46 ಲಕ್ಷ ಕಡಿಮೆ ವೇತನ; ಸಭೆ ನಡವಳಿ ತಿದ್ದಿ ತಿರುಚಿದ ಸರ್ಕಾರ, ತನಿಖಾ ವರದಿಯೂ ಕಣ್ಮರೆ, ಏಜೆನ್ಸಿಯ ರಕ್ಷಣೆ

ಬೆಂಗಳೂರು; ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಹಾಯಕರು ಮತ್ತು ಡಿ ಗ್ರೂಪ್‌ ನೌಕರರಿಗೆ ನಿಗದಿಪಡಿಸಿದ್ದ ವೇತನಕ್ಕಿಂತಲೂ ಹೊರಗುತ್ತಿಗೆ ಏಜೆನ್ಸಿಯು ಕಡಿಮೆ ವೇತನ ನೀಡಿದೆ ಎಂದು ತನಿಖೆಯಿಂದ ದೃಢಪಪಟ್ಟಿದ್ದರೂ ಸರ್ಕಾರವು ಇದೀಗ  ಇಡೀ ಪ್ರಕರಣವನ್ನು ಮುಚ್ಚಿ ಹಾಕಿದೆ.

 

ಕಲ್ಬುರ್ಗಿ ಜಿಲ್ಲೆಯೊಂದರಲ್ಲೇ 46.00 ಲಕ್ಷ ರು ಕಡಿಮೆ ವೇತನ ನೀಡಿದ್ದರ ಕುರಿತು ಕಾರ್ಮಿಕ ಇಲಾಖೆಯು ತನಿಖಾ ವರದಿ ನೀಡಿತ್ತು. ಈ ವರದಿ ಕುರಿತು ಸಮಾಜ ಕಲ್ಯಾಣ ಇಲಾಖೆಯು 2024ರ ಜೂನ್‌ 20ರಂದು  ನಡೆಸಿದ್ದ ಸಭೆ ನಡವಳಿಯಲ್ಲಿ ದಾಖಲಾಗಿತ್ತು. ಆದರೀಗ ಆ ಸಭೆಯ ನಡವಳಿಯಲ್ಲಿನ ವಿಷಯವನ್ನೇ ಮರೆ ಮಾಚಲಾಗಿದೆಯಲ್ಲದೇ ಅದನ್ನು ತಿರುಚಿರುವುದು ಕಂಡುಬಂದಿದೆ.

 

ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಾಲೇಜುಗಳ ಬಲವರ್ಧನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರು ಖುದ್ದು ಅಧಿಕಾರಿಗಳ ಸಭೆ ನಡೆಸಿದ್ದರು. ಅಲ್ಲಿನ ಸಮಸ್ಯೆಗಳ ಬಗ್ಗೆಯೂ ವಿಸ್ತೃತವಾಗಿ ಚರ್ಚಿಸಿದ್ದರು.

 

ಇದರ ಬೆನ್ನಲ್ಲೇ ವಸತಿ ಶಾಲೆ, ಕಾಲೇಜುಗಳ ಅಡುಗೆ ಸಹಾಯಕರಿಗೆ ಆಗಿದೆ ಎನ್ನಲಾಗಿರುವ 46.00 ಲಕ್ಷ ರು. ವಂಚನೆ ಪ್ರಕರಣವನ್ನು ಮುಚ್ಚಿ ಹಾಕಿರುವುದು ಮತ್ತು ಜೂನ್‌ 20ರಂದು ನಡೆದಿದ್ದ ಸಭೆಯ ನಡವಳಿಯನ್ನೇ 2024ರ ಜುಲೈ 9ರಂದು  ತಿದ್ದಿ ತಿರುಚಿರುವುದು ಕಂಡುಬಂದಿದೆ.

 

ಹಾಗೆಯೇ ಸಭೆಯ ನಡವಳಿಯಲ್ಲಿನ ಕ್ರಮ ಸಂಖ್ಯೆ 1ರಲ್ಲಿದ್ದ  ವಿಷಯವನ್ನೇ ತೆಗೆದುಹಾಕಿರುವ ಇಲಾಖೆಯು ಅದನ್ನು ‘ತಿದ್ದುಪಡಿ’ ಎಂದು ಮಾರ್ಪಾಟುಗೊಳಿಸಿದೆ.  ಅದೇ ರೀತಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ   ಕಾರ್ಮಿಕ ಇಲಾಖೆಯು ತನಿಖಾ ವರದಿಯನ್ನೇ ಕಣ್ಮರೆಯಾಗಿಸಿದೆಯೇ  ಎಂಬ ಅನುಮಾನಗಳಿಗೂ ಕಾರಣವಾಗಿದೆ.

 

ಅಡುಗೆ ಸಹಾಯಕರು ಮತ್ತು ಡಿ ಗ್ರೂಪ್‌ ನೌಕರರಿಗೆ ವಂಚನೆ ಮಾಡಿದೆ ಎಂಬ ಗುರುತರವಾದ ಆರೋಪಕ್ಕೆ ಒಳಗಾಗಿರುವ ಖಾಸಗಿ ಏಜೆನ್ಸಿಯ ರಕ್ಷಣೆಗೆ ಖುದ್ದು ಧಾವಿಸಿದಂತಿರುವ ಸರ್ಕಾರವು ಸಭೆಯ ನಡವಳಿಯಲ್ಲಿನ ವಿಷಯವನ್ನೇ ತಿದ್ದಿ ತಿರುಚಿರುವ ಸಾಧ್ಯತೆಯೂ ಇದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ಹೊರ ಗುತ್ತಿಗೆ ನೌಕರರಿಗೆ  ನಿಗದಿಪಡಿಸಿದ್ದ ವೇತನಕ್ಕಿಂತಲೂ ಏಜೆನ್ಸಿಯು  ಕಡಿಮೆ ವೇತನ ನೀಡಿದೆ  ಎಂದು ವೇತನ ಪಾವತಿಯ ದಾಖಲೆಗಳ ಸಹಿತ ನೀಡಿದ್ದ ದೂರನ್ನು ಪರಿಶೀಲಿಸಿದ ನಂತರ 2024ರ ಜೂನ್‌ 20ರಂದು ನಡೆದಿದ್ದ ಸಭೆಯಲ್ಲಿ ಚರ್ಚೆಯಾಗಿತ್ತು. ಕಡಿಮೆ ವೇತನ ನೀಡಲಾಗಿದೆ ಎಂದು ಕಾರ್ಮಿಕ ಇಲಾಖೆಯು ನೀಡಿದ್ದ ತನಿಖಾ ವರದಿಯನ್ನು ಉಲ್ಲೇಖಿಸಿತ್ತು.

 

ಕಲ್ಬುರ್ಗಿ ಪ್ರಕರಣವನ್ನು ಸಭೆಯ ಮೊದಲನೇ ವಿಷಯದಲ್ಲಿಯೇ ಚರ್ಚಿಸಿ ನಿಯಾಮಾನುಸಾರ ಬಾಕಿ ವೇತನ ಪಾವತಿಸಲು ಕ್ರಮವಹಿಸಬೇಕು ಎಂದು ಸೂಚಿಸಿದ್ದರು.

 

ಮೊದಲ ಸಭೆ ನಡವಳಿಯಲ್ಲೇನಿತ್ತು?

 

ಈ ಹಿಂದಿನ ಸಭೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಘದ ವತಿಯಿಂದ ಹೊರ ಸದಂಪನ್ಮೂಲ ನೌಕರರಿಗೆ ಕಡಿಮೆ ವೇತನವನ್ನು ನೀಡುತ್ತಿರುವುದಾಗಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ದೂರು ಬಂದಿದ್ದ ಮೇರೆಗ್ಎ ಕಲ್ಬುರ್ಗಿ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ತನಿಖೆ ಮಾಡಿ ವರದಿ ನೀಡಿದ್ದು, 46.00 ಲಕ್ಷ ರು. ಕಡಿಮೆ ವೇತನ ನೀಡಿರುವುದಾಗಿ ತಿಳಿಸಿರುತ್ತಾರೆ.

