ಬೆಂಗಳೂರು; ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಿಸಲು ಕಳೆದ ಎರಡು ವರ್ಷಗಳಿಂದಲೂ ಭಾರೀ ಕಸರತ್ತು ನಡೆಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಇದೀಗ ಒಂದೇ ಉದ್ದೇಶ ಅಥವಾ ಸಮಾನ ಉದ್ದೇಶ ಹೊಂದಿರುವ ಯೋಜನೆಗಳನ್ನು ಸಮೀಕರಿಸಲು ಹೊರಟಿದೆ.
ಹಿಂದಿನ ಬಿಜೆಪಿ ಸರ್ಕಾರವು ಸಹ ಇದೇ ರೀತಿಯಲ್ಲಿ ಯೋಚಿಸಿತ್ತಾದರೂ ಅನುಷ್ಠಾನಕ್ಕೆ ತಂದಿರಲಿಲ್ಲ. ಈಗಿನ ಕಾಂಗ್ರೆಸ್ ಸರ್ಕಾರವು ಸಮಾನ ಉದ್ದೇಶ ಹೊಂದಿರುವ ಯೋಜನೆಗಳನ್ನು ಸಮೀಕರಿಸುವ ಮೂಲಕ ಬೊಕ್ಕಸಕ್ಕೆ 3,140.14 ಕೋಟಿ ಗೂ ಅಧಿಕ ಮೊತ್ತವನ್ನು ಉಳಿತಾಯ ಮಾಡುವ ಲೆಕ್ಕಾಚಾರವನ್ನೂ ಹಾಕಿದೆ.
ಈ ಕುರಿತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ವಿಶಾಲ್ ಆರ್ ಅವರು ಸರ್ಕಾರದ ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ಅನಧಿಕೃತ ಟಿಪ್ಪಣಿಯನ್ನು ಹೊರಡಿಸಿದ್ದಾರೆ. 2024ರ ಡಿಸೆಂಬರ್ 17ರಂದು ಹೊರಡಿಸಿರುವ ಟಿಪ್ಪಣಿ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಒಂದೇ ಉದ್ದೇಶವಿರುವ ಯೋಜನೆಗಳನ್ನು ಮತ್ತು ಸಣ್ಣ ಪ್ರಮಾಣದ ಯೋಜನೆಗಳನ್ನು ಸಮೀಕರಿಸುವ ಮೂಲಕ ಯೋಜನೆಗಳ ಉಸ್ತುವಾರಿ ನಡೆಸುವುದು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಯೋಜನಾ ಇಲಾಖೆ ವತಿಯಿಂದ ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ 2025-26ನೇ ಸಾಲಿನಲ್ಲಿ ಸಮೀಕರಿಸಬಹುದಾದ ಯೋಜನೆಗಳನ್ನು ಗುರುತಿಸಿ ಆರ್ಥಿಕ ಇಲಾಖೆಗೆ ಮುಂದಿನ ಕ್ರಮಕ್ಕಾಗಿ ಸಲ್ಲಿಸಬೇಕು,’ ಎಂದು ಪತ್ರದಲ್ಲಿ ಸೂಚಿಸಿರುವುದು ತಿಳಿದು ಬಂದಿದೆ.
2025-26ನೇ ಸಾಲಿಗೆ ಸಮಾನ ಉದ್ದೇಶ ಹೊಂದಿರುವ ಯೋಜನೆ, ಲೆಕ್ಕ ಶೀರ್ಷಿಕೆಗಳನ್ನು ಸಮೀಕರಣಗೊಳಿಸುವುದು ಮತ್ತು ಯೋಜನೆ ಹೆಸರು, ಆಯವ್ಯಯ ಅಂದಾಜು ಮತ್ತು ವಿಲೀನ, ಮುಕ್ತಾಯಗೊಳಿಸಲು ಇರಬಹುದಾದ ಕಾರಣಗಳ ವಿವರಗಳ ಕುರಿತು ಇಲಾಖೆಗಳಿಂದ ಯೋಜನೆ ಇಲಾಖೆಯು ಮಾಹಿತಿ ಕೋರಿರುವುದು ಪತ್ರದಿಂದ ಗೊತ್ತಾಗಿದೆ.
ಹಿಂದಿನ ಬಿಜೆಪಿ ಸರ್ಕಾರವೂ ಸಹ ಅನುತ್ಪಾದಕ ವೆಚ್ಚಗಳನ್ನು ಕಡಿತಗೊಳಿಸಲು ಮುಂದಾಗಿತ್ತು. ರಾಜ್ಯ ವಲಯದ ಯೋಜನೆಗಳನ್ನು ಕೇಂದ್ರ ಪುರಸ್ಕೃತ ಯೋಜನೆಗಳೊಂದಿಗೆ ಸಮೀಕರಿಸಲು ತಯಾರಿ ನಡೆಸಿತ್ತು. ಒಂದೇ ರೀತಿಯ ಉದ್ದೇಶವನ್ನು ಹೊಂದಿರುವ ರಾಜ್ಯ ವಲಯದ ಯೋಜನೆಗಳನ್ನು ಕೇಂದ್ರ ಪುರಸ್ಕೃತ ಯೋಜನೆಗಳ ಜತೆ ವಿಲೀನಗೊಳಿಸಿದಲ್ಲಿ 3,140.14 ಕೋಟಿ ರು. ಉಳಿತಾಯ ಮಾಡಬಹುದು ಎಂಬ ಲೆಕ್ಕಾಚಾರವನ್ನೂ ಮಾಡಿತ್ತು.
ಕರ್ನಾಟಕ ರೇಷ್ಮೆ ಯೋಜನೆ, ಆಯುಷ್ಮಾನ್ ಭಾರತ್, ಡಾ ಅಂಬೇಡ್ಕರ್ ನಿವಾಸ್ ಯೋಜನೆ, ಆಶ್ರಯ-ಬಸವ ವಸತಿ, ವಾಜಪೇಯಿ ನಗರ ವಸತಿ, ಹುಲ್ಲು ಜಮೀನುಗಳ ರಕ್ಷಣೆ, , ಒಳನಾಡು ಮೀನುಗಾರಿಕೆ ಅಭಿವೃದ್ಧಿ, ಪಶು ಸಂಗೋಪನಾ ಸಹಕಾರ ಸಂಘಗಳಿಗೆ ಅನುದಾನ, ಸಾವಯವ ಕೃಷಿ, ಮಹಿಳೆಯರಿಗೆ ಕಲ್ಯಾಣ ಕಾರ್ಯಕ್ರಮ, ನಗರೋತ್ಥಾನ, ಅಲ್ಪಸಂಖ್ಯಾತರ ಹಾಸ್ಟೆಲ್ ವಸತಿ ಶಾಲೆ ನಿರ್ಮಾಣ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಅರ್ಹತೆಯ ಉನ್ನತೀಕರಣ ಸೇರಿದಂತೆ ಇನ್ನಿತರೆ ರಾಜ್ಯ ವಲಯ ಯೋಜನೆಗಳನ್ನು ಕೇಂದ್ರ ಪುರಸ್ಕೃತ ಯೋಜನೆಗಳೊಂದಿಗೆ ಸಮೀಕರಿಸುವ ಸಂಬಂಧ ಸಿದ್ಧತೆ ನಡೆಸಿತ್ತು.
