತನಿಖಾ ಹಂತದಲ್ಲಿರುವ ಪ್ರಕರಣಗಳು ಹಾಗೂ ಹೊಸ ಪ್ರಕರಣಗಳ ತನಿಖೆಗೆ ಅಡ್ಡಿಯಾಗಿದೆ. ಲೋಕಾಯುಕ್ತ ಪೊಲೀಸ್‌, ಆಡಳಿತ, ನ್ಯಾಯಾಂಗ, ತಾಂತ್ರಿಕ, ಕಾನೂನು ವಿಭಾಗ, ‘ಡಿ’ ದರ್ಜೆ ಸೇರಿದಂತೆ 1403 ಹುದ್ದೆಗಳ ಪೈಕಿ 434ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ಗೊತ್ತಾಗಿದೆ.

 

ಲೋಕಾಯುಕ್ತ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪೊಲೀಸ್‌ ಅಧಿಕಾರಿ, ಸಿಬ್ಬಂದಿ ಸೇವಾವಧಿಯಲ್ಲಿ ಪ್ರಾಮಾಣಿಕತೆ, ದಕ್ಷವಾಗಿ ಕಾರ್ಯನಿರ್ವಹಿಸುವ ಹಿನ್ನೆಲೆ ಹೊಂದಿರಬೇಕು. ಹೀಗಾಗಿ, ಲೋಕಾಯುಕ್ತ ಸಂಸ್ಥೆಗೆ ಅಧಿಕಾರಿಗಳು/ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಮುನ್ನ ಮಾಹಿತಿ ನೀಡಿ ಎಂದು ಸರಕಾರಕ್ಕೆ ತಿಳಿಸಲಾಗಿತ್ತು.

 

ಅರುಣ್‌ ಎಸ್‌ ಮುರುಗುಂಡಿ (ಲೋಕಾಯುಕ್ತ) ಈಶ್ವರಿ (ಲೋಕಾಯುಕ್ತ), ಕುಮಾರ್‍ ಎ ಪಿ ‌ ( ಲೋಕಾಯುಕ್ತ), ರವಿಕುಮಾರ್‍‌ ಆರ್‍‌ ಜಿ (ರಾಜ್ಯ ಗುಪ್ತವಾರ್ತೆ), ಸತೀಶ್‌ ಎಸ್‌ ಹೆಚ್‌ (ಲೋಕಾಯುಕ್ತ), ಎಸ್‌ ಎಸ್‌ತೇಲಿ (ಲೋಕಾಯುಕ್ತ), ಸಿದ್ದೇಶ ಎಂ ಡಿ (ಲೋಕಾಯುಕ್ತ), ವಿಜಯ್‌ ಎ ಮುರುಗುಂಡಿ (ಲೋಕಾಯುಕ್ತ), ಷಣ್ಮುಖಪ್ಪ ಜಿ ಆರ್‍‌ (ಲೋಕಾಯುಕ್ತ), ರಾಘವೇಂದ್ರಬಾಬು (ಲೋಕಾಯುಕ್ತ), ಸತೀಶ್‌ ಎಂ ಆರ್‍‌ (ಕಾವೂರು, ಮಂಗಳೂರು ನಗರ), ಲಕ್ಷ್ಮಯ್ಯ ಎಂ ಬಿ (ಲೋಕಾಯುಕ್ತ), ಕಾಳಪ್ಪ ಬಡಿಗೇರ್‍‌ (ಲೋಕಾಯುಕ್ತ), ವರುಣ್‌ಕುಮಾರ್‍‌ ಎಂ ಆರ್‍‌ (ಲೋಕಾಯುಕ್ತ), ಶ್ರೀನಿವಾಸ್‌ ಬಿ ಎಂ (ಲೋಕಾಯುಕ್ತ), , ಜೀವನ್‌ ಕೆ (ಲೋಕಾಯುಕ್ತ), ಮೋಹನ್‌ ಕುಮಾರ್‍‌ ಎಂ (ಲೋಕಾಯುಕ್ತ), ), ಶರಣಪ್ಪಗೌಡ ಬಿ ಗೌಡರ್‍‌ (ಲೋಕಾಯುಕ್ತ), ಕರುಣೇಶ್‌ ಗೌಡ (ಲೋಕಾಯುಕ್ತ), ಶಿವಕುಮಾರ್‍‌ ಟಿ ಸಿ (ಲೋಕಾಯುಕ್ತ) ಅವರು ಲೋಕಾಯುಕ್ತಕ್ಕೆ ವರದಿ ಮಾಡಿಕೊಂಡಿರಲಿಲ್ಲ.

 

ಉದ್ಧಟತನ,ಅತೀವ ಬೇಜವಾಬ್ದಾರಿ,ಕರ್ತವ್ಯ ನಿರ್ಲಕ್ಷ್ಯ; 44 ಇನ್ಸ್‌ಪೆಕ್ಟರ್‍‌ಗಳ ಮೇಲೆ ಅಮಾನತು ತೂಗುಗತ್ತಿ

ವರ್ಗಾವಣೆ ಆದೇಶ ಹೊರಡಿಸಿದ್ದರೂ ಪೊಲೀಸ್ ಇಲಾಖೆಯ 44 ಇನ್ಸ್‌ಪೆಕ್ಟರ್‍‌ಗಳು ವರ್ಗಾವಣೆಗೊಂಡಿರುವ ಸ್ಥಳದಲ್ಲಿ ಇನ್ನೂ ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ. ವರದಿ ಮಾಡಿಕೊಳ್ಳದೇ ಗೈರು ಹಾಜರಾಗುವ ಮೂಲಕ ಕರ್ತವ್ಯ ಲೋಪ ಎಸಗಿದ್ದರು.  ವರ್ಗಾವಣೆಗೊಂಡ ಸ್ಥಳಗಳಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ ಇನ್ಸ್‌ಪೆಕ್ಟರ್ ‌ಗಳನ್ನು ಅಮಾನತುಗೊಳಿಸಿ ಇಲಾಖೆ ವಿಚಾರಣೆ ನಡೆಸಲು ಮುಂದಾಗಿದೆಯಾದರೂ ವರ್ಗಾವಣೆಗೊಂಡ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಕಡೆಯ ಅವಕಾಶವನ್ನೂ ನೀಡಿತ್ತು.

 

2023ರ ಜೂನ್‌ 2, ಸೆ.16, ಸೆ.22, ಅಕ್ಟೋಬರ್‍‌ 3, ನವೆಂಬರ್‍‌ 17, 18 ಮತ್ತು 27ರಂದು ಪೊಲೀಸ್‌ ಇನ್ಸ್‌ಪೆಕ್ಟರ್‍‌ ವೃಂದದ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಪೊಲೀಸ್‌ ಇಲಾಖೆಯು ಆದೇಶ ಹೊರಡಿಸಿತ್ತು. ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ವರ್ಗಾವಣೆ ಪಟ್ಟಿಯು ಅನುಮೋದಿತಗೊಂಡಿತ್ತು.

 

‘ನೀವುಗಳು ವರ್ಗಾವಣೆಗೊಂಡ ಸ್ಥಳದಲ್ಲಿ ಕರ್ತವ್ಯಕ್ಕೆ ಇದುವರೆಗೂ ವರದಿ ಮಾಡಿಕೊಳ್ಳದೇ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿರುತ್ತೀರಿ. ಸದರಿ ಪೊಲೀಸ್ ಠಾಣೆ ಮತ್ತು ಘಟಕಗಳಲ್ಲಿನ ಕಾರ್ಯನಿರ್ವಹಣೆ ಕುಂಠಿತಗೊಳ್ಳಲು ಪರೋಕ್ಷವಾಗಿ ಕಾರಣರಾಗಿದ್ದೀರಿ. ಕೆಸಿಎಸ್‌ (ನಡತೆ) ನಿಯಮಗಳು 2021) ಹಾಗೂ ಸರ್ಕಾರದ ನಿರ್ದೇಶನಗಳನ್ನು ಉಲ್ಲಂಘಿಸಿದ್ದೀರಿ. ಈ ಮೂಲಕ ನಿಮ್ಮ ಕರ್ತವ್ಯದಲ್ಲಿ ಅತೀವ ಬೇಜವಾಬ್ದಾರಿ, ಉದ್ಧಟತನ ಹಾಗೂ ಕರ್ತವ್ಯ ನಿರ್ಲಕ್ಷ್ಯತೆ ತೋರಿ ಕರ್ತವ್ಯಲೋಪವೆಸಗಿರಿರುತ್ತೀರಿ,’ ಎಂದು ಸೂಚನಾ ಪತ್ರದಲ್ಲಿ ಆರೋಪ ಹೊರಿಸಿರುವುದು ಗೊತ್ತಾಗಿದೆ.

Hot this week

ಜಿಎಸ್‌ಡಿಪಿ 23,34,000 ಕೋಟಿ, ಉನ್ನತ ಶಿಕ್ಷಣಕ್ಕಾಗಿ ಕೇವಲ 5,646 ಕೋಟಿ ರು ಖರ್ಚು; ಇತರೆ ರಾಜ್ಯಗಳಿಗಿಂತ ಕೆಳಗಿಳಿದ ಕರ್ನಾಟಕ

ಬೆಂಗಳೂರು; ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದ ಮೊದಲನೇ ಆರ್ಥಿಕ...

ಕಸದ ವಾಹನಗಳ ಇಂಧನಕ್ಕೆ ಸಾವಿರಾರು ಲೀಟರ್‌ ಪೆಟ್ರೋಲ್, ಡೀಸೆಲ್ ಬಳಕೆ; ನಗರಾಭಿವೃದ್ಧಿ ಸಚಿವರ ತವರಲ್ಲೇ ಇ ವಿ ವಾಹನಗಳ ಬಳಕೆಗೆ ಉದಾಸೀನತೆ

ಮೈಸೂರು; ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಕಸ ವಿಲೇವಾರಿ ಮಾಡುತ್ತಿರುವ ಒಟ್ಟು ವಾಹನಗಳ...
Please Scan to make Your Contribution

Topics

ಜಿಎಸ್‌ಡಿಪಿ 23,34,000 ಕೋಟಿ, ಉನ್ನತ ಶಿಕ್ಷಣಕ್ಕಾಗಿ ಕೇವಲ 5,646 ಕೋಟಿ ರು ಖರ್ಚು; ಇತರೆ ರಾಜ್ಯಗಳಿಗಿಂತ ಕೆಳಗಿಳಿದ ಕರ್ನಾಟಕ

ಬೆಂಗಳೂರು; ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದ ಮೊದಲನೇ ಆರ್ಥಿಕ...

ಪಿಎಸ್‌ಐ ನೇಮಕಾತಿ ಹಗರಣ; ಎಡಿಜಿಪಿ ಅಮೃತ್‌ ಪೌಲ್ ವಿರುದ್ಧ 4 ವರ್ಷಗಳ ಬಳಿಕ ಇಲಾಖೆ ವಿಚಾರಣೆ ಪ್ರಕ್ರಿಯೆಗೆ ಚಾಲನೆ, ದೋಷಾರೋಪಣೆ ಪಟ್ಟಿ ಜಾರಿ

ಬೆಂಗಳೂರು; ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪ್ರಕರಣದ ಹಗರಣದಲ್ಲಿ ಆರೋಪಿಯಾಗಿ, ಅಮಾನತುಗೊಂಡಿರುವ ಪೊಲೀಸ್‌...

ಸುರಂಗ ಮಾರ್ಗ; ಅದಾನಿ ಎಂಟರ್ ಪ್ರೈಸೆಸ್‌ಗೆ ಬಿಟ್ಟಿ ರಿಯಲ್‌ ಎಸ್ಟೇಟ್‌ ಆದಾಯ ಭಾಗ್ಯ ಕರುಣಿಸಲಿದೆಯೇ ಸರ್ಕಾರ?

ಬೆಂಗಳೂರು; ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಉದ್ದೇಶಿತ  ಸುರಂಗ ಮಾರ್ಗ ನಿರ್ಮಾಣದ ಹೆಸರಿನಲ್ಲಿ...

Related Articles

Popular Categories

error: Content is protected !!