2 ವರ್ಷಗಳಲ್ಲಿ 1,886 ರೈತರ ಆತ್ಮಹತ್ಯೆ; ಹಾವೇರಿ ಜಿಲ್ಲೆಯಲ್ಲಿ ಅತೀ ಹೆಚ್ಚು ದಾಖಲು

ಬೆಂಗಳೂರು; ರಾಜ್ಯದಲ್ಲಿ ರೈತರ ಅತ್ಮಹತ್ಯೆ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ 2 ವರ್ಷಗಳಲ್ಲಿ ಒಟ್ಟಾರೆ 1,886  ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ 2025ರ ಮೇ 30ರಂದು ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನದಲ್ಲಿ ಕಂದಾಯ ಇಲಾಖೆಯು ರೈತರ ಆತ್ಮಹತ್ಯೆ ಪ್ರಕರಣಗಳ ಅಂಕಿ ಸಂಖ್ಯೆಗಳನ್ನು ಒದಗಿಸಿದೆ.

 

ಇದರ ಸಂಪೂರ್ಣ ಮಾಹಿತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

2023-24ರಲ್ಲಿ 1,082 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪೈಕಿ 1,061 ಅರ್ಹ ಪ್ರಕರಣಗಳಾಗಿದ್ದವು.  2024ರ ಏಪ್ರಿಲ್‌ 1ರಿಂದ 2025ರ ಮೇ 27ರವರೆಗೆ ಒಟ್ಟಾರೆ 981 ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ 825 ಪ್ರಕರಣಗಳನ್ನು ಮಾತ್ರ ಅರ್ಹ ಪ್ರಕರಣಗಳು ಎಂದು ಕಂದಾಯ ಇಲಾಖೆಯು ಹೇಳಿದೆ. 138 ಪ್ರಕರಣಗಳನ್ನು ತಿರಸ್ಕೃತಗೊಳಿಸಿರುವುದು ಗೊತ್ತಾಗಿದೆ.

 

ಈ ಎರಡೂ ವರ್ಷಗಳಲ್ಲೂ ಹಾವೇರಿ ಜಿಲ್ಲೆಯಲ್ಲಿಯೇ ಅತ್ಯಧಿಕ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. 2022-23ರಲ್ಲಿ 104, 2023-24ರಲ್ಲಿ 104, 2024ರ ಏಪ್ರಿಲ್‌ 1ರಿಂದ 2025ರ ಮೇ 27ರವರೆಗೆ ಹಾವೇರಿ ಜಿಲ್ಲೆಯೊಂದರಲ್ಲೇ 128 ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ 111 ಪ್ರಕರಣಗಳನ್ನು ಅರ್ಹ ಪ್ರಕರಣಗಳು ಎಂದು ಕಂದಾಯ ಇಲಾಖೆಯು ಹೇಳಿದೆ.

 

ರಾಜ್ಯದ 31 ಜಿಲ್ಲೆಗಳಲ್ಲಿ 825 ಅರ್ಹ ಪ್ರಕರಣಗಳಲ್ಲಿ 807 ಪ್ರಕರಣಗಳಲ್ಲಿ ಪರಿಹಾರ ಪಾವತಿಸಲಾಗಿದೆ. ಜಿಲ್ಲಾ ಹಂತದಲ್ಲಿ 18 ಪ್ರಕರಣಗಳು, ಪರಿಹಾರ ಪಾವತಿಸಲು ಬಾಕಿ ಇರುವುದು ತಿಳಿದು ಬಂದಿದೆ.

 

ಜಿಲ್ಲಾವಾರು ಪಟ್ಟಿ (2024ರ ಏಪ್ರಿಲ್‌ 1ರಿಂದ 2025ರ ಮೇ 27ರವರೆಗೆ)

 

ಕಲ್ಬುರ್ಗಿಯಲ್ಲಿ 64, ಮೈಸೂರು ಜಿಲ್ಲೆಯಲ್ಲಿ 61, ಧಾರವಾಡದಲ್ಲಿ 51, ಬೆಳಗಾವಿಯಲ್ಲಿ 57, ಹಾಸನದಲ್ಲಿ 41, ಬೀದರ್‍‌ನಲ್ಲಿ 45, ಶಿವಮೊಗ್ಗದಲ್ಲಿ 40, ಗದಗ್‌ನಲ್ಲಿ 27, ಯಾದಗಿರಿಯಲ್ಲಿ 37, ದಾವಣಗೆರೆಯಲ್ಲಿ 36, ಚಿಕ್ಕಮಗಳೂರಿನಲ್ಲಿ 29, ಮಂಡ್ಯದಲ್ಲಿ 38, ಬಾಗಲಕೋಟೆಯಲ್ಲಿ 34, ಚಿತ್ರದುರ್ಗದಲ್ಲಿ 30, ರಾಯಚೂರಿನಲ್ಲಿ 18, ಕೊಪ್ಪಳದಲ್ಲಿ 15, ವಿಜಯಪುರದಲ್ಲಿ 20, ತುಮಕೂರಿನಲ್ಲಿ 14, ವಿಜಯನಗರದಲ್ಲಿ 15, ಉತ್ತರಕನ್ನಡದಲ್ಲಿ 8, ದಕ್ಷಿಣ ಕನ್ನಡದಲ್ಲಿ 4, ಕೊಡಗಿನಲ್ಲಿ 5, ಚಾಮರಾಜನಗರದಲ್ಲಿ 2, ರಾಮನಗರದಲ್ಲಿ 1, ಚಿಕ್ಕಬಳ್ಳಾಪುರ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಉಡುಪಿಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿಲ್ಲ.

 

 

2023ರಲ್ಲಿ 1,609 ರೈತರು ಆತ್ಮಹತ್ಯೆಗೆ ಶರಣಾಗಿದ್ದರು. 2023- 24 ಹಾಗೂ 2024-25 ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಹುತೇಕ ರೈತರ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ.

 

2022-23ರಲ್ಲಿ 922 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ 2022-23ರಲ್ಲಿ 72, 2023-24ರಲ್ಲಿ 67, 2024-25ರಲ್ಲಿ 27 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದರು.

ಕಳೆದ 2 ವರ್ಷದಲ್ಲಿ 2,329 ರೈತರ ಆತ್ಮಹತ್ಯೆ; ಹಾವೇರಿ, ಮೈಸೂರು, ಕಲ್ಬುರ್ಗಿ, ಬೆಳಗಾವಿಯಲ್ಲಿ ಹೆಚ್ಚು

 

ಕಲಬುರಗಿಯಲ್ಲಿ 2022-23ರಲ್ಲಿ 55, 2023-24ರಲ್ಲಿ 65, 2024-25ರಲ್ಲಿ 19, ಬೆಳಗಾವಿ ಯಲ್ಲಿ 2022-23ರಲ್ಲಿ 75, 2023-24ರಲ್ಲಿ 94, 2024-25ರಲ್ಲಿ 32, ಯಾದಗಿರಿಯಲ್ಲಿ 2022-23ರಲ್ಲಿ 50, 2023-24ರಲ್ಲಿ 65, 2024-25ರಲ್ಲಿ 20, ಧಾರವಾಡದಲ್ಲಿ 2022-23ರಲ್ಲಿ 63, 2023-24ರಲ್ಲಿ 76, 2024-25ರಲ್ಲಿ 9, ಶಿವಮೊಗ್ಗದಲ್ಲಿ 2022-23ರಲ್ಲಿ 43, 2023-24ರಲ್ಲಿ 50, 2024-25ರಲ್ಲಿ 32 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸದನಕ್ಕೆ ಅಂಕಿ ಅಂಶಗಳನ್ನು ಒದಗಿಸಿದ್ದನ್ನು ಸ್ಮರಿಸಬಹುದು.

 

ರಾಜ್ಯಸಭೆ ಸದಸ್ಯ ಅನಿಲ್ ದೇಸಾಯಿ ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಕೇಂದ್ರ ಸರಕಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು 2023ರ ಫೆ.10ರಂದು ಅಂಕಿ ಅಂಶಗಳನ್ನು ಒದಗಿಸಿದೆ

 

ಕೌಟುಂಬಿಕ ಕಾರಣ, ಅನಾರೋಗ್ಯ, ಮಾದಕ, ಕುಡಿತ, ವೈವಾಹಿಕ, ಪ್ರೇಮ ಪ್ರಕರಣ, ದಿವಾಳಿ, ನಿರುದ್ಯೋಗ, ಪರೀಕ್ಷೆಯಲ್ಲಿ ಅನುತ್ತೀರ್ಣ, ಬಡತನ ಮತ್ತು ವೃತ್ತಿಯಲ್ಲಿ ಏರಿಳಿತಗಳು ರೈತರ ಆತ್ಮಹತ್ಯೆಗೆ ಕಾರಣ ಎಂದು ಎಡಿಎಸ್‌ಐ ವರದಿಯನ್ನಾಧರಿಸಿ ಕೇಂದ್ರ ಕೃಷಿ ಸಚಿವಾಲಯವು ಅಂಕಿ ಅಂಶಗಳನ್ನು ರಾಜ್ಯಸಭೆಗೆ ಮಂಡಿಸಿತ್ತು.

 

ರೈತರ ಆದಾಯ ಬೆಂಬಲಿಸಲು ಪಿಎಂ ಕಿಸಾನ್ ಯೋಜನೆಯ ಅನ್ವಯ ಪ್ರತೀ ರೈತನಿಗೆ ಪ್ರತೀ ವರ್ಷ 6,000 ರೂ.ನಂತೆ ಒಟ್ಟು ಮೂರು ಕಂತುಗಳಲ್ಲಿ ನೀಡಲಾಗಿತ್ತು. ದೇಶದ ಒಟ್ಟು 11 ಕೋಟಿ ರೈತರಿಗೆ 2.24 ಲಕ್ಷ ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿತ್ತು.

 

ಪಿಎಂ ಕಿಸಾನ್‌ ಜಾರಿಗೊಂಡ ನಂತರವೂ ದೇಶದಲ್ಲಿ 16,854, ಕರ್ನಾಟಕದಲ್ಲಿ 3,573 ರೈತರ ಆತ್ಮಹತ್ಯೆ

 

ರಾಜ್ಯಸಭೆಯಲ್ಲಿ ಮಂಡಿಸಿದ್ದ ಉತ್ತರದ ಪ್ರಕಾರ ಕರ್ನಾಟಕದಲ್ಲಿ 2019ರಲ್ಲಿ 1,331, 2020ರಲ್ಲಿ 1,072, 2021ರಲ್ಲಿ 1,170 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಕರ್ನಾಟಕ ಸರಕಾರದ ಕೃಷಿ ಇಲಾಖೆಯು ರಾಜ್ಯಸಭೆಗೆ ನೀಡಿರುವ ಉತ್ತರದ ಪ್ರಕಾರ 2019-20ರಲ್ಲಿ 1,091, 2020-21ರಲ್ಲಿ 855, 2021-22ರಲ್ಲಿ 915 ರೈತರು ಸೇರಿದಂತೆ ಒಟ್ಟಾರೆ 2,861 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಕೇಂದ್ರ ಕೃಷಿ ಇಲಾಖೆಯು 2019, 2020 ಮತ್ತು 2021ರ ಅಂಕಿ ಅಂಶಗಳನ್ನಷ್ಟೇ ರಾಜ್ಯಸಭೆಗೆ ನೀಡಿದೆ. ಕರ್ನಾಟಕದ ಕೃಷಿ ಇಲಾಖೆಯು 2019-20, 2020-21, 2021-22ರ ಅಂಕಿ ಅಂಶಗಳನ್ನು ಒದಗಿಸಿತ್ತು.

 

ಕರ್ನಾಟಕ ಸರಕಾರದ ಕೃಷಿ ಇಲಾಖೆಯು ನೀಡಿರುವ ಉತ್ತರದ ಪ್ರಕಾರ 2019-20ರಿಂದ 2021-22ರಲ್ಲಿ ಒಟ್ಟು 2,861 ರೈತರು ಆತ್ಮಹತ್ಯೆ ಮಾಡಿಕೊಂಡಿ ರುವ ವರದಿಗಳ ಪೈಕಿ 2,377 ರೈತರ ಆತ್ಮಹತ್ಯೆಗಳನ್ನಷ್ಟೇ ಒಪ್ಪಿಕೊಂಡಿತ್ತು. ಈ ಪೈಕಿ ಕೇವಲ 462 ರೈತರಿಗೆ ಮಾತ್ರ ಪರಿಹಾರ ಒದ ಗಿಸಿದೆ. 462 ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಿರಸ್ಕರಿಸಿತ್ತು. ಇನ್ನೂ 22 ಪ್ರಕರಣಗಳು ನಿರ್ಧರಿಸಲು ಬಾಕಿ ಇರಿಸಿಕೊಂಡಿತ್ತು.

 

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಕಳೆದ 6 ವರ್ಷಗಳಲ್ಲಿ 38 ಕೋಟಿ ರೈತರು ಅರ್ಜಿ ಸಲ್ಲಿಸಿದ್ದರು. 1,30,015 ಕೋಟಿ ಕ್ಲೈಮ್‌ಗಳ ಪೈಕಿ 25,252 ಕೋಟಿ ರೂ.ಗಳನ್ನು ರೈತರಿಗೆ ನೀಡಲಾಗಿದೆ ಎಂದು ಮಾಹಿತಿ ಒದಗಿಸಿತ್ತು.

 

2022-23, 2023-24, 2024-25ರ ಈ ಮೂರೂ ವರ್ಷಗಳಲ್ಲಿ ಹಾವೇರಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2022-23ರಲ್ಲಿ 104, 2023-24ರಲ್ಲಿ 104, 2024-25ರ ಡಿಸೆಂಬರ್ 9ರ ಅಂತ್ಯಕ್ಕೆ 46 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು.

 

ದೇಶದಾದ್ಯಂತ ಕಳೆದ ಮೂರು ವರ್ಷಗಳಲ್ಲಿ ಒಟ್ಟಾರೆ 16,854 ಮತ್ತು ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ 3,573 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟು ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದರೆ ಕರ್ನಾಟಕವು ಎರಡನೇ ಸ್ಥಾನದಲ್ಲಿತ್ತು.

SUPPORT THE FILE

Latest News

Related Posts