ಬದಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮ; ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿ ಹಲವರ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರು; ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿನ ಅಕ್ರಮ ಪ್ರಕರಣವು ವಿಧಾನಸಭೆ ಅಧಿವೇಶನದಲ್ಲಿ ಕೋಲಾಹಲಕ್ಕೆ ಕಾರಣವಾಗಿರುವ ಬೆನ್ನಲ್ಲೇ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಬದಲಿ ನಿವೇಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಸೇರಿದಂತೆ ಮತ್ತಿತರರ ವಿರುದ್ಧ ಲೋಕಾಯುಕ್ತದಲ್ಲಿ ದಾಖಲೆ ಸಹಿತ ದೂರು ದಾಖಲಾಗಿದೆ.

 

ಬಿಬಿಎಂಪಿಯ ಆಡಳಿತ ಪಕ್ಷದ ಮಾಜಿ ನಾಯಕ ಎನ್‌ ಆರ್‍‌ ರಮೇಶ್‌ ಅವರು ಲೋಕಾಯುಕ್ತಲ್ಲಿ 300ಕ್ಕೂ ಹೆಚ್ಚು ದಾಖಲೆಗಳ ಸಮೇತ ದೂರು ಸಲ್ಲಿಸಿದ್ದಾರೆ. ಈ ದೂರನ್ನು ಸ್ವೀಕರಿಸಿರುವ ಲೋಕಾಯುಕ್ತ ಸಂಸ್ಥೆಯು ಪ್ರಕರಣ ಸಂಖ್ಯೆಯನ್ನೂ ದಾಖಲಿಸಿದೆ. ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅಧಿಕಾರ ದುರುಪಯೋಗ, ವಂಚನೆ ಮತ್ತು ಭ್ರಷ್ಟಾಚಾರ ಕಲಂಗಳಡಿಯಲ್ಲಿ ದೂರನ್ನು ಸಲ್ಲಿಸಲಾಗಿದೆ. ಇದೇ ದೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಮೈದುನ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ, ಮೂಡಾ ಮಾಜಿ ಅಧ್ಯಕ್ಷರಾದ ಬಸವೇಗೌಡ, ಹೆಚ್‌ ವಿ ರಾಜೀವ್‌ ಮತ್ತು ಆಯುಕ್ತರಾಗಿದ್ದ ಡಿ ಬಿ ನಟೇಶ್‌ ಅವರನ್ನೂ ಪ್ರತಿವಾದಿಗಳನ್ನಾಗಿಸಲಾಗಿದೆ.

ತಮ್ಮ ರಾಜಕೀಯ ಪ್ರಭಾವದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪತ್ನಿಯ ಹೆಸರಿಗೆ ಕಾನೂನು ಬಾಹಿರವಾಗಿ ಬದಲಿ ನಿವೇಶನಗಳ ಹಂಚಿಕೆ ಮಾಡಿಸಿದ್ದಾರೆ ಇದರಿಂದ ಸರ್ಕಾರಕ್ಕೆ 40 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತವು ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

 

ದೂರಿನಲ್ಲೇನಿದೆ?

 

ಮೂಡಾವು ದೇವನೂರು 3ನೇ ಹಂತದ ಬಡಾವಣೆ ನಿರ್ಮಾಣಕ್ಕೆಂದು 1997ರ ಅಕ್ಟೊಬರ್‍‌31ರಂದು ಮೈಸೂರು ತಾಲ್ಲೂಕು, ಕಸಬಾ ಹೋಬಳಿಯ ಕೆಸರೆ ಗ್ರಾಮ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ನೂರಾರು ಎಕರೆ ಜಮೀನುಗಳನ್ನು ಭೂಸ್ವಾಧೀನ ಮಾಡಿಕೊಂಡಿತ್ತು.

 

ಈ ಪೈಕಿ ಕೆಸರೆ ಗ್ರಾಮದ ಸರ್ವೆ ನಂ: 464 ರ 3.16 ಎಕರೆ ಜಾಗವನ್ನು ಅದರ ಮಾಲೀಕ ನಿಂಗ ಬಿನ್ ಜವರ ಅವರಿಂದ ಭೂಸ್ವಾಧೀನ ಪಡಿಸಿಕೊಂಡಿತ್ತು. ಇದಕ್ಕೆ ಪರಿಹಾರದ ರೂಪದಲ್ಲಿ 3,24,700 ರು. ಗಳನ್ನು ಭೂ ಮಾಲೀಕರಿಗೆ ಬಿಡುಗಡೆ ಮಾಡಿತ್ತು. ನಂತರ 1998ರ ಮೇ 18ರಂದು ನಗರಾಭಿವೃದ್ಧಿ ಇಲಾಖೆಯು ಕೆಸರೆ ಗ್ರಾಮದ ಸರ್ವೆ ನಂ: 464 ರ 3.16 ಎಕರೆ ವಿಸ್ತೀರ್ಣದ ಜಾಗವನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟು ಆದೇಶವನ್ನು ಹೊರಡಿಸಿತ್ತು.

 

ಈ ಅವಧಿಯಲ್ಲಿ ಸಿದ್ಧರಾಮಯ್ಯನವರು ಅಂದಿನ ಮುಖ್ಯಮಂತ್ರಿ ಜೆ ಹೆಚ್‌ ಪಟೇಲ್ ಅವರ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿಗಳಾಗಿದ್ದರು. ಹಾಗೂ ಅವರ ಅತ್ಯಾಪ್ತರಾಗಿದ್ದ ಬಸವೇಗೌಡ ಎಂಬುವರು ಮುಡಾ ಅಧ್ಯಕ್ಷರಾಗಿದ್ದರು.

 

2004ರ ಆಗಸ್ಟ್‌ 25ರಂದು ಕೆಸರೆ ಗ್ರಾಮದ ಸರ್ವೆ ನಂ 464 ರ 3.16 ಎಕರೆ ವಿಸ್ತಿರ್ಣದ ಸ್ವತ್ತಿನ ಮಾಲೀಕರಾದ ನಿಂಗ ಬಿನ್ ಜವರ ಎಂಬುವವರ ಮಗನಾದ ಜೆ ದೇವರಾಜು ಅವರಿಂದ ಸಿದ್ಧರಾಮಯ್ಯನವರ ಭಾವಮೈದುನ (ಪತ್ನಿಯ ಸಹೋದರ) ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಬಿನ್ ಮರಿಲಿಂಗಯ್ಯ ನವರು ಕ್ರಯಕ್ಕೆ ಪಡೆದಿದ್ದರು. ಮತ್ತು ಅದನ್ನು ತಮ್ಮ ಹೆಸರಿಗೆ ನೊಂದಣಿ ಮಾಡಿಸಿಕೊಂಡಿದ್ದರು ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

2005ರ ಜುಲೈ 15ರಂದು ಇದೇ ಜಮೀನನ್ನು “ವ್ಯವಸಾಯ ಪ್ರದೇಶ”ದಿಂದ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾಗಿತ್ತು. ಆದರೆ ಜಮೀನಿನ ಮಾಲೀಕರಾದ ನಿಂಗ ಬಿನ್ ಜವರ ರವರು ಮರಣ ಹೊಂದಿದ್ದರೂ ಸಹ ಅವರ ಹೆಸರಿನಲ್ಲಿಯೇ ಜಿಲ್ಲಾಧಿಕಾರಿಗಳ ಕಛೇರಿಯಿಂದ ಭೂ ಪರಿವರ್ತನೆ ಮಾಡಲಾಗಿತ್ತು ಎಂದೂ ದೂರಿನಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಈ ಬೆಳವಣಿಗೆ ನಡೆದಿದ್ದ ಅವಧಿಯಲ್ಲಿ ಸಿದ್ಧರಾಮಯ್ಯನವರು (2004 ರಿಂದ 2006) ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದರು. 2010ರ ಆಗಸ್ಟ್‌ 6ರಂದು ಸಿದ್ಧರಾಮಯ್ಯನವರ ಭಾವಮೈದುನ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಅವರು ಈ ಸ್ವತ್ತನ್ನು ತಮ್ಮ ಸಹೋದರಿ ಬಿ ಎಂ ಪಾರ್ವತಿ (ಸಿದ್ಧರಾಮಯ್ಯನವರ ಧರ್ಮಪತ್ನಿ) ಯವರ ಹೆಸರಿಗೆ ದಾನ ಪತ್ರ ದ ಮೂಲಕ ದಾನವಾಗಿ ನೀಡಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

ದಾನ ಪತ್ರದ ಮೂಲಕ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಬಂದಿದ್ದ ಸ್ವತ್ತಿಗೆ ಬದಲಾಗಿ, ಈಗಾಗಲೇ ಅಭಿವೃದ್ಧಿಯಾಗಿರುವ ಮೂಡಾದ ಇನ್ನೊಂದು ಬಡಾವಣೆಯಲ್ಲಿ ಬದಲಿ ನಿವೇಶನಗಳನ್ನು ಮಂಜೂರು ಮಾಡುವ ಸಂಬಂಧ ಬಿ ಎಂ ಪಾರ್ವತಿ ಅವರು 2014 ರಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ್ದ ನಗರಾಭಿವೃದ್ಧಿ ಇಲಾಖೆಯು ಬದಲಿ ನಿವೇಶನಗಳನ್ನು ಮಂಜೂರು ಮಾಡುವ ಬಗ್ಗೆ ಅನುಮೋದನೆ ನೀಡಿತ್ತು. ಈ ಸಂಬಂಧ ಸರ್ಕಾರಿ ಆದೇಶವನ್ನು ಹೊರಡಿಸಿತ್ತು.

 

2017ರ ಡಿಸೆಂಬರ್‍‌ 30ರಂದು ಮೂಡಾದಲ್ಲಿ ನಡೆದಿದ್ದ ಪ್ರಾಧಿಕಾರದ ಸಭೆಯಲ್ಲಿ (ವಿಷಯದ ಸಂಖ್ಯೆ – 30) ಅರ್ಜಿದಾರರಿಗೆ ಈಗಾಗಲೇ ಅಭಿವೃದ್ಧಿ ಪಡಿಸಿರುವ ಬಡಾವಣೆಯಲ್ಲಿ 38,284 ಚ. ಅಡಿ ವಿಸ್ತೀರ್ಣದ ಸ್ವತ್ತುಗಳನ್ನು ನಿವೇಶನಗಳ ರೂಪದಲ್ಲಿ ಮಂಜೂರು ಮಾಡುವ ನಿರ್ಣಯ ಕೈಗೊಂಡಿತ್ತು.

 

ಶೇ 50:50 ರ ಅನುಪಾತದಲ್ಲಿ (ಸ್ವತ್ತಿನ ಮಾಲೀಕರಿಗೆ 1/2 ಭಾಗ ಮತ್ತು ಮೂಡಾಗೆ 1/2 ಭಾಗ) ಪಾರ್ವತಿ ಅವರಿಗೆ ದೇವನೂರು 3ನೇ ಹಂತದ ಬಡಾವಣೆಯ ಬದಲಾಗಿ ಮೂಡಾ ಮಾಲೀಕತ್ವದ ಬೇರೊಂದು ಬಡಾವಣೆಯಲ್ಲಿ ಒಟ್ಟು 38,284 ಚ. ಅಡಿ ವಿಸ್ತೀರ್ಣದ ಸ್ವತ್ತನ್ನು ಬದಲಿ ನಿವೇಶನದ ಹೆಸರಿನಲ್ಲಿ ಮಂಜೂರು ಮಾಡುವ ಬಗ್ಗೆ ನಿರ್ಣಯವನ್ನು ಮೂಡಾದ ಅಧಿಕಾರಿಗಳು ಅನುಮೋದಿಸಿದ್ದರು.

 

‘ಮಾರುಕಟ್ಟೆ ಬೆಲೆ ಪ್ರತಿ ಚ. ಅಡಿಗೆ 5,000 ರು. ಗಳಷ್ಟು ಇರುವ ಮೈಸೂರಿನ ದೇವನೂರು 3ನೇ ಹಂತದ ಬಡಾವಣೆಯಲ್ಲಿನ ನಿವೇಶನಗಳ ಬದಲಾಗಿ ಪ್ರತಿ ಚ. ಅಡಿಗೆ 12,000 ರು. ಗಳಿಗಿಂತಲೂ ಹೆಚ್ಚಿರುವ ಮೈಸೂರಿನ ಅತ್ಯಂತ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ವಿಜಯನಗರ 03 ಮತ್ತು 04ನೇ ಹಂತದ ಬಡಾವಣೆಗಳಲ್ಲಿ ಒಟ್ಟು 38,284 ಚ. ಅಡಿ ವಿಸ್ತೀರ್ಣದ 14 ನಿವೇಶನಗಳನ್ನು ಬದಲಿ ನಿವೇಶನದ ಹೆಸರಿನಲ್ಲಿ ಪಾರ್ವತಿಯವರ ಹೆಸರಿಗೆ 2021-2022 ರಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನು ಮೀರಿ ಹಂಚಿಕೆ ಮಾಡಲಾಗಿದೆ,’ ಎಂದು ಎನ್‌ ಆರ್‍‌ ರಮೇಶ್‌ ಅವರು ದೂರಿದ್ದಾರೆ.

 

2021-22 ರಲ್ಲಿ ಮೂಡಾದ ಅಧ್ಯಕ್ಷರಾಗಿದ್ದ ಹೆಚ್‌ ವಿ ರಾಜೀವ್ ಮತ್ತು ಆಯುಕ್ತರಾಗಿದ್ದ ಡಿ ಬಿ ನಟೇಶ್ ರವರು ಸಿದ್ಧರಾಮಯ್ಯನವರ ಪತ್ನಿ ಪಾರ್ವತಿ ಅವರ ಹೆಸರಿಗೆ ಮೈಸೂರಿನ ಅತ್ಯಂತ ಪ್ರತಿಷ್ಠಿತ ವಿಜಯನಗರ ಬಡಾವಣೆ 03ನೇ ಹಂತ ಮತ್ತು 04ನೇ ಹಂತದ ಪ್ರದೇಶಗಳಲ್ಲಿ 1) 50 X 80 ಅಳತೆಯ 05 ನಿವೇಶನಗಳು 2) 40 X 60 ಅಳತೆಯ 05 ನಿವೇಶನಗಳು 3) 30 X 50 ಅಳತೆಯ 02 ನಿವೇಶನಗಳು ಮತ್ತು 4) 30 X 40 ಅಳತೆಯ 02 ನಿವೇಶನಗಳು ಸೇರಿದಂತೆ ಒಟ್ಟು 14 ನಿವೇಶನಗಳನ್ನು ಹಂಚಿಕೆ ಮಾಡಿ ನೋಂದಣಿ ಮಾಡಿಕೊಟ್ಟಿದ್ದರು ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ನಗರಾಭಿವೃದ್ಧಿ ಇಲಾಖೆಯ ನಿಯಮಗಳನ್ವಯ ಯಾವ ಬಡಾವಣೆಯ ನಿರ್ಮಾಣಕ್ಕೆಂದು ಪ್ರಾಧಿಕಾರವು ಸ್ಥಳೀಯರ ಸ್ವತ್ತುಗಳನ್ನು ಭೂಸ್ವಾಧೀನ ಪಡಿಸಿಕೊಳ್ಳುತ್ತದೆಯೋ, ಅಂತಹ ಸ್ವತ್ತುಗಳ ಮಾಲೀಕರಿಗೆ ಅದೇ ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಬೇಕು ಅಥವಾ ಆ ಬಡಾವಣೆಯ ನಂತರ ಪ್ರಾಧಿಕಾರವು ಅಭಿವೃದ್ಧಿ ಪಡಿಸುವ ಬಡಾವಣೆಯಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲು ಅವಕಾಶವಿದೆ.

 

ಆದರೆ ಎಂತಹ ಸಂದರ್ಭದಲ್ಲಿಯೂ ಸಹ ಉದ್ದೇಶಿತ ಬಡಾವಣೆಯ ನಿವೇಶನಗಳಿಗೆ ಬದಲಾಗಿ ಆ ಬಡಾವಣೆಗಿಂತಲೂ ಮುಂಚಿತವಾಗಿ ಅಭಿವೃದ್ಧಿ ಪಡಿಸಿರುವ ಬಡಾವಣೆಗಳಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡುವುದು ಅಪರಾಧವಾಗಿದೆ ಎಂದೂ ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಪ್ರಸ್ತುತ ಮೂಡಾದ ದೇವನೂರು 03ನೇ ಹಂತದ ಬಡಾವಣೆಯಲ್ಲಿ 38,284 ಚ. ಅಡಿ ವಿಸ್ತೀರ್ಣದ ಸ್ವತ್ತಿನ ಮಾರುಕಟ್ಟೆ ಬೆಲೆ ಸುಮಾರು 19,00,00,000/- (ಹತ್ತೊಂಬತ್ತು ಕೋಟಿ) ಗಳಷ್ಟಿದ್ದರೆ, ವಿಜಯನಗರ 3 ಮತ್ತು 4ನೇ ಹಂತದ ಬಡಾವಣೆ”ಯಲ್ಲಿ ಅದೇ ಅಳತೆಯ ಸ್ವತ್ತಿನ ಬೆಲೆ ಸುಮಾರು 46,00,00,000/- (ನಲವತ್ತಾರು ಕೋಟಿ) ಗಳಿಗೂ ಹೆಚ್ಚು ಇದೆ. ಮೂಡಾವು ಕೈಗೊಂಡಿರುವ ಈ ನಿರ್ಣಯದಿಂದಾಗಿ ಸರ್ಕಾರದ ಖಜಾನೆಗೆ ಸುಮಾರು 27,00,00,000/- (ಇಪ್ಪತ್ತೇಳು ಕೋಟಿ) ಗೂ ಹೆಚ್ಚು ಮೊತ್ತ ನಷ್ಟವಾಗಿರುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

the fil favicon

SUPPORT THE FILE

Latest News

Related Posts