ಬೆಂಗಳೂರು; ಮೈಸೂರು ದಸರಾ ಸೇರಿದಂತೆ ಇನ್ನಿತರೆ ಜಿಲ್ಲಾಮಟ್ಟದ ವಿವಿಧ ಉತ್ಸವಗಳಿಗೆ 2024-25ಮತ್ತು 2025-26ನೇ ಸಾಲಿನವರೆಗೆ ಒಟ್ಟಾರೆ ಹಂಚಿಕೆಯಾಗಿದ್ದ 32.97 ಕೋಟಿ ರುಕ ಪೈಕಿ ಇನ್ನೂ 12.50 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿಲ್ಲ.
ಸರ್ಕಾರದ ಸಾಧನಾ ಸಮಾವೇಶಗಳಿಗೆ ಕೋಟ್ಯಂತರ ರುಪಾಯಿನಷ್ಟು ಹಣ ಬಿಡುಗಡೆ ಮಾಡುತ್ತಿರುವ ಸರ್ಕಾರವು, ಮೈಸೂರು ದಸರಾ ಸೇರಿದಂತೆ ಇನ್ನಿತರೆ ಸಾಂಸ್ಕೃತಿಕ ಉತ್ಸವಗಳ ಆಯೋಜನೆಗೆ ಪೂರ್ಣ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡಿಲ್ಲ.
ಈ ಸಂಬಂಧ ವಿಧಾನಮಂಡಲ ಅಧಿವೇಶನದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಮಾಹಿತಿ ಒದಗಿಸಿದ್ದಾರೆ.

ವಿಶೇಷವೆಂದರೇ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಸ್ವಕ್ಷೇತ್ರ ಕನಕಗಿರಿ ಉತ್ಸವಕ್ಕೆ 3 ಕೋಟಿ ರುಪಾಯಿಗಳ ಅನುದಾನ ಒದಗಿಸಿದ್ದರೂ ಸಹ ಇದುವರೆಗೂ ನಯಾ ಪೈಸೆಯನ್ನೂ ಬಿಡುಗಡೆ ಮಾಡಿಲ್ಲ.
ಒಟ್ಟು 19 ಉತ್ಸವಗಳಿಗೆ 32.97,61,174 ರುಪಾಯಿ ಅನುದಾನ ಹಂಚಿಕೆ ಮಾಡಿದ್ದ ಸರ್ಕಾರ ಈ ಪೈಕಿ 20,47,61,174 ರುಪಾಯಿ ಬಿಡುಗಡೆ ಮಾಡಿತ್ತು. ಬಿಡುಗಡೆಗೆ ಇನ್ನೂ 12.50 ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿರುವುದು ಸಚಿವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.
ಮೈಸೂರು ದಸರಾ, ಚುಂಚನಕಟ್ಟೆ ಜಲಪಾತೋತ್ಸವ, ವೀರರಾಣಿ ಕಿತ್ತೂರು ರಾಣಿ ಉತ್ಸವ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ, ಸವದತ್ತಿ ನಾಡಹಬ್ಬ, ಹಂಪಿ ಉತ್ಸವ, ಪುರಂದರ ಆರಾಧನ ಉತ್ಸವ, ಒನಕೆ ಓಬವ್ವ ಉತ್ಸವ, ಚಾಲುಕ್ಯ ಉತ್ಸವ, ರನ್ನ ಉತ್ಸವ, ಕನಕಿರಿ ಉತ್ಸವ, ಆನೆಗುಂದಿ ಉತ್ಸವ, ಚಾಮರಾಜನಗರ ದಸರಾ, ಶಿವನಸಮುದ್ರ ಭರಚುಕ್ಕಿ ಜಲಾಪಾತೋತ್ಸವ, ಶ್ರೀರಂಗಪಟ್ಟಣ ಉತ್ಸವ, ಗಗನಚುಕ್ಕಿ ಜಲಪಾತೋತ್ಸವ ನಡೆದಿದೆ.
ಮಡಿಕೇರಿ ದಸರಾ, ಗೋಣಿಕೊಪ್ಪ ದಸರಾ, ಕದಂಬೋತ್ಸವ, ಕರಾವಳಿ ಉತ್ಸವ, ಮುರುಡೇಶ್ವರ ಶಿವರಾತ್ರಿ ಉತ್ಸವ, ವೀರರಾಣಿ ಅಬ್ಬಕ್ಕ ಉತ್ಸವ, ಉಡುಪಿ ಉಚ್ಛಿಲ ದಸರಾ, ಶಿವಮೊಗ್ಗ ದಸರಾ, ಸಹ್ಯಾದ್ರಿ ಉತ್ಸವ, ತುಮಕೂರು ದಸರಾ, ಕಲ್ಯಾಣ ಕರ್ನಾಟಕ ಉತ್ಸವ, ಹಾಸನಾಂಬ ಉತ್ಸವ, ರಾಯಚೂರು ಉತ್ಸವ, ಕಂಪ್ಲಿ ಮತ್ತು ಕುರಗೋಡು ಉತ್ಸವಗಳಿಗೆ ಸರ್ಕಾರವು ಅನುದಾನ ನೀಡುತ್ತದೆ.


ಈ ಪೈಕಿ ಕದಂಬೋತ್ಸವಕ್ಕೆ 2.00 ಕೋಟಿ ರು ಬಿಡುಗಡೆಗೆ ಆದೇಶವಾಗಿತ್ತು. ಈ ಪೈಕಿ 1.92 ಕೋಟಿ ಮಾಡಿದ್ದ ಕನ್ನಡ ಸಂಸ್ಕೃತಿ ಇಲಾಖೆಯು ಬಿಡುಗಡೆಗೆ ಇನ್ನೂ 8 ಲಕ್ಷ ರುಪಾಯಿಗಳನ್ನು ಬಾಕಿ ಇರಿಸಿಕೊಂಡಿದೆ.

ಕರಾವಳಿ ಉತ್ಸವಕ್ಕೆ 5 ಕೋಟಿ ರು ಅನುದಾನ ಒದಗಿಸಲು ಆದೇಶವಾಗಿತ್ತು. ಈ ಪೈಕಿ 3 ಕೋಟಿಯಷ್ಟು ಬಿಡುಗಡೆ ಮಾಡಿದೆ. ಬಿಡುಗಡೆಗೆ 2 ಕೋಟಿ ರುಪಾಯಿ ಬಾಕಿ ಇದೆ. ಚಾಲುಕ್ಯ ಉತ್ಸವಕ್ಕೆ 3 ಕೋಟಿ ರು ಅನುದಾನ ಬಿಡುಗಡೆ ಮಾಡಲು ಆದೇಶವಾಗಿದೆ. ಈ ಪೈಕಿ ನಯಾಪೈಸೆಯನ್ನೂ ನೀಡಿಲ್ಲ. ರಾಯಚೂರು ಉತ್ಸವಕ್ಕೆ 1 ಕೋಟಿ ರು ಅನುದಾನದ ಪೈಕಿ 8 ಲಕ್ಷ ಮಾತ್ರ ಬಿಡುಗಡೆ ಮಾಡಿದೆ. ಬಿಡುಗಡೆಗೆ ಇನ್ನೂ 92 ಲಕ್ಷ ರು ಬಾಕಿ ಇದೆ.
ಕಿತ್ತೂರು ಉತ್ಸವಕ್ಕೆ 1 ಕೋಟಿ ರು ಅನುದಾನದ ಪೈಕಿ 75 ಲಕ್ಷ ರು ಬಿಡುಗಡೆಯಾಗಿದ್ದರೇ 25 ಲಕ್ಷ ರು ಬಾಕಿ ಇದೆ. ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ ಉತ್ಸವಕ್ಕೆ 2 ಕೋಟಿ ರು ಪೈಕಿ 1.25 ಕೋಟಿ ರು ಅನುದಾನ ಬಿಡುಗಡೆ ಮಾಡಿದೆ. ಬಿಡುಗಡೆಗೆ ಇನ್ನೂ 75 ಲಕ್ಷ ಬಾಕಿ ಇದೆ. ಚುಂಚನಕಟ್ಟೆ ಜಲಾಪಾತೋತ್ಸವಕ್ಕೆ 50 ಲಕ್ಷ ರು ಅನುದಾನ ಬಿಡುಗಡೆಗೆ ಆದೇಶವಾಗಿದ್ದರೂ ಸಹ ಬಿಡಿಗಾಸೂ ನೀಡಿಲ್ಲ.
ಕನಕಗಿರಿ ಉತ್ಸವಕ್ಕೆ 3 ಕೋಟಿ ರು ಅನುದಾನ ಬಿಡುಗಡೆಗೆ ಆದೇಶವಾಗಿದೆ. ಆದರೆ ನಯಾಪೈಸೆಯನ್ನೂ ನೀಡಿಲ್ಲ. ಅದೇ ರೀತಿ ಕಂಪ್ಲಿ ಮತ್ತು ಕುರುಗೋಡು ಉತ್ಸವಕ್ಕೂ 2 ಕೋಟಿ ರು ಅನುದಾನ ಬಿಡುಗಡೆಗೆ ಆದೇಶಿಸಿತ್ತು. ಆದರೆ ಇದುವರೆಗೂ ಬಿಡಿಗಾಸೂ ನೀಡಿಲ್ಲ.
ಆನೆಗೊಂದಿ ಉತ್ಸವ ಅಯೋಜನೆಗೆ ಆದೇಶವಾಗಿದ್ದ 4,82,30,500 ರು ಗಳನ್ನು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಿದೆ. ಈ ಮೊತ್ತವು ಹೆಚ್ಚುವರಿಯಾಗಿದ್ದರೂ ಸಹ ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಿದೆ. ಅದೇ ರೀತಿ ಶ್ರೀರಂಗಪಟ್ಟಣ ಉತ್ಸವಕ್ಕೆ 50 ಲಕ್ಷ, ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾಕ್ಕೆ 2.25 ಕೋಟಿ ಬಿಡುಗಡೆ ಮಾಡಿದೆ.

ತುಮಕೂರು ದಸರಾಕ್ಕೆ 1.50 ಕೋಟಿ, ದಸರಾ ವಸ್ತುಪ್ರದರ್ಶನಕ್ಕೆ 1,59,83,744 ರು., ಶಿವಮೊಗ್ಗ ದಸರಾಕ್ಕೆ 50 ಲಕ್ಷ, ಗಗನಚುಕ್ಕಿ ಜಲಪಾತೋತ್ಸವಕ್ಕೆ 1.25 ಕೋಟಿ, ಮೈಸೂರು ದಸರಾ ವಸ್ತು ಪ್ರದರ್ಶನಕ್ಕೆ 5,46,930 ರು., ಉಡುಪಿ ಉಚ್ಚಿಲ ದಸರಾಕ್ಕೆ 50 ಲಕ್ಷ ರು ಗಳನ್ನು ಬಿಡುಗಡೆ ಮಾಡಿರುವುದು ಸಚಿವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.
ಗ್ಯಾರಂಟಿ ಸಮಾವೇಶಗಳು ಮತ್ತು ಸರ್ಕಾರದ 2 ವರ್ಷದ ಸಾಧನೆ ಸಮಾವೇಶಗಳಿಗೆ ಅನುದಾನವು ಹಂಚಿಕೆಯಾಗದಿದ್ದರೂ ಸಹ ಬಹು ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿದೆ. ಆದರೆ ಸಾಂಸ್ಕೃತಿಕ ಉತ್ಸವಗಳಿಗೆ ಅನುದಾನಕ್ಕೆ ಆದೇಶವಾಗಿದ್ದರೂ ಸಹ ಅರ್ಧದಷ್ಟು ಮೊತ್ತವನ್ನೂ ಬಿಡುಗಡೆ ಮಾಡಿಲ್ಲ.
ಗೃಹಲಕ್ಷ್ಮಿ, ಶಕ್ತಿ, ಯುವನಿಧಿ, ಅನ್ನಭಾಗ್ಯ, ಗೃಹ ಜ್ಯೋತಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕಾಗಿ 2023-24ರಲ್ಲಿ ರಾಜ್ಯ ಸರ್ಕಾರವು ಬರೋಬ್ಬರಿ 30.92 ಕೋಟಿ ರುಪಾಯಿ ಒಟ್ಟು ಖರ್ಚು ಮಾಡಿತ್ತು . ಅಲ್ಲದೇ ಯೋಜನೆಗಳು ಅನುಷ್ಠಾನಗೊಂಡು ವರ್ಷ ಕಳೆಯುವರಷ್ಟರಲ್ಲಿ ಗ್ಯಾರಂಟಿ ಸಮಾವೇಶಗಳನ್ನೂ ಹಮ್ಮಿಕೊಂಡಿತ್ತು. ಸರ್ಕಾರಿ ಶಾಲೆ ಶೌಚಾಲಯಗಳ ದುರಸ್ತಿ, ನಿರ್ವಹಣೆಗೆ ಸೂಕ್ತ ಅನುದಾನ ಒದಗಿಸದ ಸರ್ಕಾರವು ಗ್ಯಾರಂಟಿ ಸಮಾವೇಶಗಳ ಹೆಸರಿನಲ್ಲಿ ಹತ್ತಾರು ಕೋಟಿ ರುಪಾಯಿಗಳನ್ನು ಖರ್ಚು ಮಾಡಿತ್ತು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತಿತರರು ನಿರ್ದೇಶಕರಾಗಿರುವ ಕಂಪನಿಯು ಪ್ರಕಾಶಿಸುತ್ತಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸೇರಿದಂತೆ ಕರ್ನಾಟಕದ ರಾಜ್ಯ, ಜಿಲ್ಲಾ, ಪ್ರಾದೇಶಿಕ ಪತ್ರಿಕೆಗಳು ಮತ್ತು ಟಿ ವಿ ವಾಹಿನಿಗಳಿಗೆ 2023-24, 2024-25 ಮತ್ತು 2025-26ರ ಜುಲೈವರೆಗೆ ನೀಡಿದ್ದ ಜಾಹೀರಾತು ಮತ್ತು ಪ್ರಚಾರ ಸಂಬಂಧ ಅಂದಾಜು 1,076.27 ಕೋಟಿ ರು ವೆಚ್ಚ ಮಾಡಿದೆ.
ಸರ್ಕಾರಿ ಶಾಲೆಗಳಿಗೆ ಶೌಚಾಲಯ, ಕಂಪ್ಯೂಟರ್ ಲ್ಯಾಬ್, ಡಿಜಿಟಲ್ ಲೈಬ್ರರಿ, ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಹೊಸದಾಗಿ ವಿದ್ಯಾರ್ಥಿ ನಿಲಯಗಳ ಆರಂಭ, ಗ್ರಂಥಾಲಯಗಳ ಮೇಲ್ವಿಚಾರಕರಿಗೆ ನಿಯಮಿತವಾಗಿ ವೇತನ ಮತ್ತು ಅನುದಾನ ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರವು, ತನ್ನ ಸಾಧನೆ, ಕಾರ್ಯಕ್ರಮಗಳನ್ನು ದಿನಪತ್ರಿಕೆ, ಟಿ ವಿ ವಾಹಿನಿಗಳಲ್ಲಿ ಪ್ರಚಾರ ಮಾಡಲು ಅಂದಾಜು 1,076.27 ಕೋಟಿಯಷ್ಟು ವೆಚ್ಚ ಮಾಡಿರುವುದು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ 2018-19ರಿಂದ 2022-23ರವರೆಗೆ ಜಾಹೀರಾತುಗಳಿಗೆ ಮಾಡಿದ್ದ ವೆಚ್ಚವನ್ನೂ ಕಾಂಗ್ರೆಸ್ ಸರ್ಕಾರವು ಮೀರಿಸಿತ್ತು.







