ತಾಂತ್ರಿಕ ಸಲಹಾ ಸಮಿತಿ ಮಾತು ಕೇಳದೇ ಎಡವಿದ ಸರ್ಕಾರ; ಮೆಲ್ಲಗೆ ತಪ್ಪೊಪ್ಪಿಕೊಂಡ ಸುಧಾಕರ!

ಬೆಂಗಳೂರು: ಕೊರೋನಾ ಎರಡನೇ ಅಲೆ ಆರ್ಭಟಕ್ಕೆ ರಾಜ್ಯ ತತ್ತರಿಸಿ ಹೋಗುತ್ತಿದೆ. ಎರಡನೇ ಅಲೆಯ ಅಪಾಯಕಾರಿ ಮುನ್ಸೂಚನೆಗಳ ಅರಿವಿದ್ದರೂ ರಾಜ್ಯ ಬಿಜೆಪಿ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಂಡಿರಲಿಲ್ಲ. ಬದಲಿಗೆ ಉಪ ಚುನಾವಣೆ ರಾಜಕಾರಣದಲ್ಲಿ ಮುಳುಗಿತ್ತು. ಅಧಿಕಾರಿಶಾಹಿಯೂ ಸಹ ಚುನಾವಣಾ ರಾಜಕಾರಣದ ಬೆಳವಣಿಗೆಗಳನ್ನು ನೋಡುತ್ತಲೇ ಕಾಲಹರಣ ಮಾಡಿತ್ತು. ಇದೆಲ್ಲದರ ಪರಿಣಾಮ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಉಳಿದ ನಗರಗಳಲ್ಲಿ ಕೊರೊನಾ ವೈರಸ್‌ ಶರವೇಗದಲ್ಲಿ ಮುನ್ನುಗ್ಗುತ್ತಿದೆ.

ಕೊರೊನಾದ ಮೊದಲ ಅಲೆ ಅನಿರೀಕ್ಷಿತವಾಗಿ ಅಪ್ಪಳಿಸಿತ್ತು. ಆದರೆ 2ನೇ ಅಲೆ ನಿರೀಕ್ಷಿತವಾಗಿತ್ತು. ಇದರ ಸುಳಿವು ಕೂಡ ದೊರೆತಿತ್ತು. ಇದನ್ನು ತಾಂತ್ರಿಕ ಸಮಿತಿಯೂ ಸರ್ಕಾರದ ಗಮನಕ್ಕೆ ತಂದಿತ್ತು. ಆದರೆ ರಾಜ್ಯ ಬಿಜೆಪಿ ಸರ್ಕಾರವು ಎಚ್ಚೆತ್ತುಕೊಳ್ಳಲಿಲ್ಲ.

ದಿನವೊಂದಕ್ಕೆ 25 ಸಾವಿರ ಪ್ರಕರಣಗಳು ದಾಖಲಾಗುತ್ತಿದ್ದಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್‌ ಇದೀಗ ಮೆಲ್ಲಗೆ ತಪ್ಪೊಪ್ಪಿಕೊಳ್ಳಲಾರಂಭಿಸಿದ್ದಾರೆ. ಕೊರೊನಾ ತಾಂತ್ರಿಕ ಸಮಿತಿ ನೀಡಿದ್ದ ಸಲಹೆಯಂತೆ ಈ ಮೊದಲೇ ನಾವು ಕ್ರಮಗಳನ್ನು ಕೈಗೊಂಡಿದಿದ್ದರೆ ಪರಿಸ್ಥಿತಿ ನಿಯಂತ್ರಣದಲ್ಲಿರುತ್ತಿತ್ತು ಎಂದು ಒಪ್ಪಿಕೊಂಡಿದ್ದಾರೆ.

ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ‘ಎರಡನೇ ಅಲೆ ಆರಂಭದ ಕುರಿತು ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ ನೀಡುತ್ತಲೇ ಇತ್ತು. ಅಲ್ಲದೆ, ಕಠಿಣ ಕ್ರಮದ ಸಲಹೆಗಳನ್ನೂ ನೀಡಿತ್ತು. ಆದರೆ, ಸರ್ಕಾರಕ್ಕೆ ಜನರ ಜೀವನ ಹಾಗೂ ಅವರ ಜೀವನೋಪಾಯ ಎರಡರ ಸಮತೋಲನವನ್ನು ಕಾಪಾಡುವುದು ಸವಾಲಾಗಿತ್ತು. ಹೀಗಾಗಿ ನಾವು ಸಂಪೂರ್ಣ ಲಾಕ್ಡೌನ್ ಬದಲು ಕೆಲವು ನಿರ್ಣಯಗಳನ್ನು ಕೈಗೊಂಡೆವು. ಈ ಮೊದಲೇ ನಾವು ಈ ಕ್ರಮಗಳನ್ನು ಕೈಗೊಂಡಿದ್ದಿದ್ದರೆ, ಪರಿಸ್ಥಿತಿ ನಿಯಂತ್ರಣದಲ್ಲಿರುತ್ತಿತ್ತು. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ,’ ಎಂದು ಹೇಳಿರುವುದು ಬಿಜೆಪಿ ಸರ್ಕಾರ ವಹಿಸಿದ್ದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸಂದರ್ಶನದ ಪೂರ್ಣ ಪಾಠ ಇಲ್ಲಿದೆ

ಕೊರೋನಾ ಮೊದಲ ಅಲೆಗೆ ಹೋಲಿಕೆ ಮಾಡಿದರೆ ಎರಡನೇ ಅಲೆಯಲ್ಲಿರುವ ವ್ಯತ್ಯಾಸವೇನು? ಇಷ್ಟು ಪ್ರಮಾಣದಲ್ಲಿ ಸೋಂಕು ಹರಡಲು ಪ್ರಮುಖ ಕಾರಣವೇನು?

ಮೊದಲ ಅಲೆಯು ಆರಂಭದಲ್ಲಿ ನಿಧಾನವಾಗಿ ಹರಡಿತು, ಇದಕ್ಕೆ ಪ್ರಮುಖ ಕಾರಣ ಸರ್ಕಾರವು ಮೊದಲಿನಿಂದ ಕೈಕೊಂಡ ಕಠಿಣ ಕ್ರಮಗಳು, ಸಂಪೂರ್ಣ ಲಾಕ್‌ಡೌನ್ ಮತ್ತು ನಾಗರಿಕರಲ್ಲಿ ಮೂಡಿದ್ದ ಜಾಗರೂಕತೆಯಿಂದ ಪರಿಸ್ಥಿತಿ ನಿಯಂತ್ರಣದಲ್ಲಿತ್ತು. ಇದಾದ ಬಳಿಕ ಜನರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೊರೋನಾ ನಿಯಮಗಳ ಪಾಲನೆ ಕಡಿಮೆ ಮಾಡಿದ್ದರು. ಲಸಿಕೆ ಬಂದ ಪರಿಣಾಮ ಜನರು ನಿಯಮ ಪಾಲನೆ ಕಡಿಮೆ ಮಾಡಿದ್ದರು ಎಂದೆನಿಸುತ್ತದೆ. ಇದಲ್ಲದೆ, ಸಾಮಾನ್ಯ ರೀತಿಯಲ್ಲಿ ಆರ್ಥಿಕ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಎರಡನೆಯ ಅಲೆಯಲ್ಲಿ ರೂಪಾಂತರಿ ಕೊರೋನಾ ಕಂಡು ಬಂದ ಕಾರಣ ಸೋಂಕು ತೀವ್ರವಾಗಿ ಹರಡುತ್ತಿದೆ.

ತಾಂತ್ರಿಕ ಸಲಹಾ ಸಮಿತಿ ಎರಡನೇ ಅಲೆಯ ಎಚ್ಚರಿಕೆ ನೀಡಿತ್ತು. ನೀವು ಕೂಡ ಎಚ್ಚರಿಕೆ ನೀಡುತ್ತಲೇ ಇದ್ದಿರಿ…

ಎರಡನೇ ಅಲೆ ಆರಂಭದ ಕುರಿತು ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ ನೀಡುತ್ತಲೇ ಇತ್ತು. ಅಲ್ಲದೆ, ಕಠಿಣ ಕ್ರಮದ ಸಲಹೆಗಳನ್ನೂ ನೀಡಿತ್ತು. ಆದರೆ, ಸರ್ಕಾರಕ್ಕೆ ಜನರ ಜೀವನ ಹಾಗೂ ಅವರ ಜೀವನೋಪಾಯ ಎರಡರ ಸಮತೋಲನವನ್ನು ಕಾಪಾಡುವುದು ಸವಾಲಾಗಿತ್ತು. ಹೀಗಾಗಿ ನಾವು ಸಂಪೂರ್ಣ ಲಾಕ್ಡೌನ್ ಬದಲು ಕೆಲವು ನಿರ್ಣಯಗಳನ್ನು ಕೈಗೊಂಡೆವು. ಈ ಮೊದಲೇ ನಾವು ಈ ಕ್ರಮಗಳನ್ನು ಕೈಗೊಂಡಿದ್ದಿದ್ದರೆ, ಪರಿಸ್ಥಿತಿ ನಿಯಂತ್ರಣದಲ್ಲಿರುತ್ತಿತ್ತು. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ.

ಕೊರೋನಾ ಮೊದಲ ಅಲೆಯಲ್ಲಿ ಎದುರಿಸಿದ ಪರಿಸ್ಥಿತಿಯನ್ನೇ ನಾವಿಂದು ಎದುರಿಸುತ್ತಿದ್ದೇವೆ. ಹಾಸಿಗೆ ಅಭಾವ ಎದುರಾಗಿದೆ. ಕಾಲಾವಕಾಶವಿದ್ದರೂ ಸರ್ಕಾರವೇಕೆ ಸಿದ್ಧತೆಗಳನ್ನು ನಡೆಸಲಿಲ್ಲ. ಹಾಸಿಗೆ ಸಂಖ್ಯೆ ಹೆಚ್ಚಿಸಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳೇನು?

ನಮ್ಮ ವೈದ್ಯಕೀಯ ಮೂಲಸೌಕರ್ಯಗಳಾದ ಲ್ಯಾಬ್‌, ಹಾಸಿಗೆಗಳು, ವೆಂಟಿಲೇಟರ್‌ಗಳು, ಐಸಿಯುಗಳನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗುತ್ತಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಪರೀಕ್ಷೆಗೆ ಕೇವಲ ಎರಡು ಲ್ಯಾಬ್‌ಗಳು ಮಾತ್ರ ಇತ್ತು, ಇದೀಗ ನಮ್ಮಲ್ಲಿ 192 ಲ್ಯಾಬ್’ಗಳಿವೆ. ಈ ಲ್ಯಾಬ್ ಗಳು ದಿನಕ್ಕೆ ಸುಮಾರು 2.5 ಲಕ್ಷದಿಂದ 3 ಲಕ್ಷ ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯ ಹೊಂದಿದೆ. ಮಾರ್ಚ್ 2020 ರಿಂದ, ಆಮ್ಲಜನಕಯುಕ್ತ ಹಾಸಿಗೆಗಳನ್ನು 1,970 ರಿಂದ 23,884ಕ್ಕೆ ಹೆಚ್ಚಿಸಲಾಗಿದೆ.

ಆಮ್ಲಜನಕ ಮತ್ತು ರೆಮ್ಡೆಸಿವಿರ್ ಪೂರೈಕೆ ಇಂದು ರಾಜ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೊರತೆ ನೀಗಿಸಲು ಸರ್ಕಾರ ಏನು ಮಾಡುತ್ತಿದೆ?

ರೆಮ್ಡೆಸಿವಿರ್’ನ 70,000 ಬಾಟಲುಗಳಿಗೆ ರಾಜ್ಯ ಸರ್ಕಾರ ಈಗಾಗಲೇ ಆರ್ಡರ್ ಮಾಡಿದೆ. ಈಗಾಗಲೇ ಔಷಧಿಗಳೂ ಕೂಡ ರಾಜ್ಯಕ್ಕೆ ಬರಲಾರಂಭಿಸಿವೆ. ಕೇಂದ್ರ ಸರ್ಕಾರ ಏಪ್ರಿಲ್ 30 ರವರೆಗೆ ಹೆಚ್ಚುವರಿ 25 ಸಾವಿರ ರೆಮ್ಡೆಸಿವಿರ್ ಔಷಧಿ ಬಾಟಲುಗಳನ್ನು ರಾಜ್ಯಕ್ಕೆ ಹಂಚಿಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಅದನ್ನು ಸ್ವೀಕರಿಸಲಾಗುತ್ತದೆ.

ಕಂಪನಿಗಳಿಂದ ನೇರವಾಗಿಯೇ 2 ಲಕ್ಷ ರೆಮ್ಡೆಸಿವಿರ್ ಔಷಧಿಯನ್ನು ಆಮದು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ ನಾವು ವೈಯಕ್ತಿಕವಾಗಿ ಬಯೋಕಾನ್ ಎಂಡಿ ಕಿರಣ್ ಮಜುಂದಾರ್-ಶಾ ಅವರೊಂದಿಗೆ ಮಾತನಾಡಿದ್ದೇನೆ.

ಪಿಎಂ ಕೇರ್ಸ್ ಫಂಡ್ ಅಡಿಯಲ್ಲಿ ಕರ್ನಾಟಕಕ್ಕೆ ತಲಾ 100 ಎಲ್‌ಪಿಎಂ (ನಿಮಿಷಕ್ಕೆ 1 ಲೀಟರ್) ಸಾಮರ್ಥ್ಯವಿರುವ ಆರು ಆಮ್ಲಜನಕ ಸ್ಥಾವರಗಳನ್ನು ಹಂಚಿಕೆ ಮಾಡಲಾಗಿದ್ದು, ಇವುಗಳನ್ನು ತುಮಕುರು ಜಿಲ್ಲೆಯ ಪಾವಗಡ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಬಾಗಲಕೋಟೆಯ ಮುಧೋಳ್, ಉತ್ತರ ಕನ್ನಡದ ಯೆಲ್ಲಾಪುರದಲ್ಲಿ ಕಲಬುರಗಿ ಜಿಲ್ಲೆಯ ಚಿಂಚೋಳಿಯಾದಗೀರ್ ಜಿಲ್ಲೆಯ ಶೋರಪುರ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುತ್ತಿದೆ.

ಆಮ್ಲಜನಕ ಸ್ಥಾವರಗಳ ಉಪಕರಣಗಳು ಈಗಾಗಲೇ ರಾಜ್ಯ ತಲುಪಿದ್ದು, ತಿಂಗಳ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಇದಲ್ಲದೆ ರಾಜ್ಯ ಸರ್ಕಾರ 40 ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸುತ್ತಿದೆ, ಅದರಲ್ಲಿ 10 ಸ್ಥಾವರಗಳು 500 ಎಲ್ಪಿಎಂ ಸಾಮರ್ಥ್ಯ ಮತ್ತು 390 ಎಲ್ಪಿಎಂ ಸಾಮರ್ಥ್ಯದ 30 ಸ್ಥಾವರಗಳಾಗಿವೆ. ಆಮ್ಲಜನಕದ ಪೂರೈಕೆಯನ್ನು ಸುಗಮಗೊಳಿಸಲು ಡ್ರಗ್ಸ್ ಕಂಟ್ರೋಲರ್ ಕಚೇರಿಯಲ್ಲಿ ವಾರ್ ರೂಮ್’ನ್ನೂ ಸ್ಥಾಪಿಸಲಾಗಿದೆ.

ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಆಮ್ಲಜನಕ ಸ್ಥಾವರಗಳ ಸಾಮರ್ಥ್ಯ 870 ಮೆಟ್ರಿಕ್ ಟನ್ ಆಗಿದೆ. ಮೇ ಅಂತ್ಯದ ವೇಳೆ 1,500 ಮೆಟ್ರಿಕ್ ಟನ್ ಆಮ್ಲಜನಕದ ಅಗತ್ಯತೆ ಬೀಳಬಹುದು ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, 1,400 ಮೆಟ್ರಿಕ್ ಟನ್ ನಷ್ಟು ಆಮ್ಲಜನಕ ಸರಬರಾಜು ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಕೈಗಾರಿಕೋದ್ಯಮಿಗಳಿಗೂ ಸೂಚನೆ ನೀಡಲಾಗಿದ್ದು, ಕೈಗಾರಿಕೆಗೆ ಬಳಕೆ ಮಾಡುತ್ತಿರುವ ಆಕ್ಸಿಜನ್’ನ್ನು ವೈದ್ಯಕೀಯ ಬಳಕೆಗೆ ನೀಡುವಂತೆ ನಿರ್ದೇಶಿಸಲಾಗಿದೆ.

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆಯೇ? ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಲಿದೆಯೇ?

ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತದೆ ಎಂದು ನಾನು ಹೇಳುವುದಿಲ್ಲ. ಆದರೆ, ಮೇ ಅಂತ್ಯ ಅಥವಾ ಜೂನ್ ಮೊದಲ ವಾರದವರೆಗೂ ಕೊರೋನಾ ಎರಡನೇ ಅಲೆ ಇರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಹಲವು ರಾಷ್ಟ್ರಗಳು ಕೊರೋನಾ ಮೂರನೇ ಅಲೆಯಂತಹ ಪರಿಸ್ಥಿತಿ ಎದುರಿಸುತ್ತಿವೆ. ಇಲ್ಲಿಯೂ ಆ ಆತಂಕ ಎದುರಾಗಲಿದೆಯೇ?

ಕೊರೋನಾ ಮೂರನೇ ಅಲೆ ಸಾಧ್ಯತೆ ಇದೆ. ಇದನ್ನು ನಿಯಂತ್ರಿಸಲು ಕೊರೋನಾ ಲಸಿಕೆಯೇ ನಮಗಿರುವ ದೊಡ್ಡ ಅಸ್ತ್ರ. ಈಗಾಗಲೇ ನಾವು 6,000 ಪ್ರದೇಶಗಳಲ್ಲಿ ಲಸಿಕೆ ನೀಡುವ ಕಾರ್ಯಗಳನ್ನು ಮಾಡಲಾಗುತ್ತಿದೆ. ಜನರ ಕೆಲಸದ ಕಚೇರಿಗಳಲ್ಲೂ ಲಸಿಕೆ ನೀಡಲು ಅವಕಾಶ ಮಾಡಿಕೊಡಲಾಗಿದೆ. ಮೇ.1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಲಸಿಕೆ ಅಭಿಯಾನ ಮತ್ತಷ್ಟು ಚುರುಕುಗೊಳ್ಳಲಿದೆ. ಈಗಾಗಲೇ ನಾನು ಸಿಐಐ, ಎಫ್’ಕೆಸಿಸಿಐ ಜೊತೆಗೆ ಮಾತುಕತೆ ನಡೆಸಿದ್ದು, ಎಲ್ಲಾ ನೌಕರರಿಗೂ ಹಾಗೂ ಅವರ ಕುಟುಂಬಸ್ಥರಿಗೂ ಲಸಿಕೆ ನೀಡುವ ಕೆಲಸ ಮಾಡಲಾಗುತ್ತದೆ. ಮುಖ್ಯಮಂತ್ರಿಗಳೂ ಕೂಡ ರೂ.400 ಕೋಟಿ ವೆಚ್ಚದಲ್ಲಿ 1 ಕೋಟಿ ಲಸಿಕೆಯನ್ನು ಖರೀದಿ ಮಾಡಲು ಒಪ್ಪಿಗೆ ನೀಡಿದ್ದಾರೆ.

ವೀಕೆಂಡ್ ಕರ್ಫ್ಯೂ ಕೊರೋನಾ ನಿಯಂತ್ರಿಸಲು ಸಹಾಯಕವಾಗಲಿದೆ ಎಂದೆನಿಸುತ್ತಿದೆಯೇ? ಅಥವಾ ಸಂಪೂರ್ಣ ಲಾಕ್ಡೌನ್ ಅಗತ್ಯವಿದೆಯೇ?

ಆರ್ಥಿಕ ಚಟುವಟಿಕೆ ಹಾಗೂ ಕೊರೋನಾ ಸಾಂಕ್ರಾಮಿಕ ರೋಗ ಎರಡನ್ನೂ ಸರ್ಕಾರ ನಿಭಾಯಿಸಬೇಕು. ಹೀಗಾಗಿಯೇ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಮೇ.4ರ ಬಳಿಕ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

the fil favicon

SUPPORT THE FILE

Latest News

Related Posts