Friday | June 12, 2026 |

ಶಿಗ್ಗಾಂವಿ, ಕಾರ್ಕಳದಲ್ಲಿ ಜವಳಿ ಪಾರ್ಕ್‌; ಅಂಗೈಯಲ್ಲಿ ಆಕಾಶ ತೋರಿಸಿದ ಸರ್ಕಾರ?

ಬೆಂಗಳೂರು; ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಶಾಸಕ ಸುನೀಲ್‌ಕುಮಾರ್‌ ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಅಂದಾಜು 3,000 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂಗೈಯಲ್ಲೇ ಅರಮನೆ ತೋರಿಸಿದ್ದ ರಾಜ್ಯ ಬಿಜೆಪಿ ಸರ್ಕಾರದ ಬಂಡವಾಳ ಇದೀಗ ಬಯಲಾಗಿದೆ.

ಈ ಎರಡೂ ಕ್ಷೇತ್ರಗಳಲ್ಲಿ ಜವಳಿ ಪಾರ್ಕ್‌ ಆರಂಭಿಸುವ ಮೂಲಕ 3,000 ಮಂದಿಗೆ ಉದ್ಯೋಗ ನೀಡಲಾಗುವುದು ಎಂದು ಹೇಳಿದ್ದ ಸರ್ಕಾರ, ಈ ಯೋಜನೆಗೆ ಯಾವುದೇ ಅನುದಾನವನ್ನು ನಿಗದಿಪಡಿಸಿಕೊಳ್ಳದಿರುವುದು ಇದೀಗ ಬಹಿರಂಗವಾಗಿದೆ.

ಹಾವೇರಿಯ ಶಿಗ್ಗಾಂವಿ ಮತ್ತು ಉಡುಪಿಯ ಕಾರ್ಕಳದಲ್ಲಿ ನೂತನ ಜವಳಿ ಪಾರ್ಕ್‌ ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅದಕ್ಕೊಂದು ಯೋಜನೆಯ ಪರಿಕಲ್ಪನೆಯನ್ನೇ ನೀಡಿರಲಿಲ್ಲ ಎಂಬುದು ಕೂಡ ಬಯಲಾಗಿದೆ. ಘೋಷಣೆಗೆ ಎದುರಾಗಿ ಯಾವುದೇ ಅನುದಾನ ನಿಗದಿಪಡಿಸಿಕೊಳ್ಳದ ಕಾರಣ ಆರ್ಥಿಕ ಇಲಾಖೆ ಇದನ್ನೂ ಒಂದು ಹೇಳಿಕೆ ಎಂದಷ್ಟೇ ದಾಖಲಿಸಿಕೊಂಡಿದೆ.

ನೂತನ ಜವಳಿ ಪಾರ್ಕ್‌ ಸ್ಥಾಪನೆಯಿಂದ ಆರ್ಥಿಕ ಹೊರೆ ಉಂಟಾಗುವುದಿಲ್ಲ ಎಂದು ಬಜೆಟ್‌ನಲ್ಲಿ ಹೇಳಲಾಗಿತ್ತು. ಆದರೆ 7 ತಿಂಗಳ ನಂತರ ರಾಗ ಬದಲಾಯಿಸಿರುವ ಇಲಾಖೆ, ಈ ವರ್ಷದಲ್ಲಿ ಆರ್ಥಿಕ ಹೊರೆ ಬೀಳದಿದ್ದರೂ ಮುಂದಿನ ವರ್ಷದಲ್ಲಿ ಆರ್ಥಿಕ ಹೊರೆ ಬೀಳುತ್ತದೆ ಎಂದು ವಾದವನ್ನು ಮುಂದೊಡ್ಡಿದೆ. ಇದಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯ ಕೆಲವು ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಹಾವೇರಿ ಜಿಲ್ಲೆಯ ಶಿಗ್ಗಾಂವಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನೂತನ ಜವಳಿ ಪಾರ್ಕ್‌ ಆರಂಭಿಸುವುದು ಇದರಿಂದ ಸುಮಾರು 3,000 ಉದ್ಯೋಗ ಸೃಷ್ಟಿಯಾಗಲಿದೆ ಎಂಬ ಘೋಷಣೆಗೆ ಎದುರಾಗಿ ಯಾವುದೇ ಅನುದಾನವನ್ನು ನಿಗದಿಪಡಿಸಿಕೊಂಡಿರುವುದಿಲ್ಲ. ಇದನ್ನು ಒಂದು STATEMENT ಎಂದು ದಾಖಲಿಸಿಕೊಳ್ಳಲಾಗಿದೆ,’ ಎಂಬ ಮಾಹಿತಿ ಆರ್ಥಿಕ ಇಲಾಖೆಯ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಈ ಯೋಜನೆ ಅನ್ವಯ ಗಾರ್ಮೆಂಟ್‌ ಫ್ಯಾಕ್ಟರಿಯನ್ನು ಸ್ಥಾಪಿಸುವ ಉದ್ಯಮಿಗೆ 25 ಕೋಟಿ ರು ಅಥವಾ ಯೋಜನಾ ವೆಚ್ಚದ ಶೇ.25ರಷ್ಟು ಸಬ್ಸಿಡಿಯನ್ನು ದೊರೆಯಲಿತ್ತು. ವಿಶೇಷ ವಾಹಕ ರಚನೆಯಾದಲ್ಲಿ ಸಬ್ಸಿಡಿ ಮೊತ್ತ 40 ಕೋಟಿ ಅಥವಾ ಯೋಜನಾ ವೆಚ್ಚದಲ್ಲಿ ಶೇ.40ರಷ್ಟು ಸಬ್ಸಿಡಿ ಸಿಗಲಿತ್ತು. ಈ ಯೋಜನೆಗೆ ಯಾವುದೇ ಅನುದಾನ ನಿಗದಿಪಡಿಸಿಕೊಳ್ಳದ ಕಾರಣ ಯೋಜನೆಯನ್ನೇ ತಡೆಹಿಡಿಯಲಾಗಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

‘ಮೌಖಿಕವಾಗಿ ಚರ್ಚಿಸಿದ ಸಂದರ್ಭದ ಸೂಚನೆಯ ಅನುಸಾರ ಕಡತವನ್ನು ತಡೆಹಿಡಿಯಲಾಗಿತ್ತು. ಆಯವ್ಯಯ ಕಂಡಿಕೆಗಳನ್ನು ಕೈ ಬಿಡುವ ವಿಚಾರವಾಗಿ ತೀರ್ಮಾನವಾಗಿದೆಯೇ ಎಂಬುದು ತಿಳಿದುಬರುತ್ತಿಲ್ಲ. ಆದ್ದರಿಂದ ಇದನ್ನು ತಡೆಹಿಡಿಯುವುದೇ ಅಥವಾ ನಿರ್ಣಯ ಅಂತಿಮವಾಗಿದೆಯೇ,’ ಎಂಬ ಬಗ್ಗೆ ಆರ್ಥಿಕ ಇಲಾಖೆಯ ಅಧಿಕಾರಿಗಳು ಆದೇಶ ಕೋರಿರುವುದು ತಿಳಿದು ಬಂದಿದೆ.

ಆರ್ಥಿಕ ಹೊರೆ ಬೀಳಲಿದೆಯೇ?

ಜವಳಿ ಪಾರ್ಕ್ ಸ್ಥಾಪಿಸಲು ಆಸಕ್ತ ಉದ್ಯಮಿಗಳು ಎಸ್‌ ಪಿ ವಿ ರಚಿಸಿಕೊಂಡು ಅಗತ್ಯ ಜಮೀನನ್ನು ವಶಕ್ಕೆ ಪಡೆದ ನಂತಗರವೇ ಜವಳಿ ಪಾರ್ಕ್ ಸ್ಥಾಪನೆ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. ಹೀಗಾಗಿ 2020021ನೇ ಸಾಲಿನಲ್ಲಿ ಯಾವುದೇ ಆರ್ಥಿಕ ಹೊರೆ ಉಂಟಾಗುವುದಿಲ್ಲ ಎಂದು ಹೇಳಲಾಗಿದೆ. ಆಧರೆ ಜವಳಿ ನೀತಿ ಕಂಡಿಕೆ 12.1ರಲ್ಲಿ ನೂತನವಾಗಿ ಜವಳಿ ಪಾರ್ಕ್‌ ಅಭಿವೃದ್ಧಿಪಡಿಸಲು ಸಾಮಾನ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅವಕಾಶವಿದೆ. ಸಿದ್ದ ಉಡುಪು ನೀತಿ 2019-24ರನ್ವಯ ರಿಯಾಯಿತಿ ಹಾಗೂ ಪ್ರೋತ್ಸಾಹ ಧನ ನೀಡಲಿದ್ದರೂ ಮುಂದಿನ ವರ್ಷಗಳಲ್ಲಿ ಆರ್ಥಿಕ ಹೊರೆ ಬೀಳುತ್ತದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಅಭಿಪ್ರಾಯಿಸಿರುವುದು ಗೊತ್ತಾಗಿದೆ.

ಈ ಹಿಂದೆಯೂ ಕಲ್ಬುರ್ಗಿಯಲ್ಲಿ ಜವಳಿ ಪಾರ್ಕ್‌ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದ ಕೇಂದ್ರದ ಎನ್‌ಡಿಎ ಸರ್ಕಾರವೂ ಕಡೇಗಳಿಗೆಯಲ್ಲಿ ಯೋಜನೆಯನ್ನು ಕೈ ಬಿಟ್ಟಿತ್ತು. ಯುಪಿಎ ಸರ್ಕಾರ 2011ರಲ್ಲಿ ಕಲಬುರ್ಗಿಗೆ ಜವಳಿ ಪಾರ್ಕ್ ಮಂಜೂರು ಮಾಡಿತ್ತು. ಅದಕ್ಕಾಗಿ ಶಹಾಬಾದ್ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಸ್ಥಳವನ್ನೂ ಮೀಸಲಿಡಲಾಗಿತ್ತು. ಜವಳಿ ಪಾರ್ಕ್ ಸ್ಥಾಪನೆಯಿಂದಾಗಿ ಸುಮಾರು 5 ಜನರಿಗೆ ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆಗಳಿತ್ತು.

ಆದರೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ಕೈಬಿಟ್ಟಿದ್ದರಿಂದಾಗಿ ಉದ್ಯೋಗ ಅವಕಾಶಗಳನ್ನು ಕಸಿದುಕೊಂಡಂತಾಗಿತ್ತು. ಜವಳಿ ಪಾರ್ಕ್ ಸ್ಥಾಪನೆ ಉದ್ದೇಶವನ್ನೇ ಕೈಬಿಟ್ಟಿದ್ದರಿಂದಾಗಿ ಹಿಂದುಳಿದ ಭಾಗದ ಜನರ ಗಾಯದ ಮೇಲೆ ಬರೆ ಎಳೆದಂತಾಗಿತ್ತು.

Hot this week

ಆರ್ಥಿಕ ಬಿಕ್ಕಟ್ಟು; ಶಿಕ್ಷಕರ ನೇಮಕಾತಿ, ವೃತ್ತಿಪರತೆ ಅಭಿವೃದ್ಧಿ ವೆಚ್ಚಕ್ಕೆ ತಡೆಹಿಡಿದಿತ್ತೇ ಸರ್ಕಾರ?

ಬೆಂಗಳೂರು; ರಾಜ್ಯದ ಹೆಚ್ಚಿನ ಸರ್ಕಾರಿ ಶಾಲೆಗಳು ಆರ್‍‌ಟಿಇ ಕಾಯ್ದೆಯು ಭೌತಿಕ ಮೂಲಸೌಕರ್ಯಗಳು...

ತ್ಯಾಜ್ಯ ವಿಲೇವಾರಿ ಟೆಂಡರ್ ಪ್ರಕ್ರಿಯೆಗಳಲ್ಲಿ ಅಕ್ರಮ ಆರೋಪ; ಮಧ್ಯಪ್ರವೇಶಕ್ಕೆ ಲೋಕಭವನ ಕದ ತಟ್ಟಿದ ಬಿಜೆಪಿ, ಸ್ವತಂತ್ರ ತನಿಖೆಗೆ ಮುಂದಾಗುವರೇ?

ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಮಗ್ರ ಘನ ತ್ಯಾಜ್ಯ ನಿರ್ವಹಣಾ...
Please Scan to make Your Contribution

Topics

ಆರ್ಥಿಕ ಬಿಕ್ಕಟ್ಟು; ಶಿಕ್ಷಕರ ನೇಮಕಾತಿ, ವೃತ್ತಿಪರತೆ ಅಭಿವೃದ್ಧಿ ವೆಚ್ಚಕ್ಕೆ ತಡೆಹಿಡಿದಿತ್ತೇ ಸರ್ಕಾರ?

ಬೆಂಗಳೂರು; ರಾಜ್ಯದ ಹೆಚ್ಚಿನ ಸರ್ಕಾರಿ ಶಾಲೆಗಳು ಆರ್‍‌ಟಿಇ ಕಾಯ್ದೆಯು ಭೌತಿಕ ಮೂಲಸೌಕರ್ಯಗಳು...

ಕಸ ವಿಲೇವಾರಿ ಟೆಂಡರ್‍‌ನಲ್ಲಿ ಅಕ್ರಮ; 10,000 ಕೋಟಿ ಕಿಕ್‌ ಬ್ಯಾಕ್‌ ಆರೋಪ, ಹೈಕಮಾಂಡ್ ಕಪ್ಪದ ಟೆಂಡರ್, ರಾಜ್ಯಪಾಲರಿಗೆ ದೂರು, ದಿ ಫೈಲ್ ವರದಿ ಬೆನ್ನಲ್ಲೇ ತುಟಿ ಬಿಚ್ಚಿದ ಆರ್ ಅಶೋಕ್

ಬೆಂಗಳೂರು; ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್‌ ಯೋಜಿಸಿದ್ದ ಟೆಂಡರ್ ಪ್ಯಾಕೇಜ್‌ಗಳಲ್ಲಿ...

ಒಂದು ರಾಷ್ಟ್ರ ಒಂದು ಚುನಾವಣೆ; ಸಂಸತ್‌ ಜಂಟಿ ಸಮಿತಿಗೆ 5 ತಿಂಗಳಾದರೂ ಮಾಹಿತಿ ನೀಡದ ರಾಜ್ಯ

ಬೆಂಗಳೂರು; ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ಸಂವಿಧಾನದ 129ನೇ ತಿದ್ದುಪಡಿ...

ಐಪಿಜಿಆರ್‍ಎಸ್, ಸಕಾಲ ಮತ್ತು ಸಿಪಿಗ್ರಾಮ್ಸ್‌, ಸಿಎಂ ಜನಸ್ಪಂದನ, ಸಿ ಎಸ್ ಕಚೇರಿಯಲ್ಲಿ ಇತ್ಯರ್ಥವಾಗದ 37,782 ಅರ್ಜಿಗಳು; ನಿಷ್ಕ್ರೀಯವಾಯಿತೇ ಆಡಳಿತ?

ಬೆಂಗಳೂರು;  ಸಾರ್ವಜನಿಕರು ವಿವಿಧ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಐಪಿಜಿಆರ್‍ಎಸ್, ಸಕಾಲ ಮತ್ತು ಸಿಪಿಗ್ರಾಮ್ಸ್‌,...

Related Articles

Popular Categories

error: Content is protected !!