55 ಕೋಟಿ ಅಕ್ರಮ; ಬ್ಯಾಂಕ್‌ನಿಂದ ಹಣವೂ ಮರಳಿಲ್ಲ, ತನಿಖೆಯಿಲ್ಲ, ಸಿಐಡಿಗೂ ವರದಿ ಮಾಡಿಲ್ಲ

ಬೆಂಗಳೂರು; ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ (ಕೆಆರ್‌ಐಡಿಎಲ್‌) ಅನುದಾನದ ಮೊತ್ತ 55 ಕೋಟಿ ರು.ಗಳನ್ನು  ಅಕ್ರಮವಾಗಿ ವರ್ಗಾವಣೆ ಮಾಡಿ ದುರುಪಯೋಗ ಪಡಿಸಿಕೊಂಡಿದ್ದ ಪ್ರಕರಣ ಬಹಿರಂಗಗೊಂಡು 4 ವರ್ಷಗಳಾದರೂ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ಕನಿಷ್ಠ ಪ್ರಾಥಮಿಕ ತನಿಖೆಯನ್ನೇ ನಡೆಸಿಲ್ಲ. ಅಲ್ಲದೆ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಸಿಐಡಿಗೂ ವರದಿ ಮಾಡಿಲ್ಲ. ಹಾಗೆಯೇ ಕ್ರಿಡಿಲ್‌ನ ಹೂಡಿಕೆ ಹಣವು ನಾಲ್ಕು ವರ್ಷಗಳಾದರೂ ಮರಳಿ ಬಂದಿಲ್ಲ.

ಪ್ರಕರಣ ಕುರಿತಂತೆ ಕ್ರಿಡಿಲ್‌ 2017, 2018 ಮತ್ತು 2021ರ ಅಕ್ಟೋಬರ್‌ 28ರಂದು ಬ್ಯಾಂಕ್‌ ಹಿರಿಯ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದರೂ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ಹೀಗಾಗಿ ಕ್ರಿಡಿಲ್‌ ವ್ಯವಸ್ಥಾಪಕ ನಿರ್ದೇಶಕರು 2021ರ ನವೆಂಬರ್‌ 12ರಂದು ಮತ್ತೊಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ನಾಲ್ಕು ವರ್ಷಗಳಾದರೂ 55 ಕೋಟಿ ರುಪಾಯಿ ಬ್ಯಾಂಕ್‌ನಿಂದ ಕ್ರಿಡಿಲ್‌ಗೆ ಮರಳಿ ಬರದಿದ್ದರೂ ಸಚಿವ ಕೆ ಎಸ್‌ ಈಶ್ವರಪ್ಪ ಅವರು ಇಡೀ ಪ್ರಕರಣದ ಕುರಿತು ಮೌನ ವಹಿಸಿದ್ದಾರೆ. ಅಲ್ಲದೆ ಸಿಐಡಿ ತನಿಖೆಯಲ್ಲಿ ವಿಳಂಬವಾಗಿದ್ದರೂ ತ್ವರಿತಗತಿಯಲ್ಲಿ ತನಿಖೆ ಪೂರ್ಣಗೊಳಿಸಲು ಕ್ರಮ ಕೈಗೊಂಡಿಲ್ಲ ಎಂದು ಗೊತ್ತಾಗಿದೆ.

‘ಕ್ರಿಡಿಲ್‌ ಸಂಪೂರ್ಣವಾಗಿ ಸಾರ್ವಜನಿಕ ವಲಯದ ಕಂಪನಿ 55 ಕೋಟಿ ಅಕ್ರಮ ಪ್ರಕರಣದಿಂದ ಕ್ರಿಡಿಲ್‌ಗೆ ದೊಡ್ಡ ಮಟ್ಟದ ನಷ್ಟವಾಗಿದೆ. ಬ್ಯಾಂಕ್‌ನ ಸಿಬ್ಬಂದಿಯಿಂದಲೇ ಅಕ್ರಮ ವಹಿವಾಟು ಆಗಿದ್ದರೂ ಇದುವರೆಗೂ ಯಾವುದೇ ತನಿಖೆಯನ್ನು ನಡೆಸಿಲ್ಲ. ಅಲ್ಲದೆ ಅಪರಾಧದ ಬಗ್ಗೆಯೂ ವರದಿ ಮಾಡಿಲ್ಲ, ವಿವರಣೆಯನ್ನೂ ನೀಡಿಲ್ಲ. ಇದು ಅಕ್ರಮವನ್ನು ನೇರವಾಗಿ ಪ್ರೋತ್ಸಾಹಿಸಿದಂತಾಗಿದೆ,’ ಎಂದು ಕ್ರಿಡಿಲ್‌ ವ್ಯವಸ್ಥಾಪಕ ನಿರ್ದೇಶಕರು ಹೇಳಿರುವುದು ಪತ್ರದಿಂದ ತಿಳಿದು ಬಂದಿದೆ.

ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನ ಅಧ್ಯಕ್ಷ ಮತ್ತು ಹಿರಿಯ ಆಡಳಿತ ಮಂಡಳಿಯ ವೈಫಲ್ಯವೇ ಇದಕ್ಕೆ ಕಾರಣ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್‌ ಇಲಾಖೆ ನಿಲುವು ತಳೆದಿದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್‌ ಕೆ ಅತೀಕ್‌ ಅವರು 2019ರ ಮೇ 15ರಂದು ಭಾರತ ಸರ್ಕಾರದ ಹಣಕಾಸು ಇಲಾಖೆಯ ಕಾರ್ಯದರ್ಶಿ ರಾಜೀವ್‌ಕುಮಾರ್‌ ಅವರಿಗೆ ಪತ್ರ ಬರೆದಿದ್ದರು. ಪತ್ರ ಬರೆದು 2 ವರ್ಷಗಳಾದರೂ ಬ್ಯಾಂಕ್‌ನ ಆಡಳಿತ ಮಂಡಳಿಯು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

ಪ್ರಧಾನ ಕಾರ್ಯದರ್ಶಿಗಳ ಪತ್ರದಲ್ಲೇನಿತ್ತು?

“ಈ ಪ್ರಕರಣದಲ್ಲಿ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನ ಅಧ್ಯಕ್ಷ ಹಾಗೂ ಹಿರಿಯ ಆಡಳಿತ ಮಂಡಳಿಯು , ಹೂಡಿಕೆದಾರರ ನಿಧಿಯನ್ನು ರಕ್ಷಿಸುವಲ್ಲಿ ಶಾಸನಬಧ್ಧ ಮತ್ತು ನಿಯಂತ್ರಿತ ಹೊಣೆಗಾರಿಕೆಯನ್ನು ಪ್ರದರ್ಶಿಸುವಲ್ಲಿ ವಿಫಲವಾಗಿದೆ.  ಭಾರತೀಯ ರಿಸರ್ವ್‌ ಬ್ಯಾಂಕ್‌ ನೀಡಿದ್ದ ನಿರ್ದೇಶನಗಳನ್ನು ಪಾಲಿಸದೇ ಲೋಪ ಎಸಗಿದೆ. ಹೀಗಾಗಿ ಈ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆಗೊಳಪಡಿಸಿ ತೀಕ್ಷ್ಣ ಕ್ರಮ ಕೈಗೊಳ್ಳಬೇಕಲ್ಲದೆ, ಹೂಡಿಕೆದಾರ ಕಂಪನಿಯಾಗಿರುವ ಕ್ರಿಡಿಲ್‌ನ ಹೂಡಿಕೆ ಹಣವನ್ನು ತ್ವರಿತಗತಿಯಲ್ಲಿ ಮರಳಿಸಬೇಕು,” ಎಂದು ಎಲ್‌ ಕೆ ಅತೀಕ್‌ ಅವರು ಭಾರತ ಸರ್ಕಾರದ ಹಣಕಾಸು ಇಲಾಖೆಗೆ 2019ರ ಮೇ 15ರಂದು ಬರೆದಿದ್ದ ಪತ್ರದಲ್ಲಿ ಕೋರಿದ್ದರು.

ಅದೇ ರೀತಿ ಕ್ರಿಡಿಲ್‌ನ ವ್ಯವಸ್ಥಾಪ ನಿರ್ದೇಶಕ ಐಎಫ್‌ಎಸ್‌ ಅಧಿಕಾರಿ ಬಿ ವೆಂಕಟೇಶ್‌ ಅವರು ಕೂಡ ಈ ಪ್ರಕರಣದ ಕುರಿತು 7 ಪುಟಗಳ ವರದಿಯನ್ನೂ ನೀಡಿದ್ದಾರೆ. ಇದರಲ್ಲಿ ಬ್ಯಾಂಕ್‌ ಎಸಗಿರುವ ನ್ಯೂನತೆಗಳನ್ನು ನಿರಾಕರಿಸಲಾಗುವುದಿಲ್ಲ ಎಂಬ ಅಂಶವನ್ನು ಪ್ರಧಾನವಾಗಿ ಉಲ್ಲೇಖಿಸಿದ್ದರು.

“ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿರ್ದೇಶಗಳನಷ್ಟೇ ಅಲ್ಲದೆ, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ರೂಪಿಸಿಕೊಂಡಿರುವ ತನ್ನದೇ ನಿಯಮಗಳನ್ನೂ ಅನುಸರಿಸಿಲ್ಲ.ಬ್ಯಾಂಕ್‌ ಅಧಿಕಾರಿಗಳ ಭಾಗಿದಾರಿಕೆಯಿಂದಾಗಿಯೇ ಹಣ ದುರುಪಯೋಗವಾಗಿದೆ. ಇದು ಬ್ಯಾಂಕ್‌ನ ಮೇಲಿರುವ ನಂಬಿಕೆ ಮತ್ತು ವಿಶ್ವಾಸವನ್ನು ಕಳೆದುಕೊಂಡಂತಾಗಿದೆ,” ಎಂದು ವರದಿಯಲ್ಲಿ ವಿವರಿಸಿದ್ದರು.

ಕಪ್ಪು ಪಟ್ಟಿಗೂ ಸೇರಿಸಿಲ್ಲ

55 ಕೋಟಿ ಅವ್ಯವಹಾರದ ಕುರಿತಂತೆ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನ್ನು ರಾಜ್ಯಸ ರ್ಕಾರದ ಮಟ್ಟದಲ್ಲಿ ವಹಿವಾಟು ನಡೆಸದಂತೆ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆರ್‌ಬಿಗೆ ಪತ್ರ ಬರೆಯಲು ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಕಳೆದ ಒಂದು ವರ್ಷದ ಹಿಂದೆ ಅಂದರೆ 2020ರ ನವೆಂಬರ್‌ 2ರಂದು ಕ್ರಿಡಿಲ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಬ್ಯಾಂಕ್‌ನ್ನು ಕಪ್ಪು ಪಟ್ಟಿಗೆ ಸೇರಿಸುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ನಿರಾಕರಿಸಿತ್ತು. ಸರ್ಕಾರದ ಮಟ್ಟದಲ್ಲಿ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನ್ನು ಕಪ್ಪು ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ, ಆದರೆ ಬ್ಯಾಂಕ್‌ನ ವಿರುದ್ಧ ಸೂಕ್ತ ಕ್ರಮಕ್ಕಾಗಿ ಆರ್‌ಬಿಐಗೆ ಪತ್ರ ಬರೆಯಬಹುದು ಎಂದು ಅಭಿಪ್ರಾಯಿಸಿತ್ತು.

ಪ್ರಕರಣದ ಹಿನ್ನೆಲೆ 

ಕೆಆರ್‌ಐಡಿಎಲ್‌ನ 20 ಕೋಟಿ ಹಾಗೂ 35 ಕೋಟಿ ರೂ.ಅನುದಾನವನ್ನು ಮಂಗಳೂರಿನ ಕುಳಾಯಿಯ ಗೋಕುಲನಗರದ ನವನಿಧಿ ಕಾಂಪ್ಲೆಕ್ಸ್‌ನಲ್ಲಿರುವ ಇಂಡಿಯನ್‌ ಓವರ್‌ಸಿಸ್‌ ಬ್ಯಾಂಕ್‌ ಶಾಖೆಯಲ್ಲಿ ನಿಗದಿತ ಠೇವಣಿ ಸಂಖ್ಯೆ 320104000000026 ಹಾಗೂ 320104000000027ರಲ್ಲಿ 2017 ಆಗಸ್ಟ್‌ 24 ಮತ್ತು 30ರಂದು ಇರಿಸಲಾಗಿತ್ತು.

ಕೆಆರ್‌ಐಡಿಎಲ್‌ನ ಹೆಸರಿನಲ್ಲಿ ನಕಲಿ ಚಾಲ್ತಿ ಖಾತೆ ಸೃಷ್ಟಿಸಿ ಆ ಖಾತೆ ಮೂಲಕ ಬೇರೆಬೇರೆ ಅನುತ್ಪಾದಕ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದು ಬಹಿರಂಗಗೊಂಡಿತ್ತು.  ಇದರಲ್ಲಿ ಬೆಂಗಳೂರಿನ ವಿಜಯಾ ಬ್ಯಾಂಕ್‌ನ ಕೋರಮಂಗಲ ಶಾಖೆಯ ಷಾ ಎಕ್ಸ್‌ಪೋರ್ಟ್ಸ್ ಖಾತೆಗೆ 50 ಲಕ್ಷ ರೂ. ವರ್ಗಾವಣೆ ಆಗಿತ್ತು.  2 ವರ್ಷಗಳಿಂದ ಶೂನ್ಯ ವ್ಯವಹಾರವಾಗಿದ್ದ ಖಾತೆಗೆ ಇಷ್ಟು ದೊಡ್ಡ ಪ್ರಮಾಣದ ಹಣ ವರ್ಗಾವಣೆಯಾಗಿದೆ ಎಂಬ ಮಾಹಿತಿ ವಿಜಯಾ ಬ್ಯಾಂಕ್‌ ಹೊರಗೆಡವಿತ್ತು.

ಕೆಆರ್‌ಐಡಿಎಲ್‌ನ ನಕಲಿ ವಿಳಾಸ

ಕೆಆರ್‌ಐಡಿಎಲ್‌ ವಿವಿಧ ಬ್ಯಾಂಕ್‌ಗಳಲ್ಲಿ 23 ನಿಗದಿತ ಠೇವಣಿಗಳಲ್ಲಿ 740,89,28,461ರೂ.ಗಳನ್ನು ಇಟ್ಟಿತ್ತು.  2013 ಫೆಬ್ರವರಿಯಲ್ಲಿ ಕೆಆರ್‌ಐಡಿಎಲ್‌ ಮುಖ್ಯ ಕಚೇರಿ ಚಿನ್ನಸ್ವಾಮಿ ಸ್ಟೇಡಿಯಂನಿಂದ ಗ್ರಾಮೀಣಾಭಿವೃದ್ಧಿ ಭವನಕ್ಕೆ ಸ್ಥಳಾಂತರಗೊಂಡಿತ್ತು.  ಆದರೆ, 2017 ಆಗಸ್ಟ್‌ 30ರಂದು 35 ಕೋಟಿ ರೂ. ನಿಗದಿತ ಠೇವಣಿ ಸರ್ಟಿಫಿಕೇಟ್‌ ಸಂಖ್ಯೆ 584635ರಲ್ಲಿ ಸಂಸ್ಥೆಯ ಹಳೇ ವಿಳಾಸವಿತ್ತು. ಇನ್ನು 20 ಕೋಟಿ ರೂ. ನಿಗದಿತ ಠೇವಣಿ ಸರ್ಟಿಫಿಕೇಟ್‌ ಸಂಖ್ಯೆ 584636ರಲ್ಲಿ ಸಂಸ್ಥೆಯ ವಿಳಾಸವೇ ಇರಲಿಲ್ಲ. ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಇಲ್ಲಿಯೇ ಕಂಡುಬಂದಿತ್ತು.

ಹಣದ ಅಕ್ರಮ ವರ್ಗಾವಣೆ ನಡೆದ ಸಮಯದಲ್ಲಿ ಕೆಆರ್‌ಐಡಿಎಲ್‌ನಲ್ಲಿ ಡಾ.ರಾಜು (ವ್ಯವಸ್ಥಾಪಕ ನಿರ್ದೇಶಕ), ಎಚ್‌.ಪಿ.ರಾಜಶೇಖರಮೂರ್ತಿ (ಮುಖ್ಯ ಎಂಜಿನಿಯರ್‌), ಡಾ.ವೀರಗೌಡ ಪಾಟೀಲ (ಸಿಎಫ್‌ಒ-1), ಪ್ರಶಾಂತ ಮಾಡಾಳ್‌ (ಡಿಎಫ್‌ಒ), ಶಂಕರಾಚಾರಿ (ಲೆಕ್ಕ ಅಧೀಕ್ಷಕ) ಕಾರ‍್ಯ ನಿರ್ವಹಿಸುತ್ತಿದ್ದರು.

ಅರ್ಹವಲ್ಲದ ಶಾಖೆ

ಕೆಆರ್‌ಐಡಿಎಲ್‌ನಲ್ಲಿದ್ದ ಹೆಚ್ಚಿನ ಅನುದಾನವನ್ನು ನಿಗದಿತ ಠೇವಣಿಯನ್ನಾಗಿಡಲು ದೂರದ ಮಂಗಳೂರಿನ ಕುಳಾಯಿಯಲ್ಲಿರುವ ಇಂಡಿಯನ್‌ ಓವರ್‌ಸಿಸ್‌ ಬ್ಯಾಂಕ್‌ ಶಾಖೆಯನ್ನು ಆಯ್ಕೆ ಮಾಡಿಕೊಂಡಿದ್ದೇ ಸೂಕ್ತವಾಗಿರಲಿಲ್ಲ. ಠೇವಣಿ ಸರ್ಟಿಫಿಕೇಟ್‌ಗಳಲ್ಲಿ ವಿಳಾಸ ಸರಿ ಇಲ್ಲದಿರುವುದನ್ನು ಪರಿಶೀಲಿಸಿ ಹಿಂದಿರುಗಿಸಬೇಕಿತ್ತು.

ಐಒಬಿ ಶಾಖೆಯಲ್ಲಿ ಠೇವಣಿ ಇಟ್ಟ ನಂತರ ವಂಚಕರು ಕೆಆರ್‌ಐಡಿಎಲ್‌ ಸಂಸ್ಥೆಯ ಸುಳ್ಳು ಮನವಿ ಮತ್ತು ಆರ್ಟಿಕಲ್‌ ಆಫ್‌ ಅಸೋಸಿಯೇಷನ್‌, ಮಂಡಳಿ ತೀರ್ಮಾನದ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ನ ಸಹಯೋಗದೊಂದಿಗೆ ಚಾಲ್ತಿ ಖಾತೆ ತೆರೆದು ಬೇರೆಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದು ಕಂಡುಬಂದಿತ್ತು.

ವಂಚನೆ ಆಗಿದ್ಹೇಗೆ?

ಅಮಿತ್‌, ಐಎಎಸ್‌ ಅಧಿಕಾರಿ, ಕೆಆರ್‌ಐಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಬ್ದುಲ್‌ ಸಲಾಂ, ಮುಖ್ಯ ಲೆಕ್ಕಾಧಿಕಾರಿ ಎಂದು ಹೇಳಿಕೊಂಡು ಕುಳಾಯಿಯ ಐಒಬಿ ಶಾಖೆಗೆ ಇಬ್ಬರೂ ಭೇಟಿ ನೀಡಿದ್ದರು. ‘ಕಾರ್ಪೋರೇಷನ್‌ ಬ್ಯಾಂಕ್‌ನಲ್ಲಿ ಪೀನಾಕಲ್‌ ಸಾಫ್ಟ್‌ವೇರ್‌ ತೊಂದರೆ ಇದೆ. ನಿಮ್ಮ ಬ್ಯಾಂಕ್‌ನಲ್ಲಿ ಚಾಲ್ತಿ ಖಾತೆ ತೆರೆದು ಕಾಮಗಾರಿ ನಿರ್ವಹಿಸಲು ಉದ್ದೇಶಿಸಲಾಗಿದೆ’ ಎಂದಿದ್ದರು.

ಚಾಲ್ತಿ ಖಾತೆ ತೆರೆಯಲು ಅಗತ್ಯವಿರುವ ಆಡಳಿತ ಮಂಡಳಿ ನಿರ್ಣಯ, ಗುರುತಿನ ಪತ್ರ, ಸಂಸ್ಥೆಯ ಮನವಿಪತ್ರ, ಆರ್ಟಿಕಲ್ಸ್‌ ಆಫ್‌ ಅಸೋಸಿಯೇಷನ್‌ಗಳನ್ನು ನಕಲು ಮಾಡಿ ಶಾಖೆಯ ವ್ಯವಸ್ಥಾಪಕರಿಗೆ ನೀಡಿ ಚಾಲ್ತಿ ಖಾತೆ ತೆರೆದಿದ್ದರು.

ಈ ಖಾತೆಗೆ 55 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿಕೊಂಡು ನಂತರ ಸುಮಾರು 53.5 ಕೋಟಿ ರೂ.ಗಳನ್ನು ಮುಂಬಯಿಯ ಬಂದನ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಹಾಗೂ ಬೆಂಗಳೂರಿನ ಕೋರಮಂಗಲ ಶಾಖೆಯ ವಿಜಯಾ ಬ್ಯಾಂಕ್‌ಗೆ ವರ್ಗಾವಣೆ ಮಾಡಿದ್ದರು.

the fil favicon

SUPPORT THE FILE

Latest News

Related Posts