ಅಲ್ಪಸಂಖ್ಯಾತರ ಸಂಘಗಳಿಗೆ ಆಡಳಿತಾಧಿಕಾರಿ; ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಕಿತವಿಲ್ಲದಿದ್ದರೂ ಪ್ರಸ್ತಾವನೆ ಸಲ್ಲಿಕೆ

photo credit;stsomshekhar official twitter account

ಬೆಂಗಳೂರು; ಅಲ್ಪಸಂಖ್ಯಾತರ ಸಂಘಗಳಿಗೂ ಆಡಳಿತಾಧಿಕಾರಿ ನೇಮಕ ಸಂಬಂಧ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಕಲಂ 27(ಎ)ಗೆ ತಿದ್ದುಪಡಿ ವಿಧೇಯಕಕ್ಕೆ ಇನ್ನೂ ರಾಷ್ಟ್ರಪತಿಗಳ ಅನುಮೋದನೆ ದೊರಕದಿದ್ದರೂ ಸಹಕಾರ ಇಲಾಖೆಯು ಅಲ್ಪಸಂಖ್ಯಾತರ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ಮಾಡುವ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸುತ್ತಿರುವುದು ಇದೀಗ ಬಹಿರಂಗವಾಗಿದೆ.

 

ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಅವಕಾಶ ಸಂವಿಧಾನ ಬಾಹಿರ ಎಂದು ಕರ್ನಾಟಕ ಹೈಕೋರ್ಟ್‌ 1987ರಲ್ಲೇ ಹೊರಡಿಸಿರುವ ಆದೇಶವನ್ನು ಸರಿಪಡಿಸುವ ಹೆಸರಿನಲ್ಲಿ ಕರ್ನಾಟಕ ಸೊಸೈಟಿಗಳ ನೋಂದಣಿ (ತಿದ್ದುಪಡಿ) 27 (ಎ)ಗೆ ತಿದ್ದುಪಡಿ ವಿಧೇಯಕಕ್ಕೆ ವಿಧಾನಮಂಡಲದ ಉಭಯ ಸದನಗಳು ಒಪ್ಪಿಗೆ ನೀಡಿವೆ. ಆದರೆ ಇದುವರೆಗೂ ರಾಷ್ಟ್ರಪತಿಗಳ ಅನುಮೋದನೆ ದೊರಕಿಲ್ಲ. ಈ ಸಂಬಂಧ ಕೆಲ ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಬೆಂಗಳೂರಿನ ಸಿ ಅಂಡ್‌ ಐಜಿಎಂ ಮಿಸ್ವಾ ತೆಲುಗು ಚರ್ಚ್ ಸಂಘದಲ್ಲಿ ಕಾಲಕಾಲಕ್ಕೆ ಲೆಕ್ಕಪತ್ರಗಳನ್ನು ಸಲ್ಲಿಸಿಲ್ಲ ಎಂಬುದೂ ಸೇರಿದಂತೆ ಈ ಸಂಘದ ವಿರುದ್ಧ ಹಲವು ದೂರರ್ಜಿಗಳು ಸಹಕಾರ ಸಂಘಗಳ ನಿಬಂಧಕರಿಗೆ ಸಲ್ಲಿಕೆಯಾಗಿವೆ. ಈ ದೂರರ್ಜಿಗಳನ್ನಾಧರಿಸಿ ಆಡಳಿತಾಧಿಕಾರಿ ನೇಮಕಗೊಳಿಸುವ ಪ್ರಸ್ತಾವನೆ ಸಂಬಂಧ ಕಾನೂನು ಇಲಾಖೆ ಅಭಿಪ್ರಾಯ ಕೋರಿರುವುದು ತಿಳಿದು ಬಂದಿದೆ.

 

‘ಆಡಳಿತ ಇಲಾಖೆಯು ಕರ್ನಾಟಕ ಹೈಕೋರ್ಟ್‌ ರಿಟ್‌ ಅರ್ಜಿ ಸಂಖ್ಯೆ 15753/1983ರಲ್ಲಿ ನೀಡಿರುವ ಆದೇಶವು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆಯೇ ಅಥವಾ ಅಲ್ಪಸಂಖ್ಯಾತ ಸಂಘಗಳಿಗೂ ಅನ್ವಯಿಸುತ್ತದೇ ಎಂಬ ಬಗ್ಗೆ ಮತ್ತು ಸಿ ಅಂಡ್‌ ಐಜಿಎಂ ಮಿಸ್ಪಾ ತೆಲುಗು ಚರ್ಚ್ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಬಹುದೇ,’ ಎಂದು ಸಹಕಾರ ಇಲಾಖೆಯು ಕಾನೂನು ಇಲಾಖೆಗೆ ಅಭಿಪ್ರಾಯ ಕೋರಿ ಕಡತ ಮಂಡಿಸಿತ್ತು.

 

ಇದೇ ಕಡತದಲ್ಲಿ ‘ ಅಲ್ಪಸಂಖ್ಯಾತ ಸಂಘಗಳಿಗೂ ಆಡಳಿತಾಧಿಕಾರಿ ನೇಮಿಸಲು ಅನುವಾಗುವಂತೆ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಕಲಂ 27(ಎ)ಗೆ ತಿದ್ದುಪಡಿ ತರಲು ಪ್ರಸ್ತಾವನೆ ಮಂಡಿಸಿದ್ದು, ಉಭಯ ಸದನಗಳಲ್ಲಿ ಅನುಮೋದನೆಗೊಂಡಿರುತ್ತದೆ. ಅನುಮೋದಿತ ಮಸೂದೆಯನ್ನು ರಾಷ್ಟ್ರಪತಿಯವರ ಅನುಮೋದನೆಗೆ ಮಂಡಿಸಲಾಗಿರುತ್ತದೆ. ಹಾಗೂ ಇದುವರೆಗೂ ಮಸೂದೆಯು ರಾಷ್ಟ್ರಪತಿಯವರ ಅನುಮೋದನೆ ಆಗಿರುವುದಿಲ್ಲ,’ ಎಂದೂ ಆಡಳಿತ ಇಲಾಖೆಯಾದ ಸಹಕಾರ ಇಲಾಖೆಯು ತಿಳಿಸಿರುವುದು ಗೊತ್ತಾಗಿದೆ.

 

ರಾಷ್ಟ್ರಪತಿಯವರ ಸಹಮತಿ ನಂತರವೇ ಈ ವಿಧೇಯಕವು ಕಾನೂನಿನ ರೂಪ ಪಡೆಯುತ್ತದೆ. ತಿದ್ದುಪಡಿ ಪ್ರಸ್ತಾವನೆಯ ವಿಧೇಯಕಕ್ಕೆ ರಾಷ್ಟ್ರಪತಿಯವರ ಅಂಕಿತ ಪಡೆದುಕೊಂಡ ದಿನದಂದು ಕಾನೂನಿನ ಘೋಷಣೆಯಾಗುತ್ತದೆ. ರಾಷ್ಟ್ರಪತಿಯವರ ಅನುಮೋದನೆಗಾಗಿ ಬಾಕಿ ಇಟ್ಟಿದ್ದರೂ ಸಹ ವಿಧೇಯಕಕ್ಕೆ ರಾಷ್ಟ್ರಪತಿಯವರ ಅಂಕಿತವಾದ ನಂತರವಷ್ಟೇ ವಿಧೇಯಕವರು ಕಾನೂನಿನ ರೂಪ ಪಡೆಯುತ್ತದೆ ಎಂಬ ಅಂಶವನ್ನು ಕಾನೂನು ಇಲಾಖೆಯು ತನ್ನ ಅಭಿಪ್ರಾಯದಲ್ಲಿ ತಿಳಿಸಿರುವುದು ಗೊತ್ತಾಗಿದೆ.

 

ಈ ಹಿನ್ನೆಲೆಯಲ್ಲಿ ‘ಇ ಅಂಡ್‌ ಐಜಿಎಂ ಮಿಸ್ಪಾ ತೆಲುಗು ಚರ್ಚ್ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಕಲಂ 27(ಎ)ಗೆ ತಿದ್ದುಪಡಿ ನಂತರ ಕ್ರಮವಹಿಸಬಹುದಾಗಿದೆ,’ ಎಂದೂ ಕಾನೂನು ಇಲಾಖೆಯು ಅಭಿಪ್ರಾಯ ನೀಡಿರುವುದು ತಿಳಿದು ಬಂದಿದೆ.

 

ಸಾಮಾನ್ಯ ಸೊಸೈಟಿಗಳು ಮತ್ತು ಅಲ್ಪಸಂಖ್ಯಾತ ಸೊಸೈಟಿಗಳ ನಡುವಿನ ತಾರತಮ್ಯವನ್ನು ತೊಡೆದು ಹಾಕುವ ಉದ್ದೇಶವನ್ನು ಮುಂದಿರಿಸಿರುವ ರಾಜ್ಯ ಬಿಜೆಪಿ ಸರ್ಕಾರವು ಸಂವಿಧಾನಕ್ಕೆ ವಿರುದ್ಧವಾಗಿ ಅಲ್ಪಸಂಖ್ಯಾತರ  ಸಂಘ ಸಂಸ್ಥೆಗಳನ್ನು ಕೈವಶ ಮಾಡಿಕೊಳ್ಳಲು ಹೊರಟಿದೆ ಎಂಬ ಅಭಿಪ್ರಾಯ ಕೇಳಿ ಬಂದಿತ್ತು. ಈ ವಿಧೇಯಕವನ್ನು ಸಹಕಾರ ಇಲಾಖೆ ಸಚಿವ ಎಸ್‌ ಟಿ ಸೋಮಶೇಖರ್‌ ಮತ್ತು ಬಸವರಾಜ ಬೊಮ್ಮಾಯಿ ಅವರು ಸಮರ್ಥಿಸಿಕೊಂಡಿದ್ದರು.

 

ಲೋಪಗಳನ್ನು ಮುಂದಿರಿಸಿ ಅಲ್ಪಸಂಖ್ಯಾತರ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಪ್ರಸ್ತಾವನೆ ಹೊಂದಿರುವ ತಿದ್ದುಪಡಿ ವಿಧೇಯಕದ ಮುಖಾಂತರ ಎಲ್ಲ ಸಹಕಾರ ಸಂಘ ಸಂಸ್ಥೆಗಳನ್ನು ಇಲ್ಲಿ ಒಟ್ಟುಗೂಡಿಸಲು ಹೊರಟಿರುವ ಸರ್ಕಾರ ಮತ್ತೊಂದು ತಪ್ಪು ಹೆಜ್ಜೆಯನ್ನಿರಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

 

ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಅವಕಾಶ ಸಂವಿಧಾನ ಬಾಹಿರ ಎಂದು ಕರ್ನಾಟಕ ಹೈಕೋರ್ಟ್‌ 1987ರಲ್ಲೇ ಹೊರಡಿಸಿರುವ ಆದೇಶವನ್ನು ಸರಿಪಡಿಸುವ ಹೆಸರಿನಲ್ಲಿ ಕರ್ನಾಟಕ ಸೊಸೈಟಿಗಳ ನೋಂದಣಿ (ತಿದ್ದುಪಡಿ) 27 (ಎ)ಗೆ ತಿದ್ದುಪಡಿ ತರಲು ಪ್ರಸ್ತಾಪಿಸಿತ್ತು. ಈ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

 

ಅಲ್ಪಸಂಖ್ಯಾತರ ಸಂಘಸಂಸ್ಥೆಗಳ ಕೈವಶಕ್ಕೆ ವಿಧೇಯಕ; ಸಂವಿಧಾನ ವಿರೋಧಿ ಕೃತ್ಯ?

 

ವಿಧೇಯಕದ ಉದ್ದೇಶವೇನು?

 

 

ಸಾಮಾನ್ಯ ಸೊಸೈಟಿಗಳು ಮತ್ತು ಅಲ್ಪಸಂಖ್ಯಾತ ಸೊಸೈಟಿಗಳ ನಡುವಿನ ತಾರತಮ್ಯವನ್ನು ತೊಡೆದು ಹಾಕಲು ಮತ್ತು ಮತ್ತಷ್ಟು ವ್ಯಾಜ್ಯಗಳನ್ನು ತಪ್ಪಿಸಲು, ಸರ್ಕಾರದ ಸೊಸೈಟಿಯ ಸದಸ್ಯರ ಮತ್ತು ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶವು ವಿಧೇಯಕದಲ್ಲಿದೆ ಎಂದು ಸರ್ಕಾರ ಹೇಳಿದೆ.

 

 

ಆಡಳಿತಾಧಿಕಾರಿ ನೇಮಕ ಸಂವಿಧಾನಬಾಹಿರವೇ?

 

 

ಖುರೇಷಿ ಎಜುಕೇಷನ್‌ ಸೊಸೈಟಿ ಮತ್ತು ಇತರರ ಪ್ರಕರಣದಲ್ಲಿ ಅಲ್ಪಸಂಖ್ಯಾತ ಸಂಘಗಳಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಅವಕಾಶವು ಸಂವಿಧಾನದ ಅನುಚ್ಛೇದ 31 ಮತ್ತು 31ಎ(1)(ಬಿ) ರಲ್ಲಿ ಅಲ್ಪಸಂಖ್ಯಾತರಿಗೆ ಒದಗಿಸಿರುವ ಹಕ್ಕುಗಳಿಗೆ ವಿರುದ್ಧವಾಗಿದೆಯಲ್ಲದೆ, ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 27(ಎ) ಅಡಿ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಅವಕಾಶ ಸಂವಿಧಾನ ಬಾಹಿರ ಎಂದು ಕರ್ನಾಟಕ ಹೈಕೋರ್ಟ್‌ 1987ರಲ್ಲೇ ಆದೇಶಿಸಿತ್ತು.

 

 

‘ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 27(ಎ)ರಡಿ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಅವಕಾಶವನ್ನು ನ್ಯಾಯಾಲಯವು ಸಂವಿಧಾನಬಾಹಿರವೆಂದು Struck down ಮಾಡಿ 1987ರಲ್ಲೇ ಆದೇಶಿಸಿರುವ ಹಿನ್ನೆಲೆಯಲ್ಲಿ ಸರ್ಕಾರವು ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೂ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಅನುವಾಗುವಂತೆ ಸಂಘಗಳ ನೋಂದಣಿ ಅಧಿನಿಯಮ, 1960ರ ಪ್ರಕರಣ 27(ಎ)ಗೆ ತಿದ್ದುಪಡಿ ಮಾಡುವ ಅಗತ್ಯವಿದೆ,’ ಎಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಅವರು ಸಚಿವ ಸಂಪುಟದ ಮುಂದೆ ಪ್ರಸ್ತಾಪಿಸಿದ್ದರು.

 

 

ತಿದ್ದುಪಡಿ ನಂತರ ನಿಯಮದಲ್ಲೇನಿರುತ್ತೆ?

 

 

ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಲ್ಲಿನ ವ್ಯಾಜ್ಯಗಳು ಇತ್ಯರ್ಥಗೊಳ್ಳದೇ ಬಾಕಿ ಇದ್ದಲ್ಲಿ ಅಥವಾ ವಾರ್ಷಿಕ ಮಹಾಸಭೆಗಳನ್ನು ನಡೆಸದೇ ಇದ್ದ ಪಕ್ಷದಲ್ಲಿ ಸೆಕ್ಷನ್‌ 27(ಎ) ತಿದ್ದುಪಡಿ ಪ್ರಕಾರ ಆಡಳಿತಾಧಿಕಾರಿ ನೇಮಿಸಬಹುದು. ಸಂಘದ ಪದಾಧಿಕಾರಿಗಳು ಅಥವಾ ಆಡಳಿತ ಮಂಡಳಿಯ ಅವಧಿ ಪೂರ್ಣಗೊಂಡ ಬಳಿಕವೂ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರದೇ ಇದ್ದಲ್ಲಿ ಮತ್ತು ಸಹಕಾರ ಸಂಘಗಳ ರಿಜಿಸ್ಟ್ರಾರ್‌ ವಿಚಾರಣೆಗೆ ಆದೇಶಿಸಿದ್ದರೆ ಸಾರ್ವಜನಿಕ ಹಿತಾಸಕ್ತಿ ಅನ್ವಯ ಆಡಳಿತಾಧಿಕಾರಿ ನೇಮಿಸಬಹುದು.

 

 

ಅಲ್ಲದೆ ಸೊಸೈಟಿಯ ಹೊಣೆಗಾರಿಕೆಗಳು ಯಾವುದಾದರೂ ಇದ್ದಲ್ಲಿ ಅವುಗಳನ್ನು ಇತ್ಯರ್ಥಗೊಳಿಸಿದ ತರುವಾಯ ರಾಜ್ಯ ಸರ್ಕಾರವು ಅದರ ಚರ ಅಥವಾ ಸ್ಥಿರ ಸ್ವತ್ತುಗಳನ್ನು ವೈಯಕ್ತಿಕ ಅಥವಾ ಬದಲಾಳುವಿನ ಮೂಲಕ ಹಾಜರಿರುವ ಸದಸ್ಯರ ಐದನೇ ಮೂರರಷ್ಟು ಕಡಿಮೆಯಲ್ಲದ ಮತಗಳ ಮೂಲಕ ನಿರ್ಧರಿಸಬೇಕಾದ ಏಕರೂಪದ ಅಥವಾ ಅದೇ ರೀತಿಯ ಉದ್ದೇಶಗಳುಳ್ಳ ಯಾವುದೇ ಇತರ ಸೊಸೈಟಿಗೆ ವಹಿಸಬಹುದು.

 

 

‘ಕರ್ನಾಟಕ ಸಂಘಗಳ ಅಧಿನಿಯಮ 1960ರ ಪ್ರಕರಣ 27(ಎ)ಗೆ ಸೂಕ್ತ ತಿದ್ದುಪಡಿ ತಂದು ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೂ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಅನುವಾಗುವಂತೆ ಕಾಯ್ದೆಯಲ್ಲಿ ಈಗಿರುವ ಲೋಪವನ್ನು ತಿದ್ದುಪಡಿ ಮೂಲಕ ಸರಿಪಡಿಸುವುದು ಸರ್ಕಾರದ ಹೊಣೆಗಾರಿಕೆ. ಆಡಳಿತಾಧಿಕಾರಿ ನೇಮಕಾತಿ ವಿಷಯದಲ್ಲಿ ಸಾಮಾನ್ಯ ಮತ್ತು ಅಲ್ಪಸಂಖ್ಯಾತ ಸಂಘ ಸಂಸ್ಥೆಗಳನ್ನು ಪ್ರತ್ಯೇಕಿಸಿ ನೋಡುವುದನ್ನು ತಪ್ಪಿಸಬಹುದಾಗಿರುತ್ತದೆ,’ ಎಂದು ತಿದ್ದುಪಡಿಯನ್ನು ಸಮರ್ಥಿಸಿಕೊಂಡಿರುವುದು ದಾಖಲೆಯಿಂದ ತಿಳಿದು ಬಂದಿದೆ.

 

ಅಲ್ಪಸಂಖ್ಯಾತರ ಸಂಘ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿ ನೇಮಕ ಸರಿಯಲ್ಲ. ವಿಧೇಯಕಕ್ಕೆ ತಿದ್ದುಪಡಿ ತಂದರೆ ಅಲ್ಪಸಂಖ್ಯಾತರ ಸೌಲಭ್ಯಗಳನ್ನು ಮೊಟಕುಗೊಳಿಸಿದಂತಾಗುತ್ತದೆ. ಈ ಸಮುದಾಯದಲ್ಲಿ ಶಿಕ್ಷಣ, ಉದ್ಯೋಗ ಹೊಂದಿರುವವರ ಸಂಖ್ಯೆ ಕಡಿಮೆ ಇದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.12.91ರಷ್ಟು ಅಲ್ಪಸಂಖ್ಯಾತರಿದ್ದಾರೆ. ಬೇರೆ ಸಮುದಾಯಕ್ಕೆ ಹೋಲಿಸಿದಲ್ಲಿ ಅಲ್ಪಸಂಖ್ಯಾತ ಸಮುದಾಯ ಎಲ್ಲಾ ವಲಯಗಳಲ್ಲೂ ಹಿಂದುಳಿದಿದೆ. ಸಂಘ ಸಂಸ್ಥೆಗಳು ಸಮುದಾಯದ ಏಳ್ಗೆಗಾಗಿ ದುಡಿಯುತ್ತಿವೆ. ಸಣ್ಣ ಪುಟ್ಟ ಲೋಪದೋಷಗಳನ್ನು ಸರಿಪಡಿಸಬೇಕೇ ವಿನಃ ಆಡಳಿತಾಧಿಕಾರಿಗಳನ್ನು ನೇಮಿಸುವ ಮೂಲಕ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳನ್ನು ತಮ್ಮ ಕೈವಶ ಮಾಡಿಕೊಳ್ಳಬಾರದು ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

 

ವಿಶೇಷವೆಂದರೆ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ಅಧಿನಿಯಮ ತಿದ್ದುಪಡಿಗೆ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ಚಾಲನೆ ದೊರೆತಿತ್ತು. 2016ರಲ್ಲಿದ್ದ ರಾಜ್ಯದ ಅಡ್ವೋಕೇಟ್‌ ಜನರಲ್‌ ಅವರು ಸೆಕ್ಷನ್‌ 27(ಎ)ಗೆ ತಿದ್ದುಪಡಿ ಅಗತ್ಯವಿದೆ ಮತ್ತು ಈ ತಿದ್ದುಪಡಿಗೆ ರಾಷ್ಟ್ರಪತಿಗಳ ಅನುಮೋದನೆಗೆ ಕಾಯ್ದಿರಿಸಬೇಕಾಗುತ್ತದೆ ಎಂದು 2016ರ ಮೇ 17ರಂದು ಕಡತದಲ್ಲಿ ಅಭಿಪ್ರಾಯಿಸಿದ್ದರು ಎಂಬುದು ಲಭ್ಯವಿರುವ ದಾಖಲೆಯಿಂದ ತಿಳಿದು ಬಂದಿದೆ.

 

 

ಖುರೇಷಿ ಎಜುಕೇಷನ್‌ ಸೊಸೈಟಿ ಮತ್ತು ಇತರರ ಪ್ರಕರಣದಲ್ಲಿ ಅಲ್ಪಸಂಖ್ಯಾತ ಸಂಘಗಳಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಅವಕಾಶವು ಸಂವಿಧಾನದ ಅನುಚ್ಛೇದ 31 ಮತ್ತು 31ಎ(1)(ಬಿ) ರಲ್ಲಿ ಅಲ್ಪಸಂಖ್ಯಾತರಿಗೆ ಒದಗಿಸಿರುವ ಹಕ್ಕುಗಳಿಗೆ ವಿರುದ್ಧವಾಗಿದೆಯಲ್ಲದೆ, ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 27(ಎ) ಅಡಿ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಅವಕಾಶ ಸಂವಿಧಾನ ಬಾಹಿರ ಎಂದು ಕರ್ನಾಟಕ ಹೈಕೋರ್ಟ್‌ 1987ರಲ್ಲೇ ಆದೇಶಿಸಿತ್ತು.

 

 

‘ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 27(ಎ)ರಡಿ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಅವಕಾಶವನ್ನು ನ್ಯಾಯಾಲಯವು ಸಂವಿಧಾನಬಾಹಿರವೆಂದು Struck down ಮಾಡಿ 1987ರಲ್ಲೇ ಆದೇಶಿಸಿರುವ ಹಿನ್ನೆಲೆಯಲ್ಲಿ ಸರ್ಕಾರವು ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೂ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಅನುವಾಗುವಂತೆ ಸಂಘಗಳ ನೋಂದಣಿ ಅಧಿನಿಯಮ, 1960ರ ಪ್ರಕರಣ 27(ಎ)ಗೆ ತಿದ್ದುಪಡಿ ಮಾಡುವ ಅಗತ್ಯವಿದೆ,’ ಎಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಅವರು ಸಚಿವ ಸಂಪುಟದ ಮುಂದೆ ಪ್ರಸ್ತಾಪಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts