ಬೆಂಗಳೂರು; ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅಡಿಯಲ್ಲಿ ಅವಕಾಶವಿಲ್ಲದಿದ್ದರೂ ರಾಜ್ಯದ ಹಲವು ಜಿಲ್ಲೆ ಮತ್ತು ತಾಲೂಕುಗಳಲ್ಲಿ 6.18 ಕೋಟಿ ವೆಚ್ಚ ಮಾಡಲಾಗಿತ್ತು. ಹಾಗೆಯೇ ವಿಪತ್ತು ನಿರ್ವಹಣೆಗೆ ಸಂಬಂಧಿಸಿದ್ದ ಹೊರಡಿಸಿದ್ದ ಮಾರ್ಗಸೂಚಿಗಳು ಮತ್ತು ವಿತ್ತೀಯ ಮಿತಿಗಳನ್ನು ಉಲ್ಲಂಘಿಸಿ ಖರ್ಚು ಮಾಡಲಾಗಿತ್ತು ಎಂದು ಸಿಎಜಿ ವರದಿಯು ಬಹಿರಂಗಗೊಳಿಸಿದೆ.
2025ರ ಬೆಳಗಾವಿಯಲ್ಲಿ ನಡೆದಿದ್ದ ವಿಧಾನಮಂಡಲದ ಅಧಿವೇಶನದಲ್ಲಿ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪಾಲರು ಮಂಡಿಸಿರುವ ವರದಿಯು ಕರ್ನಾಟಕದಲ್ಲಿ ವಿಪತ್ತು ನಿರ್ವಹಣೆ ಕಾರ್ಯನಿರ್ವಹಣೆ ಮತ್ತು ಅನುದಾನ ಖರ್ಚು ವೆಚ್ಚದ ಲೆಕ್ಕದ ವಿವರಗಳನ್ನು ಒದಗಿಸಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲೀಕಂದಾಯ ಸಚಿವ ಕೃಷ್ಣಬೈರೇಗೌಡ ಅವರಾಗಲೀ ಅಧಿಕಾರಿಗಳೊಂದಿಗೆ ಇದುವರೆಗೂ ಚರ್ಚಿಸಿಲ್ಲ ಎಂದು ತಿಳಿದು ಬಂದಿದೆ.
ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ರಾಜ್ಯ ವಿಪತ್ತು ನಿರ್ವಹಣಾ ಪಡೆಯ ನಿಗದಿತ ಮಾನದಂಡಗಳ ಒಳಗೇ ವಿಪತ್ತುಗಳಿಂದಾಗಿ ಹಾನಿಗೊಳಗಾದ ಮೂಲಸೌಕರ್ಯಗಳ ತಕ್ಷಣ ತಾತ್ಕಾಲಿಕ ಪುನಃಸ್ಥಾಪನೆ ವೆಚ್ಚವನ್ನು ಪೂರೈಸಲು ಎಸ್ಡಿಆರ್ಎಫ್ ಅನುದಾನವನ್ನು ಬಳಸಲಾಗುತ್ತದೆ. ಅಂತಹ ಯಾವುದೇ ವೈಯಕ್ತಿಕ ಪುನಸ್ಥಾಪನೆ ಕಾರ್ಯಕ್ಕೆ ಗರಿಷ್ಠ ವೆಚ್ಚ 2 ಲಕ್ಷ ಆಗಿದೆ. ಹಾನಿಗೊಳಗಾದ ಮೂಲಸೌಕರ್ಯಗಳ ಶಾಶ್ವತ ಪುನಃ ಸ್ಥಾಪನೆಯನ್ನು ಆಯಾ ಇಲಾಖೆಗಳ ನಿಯಮತಿ ಅಯವ್ಯಯ ಅನುದಾನದ ಮೂಲಕ ಕೈಗೊಳ್ಳಬೇಕು.
ಆದರೆ ಈ ಆದೇಶವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ಜಿಲ್ಲಾಮಟ್ಟದಲ್ಲಿ ಹಾನಿಗೊಳಗಾದ ಮೂಲಸೌಕರ್ಯಗಳ ದುರಸ್ತಿ, ಪುನಃ ಸ್ಥಾಪನೆಗಾಗಿ ಸಂಬಂಧಿಸಿದಂತೆ ವಿತ್ತೀಯ ಮಿತಿ 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದಲ್ಲಿ ಕಾಮಗಾರಿಗಳನ್ನು ಕಾರ್ಯಗತಗೊಳಿಸಿರುವುದನ್ನು ಸಿಎಜಿಯು ಪತ್ತೆ ಹಚ್ಚಿದೆ. ಎಸ್ಡಿಆರ್ಎಫ್ ಅಡಿಯಲ್ಲಿ ವೆಚ್ಚ ಮಾಡಲು ಅನುಮತಿ ಇಲ್ಲದಿದ್ದರೂ ಸಹ ವಿತ್ತೀಯ ಮಿತಿಗಿಂತ ಹೆಚ್ಚಿನ ಮೊತ್ತದಲ್ಲಿ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ ಎಂದು ಸಿಎಜಿಯು ಬಹಿರಂಗಗೊಳಿಸಿದೆ. ಅಲ್ಲದೇ ಇಂತಹ ಪ್ರಕರಣಗಳ ಬಗ್ಗೆ ವರದಿಯಲ್ಲಿ ಹಲವು ನಿದರ್ಶನಗಳನ್ನು ಒದಗಿಸಿದೆ.
ವಿತ್ತೀಯ ಮಿತಿ ಉಲ್ಲಂಘಿಸಿ 6.18 ಕೋಟಿ ವೆಚ್ಚ
ಎಸ್ಡಿಆರ್ಎಫ್ ಅನುದಾನದ ಅಡಿಯಲ್ಲಿ ಮಾರ್ಗಸೂಚಿಗಳು ಮತ್ತು ವಿತ್ತೀಯ ಮಿತಿಗಳನ್ನು ಉಲ್ಲಂಘಿಸಿ ಚಿತ್ತಾಪುರ ತಾಲೂಕು ಸೇರಿದಂತೆ 22 ಕಡೆಗಳಲ್ಲಿ ಒಟ್ಟಾರೆ 6.18 ಕೋಟಿಯಷ್ಟು ಮೊತ್ತದಲ್ಲಿ ಕಾಮಗಾರಿಗಳನ್ನು ಕೈಗೊಂಡಿರುವುದನ್ನು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಚಿತ್ತಾಪುರದ ಫಿರೋಜಾಬಾದ್-ಕಮಲಾಪರ ರಾಜ್ಯ ಹೆದ್ದಾರಿ (ಸಂಖ್ಯೆ 125) ಚೈನೇಜ್ 44.20 ಕಿ ಮೀ ಸೇತುವೆ ದುರಸ್ತಿಗೆ 55.00 ಲಕ್ಷ ರು ಅಂದಾಜು ವೆಚ್ಚವೆಂದು ಹೇಳಲಾಗಿತ್ತು. ಈ ಪೈಕಿ 53.81 ಲಕ್ಷ ರು ವೆಚ್ಚವಾಗಿತ್ತು. ಅಳಂದ್ ತಾಲೂಕಿನ ಬಸವಕಲ್ಯಾಣ-ರಾಯಚೂರು (ಎಸ್ ಹೆಚ್ 51) ರಸ್ತೆಯ ಕಿ ಮೀ 43.00 ರಲ್ಲಿ ಸೇತುವೆ ದುರಸ್ತಿಗೆಂಧು 10 ಲಕ್ಷ ರು ಅಂದಾಜು ವೆಚ್ಚದ ಪೈಕಿ 9.76 ಲಕ್ಷ ರು ಖರ್ಚು ಮಾಡಲಾಗಿತ್ತು. ಕಲ್ಬುರ್ಗಿ ನಗರದಲ್ಲಿ ನೀರು ಸರಬರಾಜು ವ್ಯವಸ್ಥೆಗಾಗಿ ಸರಡಗು ಪ್ರಧಾನ ಕಾಮಗಾರಿ ಮತ್ತು ಐಪಿಎಸ್ ಕೋಟ್ನೋರಿನಲ್ಇ ವಿದ್ಯುತ್ ಸ್ಥಾಪನೆ ಮತ್ತು ಉಪಕರಣಗಳ ದುರಸ್ತಿಗಾಗಿ 28.13 ಲಕ್ಷ ರು ವೆಚ್ಚ ಮಾಡಲಾಗಿದೆ.
