ಪ್ಯಾನಿಕ್‌ ಬಟನ್‌ ಖರೀದಿ; ದೆಹಲಿ ಬಸ್‌ ಖರೀದಿ ಅಕ್ರಮದಲ್ಲಿ ತಳಕು ಹಾಕಿಕೊಂಡಿದ್ದ ಕಂಪನಿಯಿಂದಲೇ ಸೇವೆ

ಬೆಂಗಳೂರು; ಸಾರ್ವಜನಿಕ ಸೇವಾ ವಾಹನಗಳಿಗೆ ಲೊಕೇಷನ್‌ ಟ್ಯ್ರಾಕಿಂಗ್‌ ಮತ್ತು ಎಮರ್ಜೆನ್ಸಿ ಪ್ಯಾನಿಕ್‌ ಬಟನ್‌ ಅಳವಡಿಸುವ ಸಂಬಂಧ ಕರೆದಿದ್ದ ಟೆಂಡರ್‍‌ ಪ್ರಕ್ರಿಯೆಯಲ್ಲಿ ಸಮಾಲೋಚಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಿದ್ದ ದಿಲ್ಲಿ ಇಂಟಿಗ್ರೇಟೆಡ್ ಮಲ್ಟಿ- ಮಾಡಲ್ ಟ್ರಾನ್ಸಿಸ್ಟ್ ಸಿಸ್ಟಂ (ಡಿಐಎಂಟಿಎಸ್) ಕಂಪನಿಗೂ ದೆಹಲಿಯಲ್ಲಿ ಆಪ್‌ ಸರ್ಕಾರ ಬಸ್‌ ಖರೀದಿ ಅಕ್ರಮಕ್ಕೂ ಸಂಬಂಧ ಇದೆ ಎಂಬ ಆರೋಪ ಕೇಳಿ ಬಂದಿದೆ.

 

ಡಿಐಎಂಟಿಎಸ್ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಸಾರಿಗೆ ಇಲಾಖೆಯು ಈಗಾಗಲೇ ಸೂಚಿಸಿರುವ ಬೆನ್ನಲ್ಲೇ ದೆಹಲಿಯಲ್ಲಿ ಬಸ್‌ ಖರೀದಿ ಅಕ್ರಮದಲ್ಲೂ ಇದೇ ಕಂಪನಿಯ ಹೆಸರೂ ಕೂಡ ಕೇಳಿ ಬಂದಿದೆ. ಹೀಗಾಗಿ ರಾಜ್ಯದಲ್ಲಿ ವಿಎಲ್‌ಟಿ ಮತ್ತು ಪ್ಯಾನಿಕ್‌ ಬಟನ್‌ ಖರೀದಿ ಟೆಂಡರ್‍‌ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ದೇಶದ ರಾಜಧಾನಿ ದೆಹಲಿಯಲ್ಲಿ ಬಸ್‌ಗಳ ಖರೀದಿಗೆ ಸಂಬಂಧಿಸಿದಂತೆ ಎಎಪಿ ಸರ್ಕಾರವು ಟೆಂಡರ್‌ನ ವ್ಯವಸ್ಥಾಪನಾ ಸಲಹೆಗೆ ನೇಮಕ ಮಾಡಿಕೊಂಡಿದ್ದ ದಿಲ್ಲಿ ಇಂಟಿಗ್ರೇಟೆಡ್ ಮಲ್ಟಿ- ಮಾಡಲ್ ಟ್ರಾನ್ಸಿಸ್ಟ್ ಸಿಸ್ಟಂ (ಡಿಐಎಂಟಿಎಸ್) ಸೇವೆಯನ್ನೇ ರಾಜ್ಯ ಸರ್ಕಾರವು ಪಡೆದಿತ್ತು ಎಂಬ ಮಾಹಿತಿಯು ಇದೀಗ ಸಾರಿಗೆ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

 

 

ದೆಹಲಿಯಲ್ಲಿ ಬಸ್‌ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಅಲ್ಲಿನ ಬಿಜೆಪಿ ಧುರೀಣರು ಎಎಪಿ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ಬೆಳವಣಿಗೆ ನಡುವೆಯೇ ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಅಧಿಕಾರದಲ್ಲಿದ್ದ ಅವಧಿಯಲ್ಲಿಯೇ ಲೊಕೇಷನ್‌ ಟ್ಯ್ರಾಕಿಂಗ್‌ ಮತ್ತು ಎಮರ್ಜೆನ್ಸಿ ಪ್ಯಾನಿಕ್‌ ಬಟನ್‌ ಅಳವಡಿಸುವ ಸಂಬಂಧ ಟೆಂಡರ್‍‌ ಪ್ರಕ್ರಿಯೆಯಲ್ಲಿ ಡಿಐಎಂಟಿಎಸ್‌ ಸಂಸ್ಥೆಯು ಕಾರ್ಯನಿರ್ವಹಿಸಿತ್ತು ಎಂಬುದು ಮುನ್ನೆಲೆಗೆ ಬಂದಿದೆ.

 

ಸಾರ್ವಜನಿಕ ಸೇವಾ ವಾಹನಗಳಿಗೆ ಲೊಕೇಷನ್‌ ಟ್ಯ್ರಾಕಿಂಗ್‌ ಮತ್ತು ಎಮರ್ಜೆನ್ಸಿ ಪ್ಯಾನಿಕ್‌ ಬಟನ್‌ ಅಳವಡಿಸುವ ಸಂಬಂಧ ಇದೇ  ಡಿಐಎಂಟಿಎಸ್‌ ಸಂಸ್ಥೆಯು ರಾಜ್ಯದ ಪರವಾಗಿ ಸಮಾಲೋಚಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಿತ್ತು.

 

ಈ ಕುರಿತು ‘ದಿ ಫೈಲ್‌’ ಪ್ರಕಟಿಸಿದ್ದ ಸರಣಿ ವರದಿಗಳ ಬೆನ್ನಲ್ಲೇ ಸರ್ಕಾರವು  ಟೆಂಡರ್‍‌ನ್ನು ರದ್ದುಗೊಳಿಸಿ ಆದೇಶಿಸಿದೆ. ಅಲ್ಲದೇ ಡಿಐಎಂಟಿಎಸ್‌ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸುವ ಸಂಬಂಧ ಸಾರಿಗೆ ಇಲಾಖೆಯ ಆಯುಕ್ತರಿಂದ ವರದಿ ಕೇಳಿ ಪತ್ರ ಬರೆದಿತ್ತು.

 

27 ಬಿಡ್ಡರ್‍‌ಗಳ ವಿವರಗಳನ್ನೇ ನೀಡದ ಡಿಐಎಂಟಿಎಸ್‌

 

ಹಿಂದಿನ ಸರ್ಕಾರದ ಅವಧಿಯಲ್ಲಿ ಟೆಂಡರ್‍‌ ಪ್ರಕ್ರಿಯೆಗಳು ಬಹುತೇಕ ಪೂರ್ಣಗೊಂಡಿದ್ದವು. ಇದರಲ್ಲಿ ಸಾಕಷ್ಟು ಲೋಪಗಳು ನಡೆದಿವೆ ಎಂದು ಆಟೋ ರಿಕ್ಷಾ ಚಾಲಕರ ಯೂನಿಯನ್‌ ದೂರು ಸಲ್ಲಿಸಿತ್ತು. ಇದನ್ನಾಧರಿಸಿ ಟೆಂಡರ್‍‌ ಪರಿಶೀಲನಾ ಸಮಿತಿಯು 2024ರ ಜನವರಿ 11ರಂದು ಸಭೆ ನಡೆಸಿತ್ತು.

 

ಈ ಸಭೆ ವೇಳೆಯಲ್ಲಿ ಡಿಐಎಂಟಿಎಸ್‌ ಎಸಗಿದೆ ಎನ್ನಲಾಗಿರುವ ಹಲವು ಲೋಪಗಳು ಬಹಿರಂಗಗೊಂಡಿದ್ದವು.

 

2023ರ ಫೆ.9ರಂದು ಕರೆದಿದ್ದ ಟೆಂಡರ್‍‌ನಲ್ಲಿ ಡಿಐಎಂಟಿಎಸ್‌ ಸಂಸ್ಥೆಯು 03 ಬಾರಿ ಸೇರ್ಪಡೆಗಳನ್ನು ಹೊರಡಿಸಿತ್ತು. ಆದರೆ ಈ ಸೇರ್ಪಡೆಗಳ ದಿನಾಂಕ ಮತ್ತು ಕಾರಣಗಳನ್ನು ನೀಡಿರಲಿಲ್ಲ.

 

ಅದೇ ರೀತಿ ಈ ಸಂಸ್ಥೆಯು ಭೌತಿಕ ದಾಖಲೆಗಳನ್ನು ಪರಿಶೀಲಿಸಿರುವುದಾಗಿ ನಮೂದಿಸಿದ್ದ 27 ಬಿಡ್ಡರ್‍‌ಗಳ ವಿವರಗಳನ್ನೇ ನೀಡಿರಲಿಲ್ಲ. ಹಾಗೂ ಅಂತಿಮಗೊಳಿಸಿದ್ದ 22 ಬಿಡ್ಡರ್‍‌ಗಳ ಇ-ಪ್ರೊಕ್ಯೂರ್‍‌ಮೆಂಟ್‌ಗಳ ಮುದ್ರಿತ ಪ್ರತಿಗಳನ್ನು ನೀಡಿರಲಿಲ್ಲ. 27 ಬಿಡ್ಡರ್‍‌ಗಳ ಭೌತಿಕ ದಾಖಲೆಗಳನ್ನು ಸಂಗ್ರಹಿಸಿದ್ದ ಸಿಬ್ಬಂದಿಯನ್ನೂ ಹೆಸರಿಸಿರಲಿಲ್ಲ ಎಂಬ ಸಂಗತಿಯನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದರು.

 

ಸೇರ್ಪಡೆಗಳಲ್ಲಿನ ಬದಲಾವಣೆಗಳನ್ನು ಅನುಮೋದಿಸಿದವರು ಯಾರು ಎಂಬ ವಿವರಗಳನ್ನೂ ನೀಡಿರಲಿಲ್ಲ. ಡಿಐಎಂಟಿಎಸ್‌ ಸಂಸ್ಥೆಯ ಸೇವೆಗಳನ್ನು ಪೂರ್ಣಾವಧಿಗೆ ಅಥವಾ ಅಲ್ಪಾವಧಿಗೆ ಪಡೆಯಲಾಗಿದೆಯೇ ಎಂಬ ಮಾಹಿತಿಯೂ ಸಾರಿಗೆ ಇಲಾಖೆ ಬಳಿ ಇಲ್ಲ ಎಂಬುದು ತಿಳಿದು ಬಂದಿದೆ.

ವಿಎಲ್‌ಟಿ, ಪ್ಯಾನಿಕ್‌ ಬಟನ್‌ ಅಳವಡಿಕೆ ಹಿಂದಿದೆ 1,200 ಕೋಟಿ ಹಗರಣ!; ರಾಜ್ಯದಲ್ಲೂ ದೆಹಲಿ ಮಾದರಿ ಅಕ್ರಮ?

 

ದೆಹಲಿಯಲ್ಲಿ ನಡೆದಿರುವುದೇನು?

 

ದಿಲ್ಲಿ ಸಾರಿಗೆ ನಿಗಮವು 1,000 ಕೆಳ ಮೆಟ್ಟಿಲಿನ ಬಸ್‌ಗಳನ್ನು ಖರೀದಿ ಮಾಡಿದ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ಕೇಳಿ ಬಂದಿದೆ. ಬಸ್‌ಗಳ ಖರೀದಿ ಮತ್ತು ಟೆಂಡರ್ ಕರೆದಿರುವುದು ಹಾಗೂ ಅದಕ್ಕೆ ಸಂಬಂಧಿಸಿದ ಸಮಿತಿಗೆ ದಿಲ್ಲಿ ಸಾರಿಗೆ ಸಚಿವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದರಲ್ಲಿ ಅಕ್ರಮಗಳು ನಡೆದಿವೆ ಎಂದು ಕಳೆದ ಜೂನ್‌ನಲ್ಲಿ ದೂರು ನೀಡಲಾಗಿತ್ತು.

 

ಖರೀದಿಯಲ್ಲಿ ಅಕ್ರಮಗಳನ್ನು ಎಸಗುವ ಸಲುವಾಗಿಯೇ ದಿಲ್ಲಿ ಇಂಟಿಗ್ರೇಟೆಡ್ ಮಲ್ಟಿ- ಮಾಡಲ್ ಟ್ರಾನ್ಸಿಸ್ಟ್ ಸಿಸ್ಟಂ (ಡಿಐಎಂಟಿಎಸ್) ಅನ್ನು ಟೆಂಡರ್‌ನ ವ್ಯವಸ್ಥಾಪನಾ ಸಲಹೆಗೆ ನೇಮಕ ಮಾಡಿಕೊಳ್ಳಲಾಗಿತ್ತು ಎಂದು ಸಹ ಆರೋಪಿಸಲಾಗಿದೆ. ಈ ದೂರನ್ನು ರಾಷ್ಟ್ರೀಯ ರಾಜಧಾನಿ ದಿಲ್ಲಿ ಕೇಂದ್ರಾಡಳಿತ ಪ್ರದೇಶ ಸರ್ಕಾರದ (ಜಿಎನ್‌ಸಿಟಿಡಿ) ಸಂಬಂಧಿತ ಇಲಾಖೆಗಳಿಂದ ಮುಖ್ಯ ಕಾರ್ಯದರ್ಶಿಗೆ ವರ್ಗಾಯಿಸಲಾಗಿತ್ತು.

ಪ್ಯಾನಿಕ್‌ ಬಟನ್‌ ಟೆಂಡರ್‍‌ ಅಕ್ರಮ; ಪ್ರಾಥಮಿಕ ತನಿಖೆ, ಶಿಸ್ತು ಕ್ರಮವಿಲ್ಲದೆಯೇ ಹೊಸ ಟೆಂಡರ್‍‌ಗೆ ಅನುಮೋದನೆ

ಮುಖ್ಯ ಕಾರ್ಯದರ್ಶಿಯಿಂದ ಆಗಸ್ಟ್‌ನಲ್ಲಿ ಲೆಫ್ಟಿನೆಂಟ್ ಗವರ್ನರ್ ವರದಿ ಸ್ವೀಕರಿಸಿದ್ದರು. ಟೆಂಡರ್ ಪ್ರಕ್ರಿಯೆಯಲ್ಲಿ ಗಂಭೀರ ಅವ್ಯವಹಾರ ನಡೆದಿರುವುದನ್ನು ವರದಿ ತೋರಿಸಿತ್ತು. ಇದು ಕೇಂದ್ರ ವಿಚಕ್ಷಣಾ ಆಯೋಗದ ಮಾರ್ಗಸೂಚಿಗಳು ಮತ್ತು ಸಾಮಾನ್ಯ ಹಣಕಾಸು ನಿಯಮಗಳ ಸಂಪೂರ್ಣ ಉಲ್ಲಂಘನೆ ಎಂದು ವರದಿ ತಿಳಿಸಿತ್ತು. ದೂರಿನ ಬಳಿಕ ಬಸ್‌ಗಳ ಖರೀದಿಯ ಟೆಂಡರ್ ಅನ್ನು ರದ್ದುಗೊಳಿಸಲಾಗಿತ್ತು.

 

ದೆಹಲಿ ಇಂಟಿಗ್ರೇಟೆಡ್ ಮಲ್ಟಿ-ಮೋಡಲ್ ಟ್ರಾನ್ಸಿಟ್ ಸಿಸ್ಟಮ್ (ಡಿಐಎಂಟಿಎಸ್) ಅನ್ನು ಟೆಂಡರ್‌ಗೆ ನಿರ್ವಹಣಾ ಸಲಹೆಗಾರರನ್ನಾಗಿ ನೇಮಿಸುವುದು ಖರೀದಿಯಲ್ಲಿನ ಅಕ್ರಮಗಳನ್ನು ಸುಗಮಗೊಳಿಸುವ ಉದ್ದೇಶದಿಂದ ಮಾಡಲಾಗಿದೆ ಎಂದು ಅದು ಹೇಳಿದೆ. ದೂರಿನ ಹಿನ್ನೆಲೆಯಲ್ಲಿ ಕಳೆದ ವರ್ಷ ಬಸ್ ಖರೀದಿಯ ಟೆಂಡರ್ ರದ್ದುಗೊಳಿಸಲಾಗಿತ್ತು.

 

ಲೆಫ್ಟಿನೆಂಟ್ ಗವರ್ನರ್ ಅವರು ಆಗಸ್ಟ್‌ನಲ್ಲಿ ಮುಖ್ಯ ಕಾರ್ಯದರ್ಶಿಯಿಂದ ವರದಿಯನ್ನು ಸ್ವೀಕರಿಸಿದ್ದರು. ಇದು ಟೆಂಡರ್ ಪ್ರಕ್ರಿಯೆಯಲ್ಲಿ ಗಂಭೀರ ವ್ಯತ್ಯಾಸಗಳನ್ನು ತೋರಿಸಿತ್ತು.

 

“ಕೇಂದ್ರ ಜಾಗೃತ ಆಯೋಗದ ಮಾರ್ಗಸೂಚಿಗಳು ಮತ್ತು ಸಾಮಾನ್ಯ ಹಣಕಾಸು ನಿಯಮಗಳ ಸಂಪೂರ್ಣ ಉಲ್ಲಂಘನೆಯಾಗಿದೆ” ಎಂದು ವರದಿ ಹೇಳಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿನ ವ್ಯತ್ಯಾಸಗಳನ್ನು ಅನುಮೋದಿಸಲು ಡಿಐಎಂಟಿಎಸ್‌ ಅನ್ನು ಉದ್ದೇಶಪೂರ್ವಕವಾಗಿ ಸಲಹೆಗಾರರನ್ನಾಗಿ ಮಾಡಲಾಗಿದೆ ಎಂದು ಹೇಳಿತ್ತು.

the fil favicon

SUPPORT THE FILE

Latest News

Related Posts