ಕುರುಬರ ಸಂಘಕ್ಕೆ ನಿವೇಶನ; ಉಚಿತ ಮಂಜೂರಾತಿ ಪ್ರಸ್ತಾವದಿಂದ ಹಿಂದೆ ಸರಿದ ಸರ್ಕಾರ

ಬೆಂಗಳೂರು;  ಕೋಲಾರದ ಕುರುಬರ ಸಂಘಕ್ಕೆ ಉಚಿತವಾಗಿ ಸಿ ಎ ನಿವೇಶನವನ್ನು ಮಂಜೂರು ಮಾಡುವ ಪ್ರಸ್ತಾವನೆಯಿಂದ ಹಿಂದೆ ಸರಿದಿರುವ ಸರ್ಕಾರವು ಇದೀಗ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ಮುಂದಾಗಿದೆ.

 

ಯಾವುದೇ ಇಲಾಖೆ, ಸಂಸ್ಥೆಗೆ ಉಚಿತವಾಗಿ ಸಿ ಎ ನಿವೇಶನವನ್ನು  ಮಂಜೂರು ಮಾಡಲು ಅವಕಾಶವಿರಲಿಲ್ಲ. ಆದರೂ ಸಚಿವ ಬೈರತಿ ಸುರೇಶ್‌ ಅವರ ಒತ್ತಡಕ್ಕೆ ಮಣಿದಿದ್ದ ಅಧಿಕಾರಿಗಳು 2024ರಲ್ಲೇ, ಉಚಿತವಾಗಿ ಸಿಎ ನೀವೇಶನ ನೀಡುವ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಸಲ್ಲಿಸಿದ್ದರು. ಆದರೀಗ ಒಂದು ವರ್ಷದ ಬಳಿಕ ಇದೇ ಕುರುಬರ ಸಂಘಕ್ಕೆ ನಿವೇಶನವನ್ನು ಗುತ್ತಿಗೆ ಆಧಾರದ ಮೇರೆಗೆ ಮಂಜೂರಾತಿಗೆ ಸಚಿವ ಸಂಪುಟದ ಅನುಮೋದನೆ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ.

 

ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆ ಕಾರ್ಯಸೂಚಿಯಲ್ಲಿ  ಈ ಪ್ರಸ್ತಾವವೂ ಇದೆ.  ನಗರಾಭಿವೃದ್ದಿ ಇಲಾಖೆಯು ಮಂಡಿಸಿರುವ ಸಚಿವ ಸಂಪುಟದ ಪ್ರಸ್ತಾವದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

Kurubara Sangha
ಸಚಿವ ಸಂಪುಟದ ಕಾರ್ಯಸೂಚಿಯ ಪ್ರತಿ

 

ಜಿಲ್ಲಾ ಕುರುಬರ ಸಂಘದ ಉದ್ದೇಶಿತ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿತ್ತು. ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರವು ಕಾಳಸ್ತಿಪುರದಲ್ಲಿ ಅಭಿವೃದ್ಧಿಪಡಿಸಿರುವ ಬಡಾವಣೆಯಲ್ಲಿ 4,017.37 ಚ ಮೀ ವಿಸ್ತೀರ್ಣದ ನಾಗರೀಕ ಸೌಲಭ್ಯ ನಿವೇಶನವನ್ನು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ನಗರಾಭಿವೃದ್ದಿ ಇಲಾಖೆಯು ಪ್ರಸ್ತಾವ ಸಲ್ಲಿಸಿರುವುದು ಸಚಿವ ಸಂಪುಟದ ಕಾರ್ಯಸೂಚಿಯಿಂದ ತಿಳಿದು ಬಂದಿದೆ.

 

ಕೋಲಾರ ಜಿಲ್ಲೆಯ ಕುರುಬರ ಸಂಘಕ್ಕೆ ಸಿ ಎ ನಿವೇಶನವನ್ನು ಉಚಿತವಾಗಿ ಮಂಜೂರು ಮಾಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ  ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಿತ್ತು.  ಉಚಿತವಾಗಿ ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿರದಿದ್ದರೂ ಸಹ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರು ಸಚಿವ ಸಂಪುಟಕ್ಕೆ ಪ್ರಸ್ತಾವನೆ ಮಂಡಿಸಿ ಎಂದು ಆದೇಶಿಸಿದ್ದರು.

 

ಕಲ್ಬುರ್ಗಿಯ ಸರ್ಕಾರಿ ಮಹಾವಿದ್ಯಾಲಯದ 3 ಎಕರೆ 7 ಗುಂಟೆ ಜಮೀನನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ಕಲ್ಬುರ್ಗಿ ಶಾಖೆಗೆ ಮಂಜೂರು ಮಾಡಲು ಸರ್ಕಾರದ ತೀರ್ಮಾನ ಹೊರಬಿದ್ದಿದ್ದ  ಬೆನ್ನಲ್ಲೇ ಕೋಲಾರ ಜಿಲ್ಲೆಯ ಕುರುಬರ ಸಂಘಕ್ಕೂ ಸಿಎ ನಿವೇಶನವನ್ನು ಉಚಿತವಾಗಿ ಮಂಜೂರು ಮಾಡುವ ಪ್ರಸ್ತಾವನೆಯು ಚರ್ಚೆಗೆ ಗ್ರಾಸವಾಗಿತ್ತು.

 

ಉಚಿತ ಮಂಜೂರಾತಿಯಿಂದ ನಷ್ಟ

 

ವಿಶೇಷವೆಂದರೇ ನಗರಾಭಿವೃದ್ಧಿ ಇಲಾಖೆಯ ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ವಿರೋಧ ವ್ಯಕ್ತಪಡಿಸಿದೆ. ಉಚಿತವಾಗಿ ನಿವೇಶನ ಮಂಜೂರು ಮಾಡಿದಲ್ಲಿ ಪ್ರಾಧಿಕಾರಕ್ಕೆ ಆರ್ಥಿಕವಾಗಿ ತುಂಬಾ ನಷ್ಟವುಂಟಾಗುತ್ತದೆ ಎಂದು ಸ್ಪಷ್ಟ ಅಭಿಪ್ರಾಯ ನೀಡಿದ್ದರೂ ಸಹ ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿತ್ತು.

 

ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿನ ನಾಗರಿಕ ಸೌಲಭ್ಯ ನಿವೇಶನವನ್ನು ಕೋಲಾರ ಕುರುಬರ ಸಂಘದ ಉದ್ದೇಶಿತ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ ಉಚಿತವಾಗಿ ಮಂಜೂರು ಮಾಡಲು ಕುರುಬರ ಸಂಘವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು. ಈ ಬಗ್ಗೆ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಜಿಲ್ಲಾಧಿಕಾರಿಯು ಸೂಕ್ತ ಕ್ರಮಕ್ಕಾಗಿ ಸೂಚಿಸಿದ್ದರು.

 

ಆದರೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರಿಕ ಸೌಲಭ್ಯ ನವಿಏಶನಗಳ ಹಂಚಿಕೆ) ನಿಯಮ 1991ರ ನಿಯಮ 7(1)(2) ಮತ್ತು (3)ರ ಅನ್ವಯ ಸಂಘ ಸಂಸ್ಥೆಗಳಿಗೆ ನಾಗರೀಕ ಸೌಲಭ್ಯ ನಿವೇಶನಗಳನ್ನು ಮಂಜೂರು ಮಾಡಲು ಕೆಲವು ಮಾನದಂಡಗಳಿವೆ. ಆದರೆ ಯಾವುದೇ ಇಲಾಖೆ, ಸಂಸ್ಥೆಗೆ ಉಚಿತವಾಗಿ ನಿವೇಶನ ಮಂಜೂರು ಮಾಡಲು ಅವಕಾಶ ಕಲ್ಪಿಸಿರುವುದಿಲ್ಲ.

 

ಕುರುಬರ ಸಂಘಕ್ಕೆ ಉಚಿತವಾಗಿ ಸಿಎ ನಿವೇಶನ; ಬೊಕ್ಕಸಕ್ಕೆ ನಷ್ಟವೆಂದಿದ್ದರೂ ಪ್ರಸ್ತಾವನೆ ಸಲ್ಲಿಕೆ

 

ಹಾಗಾಗಿ ಜಿಲ್ಲಾಧಿಕಾರಿಯ ಸೂಚನೆಯಂತೆ ಈ ಸಂಸ್ಥೆಗೆ ಉಚಿತವಾಗಿ ನಾಗರೀಕ ಸೌಲಭ್ಯ ನಿವೇಶನ ಮಂಜೂರು ಮಾಡುವ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.

 

ಸಚಿವರ ಒತ್ತಡಕ್ಕೆ ಮಣಿದಿದ್ದರೇ ಕಾರ್ಯದರ್ಶಿ ?

 

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆ) ನಿಯಮಗಳು 1991ರ ನಿಯಮ 8(1)ರಲ್ಲಿ ನಾಗರಿಕ ಸೌಲಭ್ಯ ನಿವೇಶನಗಳ ಗುತ್ತಿಗೆ ಹಣವನ್ನು ನಿಗದಿಪಡಿಸಲು ಅವಕಾಶ ಕಲ್ಪಿಸಿದೆ. ಪ್ರಸ್ತಾಪಿತ ನಿವೇಶನಕ್ಕೆ ದರವನ್ನೂ ನಿಗದಿಪಡಿಸಿದೆ ಆದರೆ ಪ್ರಸ್ತಾಪಿತ ನಿವೇಶನವನ್ನು ಉಚಿತವಾಗಿ ನೀಡಲು ನಿಯಮಗಳಲ್ಲಿ ಅವಕಾಶ ಇರುವುದಿಲ್ಲ. ಆದರೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರು ಈ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಮಂಡಿಸಿ ಎಂದು ಆದೇಶಿಸಲು ಒತ್ತಡ ಹೇರಿದ್ದರು. ಹೀಗಾಗಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು  ಈ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ  ಮಂಡಿಸಿದ್ದರು.

 

ಪ್ರಾಧಿಕಾರಕ್ಕೆ ನಷ್ಟವೆಂದಿದ್ದ ಆರ್ಥಿಕ ಇಲಾಖೆ

 

ಕೋಲಾರ ಕುರುಬರ ಸಂಘದ ಉದ್ದೇಶಿತ ವಿದ್ಯಾರ್ಥಿ ನಿಲಯಕ್ಕೆ ಉಚಿತವಾಗಿ ಸಿ ಎ ನಿವೇಶನವನ್ನು ಮಂಜೂರು ಮಾಡಲು ಆರ್ಥಿಕ ಇಲಾಖೆಯು ತಕರಾರು ಎತ್ತಿದೆ. ‘ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಪ್ರಾಧಿಕಾರದ ವತಿಯಿಂದ ಯಾವುದೇ ಅನುದಾನ ನೀಡಿರುವುದಿಲ್ಲ. ಪ್ರಾಧಿಕಾರಗಳು ಸ್ವ-ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಕಾರ್ಯನಿರ್ವಹಿಸುತ್ತವೆ.

 

ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ನಾಗರೀಕ ನಿವೇಶನವನ್ನು ಕುರುಬ ಸಮುದಾಯದ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ ಉಚಿತವಾಗಿ ಮಂಜೂರು ಮಾಡಿದಲ್ಲಿ ಪ್ರಾಧಿಕಾರಕ್ಕೆ ಆರ್ಥಿಕವಾಗಿ ತುಂಬಾ ನಷ್ಟವಾಗುತ್ತದೆ,’ ಎಂದು ಆರ್ಥಿಕ ಇಲಾಖೆಯು ತನ್ನ ಅಭಿಪ್ರಾಯ ನೀಡಿತ್ತು.

 

ರಾಷ್ಟ್ರೋತ್ಥಾನ ಪರಿಷತ್‌, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್‌’ನ 13 ವರದಿಗಳು

ಆದರೂ ಸಚಿವ ಬೈರತಿ ಸುರೇಶ್‌ ಅವರು ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸಲು ಅನುಮೋದಿಸಿದ್ದರು.

 

ಎರಡು ಆಯ್ಕೆ ನೀಡಿದ್ದ ಇಲಾಖೆ

 

ಕೋಲಾರ ಜಿಲ್ಲಾ ಕುರುಬರ ಸಂಘದ ಉದ್ದೇಶಿತ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ನಾಗರಿಕ ನಿವೇಶನವನ್ನು ಉಚಿತವಾಗಿ ಮಂಜೂರು ಮಾಡಲು ಕರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರಗಳ (ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆ) ನಿಯಮಗಳು 1991ರ ಅನ್ವಯ ಅವಕಾಶವಿರುವುದಿಲ್ಲ. ಹೀಗಾಗಿ ಪ್ರಸ್ತಾವನೆ ತಿರಸ್ಕರಿಸಬೇಕು ಎಂದು ಮೊದಲ ಆಯ್ಕೆ ನೀಡಿತ್ತು.

 

ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಾಗರಿಕ ಸೌಲಭ್ಯ ನಿವೇಶನವನ್ನು ಕುರುಬ ಸಮುದಾಯದ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ ಜಿಲ್ಲಾ ಕುರುಬರ ಸಂಘಕ್ಕೆ ಉಚಿತವಾಗಿ ಮಂಜೂರು ಮಾಡಲು ಸೂಕ್ತ ನಿರ್ಣಯ ಕೈಗೊಳ್ಳಬಹುದು ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ದೀಪ ಚೋಳನ್‌ ಅವರು ಎರಡು ಆಯ್ಕೆ ನೀಡಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts