ಬೆಂಗಳೂರು; ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್ಸಿಬಿ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಹ್ವಾನಿಸಿದ್ದರು ಎಂದು ರಾಜಭವನ ಮೂಲಗಳನ್ನಾಧರಿಸಿ ಇಂಡಿಯಾ ಟುಡೆ ಜಾಲತಾಣವು ವರದಿ ಪ್ರಕಟಿಸಿದೆ.
ಆರ್ಸಿಬಿ ಸಂಭ್ರಮಾಚರಣೆಗೆ ರಾಜ್ಯಪಾಲರನ್ನು ಆಹ್ವಾನಿಸಿದ್ದು ಯಾರು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಮಾಧ್ಯಮಗಳು ಪ್ರಶ್ನಿಸಿದ್ದವು. ಆಗ ಡಿ ಕೆ ಶಿವಕುಮಾರ್ ಅವರು ರಾಜ್ಯಪಾಲರನ್ನೇ ಈ ಬಗ್ಗೆ ಕೇಳಿ ಎಂದು ಉತ್ತರಿಸಿ ಜಾರಿಕೊಂಡಿದ್ದರು.
ಇದೀಗ ಇಂಡಿಯಾ ಟುಡೆಯು ರಾಜಭವನ ಮೂಲಗಳನ್ನಾಧರಿಸಿ ಪ್ರಕಟಿಸಿರುವ ವರದಿಯಲ್ಲಿ ರಾಜ್ಯಪಾಲರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆರ್ಸಿಬಿ ಸಂಭ್ರಮಾಚರಣೆಗೆ ಅಧಿಕೃತವಾಗಿ ಆಹ್ವಾನಿಸಿದ್ದರು ಎಂದು ಹೇಳಲಾಗಿದೆ.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆಯೋಜಿತವಾಗಿದ್ದ ಆರ್ಸಿಬಿ ಸಂಭ್ರಮಾಚರಣೆಯಲ್ಲಿ ರಾಜ್ಯಪಾಲರು ಭಾಗವಹಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ರಾಜ್ಯಪಾಲರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದು ಆಹ್ವಾನಿಸಿದ್ದರು ಎಂಬ ಸಂಗತಿಯು ಈ ಪ್ರಕರಣವನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸಿದೆ.
ಆರ್ಸಿಬಿ ಆಟಗಾರರನ್ನು ಅಭಿನಂದಿಸಲು ರಾಜಭವನಕ್ಕೆ ಆಹ್ವಾನಿಸಲು ಯೋಜಿಸಿದ್ದರು. ಆದರೆ ರಾಜ್ಯ ಸರ್ಕಾರವು ವಿಧಾನಸೌಧದಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದು ಅವರಿಗೆ ತಿಳಿಸಿತು ಎಂದು ರಾಜಭವನದ ಮೂಲಗಳು ಇಂಡಿಯಾ ಟುಡೇಗೆ ಪ್ರತ್ಯೇಕವಾಗಿ ತಿಳಿಸಿವೆ ಎಂದು ವರದಿಯಿಂದ ಗೊತ್ತಾಗಿದೆ.
ಮುಖ್ಯಮಂತ್ರಿಗಳು ವಿಧಾನಸೌಧ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯಪಾಲರನ್ನು ಅಧಿಕೃತವಾಗಿ ಆಹ್ವಾನಿಸಿದ್ದಾರೆ ಎಂದು ರಾಜಭವನದ ಮೂಲಗಳು ಬಹಿರಂಗಪಡಿಸಿವೆ ಎಂದು ಇಂಡಿಯಾ ಟುಡೆಯು ಉಲ್ಲೇಖಿಸಿದೆ.
ಈ ಸನ್ಮಾನ ಸಮಾರಂಭವು ಸರ್ಕಾರಿ ಕಾರ್ಯಕ್ರಮವಲ್ಲ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ರಾಜ್ಯಪಾಲರನ್ನು ಆಹ್ವಾನಿಸಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದರು. ಆದರೀಗ ರಾಜಭವನ ಮೂಲಗಳು ಇಂಡಿಯಾ ಟುಡೆಗೆ ತಿಳಿಸಿರುವ ಪ್ರಕಾರ ರಾಜ್ಯಪಾಲರನ್ನು ಮುಖ್ಯಮಂತ್ರಿಯೇ ಆಹ್ವಾನಿಸಿದ್ದರು. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದಿನ ಹೇಳಿಕೆಗೆ ವಿರುದ್ಧವಾಗಿದೆ.
ಕಾರ್ಯಕ್ರಮ ನಡೆಸುವ ಬಗ್ಗೆ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯು ಮುಖ್ಯಮಂತ್ರಿಯೊಂದಿಗೆ ಮುಖ್ಯ ಕಾರ್ಯದರ್ಶಿಯು ಚರ್ಚಿಸಿದ್ದರು. ಪೊಲೀಸರು ಸಹ ಕಾರ್ಯಕ್ರಮ ಆಯೋಜಿಸಲು ಒಪ್ಪಿದ್ದರು. ನಾನು ಹಸಿರು ನಿಶಾನೆ ತೋರಿದೆ. ಅದಾದ ನಂತರ ಕೆಎಸ್ಸಿಎಯ ಖಜಾಂಚಿ ಮತ್ತು ಕಾರ್ಯದರ್ಶಿ ನನ್ನನ್ನು ಭಾಗವಹಿಸಲು ಆಹ್ವಾನಿಸಿದ್ದರು. ಅಲ್ಲಿ ನಡೆದ ಕಾರ್ಯಕ್ರಮವನ್ನು ಸರ್ಕಾರವು ಆಯೋಜಿಸಿರಲಿಲ್ಲ. ಅದು ಅವರ ಕಾರ್ಯಕ್ರಮವಾಗಿತ್ತು. ಮತ್ತು ಅವರೂ ಸಹ ರಾಜ್ಯಪಾಲರನ್ನು ಆಹ್ವಾನಿಸಿದ್ದರು. ಆದ್ದರಿಂದ ನಾನೂ ಭಾಗವಹಿಸಿದ್ದೆ. ಅದನ್ನು ಮೀರಿ ಇದರಲ್ಲಿ ನನ್ನ ಯಾವುದೇ ಪಾತ್ರವಿಲ್ಲ ಎಂದು ಸಿದ್ದರಾಮಯ್ಯ ಅವರು ಭಾನುವಾರವಷ್ಟೇ ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.
ಈ ಪ್ರಕರಣದಲ್ಲಿ ರಾಜಕೀಯ ಬೆರೆಸಲಾಗಿದೆ. ನಾನು ಪೊಲೀಸರಿಗೆ ಬೆದರಿಕೆ ಹಾಕಿದ್ದೇನೆ ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ಸುಳ್ಳು ಹೇಳುತ್ತಿದ್ದಾರೆ. ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಮತ್ತು ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇವೆ. ಹೀಗಾಗಿ ಸರ್ಕಾರ ಇದರಲ್ಲಿ ತಪ್ಪು ಮಾಡಿದೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದರು.