ಬೆಂಗಳೂರು; ನಾರಾಯಣ ಹೃದಯಾಲಯ, ವಿಕ್ರಂ, ಮಣಿಪಾಲ್, ಅಪೋಲೋ ಸಮೂಹ, ಸ್ಪರ್ಶ, ಕೊಲಂಬಿಯಾ ಏಷ್ಯಾ, ಏಸ್ತರ್, ಟಿಎಂಎ ಪೈ, ಫೋರ್ಟೀಸ್ ಸಮೂಹ, ಕೆಎಲ್ಇ ಪ್ರಭಾಕರ ಕೋರೆ, ಬಿ ಎಂ ಪಾಟೀಲ್, ಎಂ ಎಸ್ ರಾಮಯ್ಯ, ಸಿದ್ದಾರ್ಥ ಅಕಾಡೆಮಿ ಸೇರಿದಂತೆ ರಾಜ್ಯದ ಹಲವು ಪ್ರತಿಷ್ಠಿತ 246 ಖಾಸಗಿ ಆಸ್ಪತ್ರೆಗಳು ಕೋವಿಡ್ ಸೋಂಕಿತರಿಂದ ಅಧಿಕ ಶುಲ್ಕ ವಸೂಲಿ ಮಾಡಿರುವುದು ಇದೀಗ ಬಹಿರಂಗವಾಗಿದೆ. ಒಟ್ಟು 246 ಆಸ್ಪತ್ರೆಗಳ ಪೈಕಿ 111 ಆಸ್ಪತ್ರೆಗಳು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿವೆ.
ಕೋವಿಡ್ ಸಂದರ್ಭದಲ್ಲಿ ನಿಗದಿಗಿಂತ ಅಧಿಕ ಶುಲ್ಕ ವಸೂಲಿ ಮಾಡಿರುವ ಆಸ್ಪತ್ರೆಗಳ ಬಗ್ಗೆ ರೋಗಿಗಳು ಮತ್ತು ಅವರ ಕುಟುಂಬದವರು ಹಾಗೂ ಸಾರ್ವಜನಿಕರ ವಲಯದಲ್ಲಿ ದೂರು ಕೇಳಿ ಬಂದಿದ್ದರ ಬೆನ್ನಲ್ಲೇ ರೋಗಿಗಳಿಂದ ಅಧಿಕ ಶುಲ್ಕ ವಸೂಲಿ ಮಾಡಿದ್ದ ಆಸ್ಪತ್ರೆಗಳ ಪಟ್ಟಿಯು ಮುನ್ನೆಲೆಗೆ ಬಂದಿದೆ. ವಿಶೇಷವೆಂದರೆ ಕೋವಿಡ್ ಮೂರನೇ ಅಲೆ ಸಿದ್ಧತೆ ಕುರಿತು ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಅಧ್ಯಕ್ಷರಾಗಿದ್ದ ಡಾ ದೇವಿಶೆಟ್ಟಿ ಅವರು ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ನಾರಾಯಣ ಹೃದಯಾಲಯ ಆಸ್ಪತ್ರೆಯೂ ಅಧಿಕ ಶುಲ್ಕ ವಸೂಲು ಮಾಡಿರುವ ಆಸ್ಪತ್ರೆಗಳ ಪಟ್ಟಿಯಲ್ಲಿದೆ. ಈ ಪಟ್ಟಿಯು ‘ದಿ ಫೈಲ್’ ಗೆ ಲಭ್ಯವಾಗಿದೆ.
ಡಿಸೆಂಬರ್ ಅಂತ್ಯದವರೆಗೆ ರಾಜ್ಯದಲ್ಲಿ 1,36,160 ಕೋವಿಡ್ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ 1,17,690 ಸೋಂಕಿತರಿಗೆ ಸರ್ಕಾರದಿಂದ ವೆಚ್ಚ ಭರಿಸಲಾಗಿದೆ. 197 ಪ್ರಕರಣಗಳಲ್ಲಿ ಅಧಿಕ ಶುಲ್ಕ ವಸೂಲಿ ಮಾಡಿರುವ 57 ಖಾಸಗಿ ಆಸ್ಪತ್ರೆಗಳ ವಿರುದ್ಧ ನೇರವಾಗಿ ಮತ್ತು ಇ ಮೇಲ್ ಮೂಲಕ ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿರುವುದು ಲಭ್ಯವಿರುವ ಪಟ್ಟಿಯಿಂದ ತಿಳಿದು ಬಂದಿದೆ.
ಒಟ್ಟು 246 ಆಸ್ಪತ್ರೆಗಳು 3.54 ಕೋಟಿ ರು. ಅಧಿಕ ಶುಲ್ಕ ವಸೂಲಿ ಮಾಡಿವೆ. ಈ ಪೈಕಿ ರೋಗಿಗಳಿಗೆ ಕೇವಲ 73.28 ಲಕ್ಷ ರು. ಮಾತ್ರ ರೋಗಿಗಳಿಗೆ ಮರು ಪಾವತಿಸಿರುವುದು ಪಟ್ಟಿಯಿಂದ ತಿಳಿದು ಬಂದಿದೆ. 43 ರೋಗಿಗಳಿಗೆ 32,22,352 ರು.ಗಳನ್ನು ಹಣವನ್ನು ಮರು ಪಾವತಿಸಲಾಗಿದೆ. ಅದೇ ರೀತಿ 48 ಆಸ್ಪತ್ರೆಗಳು 58 ರೋಗಿಗಳ ಪೈಕಿ 7 ಆಸ್ಪತ್ರೆಗಳು ರೋಗಿಗಳಿಗೆ 10,42,339 ರು.ಗಳನ್ನು ಮರು ಪಾವತಿಸಿದೆ. 51 ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿಗೆ ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.
238 ರೋಗಿಗಳು ನೇರವಾಗಿ ಸುವರ್ಣ ಆರೋಗ್ಯ ಟ್ರಸ್ಟ್ನ ವಿಶೇಷ ವಿಭಾಗಕ್ಕೆ ದೂರು ಸಲ್ಲಿಸಿದ್ದರು. ಇದರ ಅನ್ವಯ 1,460 ಆಸ್ಪತ್ರೆಗಳಿಗೆ ಶೋಕಾಸ್ ನೋಟೀಸ್ ನೀಡಿದೆ. ಈ ಪೈಕಿ 153 ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು 30,63, 343 ರುಗ.ಳನ್ನು ಮರು ಪಾವತಿಸಿದೆ. ಒಟ್ಟಾರೆ 73,28,034 ರು.ಗಳನ್ನು ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಮರು ಪಾವತಿಸಿವೆ.
ಅಧಿಕ ಶುಲ್ಕ ಪಾವತಿಸಿಕೊಂಡಿರುವ ಬೆಂಗಳೂರು ನಗರದ ಆಸ್ಪತ್ರೆಗಳ ಪಟ್ಟಿ
ಆಕ್ಸಿಸ್ ಆಸ್ಪತ್ರೆ, ಏಸ್-ಸುಹಾಸ್, ಅಗಡಿ ಆಸ್ಪತ್ರೆ, ಆಕಾಶ್ (ದೇವನಹಳ್ಳಿ), ಅನನ್ಯ ಆಸ್ಪತ್ರೆ (ರಾಜಾಜಿನಗರ), ಅನುಪಮ (ಯಲಹಂಕ), ಅಪೋಲೋ ಬಿಜಿಎಸ್, ಅಪೊಲೋ ಹಾಸ್ಪಿಟಲ್ಸ್ ಎಂಟರ್ ಪ್ರೈಸೆಸ್ ಲಿಮಿಟೆಡ್ (ಜಯನಗರ-ಶೇಷಾದ್ರಿಪುರಂ), ಅಪೊಲೋ (ಇಂಪೀರಿಯಲ್ ಆಸ್ಪತ್ರೆ ಘಟಕ), ಅಪೂರ್ವ, ಆರ್ಕಾ, ಆರೋಗ್ಯ ಆಧಾರ್, ಅಶೋಕ, ಏಸ್ತರ್ ಸಿಎಂಐ, ಏಸ್ತರ್ ಆರ್ವಿ, ಅಸ್ತ್ರ ಸೂಪರ್ ಸ್ಪೆಷಾಲಿಟಿ, ಅತ್ರೇಯ, ಅವೇಕ್ಷಾ, ಆತ್ರೇಮ್, ಬೆಂಗಳೂರು ಬ್ಯಾಪಿಸ್ಟ್, ಬಿಜಿಎಸ್ ಗ್ಲೋಬಲ್, ಭಗವಾನ್ ಮಹಾವೀರ್ ಜೈನ್, ಭಾರತಿ ನರ್ಸಿಂಗ್ ಹೋಂ, ಬಿಗ್ ಆಸ್ಪತ್ರೆ, ಕ್ಯಾಂಪ್ಬೆಲ್ , ಚೈತನ್ಯ ಮಲ್ಟಿ ಆಸ್ಪತ್ರೆ, ಸಿಟಿ ಸೆಂಟ್ರಲ್, ಕೊಲಂಬಿಯಾ (ಸರ್ಜಾಪುರ, ಹೆಬ್ಬಾಳ, ವೈಟ್ಫೀಲ್ಡ್, ಯಶವಂತಪುರ), ಕಂಫರ್ಟ್ ಮಲ್ಟಿ ಸ್ಪೆಷಾಲಿಟಿ, ಡಾ ಬಿ ಆರ್ ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಡಾ ಚಂದ್ರಮ್ಮ ದಯಾನಂದ ಸಾಗರ್ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಕಾಲೇಜು ಇವೆ.
ಡಾ ಲೆವಿನಿ ಮೆಮೋರಿಯಲ್ ಆಸ್ಪತ್ರೆ, ಡಾ ಮಾಲತಿ ಮಣಿಪಾಲ್, ಈಸ್ಟ್ ಪಾಯಿಂಟ್, ಎಕ್ಸೆಲ್ಕೇರ್, ಫೋರ್ಟಿಸ್ (ಬನ್ನೇರುಘಟ್ಟ, ಕನ್ನಿಂಗ್ಹ್ಯಾಂ, ರಾಜಾಜಿನಗರ) ಗುರುನಾನಕ್, ಜಿವಿಜಿ ಇನ್ವಿವೋ (ಜೆಪಿ ನಗರ) ಎಚ್ಬಿಎಸ್, ಜನಪ್ರಿಯ, ಕಿಮ್ಸ್ , ಎಂ ಎಸ್ ರಾಮಯ್ಯ, ಶೇಖರ್ ಆಸ್ಪತ್ರೆ, ಮಣಿಪಾಲ್, ಮಾರುತಿ ಆಸ್ಪತ್ರೆ, ಮಣಿಪಾಲ್ ನಾರ್ತ್ಸೈಡ್, ಮೆಡ್ ಕೇರ್ ವಿವಿಪುರಂ, ಮೆಡ್ಸ್ಟಾರ್, ಎಂವಿಜೆ, ನಾಗಪ್ಪ ಹಾಡ್ಲಿ, ನಾರಾಯಣ ಹೃದಯಾಲಯ (ಬೆಂಗಳೂರು ಗ್ರಾಮಾಂತರ), ನಾರಾಯಣ ಹೃದಯಾಲಯ ಸರ್ಜಿಕಲ್ ಆಸ್ಪತ್ರೆ ಪ್ರೈ ಲಿಮಿಟೆಡ್, ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಲ್ಲೇಶ್ವರಂ, ಎನ್ಯು, ಪಿ ಡಿ ಹಿಂದೂಜಾ ಸಿಂಧಿ, ಪೀಪಲ್ ಟ್ರೀ, ಪಿನಾಕಲ್, ಪ್ರಶಾಂತ್, ಪ್ರಿಸ್ಟಿನ್ ಹಾಸ್ಪಿಟಲ್ ರೀಸರ್ಚ್ ಸೆಂಟರ್, ಪಲ್ಸ್, ಪುಣ್ಯ ಆಸ್ಪತ್ರೆ ಪ್ರೈ ಲಿ., ರಾಜಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ, ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಪಟ್ಟಿಯಲ್ಲಿವೆ.
ಆಸ್ಪತ್ರೆ, ರಾಮಕೃಷ್ಣ, ರಂಗದೊರೆ ಮೆಮೋರಿಯಲ್, ಸಾಗರ್ ಆಸ್ಪತ್ರೆ, ಸಕ್ರಾ, ಸಂಜೀವಿನಿ ಬೆಂಗಳೂರು ಉತ್ತರ, ಸಪ್ತಗಿರಿ ಸೂಪರ್ ಸ್ಪೆಷಾಲಿಟಿ, ಸತ್ಯ ಸಾಯಿ ಆರ್ಥೋಪೆಡಿಕ್ ಮಲ್ಟಿ ಸ್ಪೆಷಾಲಿಟಿ, ಶ್ರೇಯಸ್, ಎಸ್ಎಲ್ವಿ ಪ್ರಸಾದ್, ಸಿಡ್ವಿನ್, ಸ್ಪಂದನ ಆಸ್ಪತ್ರೆ ಪ್ರೈ ಲಿ., ಸ್ಪೆಷಲಿಸ್ಟ್ ಹೆಲ್ತ್ ಸಿಸ್ಟಂ, ಶ್ರೀ ಸಾಯಿ ಪ್ರಸಾದ್ ಮಲ್ಟಿ ಸ್ಪೆಷಾಲಿಟಿ, ಮಾನ್ಯತಾ, ಶ್ರೀ ಆರೋಗ್ಯ, ಶ್ರೀ ಅಶ್ವಿನಿ, ಶ್ರೀ ಕೃಷ್ಣ, ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ, ಶ್ರೀನಿವಾಸಮ್ ಕ್ಯಾನ್ಸರ್ ಕೇರ್, ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಸೇಂಟ್ ಜೋಸೆಫ್, ಸೇಂಟ್ ಮಾರ್ಥಾಸ್, ಸೇಂಟ್ ಫಿಲೋಮಿನಾ, ಸೇಂಟ್ ತೆರೇಸ ಆಸ್ಪತ್ರೆಯಲ್ಲಿಯೂ ಅಧಿಕ ಶುಲ್ಕ ವಸೂಲಿಯಾಗಿದೆ.
ಸುಗಣ, ಶ್ವಾಸ, ದಿ ಬೆಂಗಳೂರು ಹಾಸ್ಪಿಟಲ್, ದಿ ಆಕ್ಸ್ಫರ್ಡ್ ಮೆಡಿಕಲ್ ಕಾಲೇಜು, ಟ್ರೂ ಲೈಫ್ ಮಹಾಬೋಂಧಿ, ಟ್ರಸ್ಟ್ ವೆಲ್ ಹಾಸ್ಟಿಟಲ್ ಪ್ರೈ ಲಿ., ಯುನೈಟೆಡ್ ಆಸ್ಪತ್ರೆ, ಯುವಿನ್ಕೇರ್, ವೇಗಾಸ್, ವಿ ಕೇರ್ ಮೆಡಿಸ್ಕಾನ್, ವಿಕ್ರಂ ಆಸ್ಪತ್ರೆ, ವಿಮಾಲಾಯಾ ಬೆಂಗಳೂರು, ವೈದೇಹಿ, ಯಶೋಮತಿ ಆಸ್ಪತ್ರೆ, ರೈನ್ಬೋ , ಶಿಫಾ ಆಸ್ಪತ್ರೆಯು ಅಧಿಕ ಶುಲ್ಕ ವಸೂಲು ಮಾಡಿವೆ.
ರೋಗಿಗಳು ಅಥವಾ ಅವರ ಕುಟುಂಬ ಸದಸ್ಯರು ಈ ಸಂದರ್ಭದಲ್ಲಿ ಆರ್ಥಿಕ ಮುಗ್ಗಟ್ಟನ್ನು ಎದುರಿಸಿದ್ದರು. ಅಲ್ಲದೆ ಚಿನ್ನಾಭರಣಗಳನ್ನು ಅಡವಿಟ್ಟಿದ್ದರೆ, ಕೆಲವರು ಸಂಬಂಧಿಕರಿಂದ, ಸಾಲ ಪಡೆದಿದ್ದು ಆಸ್ಪತ್ರೆಯ ಶುಲ್ಕವನ್ನು ಭರಿಸಿದ್ದರು. ಅಲ್ಲದೆ ಇನ್ನೂ ಹಲವೆಡೆ ಆಸ್ಪತ್ರೆಯ ಶುಲ್ಕ ಇತ್ಯರ್ಥಗೊಳಿಸದ ಹಿನ್ನೆಲೆಯಲ್ಲಿ ಮೃತಪಟ್ಟವರ ಮೃತದೇಹವನ್ನು ನೀಡದೇ ಆಸ್ಪತ್ರೆ ತಗಾದೆ ತೆಗೆದ ಪರಿಣಾಮ ಕುಟುಂಬ ಸದಸ್ಯರು ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣವೂ ವರದಿಯಾಗಿದ್ದವು.
ಕೋವಿಡ್ ರೋಗಿಗಳಿಂದ ನಿಗದಿಗಿಂತ ಅಧಿಕ ಶುಲ್ಕ ವಸೂಲು ಮಾಡಿರುವ ಆಸ್ಪತ್ರೆಗಳ ವಿರುದ್ಧ ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ಅಧಿಕ ಶುಲ್ಕವನ್ನು ರೋಗಿಗಳಿಗೆ ಮರು ಪಾವತಿಸಲುಕ್ರಮ ಕೈಗೊಂಡಿದೆ. ಆದರೆ ಸರ್ಕಾರವೇ ನಿಗದಿಗೊಳಿಸಿದ್ದ ಶುಲ್ಕಕ್ಕಿಂತಲೂ ಹೆಚ್ಚಿನ ಶುಲ್ಕವನ್ನು ವಸೂಲು ಮಾಡಿರುವ ಖಾಸಗಿ ಆಸ್ಪತ್ರೆಗಳಿಗೆ ನೋಟೀಸ್ ನೀಡಿದೆಯೇ ವಿನಃ ಶಿಸ್ತು ಕ್ರಮ ಕೈಗೊಂಡಿಲ್ಲ.