2021-22ನೇ ಸಾಲಿನ ಆಯವ್ಯಯದ ಪ್ರಕಾರ 19 ಇಲಾಖೆಗಳಲ್ಲಿ ಸುಮಾರು 58 ರಾಜ್ಯ ವಲಯದ ಯೋಜನೆಗಳನ್ನು ಸಮಾನಾಂತರ ಉದ್ದೇಶ ಹೊಂದಿರುವ 23 ಕೇಂದ್ರ ಪುರಸ್ಕೃತ ಯೋಜನೆಗಳೊಂದಿಗೆ ಸಮೀಕರಿಸಲು ಹಿಂದಿನ ಸರ್ಕಾರವು ಗುರುತಿಸಿತ್ತು. 2021-22ನೇ ಸಾಲಿಗೆ ಒಟ್ಟು 81 ಯೋಜನೆಗಳಿಗೆ 9,521.51 ಕೋಟಿ ರು.ಗಳ ಅನುದಾನ ಒದಗಿಸಿತ್ತು. ಇದರಲ್ಲಿ ರಾಜ್ಯ ವಲಯದ ಯೋಜನೆಗಳಿಗೆ 5,377.04 ಕೋಟಿ ರು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಗೆ 4,144.47 ಕೋಟಿ ರು.ಗಳನ್ನು ಹಂಚಿಕೆ ಮಾಡಿರುವುದು ಇಲಾಖೆಗಳು ವಿವರಣೆ ಪಟ್ಟಿಯನ್ನು ಸಿದ್ಧಪಡಿಸಿತ್ತು.
ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಕೇಂದ್ರದ ಪಾಲು 2,671.91 ಕೋಟಿ ರು.ಗಳಾಗಿದ್ದೆ (ಹಂಚಿಕೆಯ ಸುಮಾರು ಶೇ.60) ರಾಜ್ಯ ವಲಯದ ಯೋಜನೆಗಳನ್ನು ಕೇಂದ್ರ ಪುರಸ್ಕೃತ ಯೋಜನೆಗಳೊಂದಿಗೆ ವಿಲೀನಗೊಳಿಸಿದರೆ 81 ಯೋಜನೆಗಳ ಒಟ್ಟಾರೆ ಹಂಚಿಕೆಯಲ್ಲಿ (9,521.51 ಕೋಟಿ) ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಇಲಾಖೆಗಳು ಪ್ರತಿಪಾದಿಸಿತ್ತು.
ಆದರೆ ಕೇಂದ್ರದ ಪಾಲಿನಲ್ಲಿ ಹೆಚ್ಚಳ ಆಗಬಹುದು ಎಂದು ಅಂದಾಜಿಸಿದ್ದ ಇಲಾಖೆಗಳು 2,671.91 ಕೋಟಿ ರು.ಗಳಿಂದ 5,817.17 ಕೋಟಿ ರು.ಗಳಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಲೆಕ್ಕಾಚಾರ ಮಾಡಿದ್ದವು. ಇದರಿಂದ ಕೇಂದ್ರದ ಪಾಲು 3,145.26 ಕೋಟಿ ರು.ಗಳು ಹೆಚ್ಚಳವಾಗಿ ರಾಜ್ಯ ಆಯವ್ಯಯದಲ್ಲಿ ಹೆಚ್ಚಳದಷ್ಟು ಅನುದಾನ ಉಳಿತಾಯವಾಗುತ್ತದೆ. ಇದನ್ನು ಇತರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಬಹುದು ಎಂಬ ಸಮರ್ಥನೆಯನ್ನೂ ಮುಂದೊಡ್ಡಿತ್ತು.
ಸಮೀಕರಿಸಿದ ನಂತರ ಇಲಾಖೆಗಳಿಗೆ ಉಳಿತಾಯವಾಗಲಿದ್ದ ಮೊತ್ತದ ವಿವರ
ವಸತಿ ಇಲಾಖೆ- 840 ಕೋಟಿ, ಪ್ರಾಥಮಿಕ, ಪ್ರೌಢಶಿಕ್ಷಣ- 293.44 ಕೋಟಿ, ಆರೋಗ್ಯ ಕುಟುಂಬ ಕಲ್ಯಾಣ- 586.71 ಕೋಟಿ, ಉನ್ನತ ಶಿಕ್ಷಣ- 126.00 ಕೋಟಿ, ಮೀನುಗಾರಿಕೆ- 68.58 ಕೋಟಿ ಅರಣ್ಯ- 180.99 ಕೋಟಿ, ಪಶು ಸಂಗೋಪನೆ- 33.31 ಕೋಟಿ, ಕೃಷಿ ಇಲಾಖೆ- 265.47 ಕೋಟಿ, ನಗರಾಭಿವೃದ್ಧಿ- 242.32 ಕೋಟಿ, ವೈದ್ಯಕೀಯ ಶಿಕ್ಷಣ- 12.38 ಕೋಟಿ, ಕೌಶಲ್ಯಾಭಿವೃದ್ಧಿ- 65.95 ಕೋಟಿ, ಅಲ್ಪಸಂಖ್ಯಾತರ ಕಲ್ಯಾಣ- 120.00 ಕೋಟಿ, ಪರಿಶಿಷ್ಟ ಪಂಗಡಗಳ ಕಲ್ಯಾಣ- 12.50 ಕೋಟಿ, ಪರಿಶಿಷ್ಟ ವರ್ಗಗಳ ಕಲ್ಯಾಣ- 150.00 ಕೋಟಿ, ಲೋಕೋಪಯೋಗಿ- 45.00 ಕೋಟಿ, ರೇಷ್ಮೆ- 8.10 ಕೋಟಿ, ತೋಟಗಾರಿಕೆ- 59.06 ಕೋಟಿ, ಒಳಾಡಳಿತ- 10.91 ಕೋಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ- 19.44 ಕೋಟಿ ರು ಉಳಿತಾಯವಾಗಲಿದೆ ಎಂಬ ಲೆಕ್ಕಾಚಾರವನ್ನು ಹಿಂದಿನ ಬಿಜೆಪಿ ಸರ್ಕಾರವು ಮಾಡಿತ್ತು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ, ಪ್ರಧಾನಮಂತ್ರಿ ಗ್ರಾಮ್ ಸಡಕ್, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು, ಮಧ್ಯಾಹ್ನದ ಬಿಸಿಯೂಟ, ಸಮಗ್ರ ಶಿಕ್ಷಣ ಕರ್ನಾಟಕ, ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಜ್ ವಿಪತ್ತು ನಿಧಿಗೆ ಸಹಾಯ ಧನ, ರಾಷ್ಟ್ರೀಯ ಸಾಮಾಜಿಕ ಸಹಾಯ ಯೋಜನೆ, ಪೂರಕ ಪೌಷ್ಠಿಕಾಂಶ, ಪ್ರಧಾನಮಂತ್ರಿ ಆವಾಸ್ ಯೋಜನೆಗಳು ಕೇಂದ್ರ ಪುರಸ್ಕೃತ ಯೋಜನೆಗಳಾಗಿವೆ.
3,140 ಕೋಟಿ ಉಳಿತಾಯದ ಲೆಕ್ಕಾಚಾರ; ರಾಜ್ಯ ಯೋಜನೆಗಳು ಕೇಂದ್ರದೊಂದಿಗೆ ವಿಲೀನ?
ಒಂದೇ ಉದ್ದೇಶವಿರುವ ರಾಜ್ಯ ಸರ್ಕಾರದ ಯೋಜನೆಗಳನ್ನು ಕೇಂದ್ರ ಸರ್ಕಾರದ ಯೋಜನೆಗಳೊಂದಿಗೆ ಸಮೀಕರಣವನ್ನು ಮಾಡಿದರೆ ನಿರ್ವಹಣೆ ವೆಚ್ಚಗಳನ್ನು ಹಾಗೂ ಸಿಬ್ಬಂದಿಗಳ ಸಂಖ್ಯೆಯನ್ನು ಆದಷ್ಟು ಮಟ್ಟಿಗೆ ಕಡಿಮೆಗೊಳಿಸಬಹುದಾಗಿದೆ,’ ಎಂದು ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಸೂಚಿಸಿದ್ದನ್ನು ಸ್ಮರಿಸಬಹುದು.