ಬೌದ್ಧ,ಜೈನ ಧರ್ಮಗಳ ಉದಯಕ್ಕೆ ಸಾಮಾಜಿಕ ಕಾರಣಗಳ ಮುಂದಿರಿಸುವುದೇ ಅಸಂಬದ್ಧವೆಂದ ಚಕ್ರತೀರ್ಥ ಸಮಿತಿ

ಬೆಂಗಳೂರು; ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕದ 4. 2 ರಲ್ಲಿದ್ದ ಹೊಸ ಧರ್ಮಗಳ ಉದಯ ಅಧ್ಯಾಯದಲ್ಲಿ ಬೌದ್ಧ ಜೈನ ದರ್ಶನಗಳ ಉದಯಕ್ಕೆ ಸಾಮಾಜಿಕ ಕಾರಣಗಳನ್ನು ಮುಂದೆ ಮಾಡುವುದು ಅಸಂಬದ್ಧ, ಇಂಥ ಕಾರಣಗಳನ್ನು ಯಾವುದೇ ಮೂಲ ಬೌದ್ಧ, ಜೈನ ಧಾರ್ಮಿಕ ಗ್ರಂಥಗಳಲ್ಲಿ ಕಾಣುವುದಿಲ್ಲ. ಒಂದು ವೇಳೆ ಇದ್ದರೆ ಪಠ್ಯಪುಸ್ತಕ ರಚನಾಕಾರರೇ ತೋರಿಸಬೇಕು ಎಂದೂ ರೋಹಿತ್‌ ಚಕ್ರತೀರ್ಥ ವರದಿಯಲ್ಲಿ ಸವಾಲು ಹಾಕಿರುವುದು ಇದೀಗ ಬಹಿರಂಗವಾಗಿದೆ.

 

ದ್ವಿತೀಯ ಪಿಯು ಪಠ್ಯ ಪರಿಷ್ಕರಣೆಯೂ ಇಲ್ಲ ಮತ್ತು ಚಕ್ರತೀರ್ಥ ಸಮಿತಿಗೆ ನೀಡಿದ್ದ ಜವಾಬ್ದಾರಿಯನ್ನೂ ಹಿಂಪಡೆದಿದೆ ಎಂದು ಸಚಿವ ಬಿ ಸಿ ನಾಗೇಶ್‌ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಚಕ್ರತೀರ್ಥ ಸಮಿತಿಯು ಪರಿಷ್ಕರಿಸಲು ವರದಿಯಲ್ಲಿ ನೀಡಿದ್ದ ಅಭಿಪ್ರಾಯವು ಮುನ್ನೆಲೆಗೆ ಬಂದಿದೆ. ವರದಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವೈದಿಕ ಸಂಸ್ಕೃತಿಯ ಕುರಿತು ಆಕ್ಷೇಪಣೆ ವ್ಯಕ್ತಪಡಿಸಿದ್ದ ಚಕ್ರತೀರ್ಥ ಸಮಿತಿಯು ಹೊಸ ಧರ್ಮಗಳ ಉದಯ ಅಧ್ಯಾಯದಲ್ಲಿನ ಪಾಠಾಂಶದ ಬಗ್ಗೆಯೂ ಹಲವು ತಕರಾರು ಎತ್ತಿದೆ.

 

‘ಸಾಶಪೂ 6ನೇ ಶತಮಾನದಲ್ಲಿ ಭಾರತ ಸಮಾಜದಲ್ಲಿದ್ದ ಧಾರ್ಮಿಕ ಮತ್ತು ಸಾಮಾಜಿಕ ಶೋಷಣೆಯ ವಿರುದ್ಧ ಪ್ರತಿಭಟನೆಯನ್ನು ಕಂಡಿತು. ಜಾತಿಪದ್ಧತಿ, ಅನ್ಯಾಯ, ಕಠಿಣವಾದ ಆಚರಣೆಗಳ ವಿರುದ್ಧ ಒಂದು ಚಳವಳಿ ನಡೆಯಿತು. ಸರಳ ಧರ್ಮ ಮತ್ತು ಆಧ್ಯಾತ್ಮಿಕ ಕ್ರಮವು ಅಂದಿನ ಕಾಲದ ಅಗತ್ಯವಾಗಿದ್ದು, ಇದನ್ನು ಮಹಾವೀರ ಮತ್ತು ಬುದ್ಧ ಬಹುಮಟ್ಟಿಗೆ ಈಡೇರಿಸಿದರು. ಹೊಸ ಧರ್ಮಗಳು ಬೋಧಿಸಿದ ಸರಳ ಮುಕ್ತಿ ಮಾರ್ಗದಿಂದ ಸಾಮಾನ್ಯರು ಹೊಸ ಧರ್ಮಗಳತ್ತ ಆಕರ್ಷಿಸಲ್ಪಟ್ಟರು ಇಲ್ಲಿಯವರೆಗಿನ ಭಾಗವನ್ನು ಸಂಪೂರ್ಣವಾಗಿ ಕೈಬಿಡಬೇಕಿದೆ,’ ಎಂದು ವರದಿಯಲ್ಲಿ ಶಿಫಾರಸ್ಸು ಮಾಡಿದ್ದರು.

 

ಈ ಭಾಗವು ತಪ್ಪು ಮಾಹಿತಿಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳಲ್ಲಿ ತಪ್ಪು ಅಭಿಪ್ರಾಯಗಳನ್ನು ಬಿತ್ತುತ್ತದೆ. ಸಮಾಜದ ಕೆಲವು ಸಮುದಾಯಗಳ ವಿರುದ್ಧ ಪೂರ್ವಗ್ರಹಗಳನ್ನು ಬೆಳೆಸುತ್ತದೆ. ಅಧ್ಯಾಯದ ಮುಖ್ಯ ಸಂಬಂಧಿಸಿಲ್ಲ ಎಂದು ಸಮಿತಿಯು ಅಭಿಪ್ರಾಯಿಸಿರುವುದು ವರದಿಯಿಂದ ಗೊತ್ತಾಗಿದೆ.

 

‘ಬೌದ್ಧ, ಜೈನ ದರ್ಶನಗಳಂತೆಯೇ ಸಾಂಕ್ಯ, ಯೋಗ, ವೈಶೇಷಿಕ, ಚಾರ್ವಾಕ ಮುಂತಾದ ಅನೆಕ ದರ್ಶನಗಳೂ ಅದ್ವೈತ, ವಿಶಿಷ್ಟಾದ್ವೈತ, ದ್ವೈತ ಮುಂತಾದ ಮತಗಳೂ ವೈದಿಕ ಸಾಹಿತ್ಯವನ್ನು ಒಪ್ಪಿ, ಆಂಶಿಕವಾಗಿ ಒಪ್ಪಿ, ಆಂಶಿಕವಾಗಿ ವಿರೋಧಿಸಿ ಬಹ್ವಂಶ ವಿರೋಧಿಸಿ ಬೆಳೆದು ಬಂದವು. ಇವು ಯಾವುವೂ ವೇದ ಅಥವಾ ವೇದ ಸಂಸ್ಕೃತಿಯಿಂದ ಸಿಡಿದು ಬೇರೆಯಾದ ದರ್ಶನ/ಪಂಥ/ಮತಗಳಲ್ಲ. ಹಾಗಾಗಿ ಬೌದ್ಧ, ಜೈನ ದರ್ಶನಗಳ ಉದಯಕ್ಕೆ ಸಾಮಾಜಿಕ ಕಾರಣಗಳನ್ನು ಮುಂದೆ ಮಾಡುವುದು ಅಸಂಬದ್ಧ. ಇಂಥ ಕಾರಣಗಳನ್ನು ನಾವು ಯಾವುದೇ ಮೂಲ ಬದ್ಧ, ಜೈನ ಧಾರ್ಮಿಕ ಗ್ರಂಥಗಳಲ್ಲಿ ಕಾಣುವುದಿಲ್ಲ ಅಂಥವಿದ್ದರೆ ಪಠ್ಯಪುಸ್ತಕ ರಚನಕಾರರು ತೋರಿಸಬಹುದು. ಸಾಮಾಜಿಕ ಕಾರಣಗಳಿಗಾಗಿ ಜೈನ, ಬೌದ್ಧ ಧರ್ಮಗಳು ಹುಟ್ಟಿದವು ಎಂಬುದು ಕೇವಲ 150 ವರ್ಷಗಳಿಂದ ಈಚೆಗೆ ಸೃಷ್ಟಿಯಾಗಿರುವ (ಮುಖ್ಯವಾಗಿ ಇಂಡಾಲಜಿ ಶಾಸ್ತ್ರಜ್ಞರಿಂದ) ಒಂದು ಸಿದ್ಧಾಂತ,’ ಎಂದು ಚಕ್ರತೀರ್ಥ ಸಮಿತಿಯು ವರದಿಯಲ್ಲಿ ವಿವರಿಸಿದೆ.

 

ಹೊಸ ಧರ್ಮಗಳ ಉದಯಕ್ಕೆ ವೈದಿಕ ಧರ್ಮದಲ್ಲಿನ ಗೊಂದಲಗಳು ಸೇರಿದಂತೆ ಒಟ್ಟು 7 ಅಂಶಗಳನ್ನು ಡಾ ಗಾಯತ್ರಿದೇವಿ ಎ ಎಚ್‌ ಅಧ್ಯಕ್ಷತೆಯಲ್ಲಿ ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕ ಅಭಿವೃದ್ಧಿ ಸಮಿತಿಯು ಪಠ್ಯದಲ್ಲಿ ಸೇರಿಸಿತ್ತು. ಜೈನ ಧರ್ಮ, ವರ್ಧಮಾನ ಮಹಾವೀರನ ಆರಂಭಿಕ ಜೀವನ, ಬೋಧನೆಗಳು, ಪಂಚಶೀಲ ತತ್ವಗಳು, ತ್ರಿರತ್ನಗಳು, ಜೈನ ಧರ್ಮದ ಪ್ರಸಾರ, ಜೈನ ಸಭೆಗಳು, ಜೈನಧರ್ಮದ ಪಂಗಡಗಳು, ಜೈನ ಸಾಹಿತ್ಯ, ಕಲೆ, ಸಾಹಿತ್ಯಕ್ಕೆ ಜೈನ ಧರ್ಮದ ಕೊಡುಗೆ, ಬೌದ್ಧ ಧರ್ಮ, ಗೌತಮ ಬುದ್ಧ, ಬುದ್ಧನ ಬೋಧನೆಗಳು, ಬೌದ್ಧ ಧರ್ಮದ ಪ್ರಸಾರ ಮತ್ತು ಕಾರಣಗಳು, ಬೌದ್ಧ ಧರ್ಮ ಸಮ್ಮೇಳನಗಳು, ಸಾಹಿತ್ಯ, ಕೊಡುಗೆಗಳು ಕುರಿತು ಪಠ್ಯದಲ್ಲಿ ಅಳವಡಿಸಲಾಗಿತ್ತು.

 

ಪದವಿಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಇತಿಹಾಸ ವಿಭಾಗಕ್ಕೆ ನಿಗದಿಪಡಿಸಿದ ಭಾರತದ ಇತಿಹಾಸ (ಕರ್ನಾಟಕ ವಿಶೇಷ ಉಲ್ಲೇಖದೊಂದಿಗೆ) ಪಠ್ಯಪುಸ್ತಕದ 4.2ನೇ ಅಧ್ಯಾಯ ಹೊಸ ಧರ್ಮಗಳ ಉದಯ ಪಠ್ಯಭಾಗದಲ್ಲಿ ನಿರ್ದಿಷ್ಟ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುವಂತಹ ವಿಷಯವಿರುವ ಬಗ್ಗೆ ಸಚಿವ ಬಿ ಸಿ ನಾಗೇಶ್‌ ಅವರಿಗೆ ದೂರು ಸಲ್ಲಿಕೆಯಾಗಿತ್ತು.

 

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸಮಾಜ ಅಧ್ಯಯನ ಪಠ್ಯಪುಸ್ತಕದ ಪರಿಶೀಲನೆಗಾಗಿ ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ರಚನೆಯಾಗಿರುತ್ತದೆ. ದ್ವಿತೀಯ ಪಿಯುನ ಇತಿಹಾಸ ಪಠ್ಯಪುಸ್ತಕದ 4.2 ಅಧ್ಯಾಯವನ್ನು ಪರಿಶೀಲಿಸಿ ಸೂಕ್ತವಾಗಿ ಪರಿಷ್ಕರಿಸಲು ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿಗೆ ವಹಿಸಲು ಹಾಗೂ ಈ ಪರಿಷ್ಕೃತ ಪಠ್ಯಪುಸ್ತಕವನ್ನು 2022-23ನೇ ಸಾಲಿನಲ್ಲಿ ಮುದ್ರಣ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು,’ ಎಂದು ಸಚಿವ ಬಿ ಸಿ ನಾಗೇಶ್‌ ಅವರು ಟಿಪ್ಪಣಿಯಲ್ಲಿ ಸೂಚಿಸಿದ್ದರು. ಇದನ್ನು ‘ದಿ ಫೈಲ್‌’ ಮತ್ತು ವಾರ್ತಾಭಾರತಿ 2022ರ ಮೇ 23ರಂದೇ ಬಹಿರಂಗಗೊಳಿಸಿತ್ತು. ನಂತರ ಸರ್ಕಾರವು ಪಿಯು ಪಠ್ಯ ಪರಿಷ್ಕರಣೆ ನಿರ್ಧಾರವನ್ನೂ ಹಿಂಪಡೆದಿತ್ತು.

 

ಭಾರತದ ಇತಿಹಾಸ ಹಾಗೂ ಕರ್ನಾಟಕದ ಇತಿಹಾಸವನ್ನು ಬೇರೆಬೇರೆಯಾಗಿ 180 ಘಂಟೆಗಳ ಅವಧಿಯಲ್ಲಿ ಅಭ್ಯಾಸ ಮಾಡಲಾಗುತ್ತಿತ್ತು. ಅಧರೆ ಇವರೆಡನ್ನೂ ಒಗ್ಗೂಡಿಸಿ 120 ಘಂಟೆಗಳ ಪರಿಮಿತಿಯೊಳಗೆ ತರಲಾಗಿತ್ತು. ಬೆಂಗಳೂರಿನ ಮಲ್ಲೇಶ್ವರಂ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ ಗಾಯತ್ರಿದೇವಿ ಎ ಎಚ್‌ ಅಧ್ಯಕ್ಷತೆಯಲ್ಲಿ ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕ ಅಭಿವೃದ್ಧಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಯಲ್ಲಿ 12 ಮಂದಿ ಸದಸ್ಯರಿದ್ದರು.

 

ಈ ಸಮಿತಿಯು ರಚಿಸಿದ್ದ ಪಠ್ಯಕ್ರಮವನ್ನು ಹೊನ್ನಾವರ ತಾಲೂಕಿನ ಕವಲಕ್ಕಿಯ ಸುಬ್ರಹ್ಮಣ್ಯ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್‌ ಜಿ ಭಟ್‌, ಗುಲ್ಬರ್ಗಾದ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಆರ್‌ ಬಿ ಸಂಭಾ, ಬೆಳಗಾವಿಯ ಸರ್ಕಾರಿ ಸರದಾರ್ಸ್‌ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸಿ ಜಿ ಮಠಪತಿ ನೇತೃತ್ವದ ಸಮಿತಿಯು ಪರಿಶೀಲಿಸಿತ್ತು.

the fil favicon

SUPPORT THE FILE

Latest News

Related Posts