ಕಾರಾಗೃಹಗಳಲ್ಲಿ ಸುಧಾರಿಸದ ಆಡಳಿತ; ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ ಮೂಲೆಗುಂಪು

ಬೆಂಗಳೂರು; ಕಾರಾಗೃಹಗಳಲ್ಲಿ ನಿಷೇಧಿತ ವಸ್ತುಗಳ ಪ್ರವೇಶವನ್ನು ತಡೆಯುವುದು ಮತ್ತು ಕಾರಾಗೃಹಕ್ಕೆ ಪ್ರವೇಶಿಸುವ ಬಂಧಿಗಳು ಮತ್ತು ಇತರೆ ವ್ಯಕ್ತಿಗಳ ದೈಹಿಕ ತಪಾಸಣೆ ಕೈಗೊಳ್ಳುವಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಕಾರಾಗೃಹ ಇಲಾಖೆ ವರದಿ ನೀಡಿದ್ದರ ಬೆನ್ನಲ್ಲೇ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವುದು ಕಾರಾಗೃಹದ ಆಡಳಿತವು ಸುಧಾರಣೆಗೊಂಡಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ರಾಜ್ಯದ ಕಾರಾಗೃಹಗಳಲ್ಲಿ ಗಾಂಜಾ ಮತ್ತು ಮಾದಕ ವಸ್ತುಗಳು ಸೇರಿದಂತೆ ನಿಷೇಧಿತ ವಸ್ತುಗಳು ಪ್ರವೇಶಿಸಲು ಕಾರಣರಾಗಿದ್ದ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಂಬಂಧ ಶಿಫಾರಸ್ಸುಗಳ ಅನುಷ್ಠಾನದ ಅನುಸರಣಾ ವರದಿಯನ್ನು ಸಲ್ಲಿಸಿ ಕೈತೊಳೆದುಕೊಂಡಿದ್ದ ಗೃಹ ಇಲಾಖೆ ಆ ನಂತರ ಕಾರಾಗೃಹಗಳಲ್ಲಿನ ಆಡಳಿತದ ಕುರಿತು ಅನುಪಾಲನೆ ಮಾಡಿಲ್ಲ ಎಂಬುದು ಸಿಸಿಬಿ ನಡೆಸಿದ್ದ ದಾಳಿಯೇ ಕೈಗನ್ನಡಿಯಾಗಿದೆ. ಅಲ್ಲದೆ ಪಿಎಸಿ ನೀಡಿದ್ದ ವರದಿ ಎಷ್ಟರಮಟ್ಟಿಗೆ ಪಾಲನೆಗೊಂಡಿದೆ ಎಂಬುದನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಸಹ ಪರಿಶೀಲನೆ ನಡೆಸಿಲ್ಲ ಎಂದು ಗೊತ್ತಾಗಿದೆ.

ಕಾರಾಗೃಹಗಳಲ್ಲಿನ ಆಡಳಿತ ಲೋಪಗಳ ಕುರಿತು ಸಿಎಜಿ ವರದಿ ನೀಡಿತ್ತು. ಅಲ್ಲದೆ ಇದೇ ವರದಿಯನ್ನಾಧರಿಸಿ ಎಚ್‌ ಕೆ ಪಾಟೀಲ್‌ ಅಧ್ಯಕ್ಷತೆಯಲ್ಲಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯೂ ಹಲವು ಶಿಫಾರಸ್ಸುಗಳನ್ನು ಮಾಡಿತ್ತು. ಈ ವರದಿ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ನೀಡುವಲ್ಲಿಯೂ ಒಳಾಡಳಿತ ಇಲಾಖೆಯು ವಿಳಂಬ ಧೋರಣೆ ಪ್ರದರ್ಶಿಸಿತ್ತು.

ಬೆಂಗಳೂರು, ಮೈಸೂರು, ಬೆಳಗಾವಿ, ಧಾರವಾಡ, ಬಳ್ಳಾರಿ ಮತ್ತು ಕಲಬುರಗಿ ಕೇಂದ್ರ ಕಾರಾಗೃಹಗಳಲ್ಲಿನ ಮೊಬೈಲ್‌ ಜ್ಯಾಮರ್‌ಗಳನ್ನು ಈವರೆವಿಗೂ ಉನ್ನತೀಕರಿಸಿಲ್ಲ. 3 ಜಿ ತಂತ್ರಾಂಶ ಮೊಬೈಲ್‌ ಜ್ಯಾಮರ್‌ಗಳು ಇರುವ ಕಾರಣ ಸಿಗ್ನಲ್‌ಗಳನ್ನು ಈಗಲೂ ನಿಯಂತ್ರಿಸಲಾಗುತ್ತಿಲ್ಲ . ಅಲ್ಲದೆ ಜೈಲುಗಳಿಂದ ಪರಾರಿಯಾಗಿದ್ದ ಖೈದಿಗಳ ಪೈಕಿ 31 ಖೈದಿಗಳನ್ನು ಮರು ಬಂಧಿಸಿಲ್ಲ ಎಂಬ ಸಂಗತಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸಲ್ಲಿಸಿದ್ದ ಅನುಸರಣಾ ವರದಿಯು ಹೊರಗೆಡವಿತ್ತು.
ಕಾರಾಗೃಹ ಇಲಾಖೆಯಲ್ಲಿನ ಆಂತರಿಕ ನಿಯಂತ್ರಣ ವ್ಯವಸ್ಥೆಯ ಕುರಿತಾದ ಅನುಪಾಲನಾ ಲೆಕ್ಕಪರಿಶೋಧನೆ ಕುರಿತು ಒಳಾಡಳಿತ ಇಲಾಖೆಯು ಸಲ್ಲಿಸಿರುವ ಅನುಸರಣಾ ವರದಿಯು ಜೈಲುಗಳಲ್ಲಿರುವ ಸುರಕ್ಷತೆ ಮತ್ತು ಭದ್ರತೆ ಹೇಗಿದೆ ಎಂಬುದನ್ನು ತೆರೆದಿಟ್ಟಿತ್ತು.

ಲೆಕ್ಕಪತ್ರ ಸಮಿತಿಯ ವರದಿಯಲ್ಲೇನಿದೆ?

ರಾಜ್ಯದ ಕಾರಾಗೃಹಗಳಲ್ಲಿ ನಿಷೇಧಾತ್ಮಕ ವಸ್ತುಗಳ ಪ್ರವೇಶವನ್ನು ಪತ್ತೆ ಹಚ್ಚುವುದು, ತಡೆಗಟ್ಟುವುದು, ಕಣ್ಗಾವಲಿಗೆ, ಕೈಯಲ್ಲಿ ಹಿಡಿಯುವ ಲೋಹ ಪತ್ತೆಕಾರಿಗಳು, ಲೋಹ ಪತ್ತೆಕಾರಿಗಳು ಸೇರಿದಂತೆ ಇನ್ನಿತರೆ ಸಾಧನಗಳನ್ನು ಅಧಿಕಾರಿಗಳು ಬಳಸಿರಲಿಲ್ಲ. ಹೀಗಾಗಿ ಕಾರಾಗೃಹಗಳಲ್ಲಿ ಗಾಂಜಾ, ಅಫೀಮು, ತಂಬಾಕು, ಮಾದಕ ವಸ್ತುಗಳು ಸುಲಭವಾಗಿ ಪ್ರವೇಶಿಸಿದ್ದವು ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು (2014-15) ವರದಿ ಪತ್ತೆ ಹಚ್ಚಿತ್ತು.

‘ಮಾದಕ ವಸ್ತುಗಳು, ಮೊಬೈಲ್‌ ಫೋನ್‌, ಸಿಮ್‌ ಕಾರ್ಡ್‌ಗಳು ಕಾರಾಗೃಹಗಳಲ್ಲಿ ಅಪಾರ ಪ್ರಮಾಣದಲ್ಲಿ ಪತ್ತೆಯಾಗಿರುವುದಕ್ಕೆ ಸಮಿತಿಯು ತೀವ್ರ ಅತೃಪ್ತಿ ವ್ಯಕ್ತಪಡಿಸುತ್ತದೆ. ನಿಷೇಧಿತ ವಸ್ತುಗಳು ಕಾರಾಗೃಹಗಳನ್ನು ಪ್ರವೇಶಿಸದಂತೆ ತಡೆಯಲು ನಿಗದಿಪಡಿಸಿರುವ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದೆ ಅಂತಹ ವಸ್ತುಗಳ ಪ್ರವೇಶಕ್ಕೆ ಜವಾಬ್ದಾರರಾದ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು,’ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಶಿಫಾರಸ್ಸು ಮಾಡಿತ್ತು.

ರಾಜ್ಯದ ಎಲ್ಲಾ ಕಾರಾಗೃಹಗಳ ಮುಖ್ಯಸ್ಥರು ಪ್ರತಿನಿತ್ಯ ತಪಾಸಣೆ ನಡೆಸಿ ಅಕ್ರಮವಾಗಿ ನಿಷೇಧಿತ ವಸ್ತುಗಳ ಬಳಕೆ/ಬಳಕೆಯಾಗದಿರುವ ಬಗ್ಗೆ ಕೇಂದ್ರ ಕಚೇರಿಗೆ ದೃಢೀಕೃತ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಇಲಾಖಾ ಮುಖ್ಯಸ್ಥರಿಗೆ ಸಮಿತಿಯು ಸೂಚಿಸಿತ್ತು.

ಕಾರಾಗೃಹಗಳಲ್ಲಿನ ಮಾದಕ ವಸ್ತುಗಳನ್ನು ಮತ್ತು ಮಾದಕ ವ್ಯಸನಿಗಳನ್ನು ಪತ್ತೆ ಹಚ್ಚಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕೇಂದ್ರ ಸರ್ಕಾರವು 2010ರಲ್ಲೇ ಸೂಚಿಸಿತ್ತು. ಆದರೆ ಕರ್ನಾಟಕ ಕಾರಾಗೃಹಗಳ ಇಲಾಖೆಯು ಆ ಸೂಚನೆಗಳನ್ನು ಪಾಲಿಸಿರಲಿಲ್ಲ. ಬೆಳಗಾವಿ, ಚಿಕ್ಕಮಗಳೂರು, ಹಾವೇರಿ, ಬೀದರ್‌, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಬಳ್ಳಾರಿ ಕಾರಾಗೃಹಗಳಲ್ಲಿನ ಅನಿರೀಕ್ಷಿತ ತಪಾಸಣೆಗಳನ್ನೂ ನಡೆಸಿರಲಿಲ್ಲ.

‘ಕಾರಾಗೃಹಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಮಾದಕ ವಸ್ತುಗಳು, ಮೊಬೈಲ್‌ಗಳು, ಸಿಮ್‌ ಕಾರ್ಡ್‌ಗಳು, ಪೆನ್‌ಡ್ರೈವ್‌ಗಳು, ಸ್ಕ್ರೂ ಡ್ರೈವರ್‌ಗಳ ಕುರಿತು ಇಲಾಖೆ ನಡೆಸುತ್ತಿರುವ ವಿಚಾರಣೆಯನ್ನು ಶೀಘ್ರವಾಗಿ ಮುಕ್ತಾಯಗೊಳಿಸಬೇಕು. ಅಲ್ಲದೆ ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಆ ಬಗ್ಗೆ ವರದಿಯನ್ನು ಜರೂರಾಗಿ ನೀಡಬೇಕು,’ ಎಂದು ಸಮಿತಿ ನಿರ್ದೇಶಿಸಿತ್ತು.

ಮೈಸೂರು, ಧಾರವಾಡ, ಬಳ್ಳಾರಿ ಮತ್ತು ಬೆಂಗಳೂರು ಕಾರಾಗೃಹಗಳಲ್ಲಿ ಮೊಬೈಲ್‌ ಜಾಮರ್‌ ಅಳವಡಿಸಲು 28.28 ಕೋಟಿ ರು. ಅನುದಾನ ಒದಗಿಸಲಾಗಿತ್ತು. ಈ ಪೈಕಿ 86.05 ಲಕ್ಷ ವೆಚ್ಚ ಮಾಡಿದ್ದರೂ 2012ರ ಮೇ ತಿಂಗಳಿನಿಂದಲೇ ಮೊಬೈಲ್‌ ಜಾಮರ್‌ಗಳು ಉಪಯೋಗಿಸುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಸಿಎಜಿ ವರದಿ ಮಾಡಿತ್ತು.

ಇದಲ್ಲದೆ ವಿಚಾರಣಾಧೀನ ಕೈದಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವುದು, ಅಭಿರಕ್ಷಣೆಯಿಂದ ತಪ್ಪಿಸಿಕೊಂಡ ಕೈದಿಗಳು, ವೈದ್ಯಕೀಯ ಸೌಲಭ್ಯಗಳು, ಸಂದರ್ಶಕರ ಮಂಡಳಿ ರಚನೆ ಸೇರಿದಂತೆ ಕಾರಾಗೃಹಗಳಲ್ಲಿ ಹಲವು ಸುಧಾರಣೆಗಳ ಕುರಿತು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸಮಿತಿಯು ಶಿಫಾರಸ್ಸುಗಳನ್ನು ಮಾಡಿತ್ತು.

ಶಿಕ್ಷೆಗೆ ಗುರಿಯಾಗಿರುವ ಕೈದಿಗಳು ಹಾಗೂ ವಿಚಾರಣಾಧೀನ ಕೈದಿಗಳು ಜೈಲಿನಲ್ಲೇ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದ ಮಾಹಿತಿ ಮತ್ತು ಮೊಬೈಲ್ ಬಳಕೆ ಹಾಗೂ ಡ್ರಗ್ಸ್ ಸೇವಿಸುತ್ತಿರುವ ಶಂಕೆ ಮೇರೆಗೆ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ್ದರು. ಗಾಂಜಾ ಪೊಟ್ಟಣ ಹಾಗೂ ಗಾಂಜಾ ಸೇದಲು ಬಳಸುವ ಚಿಲುಮೆ ಬ್ಯಾರಕ್‌ನಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts