422 ದಿನಗಳ ಅನಧಿಕೃತ ಗೈರು ಹಾಜರಿ; ಗ್ರೂಪ್‌ ಬಿ ವೃಂದದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಮೀನಮೇಷ

ಬೆಂಗಳೂರು; ಸೇವಾ ಅವಧಿಯಲ್ಲಿ 422 ದಿನಗಳವರೆಗೆ ಅನಧಿಕೃತ ಗೈರು ಹಾಜರಿ ಮತ್ತು ಅಸಮರ್ಪಕ ಕಾರ್ಯನಿರ್ವಹಣೆಯೂ ಸೇರಿದಂತೆ ವಿವಿಧ ಗಂಭೀರ ಸ್ವರೂಪದ ಆರೋಪಗಳಿಗೆ ಗುರಿಯಾಗಿರುವ ಸಹಾಯಕ ನಿರ್ದೇಶಕ ವಿ ಸಿದ್ದಯ್ಯ ಎಂಬುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಮಾಜ ಕಲ್ಯಾಣ ಇಲಾಖೆಯು ಮೀನಮೇಷ ಎಣಿಸುತ್ತಿರುವುದು ಇದೀಗ ಬಹಿರಂಗವಾಗಿದೆ.

 

ಅಲ್ಲದೇ ಆರೋಪಗಳಿಗೆ ಸಂಬಂಧಿಸಿದಂತೆ  ಕಾರಣ ಕೇಳಿ 2 ಬಾರಿ ಕಳಿಸಿದ್ದ ನೋಟೀಸ್‌ಗಳಿಗೂ  ಗ್ರೂಪ್‌ ಬಿ ವೃಂದದ ಅಧಿಕಾರಿಯಾಗಿರುವ ವಿ ಸಿದ್ದಯ್ಯ ಎಂಬುವರು ಯಾವುದೇ ಸಮಜಾಯಿಷಿ ನೀಡದಿದ್ದರೂ ಕ್ರಮಕ್ಕೆ ಮುಂದಾಗಿಲ್ಲ. ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳುವ ಸಂಬಂಧ ಪತ್ರ ವ್ಯವಹಾರಗಳಲ್ಲೇ ಕಾಲಹರಣ ಮಾಡುತ್ತಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

 

ವಿಶೇಷ ಕೇಂದ್ರೀಯ ನೆರವಿನ ಅನುದಾನಡಿಯಲ್ಲಿ ಬಿಡುಗಡೆಯಾದ ಅನುದಾನಕ್ಕೆ ಹಣ ಬಳಕೆ ಪ್ರಮಾಣ ಪತ್ರ ನೀಡದಿರುವುದು ಮತ್ತು ಉಳಿಕೆ ಅನುದಾನ ಖರ್ಚು ಮಾಡದಿರುವುದು ಸೇರಿದಂತೆ ಹಲವು ಆರೋಪಗಳಿಗೆ ಗುರಿ ಅಮಾನತಾಗಿದ್ದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಗೆಜೆಟೆಡ್‌ ಮ್ಯಾನೇಜರ್‍‌ ವಿ ಸಿದ್ದಯ್ಯ ಎಂಬುವರ ವಿರುದ್ಧ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರಿಗೆ ದೂರು ಸಲ್ಲಿಕೆಯಾಗಿತ್ತು.

 

ಈ ದೂರನ್ನಾಧರಿಸಿ ಕ್ರಮ ಕೈಗೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್‍‌ ಮಣಿವಣ್ಣನ್‌ ಅವರು ಕೆಳ ಹಂತದ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಅಧೀನ ಕಾರ್ಯದರ್ಶಿಯು ಯಾವುದೇ ಕ್ರಮವನ್ನು ಕೈಗೊಳ್ಳದೇ ಕಡತವನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ ಎಂಬದು ತಿಳಿದು ಬಂದಿದೆ.

 

ಪ್ರಕರಣದ ವಿವರ

 

ಸಹಾಯಕ ನಿರ್ದೇಶಕರು, ಗ್ರೇಡ್‌-2 ಆಗಿ ದೇವನಹಳ್ಳಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಅಸಮರ್ಪಕ ಕಾರ್ಯನಿರ್ವಹಣೆ, ಅನಧಿಕೃತ ಗೈರು ಹಾಜರಿ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಎ ನಿಯಮಾವಳಿಯಂತೆ ವಿಚಾರಣೆ ನಡೆಸಿದ್ದ  ನಿವೃತ್ತ ನ್ಯಾಯಾಧೀಶರು  ಆರೋಪವನ್ನು ರುಜುವಾತುಗೊಳಿಸಿದ್ದರು.  ಸಕಲೇಶಪುರ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಅಸಮರ್ಪಕ ಕಾರ್ಯ ನಿರ್ವಹಣೆ ಹಾಗೂ 79 ದಿನಗಳ ಗೈರು ಹಾಜರಿಯಾಗಿದ್ದರು. ಈ ಕುರಿತೂ  ಸಿಸಿಎ ನಿಯಮಾವಳಿ ವಿಚಾರಣೆ ನಡೆಸಿದ್ದ  ನಿವೃತ್ತ ನ್ಯಾಯಾಧೀಶರು ಆರೋಪವನ್ನು ದೃಢಪಡಿಸಿದ್ದರು.

 

ಮೊಳಕಾಲ್ಮೂರು ತಾಲೂಕಿನಲ್ಲಿ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಒಟ್ಟು 132 ದಿನಗಳ ಅನಧಿಕೃತ ಗೈರು ಹಾಜರಾಗುವ ಆರೋಪಕ್ಕೆ ಗುರಿಯಾಗಿದ್ದರು.  ಈ ಎರಡು ಆರೋಪಗಳಿಗೆ ಸಂಬಂಧಿಸಿದಂತೆ ಎರಡನೇ ಕಾರಣ ಕೇಳುವ ನೋಟೀಸ್‌ ಜಾರಿ ಮಾಡಿತ್ತು. ಆದರೆ ಈವರೆವಿಗೂ ಯಾವುದೇ ಸಮಜಾಯಿಷಿ ನೀಡಿರುವುದಿಲ್ಲ. ಮತ್ತು ಈ ಬಗ್ಗೆ ಸ್ಥಳೀಯ ಜಾಹೀರಾತು ಪತ್ರಿಕಾ ಪ್ರಕಟಣೆ ನೀಡಲಾಗಿತ್ತು. ಮೂರು ಆರೋಪಗಳಿಗೆ ಸಂಬಂಧಿಸಿದಂತೆ ಜಾಹೀರಾತು ನೀಡಲಾಗಿತ್ತು. ಆದರೆ ಈವರೆವಿಗೂ ಆರೋಪಿತ ಅಧಿಕಾರಿ ಸಿದ್ದಯ್ಯ ಅವರಿಂದ ಯಾವುದೇ ಲಿಖಿತ ಸಮಜಾಯಿಷಿ ಸ್ವೀಕೃತವಾಗಿಲ್ಲ ಎಂದು ಗೊತ್ತಾಗಿದೆ.

 

ಅಲ್ಲದೇ ಇದೇ ಅಧಿಕಾರಿ ಕೋಲಾರ ಜಿಲ್ಲೆಯಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದರೂ  ಈವರೆವಿಗೂ 211 ದಿನ ಕಚೇರಿಗೆ ಪದೇ ಪದೇ ಅನಧಿಕೃತವಾಗಿ ಗೈರು ಹಾಜರಾಗಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.

 

ಈ ಹಿನ್ನೆಲೆಯಲ್ಲಿ  ಕರ್ನಾಟಕ ನಾಗರಿಕ ಸೇವಾ 1957ರ ನಿಯಮ 8ರ ಅಡಿ ಕಠಿಣ ದಂಡನೆಯನ್ನು ವಿಧಿಸಲು ಹಾಗೂ ಅಮಾನತ್ತಿನ ಅವಧಿಯನ್ನು ಅಮಾನತ್ತೆಂದು ಹಾಗೂ ಅನಧಿಕೃತ ಗೈರು ಹಾಜರಾಗಿ ಅವಧಿಯನ್ನು ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸಲು ಪತ್ರಿಕಾ ಪ್ರಕಟಣೆ ವೆಚ್ಚವಾದ 33,793 ರು.ಗಳನ್ನು ಸರ್ಕಾರಕ್ಕೆ ಮರು ಭರಣ ಮಾಡಿಕೊಳ್ಳಲು  ಸರ್ಕಾರಕ್ಕೆ ಆಯುಕ್ತರು (COMPUTER NUMBER;1200166, SWD/261/PKS/2023)  ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಯಾವುದೇ ಕ್ರಮವಹಿಸಿಲ್ಲ ಎಂದು ಗೊತ್ತಾಗಿದೆ.

 

ಗ್ರೂಪ್‌ ಬಿ ವೃಂದದ ಅಧಿಕಾರಿಯಾಗಿರುವ ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಸಿಸಿಎ ನಿಯಮ 8ರ ಅನ್ವಯ ಕಡ್ಡಾಯ ನಿವೃತ್ತಿ, ಮತ್ತೆ ಸರ್ಕಾರಿ ನೌಕರಿಯ ಪ್ರವೇಶಕ್ಕೆ ಅನರ್ಹತೆಯಾಗದ ಹಾಗೇ ಸೇವೆಯಿಂದ ತೆಗೆದು ಹಾಕುವುದು, ಮತ್ತೆ ಸರ್ಕಾರಿ ನೌಕರಿಯ ಪ್ರವೇಶಕ್ಎಕ ಸಾಮಾನ್ಯವಾಗಿ ಅನರ್ಹತೆಯಾತಕ್ಕ ರೀತಿಯಲ್ಲಿ ಸೇವೆಯಿಂದ ವಜಾ ಮಾಡುವ ದಂಡನೆಯನ್ನು ವಿಧಿಸಬಹುದು. ಈ ಸಂಬಂಧ ಅನುಮೋದನೆ ಕೋರಿ ಸರ್ಕಾರಕ್ಕೆ ಕಡತ ಸಲ್ಲಿಕೆಯಾಗಿದೆ. ಸಚಿವರು ಇದುವರೆಗೂ ಈ ಕಡತದತ್ತ ಕಣ್ಣೆತ್ತಿಯೂ ನೋಡಿಲ್ಲ ಎಂದು ತಿಳಿದು ಬಂದಿದೆ.

 

ಈ ದೂರಿನಲ್ಲಿ ಉಲ್ಲೇಖಿಸಿರುವ ಸತ್ಯಾಂಶಗಳನ್ನು ಪರಿಶೀಲಿಸಿ ನಿಯಮಾನುಸಾರವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಮಹದೇವಪ್ಪ ಅವರು 2023ರ ಜುಲೈ 14ರಂದು ಬರೆದಿದ್ದ ಪತ್ರವನ್ನಾಧರಿಸಿ ಇದುವರೆಗೂ ಇಲಾಖೆಯ ಉನ್ನತ ಅಧಿಕಾರಿಗಳು ಯಾವುದೇ ಕ್ರಮ ವಹಿಸಿರಲಿಲ್ಲ.

 

ಕೋಲಾರ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ ಸಿದ್ದಯ್ಯ ಅವರ ವಿರುದ್ಧ ಇಲಾಖೆ ವಿಚಾರಣೆಗಳ ಶಿಸ್ತು ಪ್ರಕರಣ, ಹಣ ದುರ್ಬಳಕೆ ಪ್ರಕರಣಗಳಲ್ಲಿ ವಿಚಾರಣೆ ಗುರಿಯಾಗಿದ್ದರು. ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಅವರನ್ನು ಅಮಾನತುಗೊಳಿಸಲಾಗಿತ್ತು. ಆದರೂ ಇವರ ವಿರುದ್ಧ ಗಂಭೀರ ಶಿಸ್ತು ಕ್ರಮ ಜರುಗಿಸಿಲ್ಲ ಎಂದು ಸಚಿವರಿಗೆ ದೂರು ಸಲ್ಲಿಕೆಯಾಗಿತ್ತು.

 

2014ರಲ್ಲಿ ಶಿಕ್ಷಣ ಇಲಾಖೆಯಿಂದ ಸಮಾಜ ಕಲ್ಯಾಣ ಇಲಾಖೆಗೆ ಶಾಶ್ವತ ವರ್ಗಾವಣೆ ಹೊಂದಿರುವ ವಿ ಸಿದ್ದಯ್ಯ ಎಂಬುವರ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಈ ಆರೋಪಗಳ ಕುರಿತಾಗಿ ವಿಚಾರಣೆ ನಡೆಸಿದ್ದ ಅಂದಿನ ಆಯುಕ್ತರಾದ ಎಂ ವಿ ಸಾವಿತ್ರಿ ಅವರು 2015ರ ಜುಲೈ 11ರಂದು ಸಿದ್ದಯ್ಯ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.

 

ಹೊರಗುತ್ತಿಗೆ ನೌಕರರಿಗೆ ಕಾಲಕಾಲಕ್ಕೆ ವೇತನ ನೀಡಲು ಕ್ರಮ ವಹಿಸಿರುವುದಿಲ್ಲ. ಗುತ್ತಿಗೆದಾರರಿಗೆ ಹಣ ಸಂದಾಯ ಮಾಡಲು ಕ್ರಮ ವಹಿಸಿಲ್ಲ. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶಕ್ಕೆ ಅಗತ್ಯ ಕ್ರಮ ವಹಿಸಿಲ್ಲ. ಪ್ರತಿ ತಿಂಗಳು ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ ಪ್ರಗತಿ ವರದಿ ಸಲ್ಲಿಸಿಲ್ಲ ಮತ್ತು ನಿಯಮಿತವಾಗಿ ತಪಾಸಣೆ ನಡೆಸಿಲ್ಲ ಎಂದು ಅಮಾನತು ಆದೇಶದಲ್ಲಿ ವಿವರಿಸಲಾಗಿತ್ತು.

 

ದೇವನಹಳ್ಳಿ ತಾಲೂಕಿನ ಹಳೇ ಕಟ್ಟಡದ ಮಾಲೀಕರಾದ ಚನ್ನನಾರಾಯಣ ಸ್ವಾಮಿ ಇವರ ಕಟ್ಟಡ ಬಾಡಿಗೆ ಪ್ರಕರಣದಲ್ಲಿ ಸೂಕ್ತ ಕ್ರಮ ವಹಿಸದೇ ಕರ್ತವ್ಯ ನಿರ್ಲಕ್ಷ್ಯ ವಹಿಸಲಾಗಿದೆ. ಡಾ ಬಾಬು ಜಗಜೀವನರಾಂ ಭವನ ಮತ್ತು ಮಹರ್ಷಿ ವಾಲ್ಮೀಕಿ ಭವನಗಳ ನಿರ್ಮಾಣ ಹಂತದ ಕಟ್ಟಡ ಪರಿಶೀಲನೆ ಮಾಡಿಲ್ಲ. ಮಂಜೂರಾದ ಭವನಗಳಿಗೆ ನಿವೇಶನ ಪಡೆಯಲು ಕ್ರಮವಹಿಸಿರಲಿಲ್ಲ.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿರುದ್ಧ ಶಿಸ್ತು ಕ್ರಮ; ಸಚಿವರ ಪತ್ರಕ್ಕೂ ಕಿಮ್ಮತ್ತು ನೀಡದ ಅಧಿಕಾರಿಶಾಹಿ

 

ಪಂಚಾಯ್ತಿಗಳ ಶೇ.25ರ ಅನುದಾನ ಪರಿಶೀಲನೆ ಮತ್ತು ಪುರಸಭೆಗಳಲ್ಲಿನ ಪರಿಶೀಲನೆ ನಡೆಸಿ ವರದಿ ಮಾಡಿಲ್ಲ. ಅಂಬೇಢ್ಕರ್‍‌ ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ಸಮಗ್ರ ಅಭಿವೃದ್ಧಿಗೆ ಕೈಗೊಳ್ಳಲಾದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿಲ್ಲ. ವಿಶೇಷ ಕೇಂದ್ರೀಯ ನೆರವಿನ ಅನುದಾನಡಿಯಲ್ಲಿ ಬಿಡುಗಡೆಯಾದ ಅನುದಾನಕ್ಕೆ ಹಣ ಬಳಕೆ ಪ್ರಮಾಣ ಪತ್ರ ನೀಡಿಲ್ಲ ಮತ್ತು ಉಳಿಕೆ ಅನುದಾನ ಖರ್ಚು ಮಾಡಿಲ್ಲ ಎಂದು ಆದೇಶದಲ್ಲಿ ವಿವರಿಸಿತ್ತು.

 

ದೇವನಹಳ್ಳಿ ತಾಲೂಕು ಯಲಿಯೂರು ಗ್ರಾಮದಲ್ಲಿ ನಡೆಯುತ್ತಿರುವ ಪರಿಶಿಷ್ಟ ವರ್ಗಗಳ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯ ನಿರ್ವಹಣೆ ಅಸಮರ್ಪಕ. ಈ ವಿದ್ಯಾರ್ಥಿ ನಿಲಯದ ಶಾಲಾ ಮಕ್ಕಳು ದುಶ್ಚಟಗಳನ್ನು ಅಭ್ಯಾಸ ಮಾಡಿಕೊಂಡಿದ್ದರೂ ಈ ಬಗ್ಗೆ ಸರಿಪಡಿಸುವ ಬಗ್ಗೆ ಯಾವುದೇ ಕ್ರಮವಹಿಸಿಲ್ಲ. ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರು ವಿದ್ಯಾರ್ಥಿ ನಿಲಯದ ಕ್ರಿಯಾ ಯೋಜನೆ ಅನ್ವಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಿತ್ತು.

 

2018ರ ಅಕ್ಟೋಬರ್‍‌ನಿಂದ 2022ರ ಡಿಸೆಂಬರ್‍‌ ವರೆಗೂ ಯಾವುದೇ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸದೇ ಅನಧಿಕೃತ ಗೈರು ಹಾಜರಾಗಿದ್ದಾರೆ ಎಂದು ದೂರಲಾಗಿದೆಯಲ್ಲದೇ ನಿಯಮಾವಳಿಗಳನ್ನು ಉಲ್ಲಂಘಿಸಿದ್ದರೂ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರ ಕಚೇರಿಯ ಉನ್ನತ ಅಧಿಕಾರಿಗಳು ಇವರ ವಿರುದ್ಧ ಶಿಸ್ತು ಕ್ರಮ ವಹಿಸದೇ 2023ರ ಜನವರಿಯಲ್ಲಿ ಕೋಲಾರ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕಚೇರಿಯ ಗೆಜೆಟೆಡ್‌ ವ್ಯವಸ್ಥಾಪಕರನ್ನಾಗಿ ನೇಮಿಸಿ ಆದೇಶಿಸಲಾಗಿದೆ ಎಂದು ದೂರಿನಲ್ಲಿ ಪ್ರಸ್ತಾಪಿಸಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts