ಬೆಂಗಳೂರು : ಇತ್ತೀಚೆಗೆ ಪ್ರಕಟಗೊಂಡ ಕೇಂದ್ರ ಸರ್ಕಾರದ ʻಸ್ವಚ್ಛ ವಾಯು ಸಮೀಕ್ಷೆ-2025ʼ ರಲ್ಲಿ ರಾಜಧಾನಿ ಬೆಂಗಳೂರಿನ ಸ್ಥಾನವು 28 ರಿಂದ 36ಕ್ಕೆ ಕುಸಿದಿರುವುದಕ್ಕೆ, ಬಿಬಿಎಂಪಿಯ ನಿರ್ಲಕ್ಷ್ಯವೇ ಕಾರಣ ಎಂಬುದು ಬೆಳಕಿಗೆ ಬಂದಿದೆ.
15ನೇ ಹಣಕಾಸು ಆಯೋಗವು ನಗರದ ವಾಯು ಗುಣಮಟ್ಟ ಸುಧಾರಣೆಗೆ ನೀಡಿದ್ದ ಹಣವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಅಲ್ಲದೇ ವಾಯು ಮಾಲಿನ್ಯದ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ರಾಜಧಾನಿಯಲ್ಲಿನ ವಾಯು ಮಾಲಿನ್ಯದ ಪ್ರಮಾಣದ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ವಾರ್ಷಿಕ ಸರಾಸರಿ ಪಿಎಂ10ರ ಪ್ರಮಾಣವು 4 ರಿಂದ 5 ಪಟ್ಟು ಹೆಚ್ಚಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೇ ಹೇಳಿದೆ.
ಅಲ್ಲದೆ, ವಾಯು ಗುಣಮಟ್ಟದ ಸುಧಾರಣೆ ವಿಷಯದಲ್ಲಿ ಬಿಬಿಎಂಪಿಯು ನಿಗದಿತ ಗುರಿ ಸಾಧಿಸದೇ ಇರುವುದರಿಂದ ಪಾಲಿಕೆಗೆ ಬರಬೇಕಾಗಿದ್ದ 605.90 ಕೋಟಿ ರು.ಗಳನ್ನು ಕಳೆದುಕೊಂಡಿದೆ.
ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಸಿದ್ಧಪಡಿಸಿದ ʻ2021-22 ಮತ್ತು 2022-23ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕ್ರೋಢೀಕೃತ ವಾರ್ಷಿಕ ಲೆಕ್ಕಪರಿಶೋಧನಾ ವರದಿʼಯಲ್ಲಿ ಬಿಬಿಎಂಪಿಯ ಈ ನಿರ್ಲಕ್ಷ್ಯದ ಕುರಿತು ಮಾಹಿತಿ ನೀಡಲಾಗಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರ ಆಸಕ್ತಿಯಿಂದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ (ಜಿಬಿಎ) ಪರಿವರ್ತನೆಗೊಂಡಿದೆ.

ಏನಿದು ಪ್ರಕರಣ?
2020-25ನೇ ಪಂಚ ವಾರ್ಷಿಕ ಸಾಲುಗಳಿಗಾಗಿ ಸ್ಥಾಪನೆಗೊಂಡಿರುವ ಪ್ರತಿ ಇಲಾಖೆಗೂ ನಿರ್ದಿಷ್ಟ ಉದ್ದೇಶಗಳಿಗೆ ಅನುದಾನ ನಿಗದಿಪಡಿಸಿದೆ. ಅದರಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ವಾಯುಗುಣಮಟ್ಟ ಸುಧಾರಣೆಗೆ ಮತ್ತು ಘನತ್ಯಾಜ್ಯ ನಿರ್ವಹಣೆ ಹಾಗೂ ನಿರುಸರಬರಾಜು ಸುಧಾರಣೆಗಾಗಿ ವಾರ್ಷಿಕ ಅನುದಾನವನ್ನು ನಿಗದಿಪಡಿಸಿತ್ತು.
2020-1ನೇ ಸಾಲಿನಿಂದ 2024-25ನೇ ಸಾಲಿನವರೆಗೆ ಒಟ್ಟು ಐದು ವರ್ಷಗಳಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ 1,483 ಕೋಟಿ ಹಾಗೂ ವಾಯು ಗುಣಮಟ್ಟ ಸುಧಾರಣೆಗಾಗಿ 886 ಕೋಟಿ ರು.ನಿಗದಿಪಡಿಸಲಾಗಿತ್ತು.
ಈ ಅನುದಾನವನ್ನು ಪಾಲಿಕೆಯ ಮೇಲುಸ್ತುವಾರಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರಿಗೆ ಇಲಾಖೆ ಮತ್ತು ಸಂಚಾರಿ ಪೊಲೀಸ್ ಇಲಾಖೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿತ್ತು. ಅದರಂತೆ ಬಿಬಿಎಂಪಿಯು ಆದ್ಯತೆ ಮೇಲೆ ಕ್ರಮ ಕೈಗೊಳ್ಳಲು ಪ್ರತಿ ವರ್ಷಕ್ಕೆ ಇಂತಿಷ್ಟು ಎಂದು ಅನುದಾನದ ಮೊತ್ತವನ್ನೂ ನಿಗದಿಪಡಿಸಲಾಗಿತ್ತು.

ಕೇಂದ್ರ ಪುರಸ್ಕೃತ ಈ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಈ ಸಂಬಂಧ ಮಾರ್ಗಸೂಚಿ ಸುತ್ತೋಲೆಯನ್ನು ( ಜ್ಞಾಪನ ಸಂಖ್ಯೆ: 16017/25/2020 CPA ದಿನಾಂಕ : 22-02-2021 ) ಹೊರಡಿಸಿದೆ. ಇದರ ಪ್ರಕಾರ ಮೊದಲನೇ ಕಂತು ಹಣ ಬಿಡುಗಡೆಯಾದ ನಂತರ 2ನೇ ಕಂತಿನ ಹಣ ಪೂರ್ಣ ಮಟ್ಟದಲ್ಲಿ ಬಿಡುಗಡೆಯಾಗಬೇಕಾದರೆ ಒಟ್ಟು 100 ಅಂಕಗಳಿಗೆ 7 ಅಂಶಗಳ ಕಾರ್ಯಕ್ಷಮತೆ, ಮೌಲ್ಯಮಾಪನ ಚೌಕಟ್ಟು (performance framework) ರೂಪಿಸಿದೆ. ಅದರಲ್ಲಿ ನಗರಗಳು 80 ಅಂಕಗಳಿಗಿಂತ ಹೆಚ್ಚಿಗೆ ಅಂಕವನ್ನುಗಳಿಸಿದ್ದಲ್ಲಿ ಮಾತ್ರ 2ನೇ ಕಂತಿನ ಹಣವನ್ನು ಪೂರ್ತಿಯಾಗಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿತ್ತು.
ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಈ ಮಾರ್ಗಸೂಚಿಯಂತೆ ಅಗತ್ಯ ಕ್ರಮ ತೆಗೆದುಕೊಳ್ಳಲೇ ಇಲ್ಲ. ಇದರಿಂದ ಅಂಕಗಳನ್ನು ಗಳಿಸುವಲ್ಲಿ ವಿಫಲವಾಗಿತ್ತು. ಇದರಿಂದ ಪ್ರತಿ ವರ್ಷ ನಿಗದಿಪಡಿಸಿದ ಅನುದಾನದಲ್ಲಿ ಕಡಿಮೆ ಮೊತ್ತ ಬಿಡುಗಡೆಯಾಗಿ ಕೇಂದ್ರದ ಪಾಲು ಗಣನೀಯವಾಗಿ ಕಡಿಮೆಯಾಗಿದೆ ಎಂದು ಈ ಲೆಕ್ಕಪರಿಶೋಧನಾ ವರದಿಯಲ್ಲಿ ವಿವರವಾಗಿ ತಿಳಿಸಲಾಗಿದೆ.
ಮೂರು ವರ್ಷದಲ್ಲಿ 605.90 ಕೋಟಿ ರು. ನಷ್ಟ!
ಪಾಲಿಕೆಯು ನಿಗದಿತ ಗುರಿ ಸಾಧಿಸದೇ ಇದ್ದಿದ್ದುದ್ದರಿಂದ ಕೇವಲ ಮೂರು ವರ್ಷಗಳಲ್ಲಿಯೇ ಪಾಲಿಕೆಗೆ ಬರಬೇಕಾಗಿದ್ದ 605.90 ಕೋಟಿ ರು. ಬಂದಿಲ್ಲ ಎಂದು ಈ ವರದಿಯು ಬೊಟ್ಟು ಮಾಡಿದೆ. ಮೂರು ವರ್ಷಗಳಲ್ಲಿ 1420 ಕೋಟಿ ರು. ಬಿಡುಗಡೆಯಾಗಬೇಕಾಗಿತ್ತು. ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಕೇವಲ 814 ಕೋಟಿ ರು. ಅನುದಾನ ಬಿಡುಗಡೆಯಾಗಿದೆ ಎಂದು ವಿವರಿಸಿದೆ.

ವಾಯು ಗುಣಮಟ್ಟ ಸುಧಾರಣೆಗಾಗಿ ನಿಗದಿಯಾಗಿದ್ದ ಅನುದಾನದಲ್ಲಿ ಬಿಬಿಎಂಪಿಯು 2021-22ನೇ ಸಾಲಿನಲ್ಲಿ 5 ಕೋಟಿ, 2022-23 ನೇ ಸಾಲಿನಲ್ಲಿ 28.90 ಕೋಟಿ ಒಟ್ಟು 33.90 ಕೋಟಿ ಕಳೆದುಕೊಂಡಿದೆ. ಅಂತೆಯೇ ಘನತ್ಯಾಜ್ಯ ನಿರ್ವಹಣೆ ಹಾಗೂ ನೀರು ಸರಬರಾಜು ಸುಧಾರಣೆಗಾಗಿ ನಿಗದಿಯಾಗಿದ್ದ ಅನುದಾನದಲ್ಲಿ 2021-22ನೇ ಸಾಲಿನಲ್ಲಿ 281 ಕೋಟಿ, 2022-23 ನೇ ಸಾಲಿನಲ್ಲಿ 291 ಕೋಟಿ ಒಟ್ಟು 572 ಕೋಟಿ ರು. ಕಳೆದುಕೊಂಡಿದೆ.
2020-21ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ ವಾಯು ಗುಣಮಟ್ಟ ಸುಧಾರಣೆಗಾಗಿ 279 ಕೋಟಿ ರು., ಘನತ್ಯಾಜ್ಯ ನಿರ್ವಹಣೆ ಹಾಗೂ ನೀರು ಸರಬರಾಜು ಸುಧಾರಣೆಗೆ ಬಿಡುಗಡೆಯಾಗಿದ್ದ 279.00 ಕೋಟಿ ರು.ಗಳಿಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಅದನ್ನು ಹೊರತುಪಡಿಸಿ ನಂತರದಲ್ಲಿ ಬಿಡುಗಡೆಯಾಗಿರುವ ಮೊತ್ತಕ್ಕೆ ಕ್ರಿಯಾಯೋಜನೆಯನ್ನು ಬಿಬಿಎಂಪಿಯು ಸಿದ್ಧಪಡಿಸಿರಲೇ ಇಲ್ಲ ಎಂದು ಈ ಲೆಕ್ಕಪರಿಶೋಧನಾ ವರದಿಯಲ್ಲಿ ತಿಳಿಸಲಾಗಿದೆ.
ಮೈಕ್ರೋಪ್ಲಾನ್ ಅನುಮೋದನೆಯ ಷರತ್ತಿನಲ್ಲಿ ಈ ಮೈಕ್ರೋಪ್ಲಾನ್ ಅನುಷ್ಠಾನದ ಪ್ರಗತಿ ಕುರಿತಂತೆ ನಿಗದಿತ ನಮೂನೆಯಲ್ಲಿ ತ್ರೈಮಾಸಿಕ ವರದಿಗಳನ್ನು ಸರ್ಕಾರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಪ್ಪದೇ ಸಲ್ಲಿಸುವ ಬಗ್ಗೆ ತಿಳಿಸಲಾಗಿತ್ತು. ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗ ಬಿಬಿಎಂಪಿಯು ನಿಗದಿತ ಸಮಯದಲ್ಲಿ ನಿರ್ದಿಷ್ಟ ಗುರಿ ಸಾಧಿಸಲು ವಿಫಲವಾಗಿರುವುದರಿಂದ ಕೇಂದ್ರದ ಅನುದಾನ ಕಡಿತವಾಗಿ ಯೋಜನೆಯ ಉದ್ದೇಶವು ಫಲಪ್ರದವಾಗಿಲ್ಲದಂತಾಗಿದೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಪಾಲಿಕೆಯು ನಿಗದಿಯಾಗಿರುವ ಪೂರ್ಣ ಮೊತ್ತವನ್ನು ಪಡೆದು ಬೆಂಗಳೂರಿನಲ್ಲಿ ದಿನೇದಿನೇ ಹೆಚ್ಚಾಗುತ್ತಿರುವ ವಾಯು ಮಾಲಿನ್ಯದ ತಡೆಗೆ ಕ್ರಮ ಕೈಗೊಂಡು ಹಾಗೂ ಕುಡಿಯುವ ನೀರಿನ ಜೊತೆಗೆ ಒಳಚರಂಡಿ ವ್ಯವಸ್ಥೆಯನ್ನು ವಿಸ್ತರಿಸುವ ಕಾರ್ಯವನ್ನು ನಿಗದಿತ ಸಮಯದಲ್ಲಿ ನಿಗದಿತ ಗುರಿ ಸಾಧಿಸಿದರೆ ಯೋಜನೆಯ ಉದ್ದೇಶ ಸಫಲವಾದಂತಾಗುತ್ತದೆ. ಈ ಕಾರ್ಯವನ್ನು ಬಿಬಿಎಂಪಿಯು ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಮಾಡಲೇಬೇಕಾದ ಕಾರ್ಯವಾಗಿದೆ ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ತಿಳಿಸಲಾಗಿದೆ.

ಬೆಂಗಳೂರಿನಲ್ಲಿ ಈಗಾಗಲೇ ಗಾಳಿಯ ಗುಣಮಟ್ಟ ಕಳಪೆ ಮಟ್ಟದಲ್ಲಿರುವ ದರ ಬಗ್ಗೆ ರಾಷ್ಟ್ರೀಯ/ಅಂತರಾಷ್ಟ್ರೀಯ ಮಟ್ಟದಲ್ಲಿ ವರದಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಇದುವರೆಗಿನ ಲೋಪಗಳನ್ನು ಸರಿಪಡಿಸಿಕೊಂಡು ಆದ್ಯತೆ ಮೇರೆಗೆ ಕಾರ್ಯನಿರ್ವಹಿಸುವುದರಿಂದ ಯೋಜನೆಯ ಉದ್ದೇಶ ಪೂರ್ಣವಾದಂತಾಗುತ್ತದೆ ಎಂದು ಲೆಕ್ಕಪರಿಶೋಧನೆಯ ವರದಿಯು ಅಭಿಪ್ರಾಯಪಟ್ಟಿದೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2019ರಲ್ಲಿ ʻರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮʼವನ್ನು (ಎನ್ಸಿಎಪಿ) ಜಾರಿಗೆ ತಂದಿದ್ದು, ಇದರ ಭಾಗವಾಗಿ ಪ್ರತಿ ವರ್ಷ ʻಸ್ವಚ್ಛ ವಾಯು ಸಮೀಕ್ಷೆʼ ನಡೆಸಿ, ವರದಿ ಪ್ರಕಟಿಸುತ್ತದೆ. 2024ರಲ್ಲಿ ಬೆಂಗಳೂರು 28 ನೇ ಸ್ಥಾನ (rank) ಪಡೆದುಕೊಂಡಿದ್ದರೆ, 2023 ರಲ್ಲಿ 27ನೇ ಸ್ಥಾನ ಪಡೆದುಕೊಂಡಿತ್ತು. 2025ನೇ ಸಾಲಿನ ʻಸ್ವಚ್ಛ ವಾಯು ಸಮೀಕ್ಷೆʼ ಯ ವರದಿಯನ್ನು ಸೆಪ್ಟೆಂಬರ್ನಲ್ಲಿ ಪ್ರಕಟಿಸಲಾಗಿದ್ದು, ರಾಜ್ಯದ ಒಂದೇ ಒಂದು ನಗರ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ಕೇಂದ್ರದ ಶುದ್ಧ ಗಾಳಿ ಯೋಜನೆ; ಜಾರಿಗೆ ತರುವಲ್ಲಿ ರಾಜ್ಯದ ನಾಲ್ಕು ನಗರಗಳು ಸಂಪೂರ್ಣ ವಿಫಲ, 25 ಕೋಟಿ ವ್ಯರ್ಥ
ಕೇಂದ್ರ ಸರ್ಕಾರದ ʻರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮʼವನ್ನು (ಎನ್ಸಿಎಪಿ) ಅನುಷ್ಠಾನಕ್ಕೆ ತರುವಲ್ಲಿ ರಾಜ್ಯದ ನಾಲ್ಕು ನಗರಗಳು ಅಂದರೆ, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮತ್ತು ದಾವಣಗೆರೆ ಸಂಪೂರ್ಣವಾಗಿ ವಿಫಲವಾಗಿರುವುದು ಈ ಹಿಂದೆ ಬೆಳಕಿಗೆ ಬಂದಿತ್ತು. ಈ ಕುರಿತು ʻದಿ ಫೈಲ್ʼ ವಿವರವಾದ ವರದಿ ಪ್ರಕಟಿಸಿತ್ತು.





