ಬೆಂಗಳೂರು; ಕೇಂದ್ರ ಸರ್ಕಾರವು ಜಾರಿಗೊಳಿಸಲಿರುವ ಜಿ ರಾಮ್ ಜೀ ಯೋಜನೆಯನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್ ಸರ್ಕಾರವು ನಾಳೆಯಿಂದ ವಿಶೇಷ ಅಧಿವೇಶನ ನಡೆಸುತ್ತಿರುವ ಬೆನ್ನಲ್ಲೇ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವು ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಈ ಕುರಿತು ವಿಶೇಷ ಗ್ರಾಮಸಭೆ ನಡೆಸಲು ಸೂಚಿಸಿದೆ.
ಈ ಕಾಯ್ದೆ ಬಗ್ಗೆ ವಿಶೇಷ ಗ್ರಾಮ ಸಭೆ ನಡೆಸಬೇಕು ಎಂದು ಕೇಂದ್ರ ಸರ್ಕಾರವು ಹೊರಡಿಸಿರುವ ಸೂಚನೆಯನ್ನು ರಾಜ್ಯ ಸರ್ಕಾರವು ತಲೆ ಅಲ್ಲಾಡಿಸಿದೆ. ಒಂದೆಡೆ ಈ ಯೋಜನೆಯನ್ನು ವಿರೋಧಿಸಿ ವಿಶೇಷ ಅಧಿವೇಶನ ನಡೆಸುತ್ತಿರುವುದು ಮತ್ತು ಇನ್ನೊಂದೆಡೆ ಈ ಯೋಜನೆ ಕುರಿತು ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ವಿಶೇಷ ಗ್ರಾಮ ಸಭೆ ನಡೆಸುತ್ತಿರುವುದು ವೈರುಧ್ಯಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
2026ರ ಜನವರಿ 26ರಂದು ವಿಶೇಷ ಗ್ರಾಮ ಸಭೆ ಆಯೋಜಿಸಲು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ನಿರ್ದೇಶಕರು ಸೂಚಿಸಿದ್ದಾರೆ. ಈ ಕುರಿತು 2026ರ ಜನವರಿ 14ರಂದೇ ಪತ್ರ ಬರೆದಿದ್ದಾರೆ.
ಈ ಪತ್ರವು ದಿ ಫೈಲ್ ಗೆ ಲಭ್ಯವಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಿಂಪಡೆದಿರುವ ಹಾಗೂ ಕೇಂದ್ರ ಸರ್ಕಾರವು ಹೊಸದಾಗಿ ಜಾರಿಗೆ ತಂದಿರುವ ವಿಕಸಿತ್ ಭಾರತ್ ಗ್ಯಾರಂಟಿ ಯೋಜಗಾರ್ ಮತ್ತ ಅಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಗಳ ಕುರಿತು ಸಮಗ್ರವಾಗಿ ಚರ್ಚಿಸಲು 2026ರ ಜನವರಿ 26ರಂದು ವಿಶೇಷ ಗ್ರಾಮ ಸಭೆ ಆಯೋಜಿಸಲು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ನಿರ್ದೇಶಕರು ಸೂಚಿಸಿರುವುದು ಪತ್ರದಿಂದ ಗೊತ್ತಾಗಿದೆ.
ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ವಿಶೇಷ ಗ್ರಾಮ ಸಭೆ ಆಯೋಜಿಸಲು ಆಯಕ್ತರು ಸೂಕ್ತ ನಿರ್ದೇಶನ ಕೋರಿದ್ದರು. ಅದರಂತೆ ಈ ವಿಷಯ ಕುರಿತು ಚರ್ಚಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಸೂಕ್ತ ನಿರ್ದೇಶನ ನೀಡಲು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿರುವುದು ಗೊತ್ತಾಗಿದೆ.

2025 ರ ವಿಬಿ-ಜಿ ರಾಮ್ ಜಿ ಕಾಯ್ದೆ ಬಡವರ ವಿರೋಧಿ, ರೈತ ವಿರೋಧಿ ಮತ್ತು ಸಂವಿಧಾನಬಾಹಿರ ಎಂದು ಹೇಳಿದ್ದಾರೆ. ವಿಕಸಿತ ಭಾರತ್ ಎಂದರೆ ಏನು ಎಂಬುದರ ಬಗ್ಗೆ ಯಾವುದೇ ವ್ಯಾಖ್ಯಾನವಿಲ್ಲ, ರಾಜ್ಯಗಳ ವೆಚ್ಚದಲ್ಲಿ ವ್ಯಾಪಕ ಅಧಿಕಾರಗಳನ್ನು ಕೇಂದ್ರಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಟೀಕಿಸಿದ್ದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ನವದೆಹಲಿಯ ಕರ್ನಾಟಕ ಭವನದಲ್ಲಿ ಕಳೆದ 20 ವರ್ಷಗಳಿಂದ ಮನರೇಗಾ ರಚನೆ, ಅನುಷ್ಠಾನ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕೆಲಸ ಮಾಡಿದ ಎಲ್ಲಾ ಸಂಬಂಧಿತ ಪಾಲುದಾರರು ಮತ್ತು ತಜ್ಞರೊಂದಿಗೆ ನಡೆಸಿದ ದುಂಡು ಮೇಜಿನ ಸಭೆ ನಡೆಸಿದ್ದರು.
2025 ರ ವಿಬಿ-ಜಿ ರಾಮ್ ಜಿ ಕಾಯ್ದೆ ಬಡವರ ವಿರೋಧಿ, ರೈತ ವಿರೋಧಿ ಮತ್ತು ಸಂವಿಧಾನಬಾಹಿರ ಎಂದು ಹೇಳಿದ್ದಾರೆ. ವಿಕಸಿತ ಭಾರತ್ ಎಂದರೆ ಏನು ಎಂಬುದರ ಬಗ್ಗೆ ಯಾವುದೇ ವ್ಯಾಖ್ಯಾನವಿಲ್ಲ, ಆದರೆ ಕಾರ್ಮಿಕರು, ಪಂಚಾಯತ್ಗಳು ಮತ್ತು ರಾಜ್ಯಗಳ ವೆಚ್ಚದಲ್ಲಿ ವ್ಯಾಪಕ ಅಧಿಕಾರಗಳನ್ನು ಕೇಂದ್ರಕ್ಕೆ ಹಸ್ತಾಂತರಿಸಲಾಗುತ್ತದೆ. ರಾಜಕೀಯವಾಗಿ, ಸಾಮಾಜಿಕವಾಗಿ, ಕಾನೂನುಬದ್ಧವಾಗಿ ಮತ್ತು ನೈತಿಕವಾಗಿ, ಇದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸಚಿವರು ಖಡಾಖಂಡಿತವಾಗಿ ಹೇಳಿದ್ದರು.

ಕಾನೂನನ್ನು ನೆಲದ ಮೇಲೆ ಸ್ಪಷ್ಟವಾಗಿ ವಿವರಿಸಲು, ತಪ್ಪು ಮಾಹಿತಿಯನ್ನು ಎದುರಿಸಲು ಮತ್ತು ಹೊಸ ಕಾಯ್ದೆಯು ಜೀವನೋಪಾಯವನ್ನು ಹೇಗೆ ದುರ್ಬಲಗೊಳಿಸುತ್ತದೆ ಎಂಬುದರ ಕುರಿತು ಸಾರ್ವಜನಿಕ ಜಾಗೃತಿ ಮೂಡಿಸಲು ಮತ್ತು ಹೊಸ ಶಾಸನದಿಂದ ಸಾಂವಿಧಾನಿಕ ಉಲ್ಲಂಘನೆಗಳನ್ನು ಪರಿಶೀಲಿಸಲು ದುಂಡುಮೇಜಿನ ಸಭೆಯು ನಿರ್ಧರಿಸಿದೆ ಎಂದು ಹೇಳಿದ್ದನ್ನು ಸ್ಮರಿಸಬಹುದು.

‘ ರಾಜ್ಯ ಸರಕಾರ , ಕೇಂದ್ರ ಸರ್ಕಾರ ತಂದಿರುವ ಜಿ ರಾಮ್ ಜಿಯನ್ನು ವಿರೋಧಿಸುತ್ತಿದೆ. ಇದರ ವಿರುದ್ಧ ಹೋರಾಟಕ್ಕೆ ಕೈಜೋಡಿಸಲು ನಮ್ಮನ್ನೆಲ್ಲಾ ಕರೆದಿದೆ! ಇನ್ನೊಂದೆಡೆ ‘ಕೇಂದ್ರ ಸರಕಾರ ಇದೇ 26ರಂದು ಜಿ ರಾಮ್ ಜಿ ಯ ಬಗ್ಗೆ ಅರಿವುಮೂಡಿಸಲು ವಿಷೇಶ ಗ್ರಾಮಸಭೆ ಕರೆಯಲು ಕಳಿಸಿರುವ ಹುಕುಂ ಸುತ್ತೋಲೆಗೆ ನಮ್ಮ ರಾಜ್ಯದ ಪಂಚಾಯತ್ ರಾಜ್ ಆಯುಕ್ತರು ಜೀಯಾ ಎಂದು ಹೇಳಿ ಈ ಸಂಬಂಧ ಸುತ್ತೋಲೆ ಕಳಿಸುತ್ತಾರೆ. ಎಂಥಾ ಅವಸ್ಥೆ ಇದು?! ಮುಖ್ಯ ಮಂತ್ರಿಯವರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಖರ್ಗೆಯವರ ಗಮನಕ್ಕೆ ಇದು ಬಂದಿಲ್ಲವೇ? ಈ ವೈರುಧ್ಯ ರಾಜ್ಯ ಸರಕಾರದ ನಡೆಗಳಲ್ಲಿ ಕಾಣುತ್ತಿದೆ,’ ಎನ್ನುತ್ತಾರೆ ಲೇಖಕ ಸುರೇಶ್ ಕಂಜರ್ಪಣೆ.
ಕಾಂಗ್ರೆಸ್ ಸರ್ಕಾರ ವಿಶೇಷ ಅಧಿವೇಶನ ಕರೆದು ಕೇಂದ್ರ ಸರ್ಕಾರ ಯೋಜನೆಗೆ ಅಡ್ಡಗಾಲು ಹಾಕಲು ಪ್ರಯತ್ನಿಸುತ್ತಿದೆ. ರಾಜ್ಯ ಸರ್ಕಾರಕ್ಕೆ ಅಧಿವೇಶನ ನಡೆಸುವ ಅಗತ್ಯವಿರಲಿಲ್ಲ. ನೇರವಾಗಿ ಸಚಿವರು ಅಥವಾ ಪ್ರಧಾನಿ ಅವರನ್ನು ಭೇಟಿ ಮಾಡಬಹುದಿತ್ತು. ಈ ನಿರ್ಣಯದಿಂದ ಮಾಧ್ಯಮಗಳಿಗೆ ಸಂದೇಶ ನೀಡಬಹುದೇ ಹೊರತು ಆಡಳಿತಾತ್ಮಕವಾಗಿ ಪ್ರಯೋಜನವಾಗುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ವಿಶೇಷ ಅಧಿವೇಶನ ಕರೆದು ಕೇಂದ್ರ ಸರ್ಕಾರದ ಯೋಜನೆಗೆ ಅಡ್ಡಗಾಲು ಹಾಕಲು ಪ್ರಯತ್ನ ಮಾಡಿದೆ. ವಿಬಿ ಜಿ ರಾಮ್ ಜಿ ಯೋಜನೆಯ ವಿರುದ್ಧ ನಿರ್ಣಯ ಕೈಗೊಂಡು ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಇದರಿಂದ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ.
ವಿಬಿ ರಾಮ್ ಜೀ ಯೋಜನೆ ಕುರಿತು ತಿಳಿಯಲು ಹಾಗೂ ಅರಿವು ಮೂಡಿಸಲು ಎಲ್ಲ ಶಾಸಕರು, ಮುಖಂಡರ ಜೊತೆ ಸಭೆ ನಡೆಯಲಿದೆ. ಈ ಬಗ್ಗೆ ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆಯಲಾಗಿದೆ. ಯೋಜನೆ ಕುರಿತು ಅರಿವು ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ. ಹಾಗೆಯೇ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರೂ ಬರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಯೋಜನೆಯ ಬಗ್ಗೆ ವಿವರಿಸಲಾಗುತ್ತದೆ. ಅಧಿವೇಶನಕ್ಕೂ ಮೊದಲು ಕಾರ್ಯಕ್ರಮ ನಡೆಸಿ ಯೋಜನೆ ಬಗ್ಗೆ ಜನರಿಗೆ ತಿಳಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಮಾಹಿತಿ ನೀಡಿದ್ದಾರೆ.
ಜಿ ರಾಮ್ ಜಿ ಯೋಜನೆ ಬಗ್ಗೆ ಕಾಂಗ್ರೆಸ್ ಪಕ್ಷ ಸುಳ್ಳಿನ ಸಂಕಥನ ಸೃಷ್ಟಿ ಮಾಡುತ್ತಿದ್ದು, ಆ ಸುಳ್ಳನ್ನು ಎದುರಿಸಲು ನಾವು ದಾಖಲೆ ಸಮೇತ ಬಹಿರಂಗ ಚರ್ಚೆಗೆ ತಯಾರಿದ್ದೇವೆ. ಇವರು ಟೀಕೆ ಮಾಡಿದರು ಎಂದು ನಾವು ಹೆದರಿ ಓಡಿ ಹೋಗುವುದಿಲ್ಲ. ಅವರ ಪರಿಕಲ್ಪನೆಯಂತೆ ಸುಧಾರಣೆಗೊಂಡಿರುವ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)’ ಯೋಜನೆ ಬಗ್ಗೆ ಕಾಂಗ್ರೆಸ್ ಹರಡುತ್ತಿರುವ ಸುಳ್ಳುಗಳನ್ನು ಜನರು ನಂಬುವುದಿಲ್ಲ.
ಜಿ ರಾಮ್ ಜಿ ಯೋಜನೆಯಿಂದ ಗ್ರಾಮ ಪಂಚಾಯ್ತಿಗಳ ಅಧಿಕಾರಕ್ಕೆ ಆಗಲಿ ಅಥವಾ ರಾಜ್ಯ ಸರ್ಕಾರಗಳ ಅಧಿಕಾರಕ್ಕೆ ಆಗಲಿ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದನ್ನು ಸ್ಮರಿಸಬಹುದು.









