ದಲಿತ ಮಹಿಳೆಗೆ ಅವಮಾನ ಪ್ರಕರಣ; ಕೆಎಟಿ ಸದಸ್ಯ ಶಿವಶೈಲಂ, ಕೆಪಿಎಸ್ಸಿ ನ್ಯಾಯವಾದಿಗೆ ನೋಟೀಸ್‌

photo credit; vijayakarnataka

ಬೆಂಗಳೂರು; ‘ಕೆ ಆರ್ ಮಾರುಕಟ್ಟೆಯ ಪರಿಶಿಷ್ಟ ಜಾತಿಯ ಮಹಿಳೆ’ ಎಂದು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ತೆರೆದ ನ್ಯಾಯಾಲಯದಲ್ಲಿ ದಲಿತ ಮಹಿಳಾ ಅರ್ಜಿದಾರರಿಗೆ ಜಾತಿ ಸಂಬಂಧ ಅವಹೇಳನಕಾರಿ ಪದ ಬಳಸಿ ಅವಮಾನಗೊಳಿಸಿ ದೌರ್ಜನ್ಯವೆಸಗಿದ್ದಾರೆ ಎಂಬ ಪ್ರಕರಣವು ಮರು ಜೀವ ಪಡೆದುಕೊಂಡಿದೆ.

 

ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗದ ಹಿರಿಯ ನ್ಯಾಯವಾದಿ ಮತ್ತು ಕರ್ನಾಟಕ ಆಡಳಿತ ನ್ಯಾಯಮಂಡಳಿ ಸದಸ್ಯರಾದ ಎನ್‌ ಶಿವಶೈಲಮ್‌, ಹಲಸೂರು ಗೇಟ್‌ ಪೊಲೀಸ್‌ ಠಾಣೆಯ ಸಹಾಯಕ ಪೊಲೀಸ್‌ ಆಯುಕ್ತರದ ನಜ್ಮಾ ಫಾರೂಕ್‌ ಅವರಿಗೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಆಯೋಗವು 2022ರ ಜನವರಿ 25ರಂದು ನೋಟೀಸ್‌ ಜಾರಿಗೊಳಿಸಿದೆ. ಈ ನೋಟೀಸ್‌ನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕರ್ನಾಟಕ ಲೋಕಸೇವಾ ಆಯೋಗದ ಹಿರಿಯ ನ್ಯಾಯವಾದಿ ಮತ್ತು ಕರ್ನಾಟಕ ಆಡಳಿತ ನ್ಯಾಯಮಂಡಳಿ ಸದಸ್ಯರಾದ ಎನ್‌ ಶಿವಶೈಲಮ್‌ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಮತ್ತು ತನಿಖೆ ನಡೆಸಲು ನ್ಯಾಯಾಧೀಶರ ಸಂರಕ್ಷಣಾ ಅಧಿನಿಯಮ 1985’ರ ಕಲಂ 3 ಅಡಿಯಲ್ಲಿ ಅವಕಾಶ ಇರುವುದಿಲ್ಲ ಎಂದು ದೂರರ್ಜಿಯನ್ನು ಪೊಲೀಸ್‌ ಅಧಿಕಾರಿಗಳು ಮುಕ್ತಾಯಗೊಳಿಸಿದ್ದರ ಬೆನ್ನಲ್ಲೇ ಆಯೋಗವು ನೀಡಿರುವ ನೋಟೀಸ್‌ ಮುನ್ನೆಲೆಗೆ ಬಂದಿದೆ.

 

‘ಪಿ ಎಸ್‌ ರಾಜಗೋಪಾಲ್‌ (ಕೆಪಿಎಸ್‌ಸಿ ಪ್ಯಾನಲ್‌ ವಕೀಲರು,) ಎನ್‌ ಶಿವಶೈಲಮ್‌ (ಸದಸ್ಯರು, ಕರ್ನಾಟಕ ಆಡಳಿತ ನ್ಯಾಯಮಂಡಳಿ) ಅವರು ಅರ್ಜಿದಾರರಾದ ಲೀಲಾವತಿ ಟಿ ಎಂಬುವರಿಗೆ ಜಾತಿ ಸಂಬಂಧ ಅವಹೇಳನಕಾರಿ ಪದ ಬಳಸಿ ಅವಮಾನಿಸಿ ದೌರ್ಜನ್ಯವೆಸಗಿರುವ ಕುರಿತು 2022ರ ಜನವರಿ 17ರಂದು ದೂರು ಸಲ್ಲಿಸಿದ್ದಾರೆ. ಈ ಕುರಿತು ವಿಚಾರಣೆ ಮಾಡಲು ಆಯೋಗವು ತೀರ್ಮಾನಿಸಿರುವುದರಿಂದ ನೋಟಿಸ್‌ ಸ್ವೀಕರಿಸಿದ 15 ದಿನದ ಒಳಗಾಗಿ ಆಪಾದನೆಗಳ ಸಂಬಂಧ ಕೈಗೊಂಡ ಕ್ರಮದ ಕುರಿತು ಸಂಗತಿಗಳು ಮತ್ತು ಮಾಹಿತಿ ಸಲ್ಲಿಸಬೇಕು,’ ಎಂದು ಆಯೋಗದ ಕಾರ್ಯದರ್ಶಿ ನೋಟೀಸ್‌ನಲ್ಲಿ ತಿಳಿಸಿದ್ದಾರೆ.

 

ಅಲ್ಲದೆ ನಿಗದಿತ ಕಾಲದೊಳಗೆ ಉತ್ತರವನ್ನು ಆಯೋಗವು ಸ್ವೀಕರಿಸಿಲ್ಲದ ಪ್ರಕರಣದಲ್ಲಿ ಆಯೋಗವು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಅಯೋಗದ ಅಧಿನಿಯಮದ ಮೇರೆಗೆ ತನಗೆ ಪ್ರದತ್ತವಾದ ಸಿವಿಲ್‌ ನ್ಯಾಯಾಲಯಗಳ ಅಧಿಕಾರಗಳನ್ನು ಚಲಾಯಿಸಬಹುದು ಮತ್ತು ಆಯೋಗದ ಮುಂದೆ ಖುದ್ದಾಗಿ ಅಥವಾ ಪ್ರತಿನಿಧಿಯಿ ಮೂಲಕ ಹಾಜರಾಗಲು ಸಮನ್ಸ್‌ ನೀಡಲಾಗಿದೆ ಎಂಬ ನೋಟೀಸ್‌ ತೆಗೆದುಕೊಳ್ಳಬೇಕು ಎಂದೂ ಸೂಚಿಸಿದೆ. ನೋಟೀಸ್‌ ಜಾರಿಗೊಳಿಸಲು ಆಯೋಗದ ಅಧ್ಯಕ್ಷ ನೆಹರೂ ಓಲೆಕಾರ್‌ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

 

ಅನುಸೂಚಿತ ಜಾತಿ , ಅನುಸೂಚಿತ ಪಂಗಡಗಳ ಆಯೋಗ ನೀಡಿರುವ ನೋಟಿಸ್‌ ಪ್ರತಿ

 

1998ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಅರ್ಜಿ ವಿಚಾರಣೆ ಸಂದರ್ಭದಲ್ಲಿ ‘ಕೆ ಆರ್ ಮಾರುಕಟ್ಟೆಯ ಪರಿಶಿಷ್ಟ ಜಾತಿಯ ಮಹಿಳೆ’ ಎಂದು ತೆರೆದ ನ್ಯಾಯಾಲಯದಲ್ಲಿ ದಲಿತ ಮಹಿಳೆಯ ಅರ್ಜಿದಾರಳನ್ನು ಜರಿದಿದ್ದಾರೆ ಎಂದು ಆರೋಪಿಸಿ ತುಮಕೂರಿನ ಲೀಲಾವತಿ ಎಂಬುವರು ಹಲಸೂರು ಗೇಟ್‌ ಪೊಲೀಸ್‌ ಠಾಣೆಗೆ 2021ರ ಡಿಸೆಂಬರ್‌ 22ರಂದು ದೂರು ಸಲ್ಲಿಸಿದ್ದನ್ನು ಸ್ಮರಿಸಬಹುದು.

 

ಈ ದೂರರ್ಜಿಯನ್ನು ಪರಿಶೀಲಿಸಿರುವ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಅವರು ‘ವಿಚಾರಣೆ ಸಮಯದಲ್ಲಿ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಉಂಟಾಗುವ ಯಾವುದೇ ಕೃತ್ಯಗಳ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲು ‘ನ್ಯಾಯಾಧೀಶರ ಸಂರಕ್ಷಣಾ ಅಧಿನಿಯಮ 1985’ರ ಕಲಂ 3 ಅಡಿಯಲ್ಲಿ ಅವಕಾಶ ಇರುವುದಿಲ್ಲ ಎಂದು ಹಿಂಬರಹ ನೀಡಿದ್ದರು. ಹೀಗಾಗಿ ಲೀಲಾವತಿ ಅವರು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಮೊರೆ ಹೊಕ್ಕಿದ್ದರು.

 

ಹಿಂಬರಹದಲ್ಲೇನಿತ್ತು?

 

ಕರ್ನಾಟಕ ಆಡಳಿತ ಮಂಡಳಿಯ ಸದಸ್ಯರು ‘ನ್ಯಾಯಾಧೀಶರ ಸಂರಕ್ಷಣಾ ಅಧಿನಿಯಮ 1985,’ರ ಅಡಿಯಲ್ಲಿ ಬರುವ ನ್ಯಾಯಾಧೀಶ ಪದದ ವ್ಯಾಪ್ತಿಗೆ ಒಳಪಡುವ ಅಧಿಕಾರಿಯಾಗಿರುತ್ತಾರೆ. ವಿಚಾರಣೆ ಸಮಯದಲ್ಲಿ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಉಂಟಾಗುವ ಯಾವುದೇ ಕೃತ್ಯಗಳ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲು ‘ನ್ಯಾಯಾಧೀಶರ ಸಂರಕ್ಷಣಾ ಅಧಿನಿಯಮ 1985’ರ ಕಲಂ 3 ಅಡಿಯಲ್ಲಿ ಅವಕಾಶ ಇರುವುದಿಲ್ಲ ಎಂದು ಹಿಂಬರಹದಲ್ಲಿ ಹೇಳಲಾಗಿತ್ತು.

 

ಅದೇ ರೀತಿ Scheduled caste women from K R Market ಎಂದು ಸಂಬೋಧಿಸಿ ಅವಮಾನ ಮಾಡಿರುತ್ತಾರೆ ಎಂಬ ದೂರಿನಂಶದ ಬಗ್ಗೆಯೂ ಹಿಂಬರಹದಲ್ಲಿ ಪ್ರಸ್ತಾಪಿಸಿರುವ ಸಬ್‌ ಇನ್ಸ್‌ಪೆಕ್ಟರ್‌ ಅವರು ‘ಪರಿಶಿಷ್ಟ ಜಾತಿ ಎಂಬ ಪದವು ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಪದವಾಗಿರುವ ಕಾರಣ ಈ ಪದ ಬಳಕೆಯಾದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ 1989ರ ಕಲಂ 3ರ ಅಡಿಯಲ್ಲಿ ಕೃತ್ಯಕ್ಕೆ ಬಳಸಿದ ಪದವೆಂದು ಪರಿಗಣಿಸಲು ಬರುವುದಿಲ್ಲ ಎಂದಿದ್ದರು.

 

ಹಾಗೆಯೇ ಕೆ ಆರ್‌ ಮಾರ್ಕೆಟ್‌ ಎಂಬ ಪದವು ಒಂದು ಸ್ಥಳವಾಗಿರುತ್ತದೆ. ಇದು ಯಾವುದೇ ಕಾಯ್ದ ಕಾನೂನಿನಲ್ಲಿ ಅವಹೇಳನಕಾರಿ ಶಬ್ದ ಎಂದು ನಮೂದಿಸಿರುವುದಿಲ್ಲ. ಆದ್ದರಿಂದ ಈ ದೂರರ್ಜಿಯಲ್ಲಿ ವಿವರಿಸಿರುವ ಅಂಶಗಳು ಅಪರಾಧ ಕೃತ್ಯದ ಅಂಶಗಳಾಗಿ ಕಂಡು ಬರದೇ ಇರುವುದರಿಂದ ದೂರರ್ಜಿಯನ್ನು ವಿಲೇ ಮಾಡಲಾಗಿದೆ ಎಂದು 2021ರ ಡಿಸೆಂಬರ್‌ 25ರಂದು ಹಿಂಬರಹ ನೀಡಿದ್ದರು.

 

ಪ್ರಕರಣದ ಹಿನ್ನೆಲೆ

 

1998ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ 2006ರಿಂದಲೂ ಕೆಎಟಿಯಲ್ಲಿ ವಿಚಾರಣೆ ನಡೆಯುತ್ತಿದೆ. 2015-16ರಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಪಿಎಸ್‌ಸಿ ಪರ ಹಿರಿಯ ವಕೀಲ ರಾಜಗೋಪಾಲ್‌ ಎಂಬುವರು ಅರ್ಜಿದಾರರಾದ ಲೀಲಾವತಿ ಅವರನ್ನು ಕೆ ಆರ್‌ ಮಾರ್ಕೇಟ್‌ನಿಂದ ಬಂದ ಪರಿಶಿಷ್ಟ ಜಾತಿ ಮಹಿಳೆ ಎಂದು ಜರಿದಿದ್ದರು ಎಂದು ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

 

ಕೆಪಿಎಸ್‌ಸಿ ಪ್ರತಿನಿಧಿಸುವ ಹಿರಿಯ ನ್ಯಾಯವಾದಿ ಅವರು ಜರಿದಿದ್ದಕ್ಕೆ ಆಕ್ಷೇಪ ಎತ್ತಿದ್ದ ಲೀಲಾವತಿ ಅವರು ರಿಜಿಸ್ಟ್ರಾರ್‌, ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ಮತ್ತು ಆಡಳಿತ ಮಂಡಳಿಯ ಅಂದಿನ ಅಧ್ಯಕ್ಷ ನ್ಯಾಯಮೂರ್ತಿ ಭಕ್ತವತ್ಸಲ ಅವರಿಗೂ ದೂರು ಸಲ್ಲಿಸಿದ್ದರು. ಇದಾದ ನಂತರ ವಿಚಾರಣೆಯು ಹಲವು ಬಾರಿ ಮುಂದೂಡಲಾಗಿತ್ತು. ಇದರ ಅಂತಿಮ ತೀರ್ಪು 2021ರ ಜುಲೈ 14ರಂದು ಹೊರಬಿದ್ದಿತ್ತು. ಕೆಪಿಎಸ್‌ಸಿ ಪರ ಹಿರಿಯ ನ್ಯಾಯವಾದಿ ಅವರು ಜರಿದಿದ್ದನ್ನು ಅಂತಿಮ ತೀರ್ಪಿನಲ್ಲಿ ಉಲ್ಲೇಖವಾಗಿತ್ತು.

 

7 ವರ್ಷಗಳ ಹಿಂದೆ ತೆರೆದ ನ್ಯಾಯಾಲಯದಲ್ಲಿ ಕೆಪಿಎಸ್‌ಸಿ ಹಿರಿಯ ನ್ಯಾಯವಾದಿ ರಾಜಗೋಪಾಲ್‌ ಎಂಬುವರು ಜರಿದಿದ್ದನ್ನು 2021ರ ಜುಲೈ 14ರಂದು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಪ್ರಕಟಿಸಿದ ಅಂತಿಮ ತೀರ್ಪಿನಲ್ಲಿಯೂ ಪ್ರಸ್ತಾಪಿಸಿರುವುದು ಸಂವಿಧಾನದತ್ತವಾದ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ,’ ಎಂದು ಪರಿಶೀಲನಾ ಅರ್ಜಿಯಲ್ಲಿ ಲೀಲಾವತಿ ಅವರು ಹೇಳಿದ್ದರು. ಸಂವಿಧಾನದ 14, 15, 15(2), 15(3), 15(4) 16, 12, 18, 21, 46, 335, 141, ಮತ್ತು 144 ಅನುಚ್ಛೇಧವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಉಲ್ಲಂಘಿಸಿದೆ,’ ಎಂದು ಪರಿಶೀಲನಾ ಅರ್ಜಿಯಲ್ಲಿ ವಿವರಿಸಿದ್ದರು.

 

ಹಂಗಾಮಿ ಅಧ್ಯಕ್ಷರು ತಮ್ಮ ವಿವೇಚನೆಯನ್ನು ಬದಿಗೊತ್ತಿ ಒಬ್ಬ ನ್ಯಾಯಾಂಗ ಸದಸ್ಯರ ಅಧಿಕಾರವನ್ನು ಆಡಳಿತ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ನ್ಯಾಯಾಂಗ ಕ್ರಿಯಾಶೀಲತೆಗೆ ಅನಿವಾರ್ಯ ಸಮಯ ಒದಗಿದೆ. ನನ್ನ ಆತ್ಮ ವಿಶ್ವಾಸವನ್ನು ಕುಗ್ಗಿಸಲಾಗಿದೆಯಲ್ಲದೇ ಮಾನಸಿಕವಾಗಿ ಜರ್ಝರಿತನ್ನಾಗಿಸಿದೆ. ಅದೇ ರೀತಿ ಈ ಮಂಡಳಿಯು ನೈತಿಕ ಮೌಲ್ಯ ರಹಿತವಾಗಿದ್ದು ಮೂಲಭೂತ ಕಾನೂನಿನ ನೀತಿಗಳನ್ನು ಉಲ್ಲಂಘಿಸಿ ನಾಗರಿಕ ಸಮಾಜದ ಮರ್ಯಾದೆಯನ್ನು ಭಂಗ ಮಾಡಿ ದಲಿತ ಮಹಿಳೆಯ ಅಸ್ತಿತ್ವವನ್ನೇ ಅಳಿಸಿ ಹಾಕಿದಂತಾಗಿದೆ,’ ಎಂದು ಪರಿಶೀಲನಾ ಅರ್ಜಿಯಲ್ಲಿ ಪ್ರಸ್ತಾಪಿಸಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts