ಸ್ಮಾರ್ಟ್ ಕಾರ್ಡ್‌ ವಿತರಣೆಯಲ್ಲಿ ನಷ್ಟ, ದುರುಪಯೋಗ; ನಿ. ನ್ಯಾಯಾಧೀಶರ ನೇತೃತ್ವದ ಏಕವ್ಯಕ್ತಿ ಸಮಿತಿ ರಚನೆ

ಬೆಂಗಳೂರು:  ಸ್ಮಾರ್ಟ್ ಕಾರ್ಡ್‌ ಹಾಗೂ ಇತರೆ ಕಾರ್ಡ್‌ಗಳನ್ನು ಪೂರೈಸುವ ಸಂಬಂಧ ಸರ್ಕಾರಕ್ಕೆ ಆಗಿರುವ  ಆರ್ಥಿಕ ನಷ್ಟ, ಹಣ ದುರುಪಯೋಗ ಮತ್ತು ಕರ್ತವ್ಯಲೋಪ ಆರೋಪಗಳ ಸಂಬಂಧ ಸಾರಿಗೆ ಇಲಾಖೆಯ ಹಿಂದಿನ ಆಯುಕ್ತ ಹಾಗೂ  ನಿವೃತ್ತ ಐಪಿಎಸ್‌ ಅಧಿಕಾರಿ ಶಿವಕುಮಾರ್‌ ಸೇರಿದಂತೆ ಇನ್ನಿತರರ ವಿರುದ್ಧದ ಪ್ರಕರಣವನ್ನು  ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಾಥಮಿಕ ತನಿಖೆ ನಡೆಸಲು ಸರ್ಕಾರವು ಆದೇಶಿಸಿದೆ.

 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್‍‌ ಸೇರಿದಂತೆ ಮತ್ತಿತರರ ವಿರುದ್ಧ ಸಿಐಡಿ ತನಿಖೆ ನಡೆಸಬೇಕು ಎಂದು ಸಾರಿಗೆ ಆಯುಕ್ತರಿಗೆ ಸೂಚಿಸಲಾಗಿತ್ತು. ನಂತರ ಆರೋಪಿತರ ವಿರುದ್ಧ ಎಫ್‌ಐಆರ್‍‌ ದಾಖಲಿಸಬೇಕು ಎಂದು ನಿರ್ದೇಶಿಸಲಾಗಿತ್ತು. ಆದರೆ ಸಾರಿಗೆ ಆಯುಕ್ತರು ಕ್ರಿಮಿನಲ್‌ ಕಾನೂನನ್ನು ಮುಂದೊಡಿದ್ದರು. ಇದರ ಪ್ರಕಾರ ಈ ಪ್ರಕರಣದಲ್ಲಿ ಆಗಿರುವ ನಷ್ಟದ ಪ್ರಮಾಣ ಮತ್ತು ಅದಕ್ಕೆ ಸಂಬಂಧಿಸಿದ ಅಧಿಕಾರಿ ನೌಕರರ ಪಾತ್ರವನ್ನು ಮೇಲ್ನೋಟಕ್ಕೆ ಖಚಿತಪಡಿಸಿಕೊಳ್ಳಬೇಕಿದೆ. ಹೀಗಾಗಿ ಈ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಾಥಮಿಕ ತನಿಖೆ ನಡೆಸಲು ಮುಂದಾಗಿದೆ.

 

ನಿವೃತ್ತ ಜಿಲ್ಲಾ ನ್ಯಾಯಾಧೀಶ ಎನ್‌ ನಾರಾಯಣ ಅವರ ನೇತೃತ್ವದಲ್ಲಿ ಏಕವ್ಯಕ್ತಿ ಸಮಿತಿಯನ್ನು ರಚಿಸಿ ಆದೇಶಿಸಿದೆ. 2024ರ ಮೇ 31ರಂದು ಹೊರಡಿಸಿರುವ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಆದೇಶದಲ್ಲೇನಿದೆ?

 

ಕ್ರಿಮಿನಲ್‌ ಕಾನೂನಿನ ಪ್ರಕಾರ ಆರ್ಥಿಕ ದುರುಪಯೋಗ ಹಾಘೂ ಸರ್ಕಾರಕ್ಕೆ ಆಗುವ ಆರ್ಥಿಕ ನಷ್ಟಗಳಿಗೆ ಸಂಬಂಧಪಟ್ಟ ಸಂಸ್ಥೆ/ಅಧಿಕಾರಿಗಳ ಮೇಲೆ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕಾದಲ್ಲಿ ಅಂತಹ ದುರುಪಯೋಗ, ನಷ್ಟಗಳ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ತನಿಖಾ ವರದಿಗಳನ್ನು ಪಡೆಯಬೇಕು. ಮತ್ತು ಅಂತಹ ನಷ್ಟದ ಪ್ರಮಾಣದ ಬಗ್ಗೆ ಮತ್ತು ಅದಕ್ಕೆ ಸಂಬಂಧಿಸಿದ ಅಧಿಕಾರಿ ನೌಕರರ ಕುರಿತು ಮೇಲ್ನೋಟಕ್ಕೆ ಖಚಿತಪಡಿಸಿಕೊಂಡ ನಂತರವಷ್ಟೇ ಕ್ರಿಮಿನಲ್‌ ಪ್ರಕ್ರಿಯೆಯನ್ನು ಕೈಗೊಳ್ಳಬಹುದಾಗಿರುತ್ತದೆ ಎಂದು ಹೇಳಲಾಗಿದೆ.

 

ಅಲ್ಲದೇ ಕಚೇರಿಯ ಕಡತಗಳನ್ನು ಪರಿಶೀಲಿಸಲಾಗಿ ಯಾವುದೇ ತನಿಖಾ ವರದಿಗಳು ಕಂಡುಬಂದಿರುವುದಿಲ್ಲ. ಸಂಸ್ಥೆಯ ಠೇವಣಿ 1.50 ಕೋಟಿ ರು.ಗಳನ್ನು ಪಿಪಿಪಿ ಪಾಲುದಾರರಿಗೆ ಹಿಂಪಾವತಿಯಾಗದಂತೆ ಇಂಡಿಯನ್‌ ಓವರ್‍‌ಸೀಸ್‌ ಬ್ಯಾಂಕ್‌ಗೆ 2024ರ ಫೆ.2ರಂದು ಪತ್ರ ಬರೆಯಲಾಗಿದೆ. ಹಾಗೂ ಸಂಸ್ಥೆಯ ಅಕ್ರಮದ ಬಗ್ಗೆ ಈ ಹಿಂದೆಯೇ ಇಲಾಖೆಯ ಗಮನಕ್ಕೆ ಬಂದಿದ್ದರೂ ಅಗತ್ಯ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲು ಮುಂದಾಗಿಲ್ಲ. ಸಂಸ್ಥೆಯ ಸೇವೆಯನ್ನು ಮುಂದುವರೆಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

 

‘ರೋಸ್‌ಮಾರ್ಟಾ ಸಂಸ್ಥೆಯು ಸಾರಿಗೆ ಇಲಾಖೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಸೇವೆಯನ್ನು ಒದಗಿಸದಿರುವ ಮತ್ತು ಈ ಸಂಸ್ಥೆ ಹಾಗೂ ಇದರ ಸಹ ಸಂಸ್ಥೆಗಳಿಂದ ಸರ್ಕಾರಕ್ಕೆ ಉಂಟಾಗಿರುವ ನಷ್ಟ, ಹಣ ದುರುಪಯೋಗ ಹಾಗೂ ಸಂಸ್ಥೆಯ ಅಕ್ರಮದ ಬಗ್ಗೆ ಈ ಹಿಂದೆಯೇ ಇಲಾಖೆಯ ಗಮನಕ್ಕೆ ಬಂದಿದ್ದರೂ ಅಗತ್ಯ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲು ಮುಂದಾಗದೇ ಸಂಸ್ಥೆಯ ಸೇವೆಯನ್ನು ಮುಂದುವರೆಸಿ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿ, ನೌಕರರ ಕರ್ತವ್ಯಲೋಪಗಳ ಬಗ್ಗೆ ಪ್ರಾಥಮಿಕ ತನಿಖೆ, ವಿಚಾರಣೆ ನಡೆಸಿ ವರದಿ ಸಲ್ಲಿಸಬೇಕು,’ ಎಂದು ಆದೇಶದಲ್ಲಿ ಸೂಚಿಸಲಾಗಿದೆ.

 

 

ಸಾರಿಗೆ ಇಲಾಖೆಯ ಹಿಂದಿನ ಆಯುಕ್ತ  ಐಪಿಎಸ್‌ ಅಧಿಕಾರಿ ಶಿವಕುಮಾರ್‍ (ನಿವೃತ್ತ) ಅವರ ವಿರುದ್ಧದ  ಪ್ರಕರಣವನ್ನು ಹೆಚ್ಚಿನ ತನಿಖೆ ನಡೆಸಲು ಸಿಐಡಿ ತನಿಖೆಗೆ ವಹಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ಮುಂದಾಗಿತ್ತು. ಆದರೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿಲ್ಲ ಎಂಬ ಕಾರಣಕ್ಕೆ ಗೃಹ ಇಲಾಖೆಯು ಕಡತವನ್ನು ಸಾರಿಗೆ ಇಲಾಖೆಗೆ ಮರಳಿಸಿತ್ತು. ಹೀಗಾಗಿ ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಎಫ್‌ಐಆರ್‌ ದಾಖಲಿಸಲು ನಿರ್ದೇಶನ ನೀಡಿದ್ದರು.

 

ಈ ಸಂಬಂಧ 2024ರ ಜನವರಿ 8ರಂದು ಸಾರಿಗೆ ಇಲಾಖೆಯ ಆಯುಕ್ತರಿಗೆ  ಪತ್ರವನ್ನು (ಸಂಖ್ಯೆ ಟಿಡಿ 33 ಟಿಡಿಎಸ್‌ 2022)  ಬರೆದಿದ್ದರು.  ‘ರೋಸ್‌ಮೆರ್ಟಾ ಸಂಸ್ಥೆ ಹಾಗೂ ಇದರ ಸಹ ಸಂಸ್ಥೆಗಳಿಂದ ಸರ್ಕಾರಕ್ಕೆ ಉಂಟಾಗಿರುವ ನಷ್ಟ, ಹಣ ದುರುಪಯೋಗ ಮತ್ತು ಕರ್ತವ್ಯಲೋಪಗಳ ಬಗ್ಗೆ ಸಂಬಂಧಪಟ್ಟ ಪೊಲೀಸ್‌ ಠಾಣೆಯಲ್ಲಿ ಕೂಡಲೇ ದೂರು ನೀಡಿ ಪ್ರಥಮ ವರ್ತಮಾನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು,’ ಎಂದು ಸಾರಿಗೆ ಇಲಾಖೆಯು ಆಯುಕ್ತರಿಗೆ ನಿರ್ದೇಶನ ನೀಡಿದ್ದರು.  ಎಫ್‌ಐಆರ್‌ ದಾಖಲಿಸುವ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಹ ಅನುಮೋದನೆ ನೀಡಿದ್ದರು.

 

 

ಸಾರಿಗೆ ಇಲಾಖೆಗೆ ಸ್ಮಾರ್ಟ್ ಕಾರ್ಡ್‌ ಹಾಗೂ ಇತರೆ ಕಾರ್ಡ್‌ಗಳನ್ನು ಪೂರೈಸುವ ರೋಸ್‌ಮೆರ್ಟಾ ಟೆಕ್ನಾಲಜೀಸ್‌ ಪ್ರೈವೈಟ್‌ ಲಿಮಿಟೆಡ್‌ಗೆ  ಐಪಿಎಸ್‌ ಅಧಿಕಾರಿ ಶಿವಕುಮಾರ್‌ ಅವರು ಪರೋಕ್ಷವಾಗಿ ಸಹಾಯ ಮಾಡುತ್ತಿದ್ದಾರೆ ಎಂದು ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ಇಲಾಖೆ ವಿಚಾರಣೆ ನಡೆದಿತ್ತು. ಈ ಪ್ರಕರಣವು ಹಿಂದಿನ ಬಿಜೆಪಿ ಸರ್ಕಾರದ ಗಮನದಲ್ಲಿತ್ತಾದರೂ ಯಾವುದೇ ಕ್ರಮ ವಹಿಸಿರಲಿಲ್ಲ.   ಈ ಕುರಿತು ‘ದಿ ಫೈಲ್‌’ 2022ರ ಏಪ್ರಿಲ್‌ 7ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

 

ವರ್ಷದ ಬಳಿಕ  ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲು ಸಿಐಡಿಯ ಆರ್ಥಿಕ ಅಪರಾಧ ವಿಭಾಗಕ್ಕೆ ವಹಿಸಲು  ಗೃಹ ಇಲಾಖೆಗೆ  ಕಡತವನ್ನು (TD 33/TDS/2021/PART-1) ಕಳಿಸಲಾಗಿತ್ತು.  ಐಪಿಎಸ್‌ ಶಿವಕುಮಾರ್‍‌ ಅವರ ವಿರುದ್ಧದ ಪ್ರಕರಣದ ಕುರಿತು ತನಿಖೆ ನಡೆಸಬೇಕೇ ಬೇಡವೇ ಎಂಬ ಕುರಿತಾದ ಕಡತವನ್ನು  ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಪರಿಶೀಲಿಸಿದ್ದರು. ಆ ನಂತರ ಇದೇ ಕಡತ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ರವಾನೆಯಾಗಿತ್ತು. ಸರಿಸುಮಾರು 2 ತಿಂಗಳ ಕಾಲ ಈ ಕಡತವು ಮುಖ್ಯಮಂತ್ರಿಗಳ ಸಚಿವಾಲಯದಲ್ಲಿಯೇ ಇತ್ತು. ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನವನ್ನು ಕೈಗೊಂಡಿರಲಿಲ್ಲ. 2 ತಿಂಗಳ ನಂತರ ಕಡತವು ಸಾರಿಗೆ ಇಲಾಖೆಗೆ ಹಿಂದಿರುಗಿತ್ತು.

ಆರ್ಥಿಕ ನಷ್ಟ, ದುರುಪಯೋಗ, ಕರ್ತವ್ಯಲೋಪ; ನಿವೃತ್ತ ಐಪಿಎಸ್‌ ಅಧಿಕಾರಿ ವಿರುದ್ಧ ಎಫ್‌ಐಆರ್‌ಗೆ ನಿರ್ದೇಶನ

ಈ ಬೆಳವಣಿಗೆ ನಡುವೆಯೇ ಇದೇ ರೋಸ್‌ಮೆರ್ಟಾ ಟೆಕ್ನಾಲಾಜೀಸ್‌ ಸಂಸ್ಥೆಯ ಅಕ್ರಮ ಅವ್ಯವಹಾರದಲ್ಲಿ ಭಾಗಿ ಆಗಿರುವ ಅಧಿಕಾರಿ, ನೌಕರರನ್ನು ಗುರುತಿಸಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಸಾರಿಗೆ ಆಯುಕ್ತರಿಗೆ (ಸಾರಿಗೆ-ರಸ್ತೆ ಸುರಕ್ಷತೆ) 2023ರ ಅಕ್ಟೋಬರ್‍‌ 17ರಂದು ಪತ್ರ (ಟಿಡಿ 33 ಟಿಡಿಎಸ್‌ 2022 (ಭಾಗ-1)  ಬರೆದಿದ್ದರು.

 

ರೋಸ್‌ಮೆರ್ಟಾ ಪ್ರಕರಣ; ಲಿಂಗಾಯತ ಸಮುದಾಯದ ನಿವೃತ್ತ ಐಪಿಎಸ್‌ ಅಧಿಕಾರಿ ವಿರುದ್ಧ ಸಿಐಡಿ ತನಿಖೆ?

 

 

‘ಐಪಿಎಸ್‌ ಅಧಿಕಾರಿ ಶಿವಕುಮಾರ್‌ ಅವರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ರೋಸ್‌ಮೆರ್ಟಾ ಟೆಕ್ನಾಲಜಿ ಪ್ರೈವೈಟ್‌ ಲಿಮಿಟೆಡ್‌ಗೆ ಪರೋಕ್ಷವಾಗಿ ಸಹಾಯ ಮಾಡುತ್ತಿದ್ದು ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು,’ ಎಂಬ ದೂರು ಅರ್ಜಿಯ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು,’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ (ಸಂಖ್ಯೆ; ಸಿಆಸುಇ 43 ಎಸ್‌ಪಿಎಸ್‌ 2022- 31-03-2022) ಜೇಮ್ಸ್‌ ತಾರಕನ್‌ ಅವರು ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅನಧಿಕೃತ ಟಿಪ್ಪಣಿ ಹಾಕಿದ್ದರು.

 

 

 

ಅಧಿಕಾರ ದುರುಪಯೋಗ, ಭ್ರಷ್ಟಾಚಾರದ ಆರೋಪ; ಐಪಿಎಸ್‌ ಶಿವಕುಮಾರ್‌ ವಿರುದ್ಧ ಕ್ರಮಕ್ಕೆ ಪತ್ರ

 

ತನಗೆ ನೀಡಿದ್ದ ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ಬಳಸಿಕೊಂಡು ವಾಹನಗಳ ವಿವರವನ್ನು ಅಕ್ರಮವಾಗಿ ‘ವಾಹನ್’ ತಂತ್ರಾಂಶದಲ್ಲಿ ದಾಖಲಿಸಿ ಕೃತ್ಯ ಎಸಗುತ್ತಿದ್ದ ಎಂಬ ಆರೋಪದ ಮೇರೆಗೆ ಬಂಧಿಸಲಾಗಿತ್ತು. ‘ಔಡಿ, ಬೆನ್ಜ್, ಬಿಎಂಡಬ್ಲ್ಯು, ಜಾಗ್ವಾರ್, ಲ್ಯಾಂಬೋರ್ಗಿನಿ ಹಾಗೂ ಇತರೆ ಐಷಾರಾಮಿ ಕಾರುಗಳ ನೋಂದಣಿ ಸಂದರ್ಭದಲ್ಲಿ ಅಕ್ರಮ ಎಸಗಿರುವುದು ತನಿಖೆಯಿಂದ ಹೊರಬಂದಿತ್ತು.

the fil favicon

SUPPORT THE FILE

Latest News

Related Posts