ವರ್ಷ ಕಳೆದರೂ ಅನುಷ್ಠಾನವಾಗದ ಪೌಷ್ಠಿಕಾಂಶ ನೀತಿ; ಮೂಲೆಗುಂಪಾದ ಅಧ್ಯಯನ ವರದಿ?

ಬೆಂಗಳೂರು; ತಮಿಳುನಾಡು ಮತ್ತು ಹರ್ಯಾಣ ರಾಜ್ಯದ ಮಾದರಿಯಲ್ಲಿ ರಾಜ್ಯದಲ್ಲಿಯೂ ಪೌಷ್ಠಿಕಾಂಶ ನೀತಿಯನ್ನು ಜಾರಿಗೊಳಿಸಬೇಕು ಎಂದು ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆ ವರದಿ ಸಲ್ಲಿಸಿ ವರ್ಷ ಕಳೆದರೂ ರಾಜ್ಯ ಸರ್ಕಾರವು ಈವರೆಗೂ ಕ್ರಮ ವಹಿಸದೇ ಭಂಡ ನಿರ್ಲಕ್ಷ್ಯ ಮೆರೆದಿದೆ.

ಪೌಷ್ಠಿಕಾಂಶದ ಪುನರ್ವಸತಿ ಕೇಂದ್ರದ ಕಾರ್ಯನಿರ್ವಹಣೆ- ಕರ್ನಾಟಕದ ಪ್ರದೇಶಗಳಲ್ಲಿ ಒಂದು ತುಲನಾತ್ಮಕ ಅಧ್ಯಯನ ಕುರಿತು 2020 ಮೇ ತಿಂಗಳಲ್ಲಿ ವರದಿ ಸಲ್ಲಿಕೆಯಾದರೂ ಈವರೆವಿಗೂ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

ರಾಜ್ಯವು ಕುಟುಂಬದ ಮಟ್ಟದಲ್ಲಿ ಆಹಾರ ಸುರಕ್ಷತೆಯ ಜತೆಗೆ ಪೌಷ್ಠಿಕಾಂಶ ಸುರಕ್ಷತೆಯನ್ನು ಖಾತ್ರಿಪಡಿಸುವ ಪೌಷ್ಠಿಕಾಂಶ ನೀತಿಯನ್ನು ಜಾರಿಗೊಳಿಸಬೇಕು ಎಂದು ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆ ಪ್ರಮುಖ ಶಿಫಾರಸ್ಸು ಮಾಡಿತ್ತು. ವರದಿ ಸಲ್ಲಿಕೆಯಾದ ನಂತರ ವಿಧಾನಸಭೆ ಮತ್ತು ವಿಧಾನಪರಿಷತ್‌ ಅಧಿವೇಶನ ನಡೆದಿದ್ದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪೌಷ್ಠಿಕಾಂಶ ನೀತಿ ಕುರಿತು ವಿಧಾನಮಂಡಲಕ್ಕೆ ಮಂಡಿಸುವ ಕುರಿತು ಮುಂದಾಗಿಲ್ಲ. ಈ ಕುರಿತು ಸಚಿವೆ ಶಶಿಕಲಾ ಜೊಲ್ಲೆ ಅವರು ಕೂಡ ಗಮನಹರಿಸಿಲ್ಲ ಎಂದು ಗೊತ್ತಾಗಿದೆ.

ಚಿತ್ರದುರ್ಗ, ಬೆಂಗಳೂರು, ಕೊಡಗು, ಚಿಕ್ಕಮಗಳೂರು, ಧಾರವಾಡ, ಗದಗ್‌, ಕೊಪ್ಪಳ,ರಾಯಚೂರು ಜಿಲ್ಲೆಯಲ್ಲಿ ಅಧ್ಯಯನ ನಡೆಸಿದ್ದ ಆರೋಗ್ಯ ನಿರ್ವಹಣಾ ಸಂಸ್ಥೆಯು ತೀವ್ರವಾದ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆ, ಫಲಾನುಭವಿಗಳಲ್ಲಿ ಸ್ವೀಕರಿಸಿದ ಸೇವೆಯ ತೃಪ್ತಿ ಮಟ್ಟ, ತೀವ್ರವಾದ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಮೇಲೆ ಚಿಕಿತ್ಸೆ ಪರಿಣಾಮ ಮತ್ತು ಮನೆಯ ಆಹಾರ ಪದ್ಧತಿ ಕುರಿತು ಅಧ್ಯಯನ ನಡೆಸಿತ್ತು.

ಮಕ್ಕಳಲ್ಲಿ ತೀವ್ರ ಅಪೌಷ್ಠಿಕತೆಯನ್ನು ತಡೆಗಟ್ಟುವಿಕೆಗೆ ಮತ್ತು ನಿರ್ವಹಣಾ ಅಂಶಗಳಿಗೆ ಪ್ರಾಮುಖ್ಯತೆ ನೀಡಿ ಹರಿಯಾಣ ಮತ್ತು ತಮಿಳುನಾಡಿನಲ್ಲಿ ಅನುಷ್ಠಾನಗೊಳಿಸಿರುವ ಪೌಷ್ಠಿಕತೆ ನೀತಿಯನ್ನು ಮಾದರಿಯಾಗಿಸಿ ಸಾಧ್ಯವಾದಷ್ಟು ಬೇಗ ರಾಜ್ಯದಲ್ಲಿ ಜಾರಿಗೊಳಿಸಬೇಕು. ಈ ನೀತಿಯು ದೀರ್ಘಾವಧಿಯಲ್ಲಿ ಕುಟುಂಬದ ಹಂತದಲ್ಲಿ ಆಹಾರ ಭದ್ರತೆಯಿಂದ ಪೌಷ್ಠಿಕಾಂಶ ಭದ್ರತೆಯಡೆಗೆ ಸಾಗುವುದರಿಂದ ಪೌಷ್ಠಿಕತೆಯನ್ನು ಕಾಪಾಡಿಕೊಳ್ಳಬಹುದಾಗಿದೆ. ಈ ನೀತಿಯು ಮತ್ತು ಯೋಜನಾ ಅನುಷ್ಠಾನವು ದುರ್ಬಲ ಜನಾಂಗದವರ ಕಡೆಗೆ (ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ) ಹೆಚ್ಚು ಗಮನವಹಿಸಬೇಕು ಎಂದು ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆಯು ಶಿಫಾರಸ್ಸು ಮಾಡಿತ್ತು.

4ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ನಂತರದಲ್ಲಿ ಕರ್ನಾಟಕದಲ್ಲಿ ಮಕ್ಕಳ ಪೌಷ್ಠಿಕಾಂಶದ ಸ್ಥಿತಿಯು ಕೆಲವು ಕ್ರಮಗಳಿಂದ ಸುಧಾರಿಸಿದೆ ಎಂದು ತೋರಿಸಿದರೂ ಎಲ್ಲಾ ಕ್ರಮಗಳಿಂದ ಹೀಗಾಗಿರುವುದಿಲ್ಲ. 3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಮ್ಮ ವಯಸ್ಸಿಗೆ ಕುಂಠಿತ ಬೆಳವಣಿಗೆ (ಸ್ನಾಯು ಮತ್ತು ಕೊಬ್ಬನ್ನು ಹೊಂದದಿರುವುದು) ಮತ್ತು ಕಡಿಮೆ ತೂಕ ಹೊಂದಿರುವ ಸಾಧ್ಯತೆ ಕಡಿಮೆ ಎಂದೆನಿಸಿದರೂ ಅವರು ತಮ್ಮ ವಯಸ್ಸಿಗೆ ತೀರಾ ಕಡಿಮೆ ಎತ್ತರ ಅಥವಾ ತೀವ್ರವಾಗಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಕರ್ನಾಟಕದಲ್ಲಿ ನಡೆದಿರುವ ಇತ್ತೀಚಿನ ಅಧ್ಯಯನಗಳಲ್ಲಿ ಅಪೌಷ್ಠಿಕತೆ ಪ್ರಮಾಣವು ಮಂಗಳೂರಿನಲ್ಲಿ ಶೇ.43, ಬೆಂಗಳೂರು ಗ್ರಾಮೀಣದಲ್ಲಿ ಶೇ.42, ಬಿಜಾಪುರದಲ್ಲಿ ಶೇ 43 ಮತ್ತು ಮೈಸೂರಿನಲ್ಲಿ ಶೇ.39ರಷ್ಟಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -4 ವರದಿ ಆಧಾರದ ಮೇಲೆ ಕರ್ನಾಟಕದಲ್ಲಿ ಕಡಿಮೆ ತೂಕ, ಕಡಿಮೆ ಎತ್ತರ ಮತ್ತು ಕುಂಠಿತ ಬೆಳವಣಿಗೆಯ ಪ್ರಮಾಣವು ನೆರೆ ರಾಜ್ಯಕ್ಕಿಂತ ಹೆಚ್ಚಾಗಿದೆ.

ತಮಿಳುನಾಡಿನಲ್ಲಿ ಕಡಿಮೆ ತೂಕ, ಕಡಿಮೆ ಎತ್ತರ ಮತ್ತು ಕುಕಂಠಿತ ಬೆಳವಣಿಗೆಯ ಅಂದಾಜು ಕ್ರಮವಾಗಿ ಶೇ.24, ಶೆ.27 ಮತ್ತು ಶೇ.28, ಕೇರಳದಲ್ಲಿ ಶೇ.16, ಶೇ.20 ಮತ್ತು ಶೇ.22 ಆಂಧ್ರಪ್ರದೇಶದಲ್ಲಿ ಕ್ರಮವಾಗಿ ಶೇ.31.9, ಶೇ.31 ಮತ್ತು ಶೇ.22, ದಕ್ಷಿಣ ಭಾರತದಲ್ಲಿ ನೆರೆಹೊರೆಯ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಶೇಕಡವಾರು ಅಪೌಷ್ಠಿಕತೆ ಪ್ರಮಾಣವು ಹೆಚ್ಚಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಕರ್ನಾಟಕದಲ್ಲಿ ಕಡಿಮೆ ತೂಕ ಮಕ್ಕಳು ಇರುವ ಪ್ರಮಾಣ ಶೇ.35.2ರಷ್ಟಿದೆ. ಆಂಧ್ರದಲ್ಲಿ ಶೇ.31.9, ತೆಲಂಗಾಣದಲ್ಲಿ ಶೇ.28.3, ತಮಿಳುನಾಡು ಶೇ.23.8, ಕೇರಳ ಶೇ.16.1ರಷ್ಟಿದೆ. ಅದೇ ರೀತಿ ಕುಂಠಿತ ಮಕ್ಕಳು ಕರ್ನಾಟಕದಲ್ಲಿ ಶೇ.36ರಷ್ಟಿದ್ದರೆ ಆಂಧ್ರದಲ್ಲಿ ಶೇ.31,ತೆಲಂಗಾಣದಲ್ಲಿ ಶೇ.28, ತಮಿಳುನಾಡು ಶೇ.27, ಕೇರಳ ಶೇ.20ರಷ್ಟಿದ್ದಾರೆ. ರಕ್ತ ಹೀನತೆ ಮಕ್ಕಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಶೇ.60.9ರಷ್ಟಿದ್ದಾರೆ. ಆಂಧ್ರದಲ್ಲಿ ಶೇ.60.7, ತೆಲಂಗಾಣದಲ್ಲಿ ಶೇ.58.6, ತಮಿಳುನಾಡು ಶೆ.50.7, ಕೇರಳ ಶೇ.35.7,ರಷ್ಟಿರುವುದು ಅಧ್ಯಯನ ವರದಿಯಿಂದ ಗೊತ್ತಾಗಿದೆ.

ಪೌಷ್ಠಿಕಾಂಶ ಪುನರ್ವಸತಿ ಕೇಂದ್ರಗಳ ಸಮೀಕ್ಷೆ ಸಂದರ್ಭದಲ್ಲಿ ಅಧ್ಯಯನ ತಂಡವು ವಿಭಾಗವಾರು ಅಂತರಗಳನ್ನು ಪತ್ತೆ ಹಚ್ಚಿದೆ. ಈ ಪೈಕಿ ಬೆಂಗಳೂರು ವಿಭಾಗದ ಚಿತ್ರದುರ್ಗ, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ಬೌರಿಂಗ್‌ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆಯಲ್ಲಿ ಎಲ್ಲಾ ಹಾಸಿಗೆಗಳಿಗೆ ಸೊಳ್ಳೆ ಮತ್ತು ನೊಣಗಳ ಪರದೆ ಲಭ್ಯವಿಲ್ಲ ಎಂದು ವರದಿ ಮಾಡಿದೆ. ಅಲ್ಲದೆ ಬೌರಿಂಗ್‌ ಆಸ್ಪತ್ರೆ ಹೊರತುಪಡಿಸಿ ಬೆಂಗಳೂರು ವಿಭಾಗದ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಪ್ರತಿ ಹಾಸಿಗೆಗೆ ಐವಿ ಸ್ಟ್ಯಾಂಡ್‌, ವಾಟರ್‌ ಫಿಲ್ಟರ್‌, ರೆಫ್ರಿಜರೇಟರ್‌ ಕೂಡ ಇಲ್ಲ. ಮಾತ್ರವಲ್ಲದೆ ಅಡಿಗೆ ಮನೆಗೆ ಜಾಗವೂ ಲಭ್ಯವಿಲ್ಲ ಎಂದು ಹೇಳಿದೆ.

ಮೈಸೂರು ವಿಭಾಗದ ಕೊಡಗು ಜಿಲ್ಲೆಯಲ್ಲಿ ಐದು ಹಾಸಿಗೆಗಳಿಗೆ ಸೊಳ್ಳೆ ಪರದೆಗಳು ಲಭ್ಯವಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಟೆಟ್ರಾಸೈಕ್ಲಿನ್‌ ಅಥವಾ ಕ್ಲೋರಂಫೆನಿಕಲ್‌ ಕಣ್ಣಿನ ಹನಿಗಳು ಲಭ್ಯವಿಲ್ಲ. ಅಲ್ಲದೆ ಇದೇ ಜಿಲ್ಲೆಯಲ್ಲಿ ಐರನ್‌ ಸಿರಪ್‌, ಮಲ್ಟಿ ವಿಟಮಿನ್‌, ಪೊಲಿಕ್‌ ಮತ್ತು ವಿಟಮಿನ್‌ ಎ ಸಿರಪ್‌ ಮತ್ತು ಸತು ಸಲ್ಫೈಟ್‌ ಸಂಗ್ರಹವಿಲ್ಲ ಎಂದು ಬೆಳಕು ಚೆಲ್ಲಿದೆ.

ಬೆಳಗಾವಿ ವಿಭಾಗದ ಹುಬ್ಬಳ್ಳಿ, ಧಾರವಾಡದಲ್ಲಿಯೂ ಎಲ್ಲಾ ಹಾಸಿಗೆಗಳಿಗೆ ಸೊಳ್ಳೆ, ಮತ್ತು ನೊಣದ ಪರದೆ ಲಭ್ಯವಿಲ್ಲ. ಗದಗ್‌ನಲ್ಲಿ ಪ್ರತಿ ಹಾಸಿಗೆಗೆ ಐವಿ ಸ್ಟ್ಯಾಂಡ್‌ ಲಭ್ಯವಿಲ್ಲ. ಹುಬ್ಬಳ್ಳಿಯಲ್ಲಿ ಯಾವುದೇ ವಾರ್ಡಿಗೂ ಪ್ರತ್ಯೇಕವಾದ ಶೌಚಾಲಯವಿಲ್ಲ ಮತ್ತು ಇರುವ ಶೌಚಾಲಯಗಳು ಸ್ವಚ್ಛವಾಗಿರುವುದಿಲ್ಲ.

ಕಲ್ಬುರ್ಗಿ ವಿಭಾಗದ ರಾಯಚೂರು ಜಿಲ್ಲೆಯಲ್ಲಿ ಹಾಸಿಗೆಗಳು ಅಸಮರ್ಪಕವಾಗಿವೆ. ಹೆಚ್ಚಿನ ಒಳರೋಗಿಗಳು ಇದ್ದಾಗಲೆಲ್ಲಾ ಹೆಚ್ಚುವರಿ ಮಕ್ಕಳನ್ನು ಹತ್ತಿರದ ಸಾಮಾನ್ಯ ವಾರ್ಡ್‌ಗೆ ಸೇರಿಸಲಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

the fil favicon

SUPPORT THE FILE

Latest News

Related Posts