ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿಗಳ ಪೈಕಿ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಕಾಮಗಾರಿಗಳು ಅಪೂರ್ಣಗೊಂಡಿದ್ದರೂ ಸಹ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಂಡಿತ್ತು. ಅಲ್ಲದೇ 2019-20ರಿಂದ 2023-24ರವರೆಗೆ ಅನುಮೋದಿತ ಕಾಮಗಾರಿಗಳ ಪೈಕಿ 26,77,522 ಕಾಮಗಾರಿಗಳನ್ನು ಕೈಗೆತ್ತಿಕೊಂಡಿರಲಿಲ್ಲ ಎಂಬುದನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ಹೊರಗೆಡವಿದ್ದಾರೆ.
ವಿಧಾನಮಂಡಲದ ಉಭಯ ಸದನಗಳಿಗೆ ಮಂಡನೆಯಾಗಿರುವ ಈ ವರದಿಯು ನರೇಗಾ ಯೋಜನೆಯಡಿಯಲ್ಲಿನ ಕಾಮಗಾರಿಗಳಲ್ಲಿನ ಲೋಪಗಳು ಮತ್ತು ಅದರ ವೆಚ್ಚಗಳಿಗೆ ಸಂಬಂಧಿಸಿದಂತೆ ಮತ್ತೊಂದು ಮುಖವನ್ನು ಅನಾವರಣಗೊಳಿಸಿದೆ.

ನರೇಗಾ ಕಾರ್ಯಾಚರಣೆ ಮಾರ್ಗಸೂಚಿಗಳ ಪೈಕಿ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಾರ್ಯತಂತ್ರ ರೂಪಿಸಬೇಕು. ಅಲ್ಲದೇ ಕಾಮಗಾರಿಗಳನ್ನು ಪ್ರಸ್ತಾವಿಸಿದ ಒಂದು ಹಣಕಾಸು ವರ್ಷಕ್ಕಿಂತ ಹೆಚ್ಚು ಕಾಲ ಕಾಗಾರಿಗಳನ್ನು ಪೂರ್ಣಗೊಳಿಸದಿರುವ ಯೋಜನಾ ಅನುಷ್ಠಾನ ಏಜೆನ್ಸಿಗಳಿಗೆ ಯಾವುದೇ ಮಂಜೂರಾತಿ ನೀಡಬಾರದು ಎಂಬ ಷರತ್ತು ಕೂಡ ವಿಧಿಸಲಾಗಿದೆ. ಅಲ್ಲದೇ ಸ್ಥಳೀಯ ಸಮುದಾಯಕ್ಕೆ ಅರ್ಥಪೂರ್ಣ ಪ್ರಯೋಜನಗಳನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಲು ಈಗಾಗಲೇ ಪ್ರಾರಂಭಿಸಿರುವ ಕಾಮಗಾರಿಗಳನ್ನು ಸಮಯೋಚಿತವಾಗಿ ಪೂರ್ಣಗೊಳಿಸಬೇಕಾಗಿತ್ತು.
ಆದರೆ 2019-20ರಿಂದ 2023-24ರ ಅವಧಿಯಲ್ಲಿ ರಾಜ್ಯಮಟ್ಟದಲ್ಲಿ ಅನುಮೋದಿಸಲ್ಪಟ್ಟ , ಪೂರ್ಣಗೊಂಡ ಮತ್ತು ಅಪೂರ್ಣಗೊಂಡ ಕಾಮಗಾರಿಗಳ ಪಟ್ಟಿಯಲ್ಲಿ ಅಜಗಜಾಂತರವಿದೆ.

2019-20ರಲ್ಲಿ ಒಟ್ಟು 6,12,330 ಕಾಮಗಾರಿಗಳು ಅನುಮೋದಿತಗೊಂಡಿದ್ದವು. ಇದಕ್ಕಾಗಿ 3,274.21 ಕೋಟಿ ರು ವೆಚ್ಚ ಮಾಡಲು ಮಂಜೂರಾತಿ ನೀಡಲಾಗಿತ್ತು. ಈ ಪೈಕಿ 3,51,883 ಕಾಮಗಾರಿಗಳು ಪೂರ್ಣಗೊಂಡಿದ್ದವು. ಇದಕ್ಕಾಗಿ 3,260.13 ಕೋಟಿ ರು ವೆಚ್ಚವಾಗಿತ್ತು. 629 ಕಾಮಗಾರಿಗಳು ಪ್ರಗತಿಯಲ್ಲಿದ್ದವು. ಇದಕ್ಕಾಗಿ 14.08 ಕೋಟಿ ರುಪಾಯಿ ವೆಚ್ಚವಾಗಿತ್ತು. ಇನ್ನೂ 2,59,818 ಕಾಮಗಾರಿಗಳನ್ನು ಕೈಗೆತ್ತಿಕೊಂಡಿರಲಿಲ್ಲ ಎಂದು ಸಿಎಜಿಯು ಅಂಕಿ ಅಂಶಗಳನ್ನು ಒದಗಿಸಿದೆ.
ಅದೇ ರೀತಿ 2020-21ರಲ್ಲಿ 13,39,640 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು. ಈ ಪೈಕಿ 4,223.73 ಕೋಟಿ ರು ವೆಚ್ಚ ಮಾಡಲು ಮಂಜೂರಾತಿ ದೊರೆತಿತ್ತು. ಈ ಪೈಕಿ 7,01,409 ಕಾಮಗಾರಿಗಳು ಪೂರ್ಣಗೊಂಡಿದ್ದವು. ಇದಕ್ಕಾಗಿ 4,222.51 ಕೋಟಿ ರು ವೆಚ್ಚವಾಗಿತ್ತು. 74 ಕಾಮಗಾರಿಗಳು ಪ್ರಗತಿಯಲ್ಲಿದ್ದವು. 1.22 ಕೋಟಿ ರು ವೆಚ್ಚವಾಗಿತ್ತು. ಇನ್ನೂ 6,38,157 ಕಾಮಗಾರಿಗಳನ್ನು ಕೈಗೆತ್ತಿಕೊಂಡಿರಲಿಲ್ಲ.

2021-22ರಲ್ಲಿ 15,10,478 ಸಂಖ್ಯೆಯ ಅನುಮೋದಿತ ಕಾಮಗಾರಿಗಳಿಗೆ 5,901.75 ಕೋಟಿ ರುಪಾಯಿ ವೆಚ್ಚವಾಗಿತ್ತು. ಈ ಪೈಕಿ 7,48,584 ಕಾಮಗಾರಿಗಳು ಪೂರ್ಣಗೊಂಡಿದ್ದವು. ಇದಕ್ಕಾಗಿ 5,731.06 ಕೋಟಿ ರು ವೆಚ್ಚವಾಗಿತ್ತು. 18,064 ಕಾಮಗಾರಿಗಳು ಪ್ರಗತಿಯಲ್ಲಿದ್ದವು. ಇದರ ಮೊತ್ತ 170.69 ಕೋಟಿಯಷ್ಟಿತ್ತು. ಇದನ್ನೂ 7,43,830 ಕಾಮಗಾರಿಗಳನ್ನು ಕೈಗೆತ್ತಿಕೊಂಡಿರಲಿಲ್ಲ.
2022-23ರಲ್ಲಿ 13,77,595 ಕಾಮಗಾರಿಗಳಿಗೆ ಅನುಮೋದನೆ ದೊರೆತಿತ್ತು. ಈ ಕಾಮಗಾರಿಗಳಿಗೆ 6,208.73 ಕೋಟಿ ರುಪಾಯಿ ವೆಚ್ಚ ಮಾಡಲು ಮಂಜೂರಾತಿ ನೀಡಲಾಗಿತ್ತು. ಈ ಪೈಕಿ 5,77,046 ಕಾಮಗಾರಿಗಳಷ್ಟೇ ಪೂರ್ಣಗೊಂಡಿದ್ದವು. ಈ ಕಾಮಗಾರಿಗಳಿಗಾಗಿ 4,218.25 ಕೋಟಿ ರುಪಾಯಿ ವೆಚ್ಚವಾಗಿತ್ತು. 2,37,579 ಕಾಮಗಾರಿಗಳು ಪ್ರಗತಿಯಲ್ಲಿದ್ದವು. ಇದರ ಮೊತ್ತವು 1,990.48 ಕೋಟಿಯಷ್ಟಿತ್ತು. ಇನ್ನೂ 5,62,970 ಕಾಮಗಾರಿಗಳನ್ನು ಕೈಗೆತ್ತಿಕೊಂಡಿರಲಿಲ್ಲ.

2023-24ರಲ್ಲಿ 13,60,674 ಕಾಮಗಾರಿಗಳಿಗೆ ಅನುಮೋದನೆ ಪಡೆದುಕೊಂಡಿತ್ತು. ಇದಕ್ಕಾಗಿ 7,286.74 ಕೋಟಿ ರುಪಾಯಿ ವೆಚ್ಚವಾಗಿತ್ತು. ಈ ಪೈಕಿ 2,06,449 ಕಾಮಗಾರಿಗಳು ಪೂರ್ಣಗೊಂಡಿದ್ದವು. ಈ ಕಾಮಗಾರಿಗಳಿಗೆ 1,962.65 ಕೋಟಿ ವೆಚ್ಚ ಭರಿಸಲಾಗಿತ್ತು. 6,81,478 ಕಾಮಗಾರಿಗಳು ಪ್ರಗತಿಯಲ್ಲಿದ್ದವು. ಇದಕ್ಕಾಗಿ 5,324.08 ಕೋಟಿ ರುಪಾಯಿ ವೆಚ್ಚವಾಗಿದೆ. ಇನ್ನೂ 4,72,747 ಕಾಮಗಾರಿಗಳಿಗೆ ಚಾಲನೆಯೇ ಸಿಕ್ಕಿರಲಿಲ್ಲ .

ಒಟ್ಟಾರೆ 2019-20ರಿಂದ 2023-24ರವರೆಗೆ 62,00,717 ಕಾಮಗಾರಿಗಳಿಗೆ ಅನುಮೋದನೆ ದೊರೆತಿತ್ತು. ಈ ಕಾಮಗಾರಿಗಳಿಗಾಗಿ 26,895.16 ಕೋಟಿ ರುಪಾಯಿ ಮಂಜೂರಾಗಿತ್ತು. ಈ ಪೈಕಿ 25,85,371 ಕಾಮಗಾರಿಗಳಷ್ಟೇ ಪೂರ್ಣಗೊಂಡಿದ್ದವು. ಈ ಕಾಮಗಾರಿಗಳಿಗೆ 19,394.61 ಕೋಟಿ ವೆಚ್ಚವಾಗಿತ್ತು. ಇನ್ನೂ 9,37,824 ಕಾಮಗಾರಿಗಳು ಪ್ರಗತಿಯಲ್ಲಿದ್ದವು. ಇದರ ಮೊತ್ತ 7,500.55 ಕೋಟಿಯಷ್ಟಿತ್ತು. ಈ 6 ವರ್ಷಗಳ ಅವಧಿಯಲ್ಲಿ ಅನುಮೋದಿತ ಕಾಮಗಾರಿಗಳ ಪೈಕಿ 26,77,522 ಕಾಮಗಾರಿಗಳಿಗೆ ಚಾಲನೆಯೇ ದೊರೆತಿರಲಿಲ್ಲ ಎಂದು ಸಿಎಜಿಯು ವಿವರಿಸಿದೆ.

ಅಲ್ಲದೇ ಈ ಕಾಮಗಾರಿಗಳು ಶೇಕಡವಾರು ಇಳಿಕೆಯಾಗಿತ್ತು. ಮತ್ತು ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳ ವೆಚ್ಚವು ಒಟ್ಟು ಅನುಮೋದಿತ ವೆಚ್ಚದ ಶೇ.28ರಷ್ಟಿತ್ತು. ಅಪೂರ್ಣ ಕಾಮಗಾರಿಗಳು ವ್ಯಕ್ತಿಗೆ ವೇತನದ ನಿರೀಕ್ಷಿತ ಪ್ರಯೋಜನಗಳನ್ನು ವಿಳಂಬಗೊಳಿಸುತ್ತದೆ. ಅಲ್ಲದೇ ಅಪೂರ್ಣ ಆಸ್ತಿಗಳು ಸಮುದಾಯಕ್ಕೆ ನಿಷ್ಪ್ರಯೋಜಕವಾಗಿ ಉಳಿಯುತ್ತವೆ ಎಂದು ಸಿಎಜಿಯು ತನ್ನ ವರದಿಯಲ್ಲಿ ವಿಶ್ಲೇಷಿಸಿರುವುದು ತಿಳಿದು ಬಂದಿದೆ.

ಅದೇ ರೀತಿ ಕೈಗೆತ್ತಿಕೊಳ್ಳದ ಕಾಮಗಾರಿಗಳ ಸಂಖ್ಯೆಯು 26.77 ಲಕ್ಷದಷ್ಟಿದ್ದವು.

ಇವುಗಳು ಪೂರ್ಣಗೊಂಡ ಕಾಮಗಾರಿಗಳ ಸಂಖ್ಯೆಗಿಂತಲೂ ಹೆಚ್ಚಾಗಿದ್ದವು. ಇದು ಈಗಾಗಲೇ ಕೈಗೆತ್ತಿಕೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸುವ ಬದಲು ವಾಡಿಕೆ ರೀತಿಯಲ್ಲಿ ಕಾಮಗಾರಿಗಳನ್ನು ಅನುಮೋದಿಸಲಾಗುತ್ತಿದೆ ಎಂದು ತೋರಿಸುತ್ತದೆ ಎಂದು ಸಿಎಜಿಯು ತನ್ನ ವರದಿಯಲ್ಲಿ ವಿವರಿಸಿದೆ.
‘ಹೀಗೆ ಬಾಳಿಕೆ ಬರುವ ಸ್ವತ್ತುಗಳನ್ನು ಸೃಷ್ಟಿಸುವ ಮೂಲಕ ಗ್ರಾಮಸ್ಥರ ಜೀವನ ಗುಣಮಟ್ಟವನ್ನು ಸುದಾರಿಸುವ ಯೋಜನೆಯಡಿಯಲ್ಲಿನ ಪ್ರಯತ್ನಗಳು ಕಾಮಗಾರಿಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸದೇ ಇದ್ದುದರಿಂದ ಗುರಿ ತಲುಪಲು ಸಾಧ್ಯವಾಗಲಿಲ್ಲ,’ ಎಂದು ಸಿಎಜಿ ವಿಶ್ಲೇಷಿಸಿದೆ.
ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಕಾಮಗಾರಿಗಳು ಅಪೂರ್ಣವಾಗಿದ್ದರೂ ಸಹ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು ಕಾರ್ಯಾಚರಣೆ ಮಾರ್ಗಸೂಚಿಗಳ ಉಲ್ಲಂಘನೆಯಾಗಿತ್ತು ಎಂದು ಸಿಎಜಿಯು ವಿವರಿಸಿದೆ.
ಅಲ್ಲದೇ 2019-20ರಿಂದ 2021-22ರ ಅವಧಿಯಲ್ಲಿ ಬಹುತೇಕ ಸಂಪೂರ್ಣ ಮಂಜೂರಾದ ವೆಚ್ಚವನ್ನು ಶೆ. 50ರಿಂದ 57ರಷ್ಟು ಕಾಮಗಾರಿಗಳಿಗೆ ಭರಿಸಿರುವುದನ್ನು ಸಿಎಜಿಯು ಗಮನಿಸಿದೆ. ಇದು ಅವಾಸ್ತವಿಕ ಅಂದಾಜುಗಳ ತಯಾರಿಕೆ ಅಥವಾ ಅಂದಾಜು ವೆಚ್ಚಗಳ ಪರಿಷ್ಕರಣೆ ಮಾಡದಿರುವುದನ್ನು ಸಾಬೀತುಪಡಿಸುತ್ತದೆ ಎಂದು ವಿಶ್ಲೇಷಿಸಿದೆ.
1,007.83 ಕೋಟಿ ರು. ವೆಚ್ಚದ ಕಾಮಗಾರಿಗಳು ಅಪೂರ್ಣ
2019-20ರಿಂದ 2023-24ವರೆಗಿನ ಅವಧಿಯಲ್ಲಿ ಪರೀಕ್ಷಾ ತನಿಖೆ ನಡೆಸಿದ 5 ಜಿಲ್ಲೆಗಳಲ್ಲಿ 1,007.83 ಕೋಟಿ ರು. ವೆಚ್ಚವನ್ನು ಒಳಗೊಂಡ 1,22,868 ಕಾಮಗಾರಿಗಳು ಒಂದು ವರ್ಷಕ್ಕೂ ಹೆಚ್ಚು ಕಾಲ ಅಪೂರ್ಣಗೊಂಡಿದ್ದವು. 1,22,868 ಕಾಮಗಾರಿಗಳ ಪೈಕಿ 36,644 ಕಾಮಗಾರಿಗಳ ಪ್ರಾರಂಭದ ದಿನಾಂಕಗಳು ಎಂಐಎಸ್ ವರದಿಗಳಲ್ಲಿ ಉಲ್ಲೇಖಿಸಿದ ಕಾಮಗಾರಿಗಳ ಪ್ರಾರಂಭದ ಹಣಕಾಸು ವರ್ಷಕ್ಕೆ ಅನುಗುಣವಾಗಿರಲಿಲ್ಲ ಎಂದು ಲೆಕ್ಕ ಪರಿಶೋಧನೆಯ ಪರಿಶೀಲನೆಯಿಂದ ತಿಳಿದು ಬಂದಿದೆ.
ಈ 36,644 ಕಾಮಗಾರಿಗಳ ಪೈಕಿ 1,968 ಕಾಮಗಾರಿಗಳ ಪ್ರಾರಂಭದ ದಿನಾಂಕಗಳೂ ಸಹ ಹಿಂದಿನ ಅವಧಿ 2008-09ರಿಂದ 2018-19ರ ಅವಧಿಗೆ ಸಂಬಂಧಿಸಿವೆ. 14,228 ಕಾಮಗಾರಿಗಳಲ್ಲಿ ಕಾಮಗಾರಿ ಪ್ರಾರಂಭದ ದಿನಾಂಕಗಳನ್ನೇ ನಮೂದಿಸಿರಲಿಲ್ಲ. ಹೀಗೆ ಉಳಿದಿರುವ ಅಪೂರ್ಣ ಕಾಮಗಾರಿಗಳಿಗೆ ಸಂಬಂಧಿಸಿದ ದತ್ತಾಂಶವೂ ಸರಿಯಾಗಿರಲಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ಲಭ್ಯವಿರುವ ದತ್ತಾಂಶದ ವಿಶ್ವಾಸಾರ್ಹತೆ ಮತ್ತು ಸಮಗ್ರತೆ ಬಗ್ಗೆ ಅನುಮಾನವನ್ನು ಹುಟ್ಟು ಹಾಕುತ್ತದೆ ಎಂದು ಸಿಎಜಿ ತನ್ನ ವರದಿಯಲ್ಲಿ ಸಂಶಯ ವ್ಯಕ್ತಪಡಿಸಿದೆ.
ಪರೀಕ್ಷಾ ತನಿಖೆ ನಡೆಸಿದ ಜಿಲ್ಲೆಗಳಲ್ಲಿ 2019-20ರಿಂದ 2023-24ರ ಅವಧಿಯಲ್ಲಿ ಪ್ರಾರಂಭವಾಗಿದ್ದ 9,266 ಕಾಮಗಾರಿಗಳು ಅಪೂರ್ಣವಾಗಿದ್ದವು. ಈ ಕಾಮಗಾರಿಗಳ ವೆಚ್ಚವು ಮಂಜೂರಾದ ಅಂದಾಜು ವೆಚ್ಚದ ಶೇ.5ಕ್ಕಿಂತ ಕಡಿಮೆಯಿತ್ತು. ಇದು ಸಮಯ ಕಳೆದಂತೆ ವ್ಯರ್ಥವಾಗಬಹುದು ಎಂದು ಸಿಎಜಿ ವರದಿಯಲ್ಲಿ ಹೇಳಿದೆ.
ಇದಷ್ಟೇ ಅಲ್ಲ, ಪರೀಕ್ಷಾ ತನಿಖೆ ನಡೆಸಿದ್ದ 40 ಗ್ರಾಮ ಪಂಚಾಯ್ತಿಗಳಲ್ಲಿ 400 ಕಾಮಗಾರಿಗಳಲ್ಲಿ 81 ಇತರೆ ಇಲಾಖೆಗಳ ಒಮ್ಮುಖ ಕಾಮಗಾರಿಗಳಾಗಿದ್ದವು. ಈ ಕುರಿತೂ ಲೆಕ್ಕ ಪರಿಶೋಧನೆಯು ಹಲವು ಅವಲೋಕನಗಳನ್ನು ಮಾಡಿದೆ.
ಗ್ರಾಮ ಸಭೆಗಳಲ್ಲಿ ಚರ್ಚೆಯನ್ನೇ ನಡೆಸಿರಲಿಲ್ಲ
ಗ್ರಾಮ ಪಂಚಾಯ್ತಿಗಳನ್ನು ಹೊರತುಪಡಿಸಿ ಇತರೆ ಏಜೆನ್ಸಿಗಳು ಅನುಷ್ಠಾನಗೊಳಿಸಿದ 81 ಒಮ್ಮುಖ ಕಾಮಗಾರಿಗಳಲ್ಲಿ 60ರ ಬಗ್ಗೆ ಗ್ರಾಮ ಸಭೆಯಲ್ಲಿ ಚರ್ಚೆಯನ್ನೇ ನಡೆಸಿರಲಿಲ್ಲ. ಹಾಗೆಯೇ ಕಾರ್ಯಚರಣಾ ಮಾರ್ಗದರ್ಶಿ ಸೂತ್ರಗಳನ್ನು ಕಡ್ಡಾಯಗೊಳಿಸಲಾಗಿತ್ತು. ಆದರೂ ಪರೀಕ್ಷೆ ತನಿಖೆ ನಡೆಸಿದ್ದ ಯಾವುದೇ ಜಿಲ್ಲೆಗಳು ತಾಲೂಕುಗಳು, ಗ್ರಾಮ ಪಂಚಾಯ್ತಿಗಳಲ್ಲಿ ಯೋಜಿತ ಜಿಲ್ಲಾ ಸಂಪನ್ಮೂಲ ಬ್ಲಾಕ್ ಸಂಪನ್ಮೂಲ, ಗ್ರಾಮ ಸಂಪನ್ಮೂಲ ಎಂದು ರಚಿಸಿರಲಿಲ್ಲ.

ಈ ಒಮ್ಮುಖ ಮಾರ್ಗಸೂಚಿಗಳನ್ನು ಕಾರ್ಯಗತಗೊಳಿಸಲು ರಾಜ್ಯ ಸರ್ಕಾರವು ಪಿಎಂಜಿಎಸ್ವೈ ಮತ್ತು ಎಂಜಿಎನ್ಆರ್ಜಿಎಸ್ನ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಒಮ್ಮುಖ ತಂಡವನ್ನು ರಚಿಸಿರಲಿಲ್ಲ ಎಂದು ಸಿಎಜಿಯು ಗಮನಿಸಿದೆ. ಕಲ್ಬುರ್ಗಿ, ಕೊಪ್ಪಳ, ಮಂಡ್ಯ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಜಿಪಿಪಿಎಫ್ಟಿಗಳನ್ನು ರಚಿಸಿರಲಿಲ್ಲ.
‘ಹೀಗೆ ಒಮ್ಮುಖಕ್ಕೆ ಅಗತ್ಯವಾದ ಸಾಂಸ್ಥಿಕ ಬೆಂಬಲವನ್ನು ಒದಗಿಸಿರಲಿಲ್ಲ. ಇದು ಒಮ್ಮುಖ ಕಾಮಗಾರಿಗಳ ಅನುಷ್ಠಾನದಲ್ಲಿ ವಿವಿಧ ನ್ಯೂನತೆಗಳಿಗೆ ಕಾರಣವಾಯಿತು,’ ಎಂದು ಸಿಎಜಿಯು ವಿಶ್ಲೇಷಿಸಿದೆ.







