ಬೆಂಗಳೂರು; ಬಿಜೆಪಿ ಸರ್ಕಾರದ ಅವಧಿಯಲ್ಲಿ ಲ್ಯಾಪ್ಟಾಪ್ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಬಲವಾಗಿ ಆರೋಪಿಸುತ್ತಲೇ ಬಂದಿದ್ದ ಕಾಂಗ್ರೆಸ್ ಪಕ್ಷವು ಇದೀಗ ತನ್ನದೇ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲಿ ಮುಕ್ತ ಮತ್ತು ಆನ್ಲೈನ್ ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ದರದಲ್ಲಿ ಲ್ಯಾಪ್ ಟಾಪ್ ಖರೀದಿಸಿರುವುದು ಇದೀಗ ಬಹಿರಂಗವಾಗಿದೆ.
ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಬೆಳಗಾವಿ, ಕಲ್ಬುರ್ಗಿ, ಹಾಸನ, ಬೆಂಗಳೂರು-1, ಬೆಂಗಳೂರು-2 ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ತಲಾ 1,400 ಲ್ಯಾಪ್ಟಾಪ್ಗಳಂತೆ ಒಟ್ಟು 7,000 ಲ್ಯಾಪ್ಟಾಪ್ಗಳನ್ನು 49.75 ಕೋಟಿ ರು. ದರದಲ್ಲಿ ಖರೀದಿಸಿದೆ.
ಎಲ್-1 ಆಗಿ ಹೊರಹೊಮ್ಮಿದ್ದ ಕಂಪನಿಯು ನಮೂದಿಸಿದ್ದ ದುಪ್ಪಟ್ಟು ದರವನ್ನೇ ಅನುಮೋದಿಸುವ ಮೂಲಕ 23.15 ಕೋಟಿ ರು. ಹಗರಣಕ್ಕೆ ದಾರಿ ಮಾಡಿಕೊಟ್ಟಂತಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಹನುಮಂತ ಪೂಜಾರಿ ಎಂಬುವರು ಆರ್ಟಿಐ ಅಡಿಯಲ್ಲಿ ಸಮಗ್ರ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಇದರ ಪ್ರತಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ವಾಸ್ತವದಲ್ಲಿ ಈ ಟೆಂಡರ್ ಪ್ರಕ್ರಿಯೆಯು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಹುತೇಕ ಅಂತಿಮಗೊಂಡಿತ್ತು. ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಆರ್ಥಿಕ ಬಿಡ್ ನಡವಳಿ ಅನುಮೋದನೆಗೊಂಡಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲಿ ಮಂಡಳಿಯು ಆರ್ಥಿಕ ಬಿಡ್ ತೆರೆದಿತ್ತು. 2023ರ ಜುಲೈ 24ರಂದು ಮಂಡಳಿ ಅಧಿಕಾರಿಗಳು ಅನುಮೋದಿಸಿದ್ದರು. ಇದಕ್ಕೆ ಸಚಿವ ಸಂತೋಷ್ ಲಾಡ್ ಅವರ ಒಪ್ಪಿಗೆ ಪಡೆಯಲಾಗಿತ್ತು ಎಂದು ತಿಳಿದು ಬಂದಿದೆ.
ಡೆಲ್, ಲೆನವೋ, ಹೆಚ್ಪಿಯಂತಹ ಮತ್ತಿತರ ಕಂಪನಿಗಳು ತಯಾರಿಸಿರುವ ಲ್ಯಾಪ್ಟಾಪ್ಗಳ ದರಕ್ಕೂ ಮತ್ತು ಎಲ್-1 ಆಗಿ ಹೊರಹೊಮ್ಮಿರುವ ನೈನ್ರಿಚ್ ಇನ್ಫೋಟೆಕ್ ಕಂಪನಿಯು ನಮೂದಿಸಿರುವ ದರದ ಮಧ್ಯೆ ಅಜಗಜಾಂತರ ವ್ಯತ್ಯಾಸವಿರುವುದು ಕಂಡುಬಂದಿದೆ.
ಮಂಡಳಿಯು ನಿಗದಿಪಡಿಸಿದ್ದ ತಾಂತ್ರಿಕ ನಿರ್ದಿಷ್ಟತೆಗಳನ್ನೇ ಹೊಂದಿರುವ ಪ್ರತಿಷ್ಠಿತ ಕಂಪನಿಗಳು ತಲಾ ಲ್ಯಾಪ್ಟಾಪ್ಗೆ ಕನಿಷ್ಟ 27,999 ರು.ಗಳಿಂದ ಗರಿಷ್ಠ 35,999 ರು ವರೆಗೆ ದರ ನಿಗದಿಪಡಿಸಿದೆ.
ಟೆಂಡರ್ನಲ್ಲಿ ಭಾಗವಹಿಸಿದ್ದ ಕಂಪನಿಗಳು ತಲಾ ಲ್ಯಾಪ್ಟಾಪ್ ಬೆಲೆಯನ್ನು ನಮೂದಿಸಿಲ್ಲ. ನೈನ್ ರಿಚ್ ಇನ್ಫೋಟೆಕ್ ಕಂಪನಿಯು ಒಟ್ಟಾರೆ 1,400 ಲ್ಯಾಪ್ಟಾಪ್ಗಳಿಗೆ 9,94,64,499 ರು. ಎಂದು ನಮೂದಿಸಿದೆ. ಇದರ ಪ್ರಕಾರ ತಲಾ ಲ್ಯಾಪ್ಟಾಪ್ಗೆ 71,046 ರು. ನಂತೆ 1,400 ಲ್ಯಾಪ್ಟಾಪ್ಗಳಿಗೆ 9,94,64,499 ರು ನಂತೆ 5 ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ 49.75 ಕೋಟಿ ರು. ಆಗಲಿದೆ.
ಹನುಮಂತ ಪೂಜಾರಿ ಅವರು 2024ರ ಜನವರಿ 16ರಂದು ಖಾಸಗಿ ಕಂಪನಿಯೊಂದರಿಂದ ಪಡೆದಿರುವ ದರಪಟ್ಟಿ ಪ್ರಕಾರ ತಲಾ ಲ್ಯಾಪ್ಟಾಪ್ಗೆ 38,000 ರು. ಇದೆ.
ಈ ದರದ ಪ್ರಕಾರ 1,400 ಲ್ಯಾಪ್ಟಾಪ್ಗಳಿಗೆ 5.32 ಕೋಟಿ ರು. ನಂತೆ 7,000 ಲ್ಯಾಪ್ಟಾಪ್ಗಳಿಗೆ 26.60 ಕೋಟಿ ರು ಆಗಲಿದೆ. ತಲಾ ಲ್ಯಾಪ್ಟಾಪ್ವೊಂದಕ್ಕೆ 33,046 ರು. ನಂತೆ ಒಟ್ಟಾರೆ 23.15 ಕೋಟಿ ರು. ಅಧಿಕ ದರ ಪಾವತಿಸಿ ಖರೀದಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.
9,94,64,499 ರು. ನಮೂದಿಸಿ ಎಲ್-1 ಆಗಿರುವ ನೈನ್ರಿಚ್ ಇನ್ಫೋಟೆಕ್ ಕಂಪನಿ ಜತೆ ಮಂಡಳಿಯು 2023ರ ಆಗಸ್ಟ್ 11ರಂದು ಕರಾರು ಮಾಡಿಕೊಂಡಿದೆ. ಆಗಸ್ಟ್ 17ರಂದು ಪೂರೈಕೆ ಆದೇಶ ನೀಡಿದೆ.
ಲ್ಯಾಪ್ಟಾಪ್ ಖರೀದಿ ಸಂಬಂಧ ಕರೆದಿದ್ದ ಟೆಂಡರ್ನಲ್ಲಿ ಒಟ್ಟು ಮೂರು ಕಂಪನಿಗಳು ಭಾಗವಹಿಸಿದ್ದವು. ಅದರಲ್ಲಿ ನೈನ್ ರಿಚ್ ಇನ್ಫೋಟೆಕ್ ಕಂಪನಿಯು 9,94,64,499 ರು., ಎನ್ ಡಿ ಮ್ಯಾನೇಜ್ಮೆಂಟ್ 10,04,99,999 ರು., ವಾಂಟೇಜ್ ನೆಟ್ವರ್ಕ್ ಸಲ್ಯೂಷನ್ಸ್ 10,25,99,000 ರು.ಗಳನ್ನು ನಮೂದಿಸಿತ್ತು. ಆದರೆ ಈ ಮೂರು ಕಂಪನಿಗಳೂ ತಲಾ ಲ್ಯಾಪ್ಟಾಪ್ ದರವನ್ನು ನಮೂದಿಸಿರಲಿಲ್ಲ ಎಂಬುದು ನಡವಳಿಯಿಂದ ಗೊತ್ತಾಗಿದೆ.
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಡೆಸ್ಕ್ಟಾಪ್ ಮತ್ತು ಲ್ಯಾಪ್ಟಾಪ್ ಖರೀದಿ ಪ್ರಕ್ರಿಯೆಯಲ್ಲಿಯೂ ಹಿಂದಿನ ಸರ್ಕಾರದ ಅವಧಿಯಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯು ಖಾಸಗಿ ಏಜೆನ್ಸಿಗಳ ಲಾಬಿಗೆ ಮಣಿತ್ತು ಟೆಂಡರ್ ಪ್ರಕ್ರಿಯೆ ಮತ್ತು ಸಚಿವ ಸಂಪುಟದ ಅನುಮೋದನೆ ಪಡೆಯುವುದರಿಂದ ತಪ್ಪಿಸಿಕೊಳ್ಳಲು ಖರೀದಿಯ ಒಟ್ಟು ಮೊತ್ತವನ್ನು ವಿಭಜಿಸಿ ತುಂಡು ಗುತ್ತಿಗೆ ನೀಡಲು ಅಧಿಕಾರಿಗಳು ಮುಂದಾಗಿದ್ದರು.
ಖಾಸಗಿ ಏಜೆನ್ಸಿಗಳೊಂದಿಗೆ ಕೈಜೋಡಿಸಿ ಕರ್ನಾಟಕ ಪಾರದರ್ಶಕ ಕಾಯ್ದೆಯನ್ನೇ ಗಾಳಿಗೆ ತೂರಿರುವ ತಾಂತ್ರಿಕ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆ(ಎಸ್ಸಿಪಿ, ಎಸ್ಟಿಪಿ)ಯಡಿಯಲ್ಲಿ ಲಭ್ಯ ಇರುವ 18.34 ಕೋಟಿ ರು. ಸೇರಿದಂತೆ ಒಟ್ಟು 27.86 ಕೋಟಿ ರು. ಅನುದಾನ ಬಳಸಿಕೊಂಡಿದ್ದರು. ಅಲ್ಲದೇ ಆಡಳಿತಾತ್ಮಕ ಅನುಮೋದನೆ ಇಲ್ಲದೆಯೇ ಟೆಂಡರ್ ಕರೆದಿರುವ ತಾಂತ್ರಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸಚಿವ ಸಂಪುಟವನ್ನೂ ಕತ್ತಲಲ್ಲಿಟ್ಟಿದ್ದರು.
ಹಿಂದಿನ ಸರ್ಕಾರದ ಅವಧಿಯ ಲ್ಯಾಪ್ಟಾಪ್ ಖರೀದಿಯಲ್ಲಾಗಿರುವುದೇನು?
ಈ ಪೈಕಿ 5,360 ಸಂಖ್ಯೆಯ ಲ್ಯಾಪ್ಟಾಪ್ ಖರೀದಿಗೆ ಕ್ರಿಯಾಯೋಜನೆಗೆ ಅನುಮೋದನೆಯನ್ನು ತಾಂತ್ರಿಕ ಶಿಕ್ಷಣ ಇಲಾಖೆ ಪಡೆದುಕೊಂಡಿದೆ. ಲ್ಯಾಪ್ಟಾಪ್ವೊಂದಕ್ಕೆ 34,220 ರು.ದರದ ಪ್ರಕಾರ ಒಟ್ಟು 4.04 ಕೋಟಿ ರು.ಮೊತ್ತದಲ್ಲಿ 1,180 ಲ್ಯಾಪ್ಟಾಪ್ಗಳ ಖರೀದಿಸಲು ಅನುಮೋದನೆಗೆ ಸರ್ಕಾರಕ್ಕೆ ಪತ್ರ ಬರೆದಿತ್ತು.
ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿಯಲ್ಲಿ 5,075 ಲ್ಯಾಪ್ಟಾಪ್ಗಳ ಖರೀದಿಗೆ ಅವಕಾಶ ಕಲ್ಪಿಸಿದೆಯಾದರೂ ಈ ಪೈಕಿ 1,084 ಲ್ಯಾಪ್ಟಾಪ್ಗಳನ್ನು ಮಾತ್ರ ಖರೀದಿಸಲು ಅಧಿಕಾರಿಗಳು ತಯಾರಿ ನಡೆಸಿದ್ದರು. ಇನ್ನು 3,991 ಲ್ಯಾಪ್ಟಾಪ್ಗಳನ್ನು ಖರೀದಿಸಲು 2019-20ನೇ ಸಾಲಿಗೆ ಕ್ರಿಯಾಯೋಜನೆಗೆ ಅನುಮತಿ ಕೊಟ್ಟಲ್ಲಿ ಉಳಿತಾಯವಾಗಬಹುದಾದ ಒಟ್ಟು 11.95 ಕೋಟಿ ರು.ಗಳಿಂದ 3,991 ಲ್ಯಾಪ್ಟಾಪ್ಗಳನ್ನು ಖರೀದಿಸಲು ಪ್ರಕ್ರಿಯೆ ನಡೆದಿತ್ತು.
ಕಾರ್ಯಾದೇಶಕ್ಕೆ ಸರ್ಕಾರದ ಅನುಮತಿಯೇ ಇರಲಿಲ್ಲ
ಲ್ಯಾಪ್ಟಾಪ್ ಖರೀದಿ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಟೆಂಡರ್ ದಾಖಲಾತಿಗಳನ್ನು ಪರಿಶೀಲಿಸಿದ್ದರು. ಇದರ ಪ್ರಕಾರ 2019ರ ಏಪ್ರಿಲ್ 27ರಂದು ಟೆಂಡರ್ ಆಹ್ವಾನಿಸಿದ್ದ ಇಲಾಖೆ, ಬಿಡ್ ಸಲ್ಲಿಸಲು 2019ರ ಮೇ 8 ಕೊನೆಯ ದಿನಾಂಕವೆಂದು ನಿಗದಿಪಡಿಸಿತ್ತು.
ಟೆಂಡರ್ ದಾಖಲಾತಿ ಮತ್ತು ಅದಕ್ಕೆ ತರಲಾಗಿರುವ ತಿದ್ದುಪಡಿಗಳ ಪ್ರಕಾರ ಬಿಡ್ ಅವಧಿಯ ಕಾಲಾವಧಿ ಎಂದು 120 ದಿನಗಳೆಂದು ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಅದರ ಪ್ರಕಾರ 2019ರ ಸೆ.6 (120 ದಿನಗಳು ಪೂರ್ಣ)ಕೊನೆಗೊಂಡಿದೆ ಎಂದು ಆಯುಕ್ತರು ತಿಳಿಸಿದ್ದರು. ಆದರೆ ನಿಗದಿತ ದಿನಾಂಕದೊಳಗಾಗಿ ಸರಬರಾಜುದಾರರಿಗೆ ಕಾರ್ಯಾದೇಶ ನೀಡಲು ಸರ್ಕಾರ ಅನುಮೋದನೆಯನ್ನು ನೀಡಿರಲಿಲ್ಲ. ಹೀಗಾಗಿ ಪ್ರಸ್ತುತ ಟೆಂಡರ್ನ ಕಾಲಾವಧಿ 2019ರ ಸೆ.6ಕ್ಕೆ ಮುಗಿದಿತ್ತು.
ಅಲ್ಲದೆ ತಾಂತ್ರಿಕ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು 2019ರ ಡಿಸೆಂಬರ್ 10ರಂದು ಸ್ವೀಕರಿಸಿದ್ದ ಸರ್ಕಾರ, ಈ ಸಂಬಂಧ 2020ರ ಜನವರಿ 9ರಂದು ಸರ್ಕಾರಿ ಆದೇಶ ಹೊರಡಿಸಿತ್ತು. ಇನ್ನು, ಟೆಂಡರ್ ಕಾಯ್ದೆಯನ್ವಯ ಟೆಂಡರ್ ಅವಧಿ ಮುಗಿದ ನಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಆದೇಶ ಹೊರಡಿಸಿದ ನಂತರವೂ ಸರ್ಕಾರದ ಗಮನಕ್ಕೂ ತಂದಿರಲಿಲ್ಲ.
ಹಾಗೆಯೇ ಸರ್ಕಾರಿ ಪಾಲಿಟೆಕ್ನಿಕ್ಗಳಿಗೆ ಡೆಸ್ಕ್ಟಾಪ್ ಖರೀದಿ ಪ್ರಕ್ರಿಯೆಯಲ್ಲಿಯೂ ಅಕ್ರಮ ನಡೆದಿರುವ ಶಂಕೆ ಇದೆ. ಟೆಂಡರ್ ಪ್ರಕ್ರಿಯೆಗಳಿಂದ ನುಣುಚಿಕೊಳ್ಳಲು ಹವಣಿಸಿರುವ ತಾಂತ್ರಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತುಂಡು ಗುತ್ತಿಗೆ ನಡೆಸಲಾಗಿತ್ತು.
ಪರಿಶಿಷ್ಟ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಖರೀದಿ; ತುಂಡು ಗುತ್ತಿಗೆ ಹಿಂದಿದೆ ಅವ್ಯವಹಾರದ ವಾಸನೆ!
ರಾಜ್ಯದ ಒಟ್ಟು 8 ಸರ್ಕಾರಿ ಪಾಲಿಟೆಕ್ನಿಕ್ಗಳಿಗೆ 9,52,41,000 ರು.ಮೊತ್ತದಲ್ಲಿ ಡೆಸ್ಕ್ಟಾಪ್ ಖರೀದಿಗೆ ತಾಂತ್ರಿಕ ಶಿಕ್ಷಣ ಇಲಾಖೆ ಮುಂದಾಗಿದೆ. ಇದಕ್ಕಾಗಿ 25.00 ಲಕ್ಷ ರು.ಗಳ ಮಿತಿಯಲ್ಲಿ ಖರೀದಿಸಲು ಸರ್ಕಾರ ಹೊರಡಿಸಿರುವ ಆದೇಶವನ್ನೇ ತಾಂತ್ರಿಕ ಶಿಕ್ಷಣ ಇಲಾಖೆ ಗಾಳಿಗೆ ತೂರಿತ್ತು.
ಪ್ರತಿ ಟೆಂಡರ್ಗೆ 25.00 ಲಕ್ಷ ರು.ಮೊತ್ತದ ಮಿತಿ ಮೀರದಂತೆ ಆಯಾ ಆಡಳಿತ ಇಲಾಖೆಯ ಆಡಳಿತಾತ್ಮಕ ಅನುಮೋದನೆ ಪಡೆದು ಖರೀದಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈ ಆದೇಶದ ಪ್ರಕಾರ ಇಲಾಖೆಯಂದರೆ ತಾಂತ್ರಿಕ ಶಿಕ್ಷಣ ಇಲಾಖೆಯಾಗುತ್ತದೆ. ಇದರ ಪ್ರಕಾರ ಇಲಾಖೆಯ ಅಧೀನದಲ್ಲಿ ಬರುವ ಪ್ರತಿ ಪಾಲಿಟೆಕ್ನಿಕ್ಗಳಲ್ಲಿ 25.00 ಲಕ್ಷ ರು.ಗಳ ಮಿತಿಸಯಲ್ಲಿ ಖರೀದಿಸಲು ಈ ಆದೇಶ ಅನ್ವಯವಾಗುವುದಿಲ್ಲ ಎಂಬ ಅಂಶ ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಅದೇ ರೀತಿ ಸರಕು ಮತ್ತು ಸೇವೆಗಳ ಸಂಗ್ರಹಣೆಗೆ ಆಡಳಿತಾತ್ಮಕ ಅನುಮೋದನೆ ನೀಡಲು ಆಡಳಿತ ಇಲಾಖೆಗೆ 5.00 ಕೋಟಿ ರು.ಗಳವರೆಗೆ ಮಾತ್ರ ಆರ್ಥಿಕ ಅಧಿಕಾರವನ್ನು ಪ್ರತ್ಯಾಯೋಜಿಸಿದೆ. ಆದರೆ ಇಲಾಖೆ ಪ್ರಸ್ತಾಪಿಸಿರುವ ಮೊತ್ತ 5.00 ಕೋಟಿ ರು.ಗೂಮೀರಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟದ ಅನುಮೋದನೆ ಪಡೆಯಬೇಕು.
ಹೀಗಾಗಿ ಅಧಿಕಾರಿಗಳು ‘ಸಚಿವ ಸಂಪುಟದ ಅನುಮೋದನೆಯನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಉದ್ದೇಶಪೂರ್ವಕವಾಗಿಯೇ ಈ ರೀತಿ ತುಂಡು ಗುತ್ತಿಗೆಗೆ ಅವಕಾಶ ಕಲ್ಪಿಸಿಕೊಂಡಿದ್ದಾರೆ. ತುಂಡು ಗುತ್ತಿಗೆಯನ್ನು ನಡೆಸಿದ್ದೇ ಆದಲ್ಲಿ ಇದು ಕೂಡ ಮುಂದಿನ ದಿನಗಳಲ್ಲಿ ಮಹಾಲೇಖಪಾಲರ ಆಕ್ಷೇಪಣೆಗೆ ಗುರಿಯಾಗುವ ಸಾಧ್ಯತೆಗಳೂ ಇವೆ,’ ಎಂದು ಆಂತರಿಕ ಸಲಹೆಗಾರರು ಎಚ್ಚರಿಸಿದ್ದರು.