 

ಕಾರ್ಮಿಕ ಇಲಾಖೆಯ ನೋಟಿಫಿಕೇಷನ್‌ ಪ್ರಕಾರ 01.04.2023ರಿಂದ 31.03.2024ರವರೆಗೆ ಅಡುಗೆಯವರಿಗೆ 17,084 ರು.ಗಳನ್ನು ಪಾವತಿಸಬೇಕಾಗಿದ್ದು 14,387 ರು.ಗಳನ್ನು ಪಾವತಿಸಲಾಗಿರುತ್ತದೆ. ವ್ಯತ್ಯಾಸದ ಮೊತ್ತವನ್ನು ಏಕೆ ಪಾವತಿಸಿರುವುದಿಲ್ಲ ಎಂಬುದನ್ನು ಕುರಿತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧಿಕಾರಿಯೊಂದಿಗೆ ವಿವರ ಪಡೆಯಲಾಗಿ ಕೂಡಲೇ ನಿಯಾಮಾನುಸಾರ ಬಾಕಿ ವೇತನ ಪಾವತಿಸಲು ಕ್ರಮವಹಿಸುವಂತೆ ಸೂಚಿಸಲಾಗಿದೆ ಎಂದು ಸಭೆಯ ನಡವಳಿಯಲ್ಲಿ ದಾಖಲಿಸಿದೆ.

 

ಈ ನಡವಳಿಗೆ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್‍‌ ಮಣಿವಣ್ಣನ್‌ ಅವರು ಸಹಿ ಮಾಡಿದ್ದಾರೆ.

 

ಆದರೆ ಈ ಸಭೆಯ ನಡವಳಿಯನ್ನೇ ಇಲಾಖೆ ಅಧಿಕಾರಿಗಳು ತಿದ್ದಿರುವುದು ಕಂಡುಬಂದಿದೆ. 2024ರ ಜೂನ್‌ 20ರಂದು ನಡೆದಿದ್ದ ಸಭೆಯಯಲ್ಲಿ ಕ್ರಮ ಸಂಖ್ಯೆಯ ಒಂದರಲ್ಲಿ ಕಲ್ಬುರ್ಗಿ ಜಿಲ್ಲೆಯ ಪ್ರಕರಣ ಮತ್ತು ಕಾರ್ಮಿಕ ಇಲಾಖೆಯ ತನಿಖಾ ವರದಿ ಕುರಿತು ಪ್ರಸ್ತಾಪಿಸಿತ್ತು.

 

ಆದರೀಗ ಇಲಾಖೆ ಅಧಿಕಾರಿಗಳು ತಿದ್ದುಪಡಿ ಸಭೆ ನಡವಳಿಯಲ್ಲಿ ಕ್ರಮ ಸಂಖ್ಯೆ ಒಂದರಲ್ಲಿನ ಕಲ್ಬುರ್ಗಿ ಜಿಲ್ಲೆಯ ಪ್ರಕರಣ ಮತ್ತು ಕಾರ್ಮಿಕ ಇಲಾಖೆಯ ತನಿಖಾ ವರದಿಯ ಕುರಿತು ಪ್ರಸ್ತಾಪಿಸಿಲ್ಲ. ತಿದ್ದುಪಡಿಗೊಂಡಿರುವ ಸಭಾ ನಡವಳಿಯಲ್ಲಿಯೂ ಮೇಜರ್‍‌ ಮಣಿವಣ್ಣನ್‌ ಅವರ ಸಹಿಯೂ ಇದೆ.

 

ಸಭೆ ನಡವಳಿ ತಿದ್ದಿ ತಿರುಚಿತೇ?

 

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಹೊರ ಸಂಫನ್ಮೂಲ ನೌಕರರಿಗೆ ಕಡಿಮೆ ವೇತನವನ್ನು ನೀಡುತ್ತಿರುವುದಾಗಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದ ವತಿಯಿಂದ ಕೋರಿಕೆ ಸಲ್ಲಿಸಿದ್ದರ ವಿಷಯದ ಬಗ್ಗೆ ಚರ್ಚಿಸಲಾಗಿ ಈ ಸಂಬಂಧ ಕಾರ್ಮಿಕ ಇಲಾಖೆಯ ಕಾಯ್ದೆ ಅನ್ವಯ ವಲಯ 1 ಬೃಹತ್‌ ಬೆಂಗಲೂರು ಮಹಾನಗರಪಾಲಿಕೆ, ವಲಯ 2 ಕಾರ್ಪೋರೇಷನ್‌ ವಲಯ 3 ಜಿಲ್ಲಾ ಕೇಂದ್ರ ಸ್ಥಾನ, ವಲಯ 4 ತಾಲೂಕು ಮಟ್ಟ ಎಂಬುದಾಗಿ ವಿಂಗಡಿಸಿದ್ದು ವಲಯ 1ರ ಡಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ 17,084 ರು.ಗಳನ್ನು ನಿಗದಿಪಡಿಸಲಾಗಿರುತ್ತದೆ.

 

ಸದರಿ ಹೊರ ಸಂಪನ್ಮೂಲ ನೌಕರರು ವಲಯ -4ರ ಅಡಿ ಕರ್ತವ್ಯ ನಿರ್ವಹಿಸುತ್ತ್ದು ನಿಯಮಾನುಸಾರ ಅಡುಗೆಯವರಿಗೆ 14,387 ರು.ವೇತನವನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನೀಡಲಾಗಿರುತ್ತದೆ. ಇದು ಸರಿಯಾಗಿದ್ದು ಯಾವುದೇ ಬಾಕಿಯನ್ನು ನೀಡಬೇಕಾಗಿರುವುದಿಲ್ಲ ಎಂಬುದನ್ನು ತಿಳಿಸಲಾಯಿತು.

 

ಮತ್ತು ಸಭೆಯಲ್ಲಿ ಹಾಜರಿದ್ದ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಒಪ್ಪಿಗೆ ಸೂಚಿಸಿದರು. ಮತ್ತು ಕನಿಷ್ಟ ವೇತನವನ್ನು ಪಾವತಿಸದೇ ಇರುವ ಮನವಿಯ ವಿಷಯವನ್ನು ಮುಕ್ತಾಯಗೊಳಿಸಲಾಯಿತು. ಆದ್ದರಿಂದ ಇನ್ನು ಮುಂದೆ ಸದರಿ ಸಂಘವು ಮನವಿ ನೀಡುವ ಮುಂಚೆ ಯಾವುದೇ ಕಾನೂನಾತ್ಮಕ ಲೋಪದೋಷಗಳಿದ್ದಲ್ಲಿ ಮಾತ್ರ ಪರಿಶೀಲಿಸಿ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳಿಗೆ ಸೂಚಿಸಲಾಯಿತು ಎಂದು ದಾಖಲಿಸಲಾಗಿದೆ.

 

ಸಭೆಯ ನಡವಳಿ ಒಮ್ಮೆ ದಾಖಲಾಗಿ ಅದಕ್ಕೆ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥರು ಸಹಿ ಮಾಡಿದ ನಂತರ ಸಭೆ ನಡವಳಿಯನ್ನೇ ತಿದ್ದುಪಡಿ ಮಾಡುವುದು ಅಕ್ಷ್ಯಮ್ಯವಾಗಿದೆ. ಒಂದು ವೇಳೆ ತಿದ್ದುಪಡಿಯಾಗಿದ್ದರೇ ಸಭೆಯಲ್ಲಿ ಚರ್ಚಿಸಿರುವ ಕ್ರಮ ಸಂಖ್ಯೆ 1ರಲ್ಲಿನ ವಿಷಯವು ತಿದ್ದುಪಡಿಗೊಂಡು ನಡವಳಿಯಲ್ಲಿ ಪ್ರಸ್ತಾಪವಾಗಿರಬೇಕಿತ್ತು.

 

ಆದರೆ ತಿದ್ದುಪಡಿ ಎಂದು ಬಿಡುಗಡೆ ಮಾಡಿರುವ ಸಭೆ ನಡವಳಿಯಲ್ಲಿ ಕ್ರಮ ಸಂಖ್ಯೆ 1ರಲ್ಲಿನ ವಿಷಯದ ಪ್ರಸ್ತಾಪವೇ ಆಗಿಲ್ಲ. ಇದರಿಂದ ವೇತನ ನೀಡಿರುವ ಪ್ರಕರಣವನ್ನೇ ಮರೆಮಾಚಲು ಯತ್ನಿಸಿದೆಯೇ ಎಂಬ ಮಾತುಗಳಿಗೆ ಪುಷ್ಠಿ ಬಂದಂತಾಗಿದೆ.

 

ಹೊರಗುತ್ತಿಗೆ ನೌಕರರಿಗೆ 46.00 ಲಕ್ಷ ರು ಕಡಿಮೆ ವೇತನ; ಏಜೆನ್ಸಿಗಳ ವಂಚನೆ ಬಯಲು

ವಸತಿ ಶಾಲೆಗಳಲ್ಲಿನ ಹೊರಗುತ್ತಿಗೆ ನೌಕರರಿಗೆ ನಿಗದಿಪಡಿಸಿದ್ದ ವೇತನಕ್ಕಿಂತಲೂ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ‘ದಿ ಫೈಲ್‌’ 2024ರ ಜೂನ್‌ 17ರಂದೇ ವರದಿ ಪ್ರಕಟಿಸಿತ್ತು.

ವಸತಿ ಶಾಲೆಗಳ ಹೊರಗುತ್ತಿಗೆ ಸಿಬ್ಬಂದಿಗೆ ಕಡಿಮೆ ಸಂಬಳ; ಏಜೆನ್ಸಿಗಳ ಶೋಷಣೆ, ಕೈಕಟ್ಟಿ ಕುಳಿತ ಸರ್ಕಾರ

ವರದಿ ಪ್ರಕಟವಾದ ಮೂರೇ ಮೂರು ದಿನದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್‍‌ ಮಣಿವಣ್ಣನ್‌ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಹೊರಗುತ್ತಿಗೆ ನೌಕರರಿಗೆ ಕಡಿಮೆ ಸಂಬಳ ನೀಡಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಸಭೆಯ ಗಮನಕ್ಕೆ ತಂದಿದ್ದರು.

 

ಈ ಕುರಿತು ‘ದಿ ಫೈಲ್‌’ ಪ್ರಕಟಿಸಿದ್ದ ವರದಿ ಆಧರಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಸಹ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್‍‌ ಮಣಿವಣ್ಣನ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಸಂಬಂಧ ಎಕ್ಸ್‌ನಲ್ಲಿ ಪ್ರಶ್ನಿಸಿದ್ದರು.

 

ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘವು ಕಲ್ಬುರ್ಗಿ ವಿಭಾಗದಲ್ಲಿ ಆಗಿರುವ ವಂಚನೆಯನ್ನು ಸರ್ಕಾರದ ಗಮನಕ್ಕೆ ತಂದಿದೆ. ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್‍‌ ಪಿ ಮಣಿವಣ್ಣನ್‌ ಅವರಿಗೆ 2024ರ ಮೇ 27ರಂದು ದಾಖಲೆ ಸಹಿತ ದೂರು ನೀಡಿತ್ತು.

 

‘ವಸತಿ ಶಾಲೆ, ಕಾಲೇಜುಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತಾಗಾರರು, ಕಾವಲುಗಾರರು, ಜವಾನರು, ಡಿ ವರ್ಗದ ಸಿಬ್ಬಂದಿಗಳಿಗೆ 2023-24ನೇ ಸಾಲಿನಲ್ಲಿ ಕೊಡಬೇಕಾದ ಕನಿಷ್ಟ ವೇತನವನ್ನು ಸಿಬ್ಬಂದಿಗಳಿಗೆ ಕೊಟ್ಟಿಲ್ಲ. 2023ರ ಏಪ್ರಿಲ್‌ನಿಂದ ಇಲ್ಲಿಲಯವರೆಗೂ ಕಡಿಮೆ ಸಂಬಳವನ್ನು ಗುತ್ತಿಗೆದಾರರು ಹೊರಗುತ್ತಿಗೆ ನೌಕರರ ಖಾತೆಗೆ ಜಮಾ ಮಾಡಿದ್ದಾರೆ,’ ಎಂದು ದೂರಿನಲ್ಲಿ ವಿವರಿಸಿತ್ತು.

 

ಈ ದೂರಿನ ಜೊತೆಗೆ ನೌಕರರಿಗೆ ಕಡಿಮೆ ವೇತನ ಪಾವತಿಯಾಗಿರುವ ಸಂಬಂಧ ನೌಕರರವಾರು ಬ್ಯಾಂಕ್‌ ದಾಖಲೆಯನ್ನೂ ಒದಗಿಸಿದ್ದರು.

 

ಕಲ್ಬುರ್ಗಿಯ ಅನ್ಸಾಬಾಯಿ (ಅಡುಗೆಯವರು) ಅವರಿಗೆ 12, 552 ರು ಪಾವತಿಸಲಾಗಿತ್ತು.

 

ಬಾಲಮ್ಮ ಅವರಿಗೂ 12,552 ರು ಪಾವತಿಸಿತ್ತು.

 

ಗಂಗಮ್ಮ ಅವರಿಗೂ 12,552 ರು ನೀಡಿತ್ತು.

 

ಹಸೀನಾ ಬೇಗಂ ಅವರಿಗೆ 12,552 ರು ಪಾವತಿಸಿತ್ತು.

 

ಸವಿತಾ ಅವರಿಗೂ 12,552 ರು ನೀಡಿತ್ತು.   ಸರಸ್ವತಿ ಅವರಿಗೆ 11,704,

ಕಮಲಾಬಾಯಿ ಅವರಿಗೆ 11,704, ಮಲ್ಲಿನಾಥ್‌ ಅವರಿಗೆ 11,704,

ಅಂಬಿಕಾ ಅವರಿಗೆ 13,231 ರು ಪಾವತಿಸಿರುವುದು ವೇತನ ಪಟ್ಟಿಯಿಂದ ತಿಳಿದು ಬಂದಿತ್ತು.

 

ವಾಸ್ತವದಲ್ಲಿ ಮುಖ್ಯ ಅಡುಗೆಯವರಿಗೆ 14,758 ರು, ಅಡುಗೆಯವರಿಗೆ 14,386 ರು ಮಾಸಿಕ ಕನಿಷ್ಟ ವೇತನ ನೀಡಬೇಕು. ಸಹಾಯಕರಿಗೆ 11,872 ರು ಪಾವತಿಸಬೇಕು ಎಂದು ನಿಯಮದಲ್ಲಿ ಸೂಚಿಸಲಾಗಿದೆ. ಆದರೆ ಕಲ್ಬುರ್ಗಿ ವಿಭಾಗ ಸೇರಿದಂತೆ ಹಲವೆಡೆ ಈ ನಿಯಮವನ್ನು ಪಾಲಿಸುತ್ತಿಲ್ಲ ಎಂಬ ದೂರು ಸಲ್ಲಿಕೆಯಾಗಿತ್ತು,

 

ಹೊರಗುತ್ತಿಗೆ ಉದ್ಯೋಗಿಗಳ ಬದುಕು ಲಾಗಾಯ್ತಿನಿಂದಲೂ ಅತಂತ್ರ ಸ್ಥಿತಿಯಲ್ಲೇ ಇದೆ. ಸರ್ಕಾರ ಟೆಂಡರ್‍‌ ಕರೆದು ಕೆಲಸಗಾರರನ್ನು ಪೂರೈಸುವ ಏಜೆನ್ಸಿಗಳನ್ನು ಮೊದಲೇ ಗೊತ್ತುಪಡಿಸಿರುತ್ತದೆ. ಟೆಂಡರ್‍‌ ಪಡೆಯುವಾಗಲೇ ಇಲಾಖೆಯ ಸಚಿವರು, ಅಧಿಕಾರಿಗಳೊಂದಿಗೆ ವ್ಯವಾಹರಿಕವಾಗಿ ಪೂರ್ವ ನಿರ್ಧರಿತ ಒಪ್ಪಂದಗಳೂ ನಡೆದಿವೆ ಎಂಬ ಆರೋಪಗಳು ಕೇಳಿಬಂದಿದ್ದವು.

the fil favicon

SUPPORT THE FILE

Latest News

Related Posts