ಎಲ್‌ಒಸಿ ಕಿಕ್‌ಬ್ಯಾಕ್‌; ಕಾವೇರಿ ನೀರಾವರಿ ನಿಗಮದ ಎಂಡಿ ವಿರುದ್ಧ ವರ್ಷ ಕಳೆದರೂ ನಡೆಯದ ತನಿಖೆ

Photo Credit;deccanhearld

ಬೆಂಗಳೂರು; ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯ ಹೇಮಾವತಿ ಮತ್ತು ಗೊರೂರು ವಲಯದಲ್ಲಿ ಅನುಷ್ಠಾನಗೊಂಡಿರುವ ಭಾರೀ ನೀರಾವರಿ ಯೋಜನೆಗಳ ಟೆಂಡರ್‌ಗಳಲ್ಲಿ ಭಾರೀ ಗೋಲ್ಮಾಲ್‌ ನಡೆದಿದೆ ಎಂಬ ಆರೋಪಗಳ ಕುರಿತು ಜಾಗೃತ ಅಧಿಕಾರಿಗಳಿಂದ ತನಿಖೆ ನಡೆಸಬೇಕು ಎಂದು ಎಸಿಬಿಯ ಎಡಿಜಿಪಿ ಅವರು ಪತ್ರ ಬರೆದು 9 ತಿಂಗಳು ಕಳೆದರೂ ಜಲ ಸಂಪನ್ಮೂಲ ಇಲಾಖೆಯು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

 

ಅದೇ ರೀತಿ ಟೆಂಡರ್‌ ಗೋಲ್ಮಾಲ್‌ ಮತ್ತು ನಿರ್ದಿಷ್ಟ ಗುತ್ತಿಗೆದಾರರಿಗೆ ಹೆಚ್ಚುವರಿ ಹಣ ಪಾವತಿಸುವ ಮೂಲಕ ದೊಡ್ಡ ಮೊತ್ತದಲ್ಲಿ ಕಿಕ್‌ಬ್ಯಾಕ್‌ ಪಡೆದಿದ್ದಾರೆ. ನಿಗಮದ ವ್ಯವಸ್ಥಾಪಕ ನಿರ್ದೇಶಕ ಮತ್ತು ಪ್ರಧಾನ ವ್ಯವಸ್ಥಾಪಕ ಮಧ್ಯೆ ಹಣದ ವಹಿವಾಟು ನಡೆದಿದೆ ಎಂಬ ದೂರಿನ ಕುರಿತು ತನಿಖೆ ಕೈಗೆತ್ತಿಕೊಳ್ಳಬೇಕಿದ್ದ ಭ್ರಷ್ಟಾಚಾರ ನಿಗ್ರಹ ದಳವು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ. ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದು ಎಸಿಬಿಯು ಜಲಸಂಪನ್ಮೂಲ ಇಲಾಖೆಗೆ ಪತ್ರ ಬರೆದು ವರ್ಷ ಕಳೆದರೂ ಸಚಿವ ಗೋವಿಂದ ಕಾರಜೋಳ ಅವರು ಈ ಬಗ್ಗೆ ಆಸಕ್ತಿ ವಹಿಸಿಲ್ಲ ಎಂದು ಗೊತ್ತಾಗಿದೆ.

 

ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ ಜಯಪ್ರಕಾಶ್‌ ಮತ್ತು ಪ್ರಧಾನ ವ್ಯವಸ್ಥಾಪಕ ಗಂಗಾಧರ್‌ ಅವರ ವಿರುದ್ಧ ಜವರೇಗೌಡ ಎಂಬುವರು ಎಸಿಬಿಗೆ ದೂರು ಸಲ್ಲಿಸಿದ್ದರು. ಭಾರೀ ನೀರಾವರಿ ಯೋಜನೆಗಳ ಟೆಂಡರ್‌ ಮತ್ತು ಎಲ್‌ಒಸಿ ಬಿಡುಗಡೆಯಲ್ಲಿ ದೊಡ್ಡಮೊತ್ತದ ಕಿಕ್‌ ಬ್ಯಾಕ್‌ ಪಡೆದಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದರು. ಈ ದೂರು ಭ್ರಷ್ಟಾಚಾರ ನಿಗ್ರಹ ಕಾಯ್ದೆ ವ್ಯಾಪ್ತಿಗೆ ಒಳಪಡದ ಕಾರಣ ಎಸಿಬಿಯ ಎಡಿಜಿಪಿಗೆ ಎಸ್ಪಿ ಯತೀಶ್‌ಚಂದ್ರ ಅವರು 2021ರ ಆಗಸ್ಟ್‌ 16ರಂದು ಪತ್ರ ಬರೆದಿದ್ದರು. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಎಸಿಬಿ ಎಸ್ಪಿ ಎಡಿಜಿಪಿಗೆ ಬರೆದಿರುವ ಪತ್ರದ ಪ್ರತಿ

 

ಈ ಪತ್ರವನ್ನಾಧರಿಸಿ ಎಸಿಬಿಯ ಎಡಿಜಿಪಿಯು ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ದೂರರ್ಜಿಯನ್ನು ವರ್ಗಾವಣೆ ಮಾಡಿದ್ದರು. ಆದರೆ ಈ ದೂರು ವರ್ಗಾವಣೆಯಾಗಿ ಒಂಬತ್ತು ತಿಂಗಳು ಕಳೆದರೂ ಜಲಸಂಪನ್ಮೂಲ ಇಲಾಖೆಯು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೆ ಜಯಪ್ರಕಾಶ್‌ ಇದೇ ಮೇ 31ರಂದು  ನಿವೃತ್ತಿಯಾಗುತ್ತಿದ್ದರೂ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿರುವ ಜಲಸಂಪನ್ಮೂಲ ಇಲಾಖೆಯ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ದೂರಿನಲ್ಲೇನಿದೆ?

 

ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ಕೆ ಜಯಪ್ರಕಾಶ್‌ ಅವರು ಎಲ್‌ಒಸಿ ವಿತರಣೆ ಮಾಡುವಲ್ಲಿ ಅಕ್ರಮ ಎಸಗಿದ್ದಾರೆ. ಕೆ ಜಯಪ್ರಕಾಶ್‌ ಅವರು ತಮ್ಮ ಮಗನನ್ನು ಬಿಎಸ್‌ಆರ್‌ ಮತ್ತು ಸ್ಟಾರ್‌ ಬಿಲ್ಡರ್‌ ಕಂಪನಿಯಲ್ಲಿ ಪಾಲುದಾರರನ್ನಾಗಿ ಮಾಡಿ, ಹೇಮಾವತಿ, ಗೊರೂರು ವಲಯದಲ್ಲಿ ಎಲ್ಲಾ ಭಾರೀ ನೀರಾವರಿ ಯೋಜನೆಗಳ ಟೆಂಡರ್‌ನಲ್ಲಿ ಗೋಲ್‌ಮಾಲ್‌ ಮಾಡಿರುತ್ತಾರೆ ಎಂದು ಜವರೇಗೌಡ ಎಂಬುವರು ವಿವರಿಸಿದ್ದಾರೆ.

 

ಜಯಪ್ರಕಾಶ್‌ ಮತ್ತು ಪ್ರಧಾನ ವವ್ಯವಸ್ಥಾಪಕ ಬಿ ಕೆ ಗಂಗಾಧರ್‌ ಸೇರಿ ಈ ಎರಡೂ ಕಂಪನಿಗಳಿಗೆ ಆದ್ಯತೆ ಮೇಲೆ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಿರುತ್ತಾರೆ. ಮತ್ತು ಟೆಂಡರ್‌ ಪರಿಮಾಣಗಳನ್ನು ಮೀರಿ ಹೆಚ್ಚುವರಿಯಾಗಿ ಕೆಲಸ ನಿರ್ವಹಿಸಲಾಗಿದೆ ಎಂದು ಪರಿಗಣಿಸಿ ಈ ಎರಡೂ ಕಂಪನಿಗಳಿಗೆ ನೀಡಿ ಕಿಕ್‌ಬ್ಯಾಕ್‌ ಪಡೆದಿರುತ್ತಾರೆ. ಇವರ ಅಧಿಕಾರವಾಧಿಯಲ್ಲಿ ಟೆಂಡರ್‌ಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಬಯಲಿಗೆಳೆದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಸಿಬಿಗೆ ದೂರಿದ್ದರು.

 

ಎಸಿಬಿ ಮಾಡಿದ್ದೇನು?

 

ಈ ಅರ್ಜಿಯನ್ನು ಪರಿಶೀಲಿಸಿದ್ದ ಎಸಿಬಿಯು ‘ ಅರ್ಜಿಯಲ್ಲಿನ ವಿಷಯವು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ವ್ಯಾಪ್ತಿಗೆ ಒಳಪಡದೇ ಇರುವುದರಿಂದ ಇಲಾಖೆಯ ಆಡಳಿತಾತ್ಮಕ ವಿಷಯವಾಗಿರುವುದರಿಂದ ದೂರು ಅರ್ಜಿಯಲ್ಲಿ ಜಾಗೃತ ಅಧಿಕಾರಿಗಳ ಪರಿಶೀಲನೆ ಸಲುವಾಗಿಜಲಸಂಪನ್ಮೂಲ ಇಲಾಖೆಗೆ ಕಳಿಸಿಕೊಡಬೇಕು ಎಂದು ಎಸಿಬಿ ಎಡಿಜಿಪಿ ಕಚೇರಿಗೆ ವರದಿ ಸಲ್ಲಿಸಿದ್ದರು ಎಂಬುದು ಪತ್ರದಿಂದ ತಿಳಿದು ಬಂದಿದೆ.

 

‘ಪೊಲೀಸ್‌ ಇನ್ಸ್‌ಪೆಕ್ಟರ್‌ ಸಲ್ಲಿಸಿರುವ ವರದಿಯಂತೆ ಎಸ್‌ ಎಂ ಜವರೇಗೌಡ ಅವರು ನೀಡಿರುವ ದೂರು ಅರ್ಜಿಯಲ್ಲಿನ ಆರೋಪಗಳ ಬಗ್ಗೆ ಜಲಸಂಪನ್ನೂಲ ಇಲಾಖೆಯ ಜಾಗೃತ ಅಧಿಕಾರಿಗಳಿಂದ ಪರಿಶೀಲನೆ ಕೈಗೊಳ್ಳಬೇಕು. ಇದನ್ನು ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಕಳಿಸಿಕೊಡಬೇಕು,’ ಎಂದು ಎಸಿಬಿಯ ಎಸ್ಪಿ ಯತೀಶ್‌ ಚಂದ್ರ ಅವರು 2021ರ ಆಗಸ್ಟ್‌ 16ರಂದು ಎಸಿಬಿಯ ಎಡಿಜಿಪಿ ಅವರಿಗೆ ಪತ್ರ ಬರೆದಿದ್ದರು.

 

ಕಾವೇರಿ ನೀರಾವರಿ ನಿಗಮದಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರಗಳು ನಡೆದಿವೆ ಎಂದು ವಿಧಾನಪರಿಷತ್‌ ಸದಸ್ಯ ಎಚ್‌ ವಿಶ್ವನಾಥ್‌ ಅವರು ಸಹ ದೂರಿದ್ದರು. ಇದೊಂದೇ ನಿಗಮದಲ್ಲಿ 20 ಸಾವಿರ ಕೋಟಿಗೂ ಹೆಚ್ಚು ಅಕ್ರಮ ನಡೆದಿದೆ ಎಂದು ಹೇಳಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts