ಬೆಂಗಳೂರು; ರಾಜ್ಯದ ಕರಾವಳಿ ಭಾಗ ಸೇರಿದಂತೆ ವಿವಿಧೆಡೆ ಪ್ರಚೋದನಾಕಾರಿ ಭಾಷಣ ಮಾಡಿದವರು ಮತ್ತು ಕೋಮು ಗಲಭೆ ಮಾಡಿದದವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಪಟ್ಟಿಯನ್ನು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಸದನದಕ್ಕೆ ಒದಗಿಸಿದ್ದಾರೆ.
ಕಳೆದ 3 ವರ್ಷಗಳಿಂದ ಕರಾವಳಿ ಭಾಗದಲ್ಲಿ ಪ್ರಚೋದನಾಕಾರಿ ಭಾಷಣ ಮತ್ತು ಕೋಮುಗಲಭೆಯಾದವರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಮತ್ತು ಈ ಬಗ್ಗೆ ಸರ್ಕಾರವು ಕೈಗೊಂಡಿರುವ ಕ್ರಮಗಳ ಕುರಿತು ವಿಧಾನ ಪರಿಷತ್ನಲ್ಲಿ ಶಾಸಕ ಐವನ್ ಡಿ ಸೋಜಾ ಅವರು ಕೇಳಿದ್ದ ಪ್ರಶ್ನೆಗೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಪ್ರಕರಣಗಳ ವಿವರಗಳನ್ನು ಸದನಕ್ಕೆ ಮಂಡಿಸಿದ್ದಾರೆ.
2023 ರಿಂದ 2025ರವರೆಗೆ ಒಟ್ಟು 50 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 37 ಪ್ರಕರಣಗಳು, ಪ್ರಚೋದನಾಕಾರಿ ಭಾಷಣ ಮಾಡಿದ ಪ್ರಕರಣಗಳು ಸೇರಿವೆ.
ಪ್ರಚೋದನಕಾರಿ ಭಾಷಣೆ ಮಾಡಿದವರ ಪಟ್ಟಿಯಲ್ಲಿ ಚುನಾಯಿತ ಜನಪ್ರತಿನಿಧಿಗಳಾದ ಶಾಸಕ ವೇದವ್ಯಾಸ್ ಕಾಮತ್, ಹರೀಶ್ ಪೂಂಜಾ, ಪ್ರಮೋದ್ ಮಧ್ವರಾಜ್, ಅನಂತಕುಮಾರ ಹೆಗಡೆ ಅವರ ಹೆಸರೂ ಇದೆ.
ಈಚೆಗಷ್ಟೇ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಮತ್ತು ಮಾಜಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರ ವಿರುದ್ಧ ಮಂಡ್ಯದಲ್ಲಿಯೂ ಪ್ರಚೋದನಾಕಾರಿ ಭಾಷಣ ಮಾಡಿದ್ದ ಆರೋಪದ ಮೇರೆಗೆ ಎಫ್ಐಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ಸರ್ಕಾರವು ಒದಗಿಸಿರುವ ಪಟ್ಟಿಯಲ್ಲಿ ಅನಂತ್ ಕುಮಾರ್ ಹೆಗಡೆ ಅವರ ಹೆಸರಿದೆ. ಆದರೆ 2023ರಿಂದ 2026ರವರೆಗಿನ ಪಟ್ಟಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರಿಲ್ಲದಿರುವುದು ಕಂಡು ಬಂದಿದೆ.

ರಾಜಕೀಯ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ, ಜಾತ್ರ ಮಹೋತ್ಸವ ಸಮಯದಲ್ಲಿ ಅನ್ಯ ಧರ್ಮೀಯರೊಂದಿಗೆ ವ್ಯಾಪಾರ ಮಾಡದಂತೆ ಹಿಂದೂ ಮುಸ್ಲಿಂ ಧರ್ಮಗಳ ನಡುವೆ ಕೋಮು ಸಂಘರ್ಷ ಉಂಟು ಮಾಡುವ ಉದ್ದೇಶ, ಮುಸ್ಲೀಂ ಸಮುದಾಯದವರ ವಿರುದ್ಧ ದ್ವೇಷ ಭಾಷಣ ಮಾಡಿರುವುದು, ಬಜಪೆ ಚಲೋ ಸಾರ್ವಜನಿಕ ಪ್ರತಿಭಟನೆ ಸಭೆಯಲ್ಲಿ ಮುಸ್ಲಿಂ ಸಮುದಾಯವರನ್ನು ಗುರಿಯಾಗಿಸಿ ಭಾಷಣ ಮಾಡಿರುವುದು, ಧಾರ್ಮಿಕ ಸಭೆಯಲ್ಲಿ ಲವ್ ಜಿಹಾದ್ ಬಗ್ಗೆ ಪ್ರಸ್ತಾಪಿಸಿ ಇತರ ಧರ್ಮದ ಮಹಿಳೆಯರನ್ನು ಆಕರ್ಷಿಸುವ ಕೆಲಸ ಮಾಡಬೇಕು ಎಂದು ಪ್ರಚೋದನಾಕಾರಿ ಭಾಷಣ ಮಾಡಲಾಗಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ವಿವರಿಸಿರುವುದು ಗೊತ್ತಾಗಿದೆ.

ಇದೇ ಅವಧಿಯಲ್ಲಿ ಕೋಮು ಗಲಭೆ ಮಾಡಿದವರ ದಾಖಲಾಗಿರುವ ಪ್ರಕರಣಗಳ ಸಂಖ್ಯೆಯನ್ನೂ ಒದಗಿಸಿದ್ದಾರೆ. 2025ರಲ್ಲಿ ಮಂಗಳೂರಿನಲ್ಲಿ 10 ಪ್ರಕರಣಗಳು ಮತ್ತು ದಕ್ಷಿಣ ಕನ್ನಡದಲ್ಲಿ 3 ಕೋಮು ಗಲಭೆ ಪ್ರಕರಣಗಳ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಂಗಳೂರು ನಗರದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದವರ ಪಟ್ಟಿ
ವಿಶ್ವ ಹಿಂದ್ ಪರಿಷತ್ನ ಶರಣ್ ಪಂಪ್ವೆಲ್, ರಾಮಸೇನೆಯ ಗಂಗಾಧರ ಕುಲಕರ್ಣಿ, ಶಾಸಕ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ,, ಸಂದೀಪ್ (ಕಾರ್ಪೋರೇಟರ್), ಭರತ್ ಕುಮಾರ್, ನಾರಾಯಣ ಶೆಟ್ಟಿ, ಹಿಂದೂ ವಾಗ್ಮಿ ಶ್ರೀಕಾಂತ್ ಶೆಟ್ಟಿ, ಚಕ್ರವರ್ತಿ ಸೂಲಿಬೆಲೆ ಅವರು 2023ರಿಂದ 2025ರವರೆಗೆ ಮಂಗಳೂರು ನಗರದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದವರ ಪಟ್ಟಿಯಲ್ಲಿರುವುದು ತಿಳಿದು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪಟ್ಟಿ
ಶಾಸಕ ಹರೀಶ್ ಪೂಂಜಾ, ನರಸಿಂಹ ಮಾಣಿ, ಮಹೇಶ್ ಶೆಟ್ಟಿ ತಿಮರೋಡಿ, ಭರತ್ ಕುಮೈಲು, ಡಾ ಪ್ರಭಾಕರ್ ಭಟ್, ವಿಶ್ವ ಹಿಂದೂ ಪರಿಷತ್ನ ಪುತ್ತೂರಿನ ನವೀನ್ ನೆರಿಯಾ, ಭಾರತಿ ಶೆಟ್ಟಿ, ಗಣರಾಜ ಭಟ್ ಕೆದಿಲ ಅವರು 2023ರಿಂದ 2026ರವರೆಗೆ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ವಿಶೇಷವೆಂದರೇ ಹರೀಶ್ ಪೂಂಜಾ ಅವರು 2023, 2025 ರಲ್ಲಿ ಡಾ ಪ್ರಭಾಕರ್ ಭಟ್ ಅವರು 2023 ಮತ್ತು 2025, 2026ರಲ್ಲಿಯೂ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಪಟ್ಟಿಯಿಂದ ಗೊತ್ತಾಗಿದೆ.
ಉಡುಪಿ ಜಿಲ್ಲೆಯ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ?
ಗಂಗೊಳ್ಳಿಯ ಶ್ರೀಧರ ಶೇರಿಗಾರ, ರಾಘವೇಂದ್ರ, ಯಶವಂತ ಖಾರ್ವಿ, ಉಡುಪಿ ಬಿಜೆಪಿಯ ಮಹಿಳಾ ಮೋರ್ಚಾದ ವೀಣಾ ಶೆಟ್ಟಿ, ಶರಣ್ ಪಂಪ್ ವೆಲ್, ದಿನೇಶ್ ಮೆಂಡನ್, ಪುನೀತ್ ಅತ್ತಾವರ, ಮಧ್ಯ ಪ್ರದೇಶ ಭೋಪಾಲ್ನ ಮಹಾಮಂಡಲೇಶ್ವರ ಅಖಿಲೇಶ್ವರಾ ನಂದಗಿರಿ ಮಹಾರಾಜ್, ಉತ್ತರ ಪ್ರದೇಶದ ಮೀನಾಕ್ಷಿ ಶೆಹರಾವತ್, ಪ್ರಮೋದ್ ಮಧ್ವೃರಾಜ್, ಮಲ್ಪೆಯ ಮಂಜು ಕೊಳ, ಕೇರಳ ಹಿಂದೂ ಐಕ್ಯ ವೇದಿಕೆಯ ರವೀಶ್ ತಂತ್ರಿ ಅವರು 2023ರಿಂದ 2025ರವರೆಗೆ ವಿವಿಧ ದಿನಾಂಕಗಳಂದು ಪ್ರಚೋದನಾಕಾರಿ ಭಾಷಣ ಮಾಡಿರುವುದು ಪಟ್ಟಿಯಿಂದ ತಿಳಿದು ಬಂದಿದೆ.

ಉತ್ತರ ಕನ್ನಡ ಜಿಲ್ಲೆಯ ಪಟ್ಟಿ
ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ಜಗದೀಶ್ ಕಾರಂತ, ತೌಪಿಕ್ ಬ್ಯಾರಿ, ಭಟ್ಕಳದ ಕೃಷ್ಣಾನಾಯಕ್, ಬಿಜಾಪುರದ ಭಾಗ್ಯ ಶ್ರೀ, ಕೆನರಾ ಸಂಸದರಾಗಿದ್ದ ಅನಂತ ಕುಮಾರ ಹೆಗಡೆ, ಮತ್ತು ಅಂಕೋಲಾದ ವೆಂಕಟೇಶ ನಾಯ್ಕ ಅವರು 2023ರಿಂದ 2025ರವರೆಗೆ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಅನಂತ್ ಕುಮಾರ್ ಹೆಗಡೆ ಅವರು 2024 ಮತ್ತು 2025ರಲ್ಲಿಯೂ ಎರಡು ಬಾರಿ ಪ್ರಚೋದನಾಕಾರ ಭಾಷಣ ಮಾಡಿದವರ ಪಟ್ಟಿಯಲ್ಲಿರುವುದು ಗೊತ್ತಾಗಿದೆ.
ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಒದಗಿಸಿರುವ ಪಟ್ಟಿಯಲ್ಲಿ ಗಡಿಪಾರು ಮಾಡಲಾಗದ ರೌಡಿಗಳ ಅಂಕಿ ಸಂಖ್ಯೆಯನ್ನೂ ಒದಗಿಸಿದ್ದಾರೆ.

ಈ ಪಟ್ಟಿಯ ಪ್ರಕಾರ 2023ರಿಂದ 2026ರವರೆಗೆ ಒಟ್ಟಾರೆ 274 ಮಂದಿ ರೌಡಿ ಶೀಟರ್ಗಳನ್ನು ಗಡಿಪಾರು ಮಾಡಲಾಗಿದೆ. 2023ರಲ್ಲಿ 97, 2024ರಲ್ಲಿ 127, 2025ರಲ್ಲಿ 48 ಮತ್ತು 2026ರಲ್ಲಿ ಮೂವರು ರೌಡಿ ಶೀಟರ್ಗಳನ್ನು ಗಡಿಪಾರು ಮಾಡಿರುವುದು ಗೊತ್ತಾಗಿದೆ.

ಮಂಗಳೂರು ಘಟಕದಲ್ಲಿ 186 ಮಂದಿ, ದಕ್ಷಿಣ ಕನ್ನಡದಲ್ಲಿ 54, ಉಡುಪಿಯಲ್ಲಿ 24, ಉತ್ತರ ಕನ್ನಡ ಕಾರವಾರದಲ್ಲಿ 10 ಮಂದಿ ರೌಡಿ ಶೀಟರ್ಗಳನ್ನು ಗಡಿಪಾರು ಮಾಡಲಾಗಿದೆ.
ಗಡಿಪಾರಾದವರು ಎಲ್ಲೆಲ್ಲಿದ್ದಾರೆ?
ಗಡಿಪಾರಾಗಿರುವ ರೌಡಿಗಳು ಎಲ್ಲಿದ್ದಾರೆ, ಯಾರ ಆಶ್ರಯದಲ್ಲಿದ್ದಾರೆ ಎಂಬ ಬಗ್ಗೆಯೂ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಸದನಕ್ಕೆ ಮಾಹಿತಿ ಒದಗಿಸಿದ್ದಾರೆ.
ಮಂಗಳೂರು ನಗರದಲ್ಲಿ 2023ರಲ್ಲಿ ಗಡಿಪಾರಾಗಿದ್ದ 50 ಮಂದಿ ರೌಡಿ ಶೀಟರ್ಗಳ ಗಡಿಪಾರು ಅವಧಿ ಮುಕ್ತಾಯಗೊಂಡಿದೆ. ಹೀಗಾಗಿ ಅವರು ಪ್ರಸ್ತುತ ತಮ್ಮ ಸ್ವಂತ ಜಿಲ್ಲೆಯಲ್ಲಿ ವಾಸವಾಗಿದ್ದಾರೆ. 2024ರಲ್ಲಿ ಮಂಗಳೂರು ನಗರದಲ್ಲಿ ಗಡಿಪಾರಾಗಿದ್ದ ಒಟ್ಟು 103 ಮಂದಿ ರೌಡಿ ಶೀಟರ್ಗಳ ಗಡಿಪಾರು ಅವಧಿ ಮುಕ್ತಾಯವಾಗಿದೆ. ಹೀಗಾಗಿ ಇವರೂ ಸಹ ತಮ್ಮ ಸ್ವಂತ ಜಿಲ್ಲೆಯಲ್ಲಿ ವಾಸವಾಗಿದ್ದಾರೆ.

2025ರಲ್ಲಿ ಗಡಿಪಾರಾಗಿದ್ದ 31 ಮಂದಿ ಪೈಕಿ 29 ವ್ಯಕ್ತಿಗಳ ಗಡಿಪಾರು ಅವಧಿ ಮುಕ್ತಾಯಗೊಂಡಿದೆ. ಸದ್ಯ ಇವರು ಮಾತ್ರ ಸ್ವಂತ ಜಿಲ್ಲೆಯಲ್ಲಿ ವಾಸವಾಗಿದ್ದಾರೆ. ಇನ್ನಿಬ್ಬರು ರೌಡಿ ಶೀಟರ್ಗಳು ಮಾತ್ರ ಗಡಿಪಾರು ಅವಧಿಯಲ್ಲಿದ್ದಾರೆ ಎಂದು ವಿವರಿಸಿರುವುದು ತಿಳಿದು ಬಂದಿದೆ.
2025ರಲ್ಲಿಯೂ ಇಬ್ಬರು ರೌಡಿ ಶೀಟರ್ಗಳನ್ನು ಗಡಿಪಾರು ಮಾಡಲಾಗಿತ್ತು. ಈ ಪೈಕಿ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರಕನ್ನಡದಲ್ಲಿ ವಾಸವಾಗಿರುವ ದೂರದ ಸಂಬಂಧಿಕರ ಮನೆಯಲ್ಲಿ ಮತ್ತು ಪರಿಚಯಸ್ಥರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ ಎಂದು ವಿವರಿಸಿರುವುದು ಗೊತ್ತಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಡಿಪಾರಾಗಿರುವ 54 ಮಂದಿ ಬೆಂಗಳೂರು ನಗರ ಜಿಲ್ಲೆ, ಚಿಕ್ಕಮಗಳೂರು, ರಾಯಚೂರು, ಕಲ್ಬುರ್ಗಿ, ಉಡುಪಿ, ಬಾಗಲಕೋಟೆ, ಮಡಿಕೇರಿ ಬೀದರ್ ಜಿಲ್ಲೆ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಮಹಾರಾಷ್ಟ್ರ, ಚಾಮರಾಜನಗರ, ಗುಲ್ಬರ್ಗ, ಮಂಡ್ಯ, ಕೊಡಗು, ಕಾರವಾರ, ಹಾಸನ, ಮೈಸೂರು, ಹಾವೇರಿ ಜಿಲ್ಲೆಯಲ್ಲಿದ್ದಾರೆ. ಆದರೆ ಇವರೆಲ್ಲ ಯಾರೊಂದಿಗೆ ಆಶ್ರಯ ಪಡೆಯುತ್ತಿದ್ದಾರೆ ಎಂಬ ವಿವರಗಳನ್ನು ಪಟ್ಟಿಯಲ್ಲಿ ಒದಗಿಸಿಲ್ಲ. ಅಲ್ಲದೇ 11 ಮಂದಿ ರೌಡಿ ಶೀಟರ್ಗಳ ಗಡಿಪಾರು ಸ್ಥಳ ನಮೂದು ಮಾಡಿಲ್ಲ. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಗಡಿಪಾರಾಗಿರುವ ರೌಡಿಗಳ ಗಡಿಪಾರು ಅವಧಿ ಪೂರ್ಣಗೊಂಡಿದೆ ಎಂದು ಸಚಿವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

ಅಭಿವೃದ್ಧಿಗೆ ಮಾರಕವಾಗಿಲ್ಲ
ಕರಾವಳಿ ಜಿಲ್ಲೆ ಅಭಿವೃದ್ಧಿಗೆ ಕೋಮುಗಲಭೆ ಮತ್ತು ಧರ್ಮಾಧಾರಿತ ವಿಚಾರಗಳಲ್ಲಿ ಹೆಚ್ಚು ಪ್ರಚೋದನಕಾರಿ ಭಾಷಣಗಳಿಂದ ಅಭಿವೃದ್ಧಿಗೆ ಮಾರಕವಾದ ಬಗ್ಗೆ ಕಂಡು ಬಂದಿಲ್ಲ. ಸರ್ಕಾರದಿಂದ ಮಂಜೂರಾದ ಅಭಿವೃದ್ಧಿ ಯೋಜನೆಗಳಾದ ಆಸ್ಪತ್ರೆಗಳು, ಪ್ರವಾಸೋದ್ಯಮ, ರಸ್ತೆಗಳು ಮತ್ತು ಇತರೆ ಮಹತ್ವದ ಕಾಮಗಾರಿಗಳು ಜಿಲ್ಲೆಯಲ್ಲಿ ಕಾರ್ಯಗತವಾಗುತ್ತಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.







