ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ ಸುಂಕ ವಿಧಿಸಿ, ಇದರಿಂದ ಬರುವ ಮೊತ್ತದಿಂದ ಅಸಂಘಟಿತ ಕಾರ್ಮಿಕರಿಗೆ ವಿವಿಧ ಕಲ್ಯಾಣ, ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸುವ ಯೋಜನೆಯನ್ನು ಕಾರ್ಮಿಕ ಇಲಾಖೆಯು ಪ್ರಸ್ತಾವಿಸಿದೆ.
2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಬೇಕು ಎಂದು ಪ್ರಸ್ತಾವಿಸಿರುವ ಈ ಯೋಜನೆಗೆ ಅಂಬೇಡ್ಕರ್ ಆಶಾಕಿರಣ ಯೋಜನೆ ಎಂದು ಹೆಸರಿಸಿದೆ. ಹೊಸ ಯೋಜನೆ, ಘೋಷಣೆಗಳ ಪಟ್ಟಿಯಲ್ಲಿ ಕಾರ್ಮಿಕ ಇಲಾಖೆಯು ತನ್ನ ಪ್ರಸ್ತಾವದಲ್ಲಿ ವಿವರಿಸಿದೆ.
2026-27ನೇ ಸಾಲಿನ ಆಯವ್ಯಯವನ್ನು ಇದೇ ಮಾರ್ಚ್ 6ರಂದು ಮಂಡಿಸಲಿರುವ ಬಜೆಟ್ನಲ್ಲಿ ಈ ಹೊಸ ಯೋಜನೆ ಜಾರಿಗೊಳಿಸಬೇಕು ಎಂದು ಸಚಿವ ಸಂತೋಷ್ ಲಾಡ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
2026-27ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆಯು ಪ್ರಸ್ತಾವಿಸಿರುವ ಸಮಗ್ರ ಯೋಜನೆಗಳ ಪಟ್ಟಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ರಾಜ್ಯದಲ್ಲಿ ಪ್ರಸ್ತುತ 1.10 ಕೋಟಿ ಕಾರ್ಮಿಕರು ಇ-ಶ್ರಮ್ ಪೋರ್ಟಲ್ನಲ್ಲಿ ನೋಂದಾಯಿಸಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ಗೆ 50 ಪೈಸೆಯಂತೆ ಸುಂಕ ವಿಧಿಸಿ ಅದರಿಂದ ಬರುವ ಮೊತ್ತದಿಂದ ಎಲ್ಲಾ ಕಾರ್ಮಿಕರಿಗೂ ವಿವಿಧ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಬಹುದು ಎಂದು ಕಾರ್ಮಿಕ ಇಲಾಖೆಯು ಪ್ರಸ್ತಾವಿಸಿದೆ. ಆದರೆ ಈ ಯೋಜನೆಗೆ ಎಷ್ಟು ಮೊತ್ತವನ್ನು ಸಂಗ್ರಹಿಸಬಹುದು ಎಂದು ಅಂದಾಜಿಸಿಲ್ಲ.

ಅದೇ ರೀತಿ ರಾಜ್ಯದ 04 ಕಂದಾಯ ವಿಭಾಗಗಳಲ್ಲಿ ತಲಾ ಒಂದು ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರಥಮಹಂತದಲ್ಲಿ ಒಟ್ಟು 980 ಕೋಟಿ ರು ವೆಚ್ಚದಲ್ಲಿ, 02 ಕೇಂದ್ರಗಳನ್ನು ಮೈಸೂರು ಮತ್ತು ಧಾರವಾಡ ಜಿಲ್ಲೆಗಳಲ್ಲಿ ಹಾಗೂ ಎರಡನೇ ಹಂತದಲ್ಲಿ ಕಲ್ಬುರ್ಗಿ ಮತ್ತು ಬೆಂಗಳೂರು ನಗರದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ಕೇಂದ್ರವನ್ನು ಸ್ಥಾಪಿಸಲು ಪ್ರಸ್ತಾವಿಸಿದೆ.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸುಂಕದ ಮೊತ್ತದಿಂದ ಈ ವೆಚ್ಚವನ್ನು ಭರಿಸಲಾಗುವುದು ಎಂದು ಕಾರ್ಮಿಕ ಇಲಾಖೆಯು ಪ್ರಸ್ತಾವಿಸಿರುವುದು ಗೊತ್ತಾಗಿದೆ.
ಕರ್ನಾಟಕ ಕಾರ್ಮಿಕರ ಕಲ್ಯಾಣ ಮಂಡಳಿ, ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಆಶಾದೀಪ ಯೋಜನೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಕಾರ್ಮಿಕ ಭವನ ನಿರ್ಮಾಣ, ಚಾಲಕರಿಗೆ ವಿಮಾ ಯೋಜನೆ, ಔದ್ಯಮಿಕ ಸಂಬಂಧಗಳು ಮತ್ತು ಕಾನೂನುಗಳ ಸಮಾಚರಣೆ, ನಿರ್ದೇಶನ ಮತ್ತು ಆಡಳಿತ (ವೇತನ ಹೊರತುಪಡಿಸಿ) ವಿಭಾಗಗಳಿಗೆ 2026-27ನೇ ಸಾಲಿಗೆ ಒಟ್ಟಾರೆ 164.74 ಕೋಟಿ ರು ಅನುದಾನ ಕೋರಿದೆ.

ಇವೇ ವಿಭಾಗಗಳಿಗೆ 2025-26ನೇ ಸಾಲಿನಲ್ಲಿ 51.15 ಕೋಟಿ ರು ಅನುದಾನ ಹಂಚಿಕೆಯಾಗಿತ್ತು. 2026ರ ಜನವರಿವರೆಗೆ 68.71 ಕೋಟಿ ರು ವೆಚ್ಚವಾಗಿತ್ತು. 2026-27ನೇ ಸಾಲಿಗೆ ಹೆಚ್ಚುವರಿಯಾಗಿ 164.74 ಕೋಟಿ ರುಪಾಯಿಗಳನ್ನು ಅನುದಾನ ಒದಗಿಸಬೇಕು ಎಂದು ಪ್ರಸ್ತಾವಿಸಿರುವುದು ತಿಳಿದು ಬಂದಿದೆ.
ಕರ್ನಾಟಕ ಕಾರ್ಮಿಕರ ಕಲ್ಯಾಣ ಮಂಡಳಿಗೆ 27 ಕೋಟಿ, ಬಾಲಕಾರ್ಮಿಕ ಯೋಜನಾ ಸೊಸೈಟಿಗೆ 9 ಕೋಟಿ, ಆಶಾದೀಪ ಯೋಜನೆಗೆ 15.62 ಕೋಟಿ, ಚಾಲಕರ ವಿಮಾ ಯೋಜನೆಗೆ 50 ಕೋಟಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ 8.80 ಕೋಟಿ, ಕಾರ್ಮಿಕ ಭವನ ನಿರ್ಮಾಣಕ್ಕೆ 22.60 ಕೋಟಿ, ನಿರ್ದೇಶನ ಮತ್ತು ಆಡಳಿತ ವಿಭಾಗಕ್ಕೆ 6.77 ಕೋಟಿ, ಔದ್ಯಮಿಕ ಸಂಬಂಧಗಳು ಮತ್ತು ಕಾನೂನುಗಳ ಸಮಾಚರಣೆಗೆ 24.95 ಕೋಟಿ ರು ಸೇರಿ ಒಟ್ಟಾರೆ 164.74 ಕೋಟಿ ರು ಅನುದಾನ ಕೋರಿದೆ.
ನೂತನ 4 ಕಾರ್ಮಿಕ ಸಂಹಿತೆಗಳನ್ನು ವೆಬ್ ಆಧಾರಿತ ಅಪ್ಲಿಕೇಷನ್ ಮೂಲಕ ಜಾರಿಗೊಳಿಸಲು ತಂತ್ರಾಂಶ ಅಭಿವೃದ್ಧಿಪಡಿಸಬೇಕು. ಇದಕ್ಕಾಘಿ 3.47 ಕೋಟಿ ರು ಅನುದಾನ ಕೋರಿದೆ. ಇಲಾಖೆ ಅಧೀನ ಕಚೇರಿಗಳಲ್ಲಿ ಅವಶ್ಯಕವಿರುವ 118 ಅಟೆಂಡರ್, 11 ಸ್ವಚ್ಛತಾ, 26 ಭದ್ರತಾ, 7 ಮಂದಿ ಚಾಲಕರು ಸೇರಿ ಒಟ್ಟಾರೆ 232 ಸಿಬ್ಬಂದಿಗಳನ್ನು ಹೊರಗುತ್ತಿಗೆ ಮೂಲಕ ಹೊಸದಾಗಿ ನೇಮಕ ಮಾಡಿಕೊಳ್ಳಬೇಕು. ಇದಕ್ಕಾಗಿ 7.37 ಕೋಟಿ ರು ಅನುದಾನ ಅಗತ್ಯವಿದೆ.

ಹೊಸ ಕಾನೂನುಗಳ ವ್ಯಾಪಕ ಪ್ರಚಾರ ಹಾಗೂ ನಿಯತಕಾಲಿಕ ಪುಸ್ತಕಗಳನ್ನು ಮುದ್ರಿಸಲು 0.45 ಕೋಟಿ ರು., ಅಧೀನ ಕಛೇರಿಗಳಲ್ಲಿನ ಯಂತ್ರೋಪಕರಣಗಳ ವಾರ್ಷಿಕ ನಿರ್ವಹಣೆಗಾಗಿ 0.50ಕೋಟಿ, ಕಚೇರಿ ಕಟ್ಟಡಗಳ ಬಾಡಿಗೆ ದರಗಳು ಪರಿಷ್ಕೃತಗೊಂಡಿರುವ ಕಾರಣ ಹೆಚ್ಚುವರಿಯಾಗಿ 0.50 ಕೋಟಿ, ಇಲಾಖೆ ವಾಹನಗಳ ನಿರ್ವಹಣೆಗಾಗಿ ಹೆಚ್ಚುವರಿಯಾಗಿ 0.50 ಕೋಟಿ ರು ಸೇರಿ ಒಟ್ಟಾರೆ 15.79 ಕೋಟಿ ರುಪಾಯಿ ಅನುದಾನದ ಅವಶ್ಯಕತೆ ಇದೆ ಎಂದು ಕಾರ್ಮಿಕ ಇಲಾಖೆಯು ವಿವರಿಸಿದೆ.
ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ಪಾವತಿಸುತ್ತಿರುವ ವಂತಿಕೆಯನ್ನು ಕಾರ್ಮಿಕನಿಂದ 50, ಕಾರ್ಖಾನೆಗಳ ಮಾಲೀಕರು, ಕಾರ್ಯಸಂಸ್ಥೆಗಳಿಂದ 100 ರು ನಂತೆ ಮತ್ತು ಸರ್ಕಾರದ ಪಾಲಿನ ವಂತಿಕೆ 50 ರು ಹೆಚ್ಚಿಸಿ ಪರಿಷ್ಕರಿಸಿದೆ. ಅಂಗಡಿ, ವಾಣಿಜ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಐವತ್ತಕ್ಕಿಂತ ಹೆಚ್ಚಿನ ವ್ಯಕ್ತಿಗಳ ಬದಲಾಘಿ ಹತ್ತು ಅಥವಾ ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿದ್ದಲ್ಲಿ ಅಂತಹ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆಯು ಅನ್ವಯಿಸಲಿದೆ. ಈ ಕಾಯ್ದೆಗೆ ತಿದ್ದುಪಡಿ ಮಾಡಲಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ವಂತಿಕೆ ಪಾಲು 27 ಕೋಟಿ ರು ಬಿಡುಗಡೆ ಮಾಡಬೇಕಿದೆ.

ಆರ್ಥಿಕ ಇಲಾಖೆಯು ಸೂಚಿಸಿರುವ ಮೊತ್ತದಲ್ಲಿ ಹಂಚಿಕೆ ಮಾಡಲಾದ ಮೊತ್ತವನ್ನು ಹೊರತುಪಡಿಸಿ ಹೆಚ್ಚುವರಿಯಾಗಿ 17 ಕೋಟಿ ರು ಅನುದಾನದ ಅವಶ್ಯಕತೆ ಇದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.
ಬಾಲ ಹಾಗೂ ಕಿಶೋರ ಕಾರ್ಮಿಕರ ತಪಾಸಣೆ, ಪುನರ್ವಸತಿ ಮತ್ತಿತರ ಯೋಜನೆಗಳಿಗೆ, ತರಬೇತಿ, ಕಾರ್ಯಾಗಾರ ನಡೆಸಲು 2026-27ನೇ ಸಾಲಿನಲ್ಲಿ 9 ಕೋಟಿ ರು ಒದಗಿಸಬೇಕು ಎಂದು ಕೋರಿದೆ. ಆಶಾ ದೀಪ ಯೋಜನೆಗೆ 15.62 ಕೋಟಿ ರು ಒದಗಿಸಬೇಕು ಎಂದು ಕೋರಿದೆ.
ಚಾಲಕರಿಗೆ ವಿಮಾ ಯೋಜನೆಯಡಿಯಲ್ಲಿ 38 ಕೋಟಿ ರು ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆ. ಈ ಹಿಂದೆ ಚಾಲ್ತಿಯಲ್ಲಿದ್ದ ಯೋಜನೆಯಡಿ ಖಾಸಗಿ ವಾಣಿಜ್ಯ ಸಾರಿಗೆ ಚಾಲಕರು, ನಿರ್ವಾಹಕರು ಮತ್ತು ಕ್ಲೀನರ್ಗಳು ಮಾತ್ರ ಈ ಯೋಜನೆಗೆ ಒಳಪಡುತ್ತಿದ್ದರು. ಪ್ರಸ್ತುತ ಹೊಸ ಕಾಯ್ದೆಯಡಿ ಮೋಟಾರು ಸಾರಿಗೆ ಸಂಬಂಧಿತ 20 ವರ್ಗಗಳ ಸುಮಾರು 40 ಲಕ್ಷ ಕಾರ್ಮಿಕರು ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ. ಹೀಗಾಗಿ 38 ಕೋಟಿ ರು ಹೆಚ್ಚುವರಿ ಅನುದಾನ ಘೋಷಿಸಬೇಕು ಎಂದು ಕೋರಿದೆ.

ಹಾಸನ, ಕೊಪ್ಪಳ, ರಾಯಚೂರು, ಹಾವೇರಿ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆ, ಕಲಘಟಗಿ ತಾಲೂಇನಲ್ಲಿ ಈಗಾಗಲೇ ಕಾರ್ಮಿಕ ಕಚೇರಿ ಸಂಕೀರ್ಣ ಕಾರ್ಮಿಕ ಭವನ ನಿರ್ಮಾಣ ಹಂತದಲ್ಲಿದೆ. ಈ ಕಾಮಗಾರಿ ಪೂರ್ಣಗೊಳಿಸಲು ತುರ್ತಾಗಿ 18.60 ಕೋಟಿ ರು ಅನುದಾನ ಅವಶ್ಯಕತೆ ಇದೆ. ಅಲ್ಲದೇ 2026-27ನೇ ಸಾಲಿನಲ್ಲಿ ಬೀದರ್ ಜಿಲ್ಲೆಯಲ್ಲಿ ಕಾರ್ಮಿಕರ ಭವನವನ್ನು ನಿರ್ಮಾಣ ಮಾಡಲು 4 ಕೋಟಿ ರು ಹೆಚ್ಚುವರಿ ಅನುದಾನ ಮಂಜೂರು ಮಾಡಬೇಕು ಎಂದು ಪ್ರಸ್ತಾವಿಸಿದೆ.

ಬೀದರ್ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದೋದ್ದೇಶ ಸಹಕಾರದ ಮಾದರಿಯಲ್ಲಿ ಪ್ರಾಯೋಗಿಕವಾಗಿ ಮೈಸೂರು, ಧಾರವಾಡ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹೊರಗುತ್ತಿಗೆ ಕಾರ್ಮಿಕರ ಸೇವೆಗಳನ್ನು ಒದಗಿಸಲು ಈಗಾಗಲೇ ಕ್ರಮ ಕೈಗೊಂಡಿದೆ. ಬಾಲ ಹಾಗೂ ಕಿಶೋರ ಕಾಯ್ದೆ 1986ರ ಅಡಿ 1,17,598 ತಪಾಸಣೆ ನಡೆಸಲಾಗಿದೆ. 2,167ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆ. ವಿವಿಧ ನ್ಯಾಯಾಲಯಗಳಲ್ಲಿ 751 ಮೊಕದ್ದಮೆಗಳನ್ನು ದಾಖಲಿಸಲಾಗಿದೆ. 73 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 37.08 ಲಕ್ಷ ರು ದಂಡ ವಸೂಲಾತಿಯಾಗಿದೆ ಎಂದು ಇಲಾಖೆಯು ವಿವರಿಸಿದೆ.

ಕನಿಷ್ಠ ವೇತನ ಕಾಯ್ದೆಯಡಿ 5,168 ಪ್ರಕರಣಗಳನ್ನು ವಿಲೇವಾರಿ ಮಾಡಿದೆಯಲ್ಲದೇ 27,656 ಕಾರ್ಮಿಕರಿಗೆ ಸಂಬಂಧಿಸಿದಂತೆ 77,77,96,207 ಮೊತ್ತದ ಪರಿಹಾರಕ್ಕೆ ಆದೇಶಿಸಿದೆ. ವೇತನ ಕಾಯ್ದೆಯಡಿ 1,679 ಪ್ರಕರಣಗಳನ್ನು ವಿಲೇವಾರಿ ಮಾಡಿ 7,248 ಕಾರ್ಮಿಕರಿಗೆ ಸಂಬಂಧಿಸಿದಂತೆ 84,97,41,822 ಮೊತ್ತದ ಪರಿಹಾರ ನೀಡಲು ಆದೇಶಿಸಿದೆ.

ಕೈಗಾರಿಕೆ ವಿವಾದಗಳ ಕಾಯ್ದೆಯಡಿ 45,898 ಕಾರ್ಮಿಕರಿಗೆ ಸಂಬಂಧಿಸಿದಂತೆ 12,11,57,02,959 ಮೊತ್ತದ ವೇತನ ಒಪ್ಪಂದ ಮೂಲಕ ಕೈಗಾರಿಕೆ ವಿವಾದಗಳನ್ನು ಇತ್ಯರ್ಥಪಡಿಸಿದೆ. ಉಪಧನ ಪಾವತಿ ಕಾಯ್ದೆಯಡಿ 19,806 ಪ್ರಕರಣಗಳನ್ನು ವಿಲೇವಾರಿ ಮಾಡಿ 10,705 ಕಾರ್ಮಿಕರಿಗೆ ಸಂಬಂಧಿಸಿದಂತೆ 1,50,88,38,557 ಮೊತ್ತದ ಪರಿಹಾರಕ್ಕೆ ಆದೇಶಿಸಿದೆ ಎಂದು ಪಟ್ಟಿ ಒದಗಿಸಿರುವುದು ತಿಳಿದು ಬಂದಿದೆ.