ಸೇಡಂನ 0.00 ಕಿ ಮೀನಿಂದ 0.50 ಕಿ ಮೀ ಚೈನೇಜ್ನ ಮುಧೋಳದ ಯಾನಗುಂಡಿ ರಸ್ತೆ ದುರಸ್ತಿಗೆ 20.00 ಲಕ್ಷ ರು ಪೈಕಿ 18.89 ಲಕ್ಷ ರು ಖರ್ಚು ಮಾಡಲಾಗಿದೆ. ಉದಗಿ-ಕುರಕುಂಟ-ಹಯ್ಯಾಲ ರಸ್ತೆಯ ಚೈನೇಜ್ 23.80 ಕಿ ಮೀ ಚೆಕ್ ಡ್ಯಾಮ್ ದುರಸ್ತಿಗಾಗಿ 18.00 ಲಕ್ಷ ರು ಪೈಕಿ 17.99 ಲಕ್ಷ ರು ವೆಚ್ಚ ಮಾಡಲಾಗಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
4.22 ಕೋಟಿ ವೆಚ್ಚವಾಗಿದೆಯೇ?
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಮಂಗಳೂರಿನಲ್ಲಿಯೂ ಸಹ ವಿತ್ತೀಯ ಮಿತಿಗಳನ್ನು ಉಲ್ಲಂಘಿಸಿ ಕಾಮಗಾರಿಗಳನ್ನು ಕಾರ್ಯಗತಗೊಳಿಸಲಾಗಿತ್ತು. ಬಂಟ್ವಾಳದ ತಲೆಮೊಗರು ಶಾಲಾ ಕಟ್ಟಡ ದುರಸ್ತಿಗೆ 10.00 ಲಕ್ಷ ರು, ಪುದು ಮಾಪ್ಲೆನಲ್ಲಿ ಶಾಲಾ ಕಟ್ಟಡ ದುರಸ್ತಿಗೆ 10.00 ಲಕ್ಷ ರು., ಪುದು ಗ್ರಾಮ ಪಂಚಾಯ್ತಿಯಲ್ಲಿ ರಸ್ತೆ ದುರಸ್ತಿ ಮತ್ತು ಶಾಲಾ ಕಟ್ಟಡ ದುರಸ್ತಿಗೆಂದು 20 ಲಕ್ಷ ರು, ಪಜೀರ್ ಗ್ರಾಮದಲ್ಲಿ ರಸ್ತೆ ದುರಸ್ತಿಗಾಗಿ 20 ಲಕ್ಷ, ಬಾಳಿಪುಣಿ ಗ್ರಾಮದಲ್ಲಿ ರಸ್ತೆ ದುರಸ್ತಿಗೆ 10 ಲಕ್ಷ, ಗೇರು ಪಡ್ಡುವಿನಲ್ಲಿ ರಸ್ತೆ ದುರಸ್ತಿಗೆ 10 ಲಕ್ಷ ರು ಖರ್ಚು ಮಾಡಲಾಗಿದೆ.
ಮಂಗಳೂರು ನಗರದ ವಾರ್ಡ್ ನಂ 2ರಲ್ಲಿ ಒಳಚರಂಡಿ ನಿರ್ಮಾಣಕ್ಕೆ 10 ಲಕ್ಷ ರು., ಡೆರೆಬೈಲುವಿನಲ್ಲಿ ರಸ್ತೆ ಡಾಂಬರೀಕರಣಕ್ಕೆ 12 ಲಕ್ಷ, ವಾರ್ಡ್ ನಂ 52ರಲ್ಲಿ ಸಿಸಿ ರಸ್ತೆಗೆಂದು 10 ಲಕ್ಷ, ಬೆಲ್ಮಾ ಗ್ರಾಮ ಪಂಚಾಯ್ತಿಯಲ್ಲಿ ರಸ್ತೆ ದುರಸ್ತಿಗೆಂದು 15 ಲಕ್ಷ, ಇದೇ ಬೆಲ್ಮಾ ಗ್ರಾಮ ಪಂಚಾಯ್ತಿಯಲ್ಲಿ ಜಂಕ್ಷನ್ ದುರಸ್ತಿಗೆಂದು 15.00 ಲಕ್ಷ, ಇದೇ ಪಂಚಾಯ್ತಿ ವ್ಯಾಪ್ತಿಯ ಶಾಲಾ ಕಟ್ಟಡ ದುರಸ್ತಿಗೆ 15 ಲಕ್ಷ, ಮನೆಗೆ ತಡೆಗೋಡೆ ನಿರ್ಮಾಣಕ್ಕೆ 10 ಲಕ್ಷ, ಮಂಜನಾಡಿ ಗ್ರಾಮ ಪಂಚಾಯ್ತಿಯಲ್ಲಿ ರಸ್ತೆ ದುರಸ್ತಿಗೆ 15 ಲಕ್ಷ ರು ಖರ್ಚಾಗಿದೆ.
ಮಂಜನಾಡಿ ಗ್ರಾಮ ಪಂಚಾಯ್ತಿಯಲ್ಲಿ ರಸ್ತೆ ದುರಸ್ತಿಗೆ 20 ಲಕ್ಷ, ಪಾವೂರು ಗ್ರಾಮ ಪಂಚಾಯ್ತಿಯಲ್ಲಿ ರಸ್ತೆ ದುರಸ್ತಿಗೆ ಒಟ್ಟು 30 ಲಕ್ಷ, ಹಿರೇಕಳ ಗ್ರಾಮ ಪಂಚಾಯ್ತಿಯಲ್ಲಿ ರಸ್ತೆ ದುರಸ್ತಿಗೆ ಒಟ್ಟಾರೆ 40 ಲಕ್ಷ, ಮುನ್ನೂರು ಗ್ರಾಮ ಪಂಚಾಯ್ತಿಯಲ್ಲಿ ರಸ್ತೆ ದುರಸ್ತಿಗೆ 10 ಲಕ್ಷ, ಸೋಮೇಶ್ವರ ಪಂಚಾಯ್ತಿಯಲ್ಲಿ ರಸ್ತೆ ದುರಸ್ತಿಗೆ 10 ಲಕ್ಷ, ಕೋನಜೆ ಗ್ರಾಮ ಪಂಚಾಯ್ತಿಯಲ್ಲಿ ರಸ್ತೆ ದುರಸ್ತಿಗೆ ಒಟ್ಟಾರೆ 40 ಲಕ್ಷ, ಉಳ್ಳಾಲದಲ್ಲಿ ರಸ್ತೆ ದುರಸ್ತಿಗೆ 15 ಲಕ್ಷ, ರಸ್ತೆ ಕಾಮಗಾರಿಗೆ 10 ಲಕ್ಷ, ಉಳ್ಳಾಲದ ಶಾಲಾ ಕಟ್ಟಡ ದುರಸ್ತಿಗೆ 20 ಲಕ್ಷ, ಉಳ್ಳಾಲದ ಟಿಪ್ಪು ಸುಲ್ತಾನ್ ಶಾಲಾ ಕಟ್ಟಡಕ್ಕೆ ವಿದ್ಯುತ್ ದುರಸ್ತಿಗೆ 15 ಲಕ್ಷ, ಉಳ್ಳಾಲದ ಸುಂದರ್ ಬಾಗ್ನಲ್ಲಿ ಒಳಚರಂಡಿ ನಿರ್ಮಾಣಕ್ಕೆ 10 ಲಕ್ಷ, ಕೋಟೆಕರ್ ಪಟ್ಟಣ ಪಂಚಾಯ್ತಿಯಲ್ಲಿ ರಸ್ತೆ ದುರಸ್ತಿಗೆ 20 ಲಕ್ಷ , ಕೋಟೆಕರ್ನಲ್ಲಿ ಸೇತುವೆ ನಿರ್ಮಾಣಕ್ಕೆ 10 ಲಕ್ಷ ರು ಖರ್ಚಾಗಿದೆ ಎಂದು ಸಿಎಜಿಯು ವರದಿಯಲ್ಲಿ ಪಟ್ಟಿ ಒದಗಿಸಿದೆ.
ವಿಶೇಷವೆಂದರೇ ಬಂಟ್ವಾಳ, ಮಂಗಳೂರು ಭಾಗದಲ್ಲಿ ಒಟ್ಟಾರೆ ಅಂದಾಜು ವೆಚ್ಚವೆಂಧು 4.22 ಕೋಟಿ ರು ತೋರಿಸಿದೆ. ಈ ಪೈಕಿ ಎಷ್ಟು ಮೊತ್ತವನ್ನು ಖರ್ಚು ಮಾಡಲಾಗಿದೆ ಎಂಬ ಬಗ್ಗೆ ಯಾವುದೇ ವಿವರಗಳೂ ಸಿಎಜಿಗೂ ಲಭ್ಯವಾಗಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.

ಸವದತ್ತಿ ತಾಲೂಕಿನ ಮಾನವಳ್ಳಿ ಗ್ರಾಮದಲ್ಲಿ ಶಾಲಾ ಕಟ್ಟಡಗಳ ದುರಸ್ತಿಗೆಂದು 21 ಲಕ್ಷ ರು ಅಂದಾಜಿಸಿತ್ತು. ಈ ಪೈಕಿ 10.80 ಲಕ್ಷ ರು ವೆಚ್ಚವಾಗಿದೆ. ಮುಲ್ಲೂರು ಗ್ರಾಮದಲ್ಲಿ ಶಾಲಾ ಕಟ್ಟಡಗಳ ದುರಸ್ತಿಗೆಂದು 10.50 ಲಕ್ಷ ರು ವೆಚ್ಚವಾಗಿದೆ. ಹೋಳಿ ಗ್ರಾಮದಲ್ಲಿ ಶಾಲಾ ಕಟ್ಟಡಗಳ ದುರಸ್ತಿಗೆಂದು 7.50 ಲಕ್ಷ ಅಂದಾಜು ವೆಚ್ಚದ ಪೈಕಿ 6.75 ಲಕ್ಷ ರು ವೆಚ್ಚವಾಗಿದೆ. ತೆರೆದಕೊಪ್ಪ ತಾಂಡ ಗ್ರಾಮದಲ್ಲಿ ಶಾಲಾ ಕಟ್ಟಡ ದುರಸ್ತಿಗೆಂದು ಅಂದಾಜಿಸಿದ್ದ 6.00 ಲಕ್ಷ ರು ಪೈಕಿ 5.40 ಲಕ್ಷ ರು ವೆಚ್ಚವಾಗಿದೆ.
ರಾಜ್ಯ ವಿಪತ್ತು ನಿರ್ವಹಣೆ ಪಡೆಯ ಅಡಿಯಲ್ಲಿ ಖರ್ಚು ಮಾಡಲು ಅವಕಾಶವಿಲ್ಲದಿದ್ದರೂ ಮತ್ತು ವಿತ್ತೀಯ ಮಿತಿ ಗಳನ್ನು ಉಲ್ಲಂಘಿಸಿ ಕಾಮಗಾರಿಗಳನ್ನು ಮಾಡಿರುವ ಪ್ರಕರಣಗಳನ್ನು ತನಿಖೆ ನಡೆಸಬೇಕು. ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಲಾಗುವುದು ಎಂದು 2024ರ ಆಗಸ್ಟ್ನಲ್ಲಿ ಕಂದಾಯ ಇಲಾಖೆಯು ಸಿಎಜಿಗೆ ಉತ್ತರ ನೀಡಿರುವುದು ವರದಿಯಿಂದ ತಿಳಿದು ಬಂದಿದೆ.









