ನಿಷ್ಕ್ರೀಯ, ಅದಕ್ಷತೆ, ಮೈಗಳ್ಳತನ; 6 ತಿಂಗಳಲ್ಲಿ ಶೇ.10ಕ್ಕಿಂತ ಕಡಿಮೆ ಪ್ರಗತಿ

ಬೆಂಗಳೂರು; 2020-21ನೇ ಸಾಲಿನಲ್ಲಿ ಬಿಡುಗಡೆಯಾದ ಒಟ್ಟು ಅನುದಾನಕ್ಕೆ ಎದುರಾಗಿ ಕೇವಲ ಶೇ.23.93ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಅಲ್ಲದೆ ಕೆಲವು ಇಲಾಖೆಗಳು ಶೇ.10ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿವೆ. ಅಲ್ಲದೆ 2020-21ನೇ ಸಾಲಿನಲ್ಲಿ ಈಗಾಗಲೇ 6 ತಿಂಗಳುಗಳನ್ನು ಕಳೆದಿರುವ ಅಧಿಕಾರಶಾಹಿ, ಯೋಜನೆ ಅನುಷ್ಠಾನಕ್ಕೆ ಕಾಲಮಿತಿ ಹಾಕಿಕೊಳ್ಳದೆಯೇ ಕಾಲಹರಣ ಮಾಡುತ್ತಿರುವುದು ಬಹಿರಂಗವಾಗಿದೆ.

ಲಾಕ್‌ಡೌನ್‌ ತೆರವುಗೊಂಡು ಮೂರ್ನಾಲ್ಕು ತಿಂಗಳಾದರೂ ಅಧಿಕಾರಶಾಹಿ ಇನ್ನೂ ಮೈಗಳ್ಳತನ, ಅದಕ್ಷತೆಯಿಂದ ಹೊರಬಂದಿಲ್ಲ ಎಂಬುದನ್ನು 2020ರ ಅಕ್ಟೋಬರ್‌ 3ರಂದು ನಡೆದ ಕರ್ನಾಟಕ ಅಭಿವೃದ್ಧಿ ಪ್ರಗತಿ (ಕೆಡಿಪಿ) ಸಭೆಯೇ ನಿರೂಪಿಸಿದೆ. ಹಾಗೆಯೇ ಒಂದು ವರ್ಷದ ಸಂಭ್ರಮವನ್ನು ಹೊತ್ತು ತಿರುಗುತ್ತಿರುವ ಬಿಜೆಪಿ ಸರ್ಕಾರದ ನಿಷ್ಕ್ರೀಯತೆಯನ್ನೂ ಕೆಡಿಪಿ ಸಭೆ ಹೊರಗೆಡವಿದೆ.

ಅದಕ್ಷತೆಯನ್ನೇ ಮೈಗೂಡಿಸಿಕೊಂಡಂತಿರುವ ಹಲವು ಪ್ರಮುಖ ಇಲಾಖೆಗಳ ಅಧಿಕಾರಿಗಳು ಪ್ರಗತಿ ಹಾದಿಯಲ್ಲಿ ಸಾಗಲು ಇಚ್ಚಾಶಕ್ತಿ ಪ್ರದರ್ಶಿಸುತ್ತಿಲ್ಲ. ಇಲಾಖಾವಾರು ಪ್ರಗತಿ ಕುರಿತು ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅವರ ಅಧ್ಯಕ್ಷತೆಯಲ್ಲಿ ಸರಣಿ ಸಭೆಗಳು ನಡೆಯುತ್ತಿವೆಯೇ ವಿನಃ ಯೋಜನೆಗಳ ಅನುಷ್ಠಾನಕ್ಕೆ ವೇಗೋತ್ಕರ್ಷ ದೊರೆತಿಲ್ಲ. ಸಭೆ ನಡವಳಿ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

2020-21ನೇ ಸಾಲಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಯವ್ಯಯ ಘೋಷಣೆಗಳಿಗೆ ಸಂಬಂಧಿಸಿದಂತೆ 224 ಘೋಷಣೆಗಳ ಪೈಕಿ ಕೇವಲ 75 ಘೋಷಣೆಗಳಿಗೆ ಮಾತ್ರ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಇನ್ನುಳಿದ 149 ಘೋಷಣೆಗಳಿಗೆ 6 ತಿಂಗಳಾದರೂ ಸರ್ಕಾರಿ ಆದೇಶಗಳು ಹೊರಬಿದ್ದಿಲ್ಲ.

ಶೇ.23.93ರಷ್ಟು ಪ್ರಗತಿ

2020-21ನೇ ಸಾಲಿನಲ್ಲಿ ಒಟ್ಟು 2,05,588.12 ಕೋಟಿ ರು. ಅನುದಾನ ಲಭ್ಯವಿದೆ. ಈ ಪೈಕಿ ಆಗಸ್ಟ್‌ 2020ರ ಅಂತ್ಯಕ್ಕೆ 62,862.2 ಕೋಟಿ ರು. ಬಿಡುಗಡೆಯಾಗಿದೆ. ಇದರಲ್ಲಿ 49,188.61 ಕೋಟಿ ರು. ವೆಚ್ಚವಾಗಿದೆ. ಇನ್ನೂ 13,674 ಕೋಟಿ ವೆಚ್ಚವಾಗದೇ ಬಾಕಿ ಉಳಿದಿದೆ. ಒಟ್ಟು ಅನುದಾನಕ್ಕೆ ಎದುರಾಗಿ ಶೇ.23.93ರಷ್ಟು ಪ್ರಗತಿ ಆಗಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.

ಶೇ.10ಕ್ಕಿಂತ ಕಡಿಮೆ ಪ್ರಗತಿ

2020-21ನೇ ಸಾಲಿನ ಸಾಲಿನಲ್ಲಿ 6 ತಿಂಗಳು ಕಳೆದಿದ್ದರೂ ಆಗಸ್ಟ್‌ 2020ರ ಅಂತ್ಯಕ್ಕೆ ಒಟ್ಟು ಅನುದಾನಕ್ಕೆ ಶೇ.40ರಷ್ಟು ಪ್ರಗತಿ ಸಾಧಿಸಬೇಕಿತ್ತು. ಆದರೆ ಕೆಲವು ಇಲಾಖೆಗಳು ಶೇ.10ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿರುವುದು ನಡವಳಿಯಿಂದ ಗೊತ್ತಾಗಿದೆ. ಅದರಲ್ಲೂ ವಿಶೇಷ ಅಭಿವೃದ್ಧಿ ಯೋಜನೆಯಡಿ ಉನ್ನತ ಶಿಕ್ಷಣ, ಮಹಿಳಾ ಮಕ್ಕಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ಕ್ರಿಯಾಯೋಜನೆಯನ್ನೂ ತಯಾರಿಸದೇ ಮೈಗಳ್ಳತನದ ಪರಮಾವಧಿ ಮೆರೆದಿದೆ.

ಅದೇ ರೀತಿ ಪರಿಶಿಷ್ಟ ಜಾತಿ ಉಪ ಯೋಜನೆ, ಗಿರಿಜನ ಉಪಯೋಜನೆಗಳಿಗೆ ಸಂಬಂಧಿಸಿದಂತೆ ಕಂದಾಯ, ವಸತಿ, ವಾಣಿಜ್ಯ, ಕೈಗಾರಿಕೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಕೌಶಲ್ಯಾಭಿವೃದ್ಧಿ, ಸಾರಿಗೆ ಮತ್ತು ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಗಳು ಕಡಿಮೆ ಪ್ರಗತಿ ಸಾಧಿಸಿವೆ. ಅದರಲ್ಲೂ ತುಂಬಾ ಮುಖ್ಯವಾಗಿ ಪಿಂಚಣಿ ಯೋಜನೆಗಳಲ್ಲಿ ಎಸ್‌ಎಸ್‌ಪಿ/ಟಿಎಸ್‌ಪಿ ಫಲಾನುಭವಿಗಳನ್ನು ಗುರುತಿಸುವಲ್ಲಿಯೂ ಕಂದಾಯ ಇಲಾಖೆ ಹಿಂದೆ ಬಿದ್ದಿರುವುದು ನಡವಳಿಯಿಂದ ಗೊತ್ತಾಗಿದೆ.

ಇನ್ನು, ನಗರಾಭಿವೃದ್ಧಿ, ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆಗಳಲ್ಲಿಯೂ ಕಡಿಮೆ ಪ್ರಗತಿ ಆಗಿದೆ. ಬೆಂಗಳೂರು ಜಲಮಂಡಳಿ ಮತ್ತು ಜಲಸಿರಿ ಯೋಜನೆಗಳಡಿಯಲ್ಲಿಯೂ ಪ್ರಗತಿಯೂ ಅಷ್ಟಕ್ಕಷ್ಟೆ. ಕೇಂದ್ರ ಪುರಸ್ಕೃತ ಮತ್ತು ಕೇಂದ್ರ ವಲಯ ಯೋಜನೆಗಳಡಿ ಕೇಂದ್ರ ಸರ್ಕಾರದಿಂದ ಶೇ.100ರಷ್ಟು ಹಾಗೂ ಶೇ.100ಕ್ಕಿಂತ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿಸಿಕೊಳ್ಳುವಲ್ಲಿಯೂ ಹಲವು ಇಲಾಖೆಗಳು ತೀವ್ರ ಹಿನ್ನಡೆ ಅನುಭವಿಸಿವೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾತೃ ವಂದನಾ ಮತ್ತು ಪೋಷಣ ಅಭಿಯಾನ ಯೋಜನೆಗಳ ಹಾಗೂ ಉಳಿದ ಇಲಾಖೆಗಳಲ್ಲಿ ಕೇಂದ್ರ ಸರ್ಕಾರ ಬಿಡಿಗಾಸೂ ನೀಡಿಲ್ಲ. ಪ್ರಮುಖ ಖಾತೆ ದೊರೆಯಲಿಲ್ಲ ಮತ್ತು ಸಮರ್ಪಕವಾಗಿ ಅನುದಾನ ಹಂಚಿಕೆ ಆಗುತ್ತಿಲ್ಲ ಎಂಬ ಕಾರಣವವನ್ನು ಮುಂದೊಡ್ಡಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಸರ್ಕಾರವನ್ನು ಪತನಗೊಳಿಸಿದವರು ಬಿಜೆಪಿ ಸರ್ಕಾರದಲ್ಲಿ ಪ್ರಮುಖ ಖಾತೆ ಹೊಂದಿದ್ದರೂ ಆ ಇಲಾಖೆಗಳೇ ‘ಅದಕ್ಷತೆ, ಮೈಗಳ್ಳತನ, ಶೇ.20ಕ್ಕಿಂತಲೂ ಕಡಿಮೆ ಪ್ರಗತಿಯಲ್ಲದೆ ಶೂನ್ಯ ಸಂಪಾದನೆಯನ್ನು ಪ್ರದರ್ಶಿಸಿರುವ ನಿದರ್ಶನಗಳೂ ಇವೆ.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ರಮೇಶ್‌ ಜಾರಕಿಹೊಳಿ, ವಿ ಸೋಮಣ್ಣ ಸೇರಿದಂತೆ 11 ಸಚಿವರ ಇಲಾಖೆಗಳು ವಿಶೇಷ ಅಭಿವೃದ್ಧಿ ಯೋಜನೆಯಡಿ ಯೋಜನೆ ಇಲಾಖೆಗೆ ಈವರೆವಿಗೂ ಕ್ರಿಯಾ ಯೋಜನೆಯನ್ನೇ ಸಲ್ಲಿಸಿಲ್ಲ.

ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ಕಾಣದ ಬದಲಾವಣೆ

2020-21ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಲಕ್ಷ್ಮಣ ಸವದಿ (ಸಾರಿಗೆ) ಸಚಿವ ಬಸವರಾಜ ಬೊಮ್ಮಾಯಿ (ಒಳಾಡಳಿತ) ಕೆ ಎಸ್‌ ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ) ರಮೇಶ್‌ ಜಾರಕಿಹೊಳಿ(ಜಲ ಸಂಪನ್ಮೂಲ) ಸೋಮಣ್ಣ(ವಸತಿ), ಬಿ ಶ್ರೀರಾಮುಲು (ಹಿಂದುಳಿದ ವರ್ಗಗಳ ಕಲ್ಯಾಣ) ಶಶಿಕಲಾ ಜೊಲ್ಲೆ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ)ಅಲ್ಪಸಂಖ್ಯಾತರ ಕಲ್ಯಾಣ, ವಸತಿ, ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಮತ್ತು ಆರೋಗ್ಯ ಇಲಾಖೆಗಳು ಕ್ರಿಯಾ ಯೋಜನೆಯನ್ನೇ ತಯಾರಿಸಿಲ್ಲ.

ಜುಲೈ ಅಂತ್ಯಕ್ಕೆ ಪರಿಶಿಷ್ಟ ವರ್ಗಗಳ ಕಲ್ಯಾಣ, ಮಾಹಿತಿ ತಂತ್ರಜ್ಞಾನ, ಮೂಲಭೂತ ಸೌಕರ್ಯ, ವಸತಿ, ಅಲ್ಪಸಂಖ್ಯಾತರ, ಯುವ ಸಬಲೀಕರಣ, ಹಿಂದುಳಿದ ವರ್ಗಗಳು, ಪ್ರವಾಸೋದ್ಯಮ, ಕನ್ನಡ ಸಂಸ್ಕೃತಿ, ಸಮಾಜ ಕಲ್ಯಾಣ, ಕೃಷಿ, ನಗರಾಭಿವೃದ್ಧಿ ಇಲಾಖೆಗಳೂ ಸೇರಿದಂತೆ ಇತರೆ ಇಲಾಖೆಗಳು ಶೇ.20ಕ್ಕಿಂತಲೂ ಕಡಿಮೆ ಪ್ರಗತಿ ಮಾಡಿದ್ದವು.

ಶೂನ್ಯ ಸಂಪಾದನೆ

ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಗಳಿಗೆ ಸಂಬಂಧಿಸಿದಂತೆ 4 ತಿಂಗಳೂ ಕಳೆದರೂ ಬಹುತೇಕ ಇಲಾಖೆಗಳು ಶೂನ್ಯ ಪ್ರಗತಿ ಸಾಧಿಸಿದ್ದವು. ಬಾಹ್ಯ ಅನುದಾನ ಯೋಜನೆಗಳಡಿಯಲ್ಲಿ ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಇಯ ಬಿಡಬ್ಲ್ಯೂಎಸ್‌ಎಸ್‌ಬಿ, ಸಮಗ್ರ ಜಲ ನಿರ್ವಹಣೆ, ವಿಶ್ವ ಬ್ಯಾಂಕ್‌ ಮತ್ತು ಇತರೆ ಇಲಾಖೆಯ ಯೋಜನೆಗಳ ಪ್ರಗತಿಯಲ್ಲೂ ಶೂನ್ಯ ಸಂಪಾದನೆಯಾಗಿತ್ತು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟ ಸರ್ಕಾರದ ಭಾಗವಾಗಿದ್ದ ಉಭಯ ಪಕ್ಷಗಳ ಶಾಸಕರು ಮುಖ್ಯಮಂತ್ರಿಯಾಗಿದ್ದ ಎಚ್‌ ಡಿ ಕುಮಾರಸ್ವಾಮಿ ಅವರು ಅನುದಾನ ಹಂಚಿಕೆ ಮಾಡುವಲ್ಲಿ ತಾರತಮ್ಯ ಎಸಗುತ್ತಿದ್ದಾರೆ ಎಂದು ಬಲವಾಗಿ ಆರೋಪಿಸಿದ್ದರು. ಅಲ್ಲದೆ ಇದನ್ನೇ ನೆಪವಾಗಿರಿಸಿಕೊಂಡಿದ್ದ ಉಭಯ ಪಕ್ಷಗಳ ಶಾಸಕರು ಸಿಡಿದು ಬಿಜೆಪಿ ಪಾಳೆಯ ಸೇರಿದ್ದರಲ್ಲದೆ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಗೂ ಕಾರಣರಾಗಿದ್ದರು.

ಪಕ್ಷಾಂತರ ಮಾಡಿದ ನಂತರ ಪ್ರಭಾವಿ ಖಾತೆಗಳನ್ನು ಪಡೆದು ಸಚಿವರಾಗಿ ಒಂದು ವರ್ಷ ಕಳೆದಿದ್ದಾರೆಯೇ ಹೊರತು ಯೋಜನೆಗಳ ಅನುಷ್ಠಾನದಲ್ಲಿ ಮುಗ್ಗುರಿಸಿ ಬಿದ್ದಿದ್ದಾರೆ. ಇಲಾಖೆಗಳ ಮುಖ್ಯಸ್ಥರ ಮೇಲೆ ಸಚಿವರ ಹಿಡಿತವಾಗಲೀ, ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅವರ ಕಾರ್ಯಕ್ಷಮತೆಯೂ ಪರಿಣಾಮಕಾರಿಯಾಗಿಲ್ಲ ಎಂಬುದು ಕೆಡಿಪಿ ಸಭೆಯಲ್ಲಿ ಹೊರಬಿದ್ದ ಫಲಿತಾಂಶಗಳೇ ಕೈಗನ್ನಡಿಯಾಗಿವೆ.

the fil favicon

SUPPORT THE FILE

Latest News

Related Posts